ನಮೀಬಿಯಾದಿಂದ ತರಲಾದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟಿದ್ದಾರೆ. ಭಾರತದಲ್ಲಿ ಏಳು ದಶಕಗಳ ಹಿಂದೆಯೇ ಚೀತಾಗಳು ನಿರ್ನಾಮವಾದ ಕಾರಣ, ಸರ್ಕಾರ ಮಾಡಿರುವ ಈ ಕೆಲಸ ಮಹತ್ವದೆಂದು ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಆದರೆ ಈ ಚೀತಾಗಳ ಹಿಂದೆಯೇ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತರಲಾಗಿರುವ ಪ್ರಾಣಿಗಳ ಮೇಲೆ ಬೀರುವ ಪರಿಣಾಮಗಳೇನು? ಏನೆಲ್ಲ ಎಚ್ಚರ ವಹಿಸಬೇಕಾಗುತ್ತದೆ? ಕುನೋ ಪ್ರದೇಶದಲ್ಲಿರುವ ಆದಿವಾಸಿಗಳ ಕಥೆ ಏನು? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಪರಿಸರತಜ್ಞರು ಈ ಕುರಿತು ಹಲವಾರು ಆತಂಕಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪರಿಸರ ತಜ್ಞರಾದ ಕಲ್ಕುಳಿ ವಿಠಲ ಹೆಗ್ಡೆ ಹಾಗೂ ಪರಿಸರ ವಿಜ್ಞಾನಿ ನಾಗೇಶ ಹೆಗಡೆಯವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕಲ್ಕುಳಿ ವಿಠಲ ಹೆಗ್ಡೆಯವರು ಮಾತನಾಡಿ, “ಎಲ್ಲ ಪ್ರಾಣಿಗಳೂ ತಮ್ಮದೇ ಆದ ಸೀಮಿತ ಪ್ರದೇಶಕ್ಕೆ ಹೊಂದಿಕೊಂಡಿರುತ್ತವೆ. ಅವುಗಳು ತಮ್ಮ ಪ್ರದೇಶವನ್ನು ಗುರುತು ಹಾಕಿಕೊಂಡಿರುತ್ತವೆ. ಚಿರತೆ, ಹುಲಿಯಂತಹ ಪ್ರಾಣಿಗಳು ತಾವು ಹೊಂದಿಕೊಂಡ ಪ್ರದೇಶವನ್ನು ಬಿಟ್ಟು ಹೋಗುವುದಿಲ್ಲ. ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೂ ಇಚ್ಛಿಸುವುದಿಲ್ಲ. ಯಾಕೆಂದರೆ ಬೇರೆ ಪ್ರದೇಶಕ್ಕೆ ಹೋದರೆ ಘರ್ಷಣೆಯಾಗುತ್ತದೆ. ಹೀಗಾಗಿ ಪ್ರಾಣಿಗಳಲ್ಲಿ ಪ್ರಾದೇಶಿಕವಾದ ಹೊಂದಾಣಿಕೆ ಇರುತ್ತದೆ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನಮೀಬಿಯಾದಲ್ಲಿನ ವಾತಾವರಣಕ್ಕೂ ಕುನೋ ರಾಷ್ಟ್ರೀಯ ಉದ್ಯಾನದಲ್ಲಿನ ವಾತಾವರಣಕ್ಕೂ ಯಾವುದೇ ವ್ಯತ್ಯಾಸವಿಲ್ಲದೆ ಇರಬಹುದು. ಆದರೆ ತನ್ನದಲ್ಲದ ಪ್ರದೇಶದಲ್ಲಿ ಈ ಪ್ರಾಣಿಗಳು ಬದುಕಿದಾಗ ಅತಿಹೆಚ್ಚು ಕ್ರೂರವಾಗುವ ಸಾಧ್ಯತೆಗಳು ಇರುತ್ತವೆ. ಯಾಕೆಂದರೆ ಈ ಪ್ರಾಣಿಗಳು ಸಹಜವಾಗಿ ಭಯಗೊಂಡಿರುತ್ತವೆ. ಕಂಡಕಂಡವರ ಮೇಲೆಲ್ಲಾ ಎರಗಲು ಮುಂದಾಗುತ್ತವೆ. ಕೃತಕವಾದ ಆಹಾರವನ್ನು ಕೊಡದಿದ್ದರೆ ಅವು ಭಯಗೊಂಡು ಸತ್ತೂ ಹೋಗಬಹುದು. ಎರಡು ಸಾಧ್ಯತೆ ಇದೆ. ಚೀತಾಗಳೇ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಎಲ್ಲವನ್ನೂ ಮುಗಿಸಬಹುದು, ಅಥವಾ ಹೆದರಿಕೊಂಡು ತಾವೇ ಸಾಯಬಹುದು” ಎಂದು ವಿವರಿಸಿದರು.

“ನಮ್ಮಲ್ಲಿ ಯಾರಾದರೂ ಹಾವುಗಳನ್ನು ಹಿಡಿದಾಗ, ಯಾವುದೋ ಒಂದು ದೂರದ ಪ್ರದೇಶಕ್ಕೆ ಬಿಡುವುದನ್ನು ನೋಡಿದ್ದೇವೆ. ತನ್ನದಲ್ಲದ ಪ್ರದೇಶವೆಂದರೆ ಈ ಹಾವಿಗೆ ಬೇರೆಯ ದೇಶಕ್ಕೆ ಹೋದಂತೆ ಭಾಸವಾಗುತ್ತದೆ. ತನಗೆ ಪರಿಚಯವಿಲ್ಲದ ನೆಲದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಾದರೆ ಬಹಳ ಕಾಲ ಬೇಕಾಗುತ್ತದೆ. ಪೇಟೆಗಳಲ್ಲಿ ಮಂಗನ ಕಾಟ ಹೆಚ್ಚಾದಾಗ ಗುಟ್ಟಾಗಿ ಅವುಗಳನ್ನು ಹಿಡಿದು, ಆಗುಂಬೆ ಕಾಡಿಗೆ ತಂದು ಬಿಡುವವರು ಇದ್ದಾರೆ. ಈ ವರ್ಷ ತಂದು ಬಿಟ್ಟ ಮಂಗಗಳಲ್ಲಿ ಅರ್ಧದಷ್ಟು ಮುಂದಿನ ವರ್ಷ ಇರುವುದಿಲ್ಲ” ಎಂದರು.
“ಆಫ್ರಿಕಾದಲ್ಲಿ ಮನುಷ್ಯರೊಟ್ಟಿಗೆ ಬದುಕಿದ ಪ್ರಾಣಿಗಳನ್ನು (ಅಂದರೆ ಮೃಗಾಲಯದಲ್ಲಿ ಬೆಳೆದ ಪ್ರಾಣಿಗಳನ್ನು) ತಂದಿದ್ದಾರೆ. ಇವುಗಳು ಕಾಡಲ್ಲಿ ಬೆಳೆದ ಪ್ರಾಣಿಗಳಲ್ಲ. ಹೀಗಾಗಿ ಮನುಷ್ಯರೊಟ್ಟಿಗೆ ಬೆಳೆದ ಪ್ರಾಣಿಗಳನ್ನು ಮನುಷ್ಯರೇ ಬೆಳೆಸಬೇಕು. ಇವುಗಳು ಸ್ವತಂತ್ರವಾಗಿ ಬೆಳೆಯಲೆಂದು ಬಿಟ್ಟು ಉಪವಾಸ ಕೆಡವಿದರೆ ಮೊದಲು ದಾಳಿ ಮಾಡುವುದು ಮನುಷ್ಯರ ಮೇಲೆಯೇ. ಯಾಕೆಂದರೆ ಈ ಪ್ರಾಣಿಗಳಿಗೆ ಮನುಷ್ಯರ ವಿಷಯ ಮಾತ್ರ ಗೊತ್ತಿರುತ್ತದೆ” ಎಂದು ಎಚ್ಚರಿಸಿದರು.
“ಮೃಗಾಲಯದಲ್ಲಿ ಜನಿಸಿದ ಹುಲಿಗಳನ್ನು ನಾಗರಹೊಳೆ ಕಾಡಿಗೆ ಬಿಟ್ಟರು. ಹುಲಿ ಸಂತತಿ ಹೆಚ್ಚು ಮಾಡಬೇಕೆಂದು ಯೋಚಿಸಿದ್ದರು. ಈ ಹುಲಿಗಳು ಹಿಡಿದದ್ದು ಅರಣ್ಯಾ ಸಿಬ್ಬಂದಿಗಳನ್ನು ಎಂಬುದನ್ನು ಮರೆಯಬಾರದು. ಮನುಷ್ಯರ ಬಗ್ಗೆ ಈ ಪ್ರಾಣಿಗಳಿಗೆ ಗೊತ್ತಿರುತ್ತದೆಯೇ ಹೊರತು, ಶಿಕಾರಿ ಮಾಡಿ ಅಭ್ಯಾಸವಿರುವುದಿಲ್ಲ. ತಾನು ಶಿಕಾರಿ ಮಾಡಬೇಕಾದ ಸಸ್ಯಾಹಾರಿ ಪ್ರಾಣಿ ಎಲ್ಲಿರುತ್ತದೆ ಎಂದು ಈ ಚೀತಾಕ್ಕೆ ಗೊತ್ತಿರಬೇಕು, ಓಡಿಸಿಕೊಂಡು ಹೋಗಿ ಹಿಡಿಯಬೇಕು. ಆಫ್ರಿಕಾದಲ್ಲಿ ಇದ್ದ ಪರಿಸ್ಥಿತಿಗೂ ಇಲ್ಲಿಗೂ ಹೊಂದಿಕೊಳ್ಳಬೇಕು. ಇದು ಬಾಡಿಗೆ ಮನೆ ಬದಲಿಸಿದಷ್ಟು ಸುಲಭವಲ್ಲ” ಎಂದು ಅಭಿಪ್ರಾಯಪಟ್ಟರು.
“ಈ ಚೀತಾಗಳನ್ನು ಮೃಗಾಲಯದಲ್ಲಿ ಸಾಕಬಹುದಿತ್ತು. ಉದಾಹರಣೆಗೆ ಅಮೆರಿಕಾದಲ್ಲಿ ಹುಲಿ ಇರದಿದ್ದರೂ ಅಲ್ಲಿನ ಮೃಗಾಲಯಗಳಲ್ಲಿ ಭಾರತದ ಹುಲಿಗಳನ್ನು ನೋಡಬಹುದು. ಸೂಕ್ತ ವಾತಾವರಣ ಕಲ್ಪಿಸಿ ಪೋಷಣೆ ಮಾಡುತ್ತಾರೆ. ಆದರೆ ಇವುಗಳನ್ನು ಮುಕ್ತವಾದ ಕಾಡಿಗೆ ಬಿಟ್ಟರೆ ಉಳಿಯುವುದು ಕಷ್ಟ. ಮತ್ತಷ್ಟು ಅನಾಹುತಗಳಿಗೆ ಎಡೆಮಾಡಿಕೊಟ್ಟಂತೆ” ಎಂದು ಭವಿಷ್ಯ ನುಡಿದರು.
ಕಾನೂನಿನ ತೊಡಕು ಎದುರಾಗುತ್ತದೆ: ನಾಗೇಶ ಹೆಗಡೆ
ಪರಿಸರ ತಜ್ಞರಾದ ನಾಗೇಶ ಹೆಗಡೆಯವರು ಮಾತನಾಡಿ, “ಚೀತಾಗಳು ಹುಲ್ಲುಗಾವಲು ಪ್ರದೇಶದಲ್ಲಿ ಬದುಕುವ ಪ್ರಾಣಿಗಳಾಗಿವೆ. ಆದರೆ ಇಲ್ಲಿ ಹುಲ್ಲುಗಾವಲು ಇಲ್ಲ. ಇದ್ದಬದ್ಧ ಮರಗಳನ್ನು ಕಡಿದು ಹುಲ್ಲುಗಾವಲು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅವುಗಳ ಆಹಾರಕ್ಕೆ ಸಾಕಾಗುವಷ್ಟು ಸಸ್ಯಾಹಾರಿ ಪ್ರಾಣಿಗಳು ಬೇಕು. ಸದ್ಯಕ್ಕೆ ಸಮಸ್ಯೆ ಇಲ್ಲವಾದರೂ ಮುಂದಿನ ವರ್ಷಗಳಲ್ಲಿ ಕೃಷ್ಣಮೃಗ, ಜಿಂಕೆ ಮೊದಲಾದ ಪ್ರಾಣಿಗಳನ್ನು ಬೇರೆ ಕಡೆಯಿಂದ ತರಬೇಕಾಗುತ್ತದೆ. ಅದಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ಒಂದೆರಡು ಸಾವಿರ ಜಿಂಕೆಗಳನ್ನು ತಂದು ಇಲ್ಲಿಗೆ ಬಿಟ್ಟೆವೆಂದೂ ತಿಳಿಯೋಣ. ಆದರೆ ಅಲ್ಲಿ ಈಗಾಗಲೇ ಕತ್ತೆಕಿರುಬ, ಚಿರತೆಗಳಿವೆ. ಇವುಗಳೇ ಜಿಂಕೆಗಳನ್ನು ತಿಂದು ಮುಗಿಸುತ್ತವೆ. ಚೀತಾಗಳಿಗಿಂತ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತದೆ” ಎಂದು ಹೇಳಿದರು.

“ಚೀತಾಕ್ಕೆ ಹೋಲಿಸಿದರೆ ಚಿರತೆ ಅತ್ಯಂತ ಅಪಾಯಕಾರಿ ಪ್ರಾಣಿ. ಚಿರತೆಯಂತೆ ಮರ ಹತ್ತಲೂ ಬಾರದ ಪ್ರಾಣಿ ಇದು. ವೇಗವಾಗಿ ಓಡಬಲ್ಲವು ಅಷ್ಟೇ. ಆದರೆ ಚಿರತೆ ಹೊಂಚಿಹಾಕಿ ಭೇಟಿಯಾಡುತ್ತದೆ” ಎಂದು ತಿಳಿಸಿದರು.
“ನಮ್ಮಲ್ಲಿ ಸಾಕಷ್ಟು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿವೆ. ಅವುಗಳ ಉಳಿವಿಗಾಗಿ ಮೋದಿಯವರು ಏನನ್ನೂ ಮಾಡಿಲ್ಲ. ವನ್ಯಜೀವಿ ಮಂಡಳಿಗೆ ಮೋದಿಯವರೇ ಅಧ್ಯಕ್ಷರಾಗಿದ್ದಾರೆ. ಆದರೆ ಕಳೆದ ಎಂಟು ವರ್ಷಗಳಿಂದ ಸಣ್ಣದೊಂದು ಸಭೆ ಮಾಡಿದ್ದು ಕಾಣಲಿಲ್ಲ” ಎಂದು ವಿಷಾದಿಸಲಿಲ್ಲ.
“ಗುಜರಾತ್ನಲ್ಲಿ ಒಂದೇ ಗುಂಪಿನಲ್ಲಿ ಸಿಂಹಗಳಿವೆ. ರೋಗರುಜಿನ ಬಂದರೆ ಒಮ್ಮೆಲೇ ಸಾಯುತ್ತವೆ. ಹೀಗಾಗಿ ಒಂದಿಷ್ಟು ಸಿಂಹಗಳನ್ನು ಕುನೋಗೆ ತರಬೇಕೆಂದಿದ್ದರು. ಇದಕ್ಕೆ ಗುಜರಾತ್ ಸರ್ಕಾರ ಇದಕ್ಕೆ ಸಿದ್ಧವಿರಲಿಲ್ಲ. ಮೋದಿಯವರು ಗುಜರಾತ್ನಿಂದ ಸಿಂಹಗಳನ್ನು ತಂದು ಇಲ್ಲಿ ಬಿಡಬಹುದಿತ್ತು. ಆದರೆ ನಮೀಬಿಯಾದಿಂದ ಚೀತಾಗಳನ್ನು ತಂದಿದ್ದಾರೆ” ಎಂದರು.
ಕುನೋ ರಾಷ್ಟ್ರೀಯ ಉದ್ಯಾನ ಭಾಗದಲ್ಲಿನ ಆದಿವಾಸಿಗಳ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, “ಈ ಭಾಗದಲ್ಲಿ ಸುಮಾರು 150 ಹಳ್ಳಿಗಳಿವೆ. ಅಲ್ಲಿನ ಆದಿವಾಸಿಗಳನ್ನು ಬೇರೆ ಕಡೆ ಕಳುಹಿಸಬೇಕು. ಸರಿಯಾಗಿ ಪುನರ್ವಸತಿ ಕಲ್ಪಿಸಿದರೆ ತಾವಾಗಿಯೇ ಖುಷಿಯಿಂದ ಆದಿವಾಸಿಗಳು ಹೊರಗೆ ಹೋಗಬಹುದು. ಆದರೆ ನಮ್ಮ ದೇಶದಲ್ಲಿ ಸರಿಯಾದ ಮೂಲಸೌಕರ್ಯ ಕಲ್ಪಿಸಿ ಪುನರ್ವಸತಿ ಮಾಡಿದ್ದೇ ಅಪರೂಪ. ಎಲ್ಲೋ ಒಂದು ಕಡೆ ತಗಡಿನ ಶೆಡ್ಡು ನಿರ್ಮಿಸಿ ಆದಿವಾಸಿಗಳನ್ನು ಅಲ್ಲಿಗೆ ತಂದು ಬಿಸಾಡುತ್ತಾರೆ. ಮತ್ತೆ ಆದಿವಾಸಿಗಳು ಅತಂತ್ರರಾಗುತ್ತಾರೆ. ಯಾವುದಾದರೂ ಚೀತಾ ಸತ್ತರೆ ಮತ್ತೆ ಈ ಜನರಿಗೆ ತೊಂದರೆ ಕೊಡುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದರು.


