Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-4)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-4)

- Advertisement -
- Advertisement -

ಪ್ರಿನ್ಸ್ ಮಾತನಾಡುತ್ತಲೇ ಅಭಿನಯಪೂರ್ವಕ ಭಾವತೀವ್ರನಾಗುತ್ತಾ ಹೋದ; ಅವನ ಮಾತನಾಡುವ ಶೈಲಿಯು ಮೊದಲಿನಂತೆಯೇ ಇದ್ದರೂ ಅವನ ಬಿಳಿಚಿಕೊಂಡ ಮುಖದಲ್ಲಿ ಬಣ್ಣದ ಛಾಯೆ ಮೂಡಲು ಶುರುವಾಯಿತು. ಸೇವಕ, ಪ್ರಿನ್ಸ್‌ನ ಮಾತುಗಳನ್ನ ಸಹಾನುಭೂತಿಯಿಂದ ಕೂಡಿದ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ. ಈ ಸಂಭಾಷಣೆಯನ್ನ ಅಂತ್ಯಗೊಳಿಸಲು ಯಾವುದೇ ರೀತಿಯಲ್ಲಿಯೂ ಅವನು ಉತ್ಸುಕನಾಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಯಾರಿಗೆ ಗೊತ್ತು? ಬಹುಶಃ ಅವನೂ ಕೂಡ ಚಿಂತಿಸಲು ಸ್ವಲ್ಪ ಶಕ್ತಿಯಿರುವ ಕಲ್ಪನಾಶೀಲ ವ್ಯಕ್ತಿಯಾಗಿದ್ದಿರಬಹುದು.

“ಸರಿ, ಬೇರೆಯದೇ ಆದ ವಿಧಾನಗಳಿಗೆ ಹೋಲಿಸಿದರೆ ಆ ಪಾಪದ ಮನುಷ್ಯನ ತಲೆಯನ್ನ ಒಂದೇ ಏಟಿಗೆ ತುಂಡರಿಸಿದಾಗ ಅವನು ಆ ನೋವನ್ನು ಅನುಭವಿಸದೇ ಇರುವುದೂ ಕೂಡ ಇದರಲ್ಲಿರುವ ಒಂದು ಒಳ್ಳೆಯ ಅಂಶ”, ಅವನು ತನ್ನ ಅಭಿಪ್ರಾಯವನ್ನ ಹೇಳಿದ.

“ಆದರೂ ನಿನಗೆ ಗೊತ್ತಾ”, ಪ್ರಿನ್ಸ್ ಆತ್ಮೀಯತೆಯಿಂದ ಕೂಡಿದ ಏರು ಧ್ವನಿಯಲ್ಲಿ ಹೇಳಿದ, “ನೀನು ಆ ಅಭಿಪ್ರಾಯವನ್ನ ಈಗ ಹೇಳಿದೆ, ಮತ್ತು ಪ್ರತಿಯೊಬ್ಬರೂ ಕೂಡ ಅದನ್ನೇ ಹೇಳುತ್ತಾರೆ; ಆ ಯಂತ್ರವನ್ನ ವಿನ್ಯಾಸಗೊಳಿಸಿರುವುದು ಅಪರಾಧಿಗೆ ನೋವು ಆಗದೇ ಇರುವ ರೀತಿಯಲ್ಲಿ, ಅದೇ ನಾನು ಹೇಳುತ್ತಿರುವುದು ಈ ಗಿಲೊಟಿನ್ ಬಗ್ಗೆ; ಆದರೆ ಆ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಆಲೋಚನೆಯೊಂದು ಮೂಡಿತು: ಅದು ಎಲ್ಲದಕ್ಕಿಂತ ಕೆಟ್ಟದಾದ ಯೋಚನೆ ಆಗಿದ್ದರೆ ಏನು? ಬಹುಶಃ ನೀನು ನನ್ನ ಈ ಯೋಚನೆಯ ಬಗ್ಗೆ ನಗಬಹುದು, ಆದರೆ ಈ ಕಲ್ಪನೆಯು ನನ್ನಲ್ಲಿ ಮೂಡದೇ ಇರುವಂತೆ ಮಾಡಲು ನನಗೆ ಸಾಧ್ಯವಿರಲಿಲ್ಲ. ಈಗಿನ ಹಳೆಯ ಪದ್ಧತಿಗಳಲ್ಲಿ ಅಂದರೆ ನೇಣುಗಂಬಕ್ಕೇರಿಸುವುದು ಅಥವಾ ಹಿಂಸಿಸಿ ಕೊಲ್ಲುವುದರಲ್ಲಿ ಅಪರಾಧಿ ಭಯಾನಕವಾದ ನೋವನ್ನು ಅನುಭವಿಸುವುದು ಖಂಡಿತವಾಗಿಯೂ ನಿಜ; ಆದರೆ ಆ ಹಿಂಸೆ ಆಗುವುದು ದೇಹಕ್ಕೆ ಮಾತ್ರ, (ಅನುಮಾನವಿಲ್ಲದೇ ಅದು ಸಾಕಷ್ಟು ಹೆಚ್ಚೇ ಇರುತ್ತದೆ) ಮತ್ತು ಸಾಯುವವರೆಗೆ ಮಾತ್ರ ಇರುತ್ತದೆ. ಇಲ್ಲಿ ನಾನು ಕಲ್ಪಿಸಿಕೊಳ್ಳಬೇಕಿರುವುದು, ಈ ಇಡೀ ಶಿಕ್ಷೆಯ ಎಲ್ಲದಕ್ಕಿಂತ ಹೆಚ್ಚು ಭಯಾನಕವಾದ ಅಂಶ, ದೇಹಕ್ಕೆ ಉಂಟುಮಾಡುವ ನೋವು ಮಾತ್ರ ಅಲ್ಲವೇ ಅಲ್ಲ, ಬದಲಿಗೆ ಒಂದು ಗಂಟೆಯ ನಂತರ, ಆಮೇಲೆ ಹತ್ತು ನಿಮಿಷಗಳ ನಂತರ ಅಥವಾ ಅರ್ಧ ನಿಮಿಷದ ನಂತರ, ಅಥವಾ ಅದು ಈಗಲೇ ತಕ್ಷಣದಲ್ಲಿಯೇ ನಿನ್ನ ಆತ್ಮ ನಿನ್ನ ದೇಹವನ್ನ ಬಿಟ್ಟು ಹೋಗಲಿದೆ ಮತ್ತು ಮುಂದೆ ನೀನೆಂದೂ ಮನುಷ್ಯನಾಗಿ ಉಳಿಯುವುದಿಲ್ಲ ಅನ್ನುವ ನಿಶ್ಚಿತ ತಿಳಿವಳಿಕೆ, ಅದು ಖಡಾಖಂಡಿತವಾಗಿ ನಿಶ್ಚಿತವಾದದ್ದು ಎಂಬುದು ಹೆಚ್ಚು ಹಿಂಸಾತ್ಮಕವಾದದ್ದು. ಇಲ್ಲಿನ ಮುಖ್ಯ ಅಂಶ ಏನೆಂದರೆ ಅದರ ನಿಶ್ಚಿತತೆ; ಅದರ ಖಚಿತತೆ. ನಿಗದಿತ ಜಾಗದಲ್ಲಿ ತಲೆಯನ್ನ ಇರಿಸಿದ ಕ್ಷಣ, ಕಬ್ಬಿಣದ ಗೇಟು ಮೇಲಿನಿಂದ ಕತ್ತಿನ ಮೇಲೆ ಬೀಳುವ ಶಬ್ದವನ್ನ ಕೇಳಿದಾಗ, ಆ ಕಾಲು ಸೆಕೆಂಡುಗಳು ಮಾತ್ರ ಎಲ್ಲದಿಕ್ಕಿಂತ ಹೆಚ್ಚು ಭೀಕರವಾದದ್ದು.

“ಇದು ಅತ್ಯದ್ಭುತವಾದ ನನ್ನದ್ದೇ ಸ್ವಂತ ಅಭಿಪ್ರಾಯವಂತೇನೂ ಇಲ್ಲ- ಅನೇಕ ಜನರು ಇದೇ ರೀತಿ ಯೋಚಿಸಿದ್ದಾರೆ; ಆದರೆ ನಾನಿದನ್ನು ಬಹಳ ಆಳವಾಗಿ ಅನುಭವಿಸಿದ ಕಾರಣದಿಂದ ನಾನೇನನ್ನು ಯೋಚಿಸಿದೆ ಅನ್ನುವುದನ್ನ ನಿನಗೆ ಹೇಳುತ್ತಿದ್ದೇನೆ. ನನ್ನ ನಂಬಿಕೆಯ ಪ್ರಕಾರ ಕೊಲೆ ಮಾಡಿದವನಿಗೆ ಮರಣದಂಡನೆಯನ್ನ ವಿಧಿಸುವುದು ಅವನ ಅಪರಾಧಕ್ಕೆ ಸರಿಸಮಾನವಲ್ಲದಷ್ಟು ಘೋರವಾದ ಮತ್ತು ಅಳತೆ ಮೀರಿದ ಶಿಕ್ಷೆ. ನ್ಯಾಯಾಲಯದ ತೀರ್ಪಿನ ಕಾರಣದಿಂದ ಕೊಲ್ಲುವುದು ಒಬ್ಬ ಅಪರಾಧಿಯು ಇನ್ನೊಬ್ಬನನ್ನು ಕೊಂದಿದ್ದಕ್ಕಿಂತ ಹೆಚ್ಚು ಘೋರವಾದದ್ದು. ಒಬ್ಬ ಮನುಷ್ಯನನ್ನು ಗಾಢಾಂಧಕಾರದ ಕಾಡಿನಲ್ಲಿ ಅಥವ ಇನ್ನೆಲ್ಲಿಯಾದರೂ, ರಾತ್ರಿಯ ವೇಳೆ ದರೊಡೆಕೋರರು ದಾಳಿಮಾಡಿದಾಗ ಆತ ಅನುಮಾನವಿಲ್ಲದೇ ಭರವಸೆಯಿಂದಿರುತ್ತಾನೆ ಮತ್ತು ಸಾಯುವವರೆಗೂ ಬಚಾವಾಗಬಹುದು ಅನ್ನುವ ಭರವಸೆಯಿಂದ ಇರುತ್ತಾನೆ. ಅವನ ಕತ್ತನ್ನು ಕುಯ್ದ ನಂತರವೂ ಕೂಡ, ಒಬ್ಬ ಮನುಷ್ಯ ತಪ್ಪಿಸಿಕೊಂಡು ಓಡಿ ಹೋಗಿರುವ, ಅಥವಾ ಈ ಎಲ್ಲಾ ಸಂದರ್ಭಗಳಲ್ಲಿಯೂ ಒಂದು ಮಟ್ಟದ ಭರವಸೆಯೊಂದಿಗೆ ಕ್ಷಮಾದಾನಕ್ಕಾಗಿ ಅರಸಿರುವ ಅನೇಕ ಉದಾಹರಣೆಗಳಿವೆ. ಆದರೆ ಮರಣದಂಡನೆಯ ಸಮಯದಲ್ಲಿ ಆ ಕೊನೆಯ ಭರವಸೆಯನ್ನು- ಯಾವುದು ಸಾಯುವ ಬಗೆಗಿನ ಘೋರತೆಯನ್ನ ಅಳತೆಗೆ ಸಿಗದಷ್ಟು ಕಮ್ಮಿಮಾಡುತ್ತಾ ಹೋಗುತ್ತದೊ, ಅದನ್ನ ಆಳದಿಂದ ಕಿತ್ತುಕೊಳ್ಳಲಾಗುತ್ತದೆ ಮತ್ತು ಅದನ್ನು ಖಚಿತತೆ ಬದಲಿಸಿಬಿಡುತ್ತದೆ. ಅವನಿಗಾಗಲೇ ಶಿಕ್ಷೆ ವಿಧಿಸಲಾಗಿದೆ, ಮತ್ತು ಅದರ ಜೊತೆಗೆ ಸಾವಿನಿಂದ ಬಚಾವಾಗಲು ಸಾಧ್ಯವೇ ಇಲ್ಲ ಅನ್ನುವ ಭಯಾನಕವಾದ ಖಚಿತತೆ, ನಾನು ಅದನ್ನ ಪ್ರಪಂಚದಲ್ಲೇ ಅತ್ಯಂತ ಭೀಕರವಾದ ವೇದನೆ ಎಂದು ಪರಿಗಣಿಸುತ್ತೇನೆ. ಯುದ್ಧದಲ್ಲಿ ನೀನು ಒಬ್ಬ ಸೈನಿಕನನ್ನು ಒಂದು ಫಿರಂಗಿಯ ಬಾಯಿಗೆ ಕಟ್ಟಿ ಅವನ ಮೇಲೆ ಗುಂಡು ಹಾರಿಸಬಹುದು- ಆ ಸಂದರ್ಭದಲ್ಲೂ ಅವನಿಗೊಂದು ಭರವಸೆ ಇರುತ್ತದೆ. ಆದರೆ ಅದೇ ಸೈನಿಕನ ಮುಂದೆ ಅವನ ಮರಣದಂಡನೆಯ ತೀರ್ಪನ್ನು ಓದಿದಾಗ, ಅವನು ಹುಚ್ಚನಂತಾಗುತ್ತಾನೆ ಅಥವ ಕಣ್ಣೀರಿಟ್ಟು ಗೋಳಾಡಲು ಶುರುಮಾಡುತ್ತಾನೆ. ಯಾವ ಮನುಷ್ಯನೇ ಆದರೂ ಹುಚ್ಚನಾಗದೇ ಈ ಹಿಂಸೆಯನ್ನ ಅನುಭವಿಸುತ್ತಾನೆ ಎಂದು ಹೇಳುವಷ್ಟು ಧೈರ್ಯ ಯಾರಿಗಿದೆ? ಇಲ್ಲ ಇಲ್ಲ, ಇದೊಂದು ದುರುಪಯೋಗ, ನಾಚಿಕೆಗೇಡಿನದು, ಇದು ಅನಗತ್ಯವಾದದ್ದು. ಇಂತಹದ್ದು ಅಸ್ತಿತ್ವದಲ್ಲಿ ಯಾತಕ್ಕೋಸ್ಕರ ಇರಬೇಕು? ಯಾರಿಗೆ ಮರಣ ದಂಡನೆಯನ್ನ ವಿಧಿಸಲಾಗಿತ್ತೋ, ಯಾರು ಈ ರೀತಿಯ ಮಾನಸಿಕ ವೇದನೆಯನ್ನ ಸ್ವಲ್ಪ ಕಾಲವಾದರೂ ಅನುಭವಿಸಿದ್ದರೋ, ಅಂತಹವರಲ್ಲಿ ಕೆಲವರು ಕ್ಷಮಾದಾನದಿಂದ ಉಳಿದಿರುವ ಬಗ್ಗೆ ಅನುಮಾನಗಳಿಲ್ಲ; ಆದರೆ, ಬಹುಶಃ ಅಂತಹವರು ತಾವು ಮಾನಸಿಕವಾಗಿ ಅನುಭವಿಸಿದ ಭಾವನೆಗಳ ಬಗ್ಗೆ ನಂತರದ ದಿನಗಳಲ್ಲಿ ಯೋಚಿಸಿರಲಿಕ್ಕೂ ಸಾಧ್ಯವಿದೆ. ನಮ್ಮ ಲಾರ್ಡ್ ಕ್ರಿಸ್ತ ಆ ರೀತಿಯ ವೇದನೆ ಮತ್ತು ಭಯದ ಬಗ್ಗೆ ಹೇಳಿದ್ದರು. ಇಲ್ಲ ಇಲ್ಲ! ಕೂಡದು! ಯಾವುದೇ ಮನುಷ್ಯನನ್ನು ಈ ರೀತಿಯಲ್ಲಿ ನಡೆಸಿಕೊಳ್ಳುವಹಾಗಿಲ್ಲ, ನಡೆಸಿಕೊಳ್ಳಬಾರದು!”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-3)

ಸೇವಕನಿಗೆ, ಪ್ರಿನ್ಸ್ ಇವನ್ನೆಲ್ಲಾ ವಿವರಿಸಿದ ರೀತಿಯಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದೇ ಇದ್ದಿರಬಹುದಾದರೂ, ಅವನು ಇದನ್ನೆಲ್ಲಾ ಸಾಕಷ್ಟು ಪ್ರಮಾಣದಲ್ಲಿ ಗ್ರಹಿಸಿಕೊಂಡ; ಅವನ ಬದಲಾದ ಅಭಿವ್ಯಕ್ತಿಯಲ್ಲಿ ಹೆಚ್ಚು ಸೌಹಾರ್ದತೆಯು ಕಾಣತೊಡಗಿದ್ದೇ ಇದಕ್ಕೆ ಸಾಕ್ಷಿಯಾಯಿತು. “ನಿನಗೆ ಧೂಮಪಾನ ಬೇಕೇಬೇಕು ಎಂದೆನಿಸುತ್ತಿದ್ದರೆ, ಅದಕ್ಕೆ ಬಹುಶಃ ವ್ಯವಸ್ಥೆ ಮಾಡಬಹುದು, ಆದರೆ ನೀನು ಅದನ್ನು ಬೇಗ ಮುಗಿಸಬೇಕು. ಅವರು ಯಾವುದೇ ಗಳಿಗೆಯಲ್ಲಿ ನಿನ್ನ ಕೇಳಿಕೊಂಡು ಆಚೆ ಬರಬಹುದು, ಆ ಸಮಯದಲ್ಲಿ ನಿನ್ನ ಜಾಗದಲ್ಲಿ ನೀನಿಲ್ಲದೇ ಹೋದರೆ. ಆ ಕಡೆ ಒಂದು ಬಾಗಿಲಿರುವುದನ್ನ ನೋಡಿದೆಯಾ? ಅದರೊಳಗಡೆಗೆ ಹೋದರೆ ಬಲಗಡೆಯಲ್ಲಿ ನಿನಗೊಂದು ಸಣ್ಣ ಕೋಣೆ ಕಾಣುತ್ತದೆ; ನೀನಲ್ಲಿ ಧೂಮಪಾನ ಮಾಡಬಹುದು, ಕಿಟಕಿಗಳನ್ನ ಮಾತ್ರ ತೆರೆಯಬೇಕು, ಕಾರಣ ನಾನು ಇದಕ್ಕೆಲ್ಲಾ ನಿಜವಾಗಲೂ ಅವಕಾಶ ಮಾಡಿಕೊಡುವ ಹಾಗಿಲ್ಲ-.” ಆದರೆ ಇದಕ್ಕೆಲ್ಲಾ ಸಮಯವೇ ಇರಲಿಲ್ಲ.

ಆ ಕ್ಷಣದಲ್ಲಿ ತನ್ನ ಕೈಯ್ಯಲ್ಲಿ ಕಾಗದಗಳ ಕಂತೆಯೊಂದನ್ನು ಹಿಡಿದುಕೊಂಡು ಒಬ್ಬ ಯುವಕ ಸೇವಕರ ಕೋಣೆಯೊಳಗಡೆಗೆ ಬಂದ. ಸೇವಕ ಅವನ ಓವರ್ ಕೋಟನ್ನು ತೆಗೆಯುವುದಕ್ಕೆ ಸಹಾಯ ಮಾಡಲು ಮುಂದಕ್ಕೆ ಹೋದ. ಹೊಸದಾಗಿ ಬಂದವ ಪ್ರಿನ್ಸ್ ಕಡೆಗೆ ಓರೆಗಣ್ಣಿನಿಂದ ನೋಡಿದ.

“ಗ್ಯಾವ್ರಿಲ ಅರ್ಡಾಲಿಯೊನೋವಿಚ್, ಈ ವ್ಯಕ್ತಿ ಹೇಳಿಕೊಳ್ಳುತ್ತಿರುವುದು” ಗೌಪ್ಯವಾಗಿ ಮತ್ತು ಬಹುತೇಕ ಪರಿಚಯದವನಂತೆ ಸೇವಕ ಶುರುಮಾಡಿದ, “ತಾನು ಪ್ರಿನ್ಸ್ ಮೂಯಿಶ್ಕಿನ್ ಮತ್ತು ಮೇಡಮ್ ಎಪಾಂಚಿನ್ ಅವರ ಸಂಬಂಧಿಕ ಎಂದು, ಮತ್ತು ಅವನ ಬಳಿ ಇರುವ ಸಾಮಾನುಗಳೆಂದರೆ ಒಂದು ಬಟ್ಟೆಯ ಗಂಟು ಮಾತ್ರ.”

ಪ್ರಿನ್ಸ್‌ಗೆ ಕಡೆಯಲ್ಲಿ ಹೇಳಿದ್ದು ಕೇಳಿಸಲಿಲ್ಲ, ಕಾರಣ ಅದನ್ನು ಸೇವಕ ಪಿಸುಧ್ವನಿಯಲ್ಲಿ ಮಾತಾಡುತ್ತಿದ್ದುದು.

ಗ್ಯಾವ್ರಿಲ ಅರ್ಡಾಲಿಯೊನೋವಿಚ್ ಗಮನವಿಟ್ಟು ಕೇಳಿಸಿಕೊಂಡ, ಮತ್ತು ಬಹಳ ಕುತೂಹಲದಿಂದ ಪ್ರಿನ್ಸ್ ಕಡೆಗೆ ನೋಡಿದ. ಕೊನೆಗೂ ಸೇವಕನನ್ನು ಪಕ್ಕಕ್ಕೆ ಹೋಗುವಂತೆ ಹೇಳಿ ಪ್ರಿನ್ಸ್ ಕಡೆಗೆ ಅವಸರದಿಂದ ಹೆಜ್ಜೆಹಾಕಿದ.

“ನೀನು ಪ್ರಿನ್ಸ್ ಮೂಯುಶ್ಕಿನ್ ಹೌದ?” ಅತೀವವಾದ ಸೌಜನ್ಯತೆ ಮತ್ತು ಸೌಹಾರ್ದತೆಯಿಂದ ಅವನು ಕೇಳಿದ.

ಅವನು ಸುಮಾರು ಇಪ್ಪತ್ತೆಂಟು ವರ್ಷ ವಯಸ್ಸಿನ ಗಮನಾರ್ಹ ದೇಹರ್ಧ್ಯಢ್ಯದ ಸುಂದರ ಯುವಕ ಮತ್ತು ಮಧ್ಯಮ ಎತ್ತರದವನಾಗಿದ್ದ; ಸಣ್ಣ ಗಡ್ಡವನ್ನ ಕೂಡ ಬಿಟ್ಟಿದ್ದ, ಮತ್ತು ಅವನ ಮುಖ ಅವನು ಅತ್ಯಂತ ಬುದ್ಧಿವಂತ ಎನ್ನುವುದನ್ನ ಬಿಂಬಿಸುತ್ತಿತ್ತು. ಆದರೂ ಅವನ ನಗೆ, ಅದರಲ್ಲಿನ ಮಧುರತೆಯ ಹೊರತಾಗಿಯೂ, ಸ್ವಲ್ಪ ಶಿಷ್ಟಾಚಾರದಿಂದ ಕೂಡಿತ್ತು, ಮತ್ತು ಸಾಲಾಗಿ ಜೋಡಿಸಿದಂತಿದ್ದ ಅವನ ದಂತಪಂಕ್ತಿ ಸ್ವಲ್ಪ ಮಾತ್ರ ಕಾಣಿಸುವಂತೆ ನಗುತ್ತಿದ್ದ. ಅವನ ನೋಟ ಸ್ನೇಹಪರ ಮತ್ತು ಮುಗ್ಧತೆಯಿಂದ ಕೂಡಿದ್ದರೂ, ತುಸು ಅತಿಯಾದ ಕುತೂಹಲಕಾರಿ ವ್ಯಕ್ತಿ ಎಂಬುದನ್ನ ಬಿಂಬಿಸುತ್ತಿತ್ತು. ಆದರೆ ಒಟ್ಟಿನಲ್ಲಿ ಅವನ ಇಡೀ ವ್ಯಕ್ತಿತ್ವ ಹಿತಕರವಾಗಿತ್ತು.

“ಬಹುಶಃ ಅವನು ಏಕಾಂತದಲ್ಲಿದ್ದಾಗ ಅವನು ಬೇರೆಯೇ ತರಹ ಕಾಣಿಸುತ್ತಾನೆ ಮತ್ತು ಸ್ವಲ್ಪವೂ ನಗುವುದೇ ಇಲ್ಲ ಅಂತ ಕೂಡ ಅನಿಸುತ್ತದೆ!” ಪ್ರಿನ್ಸ್ ಮನಸ್ಸಿನೊಳಗೇ ಯೋಚಿಸಿದ.

ಅವನು ಹಿಂದೆ ರೊಗೊಜಿನ್ ಮತ್ತು ಸೇವಕನಿಗೆ ತನ್ನ ಬಗ್ಗೆ ವಿವರಿಸಿದ್ದನ್ನೆಲ್ಲಾ ಸಂಕ್ಷಿಪ್ತವಾಗಿ ಈಗಲೂ ವಿವರಿಸಿದ.

ಗ್ಯಾವ್ರಿಲ ಅರ್ಡಾಲಿಯೊನೋವಿಚ್ ಏತನ್ಮಧ್ಯೆ ಏನನ್ನೋ ನೆನಪಿಸಿಕೊಳ್ಳುತ್ತಿದ್ದವನಂತೆ ಕಂಡ.

“ನೀನೇ ಅಲ್ಲವೇ ಸ್ವಿಟ್ಜರ್ಲೆಂಡಿನಿಂದ ಒಂದು ವರ್ಷದ ಹಿಂದೆ ಕಾಗದವೊಂದನ್ನು ಬರೆದಿದ್ದು, ನನ್ನ ಪ್ರಕಾರ ಅದನ್ನ ಎಲಿಜಬತ್ ಪ್ರಕೊಫಿಯೆನ್ವಗೆ (ಎಪಾಂಚಿನ್‌ನ ಹೆಂಡತಿಗೆ) ಬರೆದಿದ್ದು ಅಲ್ವಾ?”

“ಹೌದು ಅದು ನಾನೇ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-2)

“ಓ, ಹಾಗಾದರೆ ನೀವು ಯಾರು ಅನ್ನುವುದನ್ನ ಅವರು ನೆನಪಿಸಿಕೊಳ್ಳುತ್ತಾರೆ. ನೀವು ಜನರಲ್‌ರನ್ನು ನೋಡಲು ಬಂದಿದ್ದೀರ? ನಾನು ಕೂಡಲೇ ಜನರಲ್‌ಗೆ ತಿಳಿಸುತ್ತೇನೆ. ಒಂದೇ ನಿಮಿಷದಲ್ಲಿ ಅವರು ಬಿಡುವಾಗುತ್ತಾರೆ; ಆದರೆ ನೀವು ನಿರೀಕ್ಷಣಾ ಕೋಣೆಯಲ್ಲಿ ಕಾಯುವುದು ಒಳ್ಳೆಯದು. ಅಲ್ಲವ, ಇಲ್ಲೇಕೆ ಅವರಿದ್ದಾರೆ?” ಅವನು ಕಟುವಾಗಿ ಸೇವಕನನ್ನ ಕೇಳಿದ.

“ಅವರೇ ಇಲ್ಲಿರಲು ಇಷ್ಟಪಟ್ಟರು ಸರ್!” ಸೇವಕ ಉತ್ತರಿಸಿದ.

ಇದೇ ವೇಳೆಗೆ ಓದುವ ಕೋಣೆಯ ಬಾಗಿಲು ತೆರೆದುಕೊಂಡಿತು, ಒಬ್ಬ ಸೈನ್ಯದ ಮನುಷ್ಯ, ತನ್ನ ಕೈಯ್ಯಲ್ಲಿ ಬ್ರೀಫ್ ಕೇಸನ್ನು ಹಿಡಿದುಕೊಂಡು ಆಚೆಗೆ ಜೋರಾಗಿ ಮಾತನಾಡುತ್ತಾ ಬಂದ, ಒಳಗಿದ್ದ ಯಾರಿಗೋ ವಿದಾಯ ಹೇಳುತ್ತಾ ಹೊರಟುಹೋದ.

ಓದುವ ಕೋಣೆಯಿಂದ ಧ್ವನಿಯೊಂದು “ನೀನಲ್ಲೇ ಇದೀಯ ಗನ್ಯ?” ಎಂದಿತು, “ಒಳಗೆ ಬಾ” ಅಂತ ಕರೆ ಬಂತು.

ಗ್ಯಾವ್ರಿಲ ಅರ್ಡಾಲಿಯೊನೋವಿಚ್ ಪ್ರಿನ್ಸ್‌ನ ಕಡೆಗೆ ತಿರುಗಿ ತಲೆಯಾಡಿಸಿ ಬೇಗನೆ ರೂಮಿನೊಳಗಡೆಗೆ ಹೋದ.

ಎರಡು ನಿಮಿಷಗಳ ನಂತರ ಪುನಃ ಬಾಗಿಲು ತೆರೆಯಿತು ಮತ್ತು ಗನ್ಯಾನ ಸ್ನೇಹಪರ ಧ್ವನಿ ಕೂಗಿ ಹೇಳಿತು:

“ದಯವಿಟ್ಟು ಒಳಗೆ ಬನ್ನಿ ಪ್ರಿನ್ಸ್!” ಎಂದು.

(ಕನ್ನಡಕ್ಕೆ): ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...