Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-3)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-3)

- Advertisement -
- Advertisement -

ಪ್ರಿನ್ಸ್‌ನ ಈ ಸಂಭಾಷಣೆ ಕುಟಿಲತೆಯಿಲ್ಲದೆ, ಎಲ್ಲವನ್ನೂ ಒಂದು ಮಟ್ಟಕ್ಕೆ ಭಿನ್ನವಿಸಿಕೊಳ್ಳುವ ರೀತಿಯಲ್ಲಿಯೇ ಇತ್ತು. ಆದರೆ, ಅಲ್ಲಿಗೆ ಸಂದರ್ಶಕನಾಗಿ ಬಂದಿದ್ದ ವ್ಯಕ್ತಿಯಿಂದ ಸಾಮಾನ್ಯ ಸೇವಕನೊಬ್ಬನೆಡೆಗೆ ತೂರಿಬರುತ್ತಿದ್ದ ಈ ಮಾತುಗಳು ಆ ಸೇವಕನಿಗೆ ಅಸಂಬದ್ಧವಲ್ಲ ಎಂದೆನಿಸಿರಲು ಸಾಧ್ಯವಿರಲಿಲ್ಲ. ಮತ್ತು ಅವನ ತೀರ್ಮಾನ ಇವೆರಡರಲ್ಲಿ ಒಂದು ಮಾತ್ರವಾಗಿತ್ತು ಎಂಬುದು ಬಹುಶಃ ವಿವರಣೆಯಾಗುತ್ತದೆ; ಅಂದರೆ ಅವನೊಬ್ಬ ಭಿಕ್ಷಾಟನೆಗೆ ಬಂದ ಠಕ್ಕ, ಅಥವ ಅವನು ಪ್ರಿನ್ಸ್, ಅವನೊಬ್ಬ ಪ್ರಿನ್ಸ್ ಆಗಿದ್ದರೂ ಒಬ್ಬ ಮೂರ್ಖಮಾತ್ರ, ಯಾವುದೇ ರೀತಿಯ ಕನಿಷ್ಟ ಮಹತ್ವಾಕಾಂಕ್ಷೆಯೂ ಇಲ್ಲದವನು; ಯಾವುದಾದರೂ ಮಹತ್ವಾಕಾಂಕ್ಷೆಯುಳ್ಳ ಒಬ್ಬ ಪ್ರಜ್ಞಾವಂತ ಪ್ರಿನ್ಸ್ ಖಂಡಿತವಾಗಿ ಸೇವಕರ ಕೋಣೆಯಲ್ಲಿ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ, ಮತ್ತು ತನ್ನದೇ ಆದ ಖಾಸಗಿ ವಿಷಯಗಳ ಬಗ್ಗೆ ಈ ರೀತಿ ಮಾತನಾಡುವುದಿಲ್ಲ. ಎರಡರಲ್ಲಿ ಯಾವುದೇ ಆದರೂ ಹೇಗೆ ಈ ಏಕಾಂಗಿ ಸಂದರ್ಶಕನ ಬಗ್ಗೆ ಜನರಲ್‌ಗೆ ನಿವೇದಿಸುವುದು?

“ನೀನು ಪಕ್ಕದ ನಿರೀಕ್ಷಣಾ ಕೊಠಡಿಗೆ ಹೋಗಬೇಕೆಂದು ನನಗೆ ನಿಜವಾಗಿ ಅನ್ನಿಸುತ್ತಿದೆ!” ಒತ್ತಾಯಪೂರ್ವಕವಾಗಿ ಅವನು ಹೇಳಿದ.

“ಯಾಕೆ, ಈಗ ನಾನೇನಾದರೂ ಅಲ್ಲಿ ಕುಳಿತಿದ್ದಿದ್ದರೆ, ನನಗೆ ನನ್ನ ಸ್ವಂತ ವಿವರಗಳನ್ನು ಹೇಳುವ ಅವಕಾಶವೇ ಸಿಗುತ್ತಿರಲಿಲ್ಲ. ನೀನಿನ್ನೂ ನನ್ನ ವಿಷಯದಲ್ಲಿ ನೆಮ್ಮದಿಯನ್ನ ಕಳೆದುಕೊಂಡವನಂತೆ ಇದೀಯ, ಮತ್ತು ನನ್ನ ಉಟ್ಟ ಬಟ್ಟೆ ಮತ್ತು ಗಂಟಿನ ಕಡೆಗೆ ಕಣ್ಣು ಹಾಯಿಸುತ್ತಲೇ ಇದ್ದೀಯ. ಆ ಕಾರ್ಯದರ್ಶಿಗೆ ಕಾಯದೆ ಈಗ ನೀನು ಒಳಗೆ ಹೋಗಿ ನನ್ನ ಬಗ್ಗೆ ಯಾಕೆ ತಿಳಿಸಬಾರದು?”

“ಇಲ್ಲ, ಇಲ್ಲ! ನಿನ್ನಂತಹ ಸಂದರ್ಶಕನ ಬಗ್ಗೆ ಕಾರ್ಯದರ್ಶಿ ಬರದೇ ನನಗೆ ಹೇಳಲಾಗುವುದಿಲ್ಲ. ಅದಲ್ಲದೇ ಆಗಲೇ ಜನರಲ್ ತಿಳಿಸಿರುವಂತೆ ಅವರಿಗೆ ತೊಂದರೆ ಕೊಡುವಂತಿಲ್ಲ, ಅವರೀಗ ಕರ್ನಲ್ ಸಿ– ಜೊತೆ ಇದ್ದಾರೆ. ಗ್ಯಾವ್ರಿಲ ಅರ್ಡಾಲಿಯೊನೋವಿಚ್‌ಗೆ ಒಳಗಡೆಗೆ ಸೀದ ಹೊಗುವ ಸ್ವಾತಂತ್ರ್ಯವಿದೆ.”

“ಅವರ್‍ಯಾರು, ಗುಮಾಸ್ತರೇ?”

“ಏನು? ಗ್ಯಾವ್ರಿಲ ಅರ್ಡಾಲಿಯೊನೋವಿಚ್? ಓ ಇಲ್ಲ; ಅವರು ಅನೇಕ ಸಂಸ್ಥೆಗಳಲ್ಲಿ ಒಂದು ಸಂಸ್ಥೆಗೆ ಸೇರಿದವರು. ನೋಡಿಲ್ಲಿ, ಯಾವುದಕ್ಕೂ ಮೊದಲು ಆ ನಿನ್ನ ಗಂಟನ್ನ ಅಲ್ಲಿಡು.”

“ಸರಿ, ನಾನು ಹಾಗೆಯೇ ಮಾಡುತ್ತೇನೆ, ನನ್ನ ಮೇಲಿನ ಅಂಗಿಯನ್ನೂ ತೆಗೆದುಬಿಡಲೇ?”

“ಹೌದು ಖಂಡಿತವಾಗಿ, ಏನೇ ಆದರೂ ಅದನ್ನ ಹಾಕಿಕೊಂಡು ನೀನು ಒಳಗಡೆಗೆ ಹೋಗುವ ಹಾಗಿಲ್ಲ.”

ಪ್ರಿನ್ಸ್ ಮೇಲೆದ್ದು ತನ್ನ ಮೇಲಿನ ಅಂಗಿಯನ್ನ ತೆಗೆದ; ಅವನ ಬೆಳಗ್ಗೆ ಧರಿಸುವ ಉಡುಪು ಒಂದೆರಡು ಕಡೆ ಸ್ವಲ್ಪ ಸವೆದಿದ್ದರೂ ಸಾಕಷ್ಟು ಚೆನ್ನಾಗಿತ್ತು. ಅವನೊಂದು ಸ್ಟೀಲ್ ಗಡಿಯಾರದ ಚೈನನ್ನು ಧರಿಸಿದ್ದ ಮತ್ತು ಅದರ ಇನ್ನೊಂದು ತುದಿಗೆ ಜಿನೀವ ಬೆಳ್ಳಿಯ ಗಡಿಯಾರವೊಂದನ್ನ ಸಿಕ್ಕಿಸಲಾಗಿತ್ತು. ಪ್ರಿನ್ಸ್ ಮೂರ್ಖನಿದ್ದಿರಬಹುದಾದರೂ ಕೂಡ, ಹಾಗೂ ಆತ ತನ್ನನ್ನು ಹೇಗೋ ಸಂತುಷ್ಟಗೊಳಿಸಿದ್ದರೂ ಕೂಡ, ಒಬ್ಬ ಸಂದರ್ಶಕನ ಜೊತೆಯಲ್ಲಿ ಮಾತನಾಡುವುದು ಜನರಲ್‌ನ ಸೇವಕನಿಗೆ ಸಮಂಜಸವೆಂದೆನಿಸಲಿಲ್ಲ.

“ಮತ್ತೆ ಎಷ್ಟು ಹೊತ್ತಿಗೆ ಮೇಡಮ್ ಜನಗಳನ್ನ ಭೇಟಿಮಾಡುವುದು?” ಪ್ರಿನ್ಸ್ ತಾನು ಮುಂಚೆ ಕುಳಿತಿದ್ದ ಜಾಗದಲ್ಲೇ ಪುನಃ ಕುಳಿತುಕೊಳ್ಳುತ್ತಾ ಸೇವಕನನ್ನು ಕೇಳಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

“ಓ ಅದೆಲ್ಲಾ ನನ್ನ ವ್ಯಾಪ್ತಿಗೆ ಬರುವುದಿಲ್ಲ! ನನಗೆ ತಿಳಿದಿರುವುದರ ಪ್ರಕಾರ ಮೇಡಮ್‌ರನ್ನು ಯಾವ ಸಮಯದಲ್ಲಿ ಬೇಕಾದರೂ ಭೇಟಿ ಮಾಡಬಹುದು; ಅದು ಸಂದರ್ಶಕರ ಮೇಲೆ ಅವಲಂಬಿತವಾಗಿರುತ್ತದೆ. ಉಡುಪಿನ ವಿನ್ಯಾಸಕ ಹನ್ನೊಂದು ಗಂಟೆಗೆ ಹೋಗುತ್ತಾನೆ. ಗ್ಯಾವ್ರಿಲ ಅರ್ಡಾಲಿಯೊನೋವಿಚ್‌ನನ್ನು ಎಲ್ಲರಿಗಿಂತ ಮೊದಲು ಒಳಗೆ ಬಿಡುತ್ತಾರೆ. ಮತ್ತು ಅವನನ್ನು ಮಧ್ಯಾಹ್ನದ ಊಟಕ್ಕೂ ಒಮ್ಮೊಮ್ಮೆ ಸೇರಿಸಿಕೊಳ್ಳುತ್ತಾರೆ.”

“ಈ ಋತುವಿನಲ್ಲಿ ವಿದೇಶಕ್ಕಿಂತ ಇಲ್ಲಿನ ಕೋಣೆಗಳು ಹೆಚ್ಚು ಬೆಚ್ಚಗಿರುತ್ತವೆ” ಪ್ರಿನ್ಸ್ ಗಮನಿಸಿ ಹೇಳಿದ; “ಆದರೆ ನಾನಿದ್ದ ದೇಶದಲ್ಲಿ ಹೊರಗಡೆ ಹೋದಾಗ ಮಾತ್ರ ಇಲ್ಲಿಗಿಂತ ಜಾಸ್ತಿ ಬೆಚ್ಚಗಿರುತ್ತದೆ. ಒಬ್ಬ ರಷ್ಯದವನು ಚಳಿಗಾಲದಲ್ಲಿ ಅಲ್ಲಿನ ಮನೆಗಳಲ್ಲಿ ಜೀವಿಸುವುದು ರೂಢಿಯಾಗುವವರೆಗೂ ಅಸಾಧ್ಯ.”

“ಅಲ್ಲಿ ಕೋಣೆಗಳನ್ನು ಬೆಚ್ಚಗೆ ಕಾಯಿಸುವುದೇ ಇಲ್ಲವೇ?”

“ಸ್ವಲ್ಪವೇ ಸ್ವಲ್ಪ ಮಾಡುತ್ತಾರೆ; ಆದರೆ ಅಲ್ಲಿನ ಮನೆಗಳು ಮತ್ತು ಕಾಯಿಸುವ ಒಲೆಗಳು ನಮ್ಮದುಕ್ಕಿಂತ ಬಹಳ ವಿಭಿನ್ನವಾಗಿರುತ್ತವೆ.”

“ಹೌದ! ನೀನು ಬಹಳ ಕಾಲ ಅಲ್ಲಿಯೇ ಇದ್ದೆಯಾ?”

“ನಾಲ್ಕು ವರ್ಷಗಳು! ನಾನು ಎಲ್ಲಾ ಸಮಯದಲ್ಲೂ ಒಂದೇ ಜಾಗದಲ್ಲಿ ಇರುತ್ತಿದ್ದೆ. ಒಂದು ಹಳ್ಳಿಯಲ್ಲಿ.”

“ನೀನು ರಷ್ಯವನ್ನು ಬಹಳವಾಗಿ ಮರೆತುಬಿಟ್ಟಿರಬೇಕು, ಹೌದಲ್ಲವೊ?”

“ಹೌದು, ಖಂಡಿತವಾಗಿಯೂ ನಾನು ಮರೆತುಬಿಟ್ಟಿದ್ದೆ, ಬಹಳಷ್ಟು; ಮತ್ತೊಂದು ವಿಷಯ ನೀನು ನಂಬುತ್ತೀಯೋ ಇಲ್ಲವೋ, ನಾನು ರಷ್ಯನ್ ಭಾಷೆ ಮಾತನಾಡುವುದನ್ನ ಹೇಗೆ ಮರೆಯಲೇ ಇಲ್ಲ? ಎಂದು ನನ್ನ ಬಗ್ಗೆಯೇ ಆಶ್ಚರ್ಯಪಡುತ್ತೇನೆ. ಈಗಲೂ, ನಾನು ನಿನ್ನ ಜೊತೆ ಮಾತನಾಡುವಾಗ ಕೂಡ ’ಅದೆಷ್ಟು ಚೆನ್ನಾಗಿ ನಾನು ರಷ್ಯನ್ ಭಾಷೆಯನ್ನ ಮಾತನಾಡುತ್ತೇನೆ’ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಆ ಕಾರಣಕ್ಕಾಗಿಯೂ ಭಾಗಶಃ ಬೆಳೆಗ್ಗೆಯಿಂದಲೂ ಸಿಕ್ಕಾಪಟ್ಟೆ ಮಾತನಾಡುತ್ತಿದ್ದೇನೆ. ನಿನಗೆ ಖಂಡಿತವಾಗಿ ಹೇಳುತ್ತೇನೆ, ನೆನ್ನೆ ಸಂಜೆಯಿಂದಲೂ ರಷ್ಯನ್ ಭಾಷೆಯಲ್ಲಿ ಮಾತನಾಡುತ್ತಾ ಸಾಗುವ ಬಯಕೆ ಬಲವಾಗಿ ಹೆಚ್ಚುತ್ತಿದೆ.”

“ಹ್ಮ್, ಹೌದು; ನೀನು ಹಿಂದಿನ ವರ್ಷಗಳಲ್ಲಿ ಪೀಟರ್ಸ್‌ಬರ್ಗ್‌ನಲ್ಲೇ ವಾಸಮಾಡುತ್ತಿದ್ದೆಯಾ?”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

ಈ ಒಳ್ಳೆಯ ಸೇವಕನಿಗೆ, ತನ್ನ ವಿವೇಚನಾಶೀಲತೆಯಿಂದ ಕೂಡಿದ ನಿಷ್ಠುರತೆಯ ಸ್ವಭಾವದ ಹೊರತಾಗಿಯೂ, ಈ ರೀತಿಯ ಸೌಮ್ಯವಾದ ಮತ್ತು ಒಪ್ಪುವಂತ ಸಂಭಾಷಣೆಯನ್ನ ಮುಂದುವರಿಸುವ ಚಪಲವನ್ನ ನಿಗ್ರಹಿಸಿಕೊಳ್ಳಲಾಗಲಿಲ್ಲ.

“ಪೀಟರ್ಸ್‌ಬರ್ಗ್‌ನಲ್ಲಾ? ಇಲ್ಲ, ನಾನೆಂದೂ ಇರಲಿಲ್ಲ. ಈಗ ಎಲ್ಲರೂ ಹೇಳುತ್ತಾರೆ ಎಷ್ಟೊಂದು ಬದಲಾಗಿದೆ ಎಂದು, ಮತ್ತು ಈ ನಗರವನ್ನ ಚೆನ್ನಾಗಿ ಬಲ್ಲವರೂ ಕೂಡ ಅವರಿಗೆ ಗೊತ್ತಿದ್ದುದನ್ನೆಲ್ಲಾ ಪುನಃ ಕಲಿಯಬೇಕೆನ್ನುತ್ತಾರೆ. ಎಲ್ಲರೂ ಇಲ್ಲಿನ ಹೊಸ ನ್ಯಾಯಾಲಯಗಳ ಬಗ್ಗೆ ಮತ್ತು ಅಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಬಹಳಷ್ಟು ಮಾತನಾಡಿಕೊಳ್ಳುತ್ತಾರೆ. ಹೌದಲ್ಲವಾ?”

“ಹೂ ಹೌದು! ಅದು ನಿಜವೇನೋ ಸರಿ. ಈಗ, ನೀನಿದ್ದ ದೇಶದಲ್ಲಿ ಕಾನೂನಿನ ವ್ಯವಸ್ಥೆ ಹೇಗಿದೆ, ಅಲ್ಲಿ ಕಾನೂನನ್ನು ಇಲ್ಲಿಗಿಂತ ಹೆಚ್ಚು ನ್ಯಾಯಯುತವಾಗಿ ನಿರ್ವಹಿಸುತ್ತಾರ?”

“ಓ, ನನಗದರ ಬಗ್ಗೆ ತಿಳಿದಿಲ್ಲ! ನಮ್ಮ ಕಾನೂನು ನಿರ್ವಹಣಾ ವ್ಯವಸ್ಥೆಯ ಬಗ್ಗೆ ಸಾಕಷ್ಟು ಒಳ್ಳೆಯದನ್ನ ಕೇಳಿದ್ದೀನಿ ಕೂಡ. ಒಂದು ವಿಷಯ ಎಂದರೆ ಇಲ್ಲಿ ಮರಣದಂಡನೆಯ ಶಿಕ್ಷೆ ಜಾರಿಯಲ್ಲಿಲ್ಲ.”

“ಅಲ್ಲೆಲ್ಲಾ ಅದು ಇದೆಯೇ?”

“ಹೌದು.. ನಾನೊಂದು ಮರಣದಂಡನೆಯ ಪ್ರಕ್ರಿಯೆಯನ್ನ ಫ್ರಾನ್ಸಿನಲ್ಲಿ ಕಣ್ಣಾರೆ ನೋಡಿದ್ದೇನೆ…. ಲಿಯೋನ್ಸ್ ಎಂಬ ಜಾಗದಲ್ಲಿ. ಶ್ನೈಡರ್ ಅದನ್ನು ನನಗೆ ತೋರಿಸಲೋಸುಗವೇ ಅಲ್ಲಿಗೆ ನನ್ನನ್ನು ತಮ್ಮ ಜೊತೆಯಲ್ಲಿ ಕರೆದೊಯ್ದಿದ್ದರು.”

“ಏನು, ಆ ವ್ಯಕ್ತಿಯನ್ನ ನೇಣುಗಂಬಕ್ಕೆ ಏರಿಸಿದರೆ?”

“ಇಲ್ಲ ಫ್ರಾನ್ಸಿನಲ್ಲಿ ಜನಗಳ ತಲೆಯನ್ನ ಕತ್ತರಿಸಿಬಿಡುತ್ತಾರೆ.”

“ಆ ಅಪರಾಧಿ ಏನು ಮಾಡಿದ? ಜೋರಾಗಿ ಕಿರುಚಿಕೊಂಡನೇ?”

“ಓ ಇಲ್ಲ, ಅದೊಂದು ಕ್ಷಣದಲ್ಲಿ ನಡೆಯುವ ಕೆಲಸ. ಅವರು ಮನುಷ್ಯನನ್ನು ಒಂದು ಚೌಕಟ್ಟಿನಲ್ಲಿ ಬಗ್ಗಿ ಕೂರುವಂತೆ ಮಾಡುತ್ತಾರೆ ಮತ್ತು ಒಂದು ಅಗಲವಾದ ಹರಿತವಾದ ಚಾಕು ಯಂತ್ರವೊಂದರ ಮೂಲಕ ಮೇಲಿನಿಂದ ಅವನ ಕತ್ತಿನ ಮೇಲೆ ಬೀಳುತ್ತದೆ, ಅದು ಅತಿ ಭಯಂಕರವಾದ ಭಾರದಿಂದ ಕೂಡಿರುತ್ತದೆ. ಅದನ್ನ ಗಿಲೊಟಿನ್ ಎಂದು ಕರೆಯುತ್ತಾರೆ. ಇಡೀ ತಲೆಯ ಭಾಗವನ್ನು ಕತ್ತರಿಸಿಬಿಡಲು ವೇಗದಿಂದ ಕೆಳಗೆ ಬೀಳುತ್ತದೆ. ಕಣ್ಣು ಮಿಟುಕಿಸುವಷ್ಟೂ ಸಮಯವಿರುವುದಿಲ್ಲ. ಆದರೆ ಅದಕ್ಕಾಗಿ ನಡೆಯುವ ತಯ್ಯಾರಿ ಮಾತ್ರ ಭಯಂಕರ. ಅವರು ಮರಣದಂಡನೆಯ ತೀರ್ಪನ್ನ ಓದುತ್ತಾರೆ, ನಿನಗೆ ಗೊತ್ತಾ, ಅಪರಾಧಿಯ ಕೈಗಳನ್ನ ಕಟ್ಟುವುದರ ಮೂಲಕ ತಯಾರಿ ನಡೆಸುತ್ತಾರೆ ಮತ್ತು ಅವನನ್ನು ಗಾಡಿಯಲ್ಲಿ ವಧಾಸ್ಥಾನದ ಬಳಿಗೆ ಒಯ್ಯುತ್ತಾರೆ, ಮತ್ತು ಈ ಮರಣದಂಡನೆ ಪ್ರಕ್ರಿಯೆಯಲ್ಲಿ ಅತ್ಯಂತ ಭಯ ಹುಟ್ಟಿಸುವ ಭಾಗವೇ ಇದು. ಸುತ್ತಲೂ ಜನರು ಗುಂಪು ಕಟ್ಟಿಕೊಂಡು ನಿಲ್ಲುತ್ತಾರೆ. ಹೆಂಗಸರೂ ಕೂಡ. ಆದರೆ ಹೆಂಗಸರುಗಳು ಬಂದು ನೋಡುವುದನ್ನು ಅವರು ಉತ್ತೇಜಿಸುವುದೇ ಇಲ್ಲ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-3)

“ಇಲ್ಲ, ಇಲ್ಲ, ಇದೆಲ್ಲಾ ಹೆಂಗಸರು ನೋಡುವಂತಹುದಲ್ಲ.”

“ಇಲ್ಲ ಖಂಡಿತ ಇಲ್ಲ! ಅಬ್ಬಾ! ಆ ಅಪರಾಧಿ ಒಬ್ಬ ಅಪ್ಪಟ ಬುದ್ಧಿವಂತ ಧೈರ್ಯಶಾಲಿ ಮನುಷ್ಯ; ಲೆ ಗ್ರಾಸ್ ಎನ್ನುವುದು ಅವನ ಹೆಸರಾಗಿತ್ತು; ಮತ್ತು ನಾನು ಇನ್ನೊಂದು ಮಾತು ಹೇಳುತ್ತೇನೆ, ನಿನಗಿಷ್ಟ ಬಂದಂತೆ, ನಂಬಿದರೆ ನಂಬು ಬಿಟ್ಟರೆ ಬಿಡು, ಅವನು ವಧ್ಯಶಿಲೆಯನ್ನ ಹತ್ತುವಾಗ ಅಳುವುದಕ್ಕೆ ಶುರುಮಾಡಿದ, ಖಂಡಿತವಾಗಿಯೂ ಅವನು ಅಳುತ್ತಿದ್ದ, ಅವನೊಂದು ಬಿಳಿಯ ಹಾಳೆಯಂತೆ ಬಿಳಿಚಿಕೊಂಡಿದ್ದ. ಅವನು ಅಳುತ್ತಿದ್ದದ್ದು- ಅಳುತ್ತಾ ಇದ್ದುದು ಒಂದು ಭಯಾನಕವಾದ ದೃಶ್ಯವಲ್ಲವೇ? ಯಾರಾದರೂ ಕೂಡ ಒಬ್ಬ ವಯಸ್ಕನಾದ ಮನುಷ್ಯ ಭಯದಿಂದ ಅಳುವುದನ್ನ ಕೇಳಿದರೆ- ಮಗುವಲ್ಲ, ಒಬ್ಬ ನಲವತ್ತೈದು ವರ್ಷದ ವಯಸ್ಕ, ಹಿಂದೆಂದೂ ತನ್ನ ಜೀವನದಲ್ಲೇ ಅಳದೇ ಇದ್ದ ವ್ಯಕ್ತಿ, ಅವನ ಮನಸ್ಸಿನಲ್ಲಿ ಆ ಕ್ಷಣದಲ್ಲಿ ಏನು ನಡೆಯುತ್ತಿರಬಹುದು ಅನ್ನುವುದನ್ನ ಕಲ್ಪಿಸಿಕೊ; ಯಾವ ರೀತಿಯ ಘೋರವಾದ ಪ್ರಕ್ಷುಬ್ಧತೆಯನ್ನ ಅವನ ಆತ್ಮ ಸಹಿಸಿದ್ದಿರಬೇಕು; ಇದೊಂದು ಆತ್ಮದ ಮೇಲೆ ಎಸಗುತ್ತಿರುವ ಹೀನಾಯವಾದ ಆಕ್ರೋಶ. ಅದಲ್ಲದೆ ಬೇರೇನೂ ಅಲ್ಲ. ಅದು ’ನೀನು ಯಾರನ್ನೂ ಕೊಲ್ಲುವುದಿಲ್ಲ (Though shall not kill)’ ಎಂದು ಹೇಳಿದೆಯೆಂಬ ಕಾರಣಕ್ಕೆ, ಅವನು ಇನ್ನೊಬ್ಬರನ್ನ ಕೊಂದ ಎಂಬ ಕಾರಣ ನೀಡಿ ಅವನನ್ನ ಕೊಲೆಮಾಡಬೇಕೆ? ಇಲ್ಲ ಇದು ಸರಿಯಲ್ಲ, ಇದೊಂದು ಅಸಿಂಧು ಎನ್ನಬಹುದಾದಂತಹ ಸಿದ್ಧಾಂತ. ನಾನು ನಿನಗೆ ಈಗ ಹೇಳುತ್ತಿರುವುದು ಒಂದು ತಿಂಗಳ ಹಿಂದೆಯಷ್ಟೇ ನೋಡಿದ ಘಟನೆ ಮತ್ತು ಅದು ನನ್ನ ಕಣ್ಣ ಮುಂದೆ ಇಲ್ಲಿಯವರೆಗೂ ವಿಕಟ ನರ್ತನ ಮಾಡುತ್ತಲೇ ಇದೆ. ನಾನು ಆ ಭಯಾನಕ ದೃಶ್ಯವನ್ನ ಆಗಾಗ ಕನಸಿನಲ್ಲಿ ಕಾಣುತ್ತಲೇ ಇರುತ್ತೇನೆ.”

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...