ಒಳಮೀಸಲು ಜಾರಿಗೆ ಒತ್ತಾಯಿಸಿ ಸಿಎಂ ಮನೆಯೆಡೆಗೆ ಪಾದಯಾತ್ರೆ ಹೊರಟ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ಯ ಮುಖಂಡರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದ್ದು, ಹಲವರನ್ನು ಬಂಧಿಸಲಾಗಿದೆ.
ಒಳಮೀಸಲಾತಿ ಹೋರಾಟಗಾರ ಕರಿಯಪ್ಪ ಗುಡಿಮನಿಯವರ ತಲೆಗೆ ಪೆಟ್ಟಾಗಿದ್ದು ಅವರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. 62 ವರ್ಷ ವಯಸ್ಸಿನ ಅವರು ನವೆಂಬರ್ 28 ರಿಂದಲೂ ಹರಿಹರದಿಂದ ಪಾದಯಾತ್ರೆಯಲ್ಲಿ ನಡೆದು ಬೆಂಗಳೂರು ತಲುಪಿದ್ದರು. ಅವರ ಮೇಲಿನ ಹಲ್ಲೆ ನಡೆಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಉಳಿದಂತೆ ಅಂಬಣ್ಣ ಅರೋಲಿಕರ್ ಸೇರಿದಂತೆ ನೂರಾರು ಹೋರಾಟಗಾರರನ್ನು ಆಡುಗೋಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಇಂದು ಬೆಳಿಗ್ಗೆಯಿಂದಲೇ ಸಾವಿರಾರು ಜನರು ಒಳಮೀಸಲಾತಿ ಜಾರಿಗಾಗಿ ಹೋರಾಟ ಆರಂಭಿಸಿದ್ದರು. ಮಳೆ-ಚಳಿ-ಗಾಳಿ ಲೆಕ್ಕಿಸದೆ ಸದಾಶಿವ ಆಯೋಗದ ವರದಿ ಚರ್ಚೆ ಮತ್ತು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದರು. ಸಚಿವ ವಿ.ಸೋಮಣ್ಣ ಮನವಿ ಆಲಿಸಲು ಬಂದಾಗ ಧಿಕ್ಕಾರ ಕೂಗಿ ಸಿಎಂ ಬೊಮ್ಮಾಯಿಯವರೆ ಬರಬೇಕೆಂದು ಪಟ್ಟು ಹಿಡಿದಿದ್ದರು.
ಸಂಜೆ 6 ಗಂಟೆಯಾದರೂ ಸಹ ಪ್ರತಿಭಟನಾ ಸ್ಥಳಕ್ಕೆ ಸಿಎಂ ಬರಲಿಲ್ಲ. ಪೊಲೀಸರು ಹೋರಾಟ ನಿಲ್ಲಿಸಲು ಮನವಿ ಮಾಡಿದರು. ಆದರೆ ಹೋರಾಟಗಾರರು ಸಿಎಂ ಮನೆ ಕಡೆ ಪಾದಯಾತ್ರೆಗೆ ಮುಂದಾದರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಗುಂಪು ಚದುರಿಸಲು ಲಾಠೀಚಾರ್ಜ್ ಮಾಡಿದ ಪೊಲೀಸರು ಮುಖಂಡರನ್ನು ಬಂಧಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕರಿಯಪ್ಪ ಗುಡಿಮನಿಯವರು, “ಸಮುದಾಯ 35 ವರ್ಷದಿಂದ ಒಳಮೀಸಲಾತಿಗಾಗಿ ಹೋರಾಡುತ್ತಿದೆ. 13 ದಿನದಿಂದ ಹರಿಹರದಿಂದ ನಡೆದಿದ್ದೇವೆ. ಇಂದು 50 ಸಾವಿರದಷ್ಟು ಜನ ಸೇರಿದ್ದಾರೆ. ಆದರೆ ನಮ್ಮ ಅಳಲು ಆಲಿಸುವ ಬದಲು ಸರ್ಕಾರ ನಮ್ಮ ಮೇಲೆ ಲಾಠೀ ಚಾರ್ಜ್ ಮಾಡಿದೆ. ನಮ್ಮನ್ನು ಬಂಧಿಸಿದೆ. ಈ ಹಿಂದೆ ಬೆಳಗಾವಿಯಲ್ಲಿಯೂ ಸಹ ನಮ್ಮ ಮೇಲೆ ಲಾಠೀ ಚಾರ್ಜ್ ಮಾಡಿತ್ತು ಬಿಜೆಪಿ ಸರ್ಕಾರ. ನನ್ನ ತಲೆಗೆ ಪಟ್ಟಾಗಿದೆ. ಆಸ್ಪತ್ರೆಯಲ್ಲಿದ್ದೇನೆ. ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ. ಹೋರಾಟ ನಿಲ್ಲಬಾರದು. ಸಮುದಾಯ ಸೋಲಬಾರದು. ನಾಳೆ ಇನ್ನೂ ಬಿರುಸಿನ ಹೋರಾಟ ನಡೆಯಲಿದೆ. ಎಲ್ಲಾ ಬಂಧುಗಳು ಗೆಲ್ಲುವ ಹೋರಾಟಕ್ಕೆ ಸಿದ್ಧರಾಗೋಣ” ಎಂದರು.
ಬಂಧನಕ್ಕೆ ತೀವ್ರ ಖಂಡನೆ
ಒಳ ಮೀಸಲಾತಿ ಹೋರಾಟಗಾರರನ್ನು ಬಂಧಿಸಿದ ಹೇಡಿ ಸರ್ಕಾರ, ಪೋಲೀಸರ ಮೂಲಕ ದಲಿತರ ರಕ್ತ ಹರಿಸಿದ ಬೊಮ್ಮಾಯಿ ಸರ್ಕಾರ ಎಂದು ಹಲವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ರಕ್ತವನ್ನು ಚೆಲ್ಲುತ್ತೇವೆ, ಒಳಮೀಸಲಾತಿ ಪಡೆಯುತ್ತೇವೆ: ಬೆಂಗಳೂರಿನಲ್ಲಿ ಭೀಮಸೈನಿಕರ ಘರ್ಜನೆ
ನೀವು ಮೊದಲು ವೋಟ್ ಕೊಟ್ಟಿದ್ದೀರಲ್ಲ ಬಿಜೆಪಿಗೆ ಅದಕ್ಕೆ ಹೀಗೆ ಆಗಿದೆ ಬಿಜೆಪಿ ಹಣೆಬರ ಗೊತ್ತಿದ್ದು ನೀವು ದಲಿತರಾಗಿ ಬಿಜೆಪಿಗೆ ವೋಟು ಕೊಡ್ತೀರಲ್ಲ …..ದಲಿತ ವಿರೋಧಿ ಸರಕಾರ ಅಲ್ವಾ ನನ್ನ ಬಂಧುಗಳೇ …. ಕಾಂಗ್ರೆಸ್ ಸರಕಾರ ಇರುವಾಗ ಶಿಸ್ತು ಇತ್ತು….ಸರಕಾರದಲ್ಲಿ ಬರೀ ಕೋಮುಗಲಭೆ ಹಗರಣ ರೌಡಿಸಂ ಬಿಟ್ರೆ ಇನ್ನೇನಿದೆ ಹೇಳಿ ಅಭಿವೃದ್ಧಿಯನ್ನು ಕಂಡಿದ್ದೀರಾ …..ಮುಂದಕ್ಕೆ ಆರಿಸಬೇಡಿ ಇಂತಹ ಸರಕಾರವನ್ನು ದಲಿತರು …..ಇದು ಶ್ರೀಮಂತರ ಸರಕಾರ