Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

- Advertisement -
- Advertisement -

“ಪ್ರಿನ್ಸ್ ಮೂಯಿಶ್ಕಿನ್? ಲೆಫ್ ನಿಕೊಲಾವಿಚ್ ಓಹೊ! ಅದು ದಿಟವೋ ಇಲ್ಲವೋ ಅನ್ನುವುದು ನನಗಿನ್ನೂ ತಿಳಿದಿಲ್ಲ. ಆ ರೀತಿಯ ವ್ಯಕ್ತಿಯ ಹೆಸರನ್ನು ನಾನೆಂದೂ ಕೇಳಿಯೇ ಇಲ್ಲ” ಗುಮಾಸ್ತ ಹೇಳಿದ. ಆಲೋಚನಾಪರನಾಗಿ “ಕುಟುಂಬದ ಹೆಸರಿನ ಬಗ್ಗೆ ಹೇಳ್ತಾ ಇರೋದಲ್ಲ; ಆ ಹೆಸರು ಚಾರಿತ್ರಿಕವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಕರ್ಮಜಿನ್ ತನ್ನ ಚರಿತ್ರೆಯ ಬರಹದಲ್ಲಿ ಈ ಕೌಟುಂಬಿಕ ಹೆಸರನ್ನು ನಮೂದಿಸಿರಲೇಬೇಕು. ಆದರೆ ವೈಯಕ್ತಿಕವಾಗಿ ಪ್ರಿನ್ಸ್ ಮೂಯಿಶ್ಕಿನ್ ಎಂಬ ಹೆಸರನ್ನು ಈ ನಡುವೆ ಯಾರೂ ಕೇಳಿರಲು ಸಾಧ್ಯವಿಲ್ಲ.”

“ಖಂಡಿತವಾಗಿಯೂ ಸಾಧ್ಯವಿಲ್ಲ”, ಪ್ರಿನ್ಸ್ ಉತ್ತರಿಸಿದ; “ನನ್ನೊಬ್ಬನನ್ನು ಬಿಟ್ಟು ಇನ್ನ್ಯಾರೂ ಪ್ರಿನ್ಸ್ ಮೂಯಿಶ್ಕಿನ್‌ಗಳಿಲ್ಲ. ನನ್ನ ನಂಬಿಕೆಯ ಪ್ರಕಾರ ನಾನೇ ಆ ತಲೆಮಾರಿನ ಕೊನೆಯವನು ಮತ್ತು ಉಳಿದಿರುವ ಒಬ್ಬನೇ ಒಬ್ಬ. ನನ್ನ ಪೂರ್ವಜರ ಬಗ್ಗೆ ಹೇಳಬೇಕೆಂದರೆ, ಅವರೆಲ್ಲರೂ ಕೂಡ ಬಡವರಾಗಿದ್ದರು; ನನ್ನ ತಂದೆ ಸೈನ್ಯದಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿದ್ದ. ಆದರೂ, ಎಪಾಂಚಿನ್‌ನ ಹೆಂಡತಿ ಈ ಮೂಯಿಶ್ಕಿನ್ ಕುಟುಂಬದ ಒಳಗಡೆಗೆ ಹೇಗೆ ಬಂದಳು ಅನ್ನುವುದು ನನಗೂ ತಿಳಿಯದ ವಿಷಯ, ಆದರೆ ಅವಳು ಪ್ರಿನ್ಸೆಸ್ ಮೂಯಿಶ್ಕಿನ್ ವಂಶದಿಂದ ಬಂದವಳು, ಅವಳೂ ಕೂಡ ಆ ತಲೆಮಾರಿನ ಕೊನೆಯ ಕುಡಿ.”

“ಹೆ-ಹೆ-ಹೆ! ತಲೆಮಾರಿನ ಕೊನೆಯ ಕುಡಿ! ಹೆ-ಹೆ! ಇದನ್ನು ಎಷ್ಟು ತಮಾಷೆಯಾಗಿ ಹೇಳ್ತ್ಯಾ” ಗುಮಾಸ್ತ ನಕ್ಕ.

ಕಪ್ಪು ಕೂದಲಿನ ಮನುಷ್ಯ ಕೂಡ ಮುಗುಳ್ನಕ್ಕ. ತಾನು ತಮಾಷೆ ಮಾಡಿದೆನಾ, ಅದೂ ತೀರಾ ತೆಳು ಹಾಸ್ಯದ್ದು ಎಂದು ತಿಳಿಯದೆ ಮೂಯಿಶ್ಕಿನ್ ಆಶ್ಚರ್ಯಚಕಿತನಾದ.

“ನಿಜವಾಗಲೂ, ಇದನ್ನ ನಾನು ಹೆಚ್ಚು ಯೋಚಿಸದೆ ಹೇಳಿದ್ದೇನೆ” ಎಂದು ಅಚ್ಚರಿಯಿಂದಲೇ ಕೊನೆಗೆ ವಿವರಿಸಿದ.

“ಖಚಿತವಾಗಿ, ಖಚಿತವಾಗಿರಲು ನೀನು ಹೇಳಿದೆ” ಗುಮಾಸ್ತ ಆಹ್ಲಾದದ ನಗೆಬೀರಿ ಒಪ್ಪಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

“ಮತ್ತು ನೀನು ಅಲ್ಲಿನ ಪ್ರೊಫೆಸರ್ ಬಳಿ ವಿಜ್ಞಾನವನ್ನ ಮತ್ತು ಮಿಕ್ಕೆಲ್ಲವನ್ನೂ ಓದತ್ತಾ ಕಲಿತೆಯಾ?” ಕರೀ ಕೂದಲಿನ ಪ್ರಯಾಣಿಕ ಕೇಳಿದ.

“ಹೌದು ನಾನು ಸ್ವಲ್ಪ ಮಾತ್ರ ಕಲಿತೆ….ಆದರೆ”

“ನಾನು ಆದರೂ ಏನನ್ನೂ ಅಭ್ಯಯಿಸಲಿಲ್ಲ”

“ಒಟ್ಟಿನಲ್ಲಿ, ನಾನು ತುಂಬಾ ಕಮ್ಮಿ ಕಲಿತೆ, ಅಷ್ಟೆ!” ಪ್ರಿನ್ಸ್ ತಪ್ಪಿತಸ್ಥನಂತೆ ಹೇಳಿದ. “ನನ್ನ ಕಾಯಿಲೆಯ ಕಾರಣದಿಂದ ನನಗೆ ಜಾಸ್ತಿ ಕಲಿಸಲು ಅವರಿಗೆ ಆಗಲಿಲ್ಲ”.

“ನಿನಗೆ ರೊಗೊಜಿನ್ಸ್‌ಗಳು ಗೊತ್ತಾ?” ಅವನನ್ನು ಕಪ್ಪು ಕೂದಲಿನವ ಕೇಳಿದ.

“ಇಲ್ಲ ನನಗೆ ಅವರ್‍ಯಾರು ಗೊತ್ತೇ ಇಲ್ಲ! ರಷ್ಯಾದಲ್ಲಿ ನನಗೆ ಅತಿ ಕಡಿಮೆ ಜನರ ಪರಿಚಯವಿದೆ. ಯಾಕೆ, ಅದು ನಿನ್ನ ಹೆಸರಾ?”

“ಹೌದು, ನಾನು ರೊಗೊಜಿನ್, ಪಾರ್ಫೆನ್ ರೊಗೊಜಿನ್”.

“ಪಾರ್ಫೆನ್ ರೊಗೊಜಿನ್, ನಿಜವಾಗಲೂ, ಅಂದರೆ ನೀನು ಬಹುಶಃ ಅದೇ ರೊಗೊಜಿನ್‌ಗಳ ವಂಶಕ್ಕೆ ಸೇರಿದವನ” ಗುಮಾಸ್ತ ಶುರುಮಾಡಿದ, ಮತ್ತು ಅವನ ಧ್ವನಿಯಲ್ಲಿ ಈಗ ಹೆಚ್ಚಿದ ಗೌರವವಿತ್ತು.

“ಹೌದು….ಅವರುಗಳೇ” ರೊಗೊಜಿನ್ ಅಸಹನೆಯಿಂದ ಮತ್ತು ಅತ್ಯಲ್ಪವಾದ ಸೌಜನ್ಯತೆಯಿಂದ ಮಧ್ಯೆ ಬಾಯಿಹಾಕಿದ. ಅವನು ಒಮ್ಮೆಯೂ ಮುಖದಲ್ಲೆಲ್ಲಾ ಮಚ್ಚೆ ಇರುವ ಆ ಪ್ರಯಾಣಿಕನ ಕಡೆಗೆ ಗಮನ ಹರಿಸಿ ಮಾತಾಡಿರಲಿಲ್ಲ; ತಾನು ಮಾತನಾಡಿದ್ದೆಲ್ಲಾ ಪ್ರಿನ್ಸ್ ಜೊತೆಗೆ ಮಾತ್ರ ಎನ್ನುವಂತೆ ನೇರವಾಗಿ ಸಂಬೋಧಿಸುತ್ತಿದ್ದ.

“ಆದು ಹೇಗೆ ಸಾಧ್ಯ?” ಅಚ್ಚರಿಯಿಂದ ಕಣ್ಣುಗುಡ್ಡೆ ತಲೆಯಿಂದ ಹೊರಬರುತ್ತಿದೆಯೇನೋ ಎಂಬಂತೆ ಗುಮಾಸ್ತ ಕೇಳಿದ. ಅವನ ಮುಖದಲ್ಲಿ ಅತ್ಯಂತ ಭಕ್ತಿ ಮತ್ತು ದಾಸ್ಯದ ಭಾವ ಮೂಡುತ್ತಿತ್ತು. “ಇಲ್ಲ ಅಂದರೆ.. ಏನು, ಅದೇ ಸೆಮ್ಯೋನ್ ರೊಗೊಜಿನ್‌ನ ಮಗನಾ? ಯಾರು ಒಂದು ತಿಂಗಳ ಹಿಂದೆ ಅಸು ನೀಗಿ ಎರಡೂವರೆ ಲಕ್ಷ ರೂಬಲ್‌ನಷ್ಟು ಹಣವನ್ನ ಬಿಟ್ಟು ಹೋದನೆಲ್ಲಾ ಅವನು?”

“ನಿನಗೆ ಹೇಗೆ ಗೊತ್ತು ಅವನು ಎರಡೂವರೆ ಲಕ್ಷ ರೂಬಲ್ ಅನ್ನು ಬಿಟ್ಟುಹೋಗಿದ್ದಾನೆ ಎಂದು?” ರೊಗೊಜಿನ್ ಅವನ ಮುಖವನ್ನು ನೋಡುವುದಕ್ಕೂ ಹೋಗದೆ ತಿರಸ್ಕಾರದಿಂದ ಕೇಳಿದ.

“ನೋಡವನನ್ನ” ಮೂಯಿಶ್ಕಿನ್‌ಗೆ ಕಣ್ಣುಕೊಡೆದು ಹೇಳಿದ. “ಒಬ್ಬರ ಬಗ್ಗೆ ಈ ರೀತಿ ಮಾತನಾಡಿ ಇವರಿಗೆ ಏನು ಸಿಕ್ಕತ್ತೋ! ಆದರೆ, ನನ್ನ ತಂದೆ ಒಂದು ತಿಂಗಳ ಹಿಂದೆ ಸತ್ತು ಹೋದ ಅನ್ನುವುದು ನಿಜ. ಈಗ ನಾನು ಪಿಸ್ಕಾಫ್ ನಗರದಿಂದ ವಾಪಸ್ಸಾಗುತ್ತಿದ್ದೇನೆ, ಅದೂ ಒಂದು ತಿಂಗಳ ನಂತರ, ಕಾಲಿಗೆ ಶೂ ಹಾಕಿಕೊಳ್ಳಲೂ ಯೋಗ್ಯತೆ ಇಲ್ಲದೆ. ಅವರುಗಳು ನನ್ನನ್ನು ನಾಯಿಯ ರೀತಿ ನಡೆಸಿಕೊಂಡರು! ಪಿಸ್ಕಾಫ್‌ನಲ್ಲಿ ಇದ್ದ ಇಡೀ ಸಮಯ ನಾನು ಜ್ವರದಿಂದ ನರಳುತ್ತಿದ್ದೆ. ನನಗೆ ನನ್ನ ತಾಯಿಯಿಂದ ಆಗಲೀ ಅಥವಾ ಗೊಂದಲಕ್ಕೊಳಗಾಗಿದ್ದ ನನ್ನ ಅಣ್ಣನಿಂದ ಆಗಲೀ ಒಂದು ಬಿಡಿಗಾಸೂ ಬಂದಿಲ್ಲ. ಒಂದು ಮಾತು ಕೂಡ ಇಲ್ಲ!”

“ಈಗ ನಿನಗೆ ಕಡೇ ಪಕ್ಷ ಅಂದರೆ ಒಂದು ಲಕ್ಷ ರೂಬಲ್ ಸಿಗುತ್ತೆ ಅಂತ ಬರ್ತಾ ಇದ್ಯಾ. ಓ ದೇವರೇ” ಗುಮಾಸ್ತ ತನ್ನ ಕೈಗಳನ್ನು ಉಜ್ಜಿಕೊಳ್ಳುತ್ತಾ ಹೇಳಿದ.

“ನನಗೆ ಈ ರೀತಿ ಹೇಳುವುದಕ್ಕೆ ಆತನಿಗೇನಾಗಿದೆ?” ರೊಗೊಜಿನ್ ಆತನತ್ತ ಕೋಪ ಮತ್ತು ಕಿರಿಕಿರಿಯಿಂದ ತಲೆಯಲ್ಲಾಡಿಸುತ್ತಾ ಹೇಳಿದ. “ಯಾಕೆ, ನೀನು ಬೇಕಾದರೆ ತಲೆಕೆಳಗೆ ನಿಂತು ಕುಣಿಯಬಹುದು, ಆದರೆ ನಾನು ಅದರಲ್ಲಿ ನಿನಗೆ ಒಂದು ಬಿಡಿಗಾಸೂ ಕೊಡುವುದಿಲ್ಲ”.

“ಕುಣಿತೀನಿ, ಕುಣೀತೀನಿ”.

“ಆಯ್ತು! ನೀನು ಒಂದು ವಾರ ಕುಣಿದರೂ, ನಾನೇನೂ ನಿನಗೆ ಕೊಡುವುದಿಲ್ಲ”.

“ಸರಿ, ಕೊಡಬೇಡ! ನೀನೇಕೆ ಕೊಡಬೇಕು? ಕೊಡಬೇಡ. ಆದರೆ ನಾನು ಕುಣಿತೀನಿ. ನಾನು ನನ್ನ ಹೆಂಡತಿ ಮತ್ತು ಚಿಕ್ಕ ಮಕ್ಕಳನ್ನು ಬಿಟ್ಟುಬಂದು ನಿನ್ನ ಮುಂದೆ ಕುಣೀತೀನಿ. ಆಮೇಲೆ ತೆವಳ್ತೀನಿ”.

“ನೇಣು ಹಾಕಬೇಕು” ಕಪ್ಪು ಕೂದಲಿನವ ಉಗಿದ. ನಂತರ ಪ್ರಿನ್ಸ್ ಕಡೆಗೆ ತಿರುಗಿ, “ಐದು ವಾರಗಳಾಯಿತು, ನಾನೂ ನಿನ್ನ ರೀತಿಯಲ್ಲೇ ಇದ್ದೇನೆ. ಏನೂ ಇಲ್ಲದೆ ಇದ್ದೇನ. ಒಂದು ಗಂಟು ಮತ್ತು ನಾನು ಧರಿಸಿರುವ ಬಟ್ಟೆಗಳು ಮಾತ್ರ ನನ್ನಲ್ಲಿರುವುದು ಈಗ. ನಾನು ನನ್ನ ತಂದೆಯಿಂದ ಓಡಿಹೋಗಿ ನನ್ನ ದೊಡ್ಡಮ್ಮಳ ಜೊತೆ ಪಿಸ್ಕಾಫ್‌ನಲ್ಲಿದ್ದೆ, ಅಲ್ಲಿಯೇ ನನಗೆ ಜ್ವರ ಅಂಟಿಕೊಂಡಿದ್ದು. ನಾನು ಅಲ್ಲಿ ದೂರದಲ್ಲಿದ್ದಾಗ ಅವನು ಸತ್ತುಹೋಗಿದ್ದು. ನನ್ನ ಗತಿಸಿದ ತಂದೆಯ ನೆನಪುಗಳ ಬಗ್ಗೆ ಗೌರವದಿಂದಲೇ ನಾನು ಹೇಳುತ್ತಿದ್ದೇನೆ, ಅವನು ನನ್ನನ್ನು ಸಾಯಿಸಿಬಿಡುವ ಅಸಾಮಾನ್ಯ ಹಂತಕ್ಕೆ ಹೋಗಿದ್ದ. ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ ಪ್ರಿನ್ಸ್, ನಾನಾಗ ತಪ್ಪಿಸಿಕೊಂಡು ಓಡಿಹೋಗದೇ ಇದ್ದಿದ್ದರೆ ನಾಯಿಯನ್ನ ಕೊಲ್ಲುವ ರೀತಿ ಅವನು ನನ್ನನ್ನು ಖಂಡಿತವಾಗಿ ಕೊಂದುಬಿಡುತ್ತಿದ್ದ”.

“ನೀನು ಅವನನ್ನು ಕೋಪೋದ್ರಿಕ್ತಗೊಳಿಸಿರಬಹುದೇ?” ಲಕ್ಷಾಧೀಶ್ವರನ ಕಡೆಗೆ ಕುತೂಹಲದಿಂದ ನೋಡುತ್ತಾ ಪ್ರಿನ್ಸ್ ಕೇಳಿದ. ಅವನೀಗ ಲಕ್ಷಾಂತರ ರೂಬಲ್‌ಗಳಿಗೆ ವಾರಸುದಾರ ಅನ್ನುವುದು ಗಮನಾರ್ಹವಾಗಿದ್ದರೂ ಕೂಡ, ಅದೆಲ್ಲದಕ್ಕಿಂತ ಮತ್ತೊಂದು ವಿಷಯ ಪ್ರಿನ್ಸ್‌ನನ್ನು ಆಶ್ಚರ್ಯಗೊಳಿಸಿತ್ತು ಮತ್ತು ಅವನ ಬಗ್ಗೆ ಆಸಕ್ತಿಯನ್ನ ಮೂಡಿಸಿತು. ರೊಗೊಜಿನ್ ಕೂಡ ಈ ಸಂಭಾಷಣೆಯಲ್ಲಿ ಅಸಾಮಾನ್ಯವಾದ ತತ್ಪರತೆಯಿಂದ ಭಾಗವಹಿಸಿದ್ದ; ಈ ಮಾತುಕತೆ ಪ್ರಮಾಣಿಕತೆಗಿಂತಲೂ ಪೂರ್ವಾಗ್ರಹದಿಂದ ಕೂಡಿತ್ತು; ಅವನಲ್ಲಿನ ತಳಮಳವನ್ನ ಹೊರಹಾಕುವ ಸುರಕ್ಷ ಕವಾಟದ ರೀತಿಯಲ್ಲಿ, ಉತ್ಸಾಹದಿಂದ ಕೂಡಿ ಮಾನಸಿಕತೆಗಿಂತಲೂ ಭೌತಿಕವಾಗಿತ್ತು. ಸಂಪೂರ್ಣವಾಗಿ ಜ್ವರ ಬಿಟ್ಟಿದ್ದಂತೆ ಕಾಣುತ್ತಿರಲಿಲ್ಲ.

ಅವನ ಪಕ್ಕದಲ್ಲಿದ್ದ ಕೆಂಪು ಮೂಗಿನ ಗುಮಾಸ್ತ, ರೊಗೊಜಿನ್‌ನ ಗುರುತಿನ ಬಗೆಗಿನ ಮಾಹಿತಿ ಮತ್ತು ಅವನು ನುಡಿದ ಪದಗಳಲ್ಲಿ, ಜೇನಿನ ಸವಿಯನ್ನು ಸವಿಯುವಂತೆ, ಉಸಿರು ಬಿಗಿಹಿಡಿದು ಕೇಳಿಸಿಕೊಳ್ಳುತ್ತಿದ್ದ; ಪ್ರತಿಯೊಂದು ಮಾತೂ ಬೆಲೆಬಾಳುವ ಮುತ್ತು ಎನ್ನುವ ರೀತಿಯಲ್ಲಿ.

ಇದನ್ನೂ ಓದಿ: ದೊಸ್ತೊಯೆವ್‌ಸ್ಕಿ 200; ದ್ವಂದ್ವಗಳ ಜಗತ್ತಿನ ಮಾನವೀಯ ಲೇಖಕ

“ಓ ಹೌದು; ನಾನು ಅವನನ್ನು ಕೋಪೋದ್ರಿಕ್ತನನ್ನಾಗಿ ಮಾಡಿದೆ, ನಿಜವಾಗಲೂ ಅವನು ಕೆಂಡಾಮಂಡಲವಾಗುವಂತೆ ಮಾಡಿದೆ”, ರೊಗೊಜಿನ್ ಉತ್ತರಿಸಿದ. “ಆದರೆ ನಾನು ಹಾಗೆ ಮಾಡಲು ಕಾರಣ ನನ್ನ ಅಣ್ಣ. ಖಂಡಿತವಾಗಿಯೂ ನನ್ನ ತಾಯಿ ಅಸಹಾಯಕಳು. ಅವಳಿಗಾಗಲೇ ವಯಸ್ಸಾಗಿಬಿಟ್ಟಿದೆ. ಮುದುಕಿಯರ ಜೊತೆಗೆ ಕೂತು ಸಂತರ ಜೀವನದ ಬಗ್ಗೆ ಓದುತ್ತಾ ಸಮಯ ಕಳೆಯುತ್ತಾಳೆ. ನನ್ನ ಅಣ್ಣ ಸೆಮ್ಯೋನ್ ಏನನ್ನೇ ಹೇಳಿದರೂ ಅದು ಅವಳಿಗೆ ಕಾನೂನಿಗೆ ಸರಿಸಮಾನ! ಆದರೆ ಅವನು ನನಗೆ ತಂದೆಯ ಸಾವಿನ ಬಗ್ಗೆ ಯಾಕೆ ತಿಳಿಸಲಿಲ್ಲ? ಸರಿ, ಅವರು ಹೇಳಿರುವುದು ನಿಜ. ಆ ಸಮಯದಲ್ಲಿ ನಾನು ಪ್ರಜ್ಞೆ ತಪ್ಪಿ ಬಿದ್ದಿದೆ. ಒಂದು ಟೆಲಿಗ್ರಾಮ್ ಕಳುಹಿಸಿದರು ಅಂತ ಅವರು ಹೇಳುತ್ತಾರೆ. ಅದೂ ನಮ್ಮ ದೊಡ್ಡಮ್ಮನಿಗೆ. ಅವರು ಮೂವತ್ತು ವರ್ಷಗಳಿಂದ ವಿಧವೆ ಹಾಗೂ ಬೆಳಗಿನಿಂದ ರಾತ್ರಿಯವರೆಗೆ ಹುಚ್ಚು ಯಾತ್ರಿಕರ ಜೊತೆಗೆ ಅವರ ಸಮಯ ಕಳೆಯುತ್ತಾರೆ. ಬರೀ ಟೆಲಿಗ್ರಾಮ್ ಕಳುಹಿಸಿದರೆ ಏನು ಪ್ರಯೋಜನ? ನನ್ನ ದೊಡ್ಡಮ್ಮಳನ್ನು ಆ ಟೆಲಿಗ್ರಾಮ್ ಭಯಪಡಿಸಿತು; ಅದನ್ನ ತೆರೆದು ಓದದೇ ಹಾಗೆಯೇ ಅದನ್ನು ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಹೋದಳು. ಆ ದಿನ ಅದು ಅಲ್ಲೇ ಬಿದ್ದಿತ್ತು! ಈ ಸಂದರ್ಭದಲ್ಲಿ ವ್ಯಾಸಿಲಿ ವ್ಯಾಸಿಲಿಚ್ ಕೊನ್ಯೋಫ್ ನನಗೆ ಸಹಾಯ ಮಾಡಿದ್ದು. ಅವನೇ ನನಗೆ ಕಾಗದದ ಮೂಲಕ ವಿವರಗಳನ್ನೆಲ್ಲಾ ಬರೆದು ತಿಳಿಸಿದ. ಅವನೇ ಹೇಳಿದ್ದು, ನನ್ನ ಸೋದರ ನನ್ನ ತಂದೆಯ ಶವಪೆಟ್ಟಿಗೆಗೆ ಹಾಕಿದ್ದ ಚಿನ್ನದ ಕುಚ್ಚುಗಳನ್ನೂ ಕತ್ತರಿಸಿಕೊಂಡನೆಂದು; ’ಕಾರಣ ಅದು ಬೆಲೆಬಾಳುವ ವಸ್ತುವಾದದ್ದರಿಂದ!’ ಇದೊಂದು ಅಪವಿತ್ರವಾದ ಕೆಲಸ. ಆ ಅಪವಿತ್ರ ಕೆಲಸಕ್ಕಾಗಿಯೇ ಅವನನ್ನು ಸೈಬೀರಿಯಾಗೆ ಕಳುಹಿಸಬಹುದು ನಾನು ಮನಸ್ಸು ಮಾಡಿದರೆ. ಇಲ್ಲಿ ನೋಡು ನೀನು ಬರೀ ಬೆದರುಗೊಂಬೆಯೇ!” ಅವನು ತನ್ನ ಮಾತಿಗೆ ಸೇರಿಸಿದ. ಅವನ ಪಕ್ಕದಲ್ಲಿ ಕುಳಿತಿದ್ದ ಗುಮಾಸ್ತನಿಗೆ ಸಂಬೋಧಿಸುತ್ತಾ, “ಕಾನೂನಿನ ಪ್ರಕಾರ ಅದೊಂದ ಅಪವಿತ್ರವಾದ ಕೆಲಸವೊ ಅಲ್ಲವೋ?” ಎಂದ.

“ಖಂಡಿತವಾಗಿಯೂ ಹೌದು, ಅದೊಂದು ಅಪವಿತ್ರವಾದ ಕೆಲಸ” ಅವನು ಹೇಳಿದ.

“ಮತ್ತೆ ಅದಕ್ಕೆ ಶಿಕ್ಷೆ ಸೈಬೀರಿಯಾಗೆ ಕಳುಹಿಸುವುದು, ಹೌದೊ ಅಲ್ಲವೊ?”

“ಅನುಮಾನವೇ ಇಲ್ಲ; ಖಂಡಿತವಾಗಿಯೂ ಸೈಬೀರಿಯಾ!”

“ನಾನಿನ್ನೂ ಅನಾರೋಗ್ಯದಿಂದ ಇದ್ದೇನೆ ಎಂದು ಅವರಂದುಕೊಂಡಿದ್ದಾರೆ” ರೊಗೊಜಿನ್ ಪ್ರಿನ್ಸ್‌ಗೆ ಹೇಳುವುದನ್ನ ಮುಂದುವರಿಸಿದ. “ಆದರೆ ನಾನು ಯಾರಿಗೂ ಒಂದು ಮಾತು ಹೇಳದೆ, ಸದ್ದಿಲ್ಲದೇ ಜಾರಿಕೊಂಡು ಈ ರೈಲು ಹತ್ತಿಬಿಟ್ಟೆ. ಜ್ವರದಲ್ಲಿಯೇ ನಮ್ಮ ಮನೆ ಕಡೆಗೆ ಹೊರಟಿದ್ದೇನೆ. ಆಹಾ ಸೋದರ ಸೆಮ್ಯೋನ್ ಸೆಮ್ಯೋನೋವಿಚ್, ನೀನೀಗ ನನಗೆ ಬಾಗಿಲು ತೆರೆಯುವೆ. ಅವನು ನನ್ನ ಬಗ್ಗೆ ಕಥೆಗಳನ್ನ ಕಟ್ಟಿ ನನ್ನ ತಂದೆ ತಿರುಗಿ ಬೀಳುವಂತೆ ಮಾಡಿದ ಅನ್ನುವುದು ನನಗೆ ಗೊತ್ತು. ಅದು ನನಗೆ ಚೆನ್ನಾಗಿ ಗೊತ್ತು. ಆದರೆ ಇದೂ ನಿಜ. ಖಂಡಿತವಾಗಿ ನಸ್ಟಾಸಿಯಾ ಪಿಲಿಪೊವ್ನ ಬಗ್ಗೆ ನನ್ನ ತಂದೆಯನ್ನ ಕೆರಳಿಸಿದ್ದೆ. ಅದೆಲ್ಲಾ ನನ್ನದೇ ಕೆಲಸ. ಇದರಲ್ಲಿ ನನ್ನದೇ ತಪ್ಪಿದೆ”.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...