Homeಅಂಕಣಗಳುಜನಸಾಮಾನ್ಯರ ಬರ್ಬರ ದಮನಕ್ಕೆ ನಿಂತ ಇರಾನ್ ಪ್ರಭುತ್ವ

ಜನಸಾಮಾನ್ಯರ ಬರ್ಬರ ದಮನಕ್ಕೆ ನಿಂತ ಇರಾನ್ ಪ್ರಭುತ್ವ

- Advertisement -
- Advertisement -

ಒಂದು ಧಾರ್ಮಿಕ ಪ್ರಭುತ್ವ ಅಧಿಕಾರ ನಡೆಸಿದರೆ ಏನೆಲ್ಲ ಅನಾಹುತಗಳಾಗಬಹುದು ಎನ್ನುವುದಕ್ಕೆ ಇರಾನ್ ದೇಶ ಜ್ವಲಂತ ಉದಾಹರಣೆಯಾಗಿ ನಮ್ಮ ಕಣ್ಮುಂದೆ ಇದೆ. ಸೆಪ್ಟಂಬರ್ 13ರಂದು ಇರಾನ್ ದೇಶದ ವಸ್ತ್ರಸಂಹಿತೆಯನ್ನು ಧಿಕ್ಕರಿಸಿ, ತಲೆಯ ಮೇಲೆ ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಂಡರು ಎಂಬ ಕಾರಣಕ್ಕೆ 22 ವರ್ಷದ ಮಾಶ ಅಮಿನಿ ಎಂಬ ಯುವತಿಯನ್ನು ಇರಾನ್‌ನ ಇಸ್ಲಾಮಿಕ್ ರಿಪಬ್ಲಿಕ್ ಸರ್ಕಾರದ ’ಮೊರಾಲಿಟಿ ಪೊಲೀಸರು’ (ಗಸ್ತ್-ಇ-ಇರ್ಶಾದ್ ಎಂಬ ನೈತಿಕ ಪೊಲೀಸ್ ಪಡೆ) ಬಂಧಿಸಿದ್ದರು. ಮಾಶ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಮೇಲೆ ಇರಾನ್ ದೇಶದಾದ್ಯಂತ ಸಾವಿರಾರು ಪ್ರತಿಭಟನೆಗಳು ಸ್ಫೋಟಗೊಂಡಿದ್ದವು. ಸಾರ್ವಜನಿಕವಾಗಿ ತಲೆಗೂದಲನ್ನು ಪ್ರದರ್ಶಿಸುವ, ಕತ್ತರಿಸಿಕೊಳ್ಳುವ ಸಾಂಕೇತಿಕ ಪ್ರತಿಭಟನೆಗಳ ಮೂಲಕ ಮಹಿಳೆಯರು ಹಲವು ವರ್ಷಗಳ ಧಾರ್ಮಿಕ ದಮನಕ್ಕೆ ತಮ್ಮ ಪ್ರತಿರೋಧವನ್ನು ಒಡ್ಡಿದ್ದರು. ಆದರೆ ಇರಾನ್‌ನ ಧಾರ್ಮಿಕ ಪ್ರಭುತ್ವ ತನ್ನ ಜನರ ವಿರುದ್ಧವೇ ಹಿಂಸಾತ್ಮಕವಾಗಿ ತಿರುಗಿಬಿದ್ದಿತು. ಸಾವಿರಾರು ಜನರನ್ನು ಬಂಧಿಸಿ ಕಿರುಕುಳ ಕೊಟ್ಟಿತು. ಖಾಸಗಿ ವಕೀಲರನ್ನು ನೇಮಿಸಿಕೊಂಡು ಡಿಫೆಂಡ್ ಮಾಡಿಕೊಳ್ಳುವ ಅವಕಾಶವನ್ನೂ ಕೊಡದೆ, ನಾಮಕಾವಸ್ಥೆಯ ತ್ವರಿತ ವಿಚಾರಣೆ ನಡೆಸಿ ಗರಿಷ್ಠ ಶಿಕ್ಷೆಯನ್ನು ನೀಡಲಾರಂಭಿಸಿತು. ಪ್ರಭುತ್ವದ ಪಾಪದ ತುತ್ತತುದಿಯೇನೋ ಎಂಬಂತೆ ಈಗ ಇಬ್ಬರು ಯುವಕರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ ಅದರ ಫೋಟೋಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಡಿಸೆಂಬರ್ 12 ರಂದು, ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಕೊಲೆ ಮಾಡಿದ ಆರೋಪ ಹೊರಿಸಿ 23 ವರ್ಷದ ಮಜಿದೇರ್ಜ ರಹ್ನವಾರ್ಡ್ ಎಂಬುವವರನ್ನು ಕ್ರೇನಿಗೆ ನೇಣುಬಿಗಿದು ಸಾರ್ವಜನಿಕವಾಗಿ ಮರಣದಂಡನೆಗೆ ಒಳಪಡಿಸಿದೆ. ಈ ಮರಣದಂಡನೆಗೆ ಜಗತ್ತಿನಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನಿನ ಶೋಚನೀಯ ಪರಿಸ್ಥಿತಿಯನ್ನು ಕಂಡು ಮರುಗಿದ್ದಾರೆ.

ಯಾವುದೇ ಶಿಕ್ಷೆ ಅಪರಾಧಿಯ ಪರಿವರ್ತನೆಗೆ ಕಾರಣವಾಗಿ ಅದು ಮುಂದೆ ಉತ್ತಮ ಸಮಾಜಕ್ಕೆ ದಾರಿಯಾಗಬೇಕೆಂಬ ತಿಳಿವಳಿಕೆಯಲ್ಲಿ ಜಗತ್ತಿನಾದ್ಯಂತ ಮರಣದಂಡನೆಯನ್ನು ಶಿಕ್ಷೆಯ ಪಟ್ಟಿಯಿಂದ ತೆಗೆದುಹಾಕುವ ಸುಧಾರಣೆಗಳಾಗಿವೆ ಮತ್ತು ಇನ್ನೂ ಹಲವೆಡೆ ಚರ್ಚೆಗಳಾಗುತ್ತಿವೆ. ಆದರೆ, 21ನೇ ಶತಮಾನದಲ್ಲಿ, ಜನರನ್ನು ಬೆದರಿಸಲೋ ಎಂಬಂತೆ ಈ ಬರ್ಬರ ಶಿಕ್ಷೆಯನ್ನು ಸಾರ್ವಜನಿಕ ಪ್ರದರ್ಶನವಾಗಿ ನೆರವೇರಿಸಿರುವುದು ಮಾನವೀಯತೆ ತಲೆತಗ್ಗಿಸಬೇಕಾದ ಸಂಗತಿ. 1976ರ ನಂತರ ಸುಮಾರು 75 ದೇಶಗಳು ಮರಣ ದಂಡನೆಯನ್ನು ರದ್ದುಪಡಿಸುವ ನಿರ್ಧಾರವನ್ನು ಕೈಗೊಂಡಿವೆ. ಅದರಲ್ಲಿ ಕೆಲವು ದೇಶಗಳು ಎಲ್ಲಾ ಅಪರಾಧಗಳಿಗೂ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿದ್ದರೆ, ಕೆಲವು ದೇಶಗಳು ಸಾಮಾನ್ಯ ಅಪರಾಧಗಳಿಗೆ ಮಾತ್ರ ರದ್ದುಗೊಳಿಸಿವೆ. ಆದರೆ ಭಾರತದಲ್ಲಿ ಕೂಡ ಇನ್ನೂ ಮರಣದಂಡನೆ ಅಬಾಲಿಷ್ ಮಾಡಿಲ್ಲ. ಇರಾನ್ ಮತ್ತು ಚೀನಾ ದೇಶಗಳು ಮರಣದಂಡನೆಯನ್ನು ವಿಧಿಸುವುದರಲ್ಲಿ ಬರ್ಬರತೆಯ ಪೈಪೋಟಿ ಮೆರೆಯುತ್ತವೆ ಎನ್ನುತ್ತವೆ ಹಲವು ಅಧ್ಯಯನಗಳು. ಆದರೆ ಮರಣದಂಡನೆ ನಾಗರಿಕ ಸಮಾಜದಲ್ಲಿ ಇರುವುದಕ್ಕೆ ಅರ್ಹವಲ್ಲ ಎಂಬ ಚಿಂತನೆ ಹಲವು ಶತಮಾನಗಳಷ್ಟು ಹಿಂದಿನದು.

ಮಾಶ ಅಮಿನಿ

ಕೆಲವು ವಾರಗಳಿಂದ ನ್ಯಾಯಪಥ ಪತ್ರಿಕೆಯಲ್ಲಿ ರಷ್ಯಾದ ಮಹಾನ್ ಸಾಹಿತಿ ಫ್ಯೋದೋರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಕಾದಂಬರಿಯ ಅನುವಾದವನ್ನು ಸರಣಿ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ. ’ದ ಈಡಿಯಟ್’ ಮೊದಲು ಪ್ರಕಟಗೊಂಡಿದ್ದು 1869ರಲ್ಲಿ. ಅದೇ ಕಾದಂಬರಿಯಲ್ಲಿ ಪ್ರಿನ್ಸ್ ಮೂಯಿಶ್ಕಿನ್ ಮರಣದಂಡನೆ ಬಗ್ಗೆ ಹೇಳುವ ಮಾತುಗಳು ಕಳೆದ ವಾರದ ಸಂಚಿಕೆಯಲ್ಲಿಯೇ ಪ್ರಕಟವಾಗಿತ್ತು. ಇಲ್ಲಿ ಆ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವುದಾದರೆ, “ನನ್ನ ನಂಬಿಕೆಯ ಪ್ರಕಾರ ಕೊಲೆ ಮಾಡಿದವನಿಗೆ ಮರಣದಂಡನೆಯನ್ನ ವಿಧಿಸುವುದು ಅವನ ಅಪರಾಧಕ್ಕೆ ಸರಿಸಮಾನವಲ್ಲದಷ್ಟು ಘೋರವಾದ ಮತ್ತು ಅಳತೆ ಮೀರಿದ ಶಿಕ್ಷೆ. ನ್ಯಾಯಾಲಯದ ತೀರ್ಪಿನ ಕಾರಣದಿಂದ ಕೊಲ್ಲುವುದು ಒಬ್ಬ ಅಪರಾಧಿಯು ಇನ್ನೊಬ್ಬನನ್ನು ಕೊಂದಿದ್ದಕ್ಕಿಂತ ಹೆಚ್ಚು ಘೋರವಾದದ್ದು. ಒಬ್ಬ ಮನುಷ್ಯನನ್ನು ಗಾಢಾಂಧಕಾರದ ಕಾಡಿನಲ್ಲಿ ಅಥವ ಇನ್ನೆಲ್ಲಿಯಾದರೂ, ರಾತ್ರಿಯ ವೇಳೆ ದರೊಡೆಕೋರರು ದಾಳಿಮಾಡಿದಾಗ ಆತ ಅನುಮಾನವಿಲ್ಲದೇ ಭರವಸೆಯಿಂದಿರುತ್ತಾನೆ ಮತ್ತು ಸಾಯುವವರೆಗೂ ಬಚಾವಾಗಬಹುದು ಅನ್ನುವ ಭರವಸೆಯಿಂದ ಇರುತ್ತಾನೆ. ಅವನ ಕತ್ತನ್ನು ಕುಯ್ದ ನಂತರವೂ ಕೂಡ, ಒಬ್ಬ ಮನುಷ್ಯ ತಪ್ಪಿಸಿಕೊಂಡು ಓಡಿ ಹೋಗಿರುವ, ಅಥವಾ ಈ ಎಲ್ಲಾ ಸಂದರ್ಭಗಳಲ್ಲಿಯೂ ಒಂದು ಮಟ್ಟದ ಭರವಸೆಯೊಂದಿಗೆ ಕ್ಷಮಾದಾನಕ್ಕಾಗಿ ಅರಸಿರುವ ಅನೇಕ ಉದಾಹರಣೆಗಳಿವೆ.

ಇದನ್ನೂ ಓದಿ: ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

ಆದರೆ ಮರಣದಂಡನೆಯ ಸಮಯದಲ್ಲಿ ಆ ಕೊನೆಯ ಭರವಸೆಯನ್ನು- ಯಾವುದು ಸಾಯುವ ಬಗೆಗಿನ ಘೋರತೆಯನ್ನ ಅಳತೆಗೆ ಸಿಗದಷ್ಟು ಕಮ್ಮಿಮಾಡುತ್ತಾ ಹೋಗುತ್ತದೊ, ಅದನ್ನ ಆಳದಿಂದ ಕಿತ್ತುಕೊಳ್ಳಲಾಗುತ್ತದೆ ಮತ್ತು ಅದನ್ನು ಖಚಿತತೆ ಬದಲಿಸಿಬಿಡುತ್ತದೆ. ಅವನಿಗಾಗಲೇ ಶಿಕ್ಷೆ ವಿಧಿಸಲಾಗಿದೆ, ಮತ್ತು ಅದರ ಜೊತೆಗೆ ಸಾವಿನಿಂದ ಬಚಾವಾಗಲು ಸಾಧ್ಯವೇ ಇಲ್ಲ ಅನ್ನುವ ಭಯಾನಕವಾದ ಖಚಿತತೆ, ನಾನು ಅದನ್ನ ಪ್ರಪಂಚದಲ್ಲೇ ಅತ್ಯಂತ ಭೀಕರವಾದ ವೇದನೆ ಎಂದು ಪರಿಗಣಿಸುತ್ತೇನೆ. ಯುದ್ಧದಲ್ಲಿ ನೀನು ಒಬ್ಬ ಸೈನಿಕನನ್ನು ಒಂದು ಫಿರಂಗಿಯ ಬಾಯಿಗೆ ಕಟ್ಟಿ ಅವನ ಮೇಲೆ ಗುಂಡು ಹಾರಿಸಬಹುದು- ಆ ಸಂದರ್ಭದಲ್ಲೂ ಅವನಿಗೊಂದು ಭರವಸೆ ಇರುತ್ತದೆ. ಆದರೆ ಅದೇ ಸೈನಿಕನ ಮುಂದೆ ಅವನ ಮರಣದಂಡನೆಯ ತೀರ್ಪನ್ನು ಓದಿದಾಗ, ಅವನು ಹುಚ್ಚನಂತಾಗುತ್ತಾನೆ ಅಥವ ಕಣ್ಣೀರಿಟ್ಟು ಗೋಳಾಡಲು ಶುರುಮಾಡುತ್ತಾನೆ. ಯಾವ ಮನುಷ್ಯನೇ ಆದರೂ ಹುಚ್ಚನಾಗದೇ ಈ ಹಿಂಸೆಯನ್ನ ಅನುಭವಿಸುತ್ತಾನೆ ಎಂದು ಹೇಳುವಷ್ಟು ಧೈರ್ಯ ಯಾರಿಗಿದೆ? ಇಲ್ಲ ಇಲ್ಲ, ಇದೊಂದು ದುರುಪಯೋಗ, ನಾಚಿಕೆಗೇಡಿನದು, ಇದು ಅನಗತ್ಯವಾದದ್ದು. ಇಂತಹದ್ದು ಅಸ್ತಿತ್ವದಲ್ಲಿ ಯಾತಕ್ಕೋಸ್ಕರ ಇರಬೇಕು? ಯಾರಿಗೆ ಮರಣ ದಂಡನೆಯನ್ನ ವಿಧಿಸಲಾಗಿತ್ತೋ, ಯಾರು ಈ ರೀತಿಯ ಮಾನಸಿಕ ವೇದನೆಯನ್ನ ಸ್ವಲ್ಪ ಕಾಲವಾದರೂ ಅನುಭವಿಸಿದ್ದರೋ, ಅಂತಹವರಲ್ಲಿ ಕೆಲವರು ಕ್ಷಮಾದಾನದಿಂದ ಉಳಿದಿರುವ ಬಗ್ಗೆ ಅನುಮಾನಗಳಿಲ್ಲ; ಆದರೆ, ಬಹುಶಃ ಅಂತಹವರು ತಾವು ಮಾನಸಿಕವಾಗಿ ಅನುಭವಿಸಿದ ಭಾವನೆಗಳ ಬಗ್ಗೆ ನಂತರದ ದಿನಗಳಲ್ಲಿ ಯೋಚಿಸಿರಲಿಕ್ಕೂ ಸಾಧ್ಯವಿದೆ. ನಮ್ಮ ಲಾರ್ಡ್ ಕ್ರಿಸ್ತ ಆ ರೀತಿಯ ವೇದನೆ ಮತ್ತು ಭಯದ ಬಗ್ಗೆ ಹೇಳಿದ್ದರು. ಇಲ್ಲ ಇಲ್ಲ! ಕೂಡದು! ಯಾವುದೇ ಮನುಷ್ಯನನ್ನು ಈ ರೀತಿಯಲ್ಲಿ ನಡೆಸಿಕೊಳ್ಳುವಹಾಗಿಲ್ಲ, ನಡೆಸಿಕೊಳ್ಳಬಾರದು!”; ಕ್ಯಾಪಿಟಲ್ ಫನಿಷ್‌ಮೆಂಟ್ ಬಗೆಗೆ ಇಂತಹದೇ ಚಿಂತನೆಗಳನ್ನು ಚಿಂತಕ-ಲೇಖಕ ಆಲ್ಬೆ ಕಮು ಕೂಡ ವ್ಯಕ್ತಪಡಿಸುತ್ತಾರೆ. ಕ್ರಿಸ್ಟೋಫ್ ಕೀಶ್ಲೊವಸ್ಕಿ ಅವರ ’ದ ಶಾರ್ಟ್’ ಫಿಲ್ಮ್ ಅಬೌಟ್ ಕಿಲ್ಲಿಂಗ್ ಸಿನಿಮಾ ಕೂಡ ಮರಣದಂಡನೆಯ ವಿರುದ್ಧ ಒಂದು ದಿಟ್ಟ ಹೇಳಿಕೆಯನ್ನು ನೀಡಿತ್ತು. ಯುರೋಪಿನ ಕೆಲವು ದೇಶಗಳಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲು ಈ ಸಿನಿಮಾ ಪ್ರಭಾವ ಬೀರಿತ್ತು ಎಂದು ಕೂಡ ಚರ್ಚಿಸಲಾಗುತ್ತದೆ. ಈ ಚರ್ಚೆಗೆ ಇನ್ನೂ ಹಲವು ಉದಾಹರಣೆಗಳಿವೆ. ಜಗತ್ತು ಇಂದು ಹೆಚ್ಚು ಮಾನವೀಯತೆಯ ಕಡೆಗೆ ತುಡಿಯಬೇಕಿರುವ ಸಂದರ್ಭದಲ್ಲಿ, ಕೆಲವೇ ದಿನಗಳ ಅಂತರದಲ್ಲಿ ಮೋಶೆನ್ ಶೇಖರಿ ಮತ್ತು ಮಜಿದೇರ್ಜ ರಹ್ನವಾರ್ಡ್ ಅವರುಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಮೂಲಕ ಇರಾನ್ ಪ್ರಭುತ್ವ ತನ್ನ ಪ್ರಜೆಗಳ ಜೊತೆಗೆ ಅನಾಗರಿಕವಾಗಿ ನಡೆದುಕೊಂಡಿದೆ.

ಜಫರ್ ಫನಾಹಿ

ಇದು ಮರಣದಂಡನೆಯ ಮಾತಾದರೆ, ಅಸಮಾನತೆಯನ್ನು ಸೃಷ್ಟಿಸುತ್ತಿರುವ ಕೆಲವು ಧಾರ್ಮಿಕ ಸಂಗತಿಗಳನ್ನು ಯಾವುದೇ ಮಟ್ಟಕ್ಕಿಳಿದು ಪೋಷಿಸಿಕೊಳ್ಳಲು ಇರಾನ್ ಧಾರ್ಮಿಕ ಪ್ರಭುತ್ವ ದಮನಕಾರಿಯಾಗುತ್ತಿರುವುದು ಮಾನವ ಇತಿಹಾಸದ ದುರಂತದ ಸಂಗತಿಗಳಲ್ಲಿ ಒಂದು. ವಸ್ತ್ರಸಂಹಿತೆಯ ವಿರುದ್ಧ ಪ್ರಾರಂಭವಾದ ಪ್ರತಿಭಟನೆಗಳಲ್ಲಿ, ಪೊಲೀಸರ ದಮನದಿಂದ ನೂರಾರು ಜನ ಮೃತಪಟ್ಟಿದ್ದರೆ, ಸಾವಿರಾರು ಜನ ಗಾಯಗೊಂಡಿದ್ದಾರೆ. ಕೆಲವು ಭದ್ರತಾ ಸಿಬ್ಬಂದಿ ಗಾಯಗೊಂಡಿರುವುದನ್ನೇ ನೆಪಮಾಡಿಕೊಂಡಿರುವ ಸರ್ವೋಚ್ಛ ನಾಯಕ ಅಯಾತೊಲ್ಲಾ ಖಮೇನಿ ಮತ್ತು ಅಧ್ಯಕ್ಷ ಇಬ್ರಾಹಿಮ ರೈಸಿ ಅವರ ನೇತೃತ್ವದ ಸರ್ಕಾರದ ಏಜೆನ್ಸಿಗಳು ಸಾವಿರಾರು ಪ್ರತಿಭಟನಾಕಾರರನ್ನು ಬಂಧಿಸಿ ಕಿರುಕುಳ ನೀಡುತ್ತಿವೆ. ಈ ದಮನ ನೀತಿಯನ್ನು ಸಮರ್ಥಿಸಿಕೊಳ್ಳಲು, ಈ ಪ್ರತಿಭಟನೆಗಳನ್ನು ತಮ್ಮ ವಿರೋಧಿ ರಾಷ್ಟ್ರ ಅಮೆರಿಕ ಸೃಷ್ಟಿಸುತ್ತಿದೆ ಎಂಬ ನರೆಟಿವ್‌ಗಳನ್ನು ಇರಾನ್ ಪ್ರಭುತ್ವ ಕಟ್ಟುತ್ತಿದೆ. ಅಮೆರಿಕ ಇರಾನ್ ದೇಶದ ವಿರುದ್ಧ ಐತಿಹಾಸಿಕವಾಗಿ ಸಮಸ್ಯಾತ್ಮಕ ಸಂಬಂಧ ಹೊಂದಿದೆ ಹಾಗೂ ಇರಾನ್‌ನ ವಿರುದ್ಧ ತನ್ನ ಕುಟಿಲ ನೀತಿಯನ್ನು ಆಗಾಗ ಬಳಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಧಾರ್ಮಿಕ ಪ್ರಭತ್ವದ ಹಲವು ವರ್ಷಗಳ ದಮನಕಾರಿ ನೀತಿಗಳ ವಿರುದ್ಧ ಸಿಡಿದೆದ್ದ ಸಾಮಾನ್ಯ ನಾಗರಿಕರ ಪ್ರತಿಭಟನೆಗಳನ್ನು ಬೇರೆ ದೇಶವೊಂದರ ಸಂಚು ಎಂಬಂತೆ ನಿರೂಪಿಸಿ, ನಾಗರಿಕರ ಮೇಲಿನ ತನ್ನ ಹಿಂಸೆಯನ್ನು ಸಮರ್ಥಿಸಿಕೊಳ್ಳುವುದು ನೀಚತನದ ಪರಮಾವಧಿಯೇ ಸರಿ.

ಪ್ರಭುತ್ವದ ವಿರುದ್ಧ ಮಾತನಾಡುವುದರ ವಿರುದ್ಧ ಸೆನ್ಸಾರ್ ವಿಧಿಸುವುದು, ಕಲಾವಿದ ಚಿಂತಕರನ್ನು ಬಂಧಿಸುವಂತಹ ಕುಖ್ಯಾತ ಕೆಲಸಗಳಿಗೆ ಇರಾನ್ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇರಾನ್ ಸಿನಿಮಾಗಳನ್ನು ಅನುಸರಿಸುವವರಿಗೆ ನಿರ್ದೇಶಕ ಜಫರ್ ಫನಾಹಿ ಚಿರಪರಿಚಿತ ಹೆಸರು. ಇರಾನ್‌ನ ಸೆನ್ಸಾರ್‌ಗಳನ್ನು ಅಣಕಿಸಿ ಸಿನಿಮಾಗಳನ್ನು ಮಾಡಿದವರು ಅವರು. ಇದನ್ನು ಸಹಿಸಿಕೊಳ್ಳದ ಪ್ರಭುತ್ವ ಅವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿತು. ಇತ್ತೀಚಿಗೆ ಅವರನ್ನು 6 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಿದ್ದು ಆಕ್ರೋಶಕ್ಕೆ ಗುರಿಯಾಗಿತ್ತು. ಇನ್ನೂ ಸ್ವಲ್ಪ ಹಿಂದೆ ಹೋದರೆ, ಸಲ್ಮಾನ್ ರಶ್ದಿ 1988ರಲ್ಲಿ ’ದ ಸಟಾನಿಕ್ ವರ್ಸಸ್’ ಕಾದಂಬರಿ ಬರೆದಾಗ ಅದು ಇಸ್ಲಾಂ ಧರ್ಮವನ್ನು ಅವಮಾನಿಸುತ್ತದೆ ಎಂಬ ಪ್ರತಿಪಾದಿಸಿ, ಅಂದಿನ ಇರಾನಿನ ಪರಮೋಚ್ಚ ನಾಯಕ ಅಯಾತೊಲ್ಲ ಖೊಮೇನಿ ರಶ್ದಿ ವಿರುದ್ಧ ಫತ್ವಾ ಹೊರಡಿಸಿದ್ದ. ಈ ಫತ್ವಾ ಎಂತಹ ಗಂಭೀರ ತಿರುವು ಪಡೆದಿತ್ತೆಂದರೆ ರಶ್ದಿ ತಲೆಮರೆಸಿಕೊಂಡು ಬದುಕಬೇಕಾಯಿತು. ’ದ ಸೇಲ್ಸ್‌ಮ್ಯಾನ್’ ಸಿನಿಮಾ ಖ್ಯಾತಿಯ ತರಾನೆ ಆಲಿದೂಸ್ತಿ ಅವರು ಹಿಜಾಬ್ ವಿರುದ್ಧದ ಹೋರಾಟಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಅವರನ್ನು ಈಗ ಪೊಲೀಸರು ಬಂಧಿಸಿರುವ ಬಗ್ಗೆ ವರದಿಗಳು ಮೂಡಿವೆ. ಹೀಗೆ ಸಾಮಾನ್ಯ ಜನರಿಂದ ಹಿಡಿದು ಚಿಂತಕ ಕಲಾವಿದರನ್ನು ಬಿಡದಂತೆ ಹಿಂಸಿಸುತ್ತಿರುವ ಇರಾನಿನ ದಮನಕಾರಿ ಪ್ರಭುತ್ವದ ವಿರುದ್ಧ ಅಲ್ಲಿನ ಜನರು ಹೋರಾಡಿ ಗೆಲುವು ಸಾಧಿಸುತ್ತಾರೆ ಎಂಬ ಆಶಯವನ್ನು ಇರಿಸಿಕೊಳ್ಳುವುದು ಒಳ್ಳೆಯದೇ ಆದರೂ, 21ನೇ ಶತಮಾನದಲ್ಲಿ ಯಾವ ಅಂಕೆಯೂ ಇಲ್ಲದೆ ನಿರಂಕುಶವಾಗಿ ಬೆಳೆಯುತ್ತಿರುವ ಪ್ರಭುತ್ವಗಳು ಅದಕ್ಕೆ ಅವಕಾಶ ನೀಡುತ್ತವೆಯೇ ಎಂಬ ಆತಂಕವೂ ಮೂಡುತ್ತದೆ. ಇದರ ಜೊತೆಗೆ ಧಾರ್ಮಿಕ ತೀವ್ರವಾದ ಕೂಡ ಬೆರೆತಿರುವ ಇರಾನಿನ ಇಸ್ಲಾಮಿಕ್ ರಿಪಬ್ಲಿಕ್‌ನಲ್ಲಿ ದಮನಕ್ಕೆ ಎಲ್ಲೆಯೇ ಇಲ್ಲದಂತಾಗಿದೆ. ಯಾವುದೇ ನಿರಂಕುಶ ಪ್ರಭುತ್ವದ ಜೊತೆ ಧಾರ್ಮಿಕ ಮೂಲಭೂತವಾದ ಸೇರಿಕೊಂಡರೆ ಆಗುವ ಈ ಅನಾಹುತಗಳು ಭಾರತಕ್ಕೂ ಎಚ್ಚರ ನೀಡುವಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...