ಸಲಿಂಗ ವಿವಾಹದ ಕುರಿತು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿಯವರು ರಾಜ್ಯಸಭೆಯಲ್ಲಿ ಆಡಿರುವ ಮಾತುಗಳಿಗೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸುಶೀಲ್ ಕುಮಾರ್ ಅವರ ನಿಲುವುಗಳನ್ನು ವಿರೋಧಿಸಿ ಬಹಿರಂಗ ಪತ್ರ ಬರೆದಿರುವ ಅಕ್ಕಯ್, “ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಸಂಬಂಧ ರಾಜ್ಯಸಭೆಯಲ್ಲಿ ನೀವು ಮಾಡಿದ ಭಾಷಣವನ್ನು ನೋಡಿ ನಾನು ತೀವ್ರವಾಗಿ ವಿಚಲಿತನಾದೆ. ಎಲ್ಜಿಬಿಟಿಕ್ಯೂಐ ಸಮುದಾಯದಲ್ಲಿ ನೀವು ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಾತನಾಡಿದ್ದ ಸುಶೀಲ್, “ದೇಶದಲ್ಲಿ ಸಲಿಂಗ ವಿವಾಹಗಳ ಸಮಸ್ಯೆಯನ್ನು ನ್ಯಾಯಾಲಯಗಳು ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ಮತ್ತು ಸಮಾಜದಲ್ಲಿ ಚರ್ಚೆಯ ಅಗತ್ಯವಿದೆ. ಇಬ್ಬರು ನ್ಯಾಯಾಧೀಶರು ಕುಳಿತು ಇಂತಹ ಸಾಮಾಜಿಕ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗದು. ದೇಶದಲ್ಲಿ ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸಲು ಎಡ-ಉದಾರವಾದಿ ಪ್ರಜಾಪ್ರಭುತ್ವ ಮಂದಿ ಮತ್ತು ಹೋರಾಟಗಾರರು ಪ್ರಯತ್ನಿಸುತ್ತಿದ್ದಾರೆ. ಸಲಿಂಗ ವಿವಾಹವು ನಮ್ಮ ಸಂಸ್ಕೃತಿ ಮತ್ತು ನೈತಿಕತೆಗೆ ವಿರುದ್ಧವಾಗಿದೆ” ಎಂದಿದ್ದಾರೆ. ಇದನ್ನು ವಿರೋಧಿಸಿ ಅಕ್ಕಯ್ ಅವರು ಬಹಿರಂಗ ಪತ್ರ ಬರೆದಿದ್ದಾರೆ.
With much disappointment by the rulers of this proudest country #Ibelongtoindia & #Indiabelongstome @narendramodi @PMOIndia @JoshiPralhad @unhrcpr @SushilModi @kharge @RahulGandhi @DKShivakumar @siddaramaiah @inclusiveness @constitutionofindia @ShashiTharoor pic.twitter.com/OZV756PITN
— Akkai Padmashali (@PadmashaliAkkai) December 24, 2022
ಅಕ್ಕಯ್ ಅವರ ಪ್ರತಿಕ್ರಿಯೆ ಏನು?
“ಸಲಿಂಗ ವಿವಾಹಕ್ಕೆ ಸಿಗಬೇಕಾದ ಕಾನೂನು ಮಾನ್ಯತೆಯ ವಿರುದ್ಧ ರಾಜ್ಯಸಭೆಯಲ್ಲಿ ನೀವು ಮಾಡಿದ ಭಾಷಣವನ್ನು ನೋಡಿ ನಾನು ತೀವ್ರವಾಗಿ ವಿಚಲಿತನಾದೆ. ‘ಲೆಸ್ಬಿಯನ್, ಗೇ, ಬೈಸೆಕ್ಸುವಲ್, ಟ್ರಾನ್ಸ್ಜೆಂಡರ್, ಕ್ವೀರ್, ಇಂಟರ್ಸೆಕ್ಸ್, ಜೋಗಪ್ಪ ಮಾರ್ಲಾಡಿ + ಆಂದೋಲನ’ದ ಭಾಗವಾಗಿರುವ ಟ್ರಾನ್ಸ್ಜೆಂಡರ್ ವ್ಯಕ್ತಿಯಾಗಿರುವ ನಾನು, ‘ಮದುವೆಯಾಗುವ ಹಕ್ಕು ಎಲ್ಲಾ ವ್ಯಕ್ತಿಗಳಿಗೆ ಅನ್ವಯಿಸಬೇಕು. ‘ಪುರುಷರು’ ಮತ್ತು ‘ಮಹಿಳೆಯರಿಗೆ’ ಸೀಮಿತವಾಗಿರಬಾರದು ಎಂದು ನಾನು ನಂಬುತ್ತೇನೆ” ಎಂದಿದ್ದಾರೆ ಅಕ್ಕಯ್ ಪದ್ಮಶಾಲಿ.
ಮುಂದುವರಿದು, “ನೀವು ‘ಸಲಿಂಗ ವಿವಾಹ’ವನ್ನು ವಿರೋಧಿಸುತ್ತೀರಿ. ನಿಮ್ಮ ಅಭಿಪ್ರಾಯದಲ್ಲಿ ಮದುವೆ ಎಂಬುದು ‘ಶುದ್ಧ’ವಾಗಿರಬೇಕು, ಅಂದರೆ ಜೈವಿಕ ಪುರುಷ ಮತ್ತು ಜೈವಿಕ ಸ್ತ್ರೀಯವರು ಮಾತ್ರ ಮದುವೆಯಾಗಬೇಕು. ಎಲ್ಜಿಬಿಟಿಕ್ಯೂಐ ಆಂದೋಲನವು ಇದನ್ನು ಒಪ್ಪುವುದಿಲ್ಲ. ಲಿಂಗವು ಕಾಮನಬಿಲ್ಲಿನಂತೆ ವರ್ಣಮಯವಾದದ್ದು” ಎಂದು ವಿವರಿಸಿದ್ದಾರೆ.
“ನನ್ನ ವೈಯಕ್ತಿಕ ಉದಾಹರಣೆಯನ್ನೇ ಹೇಳುವುದಾದರೆ- ನಾನು ಗಂಡಾಗಿ ಹುಟ್ಟಿದ್ದೇನೆ, ಆದರೆ ನನ್ನ ಅಸ್ಮಿತೆ ಹೆಣ್ತನ ಎಂಬುದು ನನಗೆ ಯಾವಾಗಲೂ ತಿಳಿದಿತ್ತು. ಅರಿವಿನ ಹೆಚ್ಚಳ, ನನ್ನ ಸ್ವಂತ ಆತ್ಮವಿಶ್ವಾಸ ಮತ್ತು ಶಕ್ತಿಯೊಂದಿಗೆ ನಾನು ಈಗ ಮಹಿಳೆಯಾಗಿ ಪರಿವರ್ತನೆ ಹೊಂದಿದ್ದೇನೆ. ಆದಾಗ್ಯೂ, ನಿಮ್ಮ ವ್ಯಾಖ್ಯಾನದಲ್ಲಿ ನಾನು ‘ಜೈವಿಕ ಮಹಿಳೆ’ ಅಲ್ಲ. ನಿಮ್ಮ ಪ್ರಕಾರ ಮದುವೆಯಾಗಲು ಅರ್ಹಳಲ್ಲ. ಜೈವಿಕವಾಗಿ ಮಹಿಳೆಯರಲ್ಲದ ನಮ್ಮಂಥವರಿಗೆ ಮದುವೆಯನ್ನು ನಿರಾಕರಿಸುವುದು ಸಮಾನತೆಯ ತತ್ವ ಮತ್ತು ಗೌರವಯುತ ಜೀವನ ನಡೆಸುವ ಹಕ್ಕಿನ ನಿರಾಕರಣೆಯಾಗಿರುತ್ತದೆ” ಎಂದು ಟೀಕಿಸಿದ್ದಾರೆ.
“ನನ್ನ ಹೊರತಾಗಿ ಜೈವಿಕವಾಗಿ ಹೆಣ್ಣಲ್ಲದ ಅಥವಾ ಜೈವಿಕವಾಗಿ ಪುರುಷನಲ್ಲದ ಇನ್ನೂ ಅನೇಕರಿದ್ದಾರೆ. ಈ ವರ್ಗಕ್ಕೆ ಮದುವೆಯನ್ನು ನಿರಾಕರಿಸಿದರೆ – ಸಮಾನತೆ, ಘನತೆ ಮತ್ತು ಒಳಗೊಳ್ಳುವಿಕೆಯ ನಮ್ಮ ಸಾಂವಿಧಾನಿಕ ಆದೇಶದ ಉಲ್ಲಂಘನೆಯಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
“ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಸಲಿಂಗ ವಿವಾಹಗಳಿಗೆ ಮಾನ್ಯತೆ ಇಲ್ಲ ಎಂದು ನೀವು ಭಾವಿಸುತ್ತಿರುವುದು ನನಗೆ ಆಶ್ಚರ್ಯವಾಗಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳು ಯಾವಾಗಲೂ ವಿಭಿನ್ನ ರೀತಿಯ ಪ್ರೀತಿ ಮತ್ತು ವಿಭಿನ್ನ ರೀತಿಯ ಮದುವೆಗೆ ಅವಕಾಶ ಕಲ್ಪಿಸಿವೆ. ನೀವು ಹೇಳುವಂತೆ ನಮ್ಮ ಶತಮಾನಗಳ ಹಳೆಯ ಸಂಪ್ರದಾಯಗಳು ಹೋಮೋಫೋಬಿಕ್ ಮತ್ತು ಟ್ರಾನ್ಸ್ಫೋಬಿಕ್ ಅಲ್ಲ. ಸಲಿಂಗಿಗಳು, ದ್ವಿಲಿಂಗಿಗಳು, ಇಂಟರ್ಸೆಕ್ಸ್, ಲೆಸ್ಬಿಯನ್ ಮತ್ತು ಟ್ರಾನ್ಸ್ಜೆಂಡರ್ಗಳು ಎಲ್ಲರನ್ನೂ ಒಳಗೊಂಡ ವೈವಿಧ್ಯಮಯ ಮನುಷ್ಯಕುಲವನ್ನು ಇದು ಹೊಂದಿದೆ” ಎಂದು ಹೇಳಿದ್ದಾರೆ.
“…ಸುಪ್ರೀಂ ಕೋರ್ಟ್ ವಿಶೇಷ ವಿವಾಹ ಕಾಯಿದೆಯ ನಿಬಂಧನೆಗಳನ್ನು ಮಾತ್ರ ಪರಿಗಣಿಸುತ್ತಿರುವುದರಿಂದ ನಿಮ್ಮ ಭಯವು ಅನಗತ್ಯವೆಂದು ತೋರುತ್ತದೆ. ಈ ತಾಂತ್ರಿಕ ಸ್ಪಷ್ಟೀಕರಣವು ನಿಮ್ಮ ಕಳವಳವನ್ನು ನಿವಾರಿಸುತ್ತದೆ. ನಿಮ್ಮ ಭಾಷಣದಲ್ಲಿ ನೀವು ನ್ಯಾಯಾಲಯಕ್ಕೆ ‘ರಾಷ್ಟ್ರದ ಸಂಸ್ಕೃತಿ ಮತ್ತು ಚಿಂತನೆಗಳಿಗೆ ವಿರುದ್ಧವಾದ ತೀರ್ಪು ನೀಡಬೇಡಿ’ ಎಂದು ಸಲಹೆ ನೀಡಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ನ್ಯಾಯಾಲಯಗಳು ‘ಸಾಂಸ್ಕೃತಿಕ ತತ್ವ’ಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಂವಿಧಾನದ ಆಧಾರದ ಮೇಲೆ ನಿರ್ಧರಿಸುತ್ತವೆ. ನ್ಯಾಯಾಧೀಶರು ಅನ್ವಯಿಸಲು ಬದ್ಧರಾಗಿರುವ ನೈತಿಕತೆಯು ಜನಪ್ರಿಯ ನೈತಿಕತೆಯಲ್ಲ- ಅದು ಸಾಂವಿಧಾನಿಕ ನೈತಿಕತೆಯಾಗಿದೆ” ಎಂದು ತಿಳಿಸಿದ್ದಾರೆ.
“ಸಾಂವಿಧಾನಿಕ ನೈತಿಕತೆಯು ಸ್ವಾಭಾವಿಕ ಭಾವನೆಯಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದನ್ನು ನಿಮಗೆ ನೆನಪಿಸಲು ಬಯಸುತ್ತೇನೆ… ನಮ್ಮ ಜನರು ಇನ್ನೂ ಕಲಿಯಬೇಕಾಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು… ಸಾಂವಿಧಾನಿಕ ನೈತಿಕತೆಯನ್ನು ರಕ್ಷಿಸುವುದು ನ್ಯಾಯಾಲಯಗಳ ಜವಾಬ್ದಾರಿಯಾಗಿದೆ. ಸಂವಿಧಾನದ ಆಧಾರದಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ನಿರ್ಧರಿಸುತ್ತದೆ ಹೊರತು ಸಾಂಸ್ಕೃತಿಕ ನೀತಿಯಿಂದಲ್ಲ. ಭಾರತದ LGBTQI ನಾಗರಿಕರ ಸಮಾನತೆ ಮತ್ತು ಘನತೆಯ ಹಕ್ಕನ್ನು ಕೋರ್ಟ್ ರಕ್ಷಿಸುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
“‘ಎಡ/ಉದಾರವಾದಿಗಳು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ನೀವು ಭಾವಿಸುವುದು ತಪ್ಪಾಗಿದೆ. ನಾನು ಟ್ರಾನ್ಸ್ಜೆಂಡರ್ ಸಮುದಾಯದ ಭಾಗವಾಗಿದ್ದೇನೆ ಎಂದು ನಾನು ನಿಮಗೆ ನೆನಪಿಸಲು ಬಯಸುತ್ತೇನೆ. ಈ ಸಮುದಾಯವು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವಾಗಿದೆ. ಎಲ್ಲರೂ ಮದುವೆಯಾಗಬಹುದು ಎಂಬ ಹಕ್ಕಿಗಾಗಿ ನಾನು ಹೋರಾಡುತ್ತಿದ್ದೇನೆ. ಆ ಮೂಲಕ ನಾನು ಎಲ್ಲ ವ್ಯಕ್ತಿಗಳಿಗೂ ಸಮಾನತೆ ಮತ್ತು ಘನತೆಯ ಹಕ್ಕಿಗಾಗಿ ಹೋರಾಡುತ್ತಿದ್ದೇನೆ. ಎಲ್ಲರೂ ಮದುವೆಯಾಗಬಹುದೆಂಬುದು ಈ ನೆಲದ ಇತಿಹಾಸ ಮತ್ತು ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ. ನೀವು ನಿಮ್ಮ ಮಾತುಗಳ ಮೂಲಕ ಎಲ್ಜಿಬಿಟಿಕ್ಯೂಐ ಸಮುದಾಯಕ್ಕೆ ನೋವುಂಟು ಮಾಡಿದ್ದೀರಿ. ಹೀಗಾಗಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.