Homeಮುಖಪುಟಕೆಲಸದ ಅವಧಿ ಹೆಚ್ಚಳ: ಐತಿಹಾಸಿಕ ಹೋರಾಟದ ಆಶಯ, ಯಶಸ್ಸು ಎರಡನ್ನೂ ಈ ಕಾನೂನು ನುಂಗಿ ಹಾಕಲಿದೆ

ಕೆಲಸದ ಅವಧಿ ಹೆಚ್ಚಳ: ಐತಿಹಾಸಿಕ ಹೋರಾಟದ ಆಶಯ, ಯಶಸ್ಸು ಎರಡನ್ನೂ ಈ ಕಾನೂನು ನುಂಗಿ ಹಾಕಲಿದೆ

15-49 ವಯಸ್ಸಿನ ಮಹಿಳೆಯರಲ್ಲಿ 47.5%ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ, 65.5% ಮಕ್ಕಳು ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ದುಡಿಯುವ ಅವಧಿಯನ್ನು ಹೆಚ್ಚಿಸಿರುವುದು ಅವೈಜ್ಞಾನಿಕ.

- Advertisement -
- Advertisement -

ಸದರಿ ಬಿಜೆಪಿ ಸರ್ಕಾರದ ಕೊನೆಯ ವಿಧಾನ ಮಂಡಲ ಅಧಿವೇಶನದಲ್ಲಿ ಕಾರ್ಖಾನೆಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 9 ಗಂಟೆಯಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಮತ್ತು ಆಸಕ್ತಿ ಇರುವ ಮಹಿಳೆಯರಿಗೆ ರಾತ್ರಿ ಪಾಳೆಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ’ಮಹತ್ವ’ದ ’ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ-2023’ಕ್ಕೆ ಒಪ್ಪಿಗೆ ನೀಡಲಾಗಿದೆ. ಸದ್ಯ ಕಾರ್ಮಿಕರ ಕೆಲಸದ ಅವಧಿ 9 ಗಂಟೆ ಇದೆ. ಆದರೆ, ಮಹಿಳಾ ಕಾರ್ಮಿಕರನ್ನು ನಿಗದಿತ ಅವಧಿಯವರೆಗೆ ಮಾತ್ರವೇ ಕೆಲಸ ಮಾಡಿಸಲು ಅವಕಾಶವಿತ್ತು. ಆದರೆ ನೂತನ ವಿಧೇಯಕ ಜಾರಿಗೆ ಬಂದರೆ ದಿನದ 24 ಗಂಟೆಯ ಅವಧಿಯಲ್ಲಿ ಮಹಿಳಾ ಕಾರ್ಮಿಕರ ಒಪ್ಪಿಗೆ ಇದ್ದರೆ ಯಾವ ಸಮಯದಲ್ಲಾದರೂ ಕೆಲಸ ಮಾಡಲು ಅನುಮತಿ ಸಿಗಲಿದೆ.

ಹೊಸ ಕಾಯ್ದೆ ಪ್ರಕಾರ ದಿನಕ್ಕೆ 12 ಗಂಟೆಗಳಂತೆ 48 ಗಂಟೆ ಕೆಲಸ ಮಾಡಿದರೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಿದಂತೆ ಆಗುತ್ತದೆ. ಉಳಿದ ದಿನಗಳನ್ನು ಪಾವತಿ ರಜಾ ದಿನಗಳನ್ನಾಗಿ ಪರಿಗಣಿಸಬೇಕಾಗುತ್ತದೆ. ಇದಕ್ಕೆ ಕಾರ್ಮಿಕನ/ಳ ಲಿಖಿತ ಒಪ್ಪಿಗೆಯ ಅಗತ್ಯವಿದ್ದು, ಆಗ ಮಾತ್ರ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ವಿಸ್ತರಿಸಬಹುದು ಎಂದು ಹೇಳಲಾಗಿದೆ. ಹೆಚ್ಚುವರಿ ಕೆಲಸ ಮಾಡಿದರೆ, ದುಪ್ಪಟ್ಟು ಮಜೂರಿಯ ಆಮಿಷವನ್ನೂ ನೀಡಲಾಗಿದೆ. ಈ ಮಸೂದೆಗೆ ವಿಧಾನಮಂಡಳದಲ್ಲಿ ಅನುಮೋದನೆ ಸಿಕ್ಕಿದ ಕಾರಣ ಸರ್ಕಾರ ಕಾನೂನು ರೂಪಿಸುವುದಷ್ಟೇ ಬಾಕಿಯುಳಿದಿದೆ.

ಇವಿಷ್ಟು ಕಾಯ್ದೆಯ ಬಗ್ಗೆ ಆದರೆ, ಇದರ ಜೊತೆಗೆ ಮಹಿಳಾ ಸುರಕ್ಷತೆಯ ಬಾಯಿಮಾತಿನ ನಿಯಮಗಳು ಎಂದಿನಂತೆ ಇಲ್ಲೂ ಇವೆ. ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಇರಬೇಕು, ರಾತ್ರಿ ಪಾಳಿಗೆ ಬರಲು ಮತ್ತು ಕೆಲಸ ಮುಗಿದ ನಂತರ ವಾಪಸ್ ಹೋಗಲು ವಾಹನದ ಸೌಲಭ್ಯ ನೀಡಬೇಕು. ವಾಹನಗಳಲ್ಲಿ ಭದ್ರತಾ ಸಿಬ್ಬಂದಿ ಇರಬೇಕು, ಸಿಸಿಟಿವಿ ಕ್ಯಾಮೆರಾ ಜಿಪಿಎಸ್ ವ್ಯವಸ್ಥೆ ಇರಬೇಕು, ಚಾಲಕನ ವೈಯಕ್ತಿಕ ವಿವರ ಫೋನ್ ನಂಬರ್ ಪರಿಶೀಲನೆಗೆ ಒಳಪಡಬೇಕು ಇಂತಹ ಹಲವು ಮಹಿಳಾಪರ ಎಂದುಕೊಳ್ಳಬಹುದಾದ ನಿಯಮಗಳಿವೆ. ಹಾಗಿದ್ದರೆ ಇದುವರೆಗೆ ಇವೆಲ್ಲ ಇರಲಿಲ್ಲವೇ? ಇದ್ದವು, ಆದರೂ ದುಡಿಯುವ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ, ಅತ್ಯಾಚಾರ, ಕೊಲೆಯಂತಹ ಕೃತ್ಯಗಳಿಗೆ ಕಡಿವಾಣ ಬಿದ್ದಿದೆಯೇ? ದುಡಿಯುವ ಜಾಗಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಒತ್ತಡ ಕಡಿಮೆ ಆಗಿದೆಯೇ? ಇಲ್ಲ. ಐಟಿ ಕಂಪನಿಗಳು ಇದ್ದುದರಲ್ಲಿ ಮಹಿಳಾ ಸುರಕ್ಷತೆ, ಕಾರ್ಮಿಕ ಕಾನೂನುಗಳ ಅನುಸರಣೆಯಲ್ಲಿ ಬಹಳಷ್ಟು ಮುಂದೆ ಇವೆ; ಉತ್ತಮ ವೇತನ, ಸೌಲಭ್ಯ ಇದೆ, ಬಹಳ ಆರಾಮಾಗಿದ್ದಾರೆ ಎಂದುಕೊಂಡಿರುತ್ತೇವೆ. ಆದರೆ, ಅವರ ಮೇಲೂ ಕ್ಯಾಬ್‌ಗಳಲ್ಲಿಯೇ ಅತ್ಯಾಚಾರ ನಡೆದಿರುವ ಪ್ರಕರಣಗಳು ಬಹಳಷ್ಟು ವರದಿಯಾಗಿವೆ. ಕೆಲಸದ ಒತ್ತಡದಿಂದಾಗಿ ಖಿನ್ನತೆಗೆ ಜಾರಿದವರ, ಆತ್ಮಹತ್ಯೆಗೆ ಶರಣಾದವರ ಬಹಳಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಇನ್ನು ಈ ಕಾನೂನಿನಿಂದ ಯಾವ ವರ್ಗದ ಮಹಿಳೆಯರು ಇನ್ನಷ್ಟು ಕಷ್ಟಕ್ಕೆ ಒಳಗಾಗುತ್ತಾರೆ ಎಂದು ನೋಡಿದರೆ ಗಾರ್ಮೆಂಟ್ಸ್ ಮಹಿಳೆಯರು ನೆನಪಾಗದೇ ಇರದು. ಯಾವ ಕಾರಣಕ್ಕಾಗಿ ಬಹುದೊಡ್ಡ ಹೋರಾಟ ನಡೆದು ದುಡಿಯುವ ಅವಧಿಯನ್ನು ಎಂಟು ಗಂಟೆಗೆ ನಿಗದಿಸಲಾಯಿತೋ ಆ ಐತಿಹಾಸಿಕ ಹೋರಾಟದ ಆಶಯ, ಯಶಸ್ಸು ಎರಡನ್ನೂ ಈ ಕಾನೂನು ನುಂಗಿಹಾಕಲಿದೆ.

ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ನೂರಾರು. ಹೋರಾಟ ನಡೆಸಿಯೇ ಅವರು ತಮ್ಮ ಹಕ್ಕುಗಳನ್ನು ಪಡೆದವರು. ದುಡಿಮೆಗೆ ಸರಿಯಾದ ವೇತನ, ಇಎಸ್‌ಐ, ಗ್ರ್ಯಾಚುಟಿ ಪಡೆಯಲು ದಶಕಗಳ ಕಾಲ ಹೋರಾಟ ನಡೆಸಿ ಹೈರಾಣವಾಗಿದ್ದಾರೆ. ದುಡಿಯುವ ಜಾಗಗಳಲ್ಲಿ ಪುರುಷ ಸಹೋದ್ಯೋಗಿಗಳಿಂದ ನಿತ್ಯ ಬೈಗುಳ, ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.

ಮನೆ ಮಕ್ಕಳು ಸಂಸಾರ ತಾಪತ್ರಯಗಳ ನಡುವೆ ಹಾಗೋ ಹೀಗೋ ದಿನದ ಎಂಟು ಗಂಟೆ ದುಡಿದು ಬರುವ ಹತ್ತು ಹನ್ನೆರಡು ಸಾವಿರ ಸಂಬಳದಲ್ಲಿ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ವೈಯಕ್ತಿಕ ಖರ್ಚುಗಳನ್ನು ನಿಭಾಯಿಸುತ್ತ ಬಂದಿದ್ದಾರೆ. ಈಗ ಈ ಕಾನೂನಿನಿಂದಾಗಿ ಈ ಹೆಣ್ಣುಮಕ್ಕಳ ಶೋಷಣೆಗೆ ಕಾನೂನಿನ ರಕ್ಷಣೆ ನೀಡಿದಂತಾಗಿದೆ. ಇದುವರೆಗೆ ಎಂಟು ಗಂಟೆಗಳ ಅವಧಿ ಮೀರಿ ಮಾಡುವ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ಸಿಗುತ್ತಿತ್ತು. ಈಗ ಎಂಟು ಗಂಟೆಗಳ ಕೆಲಸದ ಅವಧಿ 12 ಗಂಟೆಗೆ ಬದಲಾದರೆ ಈ ಹೆಣ್ಣುಮಕ್ಕಳ ಬದುಕು ಹೈರಾಣವಾಗಲಿದೆ. ಹೆಚ್ಚುವರಿ ದುಡಿಮೆ ಎಂಬುದೇ ಇಲ್ಲ. ಇದು ಮಾಲೀಕರಿಗೆ ಅನುಕೂಲಕರ. ಈ ಮಹಿಳೆಯರ ವೈಯಕ್ತಿಕ ಬದುಕಿನ ಮೇಲೆ ಏನು ಪರಿಣಾಮ ಬೀರಲಿದೆ ಎಂದು ನೋಡಿದರೆ, ಅವರ ದಿನಚರಿ ಸಂಪೂರ್ಣ ಬದಲಾಗಲಿದೆ. ಅವರದಷ್ಟೇ ಅಲ್ಲ, ಅವರನ್ನು ನಂಬಿಕೊಂಡಿರುವ ಕುಟುಂಬದವರ ಎಲ್ಲರ ದಿನಚರಿ ಅಸ್ತವ್ಯಸ್ತವಾಗಲಿದೆ. ಈಗ ಅವರು ಹೇಗೋ ತಮ್ಮ ಬದುಕಿಗೊಂದು ಲಯ ದಕ್ಕಿಸಿಕೊಂಡಿರುತ್ತಾರೆ. ಒಂಬತ್ತು ಗಂಟೆಗೆ ಕಾರ್ಖಾನೆ ತಲುಪಬೇಕೆಂದರೆ ನಗರ ಪ್ರದೇಶಗಳಲ್ಲಿ ಕನಿಷ್ಠ 8 ಗಂಟೆಗೆ ಮನೆ ಬಿಡುತ್ತಾರೆ. ಅಷ್ಟರೊಳಗಾಗಿ ಮನೆ ಕೆಲಸ, ಮಕ್ಕಳ ಕೆಲಸ, ಬುತ್ತಿ ಎಲ್ಲ ಸಿದ್ಧಪಡಿಸಿ ಗಡಿಬಿಡಿಯಲ್ಲಿ ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ತಲುಪುತ್ತಾರೆ. ಅಲ್ಲಿ ಸತತವಾಗಿ ಯಂತ್ರದ ಜೊತೆಗೆ ಯಾಂತ್ರಿಕವಾಗಿ 12 ಗಂಟೆ ಕೆಲಸ ಮಾಡಿ ರಾತ್ರಿ 10 ಗಂಟೆಗೆ ಮನೆ ಸೇರಿದರೆ ಆ ಮನೆಯ ಪರಿಸ್ಥಿತಿ ಹೇಗಿರುತ್ತದೆ? ಎಲ್ಲರ ದಿನಚರಿ ಒಂದೇ ರೀತಿಯಾಗಿರುತ್ತದೆ ಎಂದಲ್ಲ, ಆದರೆ ಬಹುತೇಕ ಮಹಿಳೆಯರು ರಾತ್ರಿ ಮನೆಗೆ ಹೋದ ನಂತರ ಮನೆ ಕೆಲಸವನ್ನೂ ಮಾಡಬೇಕಾದ ಪರಿಸ್ಥಿತಿ ಇರುತ್ತದೆ. ಇಷ್ಟರ ನಡುವೆ ಅವರಿಗೆ ವೈಯಕ್ತಿಕ ಬದುಕಿನ ನೋವು ನಲಿವುಗಳಿಗೆ ಅವಕಾಶವೇ ಇಲ್ಲ.

ಇದನ್ನೂ ಓದಿ: ಕಾಂಗ್ರೆಸ್ ಸೇರುವುದಾಗಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಘೋಷಣೆ

ಇತ್ತೀಚೆಗೆ ಕೇರಳದ ಕೊಚ್ಚಿ ಯೂನಿವರ್ಸಿಟಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಕೊಡುವ ನಿಯಮ ರೂಪಿಸಿತ್ತು. ಅದೇ ನಿಯಮವನ್ನು ಎಲ್ಲ ಕಾಲೇಜುಗಳಲ್ಲಿ ಅಳವಡಿಸುವ ಸಂಬಂಧ ಸರ್ಕಾರಕ್ಕೆ ಸಲ್ಲಿಸಿದ ಮನವಿಯನ್ನು ಸರ್ಕಾರ ಮಾನ್ಯ ಮಾಡಿದೆ. ಕಾಲೇಜು ವಿದ್ಯಾರ್ಥಿನಿಯರಿಗೆ ತಿಂಗಳಲ್ಲಿ ಎರಡು ದಿನ ಮುಟ್ಟಿನ ರಜೆ ಕೊಡುವ ಕಾನೂನು ಜಾರಿಗೆ ಬಂದಿದೆ. ಆದರೆ, ಈ ನಿಯಮವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸುವಂತೆ ನಿರ್ದೇಶನ ನೀಡಬೇಕು ಎಂಬ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಮಹಿಳೆಯರು ರಾತ್ರಿ ಪಾಳಿ ಕೆಲಸ ಮಾಡಿ, ಪುರುಷನ ಸರಿಸಮಾನವಾಗಿ ಕೆಲಸ ಮಾಡುವ ಅವಕಾಶ ನೀಡುತ್ತಿದ್ದೇವೆ ಎಂದು ಹೇಳುತ್ತಾ ಸಮಾನತೆಯ ಹರಿಕಾರರಂತೆ ವರ್ತಿಸುವ ವ್ಯವಸ್ಥೆ ಮಹಿಳೆಯರ ನಿಜ ನೋವುಗಳಿಗೆ ಸ್ಪಂದಿಸುವ ವಿಚಾರದಲ್ಲಿ ಕಠೋರವಾಗಿ ವರ್ತಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಮುಟ್ಟಿನ ರಜೆಯ ವಿಚಾರಕ್ಕೆ ಬಂದರೆ ಇದನ್ನು ಕೇಳಿ ಪಡೆಯುವ ಸ್ಥಿತಿ ಇನ್ನೂ ಇದೆ ಎಂಬುದೇ ಬೇಸರದ ಸಂಗತಿ. ಹೆಣ್ಣಿನ ದೈಹಿಕ ಸಂರಚನೆ, ಋತುಚಕ್ರದ ದಿನಗಳ ಯಾತನೆ, ನೋವು, ಹೆರಿಗೆಯ ನಂತರ ಉಂಟಾಗುವ ಸಮಸ್ಯೆಗಳು, ಮಧ್ಯ ವಯಸ್ಸಿನಲ್ಲಿ ಕಾಡುವ ಋತುಬಂಧದ ಸಮಸ್ಯೆಗಳು ಹೆಣ್ಣುಮಕ್ಕಳ ಕೆಲಸದ ಸಾಮರ್ಥ್ಯದ ಮೇಲೂ ಪ್ರಭಾವ ಬೀರುತ್ತದೆ. ಇಂತಹ ಕಾರಣಗಳಿಂದ ಹೆಣ್ಣುಮಕ್ಕಳ ಸಾಮರ್ಥ್ಯವನ್ನು ಕಡೆಗಣಿಸಿ, ಮುಂಬಡ್ತಿ ಇತರ ಸೌಲಭ್ಯಗಳನ್ನು ನಿರಾಕರಿಸುವ ವಿದ್ಯಮಾನ ರೂಢಿಗತವಾಗಿ ಬಂದಿದೆ. ಅದು ಇನ್ನೂ ಹೆಚ್ಚಾಗಲಿದೆ. ಮುಟ್ಟಿನ ದಿನಗಳಲ್ಲಿ 12 ಗಂಟೆಗಳ ಕಾಲ ಒಬ್ಬ ಹೆಣ್ಣುಮಗಳನ್ನು ದುಡಿಸಿಕೊಳ್ಳುವುದು ಅಮಾನವೀಯ. ಹಾಗಾಗಿ ಈ ಕಾಯ್ದೆಯಲ್ಲಿ ಮಹಿಳಾ ಕಾರ್ಮಿಕರಿಗೆ ಎರಡು ದಿನಗಳ ಮುಟ್ಟಿನ ರಜೆ ಘೋಷಣೆ ಮಾಡಿದ್ದರೆ ಅಲ್ಪಸ್ವಲ್ಪ ಸಮಾಧಾನವಾದರೂ ಸಿಗುತ್ತಿತ್ತು.

ಹೆಣ್ಣುಮಕ್ಕಳು ಕೆಲಸ ಮುಗಿಯುತ್ತಿದ್ದಂತೆ ಮನೆಗೆ ಓಡಲು ಕಾತುರರಾಗಿರುತ್ತಾರೆ; ಹೆಚ್ಚು ಸಮಯ ಕಚೇರಿಯಲ್ಲಿ ಇರುವುದಿಲ್ಲ ಎಂಬ ಭಾವನೆ ಪುರುಷರಲ್ಲಿದೆ. ಎಷ್ಟೇ ಪ್ರತಿಭೆ, ನೈಪುಣ್ಯತೆ, ಕೆಲಸದಲ್ಲಿ ತಲ್ಲೀನತೆ, ಬದ್ಧತೆ ಇದ್ದರೂ ಅಂತಹ ಮಹಿಳೆಯರನ್ನು ನಿರ್ಣಾಯಕ ಸ್ಥಾನಗಳಲ್ಲಿ ಕಾಣಲು ಪುರುಷ ಪ್ರಧಾನ ಮನಸ್ಥಿತಿ ಸುಲಭವಾಗಿ ಒಪ್ಪುವುದಿಲ್ಲ. ಇದೊಂದು ಸಾಮಾಜಿಕ ಸಮಸ್ಯೆಯಾಗಿದೆ. ಇದರ ಜೊತೆಗೆ ಅಂತಹ ಆಕಾಂಕ್ಷೆಗಳಿಲ್ಲದೇ ನೆಮ್ಮದಿಯಿಂದ ಕೆಲಸ ಮಾಡಿ ಒಂದಷ್ಟು ಸಂಪಾದನೆ ಮಾಡಿದರೆ ಸಾಕು ಎಂಬ ಮನಸ್ಥಿತಿಗೆ ಬಹಳಷ್ಟು ಮಹಿಳೆಯರು ಬಂದಿರುತ್ತಾರೆ. ಅದರಲ್ಲೇ ಸುಖ ಕಾಣುತ್ತಿದ್ದ ಮಹಿಳಾ ಕಾರ್ಮಿಕರಿಗೆ ಈಗ ಉಳಿವು ಅಳಿವಿನ ಪ್ರಶ್ನೆಯಾಗಿ ಈ ಕಾನೂನು ಕಾಡಲಿದೆ. ರಾತ್ರಿ ಪಾಳಿಯ ಕೆಲಸ ಆಯ್ಕೆಯಾಗಿದ್ದರೂ, ಸಾಮಾನ್ಯ ಅವಧಿಯಲ್ಲಿ 12ಗಂಟೆ ಕೆಲಸ ಮಾಡುವುದು ಮಹಿಳೆಯರ ಪಾಲಿಗೆ ದುಃಸ್ವಪ್ನವಾಗಿ ಕಾಡಲಿದೆ. ಮಹಿಳೆಯರನ್ನೇ ಉದ್ದೇಶಿಸಿ ಹೆಚ್ಚು ಒತ್ತು ಕೊಟ್ಟು ಹೇಳುತ್ತಿರುವ ಕಾರಣ ಮಹಿಳೆಯರಿಗೆ ಇರುವ ಹೆಚ್ಚುವರಿ ಕೌಟುಂಬಿಕ ಜವಾಬ್ದಾರಿಗಳು ಮತ್ತು ಪ್ರತಿ ತಿಂಗಳು ಅನುಭವಿಸುವ ಮುಟ್ಟಿನ ಯಾತನೆಗಳ ಸಂಬಂಧವಾಗಿ. ಈಗ 12 ಗಂಟೆ ದುಡಿಯಬೇಕಾದ ಕಾರಣಕ್ಕೆ ಅನಿವಾರ್ಯವಾಗಿ ಉದ್ಯೋಗ ತ್ಯಜಿಸುವವರ ಸಂಖ್ಯೆ ಹೆಚ್ಚಾಗಬಹುದು. ಇದು ಮಹಿಳೆಯರನ್ನು ಸಬಲರನ್ನಾಗಿಸುವ ಬದಲು ಮತ್ತೆ ಮನೆ, ಮಕ್ಕಳು ಎಂಬ ಕೌಟುಂಬಿಕ ಬಂಧನದಲ್ಲಿ ಕಳೆಯುವಂತೆ ಮಾಡಿದರೆ ಅಚ್ಚರಿಯಿಲ್ಲ. ವೈಜ್ಞಾನಿಕವಾಗಿಯೂ ಒಬ್ಬ ವ್ಯಕ್ತಿ ನಿರಂತರವಾಗಿ 12 ಗಂಟೆ ಕೆಲಸ ಮಾಡುವುದು ದೈಹಿಕ ಮಾನಸಿಕ ಆರೋಗ್ಯಕ್ಕೆ ಹಾನಿಕರವೆನ್ನುವುದು ತಿಳಿಯದ ವಿಷಯವೇನಲ್ಲ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ-5ರ ವರದಿಯಂತೆ 15-49 ವಯಸ್ಸಿನ ಮಹಿಳೆಯರಲ್ಲಿ 47.5%ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ, 65.5% ಮಕ್ಕಳು ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಮಹಿಳೆಯರ ಆರೋಗ್ಯದ ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ದುಡಿಯುವ ಅವಧಿಯನ್ನು ಹೆಚ್ಚಿಸಿರುವುದು, ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆಯ್ಕೆ ನೀಡಿರುವುದು ಅವೈಜ್ಞಾನಿಕವಾದದ್ದು.

ಈಗ ಕೆಲಸದ ಅವಧಿಯನ್ನು ಮೂರು ಗಂಟೆ ಹೆಚ್ಚಳ ಮಾಡಿದ್ದು, ಅವಧಿ ಮೀರಿ ಕೆಲಸ ಮಾಡುವ ಕೆಲಸಗಾರನಿಗೆ ದುಪ್ಪಟ್ಟು ದರ ಮಜೂರಿ ನೀಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದು ಹೆಚ್ಚುವರಿ ಕೆಲಸಕ್ಕೆ ತೋರಿಸುವ ಆಮಿಷ. ಆದರೆ ಸರ್ಕಾರಗಳಿಗೆ ಅಥವಾ ಕಾನೂನು ರೂಪಿಸುವವರಿಗೆ ದುಡಿಯುವ ಜನರ ಆರೋಗ್ಯ ಒಂದು ಕಾಳಜಿಯ ವಿಷಯವೇ ಅಲ್ಲವಾಗಿದೆ; ಆರೋಗ್ಯಕರ ಸಮಾಜ ನಿರ್ಮಾಣವಾಗಲು ದುಡಿಯುವ ವರ್ಗದ ದೈಹಿಕ, ಮಾನಸಿಕ ಆರೋಗ್ಯ ಚೆನ್ನಾಗಿರಬೇಕು ಎಂಬ ನಿಟ್ಟಿನಲ್ಲಿ ನಾವಿನ್ನೂ ಚಿಂತಿಸುತ್ತಿಲ್ಲ ಎಂಬುದಕ್ಕೆ ಈ ತರಹದ ಕಾರ್ಮಿಕ ವಿರೋಧಿ ಕಾನೂನುಗಳೇ ಉದಾಹರಣೆ. ಕಾರ್ಮಿಕ ಕಾನೂನುಗಳನ್ನು ರೂಪಿಸುವಾಗ ಕಾರ್ಮಿಕರ ಸಲಹೆಗಳನ್ನು ಪಡೆಯುವಷ್ಟು ಉದಾರ ಮನಸ್ಥಿತಿ ಪ್ರಭುತ್ವಕ್ಕೆ ಬರದ ಹೊರತು ಮಾಡಿದ ಯಾವ ಕಾನೂನೂ ಕಾರ್ಮಿಕ ಪರ ಆಗಲು ಸಾಧ್ಯವಿಲ್ಲ.

ಹೇಮಾ ವೆಂಕಟ್

ಹೇಮಾ ವೆಂಕಟ್
ಪತ್ರಕರ್ತರು


ಇದನ್ನೂ ಓದಿ: 1948ರ ಕಾರ್ಖಾನೆ ಕಾಯಿದೆಯ ಕರಾಳ ತಿದ್ದುಪಡಿ: ಕಾರ್ಮಿಕರ ಮೇಲಾಗುವ ಪರಿಣಾಮಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...