ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ದುಡಿವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಆಯೋಜಿಸಿದೆ. ಮಂಗಳವಾರ ಕೇರಳದ ಶಾಸಕಿ, ಮಾಜಿ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಅವರು ಅಂತಾರಾಷ್ಟ್ರೀಯ ದುಡಿವ ಮಹಿಳಾ ದಿನಾಚರಣೆಯ ಹಕ್ಕೊತ್ತಾಯ ಜಾಥಾ ಮತ್ತು ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು.
”ಎಲ್ಲ ಮಹಿಳೆಯರ ಐಕ್ಯತೆ ಚಿರಾಯುವಾಗಲಿ, ನಾವೆಲ್ಲರೂ ಒಂದಾಗಿ ನ್ಯಾಯಕ್ಕಾಗಿ, ಮಾನವ ಹಕ್ಕುಗಳಿಗಾಗಿ ಹೋರಾಡುತ್ತೇವೆ” ಎಂದು ಘೋಷಣೆ ಕೂಗುತ್ತಾ ಕೆಕೆ ಶೈಲಜಾರವರು ಸಮಾವೇಶಕ್ಕೆ ಚಾಲನೆ ನೀಡಿದರು. ‘ಸಂವಿಧಾನವೇ ಉಸಿರು ಬಹುತ್ವವೇ ಬದುಕು’ ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಈ ಸಮಾವೇಶವನ್ನು ಆಯೋಜಿಸಿದೆ.
ಇದನ್ನೂ ಓದಿ: ಸುಳ್ಳು ಸುದ್ದಿ ಪ್ರಸಾರ ಆರೋಪ; ಕೇರಳದ ಏಷ್ಯಾನೆಟ್ ನ್ಯೂಸ್ ಕಚೇರಿ ಮೇಲೆ ಪೊಲೀಸ್ ರೈಡ್
ಸಮಾವೇಶ ಉದ್ಘಾಟಿಸಿದ ಬಳಿಕ ಮಾತನಾಡಿದ ಶೈಲಜಾ ಟೀಚರ್, ”ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು ಹರಣವಾಗುತ್ತಿದ್ದು, ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ” ಎಂದು ಆತಂಕ ವ್ಯಕ್ತಪಡಿಸಿದರು.
”ಇಂದು ಮನುಸ್ಮೃತಿಯ ಪರವಾದ ಆಡಳಿತ ನಡೆಸಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ನಿರಂತರವಾಗಿ ಕಿತ್ತುಕೊಳ್ಳಲಾಗುತ್ತಿದೆ. ಇಂದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಆಡಳಿತ ನಡೆಯುತ್ತಿದೆ. ಧಾರ್ಮಿಕ ಮೂಲಭೂತವಾದ ನಮ್ಮ ದೇಶದ ಬಹಳ ದೊಡ್ಡ ಶತ್ರುವಾಗಿದೆ. ಬಿಲ್ಕಿಸ್ಬಾನು ಪ್ರಕರಣದಲ್ಲಿ ಏನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಗುಜರಾತ್ ಸರ್ಕಾರ ಇಂತಹ ಕೊಲೆಗಡುಕರು ಮತ್ತು ಅತ್ಯಾಚಾರಿಗಳನ್ನು ಸನ್ನಡತೆ ಆಧಾರದ ಮೇಲೆ ಅವರನ್ನು ಉತ್ತಮ ವ್ಯಕ್ತಿಗಳು ಎಂದು ಬಿಡುಗಡೆ ಮಾಡಿದೆ. ಹೀಗಾಗಿ ಅವರು ಇಂದು ಮುಕ್ತವಾಗಿ ಎಲ್ಲೆಡೆ ತಿರುಗಾಡಿಕೊಂಡಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
”ಭಾರತದಲ್ಲಿ ಇಂದು ಮಕ್ಕಳ ಸಾವುಗಳು, ಶಿಶು ಮರಣ, ಹೆರಿಗೆಯ ಸಂದರ್ಭದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಾವುಗಳು ಸಂಭವಿಸುತ್ತಿವೆ. ನಿರಂತರ ಹೋರಾಟದ ಫಲವಾಗಿ ಶಿಶು ಮತ್ತು ತಾಯಿ ಮರಣದ ಪ್ರಕರಣಗಳು ಕಡಿಮೆ ಆಗಿವೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯ. ಊಳಿಗಮಾನ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧವಾಗಿ ತಮ್ಮ ಎಲ್ಲ ಬಗೆಯ ಹಕ್ಕುಗಳಿಗಾಗಿ ತಮಗೆ ಬೇಕಾಗಿರುವ ಶಿಕ್ಷಣ, ಮತದಾನ, ಸಮಾನತೆ, ಸಮಾನವಾದ ಅವಕಾಶಗಳ ಹಕ್ಕಿಗಾಗಿ ಮಹಿಳೆಯರು ಹೋರಾಟ ಮಾಡಿದ ಫಲವಾಗಿ ನಾವು ಇಲ್ಲಿ ಸೇರಿ ಚರ್ಚಿಸಲು ಸಾಧ್ಯವಾಗಿದೆ” ಎಂದರು.
”ಆಸ್ತಿ ಉಳ್ಳವರಾಗಿರಲಿ ಅಥವಾ ಇಲ್ಲದವರಾಗಿರಲಿ ಎಲ್ಲ ಮಹಿಳೆಯರು ಸಮಾನವಾಗಿರಬೇಕು. ಸಮಾನವಾದಂತಹ ಹಕ್ಕುಗಳಿರಬೇಕು. ಶಿಕ್ಷಣ, ಉದ್ಯೋಗ ಮತ್ತು ಮತದಾನಕ್ಕೆ ಪ್ರಬಲ ಹೋರಾಟ ನಡೆಯಿತು” ಎಂಬುದನ್ನು ಮರೆಯಲಾಗದು” ಎಂದು ಹೇಳಿದರು.
”ಭಾರತದ ಸಂವಿಧಾನ ಅತ್ಯದ್ಭುತ ಸಂವಿಧಾನವಾಗಿದೆ. ಇಡೀ ಪ್ರಪಂಚದಲ್ಲಿರುವಂತಹ ಅತ್ಯುತ್ತಮ ಪ್ರಜಾತಾಂತ್ರಿಕ ಮೌಲ್ಯಗಳನ್ನು ಇಟ್ಟುಕೊಂಡು ನಮ್ಮ ಸಂವಿಧಾನ ರಚನೆಯಾಗಿದೆ. ಇಂತಹ ಸಂವಿಧಾನ ಇಂದು ಅಪಾಯದಲ್ಲಿದ್ದು ಇದನ್ನು ಸಂರಕ್ಷಣೆ ಮಾಡಬೇಕಾಗಿದೆ” ಎಂದು ಶೈಲಜಾ ಎಚ್ಚರಿಸಿದರು.
ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವಿದ್ಯಾ ಕುಮಾರಿ ಅವರು, ”ಮಹಿಳೆ ಉನ್ನತ ಉದ್ಯೋಗದಲ್ಲಿದ್ದಾರೆ, ಸಾಧನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಗೌರವ ಸಿಗಬಾರದು. ನಮ್ಮ ಸಮಾಜದ ಎಲ್ಲ ಮಹಿಳೆಯರಿಗೂ ಗೌರವ ಸಿಗುವಂತಾಗಬೇಕು. ಕುಟುಂಬ ನಿರ್ವಹಣೆ ಎಂಬುದು ಸುಲಭದ ಮಾತಲ್ಲ. ಅದಕ್ಕಾಗಿ ಇಡೀ ಬದುಕನ್ನು ಸವೆಸುವ ಎಲ್ಲ ಮಹಿಳೆಯರನ್ನು ಇಡೀ ಸಮಾಜ ಗೌರವಿಸಬೇಕು. ಆಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ” ಎಂದು ಹೇಳಿದರು.
ಈ ಮೆರವಣಿಗೆ ಉದ್ಘಾಟನೆಗೂ ಮುನ್ನ ಒಕ್ಕೂಟದ ಸಂಗಾತಿಗಳೆಲ್ಲರೂ ಸೇರಿ ‘ತೂರಬೇಡಿ ಗಾಳಿಗೆ ಹೆಣ್ತನದ ಘನತೆ’ ಆಶಯ ಗೀತೆ ಹಾಡಿದರು. ಟೌನ್ಹಾಲ್ ಸರ್ಕಲ್ನಿಂದ ಅಮಾನಿಕೆರೆ ಗಾಜಿನಮನೆಯವರೆಗೂ ವಿದ್ಯಾರ್ಥಿಗಳು, ಮಹಿಳೆಯರು, ಬಾಲ್ಯ ವಿವಾಹ, ಅತ್ಯಾಚಾರ, ಕೌಟುಂಬಿಕ ಹಿಂಸೆಯ ವಿರೋಧಿಸಿ ಬರೆದಿದ್ದ ಪ್ಲಕಾರ್ಡ್ಸ್ ಹಿಡಿದು ಮೆರವಣಿಗೆ ನಡೆಸಿದರು. ನಾನಾ ಶಾಲಾ ಮಕ್ಕಳು ಕೋಲಾಟ, ನೃತ್ಯದ ಮೂಲಕ ಅರಿವು ಮೂಡಿಸಿದರೆ, ‘ಒಂದಲ್ಲ ಒಂದು ದಿನ ಈ ನೆಲದ ಹೆಣ್ಣುಗಳು ಮೆರವಣಿಗೆ ಹೊರಡುತ್ತಾರೆ’ ಎಂದು ಹಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆ ಜಾಥಾದಲ್ಲಿ ಹಿರಿಯ ಪತ್ರಕರ್ತೆ ಡಾ. ವಿಜಯಾ, ಸಾಮಾಜಿಕ ಹೋರಾಟಗಾರ್ತಿ ಅಕ್ಕೈಪದ್ಮಸಾಲಿ, ಸಾಹಿತಿ ಬಾ ಹ ರಮಾಕುಮಾರಿ, ಕರ್ನಾಟಕ ರಾಜ್ಯ ಮಹಿಳಾ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ಮಹಾಸಭಾದ ಹಂದಿಜೋಗಿ ರಾಮಕ್ಕ, ಪೌರಕಾರ್ಮಿಕ ಸಂಘಟನೆಯ ಶ್ವೇತಾ, ಬೀಡಿ ಕಾರ್ಮಿಕರ ಸಂಘದ ಶಹತಾಜ್, ಆಸಿಡ್ ವಾರಿಯರ್ ಜಯಲಕ್ಷ್ಮಿ ಚಿಕ್ಕನಾಯಕನಹಳ್ಳಿ ಹಾಗೂ ಲಿಂಗಾಂತರಿ ಸಮುದಾಯದ ದೀಪಿಕಾ ಭಾಗಿಯಾಗಿದ್ದರು.
ಇದನ್ನೂ ಓದಿ: ಕೆಲಸದ ಅವಧಿ ಹೆಚ್ಚಳ: ಐತಿಹಾಸಿಕ ಹೋರಾಟದ ಆಶಯ, ಯಶಸ್ಸು ಎರಡನ್ನೂ ಈ ಕಾನೂನು ನುಂಗಿ ಹಾಕಲಿದೆ