Homeಮುಖಪುಟಬೀಳಗಿಯಲ್ಲಿ ನಿರಾಣಿಯ ಹಣದ ಹೊಳೆ; ಕೈ-ಕಮಲದ ನಡುವೆ ತೀವ್ರ ಪೈಪೋಟಿ

ಬೀಳಗಿಯಲ್ಲಿ ನಿರಾಣಿಯ ಹಣದ ಹೊಳೆ; ಕೈ-ಕಮಲದ ನಡುವೆ ತೀವ್ರ ಪೈಪೋಟಿ

- Advertisement -
- Advertisement -

ಆಲಮಟ್ಟಿ ಮುಳುಗಡೆಯ ಸಂತ್ರಸ್ತರ ಕ್ಷೇತ್ರ ಎನಿಸಿಕೊಂಡಿರುವ ಬೀಳಗಿ ಮತಕ್ಷೇತ್ರ, ಬಾಗಲಕೋಟೆ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಹಿಂದೆ ಜಮಖಂಡಿಯ ಉಪತಾಲ್ಲೂಕಾಗಿದ್ದ ಬೀಳಗಿ, 1959ರಲ್ಲಿ ಪ್ರತ್ಯೇಕ ತಾಲ್ಲೂಕಾಗಿ ರಚನೆಯಾಗಿದೆ. ಕಂಬಳಿ ತಯಾರಿಕೆಗೆ ಬೀಳಗಿ ತಾಲೂಕಿನ ಕುಂದರಗಿ ಗ್ರಾಮ ಬಹಳ ಖ್ಯಾತಿ ಪಡೆದಿದೆ.

ಘಟಪ್ರಭಾ ನದಿ ದಡದಲ್ಲಿರುವ ಬೀಳಗಿ ಕ್ಷೇತ್ರದಲ್ಲಿ ಚಾಲುಕ್ಯ ಶಿಲ್ಪ ಶೈಲಿಯಲ್ಲಿರುವ ರಾಮಲಿಂಗೇಶ್ವರ, ಕಲ್ಮೇಶ್ವರ ಹಾಗೂ ರಾಮಲಿಂಗಪ್ಪ ದೇವಾಲಯಗಳಿವೆ. ಇಲ್ಲಿ ಕ್ರಿ.ಶ.12ನೇ ಶತಮಾನದ ಜೋಪರಾರ ಎಂಬುವವನಿಗೆ ಸಂಬಂಧಿಸಿದ ಶಿಲಾ ಶಾಸನವೊಂದು ದೊರೆತಿದೆ. ಈ ಕ್ಷೇತ್ರದ ವ್ಯಾಪ್ತಿಗೆ ಬರುವ ತುಳಸಿಗಿರಿಯ ಹನಮಂತ ದೇವರ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಭಕ್ತರು ಬರುತ್ತಾರೆ.

ಇನ್ನು ಈ ಬೀಳಗಿ ತಾಲೂಕಿನ ಹೆಚ್ಚಿನ ಭೂಪ್ರದೇಶ ಎರೆಮಣ್ಣಿನಿಂದ ಕೂಡಿದೆ. ನೀರಾವರಿ ಸೌಲಭ್ಯ ಹೇರಳವಾಗಿರುವುದರಿಂದ ತಾಲ್ಲೂಕಿನ ಬಹಳಷ್ಟು ಜನರು ವ್ಯವಸಾಯವನ್ನೇ ನಂಬಿಕೊಂಡಿದ್ದಾರೆ. ಅದರಲ್ಲೂ ಈ ತಾಲೂಕಿನಾದ್ಯಂತ ಕಬ್ಬು ಬೆಳೆಗಾರರು ಹೆಚ್ಚಿದ್ದಾರೆ. ಅದೇ ರೀತಿ ತಾಲ್ಲೂಕಿನಲ್ಲಿ ಹಲವು ಸಕ್ಕರೆ ಕಾರ್ಖಾನೆಗಳು ಇವೆ.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 2 ಟಿಎಂಸಿ ನೀರನ್ನು ಬಳಸಿಕೊಂಡು ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿರುವುದರಿಂದ ಇಲ್ಲಿಯ ರೈತಾಪಿ ವರ್ಗದ ಜನರಿಗೆ ಅನಕೂಲವಾಗಲಿದೆ.

ರಾಜಕೀಯ ಇತಿಹಾಸ:

ಬೀಳಗಿ ಮತಕ್ಷೇತ್ರದಲ್ಲಿ 1957ರಿಂದ 2018ರವರೆಗೆ ಒಟ್ಟು 14 ವಿಧಾನಸಭೆಯ ಚುನಾವಣೆಗಳು ನಡೆದಿವೆ. ಇದರಲ್ಲಿ 9 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಉಳಿದಂತೆ ಬಿಜೆಪಿ ಮೂರು ಬಾರಿ, ಜನತಾ ಪಕ್ಷ ಮತ್ತು ಜನತಾ ದಳ ತಲಾ ಒಂದೊಂದು ಬಾರಿ ಗೆದ್ದಿವೆ.

ಬೀಳಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 1957ರಿಂದ 1983ರ ವರೆಗೂ ಸತತವಾಗಿ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಕ್ಷೇತ್ರದಲ್ಲಿ ದೇಸಾಯಿ ಕುಟುಂಬದ ಹೆಸರು ಅಂದಿನಿಂದ ಇಂದಿನವರೆಗೂ ಜನಮಾನಸದಲ್ಲಿ ಉಳಿದಿದೆ. ಈ ಕುಟುಂಬದ ರಾಚಪ್ಪ ಮಲ್ಲಪ್ಪ ದೇಸಾಯಿ ಅವರು 1957, 1962, ಹಾಗೂ 1967ರ ಚುನಾವಣೆಗಳಲ್ಲಿ ಹ್ಯಾಟ್ರಿಕ್‌ ಗೆಲುವು ಕಂಡಿದ್ದಾರೆ. 1972ರ ಚುನಾವಣೆಯಲ್ಲಿ ಬಿಜೆ ಮರಿಸಿದ್ದಪ್ಪ ಎನ್ನುವವರು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದರು. 1978 ಮತ್ತು 1983 ರಲ್ಲಿ ಸಿದ್ದನಗೌಡ ಸೋಮನಗೌಡ ಪಾಟೀಲ ಎಂಬುವವರು ಸತತ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದರು.

ಕಾಂಗ್ರೆಸ್‌ನ ಈ ಗೆಲುವಿಗೆ ಮೊದಲ ಬ್ರೇಕ್ ಬಿದ್ದದ್ದು 1985ರ ಚುನಾವಣೆಯಲ್ಲಿ. ಅದೇ ರೀತಿ ಸಿದ್ದನಗೌಡ ಸೋಮನಗೌಡ ಪಾಟೀಲ ಅವರ ಹ್ಯಾಟ್ರಿಕ್ ಗೆಲುವನ್ನು ತಪ್ಪಿಸಿದ ಚುನಾವಣೆ ಇದಾಗಿತ್ತು. ಕಾಂಗ್ರೆಸ್‌ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಸೋಲು ಅನುಭವಿಸುತ್ತದೆ. ಜನತಾ ಪಕ್ಷದಿಂದ ಅಭ್ಯಥಿಯಾಗಿದ್ದ ವೆಂಕಪ್ಪ ಬಾಬುರೆಡ್ಡಿ ತುಂಗಳ ಅವರು ಗೆಲುವು ಸಾಧಿಸಿದರು.

1989ರ ಚುನಾವಣೆಯಲ್ಲಿ ಯಳ್ಳಿಗುತ್ತಿ ಗಂಗಾಧರಪ್ಪ ಗುರುಸಿದ್ದಪ್ಪ ಅವರು ಜನತಾ ದಳದಿಂದ ಸ್ಪರ್ಧಿಸಿ ಗೆದ್ದರು. ಆ ಬಳಿಕ 1994ರ ಚುನಾವಣೆಯಲ್ಲಿ ಜೆ ಟಿ ಪಾಟೀಲ ಅವರ ಗೆಲುವಿನ ಮೂಲಕ ಕಾಂಗ್ರೆಸ್‌ ಪಕ್ಷ ಬೀಳಗಿಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. 1999ರ ಚುನಾವಣೆಯಲ್ಲೂ ಅವರು ಕಾಂಗ್ರೆಸ್‌ ಗೆಲುವನ್ನು ಮುಂದುವರಿಸಿದರು. ಈ ವೇಳೆಗೆ ಕ್ಷೇತ್ರದಲ್ಲಿ ಬಿಜೆಪಿ ತನ್ನ ಸಂಘಟನೆಯನ್ನು ಚೆನ್ನಾಗಿಯೇ ಕಟ್ಟಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕಾಂತ್‌ ಕುಲಕರ್ಣಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಮುಂದೆ 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಮುರಗೇಶ ನಿರಾಣಿ, ಕಾಂಗ್ರೆಸ್ ಹುರಿಯಾಳು ಜೆಟಿ ಪಾಟೀಲ್ ಅವರ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿದರು. ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ ನಿರಾಣಿ, ಜೆಟಿ ಪಾಟೀಲ್ ವಿರುದ್ಧ 17,325 ಮತಗಳ ಅಂತರಿಂದ ಗೆಲುವು ಕಂಡರು.

2008ರ ಚುನಾವಣೆಯಲ್ಲಿ ಮತ್ತೆ ಮುರುಗೇಶ ನಿರಾಣಿ ಬಿಜೆಪಿ ಪಕ್ಷದಿಂದ ಗೆಲುವು ಕಂಡರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥಿಯಾಗಿದ್ದ ಅಜಯ್‌ ಕುಮಾರ್‌ ಸರನಾಯಕ ಅವರು ಪ್ರಬಲ ಪೈಪೋಟಿ ನೀಡಿ ಕೇವಲ 3,124 ಮತಗಳ ಅಂತರದಿಂದ ನಿರಾಣಿ ವಿರುದ್ಧ ಸೋಲುಣಬೇಕಾಯಿತು. ಗೆದ್ದ ನಿರಾಣಿ ಮಂತ್ರಿಯಾದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ಜೆ.ಟಿ ಪಾಟೀಲ ಅವರನ್ನು ಕಣಕ್ಕಿಳಿಸಿದರು. ಈ ವೇಳೆ ನಿರಾಣಿಯ ಹ್ಯಾಟ್ರಿಕ್‌ ಗೆಲುವಿಗೆ ಜೆ.ಟಿ ಪಾಟೀಲ ಬ್ರೇಕ್ ಹಾಕಿದರು. ನಿರಾಣಿ ವಿರುದ್ಧ 11,238 ಮತಗಳ ಅಂತರದಿಂದ ಗೆದ್ದ ಜೆಟಿ ಪಾಟೀಲ್ ಅವರು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಕಳೆದ ಬಾರಿಯ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುರುಗೇಶ ನಿರಾಣಿ 85,135 ಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್‌ ಅಭ್ಯರ್ಥಿ ಜೆ.ಟಿ ಪಾಟೀಲ್ ತೀವ್ರ ಪೈಪೋಟಿ ನೀಡಿ ಕೇವಲ 4,811 ಮತಗಳ ಅಂತರದಿಂದ ಸೋಲುಂಡರು. ಬಿಜೆಪಿ ಸರ್ಕಾರದಲ್ಲಿ ನಿರಾಣಿ ಎರಡನೇ ಬಾರಿ ಮಂತ್ರಿಯಾದರು. ಈ ಇಬ್ಬರು ಅಭ್ಯರ್ಥಿಗಳು ಈಗಾಗಲೇ ಮೂರು ಬಾರಿ ಶಾಸಕರಾಗಿದ್ದು, ಮತ್ತೆ ಈ ಬಾರಿಯೂ ಕಣದಲ್ಲಿದ್ದಾರೆ. ಮತ್ತೆ ಇಬ್ಬರ ನಡುವೆ ಪ್ರಬಲ ಸ್ಪರ್ಧೆ ಏರ್ಪಡಲಿದೆ.

ಜಾತಿ ಲೆಕ್ಕಾಚಾರ:

ಬೀಳಗಿ ಮತ ಕ್ಷೇತ್ರದಲ್ಲಿ ಒಟ್ಟು 2,23,560 ಮತದಾರರಿದ್ದಾರೆ. ಪುರುಷ ಮತದಾರರು- 1,11,025, ಮಹಿಳೆಯರು-1,12,520 ಹಾಗೂ ಇತರೆ 15 ಮತದಾರರಿದ್ದಾರೆ.

ಬೀಳಗಿ ಮತಕ್ಷೇತ್ರದಲ್ಲಿ 2,23,560 ಮತದಾರರಿದ್ದು, ಲಿಂಗಾಯತ, ರಡ್ಡಿ, ಕುರುಬ, ಗಾಣಿಗ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಈವರೆಗಿನ ಚುನಾವಣೆಗಳಲ್ಲಿ ಬಹುತೇಕರು ಲಿಂಗಾಯತ ಹಾಗೂ ರಡ್ಡಿ ಸಮುದಾಯದವರೇ ಗೆಲುವು ಸಾಧಿಸಿದ್ದಾರೆ. ಇನ್ನು ಪರಿಶಿಷ್ಟ ಜಾತಿ, ಪಂಗಡ, ವಾಲ್ಮೀಕಿ, ಲಂಬಾಣಿ, ಮರಾಠ ಸಮುದಾಯದ ಮತಗಳೂ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತವೆ.

ಸಾಂಪ್ರದಾಯಕ ಎದುರಾಳಿಗಳ ನಡುವೆಯೇ ಮತ್ತೊಂದು ಬಿಗ್ ಫೈಟ್

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಈ ಬಾರಿಯೂ ಬಿಜೆಪಿಯಿಂದ ಮುರಗೇಶ್ ನಿರಾಣಿಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್‌ನಲ್ಲಿ ಜೆಟಿ ಪಾಟೀಲ್, ಹಾಗೂ ಎಸ್‌ಆರ್‌ ಪಾಟೀಲ್ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಜೆಟಿ ಪಾಟೀಲ್‌ಗೆ ಟಿಕೆಟ್ ನೀಡಲಾಗಿದೆ. ಇನ್ನು ಜೆಡಿಎಸ್ ಪಕ್ಷದಿಂದ ರುಕ್ಮುದ್ದೀನ್‌ ಸೌದಗಲ್‌ ಎನ್ನುವವರಿಗೆ ಟಿಕೆಟ್ ನೀಡಲಾಗಿದೆ.

ನಿರಾಣಿಯ ಹಣದ ಹೊಳೆಗೆ ಮರುಳಾಗುವರೇ ಮತದಾರರು?

ಬೀಳಗಿ ಮತಕ್ಷೇತ್ರದಿಂದ ಮುರಗೇಶ್ ನಿರಾಣಿ ಅವರು ಈಗಾಗಲೇ ನಾಲ್ಕು ಬಾರಿ ಸ್ಪರ್ಧೆ ಮಾಡಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲೂ ನಿರಾಣಿ ಹೆಸರು ಮುಂಚೂಣಿಯಲ್ಲಿದೆ. ಆದರೆ ಅವರು ಈ ಬಾರಿ ಬೀಳಗಿ ಕ್ಷೇತ್ರದಿಂದ ಗೆಲುವು ಸಾಧಿಸುವುದು ಅಷ್ಟು ಸುಲಭವಿಲ್ಲ. ಏಕೆಂದರೆ, ಕ್ಷೇತ್ರದಲ್ಲಿ ಆಡಳೀತ ವಿರೋಧಿ ಅಲೆ ಜೋರಾಗಿಯೇ ಇದೆ.

ಕ್ಷೇತ್ರದ ಬಹಳಷ್ಟು ಹಳ್ಳಿಗಳ ಮತದಾರರು ಹೇಳುವುದೊಂದೇ ಮಾತು, ‘ನಿರಾಣಿ ಸಾಹೇಬ್ ಓಟ್ ಕೇಳಾಕ್ ಅಷ್ಟೇ ನಮ್ಮೂರಿಗೆ ಬರ್ತಾನ ರೀ, ಆರಿಸಿ ಬಂದ್ಮೇಲೆ ಇತ್ಲಾಗ ತಲೆನೇ ಹಾಕಲ್ಲ, ಇನ್ನ ನಮ್ಮ ಕಷ್ಟ ಯಾವಾಗ ಕೇಳತಾನ್ರೀ ಅಂವಾ” ಎನ್ನುತ್ತಾರೆ. ಇನ್ನು ನಿರಾಣಿ ರಾಜಕಾರಣಿ ಮಾತ್ರ ಅಲ್ಲ ಉದ್ಯಮಿಯೂ ಹೌದು. ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಅನೇಕ ಕಾರ್ಖಾನೆಗಳಿವೆ. ಕ್ಷೇತ್ರದ ರೈತರೊಂದಿಗೆ ಒಳ್ಳೆಯ ಸಂಬಂಧ ಹೊಂದಿರಬೇಕಾಗಿದ್ದ ಉದ್ಯಮಿ ನಿರಾಣಿ, ಸ್ಥಳಿಯ ರೈತ ಮುಖಂಡರ ವಿರೋಧ ಕಟ್ಟಿಕೊಂಡಿದ್ದಾರೆ.

ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದವರು 2ಎ ಮೀಸಲಾತಿಗಾಗಿ ಹೋರಾಟ ನಡೆಸಿದರು. ಆದರೆ ನಿರಾಣಿ ಅವರು ಮಂತ್ರಿ ಸ್ಥಾನಕ್ಕಾಗಿ ಸಮುದಾಯವನ್ನು ಹಾಗೂ ಸಮುದಾಯದ ಸ್ವಾಮೀಜಿಗಳನ್ನು ಬಳಸಿಕೊಂಡರೆ ಹೊರತು, ಸಮುದಾಯದ ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಲಿಲ್ಲ ಎನ್ನುವ ಆರೋಪ ಅವರ ಮೇಲಿದೆ. ಕೂಡಲಸಂಗಮದ ಗುರುಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಜೊತೆಗಿನ ಗುದ್ದಾಟದಲ್ಲಿ ಸ್ವಾಮೀಜಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಸಮುದಾಯ ಅವರ ಮೇಲೆ ಕೋಪಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನು ಕ್ಷೇತ್ರದಲ್ಲಿ ಕುರುಬ ಸಮುದಾಯ ಅತಿ ಹೆಚ್ಚು ಮತದಾರರನ್ನು ಹೊಂದಿದ್ದು, ಈ ಸಮುದಾಯದ ಅತಿಹೆಚ್ಚು ಮತಗಳನ್ನು ಸೆಳೆದರೆ ಮಾತ್ರ ನಿರಾಣಿಗೆ ಗೆಲುವಿನ ಸಾಧ್ಯತೆ ಇದೆ. ಪ್ರತಿಸ್ಪರ್ಧಿ ಅಭ್ಯರ್ಥಿ ರೆಡ್ಡಿ ಸಮುದಾಯಕ್ಕೆ ಸೇರಿರುವುದರಿಂದ ಆ ಜಾತಿಯ ಮತಗಳು ಹೆಚ್ಚು ಸೆಳೆಯಲು ಸಾಧ್ಯವಾಗದೇ ಹೋಗಬಹುದು.

ಒಳ ಮೀಸಲಾತಿ ವಿಚಾರವಾಗಿ ರಾಜ್ಯದಲ್ಲಿ ಬಂಜಾರ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದು, ಬೀಳಗಿ ಕ್ಷೇತ್ರದಲ್ಲೂ ಅದರ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿ ಸಮುದಾಯಗಳ ಮತಗಳನ್ನಾದರೂ ಅತಿಹೆಚ್ಚಿನ ಪ್ರಮಾಣದಲ್ಲಿ ಪಡೆಯಬೇಕಾಗುತ್ತದೆ.

ಇಷ್ಟೆಲ್ಲಾ ಸೋಲಿನ ಭೀತಿ ಎದುರಿಸುತ್ತಿರುವ ಮುರಗೇಶ್ ನಿರಾಣಿ ಅವರು ಗೆಲ್ಲಲೇ ಬೇಕು ಎನ್ನುವ ಹಠದಿಂದ ಹಣದ ಹೊಳೆ ಹರಿಸಲು ಸಿದ್ದರಾಗಿದ್ದಾರೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಖಾನೆ ಸಿಬ್ಬಂದಿ ಕ್ವಾರ್ಟರ್ಸ್‌ನಲ್ಲಿ ನಿರಾಣಿಗೆ ಸಂಬಂಧಿಸಿದ 21.45 ಲಕ್ಷ ಮೌಲ್ಯದ 963 ಸಾಂಪ್ರದಾಯಿಕ ಬೆಳ್ಳಿ ದೀಪಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಚಾರವಾಗಿ ಮುರುಗೇಶ್ ನಿರಾಣಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ಕೆಲವಡೆ ಆಮಿಷ ಒಡ್ಡುವ ಮೂಲಕ ಮತ ಗಳಿಸಲು ನಿರಾಣಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಎದುರಾಳಿಯ ತಂತ್ರಕ್ಕೆ ಪ್ರತಿತಂತ್ರ; ಜೆ.ಟಿ ಪಾಟೀಲ್ ಗೆಲುವು ಸಾಧ್ಯವೇ?

ಕಾಂಗ್ರೆಸ್‌ನ ಹಿರಿಯ ಹುರಿಯಾಳು ಜೆಟಿ ಪಾಟೀಲ್ ಅವರು ಈ ಕ್ಷೇತ್ರದಿಂದ ಐದು ಬಾರಿ ಸ್ಪರ್ಧಿಸಿ, ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 1994ರಲ್ಲಿಯೇ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಜೆಟಿ ಪಾಟೀಲ್ ಆ ಬಳಿಕ ಮತ್ತೆ ಎರಡು ಬಾರಿ ಶಾಸಕರಾದರು. ಎದುರಾಳಿಯ ಹಣಬಲದ ಎದುರು ಅವರು ಎರಡು ಬಾರಿ ಸೋಲುಣಬೇಕಾಯಿತು. ಈ ಬಾರಿಯೂ ಎದುರಾಳಿ ಅಭ್ಯರ್ಥಿ ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಗೆಲ್ಲಲು ಜೆ.ಟಿ ಪಾಟೀಲ್ ಏನೇನು ಕಾರ್ಯತಂತ್ರ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಜೆ.ಟಿ ಪಾಟೀಲ್ ಅವರು ಕ್ಷೇತ್ರದ ಜನರೊಟ್ಟಿಗೆ ಬೆರೆಯುವ ರೀತಿ ವಿಶಿಷ್ಟವಾದದು. ಒಬ್ಬ ಜನನಾಯಕ ಜನರೊಟ್ಟಿಗೆ ಹೇಗೆ ಬೆರೆಯಬೇಕು ಎನ್ನುವುದನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಕ್ಷೇತ್ರದ ಪ್ರತಿ ಹಳ್ಳಿಗಳಲ್ಲೂ ಜನರು ಅವರನ್ನು ಊರ ಮಗನಂತೆ ಕಾಣುತ್ತಾರೆ. ಪ್ರತಿಹಳ್ಳಿಗಳಲ್ಲೂ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳ ಬಗ್ಗೆ ನೆನೆಯುತ್ತಾರೆ. ಇದು ಅವರಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇದೆ.

ಇನ್ನು ಜಾತಿಯಿಂದ ಜೆ.ಟಿ ಪಾಟೀಲ್ ಅವರು ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದ ಮತಗಳನ್ನು ಕ್ರೂಡೀಕರಿಸುವಲ್ಲಿ ಅವರ ಜೊತೆ ಕಾಂಗ್ರೆಸ್ ಹಿರಿಯ ಮುಖಂಡ ಎಸ್‌.ಆರ್ ಪಾಟೀಲ್ ಅವರು ಕೈಜೋಡಿಸಲಿದ್ದಾರೆ. ಪಂಚಮಸಾಲಿ ಲಿಂಗಾಯತ ಮತಗಳನ್ನು ಸೆಳೆಯುವದರಲ್ಲಿ ಎಸ್ ಆರ್ ಪಾಟೀಲ್ ಅವರಿಗೆ ಕಾಂಗ್ರೆಸ್‌ನ ಯುವ ಮುಖಂಡ ಬಸವಪ್ರಭು ಸರನಾಡಗೌಡ ಸಹಾಯವಾಗಬಲ್ಲರು. ಇನ್ನು ಕ್ಷೇತ್ರದಲ್ಲಿ ಅತಿಹೆಚ್ಚು ಕುರುಬ ಸಮುದಾಯದ ಮತಗಳಿರುವುದರಿಂದ ಆ ಸಮುದಾಯದ ಮತಗಳು ಯಾರ ಕಡೆ ವಾಲುತ್ತವೆ ಎನ್ನುವುದಿನ್ನು ಅಸ್ಪಷ್ಟ. ಇನ್ನುಳಿದ ಸಮುದಾಯಗಳು ಕಾಂಗ್ರೆಸ್‌ನತ್ತ ಒಲವು ಹೊಂದಿವೆ ಎನ್ನುವ ಮಾತುಗಳಿದ್ದರೂ, ಆ ಮತಗಳನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳಲು ಮುಂದಿನ ಕೆಲವು ದಿನಗಳಲ್ಲಿ ಜೆಟಿ ಪಾಟೀಲ್ ಯಾವ ತಂತ್ರ ರೂಪಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಕೈ-ಕಮಲದ ನಡುವಿನ ಜಿದ್ದಜಿದ್ದಿನಲ್ಲಿ ಸ್ಪರ್ಧೆಗಿಳಿದವರು..

ಈ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧಿಗಳು ಎದುರಾಳಿಯ ಮತ ವಿಂಗಡನೆ ಮಾಡಲು ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಸುವುದು ಮೊದಲಿನಿಂದಲೂ ವಾಡಿಕೆ ಇದೆ. ಈ ಬಾರಿಯೂ ಅದು ಮುಂದುವರೆಯಲಿದೆ. ಜೆಡಿಎಸ್ ಅಭ್ಯರ್ಥಿ ಮುಸ್ಲಿಂ ಸಮುದಾಯದ ರುಕ್ಮುದ್ದೀನ್‌ ಸೌದಗಲ್‌ ಎನ್ನುವವರು ಕಣದಲ್ಲಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ 2 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವಾಗದೇ ಹೋಗಬಹುದು.

ರೈತ ಸಂಘಟನೆ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ವಕೀಲ ಯಲ್ಲಪ್ಪ ನಿಂಗಪ್ಪ ಹೆಗಡೆ ಸ್ಪರ್ಧಾಳುವಾಗಿ ಕಣದಲ್ಲಿದ್ದಾರೆ. ಇವರು ಸಚಿವ ಮುರಗೇಶ್ ನಿರಾಣಿ ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಅವರ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಇದೀಗ ಈ ಭ್ರಷ್ಟಾಚಾರದ ವಿರುದ್ಧ ಮತ ಚಲಾಯಿಸಿ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಆರೋಪ ಮಾಡುತ್ತ ಮತ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ಈ ಡಬಲ್‌ ಇಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ: ದೇವನೂರ ಮಹಾದೇವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...