HomeUncategorizedಅಸ್ಸಾಂ ಎನ್‌ಆರ್‌ಸಿ: ಪೌರತ್ವ ನೋಂದಣಿಯಿಂದ ಹೊರಗುಳಿದ 7ಲಕ್ಷ ಮುಸ್ಲಿಮರು

ಅಸ್ಸಾಂ ಎನ್‌ಆರ್‌ಸಿ: ಪೌರತ್ವ ನೋಂದಣಿಯಿಂದ ಹೊರಗುಳಿದ 7ಲಕ್ಷ ಮುಸ್ಲಿಮರು

- Advertisement -
- Advertisement -

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಹೊರಗುಳಿದಿರುವ 19 ಲಕ್ಷ ಜನರಲ್ಲಿ 7 ಲಕ್ಷ ಮುಸ್ಲಿಮರು ಸೇರಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ, ಅಂದರೆ ಬರೊಬ್ಬರಿ 36% ಜನ ಮುಸ್ಲಿಮರು ಪೌರತ್ವದಿಂದ ಹೊರಗುಳಿದಿದ್ದಾರೆ ಎನ್ನುವುದು ಬಯಲಾಗಿದೆ.

ದೂರದರ್ಶನ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, 5 ಲಕ್ಷ ಬಂಗಾಳಿ ಹಿಂದೂಗಳು, 2 ಲಕ್ಷ ಅಸ್ಸಾಮಿ ಹಿಂದೂ ಗುಂಪುಗಳಾದ ಕೋಚ್-ರಾಜ್‌ಬೊಂಗ್‌ಶಿ, ದಾಸ್, ಕಲಿತಾ ಮತ್ತು ಸರ್ಮಾ (ಅಸ್ಸಾಮಿ) ಮತ್ತು 1.5 ಲಕ್ಷ ಗೂರ್ಖಾಗಳನ್ನು ರಿಜಿಸ್ಟರ್‌ನಿಂದ ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.

ಅಸ್ಸಾಂ ಆಗಸ್ಟ್ 31, 2019ರಂದು ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಪ್ರಕಟಿಸಿತ್ತು. ರಾಜ್ಯದಲ್ಲಿ ವಾಸಿಸುವ ದಾಖಲೆ ರಹಿತ ವಲಸಿಗರಿಂದ ಭಾರತೀಯ ನಾಗರಿಕರನ್ನು ಪ್ರತ್ಯೇಕಿಸುವ ಉದ್ದೇಶದಿಂದ ಈ ನೋಂದಾವಣಿಯನ್ನು ಮಾಡಲಾಗಿದೆ ಎಂದು ಅಸ್ಸಾಂ ಸರಕಾರ ಹೇಳಿಕೊಂಡಿದೆ. ಅಲ್ಲಿನ ನಿವಾಸಿಗಳು ತಾವು ಅಥವಾ ತಮ್ಮ ಪೂರ್ವಜರು ಅಸ್ಸಾಂನ್ನು ಮಾರ್ಚ್ 24, 1971ರ ಮಧ್ಯರಾತ್ರಿಯ ಮೊದಲು ಪ್ರವೇಶಿಸಿದ್ದೇವೆ ಎಂದು ಸಾಬೀತು ಮಾಡಬೇಕಾಗಿತ್ತು.

19 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳು ಅಥವಾ 5.77% ಅರ್ಜಿದಾರರು ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ. ಮಾಹಿತಿಯಲ್ಲಿ 15.5 ಲಕ್ಷ ಜನರ ಬಗ್ಗೆ ಸಿಎಂ ಉಲ್ಲೇಖಿಸಿದ್ದಾರೆ, ಆದರೆ ಇನ್ನುಳಿದ 3.5 ಲಕ್ಷ ವ್ಯಕ್ತಿಗಳು ಯಾರು ಎಂಬುವುದು ಸ್ಪಷ್ಟವಾಗಿ ತಿಳಿಸಿಲ್ಲ. ಸುಮಾರು ಐದು ಲಕ್ಷದಿಂದ ಆರು ಲಕ್ಷ ಜನರು 1971ರ ಮೊದಲು ಧಾರ್ಮಿಕ ಕಿರುಕುಳದ ಕಾರಣದಿಂದ ಬಾಂಗ್ಲಾದೇಶದಿಂದ ವಲಸೆ ಬಂದವರು ಎಂದು ಶರ್ಮಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ರಿಜಿಸ್ಟರ್‌ನಿಂದ ಹೊರಗಿಡಲ್ಪಟ್ಟವರಲ್ಲಿ ಮೂರು ಲಕ್ಷದಿಂದ ಆರು ಲಕ್ಷ ಜನರು ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯು 2014ರ ಡಿಸೆಂಬರ್ 31ರ ಒಳಗೆ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮುಸ್ಲಿಮರನ್ನು ಹೊರತುಪಡಿಸಿ ಆರು ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ತ್ವರಿತವಾಗಿ ನೀಡುವ ಗುರಿಯನ್ನು ಹೊಂದಿದೆ. ಪೌರತ್ವ ತಿದ್ದುಪಡಿ ಕಾಯಿದೆಯಡಿಯಲ್ಲಿ ರಾಜ್ಯವು ಕಡಿಮೆ ಸಂಖ್ಯೆಯ ಅರ್ಜಿಗಳನ್ನು ಪಡೆಯಲಿದೆ. ರಾಷ್ಟ್ರೀಯ ಪೌರತ್ವ ನೋಂದಣಿಗೆ ತಮ್ಮ ಹೆಸರನ್ನು ಸೇರಿಸಲು ಅರ್ಜಿ ಸಲ್ಲಿಸದಿರುವವರು ಪೌರತ್ವ ತಿದ್ದುಪಡಿ ಕಾಯ್ದೆಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರು. ಕಾಯ್ದೆಯಲ್ಲಿ ನಿರ್ದಿಷ್ಟ ದಿನಾಂಕದ ಬಗ್ಗೆ ಉಲ್ಲೇಖವಿದೆ. ಪೌರತ್ವ ತಿದ್ದುಪಡಿ ಕಾಯಿದೆಯು ಕಟ್-ಆಫ್ ದಿನಾಂಕದ ಮೊದಲು ದೇಶಕ್ಕೆ ಬಂದಿರುವ ಪುರಾವೆಗಳನ್ನು ಒದಗಿಸಬೇಕು ಎಂದು ಬಹಳ ಸ್ಪಷ್ಟವಾಗಿದೆ. ಯಾರಾದರೂ ರಾಷ್ಟ್ರೀಯ ನಾಗರಿಕರ ನೋಂದಣಿಗೆ ಅರ್ಜಿ ಸಲ್ಲಿಸದಿದ್ದರೆ, ಅವನು ಅಥವಾ ಅವಳು 2014ರ ಮೊದಲು ಭಾರತಕ್ಕೆ ಬಂದಿಲ್ಲ ಎಂದರ್ಥ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ ಕಾರ್ಯವನ್ನು ಇದುವರೆಗೆ ಅಸ್ಸಾಂನಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ನವೆಂಬರ್ 2019ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ನಾಗರಿಕರ ನೋಂದಣಿ ಮಾಡುವ ಪ್ರಕ್ರಿಯೆಯನ್ನು ಭಾರತದಾದ್ಯಂತ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದರು. ಈ ವೇಳೆ ವ್ಯಾಪಕ ವಿರೋಧ ಮತ್ತು ಪ್ರತಿಭಟನೆ ಭುಗಿಲೆದ್ದಿತ್ತು.

ರಾಷ್ಟ್ರೀಯ ಪೌರತ್ವ ನೋಂದಣಿಯು (ಎನ್‌ಆರ್‌ಸಿ) ದೇಶದ ಎಲ್ಲಾ ನಾಗರಿಕರ ವಿವರವನ್ನು ಒಳಗೊಂಡ ಪಟ್ಟಿಯಾಗಿದೆ. 1955ರ ಪೌರತ್ವ ಕಾಯ್ದೆಯಲ್ಲೇ (18ನೇ ಸೆಕ್ಷನ್‌ನ 1 ಮತ್ತು 2ನೇ ಉಪಸೆಕ್ಷನ್‌ಗಳು) ಎನ್‌ಆರ್‌ಸಿ ರಚನೆ ಮತ್ತು ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರಕಾರ 2003ರಲ್ಲಿ ವಾಜಪೇಯಿ ಸರ್ಕಾರವು ‘ರಾಷ್ಟ್ರೀಯ ಪೌರತ್ವ ನೋಂದಣಿ ನಿಯಮಗಳನ್ನು’ ರೂಪಿಸಿದೆ. ಈ ನಿಯಮಗಳ ಪ್ರಕಾರ ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೆ ತರಲಾಗಿದೆ. ದೇಶದಾದ್ಯಂತ ಎನ್‌ಆರ್‌ಸಿ ಜಾರಿಗೆ ತಂದರೂ, ಈ ನಿಯಮಗಳನ್ನೇ ಅನುಸರಿಸಬೇಕಾಗುತ್ತದೆ. ಇಲ್ಲದಿದ್ದರೆ ತಿದ್ದುಪಡಿ ತಂದು, ನೂತನ ನಿಯಮ ರೂಪಿಸಬೇಕಾಗುತ್ತದೆ.

‘ಎನ್‌ಆರ್‌ಸಿ ಅಂದರೆ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್’ ಭಾರತ ದೇಶದಲ್ಲಿ ಇರುವ ಎಲ್ಲಾ ಪ್ರಜೆಗಳೂ ತಾವು ಈ ದೇಶದವರು ಎಂದು ಸಾಬೀತು ಮಾಡಬೇಕು. ಒಂದು ವೇಳೆ ತಾವು ಭಾರತದ ಮೂಲದವರು ಎಂದು ಸಾಬೀತು ಮಾಡಲು ಸಾಧ್ಯವಾಗದವರನ್ನು ಸರ್ಕಾರ ಪ್ರತ್ಯೇಕ ಕೇಂದ್ರಗಳಲ್ಲಿ ಬಂಧಿಸಿ ಇಡುತ್ತೆ. ಈ ರೀತಿ ಬಂಧನದಲ್ಲಿ ಇರುವ ವಲಸಿಗರು ಸಿಎಎ ಕಾಯ್ದೆ ಅನ್ವಯ ಭಾರತದ ಪೌರತ್ವ ಪಡೆಯಲು ಅರ್ಹರೇ ಎಂದು ಪರಿಶೀಲನೆ ಮಾಡಲಿದೆ.

ಇದನ್ನು ಓದಿ: ಮಾ.21ರೊಳಗೆ ಚುನಾವಣಾ ಬಾಂಡ್‌ ಕುರಿತು ಸಂಪೂರ್ಣ ಮಾಹಿತಿ ಬಹಿರಂಗಗೊಳಿಸಿ: ಸುಪ್ರೀಂಕೋರ್ಟ್‌ನಿಂದ ಎಸ್‌ಬಿಐಗೆ ಖಡಕ್‌ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...