ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಮಾರ್ಚ್ 21ರೊಳಗೆ ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಖಡಕ್ ಆಗಿ ಸೂಚಿಸಿದೆ.
ಚುನಾವಣಾ ಬಾಂಡ್ಗಳನ್ನು ಖರೀದಿಸಿದ ದಾನಿಗಳನ್ನು ರಾಜಕೀಯ ಪಕ್ಷಗಳೊಂದಿಗೆ ಲಿಂಕ್ ಮಾಡುವ ಆಲ್ಫಾನ್ಯೂಮರಿಕ್ ಸೀರಿಯಲ್ ಕೋಡ್ ಸಹಿತ ಚುನಾವಣಾ ಬಾಂಡ್ಗಳ ಕುರಿತಾದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೂಚನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಈ ಕುರಿತು ಖಡಕ್ ಆದೇಶವನ್ನು ನೀಡಿದ್ದು, ಎಸ್ಬಿಐ ಬಾಂಡ್ಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿದೆ ಎಂಬುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಬ್ಯಾಂಕ್ ಎಲ್ಲಾ ವಿವರಗಳನ್ನು ಸಲ್ಲಿಸಿದೆ ಎಂದು ಮಾರ್ಚ್ 21ರಂದು ಸಂಜೆ 5 ಗಂಟೆಯೊಳಗೆ ತನ್ನ ಮುಂದೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಎಸ್ಬಿಐ ಆಯ್ದ ಮಾಹಿತಿಯನ್ನು ಮಾತ್ರ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಈ ಕುರಿತ ಎಲ್ಲಾ ವಿವರಣೆಗಳನ್ನು ಬಹಿರಂಗಪಡಿಸಬೇಕು. ಅದು ಖರೀದಿದಾರರು ಮತ್ತು ಚುನಾವಣಾ ಬಾಂಡ್ ಸ್ವೀಕರಿಸಿದ ರಾಜಕೀಯ ಪಕ್ಷದ ನಡುವಿನ ಸಂಪರ್ಕವನ್ನು ಬಹಿರಂಗಪಡಿಸಬೇಕು ಎಂದು ಹೇಳಿದೆ.
ಚುನಾವಣಾ ಬಾಂಡ್ಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ಬಾಂಡ್ಗಳ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಬ್ಯಾಂಕ್ಗೆ ಕೇಳಿದೆ ಮತ್ತು ಈ ಕುರಿತು ಮುಂದಿನ ಆದೇಶಗಳಿಗಾಗಿ ಕಾಯಬಾರದು ಎಂದು ಪೀಠ ಹೇಳಿದೆ. ಚುನಾವಣಾ ಬಾಂಡ್ ಸಂಖ್ಯೆಗಳನ್ನು ಒಳಗೊಂಡಂತೆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಎಸ್ಬಿಐಗೆ ನಾವು ಕೇಳಿದ್ದೇವೆ ಎಂದು ಪೀಠವು ವಿಚಾರಣೆಯ ಸಮಯದಲ್ಲಿ ಮೌಖಿಕವಾಗಿ ಹೇಳಿದೆ.
ಏನನ್ನು ಬಹಿರಂಗಪಡಿಸಬೇಕೆಂದು ಹೇಳಿ ನಾವು ನೀಡುತ್ತೇವೆ ಎಂಬ ಧೋರಣೆ ಎಸ್ಬಿಐ ಹೊಂದಿದೆ. ಇದು ಸರಿಯಲ್ಲ, ನಾವು ಎಲ್ಲಾ ವಿವರಗಳು ಎಂದು ಹೇಳಿದಾಗ ಎಲ್ಲಾ ಲಭ್ಯ ಮಾಹಿತಿ ಒದಗಿಸಬೇಕು ಎಂದು ಸಿಜೆಐ ಇದೇ ವೇಳೆ ಹೇಳಿದ್ದಾರೆ.
ಕಳೆದ ವಾರ ತನ್ನ ನಿರ್ದೇಶನಗಳಿಗೆ ಅನುಸಾರವಾಗಿ ಅನನ್ಯ ಆಲ್ಫಾನ್ಯೂಮರಿಕ್ ಸೀರಿಯಲ್ ಕೋಡ್ ಸಹಿತ ಮಾಹಿತಿಯನ್ನು ಬಹಿರಂಗಪಡಿಸದಿರಲು ಕಾರಣಗಳನ್ನು ವಿವರಿಸಲು ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಅವುಗಳನ್ನು ಬಹಿರಂಗಪಡಿಸುವುದು ಎಸ್ಬಿಐನ ಕರ್ತವ್ಯ ಎಂದು ಹೇಳಿತ್ತು.
ಇದನ್ನು ಓದಿ: ಚುನಾವಣಾ ಬಾಂಡ್ ಖರೀದಿ ಬಳಿಕ 18 ಕಂಪೆನಿಗಳು ಸೇಫ್: ‘ಹೈ ರಿಸ್ಕ್’ ಟು ‘ಸೇಫ್’-19 ಕಂಪೆನಿಗಳ ಡಿಟೇಲ್ಸ್… ‘