Homeಮುಖಪುಟಚುನಾವಣಾ ಬಾಂಡ್‌ ಖರೀದಿ ಬಳಿಕ 18 ಕಂಪೆನಿಗಳು ಸೇಫ್: 'ಹೈ ರಿಸ್ಕ್‌' ಟು 'ಸೇಫ್‌'-19 ಕಂಪೆನಿಗಳ...

ಚುನಾವಣಾ ಬಾಂಡ್‌ ಖರೀದಿ ಬಳಿಕ 18 ಕಂಪೆನಿಗಳು ಸೇಫ್: ‘ಹೈ ರಿಸ್ಕ್‌’ ಟು ‘ಸೇಫ್‌’-19 ಕಂಪೆನಿಗಳ ಡಿಟೇಲ್ಸ್‌… ‘

- Advertisement -
- Advertisement -

ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡಲು ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವ ಕಂಪನಿಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಣಕಾಸು ಸಚಿವಾಲಯದಿಂದ ಕಾನೂನು ಕ್ರಮ ಎದುರಿಸುತ್ತಿರುವ ಕನಿಷ್ಠ 19 ಕಂಪನಿಗಳು ಎಲೆಕ್ಟ್ರಾಲ್‌ ಬಾಂಡ್‌ ಖರೀದಿ ಮಾಡಿರುವುದು ಕಂಡು ಬರುತ್ತಿದೆ. ಈ 19 ಕಂಪನಿಗಳು ಒಟ್ಟಾಗಿ 2,717 ಕೋಟಿ ರೂಪಾಯಿಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಇವುಗಳಲ್ಲಿ 16 ಕಂಪೆನಿಗಳು ಕೋಲ್ಕತ್ತಾದಲ್ಲಿ ನೋಂದಣಿಯಾಗಿರುವುದು ಕಂಡುಬಂದಿದೆ.

ಹಣಕಾಸು ಸಚಿವಾಲಯದ ಹಣಕಾಸು ಗುಪ್ತಚರ ಘಟಕ (ಎಫ್‌ಐಯು) 2018ರಲ್ಲಿ ಮೊದಲ ಬಾರಿಗೆ 9,491 “ಹೆಚ್ಚಿನ ಅಪಾಯದ ಹಣಕಾಸು ಸಂಸ್ಥೆಗಳ” ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಪಟ್ಟಿಯು, ಈ ಸಂಸ್ಥೆಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಉಲ್ಲಂಘನೆ ಮಾಡುತ್ತಿದೆ ಎಂದು ಕೂಡ ಜಾರಿ ನಿರ್ದೇಶನಾಲಯಕ್ಕೆ ಸುಳಿವು ನೀಡಿತ್ತು.

ಎಫ್‌ಐಯು ಮೂಲಗಳನ್ನು ಉಲ್ಲೇಖಿಸಿ, ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿಯನ್ನು ಮಾಡಿದ್ದು, ವರದಿಯಲ್ಲಿ ಈ ಸಂಸ್ಥೆಗಳ ಚಟುವಟಿಕೆಗಳ ಮೇಲೆ ನವೆಂಬರ್ 2016ರಲ್ಲಿ ನೋಟುಗಳ ಅಮಾನ್ಯೀಕರಣದ ನಂತರ ಎಫ್‌ಐಯು ನಿಗಾ ಇಟ್ಟಿತ್ತು. ಎಫ್‌ಐಯು ‘ಹೆಚ್ಚಿನ ಅಪಾಯದ ಸಂಸ್ಥೆಗಳು’ ಎಂದು ಗುರುತಿಸಿದ ಎಲ್ಲಾ 19 ಕಂಪನಿಗಳು  ಚುನಾವಣಾ ಬಾಂಡ್‌ ಕುರಿತ 2018ರ ಪಟ್ಟಿಯಲ್ಲಿ ಸೇರಿದೆ ಎಂದು ಹೇಳಲಾಗಿದೆ. ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಈ 19 ಕಂಪನಿಗಳಲ್ಲಿ 18 ಕಂಪನಿಗಳು ಕಾಕತಾಳೀಯವಾಗಿ ಎಫ್‌ಐಯುನ ನಂತರದ ‘ಹೆಚ್ಚಿನ ಅಪಾಯದ’ ವಾರ್ಷಿಕ ಪಟ್ಟಿಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ ಬಾಂಡ್‌ಗಳನ್ನು ಖರೀದಿಸಿರುವುದು ಕಂಡುಬಂದಿರುವ ‘ಹೈ ರಿಸ್ಕ್’ ಕಂಪನಿಗಳಲ್ಲಿ ಕೇವಲ ಒಂದು ಮಾತ್ರ ಕಂಡು ಬಂದಿದೆ ಎಂದು ಅವಲೋಕನದ ವೇಳೆ ಬಯಲಾಗಿದ್ದು, ಉಳಿದ ಕಂಪೆನಿಗಳು ಸೇಫ್‌ ಆಗಿದೆ ಎನ್ನಲಾಗಿದೆ.

2018ರ ಪಟ್ಟಿಯನ್ನು FIU ಹೊರತಂದ ವಾರಗಳ ನಂತರ, ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿದ PTI ವರದಿಯು, 2018ರ ‘ಹೈ ರಿಸ್ಕ್’ ಪಟ್ಟಿಯಲ್ಲಿ ಹೆಸರಿಸಲಾದ 9,491 ಕಂಪನಿಗಳಲ್ಲಿ 1200ಕ್ಕೂ ಹೆಚ್ಚು ಕಂಪೆನಿಗಳು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿದೆ ಎಂದು ಹೇಳಿದೆ.

ರೇಣುಕಾ ಇನ್ವೆಸ್ಟ್ಮೆಂಟ್ ಫೈನಾನ್ಸ್ ಲಿಮಿಟೆಡ್

‘ಹೆಚ್ಚಿನ ಅಪಾಯದ’ ಕಂಪೆನಿಗಳ ಪಟ್ಟಿಗಳಲ್ಲಿ ಕಂಪನಿಯು ರೇಣುಕಾ ಇನ್ವೆಸ್ಟ್‌ಮೆಂಟ್ ಫೈನಾನ್ಸ್ ಲಿಮಿಟೆಡ್ ಕಂಡು ಬಂದಿದೆ. ಉತ್ತರ ಪ್ರದೇಶದ ಸೋನ್‌ಭದ್ರದಲ್ಲಿ ನೋಂದಾಯಿತ ರೇಣುಕಾ ಇನ್ವೆಸ್ಟ್‌ಮೆಂಟ್ ಫೈನಾನ್ಸ್ ಲಿಮಿಟೆಡ್ 2018, 2019, 2021, ಮತ್ತು 2022 ರಲ್ಲಿ FIU ನ ವಾರ್ಷಿಕ ‘ಹೈ-ರಿಸ್ಕ್’ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಏಪ್ರಿಲ್ 12, 2019ರಂದು ಕಂಪನಿಯು ರೂ 5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. SBI ಇನ್ನೂ ಖರೀದಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸದಿರುವುದರಿಂದ, ಯಾವ ರಾಜಕೀಯ ಪಕ್ಷವು ಈ ಹಣವನ್ನು ಪಡೆದುಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ.

2018ರ ಹೆಚ್ಚಿನ ಅಪಾಯದ ಪಟ್ಟಿಯಲ್ಲಿದ್ದ ಇತರ ಕಂಪೆನಿಗಳು

ಪಿಎಂಎಲ್‌ಎ ಕಾಯ್ದೆಯನ್ನು ಉಲ್ಲಂಘಿಸಿದ ಕಾರಣಕ್ಕೆ 2018ರ ಎಫ್‌ಐಯುನ ‘ಹೈ ರಿಸ್ಕ್’ ಪಟ್ಟಿಯಲ್ಲಿದ್ದ ಇತರ ಕಂಪೆನಿಗಳು:

ಕಾಮ್ನಾ ಕ್ರೆಡಿಟ್ಸ್ ಮತ್ತು ಪ್ರಮೋಟರ್ಸ್ ಪ್ರೈ. ಲಿ.

2018ರ ಪಟ್ಟಿಯಲ್ಲಿ FIU ಕಾಮ್ನಾ ಕ್ರೆಡಿಟ್ಸ್ ಮತ್ತು ಪ್ರಮೋಟರ್ಸ್ ಪ್ರೈವೇಟ್ ಲಿಮಿಟೆಡ್ PMLA ಮತ್ತು PML ನಿಯಮಗಳನ್ನು ಪಾಲಿಸಿಲ್ಲ ಎಂದು ಕಂಡು ಹಿಡಿದಿತ್ತು. ಕೋಲ್ಕತ್ತಾ ಮೂಲದ ಈ ಕಂಪೆನಿ, ಇದು ಜನವರಿ 4, 2022ರಂದು 5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಚುನಾವಣಾ ಆಯೋಗ ಉತ್ತರ ಪ್ರದೇಶ, ಮಣಿಪುರ, ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ವಿಧಾನಸಭಾ ಚುನಾವಣೆ ಘೋಷಿಸಿದ 4 ದಿನಗಳ ಬಳಿಕ ಈ ಬೆಳವಣಿಗೆ ನಡೆದಿತ್ತು.

ಇನ್ನೋಸೆಂಟ್ ಮರ್ಚಂಡೈಸ್ ಪ್ರೈ. ಲಿ.

PMLA ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2018ರಲ್ಲಿ ಇನೋಸೆಂಟ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ‘ಹೈ-ರಿಸ್ಕ್’ ಕಂಪನಿಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಕೋಲ್ಕತ್ತಾ ಮೂಲದ ಈ ಕಂಪೆನಿಯು ಏಪ್ರಿಲ್ 12, 2019 ರಂದು 25 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ.

2019ರ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ನಂತರ ಒಂದು ದಿನದ ನಂತರ ಈ ಬಾಂಡ್‌ಗಳನ್ನು ಖರೀದಿಸಲಾಗಿದೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸರಿಯಾಗಿ ಮಾಹಿತಿ ನೀಡದ ಕಾರಣ ಯಾವ ಪಕ್ಷಕ್ಕೆ ನೀಡಲಾಗಿದೆ ಎಂಬುವುದು ಅಸ್ಪಷ್ಟವಾಗಿದೆ.

ಆಲ್ಮೈಟಿ ಫೈನಾನ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಪ್ರೈ. ಲಿಮಿಟೆಡ್

ಕೋಲ್ಕತ್ತಾ ಮೂಲದ ಆಲ್ಮೈಟಿ ಫೈನಾನ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಪ್ರೈ. ಲಿಮಿಟೆಡ್ ಜುಲೈ 5, 2019ರಂದು  20 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಈ ದೇಣಿಗೆ ಯಾವ ಪಕ್ಷಕ್ಕೆ  ಹೋಗಿದೆ ಎಂಬುದು ತಿಳಿದಿಲ್ಲವಾದರೂ, ಈ ವೇಳೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಮತ್ತು ಉಪ ಚುನಾವಣೆಗಳು ನಡೆದಿವೆ.

ಅರಿಹಂತ್ ಎಂಟರ್‌ಪ್ರೈಸಸ್ ಲಿ.

ಅರಿಹಂತ್ ಎಂಟರ್‌ಪ್ರೈಸಸ್ ಲಿಮಿಟೆಡ್ ಕೂಡ ಕೋಲ್ಕತ್ತಾ ಮೂಲದ ಕಂಪನಿಯಾಗಿದೆ. 2019 ರ ಸಾರ್ವತ್ರಿಕ ಚುನಾವಣೆಯ ಮೊದಲ ಹಂತ ಪೂರ್ಣಗೊಂಡ ಒಂದು ದಿನದ ನಂತರ, ಏಪ್ರಿಲ್ 12, 2019ರಂದು 40 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಈ ಕಂಪೆನಿ ಖರೀದಿಸಿತ್ತು. ಇದಲ್ಲದೆ ಜುಲೈ 2019ರಲ್ಲಿ ಮತ್ತೆ 10 ಕೋಟಿ ರೂ. ಬಾಂಡ್‌ಗಳನ್ನು ಖರೀದಿಸಿತ್ತು. ಒಟ್ಟಾರೆಯಾಗಿ ಈ ಕಂಪೆನಿಯು 50 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ನ್ನು ಖರೀದಿಸಿತ್ತು.

ಆಶಿಶ್ ಫೈನಾನ್ಸ್ ಪ್ರೈ.ಲಿಮಿಟೆಡ್

ಇದು ಕೂಡ ಕೋಲ್ಕತ್ತಾದಲ್ಲಿ ನೋಂದಾಯಿತ ಕಂಪೆನಿಯಾಗಿದೆ. ಆಶಿಶ್ ಫೈನಾನ್ಸ್ ಪ್ರೈ.ಲಿಮಿಟೆಡ್ ಜನವರಿ 4 ರಂದು 250 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಆಟಮ್ ಇನ್ವೆಸ್ಟ್ಮೆಂಟ್ & ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್

ಆಟಮ್ ಇನ್ವೆಸ್ಟ್ಮೆಂಟ್ & ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮುಂಬೈ-ನೋಂದಾಯಿತ ಕಂಪೆನಿಯಾಗಿದೆ. ಇದು ಏಪ್ರಿಲ್ 7, 2022 ರಂದು 10 ಕೋಟಿ ರೂ.ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ. ಏಪ್ರಿಲ್ 2022ರ ನಂತರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಮತ್ತು ಉಪ ಚುನಾವಣೆಗಳು ನಡೆದಿವೆ. ಇದಲ್ಲದೆ ಜನವರಿ 24, 2023ರಂದು ಅದು ಮತ್ತೆ 15 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. 2022-23ರ ನಡುವೆ ಕಂಪೆನಿಯು ಒಟ್ಟು 25 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ಬನ್ಸಾಲ್ ಬಿಸಿನೆಸ್ ಪ್ರೈ. ಲಿಮಿಟೆಡ್

ಬನ್ಸಾಲ್ ಬಿಸಿನೆಸ್ ಪ್ರೈ. ಲಿಮಿಟೆಡ್ ಮತ್ತೊಂದು ಕೋಲ್ಕತ್ತಾ ಮೂಲದ ಕಂಪೆನಿ. ಈ ಕಂಪೆನಿ ಗೋವಾ, ಉತ್ತರಾಖಂಡ್, ಪಂಜಾಬ್, ಮಣಿಪುರ ಮತ್ತು ಉತ್ತರಪ್ರದೇಶ ರಾಜ್ಯಗಳ ಅಸೆಂಬ್ಲಿ ಚುನಾವಣೆಗೆ ಮುನ್ನ, ಅಂದರೆ ಜನವರಿ 3, 2022ರಂದು 40 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಏಪ್ರಿಲ್ 10, 2023ರಂದು ಅದು ಮತ್ತೆ 50 ಕೋಟಿ ರೂ.ಮೌಲ್ಯದ ಚುನಾವಣೆ ಬಾಂಡ್‌ಗಳನ್ನು ಖರೀದಿಸಿದೆ. ಒಟ್ಟು ಈ ಸಂಸ್ಥೆ 90 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ಕ್ಲಿಕ್ಸ್ ಸೆಕ್ಯುರಿಟೀಸ್ ಪ್ರೈ. ಲಿಮಿಟೆಡ್

ಕ್ಲಿಕ್ಸ್ ಸೆಕ್ಯುರಿಟೀಸ್ ಪ್ರೈ. ಲಿಮಿಟೆಡ್ ಕೋಲ್ಕತ್ತಾ-ನೋಂದಾಯಿತ ಕಂಪೆನಿ. ಇದು ಜನವರಿ 3, 2022ರಂದು 35 ಕೋಟಿ ರೂ. ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ.

ಕ್ರೋಚೆಟ್ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ ಲಿ.

ಕೋಲ್ಕತ್ತಾದ ಲಾಲ್ ಬಜಾರ್ ಪ್ರದೇಶದಲ್ಲಿ ನೋಂದಾಯಿತ ಕ್ರೋಚೆಟ್ ಟ್ರೇಡ್ ಅಂಡ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಗಮನಾರ್ಹವಾಗಿ ಅಕ್ಟೋಬರ್ 8, 2021 ರಂದು 200 ಕೋಟಿ ರೂ.ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಜುಲೈ 7, 2023 ರಂದು ಮತ್ತೆ 150 ಕೋಟಿ.ರೂ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಒಟ್ಟಾರೆಯಾಗಿ ಕಂಪೆನಿಯು 350 ಕೋಟಿ.ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಜುಪಿಟರ್ ಮರ್ಚಂಟೈಲ್ ಪ್ರೈ. ಲಿಮಿಟೆಡ್

ಕೋಲ್ಕತ್ತಾ ಮೂಲದ ಜುಪಿಟರ್ ಮರ್ಚಂಟೈಲ್ ಪ್ರೈ. ಲಿಮಿಟೆಡ್ ಕಂಪೆನಿ ಏಪ್ರಿಲ್ 17, 2019ರಂದು 25 ಕೋಟಿ ರೂ.ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ಲೈಫ್‌ಲೈನ್ ಮಾರ್ಕೆಟಿಂಗ್ ಪ್ರೈ. ಲಿಮಿಟೆಡ್

ಲೈಫ್‌ಲೈನ್ ಮಾರ್ಕೆಟಿಂಗ್ ಪ್ರೈ.ಲಿಮಿಟೆಡ್ ಕೋಲ್ಕತ್ತಾ ಮೂಲದ ಕಂಪೆನಿ, ಇದು ಅಕ್ಟೋಬರ್ 7, 2021ರಂದು 200ಕೋಟಿ ರೂ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಮನು ವ್ಯಾಪಾರ್ ಪ್ರೈ. ಲಿಮಿಟೆಡ್

ಮನು ವ್ಯಾಪಾರ್ ಪ್ರೈ.ಲಿಮಿಟೆಡ್ ಕೋಲ್ಕತ್ತಾದಲ್ಲಿ ನೋಂದಾಯಿಸಲಾದ ಕಂಪೆನಿಯಾಗಿದೆ, ಈ ಕಂಪೆನಿಯು ಚುನಾವಣಾ ಬಾಂಡ್‌ಗಳನ್ನು ಜನವರಿ 24, 2023ರಂದು 300 ಕೋಟಿ ರೂ. ಮತ್ತು  ಜನವರಿ 11, 2024 ರಂದು 200 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ಅಂದರೆ ಒಟ್ಟಾರೆ 500 ಕೋಟಿ.ರೂ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಪ್ಲುಟೊ ಫೈನಾನ್ಸ್ ಪ್ರೈ. ಲಿಮಿಟೆಡ್

ಪ್ಲುಟೊ ಫೈನಾನ್ಸ್ ಪ್ರೈ. ಲಿಮಿಟೆಡ್ ಕೂಡ ಕೋಲ್ಕತ್ತಾ ಮೂಲದ ಕಂಪನಿ. ಜುಲೈ 6, 2021ರಂದು 22 ಕೋಟಿ ರೂ.ಮೌಲ್ಯದ ಬಾಂಡ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಈ ಕಂಪೆನಿ ಖರೀದಿಸಿದೆ.

ಜನವರಿ 4, 2024ರಂದು, 25 ಕೋಟಿ.ರೂ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಆ ಬಳಿಕ 50 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಒಟ್ಟಾರೆಯಾಗಿ ಈ ಕಂಪೆನಿ  97 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ನ್ನು ಖರೀದಿಸಿದೆ.

ರಾಮೋಲಿ ಡೀಲರ್ ಪ್ರೈ. ಲಿ.

ರಾಮೋಲಿ ಡೀಲರ್ಸ್ ಕೂಡ ಕೋಲ್ಕತ್ತಾ ನೋಂದಾಯಿತ ಕಂಪನಿಯಾಗಿದೆ. ಇದು ಜನವರಿ 3, 2022ರಂದು 25 ಕೋಟಿ ರೂ.ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ರಾಣಿ ಸತಿ ಮರ್ಕೆಂಟೈಲ್ ಪ್ರೈ. ಲಿಮಿಟೆಡ್

ರಾಣಿ ಸತಿ ಮರ್ಕೆಂಟೈಲ್ ಪ್ರೈ.ಲಿಮಿಟೆಡ್ ಕೋಲ್ಕತ್ತಾ ಮೂಲದ ಕಂಪನಿ, ಅಕ್ಟೋಬರ್ 5, 2021ರಂದು 30 ಕೋಟಿ ರೂ. ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ ಮತ್ತು ಜನವರಿ 6, 2024 ರಂದು 75 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿದೆ.

ರೈಟ್ ಏಡ್ ಕನ್ಸಲ್ಟೆಂಟ್ಸ್ ಪ್ರೈ.ಲಿಮಿಟೆಡ್

ಕೋಲ್ಕತ್ತಾ ಲಾಲ್ ಬಜಾರ್ ಮೂಲದ ಈ ಕಂಪನಿಯು ಅಕ್ಟೋಬರ್ 8, 2021ರಂದು 150 ಕೋಟಿ ರೂ. ಮೌಲ್ಯದ ಮತ್ತು ಜುಲೈ 10, 2023 ರಂದು 150 ಕೋಟಿ ರೂ. ಮೌಲ್ಯದ ಹೆಚ್ಚಿನ ಬಾಂಡ್‌ಗಳನ್ನು ಖರೀದಿಸಿದೆ.

ಸಿಲ್ವರ್ಟೋನ್ ಸೆಕ್ಯುರಿಟೀಸ್ ಪ್ರೈ. ಲಿಮಿಟೆಡ್

ಇದು ಕೂಡ ಕೋಲ್ಕತ್ತಾದ ಲಾಲ್ ಬಜಾರ್‌ನಲ್ಲಿ ನೋಂದಾಯಿತ ಕಂಪನಿಯಾಗಿದೆ. ಅಕ್ಟೋಬರ್ 2021ರಂದು 200 ಕೋಟಿ ರೂ. ಮೌಲ್ಯದ ಮತ್ತು ಜುಲೈ 10, 2023 ರಂದು 150 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ಶ್ರೀನಾಥ್ ಫಿನ್ವೆಸ್ಟ್ ಪ್ರೈ. ಲಿಮಿಟೆಡ್

ಇದು ಕೂಡ ಕೋಲ್ಕತ್ತಾ ಮೂಲದ ಕಂಪನಿ. ಇದು ಜುಲೈ 7, 2021ರಂದು 10 ಕೋಟಿ ರೂ.ಮೌಲ್ಯದ ಮತ್ತು ಜನವರಿ 7, 2022 ರಂದು 20 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ಸುಧಾ ಕಮರ್ಷಿಯಲ್ ಕಂಪನಿ ಲಿ.

ಇದು ಕೋಲ್ಕತ್ತಾ-ನೋಂದಾಯಿತ ಕಂಪೆನಿ, ಏಪ್ರಿಲ್ 20, 2019ರಂದು 30 ಕೋಟಿ ರೂ. ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ.

ಶ್ವೇತಾ ಎಸ್ಟೇಟ್ಸ್ ಪ್ರೈ. ಲಿಮಿಟೆಡ್

ದೆಹಲಿಯ ಏರೋ ಸಿಟಿಯಲ್ಲಿ ನೋಂದಣಿಯಾಗಿರುವ ಈ ಕಂಪನಿಯು ಏಪ್ರಿಲ್ 16, 2019ರಂದು 200 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿದೆ.

ಇದನ್ನು ಓದಿ: ಚುನಾವಣಾ ಬಾಂಡ್ ಮೂಲಕ ಅತಿ ಹೆಚ್ಚು ದೇಣಿಗೆ ಪಡೆದ ಬಿಜೆಪಿ: ಚು.ಆಯೋಗದಿಂದ ಹೊಸ ಮಾಹಿತಿ ಪ್ರಕಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...