ಕಳೆದ ಶುಕ್ರವಾರ ದೆಹಲಿಯ ಇಂದರ್ಲೋಕ್ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುತ್ತಿದ್ದ ಮುಸ್ಲಿಮರ ಮೇಲೆ ಬೂಟು ಕಾಲಿನಿಂದ ಒದ್ದು ಪೊಲೀಸ್ ಅಧಿಕಾರಿ ದೌರ್ಜನ್ಯ ನಡೆಸಿರುವ ಘಟನೆಯ ಬಗ್ಗೆ ದೆಹಲಿ ನ್ಯಾಯಾಲಯವು ಡಿಸಿಪಿಯಿಂದ ವರದಿಯನ್ನು ಕೇಳಿದೆ.
ಭಾರೀ ಕೋಲಾಹಲ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿ ತೀಸ್ ಹಜಾರಿಯಲ್ಲಿರುವ ನ್ಯಾಯಾಲಯವು ಮುಂದಿನ ವಿಚಾರಣೆಯ ಮೇ 1ರೊಳಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ. ಸಬ್ ಇನ್ಸ್ಪೆಕ್ಟರ್ ಮನೋಜ್ ತೋಮರ್ ದೆಹಲಿಯ ಮಕ್ಕಿ ಜಮಾ ಮಸೀದಿ ಬಳಿಯ ಇಂದರ್ಲೋಕ್ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವವರಿಗೆ ಬೂಟು ಕಾಲಿನಿಂದ ಒದ್ದ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗಿತ್ತು. ಪೊಲೀಸ್ ಅಧಿಕಾರಿಯ ಕೃತ್ಯಕ್ಕೆ ವ್ಯಾಪಕವಾದ ಖಂಡನೆ ವ್ಯಕ್ತವಾಗಿತ್ತು. ಘಟನೆಗೆ ಸಂಬಂಧಿಸಿ ಮಾ.8ರಂದು ಆರೋಪಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ದೆಹಲಿಯ ರಸ್ತೆಯಲ್ಲಿ ಶುಕ್ರವಾರದ ನಮಾಝ್ ಮಾಡುತ್ತಿದ್ದ ಮುಸ್ಲಿಮ್ ಸಮುದಾಯದ ಜನರ ಮೇಲೆ ಒದ್ದು ದುಷ್ಕೃತ್ಯವನ್ನು ಮೆರದ ಪೊಲೀಸರ ವರ್ತನೆ ಬಗ್ಗೆ ವ್ಯಾಪಕವಾದ ಖಂಡನೆ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಮುಸ್ಲಿಮರು ನಮಾಜ್ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಘಟನೆಯ ಬಗ್ಗೆ ಜಗತ್ತಿಗೆ ವಿವರಿಸಬೇಕಾಗಿದೆ ಎಂದು ಹೇಳಿದ್ದರು.
ನೀವು ನಮ್ಮ ಮೇಲೆ ಒದ್ದರೆ ಅಥವಾ ಗುಂಡು ಹಾರಿಸಿದರೆ, ನಾವು ನಮಾಝ್ ನಿಲ್ಲಿಸುವುದಿಲ್ಲ. ಶುಕ್ರವಾರದ ಘಟನೆಯು ಮುಸ್ಲಿಮರ ವಿರುದ್ಧ ಜನರ ಮನಸ್ಸು ಎಷ್ಟು ಭ್ರಷ್ಟಗೊಂಡಿದೆ ಎಂಬುವುದನ್ನು ಎತ್ತಿ ತೋರಿಸುತ್ತಿದೆ. ಶುಕ್ರವಾರದಂದು ದೆಹಲಿಯ ರಸ್ತೆಗಳಲ್ಲಿ ಜನರು ಸೇರುವುದು ಮತ್ತು ನಮಾಝ್ನಲ್ಲಿ ಪಾಲ್ಗೊಳ್ಳುವುದು ಸಾಮಾನ್ಯವಾಗಿದೆ. ಹಿಂದಿನ ದೆಹಲಿ ಗಲಭೆಗಳಲ್ಲಿ ಮುಸ್ಲಿಮರನ್ನು ಪೊಲೀಸರು ಗುರಿಯಾಗಿಸಿಕೊಂಡ ಬಗೆಗೆ ದೆಹಲಿ ಪೊಲೀಸರು ಕಲಿಯಬೇಕು. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ, ಮುಸ್ಲಿಮರಿಗೆ ಎಷ್ಟು ಘನತೆ ಮತ್ತು ಗೌರವವಿದೆ ಎಂಬುವುದನ್ನು ಇದು ಹೇಳುತ್ತದೆ. ನಾನು ಪ್ರಧಾನಿ, ಬಿಜೆಪಿಯವರನ್ನು ಕೇಳಲು ಬಯಸುತ್ತೇನೆ ಅವಮಾನಕ್ಕೊಳಗಾದ ವ್ಯಕ್ತಿ ಯಾವ ಕುಟುಂಬಕ್ಕೆ ಸೇರಿದವನು? ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದರು.
ಘಟನೆಯ ಬಗ್ಗೆ ಕಾಂಗ್ರೆಸ್ನ ದೆಹಲಿ ಘಟಕವು ದೆಹಲಿ ಪೊಲೀಸರನ್ನು ನಿನ್ನೆ ತರಾಟೆಗೆ ತೆಗೆದುಕೊಂಡಿತ್ತು. ಇದು ತುಂಬಾ ನಾಚಿಕೆಗೇಡಿನ ಸಂಗತಿ! ರಸ್ತೆಯಲ್ಲಿ ನಮಾಝ್ ಮಾಡುವವರನ್ನು ಒದೆಯುತ್ತಿರುವ ದಿಲ್ಲಿ ಪೊಲೀಸ್ ಜವಾನ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ…? ಎಂದು ಪ್ರಶ್ನಿಸಿತ್ತು.
People offering Namaz are being kicked by Police. This is absolutely shameful. What message is @DelhiPolice trying to give. @narendramodi @LtGovDelhipic.twitter.com/2rh2bYhBSi
— Mohammed Zubair (@zoo_bear) March 8, 2024
ಇದನ್ನು ಓದಿ: ಚುನಾವಣಾ ಬಾಂಡ್ ಖರೀದಿ ಬಳಿಕ 18 ಕಂಪೆನಿಗಳು ಸೇಫ್: ‘ಹೈ ರಿಸ್ಕ್’ ಟು ‘ಸೇಫ್’-19 ಕಂಪೆನಿಗಳ ಡಿಟೇಲ್ಸ್… ‘