ದುಬೈಯಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆ(COP28)ಯಲ್ಲಿ ಪಳೆಯುಳಿಕೆ ಇಂಧನವನ್ನು ಹಂತ ಹಂತವಾಗಿ ಕಡಿತಗೊಳಿಸುವ ಪ್ರಸ್ತಾವನೆಗೆ ದೇಶಗಳಲ್ಲಿ ಸಹಮತ ಮೂಡಲಿಲ್ಲ ಎಂದು ವರದಿಗಳು ಹೇಳಿವೆ.
ಕಲ್ಲಿದ್ದಲು, ಕಲ್ಲಿದ್ದಲು ಉತ್ಪನ್ನಗಳು, ನೈಸರ್ಗಿಕ ಅನಿಲ, ಉತ್ಪಾದಿಸಿದ ಅನಿಲ, ಕಚ್ಛಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ನವೀಕರಿಸಲಾಗದ ತ್ಯಾಜ್ಯಗಳಂತಹ ಇಂಧನ ಮೂಲಗಳನ್ನು ಪಳೆಯುಳಿಕೆ ಇಂಧನ ಎಂದು ಕರೆಯಲಾಗುತ್ತದೆ.
ಇವುಗಳ ಬಳಕೆ ಹಂತ ಹಂತವಾಗಿ ಕಡಿತಗೊಳಿಸಿ ಹೊರ ಸೂಸುವಿಕೆಯನ್ನು ತಡೆಯುವುದು. ಈ ಮೂಲಕ ಈ ಶತಮಾನದ ಅಂತ್ಯದ ವೇಳೆಗೆ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸುವುದು ದುಬೈ ಹವಾಮಾನ ಶೃಂಗಸಭೆಯ ಮುಖ್ಯ ಅಜೆಂಡಾವಾಗಿದೆ. ಆದರೆ, ಶೃಂಗಸಭೆ ಅಂತ್ಯಗೊಳ್ಳುವ ಹಂತಕ್ಕೆ ಬಂದರೂ ಪಳೆಯುಳಿಕೆ ಇಂಧನಗಳ ಕಡಿತದ ಕುರಿತು ರಾಷ್ಟ್ರಗಳ ನಡುವೆ ಒಮ್ಮತ ಮೂಡಿಲ್ಲ ಎಂದು ತಿಳಿದು ಬಂದಿದೆ.
ಪಳೆಯುಳಿಕೆ ಇಂಧನ ಕಡಿತದ ಬಗ್ಗೆ ಶೃಂಗಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಪ್ರಮುಖ ತೈಲ ಉತ್ಪಾದಕ ದೇಶಗಳಾದ ಸೌದಿ ಅರೆಬಿಯಾ ಮತ್ತು ರಷ್ಯಾ ವಿರೋಧ ವ್ಯಕ್ತಪಡಿಸಿವೆ. ನಿರ್ದಿಷ್ಟವಾಗಿ ತೈಲ, ಅನಿಲ ಮತ್ತು ಕಲ್ಲಿದ್ದಲನ್ನು ಗುರಿಯಾಗಿಸುವ ಬದಲು, ಸಾಮಾನ್ಯ ಅರ್ಥದಲ್ಲಿ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಮೇಲೆ ಗಮನ ಹರಿಸಬೇಕೆಂದು ಇವುಗಳು ಪ್ರತಿಪಾದಿಸಿವೆ.
ಶೃಂಗಸಭೆಯ ಅಂತಿಮ ನಿರ್ಣಯದಲ್ಲಿ ಪಳೆಯುಳಿಕೆ ಇಂಧನಗಳ ಬಗ್ಗೆ ಯಾವುದೇ ನಿರ್ಣಯ ಕೈಗೊಂಡರೂ ಅದನ್ನು ಬೆಂಬಲಿಸದಂತೆ ಕೋರಿ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ‘ಒಪೆಕ್’ ತನ್ನ ಸದಸ್ಯರು ಮತ್ತು ಮಿತ್ರರಾಷ್ಟ್ರಗಳಿಗೆ ಪತ್ರ ಬರೆದಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಇದಕ್ಕೆ ವಿರುದ್ಧವಾಗಿ ಅಮೆರಿಕ, ಯುರೋಪಿಯನ್ ಯೂನಿಯನ್ ಸೇರಿದಂತೆ ಸುಮಾರು 80 ದೇಶಗಳು ಪಳೆಯುಳಿಕೆ ಇಂಧನ ಬಳಕೆ ಕಡಿತಗೊಳಿಸುವ ನಿಟ್ಟಿನಲ್ಲಿ ಬೆಂಬಲ ವ್ಯಕ್ತಡಿಸಿವೆ. ಸಣ್ಣ ದ್ವೀಪಗಳ ಪರವಾಗಿ ವಾದ ಮಂಡಿಸಿದ ಮಾರ್ಷಲ್ ದ್ವೀಪ ಸಮೂಹ, ಪಳೆಯುಳಿಕೆ ಇಂಧನಗಳ ಬಳಕೆಯಿಂದ ಉಂಟಾಗುವ ಸಮುದ್ರ ಮಟ್ಟದ ಏರಿಕೆಯಂತಹ ಅಸ್ತಿತ್ವದ ಅಪಾಯವನ್ನು ಒತ್ತಿ ಹೇಳಿದೆ.
ಈ ಬಾರಿ ದುಬೈ ನಗರದಲ್ಲಿ 28ನೇ ವಿಶ್ವ ಹವಾಮಾನ ಶೃಂಗಸಭೆ (COP28) ನಡೆಯುತ್ತಿದೆ. ನವೆಂಬರ್ 30ರಂದು ಪ್ರಾರಂಭಗೊಂಡ ಈ ಸಭೆ ಡಿಸೆಂಬರ್ 12ರವರೆಗೆ ಮುಂದುವರಿಯಲಿದೆ.
ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸುವುದು, ದುರ್ಬಲ ಸಮುದಾಯಗಳಿಗೆ ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುವುದು ಮತ್ತು 2050ರ ಹೊತ್ತಿಗೆ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವುದು ಈ ಶೃಂಗಸಭೆಯ ಪ್ರಮುಖ ಉದ್ದೇಶಗಳಾಗಿವೆ.
ಇದನ್ನೂ ಓದಿ : ಪೆಟ್ರೋಲ್ ಕಂಪನಿ ಮುಖಸ್ಥ ಹವಾಮಾನ ಶೃಂಗಸಭೆ ಉಸ್ತುವಾರಿ: ಗೊಂದಲಗಳ ನಡುವೆ COP28