Homeಕರ್ನಾಟಕಬೇರೆ ಕ್ಷೇತ್ರದವರು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಆಗಬಹುದೇ?

ಬೇರೆ ಕ್ಷೇತ್ರದವರು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಆಗಬಹುದೇ?

- Advertisement -
- Advertisement -

ಇದೇ 2024 ಡಿಸೆಂಬರ್ ತಿಂಗಳಲ್ಲಿ ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಆಯ್ಕೆಗೆ ಸಂಬಂಧಿಸಿದಂತೆ ಈಗ ವಿವಾದ ಭುಗಿಲೆದ್ದಿದೆ. ಕೆಲವರು ಸಾಹಿತ್ಯೇತರ ಕ್ಷೇತ್ರದಲ್ಲಿ ’ಗಮನಾರ್ಹ’ ಸಾಧನೆ ಮಾಡಿದವರನ್ನು ಕೂಡ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿಗೆ(ಕಸಾಪ) ಶಿಫಾರಸ್ಸು ಮಾಡಿದ್ದಾರೆ. ಬೇರೆಬೇರೆ ಕ್ಷೇತ್ರದವರು ತಮ್ಮ ಕ್ಷೇತ್ರವನ್ನೂ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಕೆಲವರು ಕಸಾಪಕ್ಕೆ ಪತ್ರಗಳನ್ನು ಬರೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಕಸಾಪ ಅಧ್ಯಕ್ಷರು, ’ಚರ್ಚೆಗೆ ಅವಕಾಶ ನಿಡಲಾಗಿದೆ; ಸಾರ್ವಜನಿಕ ಅಭಿಪ್ರಾಯ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ’ (ಪ್ರ.ವಾ. 13, ಅಕ್ಟೋಬರ್ 2024) ಎಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದ ಅನೇಕ ಬರಹಗಾರ/ರ್ತಿಯರು, ಚಿಂತಕರು, ಬುದ್ಧಿಜೀವಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ತಮ್ಮ ಆಯ್ಕೆಯ ಸಮ್ಮೇಳನಾಧ್ಯಕ್ಷರ ಹೆಸರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈಗಲೂ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.

ಸಮ್ಮೇಳನಾಧ್ಯಕ್ಷರ ಆಯ್ಕೆಯ ಬಗ್ಗೆ ಈಗ ಎದ್ದಿರುವ ವಿವಾದವು ಉದ್ದೇಶಪೂರ್ವಕವಾಗಿಯೇ ಹುಟ್ಟುಹಾಕಲಾಗಿದೆ. ಈ ವಿವಾದದ ಮುಖಾಂತರ ಚರ್ಚೆಯ ದಿಕ್ಕನ್ನು ಬೇರೊಂದು ಕಡೆಗೆ ತಿರುಗಿಸುವ ಸಂಚಿನಂತೆ ಇದು ಕಾಣುತ್ತಿದೆ. ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಪ್ರತಿ ವರ್ಷವು (ಕೆಲವು ವರ್ಷ ನಡೆಸಲಾಗಿಲ್ಲ) ಕನ್ನಡ ನಾಡು ನುಡಿ ಸಾಹಿತ್ಯ ಕೇಂದ್ರಿತವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತ ಬಂದಿದೆ. ಇಂತಹ ಬೃಹತ್ ಸಮ್ಮೇಳನದ ವಿಶಾಲವಾದ ಭಿತ್ತಿಯಲ್ಲಿ ಕನ್ನಡ ಪ್ರಜ್ಞೆಯ ಸುತ್ತಮುತ್ತ ಗಂಭೀರವಾಗಿ ಚರ್ಚೆಯಾಗಬೇಕಿರುವ ನೂರಾರು ಸಂಗತಿಗಳಿವೆ. ಇತ್ತೀಚಿನ ಕೆಲವು ವರ್ಷಗಳಿಂದ ಕನ್ನಡ ನಾಡು, ನುಡಿ, ಪುಸ್ತಕ, ಪ್ರಕಟಣೆ, ಚಳವಳಿ, ಸ್ತ್ರೀವಾದ, ವಿಮರ್ಶೆ, ಸಂಶೋಧನೆ ಮುಂತಾದ ವಿಷಯಗಳ ಬಗೆಗಿನ ವಿದ್ವತ್ಪೂರ್ಣ ಗೋಷ್ಠಿಗಳ ಚರ್ಚೆಗಳನ್ನು ಅಪ್ರಸ್ತುತಗೊಳ್ಳುವಂತೆ ಮಾಡಲಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ತೀವ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಾಹಿತ್ಯ ಮತ್ತು ಕಲಾಜಗತ್ತಿನ ಹಲವಾರು ಕ್ಷೇತ್ರಗಳ ಬಗ್ಗೆ ಮೌನ ತಾಳಲಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಮೂರು ದಿನ ನಡೆಯುವ ಅಧ್ಯಕ್ಷರ ಮೆರವಣಿಗೆ ಹಾಗೂ ಬರಿ ಮನರಂಜನೆ, ಸಂಭ್ರಮ, ಜಾತ್ರೆ ಎನ್ನುವ ಮಟ್ಟಕ್ಕೆ ತಂದು ನಿಲ್ಲಿಸಲಾಗಿದೆ. ಸಮ್ಮೇಳನದ ಧ್ಯೇಯೋದ್ದೇಶಗಳನ್ನು ಗಾಳಿಗೆ ತೂರಲಾಗಿದೆ.

ಪ್ರತಿ ವರ್ಷವು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಅದ್ದೂರಿಯಾಗಿ ನಡೆಸುತ್ತ ಬಂದಿರುವುದು ದಿಟ. ಎಲ್ಲರಿಗೂ ಗೊತ್ತಿರುವಂತೆ ಕನ್ನಡ ಸಾಹಿತ್ಯದಲ್ಲಿ ಗುರುತರವಾದ ಸಾಧನೆ ಮಾಡಿದವರನ್ನು ಗುರುತಿಸಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಪಟ್ಟವನ್ನು ನೀಡಲಾಗುತ್ತದೆ. ಇದಕ್ಕೆ ಚಾರಿತ್ರಿಕವಾಗಿ ಹಾಗೂ ಸಾಂಸ್ಕೃತಿಕವಾಗಿಯೂ ಸಾಕಷ್ಟು ದೀರ್ಘವಾದ ಪರಂಪರೆಯೇ ಇದೆ. ಇದು ಕೇವಲ ಕನ್ನಡ ನಾಡು, ನುಡಿ, ಸಂಸ್ಕೃತಿಯ ಅಸ್ಮಿತೆಯಾಗಿಯಷ್ಟೇ ಗೋಚರಿಸುತ್ತ ಬಂದಿದ್ದಲ್ಲ. ಪ್ರತಿರೋಧದೊಂದಿಗೆ ನಿರ್ಮಿಸಿಕೊಂಡು ಬಂದ, ಅತ್ಯಂತ ಪ್ರಾಚೀನ ಪರಂಪರೆಯನ್ನು ಹೊಂದಿರುವ ಕನ್ನಡ ನುಡಿಯ ಸಾಹಿತ್ಯದೊಳಗೆ ಆ ಭಾಷಿಕ ಸಮುದಾಯದ ಸ್ವತಂತ್ರ ನಾಡು, ಪ್ರದೇಶ, ಗಡಿಗಳ ಅಸ್ತಿತ್ವವನ್ನು ಕೂಡ ಗರ್ಭೀಕರಿಸಿಕೊಂಡಿರುತ್ತದೆ. ಕನ್ನಡದ ಮೊದಲ ಮೀಮಾಂಸೆಯ ಕೃತಿ ಒಂಬತ್ತನೆಯ ಶತಮಾನದ ’ಕವಿರಾಜಮಾರ್ಗ’ವೇ ಇದಕ್ಕೊಂದು ಅತ್ಯುತ್ತಮ ನಿದರ್ಶನವಾಗಿದೆ. ಆದರೆ ಕೆಲವು ವರ್ಷಗಳಿಂದ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಸ್ಕೃತಿಯ ಚಹರೆಗಳ ಸಂಕೀರ್ಣ ನೆಲೆಗಳನ್ನು ಒರೆಗೆ ಹಚ್ಚಿ ನೋಡಲು ಸಾಧ್ಯವಾಗುತ್ತಿಲ್ಲ. ಕಸಾಪವೆಂದರೆ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಏಜೆನ್ಸಿಯನ್ನು ತೆಗೆದುಕೊಂಡಿರುವಂತೆ ನಡೆದುಕೊಳ್ಳುತ್ತಿದೆ. ಕಸಾಪವೆಂದರೆ ಸಮ್ಮೇಳನಾಧ್ಯಕ್ಷಗಿರಿಯನ್ನು ಕೊಡಿಸುವ ದಂಧೆಯಾಗಿದೆ. ಇಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಗೆ ಮೊದಲ ಮಣೆ ಹಾಕಲಾಗುತ್ತದೆ. ಇಲ್ಲಿ ಜಾತ್ಯತೀತ ಪ್ರಜ್ಞೆಗಿಂತ ಜಾತಿಪ್ರಜ್ಞೆಯೇ ಪ್ರಧಾನವಾಗಿ ಕೆಲಸ ಮಾಡುತ್ತದೆ. ಕನ್ನಡ ಜಗತ್ತಿಗೆ ಬರಹಗಾರ/ರ್ತಿಯರ ಕೊಡುಗೆಗಳಿಗಿಂತ ಕಸಾಪದವರು ಅಳೆದು ತೂಗುವ ಸ್ವಜನ ಪಕ್ಷಪಾತಗಳು, ಲಿಂಗ ತಾರತಮ್ಯತೆಗಳು ಇಲ್ಲಿ ಮುಖ್ಯವಾಗಿರುತ್ತವೆ.

ವರ್ಷಕ್ಕೊಮ್ಮೆ ಜರುಗುವ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತದೆಯೇ? ಇವುಗಳ ಬಗ್ಗೆ ಕಸಾಪದಲ್ಲಿರುವ ನೀತಿ ನಿಯಮಗಳೇನು? ಕಸಾಪದಲ್ಲಿರುವ ’ಕಾರ್ಯಕಾರಿ ಸಮಿತಿ’ಯು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವೇ? ಹಾಗಾದರೆ ಸರ್ವಾನುಮತದಿಂದ ಸಮ್ಮೇಳಾಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ ಎಂಬುದರ ಅರ್ಥವೇನು? ಇವುಗಳ ಬಗ್ಗೆ ಸಾರ್ವಜನಿಕವಾದ ಚರ್ಚೆಗಳಾಗದೇ ಕೇವಲ ಸಮ್ಮೇಳನಾಧ್ಯಕ್ಷರ ಪಟ್ಟವು ಇತರ ಕ್ಷೇತ್ರದವರಿಗೂ ನೀಡಬಾರದೇಕೆ ಎನ್ನುವ ಚರ್ಚೆಯನ್ನು ಮುಂಚೂಣಿಗೆ ತರಲಾಗಿದೆ. ಈಗ ಇರುವ ಸಂಸ್ಥೆಯ ಮೂಲ ಸಂರಚನೆಯಲ್ಲಿ ಬದಲಾವಣೆಗಳನ್ನು ತರಬೇಕಾಗುತ್ತದೆ. ಈಗ ನಡೆಯುತ್ತಿರುವ ಚರ್ಚೆಯನ್ನು ಗಮನಿಸಿದರೆ ಇರುವ ನಿಯಮಗಳನ್ನೇ ಉಪಯೋಗಿಸಿಕೊಂಡು ಕಸಾಪ ಎಂಬ ಸಂಸ್ಥೆಯನ್ನು ಒಳಗೊಳಗೆ ಕೊಳೆಯುವಂತೆ ಮಾಡುವ ಸಂಚು ನಡೆಯುತ್ತಿದೆ ಎಂದೆನ್ನಿಸುತ್ತದೆ.

ಕೆಲವು ವರ್ಷಗಳ ಹಿಂದೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯನ್ನು ದೇವನೂರ ಮಹಾದೇವ ಅವರು ನಿರಾಕರಿಸಿ ಬರೆದ ಪತ್ರಕ್ಕೆ ಬೆಂಬಲ ಸಿಗಲಿಲ್ಲ. (ಆಗ ಸಿದ್ಧಲಿಂಗಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು.) ಆಗ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವು ಕಡ್ಡಾಯವಾಗಬೇಕೆಂಬ ವಿಷಯದಲ್ಲಿ ಕಸಾಪವು ಸರ್ಕಾರದ ಮೇಲೆ ಒತ್ತಡ ಹೇರುವುದರಲ್ಲಿ ವಿಫಲವಾಯಿತು. ಹಾಗೆ ನೋಡಿದರೆ ಕಸಾಪವು ಘನತೆ, ಗೌರವ, ಬದ್ಧತೆಗಳನ್ನು ಕಳೆದುಕೊಂಡಿದೆ. ಅದು ಕನ್ನಡ ನಾಡು ನುಡಿಯ ವಿಷಯದಲ್ಲಿ ಗಟ್ಟಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದರಲ್ಲಿ ವಿಫಲವಾಗಿದೆ. ಹೀಗಾಗಿ ಸಾಹಿತ್ಯ ಸಮ್ಮೇಳನವೆಂದರೆ ಕೇವಲ ತೋರಿಕೆಯ ಮತ್ತು ಆಡಂಬರದ ಆಡಂಬೋಲವಾಗಿ ಉಳಿದುಕೊಂಡಿದೆ. ಇದು ಹೇಗೋ ಸಮ್ಮೇಳನಕ್ಕಾಗಿ ಸಮ್ಮೇಳನ ನಡೆಸಿಕೊಂಡು ಹೋಗುವ ಪರಿಪಾಟ ಬೆಳೆದು ನಿಂತಿದೆ.

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಎನ್ನುವುದು ಕನ್ನಡದ ಬರಹಗಾರ/ರ್ತಿಯವರಿಗೆ ನೀಡುವ ಗೌರವದ ಸಂಕೇತವಾಗಿರುತ್ತದೆ. ಸಮ್ಮೇಳನಾಧ್ಯಕ್ಷತೆ ಎಂದರೆ ಅವರ ಸಾಹಿತ್ಯಿಕ ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಕೊಡುಗೆಗೆ ಸಂದ ಗೌರವವಾಗಿರುತ್ತದೆ. ಅವರ ಸಾಹಿತ್ಯ, ಚಿಂತನೆ, ಬೌದ್ಧಿಕತೆ, ಕೃತಿಗಳು ಮುಂಚೂಣಿಗೆ ಬರಬೇಕೆ ಹೊರತು ಬರಹಗಾರ/ರ್ತಿಯರೇ ಉತ್ಸವ ಮೂರ್ತಿಗಳಾಗಿ ಮೆರೆಯುವುದಲ್ಲ. ’ಮುಖ್ಯರು-ಅಮುಖ್ಯರು’ ಧೋರಣೆಯ ಈ ವ್ಯಕ್ತಿನಿಷ್ಠ ಕೇಂದ್ರಿತ ಅತಿರೇಕದ ವಿಜೃಂಭಣೆಯು ಸಮಾನತೆಯ ತತ್ವದ ವಿರೋಧಿಯಾಗಿದೆ. ಬರಹಗಾರ/ರ್ತಿಯವರನ್ನು ಭಿನ್ನರು, ವಿಭಿನ್ನರು ಎಂದು ಗುರುತಿಸಬಹುದೇ ಹೊರತು ’ಪ್ರಧಾನ-ಅಪ್ರಧಾನ’ ಎಂಬ ನಿಲುವಿನಿಂದ ನೋಡುವುದು ಆಳದಲ್ಲಿ ಜಾತಿ ಶ್ರೇಣೀಕರಣದ ಮನಸ್ಥಿತಿಯ ಇನ್ನೊಂದು ರೂಪವಾಗಿದೆ. ಇನ್ನು ಕಸಾಪವು ಇವರನ್ನು ಸಮ್ಮೇಳನಾಧ್ಯಕ್ಷಗಿರಿಗೆ ಏರಿಸಿದ್ದೇ ಮೆರೆದಾಡುವಂತೆ ಮಾಡಲು ಪೈಪೋಟಿಗೆ ಇಳಿದಂತೆ ತೋರುತ್ತದೆ. ಇದೇ ಮೆರೆದಾಟದ ಉತ್ಸವದಲ್ಲಿ ಕಸಾಪ ಅಧ್ಯಕ್ಷರ ಕಟೌಟ್‌ಗಳು ಕೂಡ ರಾರಾಜಿಸುತ್ತವೆ. ಹಾಗೆ ನೋಡಿದರೆ ಈಗ ರಾಜಕೀಯ ಸಮಾರಂಭಗಳಿಗೂ ಮತ್ತು ಸಾಹಿತ್ಯ ಸಮ್ಮೇಳನಗಳಿಗೂ ಹೆಚ್ಚು ವ್ಯತ್ಯಾಸ ಉಳಿದಿಲ್ಲ ಅನ್ನಿಸುವಂತಾಗಿದೆ.

ಈಗ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗೆ ಮಠಾಧೀಶರ, ರಾಜಕಾರಣಿಗಳ ಹೆಸರುಗಳು ಶಿಫಾರಸುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರದವರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಇದು ಎಲ್ಲರಿಗೂ ತಿಳಿದಿರುವಂತೆ ’ಕನ್ನಡ ಸಾಹಿತ್ಯ’ದ ಸಮ್ಮೇಳನವಾದ್ದರಿಂದ ಇಲ್ಲಿ ’ಕನ್ನಡ ಸಾಹಿತ್ಯ’ ಪರಂಪರೆಗೆ ಅಪೂರ್ವವಾದ, ಮಹತ್ತರವಾದ, ವಿಶಿಷ್ಟವಾದ ರೀತಿಯಲ್ಲಿ ಕೊಡುಗೆ ಕೊಟ್ಟವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡು ಬರಲಾಗಿದೆ. ಈ ಪರಂಪರೆಯೇ ಮುಂದುವರೆಯುವುದು ಕನ್ನಡ ಸಾಹಿತ್ಯ ಜಗತ್ತಿಗೆ ಸಲ್ಲುವ ಗೌರವವಾಗಿರುತ್ತದೆ. ಕನ್ನಡ ಸಾಹಿತ್ಯಲೋಕದ ಎಷ್ಟೋ ಅರ್ಹರಿಗೆ ಕೂಡ ಸಮ್ಮೇಳನಾಧ್ಯಕ್ಷತೆಯ ಅವಕಾಶ ಸಿಗದೇ ಹೋಗಿರುವುದು ನಮ್ಮ ಕಣ್ಣಮುಂದಿದೆ. ಪೂರ್ಣಚಂದ್ರ ತೇಜಸ್ವಿ ಮತ್ತು ಪಿ. ಲಂಕೇಶ್ ಅವರಂತಹ ಲೇಖಕರನ್ನು ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸದೇ ಅಸಡ್ಡೆ ಮಾಡಲಾಯಿತು.

ಈಗ ನಮ್ಮ ನಡುವೆ ಇರುವ ಕನ್ನಡದ ಎಷ್ಟೋ ವಿಮರ್ಶಕರು, ಸಂಶೋಧಕರು, ಚಿಂತಕರು, ಬುದ್ಧಿಜೀವಿಗಳನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಲು ಅದ್ಯಾವ ನೀತಿ ನಿಯಮಗಳು ಅಡ್ಡಿಯಾಗಿವೆಯೋ ತಿಳಿಯದು. ಇನ್ನು ಪುರುಷ ಪ್ರಧಾನತೆ ಎಷ್ಟೊಂದು ಪ್ರಬಲವಾಗಿದೆಯೆಂದರೆ ಬರಹಗಾರ್ತಿಯರನ್ನು ಹಾಗೂ ಅವರ ಸಾಹಿತ್ಯವನ್ನು ಅತ್ಯಂತ ತುಚ್ಛವಾಗಿ ಕಾಣಲಾಗುತ್ತದೆ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿ ಕಾಣುವಂತೆ ಗಂಡಸರಿಂದಲೇ ತುಂಬಿ ಹೋಗಿರುವ ಕಸಾಪಕ್ಕೆ ಪುರುಷರೇ ಕಾಣುತ್ತಾರೆ. ಒಂದು ಶತಮಾನಕ್ಕೂ ಹೆಚ್ಚಿನ ವಯಸ್ಸಾಗಿರುವ ’ಕನ್ನಡ ಸಾಹಿತ್ಯ ಪರಿಷತ್ತು’ ಸಂಸ್ಥೆಯ ಚರಿತ್ರೆಯಲ್ಲಿಯೇ ಇದುವರೆಗೂ ಮಹಿಳೆಯೊಬ್ಬರು ಕೂಡ ಅಧ್ಯಕ್ಷರಾಗಲಿಲ್ಲ. ಸ್ತ್ರೀವಾದಿ ಬರಹಗಾರ್ತಿಯರೆಂದರೆ, ಸ್ತ್ರೀವಾದಿ ಸಾಹಿತ್ಯವೆಂದರೆ ಈಗಲೂ ಕಡೆಗಣ್ಣಲ್ಲಿ ನೋಡುವವರಿದ್ದಾರೆ. ಕನ್ನಡ ಸಾಹಿತ್ಯ ಜಗತ್ತಿನ ಸ್ಥಿತಿಗತಿ ಹೀಗಿರುವಾಗ ಬೇರೆ ಕ್ಷೇತ್ರದವರನ್ನು ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸುವುದು ಹಾಗೂ ಈ ನಿಟ್ಟಿನಲ್ಲಿ ಆಲೋಚಿಸುವುದು ಕೂಡ ಕನ್ನಡ ಸಾಹಿತ್ಯಕ್ಕೆ ಎಸಗುವ ದ್ರೋಹ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.


ಇದನ್ನೂ ಓದಿ: ಡಿಸೆಂಬರ್‌ 20, 21, 22 ರಂದು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

 

ಡಾ. ಸುಭಾಷ್ ರಾಜಮಾನೆ

ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...