“ನಾನು, ನನ್ನ ಮಗ ಜೈಲಿಗೆ ಹೋಗುವಂತಹ ಕೆಲಸ ಮಾಡಿಲ್ಲ, ಅಂತಹ ಸ್ಥಿತಿ ಕೂಡ ಬಂದಿಲ್ಲ. ನಮ್ಮ ವಿರುದ್ಧ ಯಾವುದಾದರೂ ಪ್ರಕರಣವಿದ್ದರೆ ತಾನೇ ಬಂಧಿಸುವುದು?” ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿ.ಟಿ ದೇವೇಗೌಡರು ಹಾಗೂ ಅವರ ಮಗನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಅದನ್ನು ತಪ್ಪಿಸಿದ್ದು ಕುಮಾರಸ್ವಾಮಿ. ಇಲ್ಲದಿದ್ದರೆ ಜಿ.ಟಿ ದೇವೇಗೌಡರು ಮತ್ತು ಅವರ ಮಗ ಜೈಲು ಸೇರುತ್ತಿದ್ದರು” ಎಂಬ ಹೆಚ್.ಡಿ ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದರು.
“ಸಾರ್ವಜನಿಕ ಜೀವನಕ್ಕೆ ಬಂದು 54 ವರ್ಷಗಳಾಯಿತು. ರಾಜಕೀಯವಾಗಿ ನನ್ನ ವಿರುದ್ದ ಯಾರೂ ದೂರು ನೀಡಿಲ್ಲ. ನನ್ನ ಮಗ ಹರೀಶ್ ಗೌಡ 2010ರಿಂದ ಸಾರ್ವಜನಿಕ ಸೇವೆಯಲ್ಲಿದ್ದಾನೆ. ಆತನ ವಿರುದ್ದವೂ ಯಾವುದೇ ಪ್ರಕರಣಗಳಿಲ್ಲ. ದಬ್ಬಾಳಿಕೆ ನಡೆಸುವುದು ಅಥವಾ ಏಕವಚನದಲ್ಲಿ ಮಾತನಾಡುವುದನ್ನು ನಾವು ಮಾಡಿಲ್ಲ” ಎಂದು ಪರೋಕ್ಷವಾಗಿ ಕುಟುಕಿದರು.
“ನಾನು ಮಾಧ್ಯಮಗಳಿಂದ ದೂರವಿದ್ದೇನೆ. ಏನನ್ನೂ ಮಾತನಾಡಬಾರದು ಎಂದು ನಿರ್ಧರಿಸಿದ್ದೇನೆ. ಆದರೂ, ಪದೇ ಪದೇ ನನ್ನ ಹೆಸರನ್ನೇಕೆ ತೆಗೆಯುತ್ತಾರೆ? ನನ್ನ ಕ್ಷೇತ್ರದ ಅಭಿವೃದ್ದಿ ಬಿಟ್ಟು ಬೇರೇನೂ ವಿಚಾರ ನನ್ನ ತಲೆಯಲ್ಲಿ ಇಲ್ಲ” ಎಂದರು.
ಇದನ್ನೂ ಓದಿ | ಪೋಕ್ಸೋ ಪ್ರಕರಣ : ಯಡಿಯೂರಪ್ಪ ಅರ್ಜಿ ವಿಚಾರಣೆ ಮುಂದೂಡಿಕೆ


