Homeಮುಖಪುಟ'ಇಸ್ಲಾಮೋಫೋಬಿಕ್' ವಿಡಿಯೋ ಹಂಚಿಕೊಂಡ ಅಸ್ಸಾಂ ಬಿಜೆಪಿ: ವ್ಯಾಪಕ ವಿರೋಧ, ದೂರು ದಾಖಲಿಸಲು ಮುಂದಾದ ಪ್ರತಿಪಕ್ಷಗಳು

‘ಇಸ್ಲಾಮೋಫೋಬಿಕ್’ ವಿಡಿಯೋ ಹಂಚಿಕೊಂಡ ಅಸ್ಸಾಂ ಬಿಜೆಪಿ: ವ್ಯಾಪಕ ವಿರೋಧ, ದೂರು ದಾಖಲಿಸಲು ಮುಂದಾದ ಪ್ರತಿಪಕ್ಷಗಳು

- Advertisement -
- Advertisement -

ಬಿಜೆಪಿ ಅಸ್ಸಾಂ ಘಟಕ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ‘ಇಸ್ಲಾಮೋಫೋಬಿಕ್’ ವಿಡಿಯೋ ಒಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷವು ಮುಸ್ಲಿಮರನ್ನು ನಿಂದಿಸುತ್ತಿದೆ ಮತ್ತು ಕೋಮು ದ್ವೇಷವನ್ನು ಪ್ರಚೋದಿಸುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.

‘ಬಿಜೆಪಿ ಇಲ್ಲದ ಅಸ್ಸಾಂ’ ಎಂಬ ಶೀರ್ಷಿಕೆಯ ಈ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವಿಡಿಯೋದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿರುವ ಮುಸ್ಲಿಮರನ್ನು ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಅಕ್ರಮ ವಲಸಿಗರಂತೆ ಚಿತ್ರಿಸಲಾಗಿದೆ. ವಿಡಿಯೋದಲ್ಲಿ ಕಾಂಗ್ರೆಸ್ ನಾಯಕರಾದ ಗೌರವ್ ಗೊಗೊಯ್ ಮತ್ತು ರಾಹುಲ್ ಗಾಂಧಿ ಅವರನ್ನು ತೋರಿಸಿ, ಅವರಿಬ್ಬರು ‘ಪಾಕಿಸ್ತಾನದ ಜೊತೆ ಸಂಪರ್ಕ’ ಹೊಂದಿರುವಂತೆ ಬಿಂಬಿಸಲಾಗಿದೆ.

ರಾಜಕೀಯ ಮುಖಂಡರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋ ಪ್ರಚೋದನಕಾರಿ ಎಂದು ಖಂಡಿಸಿದ್ದಾರೆ. ಇದು ಅಸ್ಸಾಂನಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

ಚುನಾವಣಾ ಆಯೋಗ ಈ ವಿಡಿಯೋ ಬಗ್ಗೆ ಗಮನಹರಿಸಬೇಕು ಎಂದು ಅಸ್ಸಾಂ ಕಾಂಗ್ರೆಸ್ ಒತ್ತಾಯಿಸಿದೆ. ಬಿಜೆಪಿ ವಿರುದ್ದ ದೂರು ದಾಖಲಿಸಲು ಯೋಜಿಸುತ್ತಿರುವುದಾಗಿ ತಿಳಿಸಿದೆ.

ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಮತ್ತು ಲೋಕಸಭೆಯ ವಿರೋಧ ಪಕ್ಷದ ಉಪನಾಯಕ ಗೌರವ್ ಗೊಗೊಯ್ ಅವರು ವಿಡಿಯೋಗೆ ಖಂಡನೆ ವ್ಯಕ್ತಪಡಿಸಿದ್ದು, “ಇದು ಅಸ್ಸಾಮಿ ಸಮಾಜ ಮತ್ತು ಅದರ ಸಂಪ್ರದಾಯಗಳನ್ನು ತಪ್ಪಾಗಿ ಬಿಂಬಿಸುತ್ತದೆ” ಎಂದು ಹೇಳಿದ್ದಾರೆ.

ಬಿಜೆಪಿ ಐಟಿ ಸೆಲ್ ಸೃಷ್ಟಿಸುವ ಫೋಟೋ, ವಿಡಿಯೋ, ಮಾತು, ಕೃತಿ ಯಾವುದೂ ಕೂಡ ಅಸ್ಸಾಮಿ ಸಮಾಜದ ಮೇಲೆ ಹಾನಿ ಮಾಡುವ ಶಕ್ತಿ ಹೊಂದಿಲ್ಲ” ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಗೊಗೊಯ್ ತಿಳಿಸಿದ್ದಾರೆ.

“ಅಸ್ಸಾಂ ಅನ್ನು ಮಹಾಪುರುಷರಾದ ಶ್ರೀಮಂತ ಶಂಕರದೇವ, ಅಝಾನ್ ಪೀರ್, ಸ್ವರ್ಗದೇವ್ ಸಿಯುಕಾಫ, ಲಚಿತ್ ಬೋರ್ಫುಕನ್ ಮತ್ತು ಭೂಪೇನ್ ಹಝಾರಿಕಾ ಪೋಷಿಸಿದ್ದಾರೆ. ದನ, ಕಲ್ಲಿದ್ದಲು, ವೀಳ್ಯದೆಲೆ ಅಥವಾ ಮಾದಕವಸ್ತುಗಳ ಕಳ್ಳಸಾಗಣೆಗೆ ಸಂಬಂಧಿಸಿದ ಜನರು ಅಸ್ಸಾಮಿಗಳ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹೆಮ್ಮೆಯ ಮತ್ತು ಶ್ರೇಷ್ಠ ರಾಜ್ಯವಾದ ಅಸ್ಸಾಂ, ತನ್ನ ಜನರು ಹೊಸ ಎತ್ತರವನ್ನು ತಲುಪಲು ಸಹಾಯ ಮಾಡುವ ರಾಜಕಾರಣಿಗಳಿಗೆ ಅರ್ಹವಾಗಿದೆ” ಎಂದು ಗೊಗೊಯ್ ಹೇಳಿದ್ದಾರೆ.

ವಿಡಿಯೋ ವಿರುದ್ದ ಕಾಂಗ್ರೆಸ್ ಪಕ್ಷವು ಗುವಾಹಟಿಯಲ್ಲಿ ಔಪಚಾರಿಕ ಪೊಲೀಸ್ ದೂರು ದಾಖಲಿಸಲಿದೆ ಎಂದು ಗೊಗೊಯ್ ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ಗೊಗೊಯ್ ಅವರು ರಾಜ್ಯದ ಬಗ್ಗೆ ತಮ್ಮ ಪಕ್ಷದ ದೃಷ್ಟಿಕೋನವನ್ನು ವಿವರಿಸಿದ್ದಾರೆ: “ನಾವು ಪೈಲಟ್‌ಗಳು, ಇಂಜಿನಿಯರ್‌ಗಳು, ವೈದ್ಯರು, ಉದ್ಯಮಿಗಳು, ಬ್ಯಾಂಕರ್‌ಗಳು ಮತ್ತು ವ್ಯಾಪಾರ ಮಾಲೀಕರ ಸಮಾಜವನ್ನು ನಿರ್ಮಿಸಬೇಕೆಂದು ಬಯಸುತ್ತೇವೆ. ಕಠಿಣ ಪರಿಶ್ರಮವು ದ್ವೇಷವನ್ನು ಹಿಂದಿಕ್ಕುವ, ಸಭ್ಯತೆಯು ದುರಹಂಕಾರಕ್ಕಿಂತ ಮುಖ್ಯವಾದ, ಪ್ರಜಾಪ್ರಭುತ್ವವು ನಿರಂಕುಶಾಧಿಕಾರವನ್ನು ಹತ್ತಿಕ್ಕುವ ಮತ್ತು ಎಲ್ಲರನ್ನೂ ಗೌರವದಿಂದ ನಡೆಸಿಕೊಳ್ಳುವ ಅಸ್ಸಾಂ ಅನ್ನು ನಾವು ನೋಡಲು ಬಯಸುತ್ತೇವೆ” ಎಂದಿದ್ದಾರೆ.

ಅಸ್ಸಾಂನ ಮತ್ತೊಂದು ಪ್ರಮುಖ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಕೂಡ ಬಿಜೆಪಿಯ ವಿಡಿಯೋವನ್ನು ಟೀಕಿಸಿದೆ.

“ಈ ಎಐ ವಿಡಿಯೋ ಮೂಲಕ ಅಸ್ಸಾಂ ಬಿಜೆಪಿ ಭಯದ ಭಾವನೆಯನ್ನು ಸೃಷ್ಟಿಸಲು ಬಯಸುತ್ತಿದೆ” ಎಂದು ಎಐಯುಡಿಎಫ್‌ನ ಶಾಸಕ ಮತ್ತು ಪ್ರಧಾನ ಕಾರ್ಯದರ್ಶಿ ಅಮೀನುಲ್ ಇಸ್ಲಾಂ ಹೇಳಿದ್ದಾರೆ.

“ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೆ ಅಸ್ಸಾಂ ಸಂಪೂರ್ಣ ಮುಸ್ಲಿಂ ಸ್ವಾಧೀನವಾಗುತ್ತದೆ ಎಂಬ ಭಾವನೆಯನ್ನು ಬಹುಸಂಖ್ಯಾತ ಸಮುದಾಯದಲ್ಲಿ ಬಿತ್ತಲು ಅವರು ಬಯಸುತ್ತಿದ್ದಾರೆ. ಅವರು ಈ ಹಿಂದೆಯೂ ಇಂತಹ ನಿರೂಪಣೆಗಳನ್ನು ಮಂಡಿಸಿದ್ದಾರೆ. ಕೆಲವೊಮ್ಮೆ ‘ಲವ್ ಜಿಹಾದ್’ ಎಂದು ಕರೆಯಲ್ಪಡುವ ಮೂಲಕ, ಕೆಲವೊಮ್ಮೆ ‘ಬೌದ್ಧಿಕ ಜಿಹಾದ್’ ಮೂಲಕ ಮುಸ್ಲಿಮರನ್ನು ರಾಕ್ಷಸೀಕರಿಸಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ದ್ವೇಷ ಭಾಷಣದ ಒಂದು ರೂಪವಾಗಿದೆ. ಇದರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಬೇಕು ಮತ್ತು ನಾವು ಚುನಾವಣಾ ಆಯೋಗವನ್ನು ಸಂಪರ್ಕಿಸಲು ಯೋಜಿಸಿದ್ದೇವೆ” ಎಂದು ಅಮೀನುಲ್ ಇಸ್ಲಾಂ ತಿಳಿಸಿದ್ದಾರೆ.

ವಿಡಿಯೋಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, “ಬಿಜೆಪಿ ಮುಸ್ಲಿಂ ಮುಕ್ತ ಭಾರತ’ದ ಗುರಿ ಹೊಂದಿದೆ ಎಂದಿದ್ದಾರೆ.

“ಬಿಜೆಪಿ ಇಲ್ಲದಿದ್ದರೆ ಮುಸ್ಲಿಂ ಬಹುಸಂಖ್ಯಾತ ಅಸ್ಸಾಂ ಇರುತ್ತಿತ್ತು ಎಂದು ತೋರಿಸುವ ಅಸಹ್ಯಕರ ಕೃತಕ ಬುದ್ಧಿಮತ್ತೆಯ ವಿಡಿಯೋವನ್ನು ಬಿಜೆಪಿ ಅಸ್ಸಾಂ ಪೋಸ್ಟ್ ಮಾಡಿದೆ. ಅವರು ಕೇವಲ ಓಟಿಗಾಗಿ ಈ ಭಯ ಹುಟ್ಟಿಸುತ್ತಿಲ್ಲ, ಇದು ನಿಜ ರೂಪದಲ್ಲಿ ಅಸಹ್ಯಕರ ಹಿಂದುತ್ವ ಸಿದ್ಧಾಂತವಾಗಿದೆ”ಎಂದು ಓವೈಸಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ಕುರಿತ ಎಐ ವಿಡಿಯೋ ತೆಗೆದು ಹಾಕಲು ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದ್ದನ್ನು ನೆನಪಿಸಿದ ಓವೈಸಿ, “ಪ್ರತಿಯೊಬ್ಬರಿಗೂ ಅವರ ತಾಯಿ ಮೇಲೆ ದೊಡ್ಡ ಗೌರವವಿದೆ. ಅಸ್ಸಾಂ ಬಿಜೆಪಿಯ ಅಸಹ್ಯಕರ ವಿಡಿಯೋಗೂ ಅದೇ ತತ್ವವನ್ನು ಅನುಸರಿಸಬೇಕು. ಮುಸ್ಲಿಂ ನಾಗರಿಕರನ್ನು ಅಪಾಯಕಾರಿ ಎಂದು, ನಿರಂತರವಾಗಿ ದಮನಿಸಬೇಕಾದ ಗುಂಪು ಎಂದು ಚಿತ್ರಿಸುವುದು ಅವಹೇಳನಕಾರಿ ಮಾತ್ರವಲ್ಲ, ನರಮೇಧವೂ ಆಗಿದೆ” ಎಂದು ಓವೈಸಿ ಕಿಡಿಕಾರಿದ್ದಾರೆ.

“ಬಿಜೆಪಿ ಉದ್ದೇಶಪೂರ್ಕವಾಗಿ ಇದನ್ನು ಮಾಡುತ್ತಿದೆ. ಅಸ್ಸಾಂ ಬಿಜೆಪಿ ವಿಡಿಯೋ ಪೋಸ್ಟ್‌ ಮಾಡಿರುವುದು ಹೊಸ ವಿಷಯವೇನಲ್ಲ. ಎಲ್ಲೆಲ್ಲಿ ಚುನಾವಣೆಗಳು ಇರುತ್ತವೋ ಅಂತಹ ರಾಜ್ಯಗಳಲ್ಲಿ ಬಿಜೆಪಿ ಇದನ್ನು ಮಾಡುತ್ತವೆ. ನಿಮಗೆ ನೆನಪಿದ್ದರೆ, ಕರ್ನಾಟಕದಲ್ಲೂ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಇದೇ ರೀತಿ ಮಾಡಿತ್ತು. ಮುಂದೆ ಅಸ್ಸಾಂನಲ್ಲಿ ಚುನಾವಣೆ ಇದೆ. ಬಿಜೆಪಿಯ ಇಂತಹ ನಡೆಗಳು ಮುಸ್ಲಿಮರ ವಿರುದ್ದ ಹಿಂಸಾಚಾರವನ್ನು ಪ್ರಚೋದಿಸುತ್ತದೆ” ಎಂದಿದ್ದಾರೆ.

“ಕೋಮು ದ್ವೇಷವನ್ನು ಹುಟ್ಟುಹಾಕಲು ‘ಮುಸ್ಲಿಂ ಬಹುಸಂಖ್ಯಾತ ಅಸ್ಸಾಂ’ ಎಂಬ ಎಐ ವಿಡಿಯೋ ಹಂಚಿಕೊಳ್ಳುವ ಮೂಲಕ ಅಸ್ಸಾಂ ಬಿಜೆಪಿ ಅತ್ಯಂತ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದೆ. ಇದು ಸಾಮಾಜಿಕ ಸಾಮರಸ್ಯದ ಮೇಲಿನ ಉದ್ದೇಶಪೂರ್ವಕ ದಾಳಿಯಾಗಿದೆ. ನಮ್ಮ ಹಂಚಿಕೆಯ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ. ನಿಮ್ಮ ವಿಷಕಾರಿ ಅಭಿಯಾನಕ್ಕೆ ಅಸ್ಸಾಂನ ಜನರು ಸರಿಯಾದ ಉತ್ತರವನ್ನು ನೀಡುತ್ತಾರೆ” ಎಂದು ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಖಾನ್ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ವಿಡಿಯೋಗೆ ವಿರೋಧ ವ್ಯಕ್ತವಾದ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಬಿಜೆಪಿ ವಕ್ತಾರ ರೂಪಮ್ ಗೋಸ್ವಾಮಿ, ವಿಡಿಯೋವನ್ನು ಸಮರ್ಥಿಸಿಕೊಂಡಿದ್ದಾರೆ. ಎನ್‌ಡಿಟಿವಿ ಜೊತೆ ಮಾತನಾಡಿರುವ ಅವರು, “ಸ್ಥಳೀಯ ಸಮುದಾಯಗಳ ಜೀವನ, ಜೀವನೋಪಾಯ, ಭೂಮಿ ಮತ್ತು ಸಂಸ್ಕೃತಿಗೆ ಬೆದರಿಕೆಯೊಡ್ಡಿರುವ ಜನಸಂಖ್ಯಾ ಬದಲಾವಣೆಯನ್ನು ರಾಜ್ಯವು ಹೇಗೆ ಅನುಭವಿಸಿದೆ ಎಂಬುದರ ಕುರಿತು ಸತ್ಯವನ್ನು ಈ ವಿಡಿಯೋ ಪ್ರತಿಬಿಂಬಿಸುತ್ತದೆ ಎಂದು ಅಸ್ಸಾಂ ಬಿಜೆಪಿ ನಂಬುತ್ತದೆ” ಎಂದಿದ್ದಾರೆ.

ಅದಾನಿ ಕುರಿತ ಪೋಸ್ಟ್ ತೆಗೆದು ಹಾಕಲು ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಆದೇಶ; ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...