ಅಕ್ರಮ ವಲಸಿಗರು ಎಂದು ಭಾರತೀಯ ಅಧಿಕಾರಿಗಳು ಬಲವಂತವಾಗಿ ಗಡಿಯಾಚೆಗೆ ತಳ್ಳಿರುವ ತುಂಬು ಗರ್ಭಿಣಿ ಬಂಗಾಳಿ ಮಹಿಳೆ ಬಾಂಗ್ಲಾದೇಶದ ಜೈಲಿನಿಂದ ಸೋಮವಾರ (ಡಿಸೆಂಬರ್ 1) ಸಂಜೆ ಬಿಡುಗಡೆಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೂರು ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದ ಸುನಾಲಿ ಖಾತೂನ್ ಎಂಬ ಮಹಿಳೆ, ಪತಿ ಡ್ಯಾನಿಶ್ ಎಸ್ಕೆ, ಎಂಟು ವರ್ಷದ ಮಗ ಶಬೀರ್ ಜೊತೆ ಸೋಮವಾರ ಸಂಜೆ 7.30ರ ಸುಮಾರಿಗೆ ಬಾಂಗ್ಲಾದ ಚಾಪೈನವಾಬ್ಗಂಜ್ ಜೈಲಿನಿಂದ ಹೊರಬಂದಿದ್ದಾರೆ. ಇವರ ಜೊತೆ ಗಡಿಪಾರಾಗಿ ಜೈಲು ಸೇರಿದ್ದ ಸ್ವೀಟಿ ಬೀಬಿ ಎಂಬ ಮತ್ತೊಬ್ಬರು ಮಹಿಳೆ ಮತ್ತು ಅವರ ಇಬ್ಬರು ಗಂಡು ಮಕ್ಕಳು ಕೂಡ ಇದೇ ವೇಳೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಚಾಪೈನವಾಬ್ಗಂಜ್ನ ಸ್ಥಳೀಯ ನ್ಯಾಯಾಲಯ ಮಾನವೀಯ ಆಧಾರದಲ್ಲಿ ಆರು ಮಂದಿಗೂ ಜಾಮೀನು ನೀಡಿದೆ. ಬಾಂಗ್ಲಾದೇಶದ ನಾಗರಿಕರೊಬ್ಬರು ಇವರ ಪರ ಶ್ಯೂರಿಟಿ ನಿಂತು 5,000 ಟಾಕಾ ಜಾಮೀನು ಬಾಂಡ್ ಒದಗಿಸಿದ್ದಾರೆ.
‘ಮಾನವೀಯ ಆಧಾರದ ಮೇಲೆ’ ಸುನಾಲಿ ಖಾತೂನ್ ಮತ್ತು ಅವರ ಮಗನಿಗೆ ಭಾರತಕ್ಕೆ ಮರಳಲು ಅವಕಾಶ ನೀಡುವುದನ್ನು ಪರಿಗಣಿಸುವಂತೆ ಭಾರತೀಯ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ದಿನವೇ ಖಾತೂನ್ ಮತ್ತು ಅವರ ಕುಟುಂಬಸ್ಥರು ಬಾಂಗ್ಲಾದ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಖಾತೂನ್ ಅವರು ಗರ್ಭಿಣಿಯಾಗಿರುವುದನ್ನು ಗಮನಿಸಿ, ಪಶ್ಚಿಮ ಬಂಗಾಳದ ಮಾಲ್ಡಾ ಗಡಿಯ ಮೂಲಕ ಭಾರತಕ್ಕೆ ವಾಪಾಸಾಗಲು ಅನುಮತಿ ನೀಡಬಹುದೇ ಎಂಬುದರ ಕುರಿತು ಸೂಚನೆಗಳನ್ನು ಪಡೆಯಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಹೇಳಿದೆ.
ಆದರೆ, ಸುಪ್ರೀಂ ಕೋರ್ಟ್ ಖಾತೂನ್ ಅವರ ಪತಿಯ ವಾಪಸಾತಿ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಪ್ರಕರಣದ ಮುಂದಿನ ವಿಚಾರಣೆ ಬುಧವಾರ (ಡಿಸೆಂಬರ್ 3) ನಡೆಯಲಿದೆ.
ಚಾಪೈನವಾಬ್ಗಂಜ್ ನ್ಯಾಯಾಲಯ ಗಡಿಪಾರಾದವರ ಗುಂಪಿನಲ್ಲಿ ಗರ್ಭಿಣಿ ಮತ್ತು ಮಕ್ಕಳು ಇದ್ದಾರೆ ಎಂಬ ವಾದವನ್ನು ಅಂಗೀಕರಿಸಿ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದೆ.
ಆದಾಗ್ಯೂ, ಅವರು ಬಾಂಗ್ಲಾದೇಶದಲ್ಲಿಯೇ ಇರಬೇಕು ಮತ್ತು ಅಗತ್ಯವಿದ್ದಾಗ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ಮ್ಯಾಜಿಸ್ಟ್ರೇಟ್ ವಿಧಿಸಿದ್ದಾರೆ. ಖಾತೂನ್ ಅವರಿಗೆ ಸೂಕ್ತ ವೈದ್ಯಕೀಯ ಆರೈಕೆ ನೀಡಬೇಕು ಮತ್ತು ಅಗತ್ಯವಿದ್ದರೆ ಆಸ್ಪತ್ರೆಗೆ ದಾಖಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ವಿವರಿಸಿದೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಖಾತೂನ್, ಭಾರತಕ್ಕೆ ಮರಳಲು ಬಯಸುವುದಾಗಿ ಹೇಳಿಕೊಂಡಿದ್ದು, ಇತ್ತೀಚೆಗೆ ತನ್ನ ಆರೋಗ್ಯ ಸರಿಯಿಲ್ಲ ಎಂದು ತಿಳಿಸಿದ್ದಾರೆ. ತಮ್ಮ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಲವಾರು ತಿಂಗಳುಗಳಿಂದ ಈ ಕುಟುಂಬಗಳಿಗೆ ಸಹಾಯ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಎಸ್ಕೆ ಮೊಫೀಝುಲ್ ಅವರು, ಜಿಲ್ಲೆಯಲ್ಲಿ ಅವರಿಗೆ ಬಾಡಿಗೆ ವಸತಿ ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಜಾಮೀನು ಆದೇಶದಲ್ಲಿ ಖಾತೂನ್ ಮತ್ತು ಉಳಿದವರನ್ನು ಭಾರತಕ್ಕೆ ವಾಪಸ್ ಕಳುಹಿಸುವ ಯಾವುದೇ ನಿರ್ದೇಶನವಿಲ್ಲ ಎಂಬುವುದಾಗಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ತಿಳಿಸಿದೆ.
ಖಾತೂನ್, ಸ್ವೀಟಿ ಬೀಬಿ ಮತ್ತು ಅವರ ಕುಟುಂಬಗಳು ಪಶ್ಚಿಮ ಬಂಗಾಳದ ಬಿರ್ಬಮ್ ಜಿಲ್ಲೆಯವರು ಎಂದು ಹೇಳಿಕೊಂಡಿದ್ದಾರೆ. ಖಾತೂನ್, ಅವರ ಪತಿ ಮತ್ತು ಮಗನನ್ನು ಜೂನ್ 20ರಂದು ದೆಹಲಿಯಲ್ಲಿ ಬಂಧಿಸಲಾಗಿತ್ತು. ಆರು ದಿನಗಳ ನಂತರ ಮೂವರನ್ನೂ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿತ್ತು.
ಸೆಪ್ಟೆಂಬರ್ 26ರಂದು ಕಲ್ಕತ್ತಾ ಹೈಕೋರ್ಟ್ ಖಾತೂನ್ ಸೇರಿದಂತೆ ಆರು ಜನರ ವಿರುದ್ಧದ ಗಡಿಪಾರು ಆದೇಶವನ್ನು ರದ್ದುಗೊಳಿಸಿತ್ತು. ನಾಲ್ಕು ವಾರಗಳಲ್ಲಿ ಅವರನ್ನು ಪಶ್ಚಿಮ ಬಂಗಾಳಕ್ಕೆ ಮರಳಿ ಕರೆತರುವಂತೆ ನಿರ್ದೇಶಿಸಿತ್ತು.
ನಾಲ್ಕು ವಾರಗಳ ಅವಧಿ ಅಕ್ಟೋಬರ್ 24ರಂದು ಕೊನೆಗೊಂಡಿದೆ. ಅದಕ್ಕೂ ಎರಡು ದಿನಗಳ ಮೊದಲು ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಹೈಕೋರ್ಟ್ಗೆ ಈ ಪ್ರಕರಣವನ್ನು ವಿಚಾರಣೆ ನಡೆಸಲು ಅಧಿಕಾರವಿದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಮುಂದುವರಿದಿದೆ.
ಮೇ ತಿಂಗಳಿನಿಂದ, ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸಾವಿರಾರು ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರನ್ನು ಬಂಧಿಸಿ, ಅವರು ಭಾರತೀಯ ನಾಗರಿಕರೋ ಅಥವಾ ದಾಖಲೆರಹಿತ ವಲಸಿಗರೋ ಎಂಬುವುದನ್ನು ಸಾಬೀತುಪಡಿಸುವಂತೆ ಒತ್ತಾಯಿಸಲಾಗುತ್ತಿದೆ.
ಭಾರತೀಯ ಪ್ರಜೆಗಳಾದ ಹಲವಾರು ಕಾರ್ಮಿಕರನ್ನು ಅಕ್ರಮ ವಲಸಿಗರು ಎಂದು ಆರೋಪಿಸಿ ಈಗಾಗಲೇ ಬಲವಂತವಾಗಿ ಬಾಂಗ್ಲಾ ಗಡಿಯಾಚೆಗೆ ತಳ್ಳಲಾಗಿದೆ ಎಂಬ ಆರೋಪವಿದೆ.


