Homeಮುಖಪುಟಎಲ್ಲಾ ಮೊಬೈಲ್ ಫೋನ್‌ಗಳಲ್ಲಿ 'ಸಂಚಾರ್ ಸಾಥಿ' ಆ್ಯಪ್ ಕಡ್ಡಾಯಗೊಳಿಸಿದ ಕೇಂದ್ರ : ಗೌಪ್ಯತೆ ಕಳೆದುಕೊಳ್ಳುವ ಆತಂಕ

ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯಗೊಳಿಸಿದ ಕೇಂದ್ರ : ಗೌಪ್ಯತೆ ಕಳೆದುಕೊಳ್ಳುವ ಆತಂಕ

- Advertisement -
- Advertisement -

ಸ್ಮಾರ್ಟ್‌ಫೋನ್ ತಯಾರಕರು ಎಲ್ಲಾ ಹೊಸ ಮೊಬೈಲ್‌ ಫೋನ್‌ಗಳಲ್ಲಿ ಸರ್ಕಾರಿ ಸ್ವಾಮ್ಯದ ಸೈಬರ್ ಭದ್ರತಾ ಅಪ್ಲಿಕೇಶನ್ ‘ಸಂಚಾರ್ ಸಾಥಿ’ಯನ್ನು ಮೊದಲೇ ಇನ್‌ಸ್ಟಾಲ್‌ (Pre-install) ಮಾಡಬೇಕು ಮತ್ತು ಬಳಕೆದಾರರು ಅದನ್ನು ಡಿಲಿಟ್ ಮಾಡದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸಂವಹನ ಸಚಿವಾಲಯ ನಿರ್ದೇಶಿಸಿದೆ.

ಸುದ್ದಿ ಸಂಸ್ಥೆ ರಾಯಿಟರ್ಸ್ ಕೇಂದ್ರದ ನಿರ್ದೇಶನದ ಕುರಿತು ಮೊದಲು ವರದಿ ಮಾಡಿದ್ದು, ಈ ವರದಿಯ ಬಳಿಕ ದೇಶದಾದ್ಯಂತ ಗಂಭೀರ ಗೌಪ್ಯತೆಯ ಕಳವಳ ವ್ಯಕ್ತವಾಗಿದೆ.

ರಾಯಿಟರ್ಸ್ ವರದಿ ಪ್ರಕಟಗೊಂಡ ತಕ್ಷಣ, ಅದನ್ನು ಹಂಚಿಕೊಂಡ ಅನೇಕರು ಕೇಂದ್ರದ ನಿರ್ದೇಶನದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಲು ಪ್ರಾರಂಭಿಸಿದರು. ನಂತರ, ಪತ್ರಕರ್ತ ನಿಖಿಲ್ ಪಹ್ವಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಅಧಿಕೃತ ಆದೇಶದ ಪ್ರತಿ ಗಮನಿಸಿದಾಗ, ಅದು ಕಳೆದ ವರ್ಷದ (2024ರ) ಟೆಲಿಕಾಂ ಸೈಬರ್ ಭದ್ರತಾ ನಿಯಮಗಳಿಗೆ ಅಕ್ಟೋಬರ್ 2025ರಲ್ಲಿ ಮಾಡಲಾದ ತಿದ್ದುಪಡಿಯ ಅಡಿ ನೀಡಲಾದ ನಿರ್ದೇಶನ ಎಂದು ಗೊತ್ತಾಗಿದೆ ಎಂದು ದಿ ವೈರ್ ವರದಿ ಮಾಡಿದೆ.

ಕೇಂದ್ರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಪತ್ರಿಕಾ ಪ್ರಕಟಣೆಯ ಪ್ರಕಾರ, ಮೊಬೈಲ್ ಹ್ಯಾಂಡ್‌ಸೆಟ್‌ಗಳ ತಯಾರಕರು ಮತ್ತು ಆಮದುದಾರರು ಈ ನಿರ್ದೇಶನದ ಅನುಷ್ಠಾನವನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ವರದಿ ಸಲ್ಲಿಸಲು 120 ದಿನಗಳ ಕಾಲಾವಕಾಶವಿದೆ ಎಂದು ವೈರ್ ವರದಿ ವಿವರಿಸಿದೆ.

ಕೇಂದ್ರ ಸರ್ಕಾರ ತನ್ನ ದೂರಸಂಪರ್ಕ ಇಲಾಖೆಯ ಮೂಲಕ ಜನವರಿಯಲ್ಲಿ ‘ಸಂಚಾರ್ ಸಾಥಿ ಅಪ್ಲಿಕೇಶನ್’ ಅಭಿವೃದ್ದಿಪಡಿಸಿದೆ. ಸೈಬರ್ ವಂಚನೆಗಳಿಗಾಗಿ ಟೆಲಿಕಾಂ ಸಂಪನ್ಮೂಲಗಳ ದುರುಪಯೋಗ ಮಡುವುದನ್ನು ತಡೆಯುವುದು ಮತ್ತು ಟೆಲಿಕಾಂ ಸೈಬರ್ ಭದ್ರತೆಯನ್ನು ಕಾಪಾಡುವುದು ಇದರ ಉದ್ದೇಶ ಎಂದು ಸರ್ಕಾರ ಹೇಳಿಕೊಂಡಿದೆ.

ಸರ್ಕಾರದ ಪ್ರಕಾರ, ಈ ಅಪ್ಲಿಕೇಶನ್ ನಾಗರಿಕರು ಶಂಕಿತ ವಂಚನೆ ಸಂವಹನಗಳನ್ನು ಪತ್ತೆ ಹಚ್ಚುವುದು, ಕಳೆದುಹೋದ/ಕಳುವಾದ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ವರದಿ ಮಾಡುವುದು, ಅವರ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸುವುದು, ಬ್ಯಾಂಕ್‌ಗಳು/ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹ ಸಂಪರ್ಕ ವಿವರಗಳಂತಹ ಇತರ ಸೌಲಭ್ಯಗಳೊಂದಿಗೆ ಐಎಂಇಐ (IMEI) ಸಂಖ್ಯೆಯ ಮೂಲಕ ಮೊಬೈಲ್ ಹ್ಯಾಂಡ್‌ಸೆಟ್‌ನ ನೈಜತೆಯನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

ಐಎಂಇಐ ಅಥವಾ ಅಂತಾರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತು (International Mobile Equipment Identity-IMEI) ಒಂದು ವಿಶಿಷ್ಟವಾದ 15-ಅಂಕಿಯ ಸಂಕೇತವಾಗಿದ್ದು, ಇದು ಫೋನ್ ಕಂಪನಿಗಳು ಮತ್ತು ಮೊಬೈಲ್ ನೆಟ್‌ವರ್ಕ್‌ಗಳಿಗೆ ಸಾಧನಗಳನ್ನು ಗುರುತಿಸಲು ಮತ್ತು ದೃಢೀಕರಿಸಲು ಸಹಾಯ ಮಾಡುತ್ತದೆ.

‘ಸಂಚಾರ್ ಸಾಥಿ ಅಪ್ಲಿಕೇಶನ್’ ಅನ್ನು ಮೊದಲೇ ಇನ್‌ಸ್ಟಾಲ್ ಮಾಡುವ ನಿರ್ದೇಶನದ ಉದ್ದೇಶ ಮೊಬೈಲ್ ಹ್ಯಾಂಡ್‌ಸೆಟ್‌ಗಳ ನೈಜತೆಯನ್ನು ಪರಿಶೀಲಿಸುವುದು ಈ ಎಂದು ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ, ಸರ್ಕಾರ ಫೋನ್ ತಯಾರಕರು ಮತ್ತು ಮಾರಾಟಗಾರರಿಗೆ ಈ ಕೆಳಗಿನ ಆದೇಶಗಳನ್ನು ನೀಡಿದೆ:

  1. ಭಾರತದಲ್ಲಿ ಬಳಕೆಗಾಗಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳಲಾದ ಎಲ್ಲಾ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ‘ಸಂಚಾರ್ ಸಾಥಿ’ ಮೊಬೈಲ್ ಅಪ್ಲಿಕೇಶನ್ ಅನ್ನು ಮೊದಲೇ ಇನ್‌ಸ್ಟಾಲ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  2. ಮೊದಲೇ ಇನ್‌ಸ್ಟಾಲ್ ಮಾಡಲಾದ ಸಂಚಾರ್ ಸಾಥಿ ಅಪ್ಲಿಕೇಶನ್ ಮೊದಲ ಬಳಕೆ ಅಥವಾ ಸಾಧನ ಸೆಟಪ್ ಸಮಯದಲ್ಲಿ ಅಂತಿಮ ಬಳಕೆದಾರರಿಗೆ ಸುಲಭವಾಗಿ ಗೋಚರಿಸುತ್ತದೆ ಮತ್ತು ಪ್ರವೇಶಿಸಬಹುದಾಗಿದೆ ಮತ್ತು ಅದರ ಕ್ರಿಯಾತ್ಮಕತೆಯನ್ನು ನಿಷ್ಕ್ರಿಯಗೊಳಿಸಲಾಗಿಲ್ಲ ಅಥವಾ ನಿರ್ಬಂಧಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ.
  3. ಭಾರತದಲ್ಲಿ ಈಗಾಗಲೇ ತಯಾರಿಸಲಾದ ಮತ್ತು ಮಾರಾಟ ಮಾರ್ಗಗಳಲ್ಲಿರುವ ಅಂತಹ ಎಲ್ಲಾ ಸಾಧನಗಳಿಗೆ, ಮೊಬೈಲ್ ಹ್ಯಾಂಡ್‌ಸೆಟ್‌ಗಳ ತಯಾರಕರು ಮತ್ತು ಆಮದುದಾರರು ಸಾಫ್ಟ್‌ವೇರ್ ನವೀಕರಣಗಳ ಮೂಲಕ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಲು ಪ್ರಯತ್ನಿಸಬೇಕು.

ಈಗಾಗಲೇ ಪೂರೈಕೆ ಸರಪಳಿಯಲ್ಲಿರುವ ಸಾಧನಗಳಿಗೆ, ತಯಾರಕರು ಸಾಫ್ಟ್‌ವೇರ್ ನವೀಕರಣಗಳ ಮೂಲಕ ಅಪ್ಲಿಕೇಶನ್ ಅನ್ನು ಮುಂದುವರಿಸಲು ತಿಳಿಸಲಾಗಿದೆ.

ಆಪಲ್ ಕಂಪನಿಯು ತನ್ನ ಸ್ವಂತ (ಪ್ರೊಪ್ರೈಟರಿ) ಅಪ್ಲಿಕೇಶನ್‌ಗಳನ್ನು ಮಾತ್ರ ಪೂರ್ವನಿಯೋಜಿತವಾಗಿ (pre-install) ಇರಿಸುತ್ತದೆ ಮತ್ತು ‘ಸ್ಮಾರ್ಟ್‌ಫೋನ್ ಮಾರಾಟಕ್ಕಿಂತ ಮೊದಲು ಯಾವುದೇ ಸರ್ಕಾರಿ ಅಥವಾ ಥರ್ಡ್-ಪಾರ್ಟಿ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡುವುದನ್ನು ಕಂಪನಿಯ ಆಂತರಿಕ ನೀತಿಗಳು ನಿಷೇಧಿಸಿವೆ’ ಎಂದು ಆಪಲ್ ಕಂಪನಿಯ ನೀತಿಗಳನ್ನು ಚೆನ್ನಾಗಿ ತಿಳಿದಿರುವ ಮೂಲವೊಂದನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಹೇಳಿದೆ.

ಮೊಬೈಲ್ ಅಥವಾ ಯಾವುದೇ ಟೆಲಿಕಾಂ ಸಾಧನದಲ್ಲಿರುವ ಐಎಂಇಐ ಸಂಖ್ಯೆಯನ್ನು ತೆಗೆದು ಹಾಕುವುದು, ಡಿಲಿಟ್ ಮಾಡುವುದು, ಬದಲಾಯಿಸುವುದು ಅಥವಾ ಹಾಳುಮಾಡುವುದು, ಐಎಂಇಐ ಸಂಖ್ಯೆಯನ್ನು ಬದಲಾಯಿಸಲು ಬಳಸುವ ಯಾವುದೇ ಹಾರ್ಡ್‌ವೇರ್ ಅಥವಾ ಸಾಫ್ಟ್‌ವೇರ್ ಅನ್ನು ತಿಳುವಳಿಕೆಯಿಂದ ಮಾಡುವುದು, ಮಾರುವುದು, ಖರೀದಿಸುವುದು, ಹಿಡಿದಿಟ್ಟುಕೊಳ್ಳುವುದು ಅಥವಾ ತನ್ನ ಬಳಿ ಇಟ್ಟುಕೊಳ್ಳುವುದು ನಿಷಿದ್ಧ ಎಂದು ಸರ್ಕಾರದ ಆದೇಶದಲ್ಲಿ ಹೇಳಿರುವುದಾಗಿ ದಿ ವೈರ್ ವರದಿ ಮಾಡಿದೆ.

ಗೌಪ್ಯತೆ ಉಲ್ಲಂಘನೆಯ ಕಳವಳ

“ಇಂತಹ ದೊಡ್ಡ ಮಟ್ಟದ ಒಳನುಸುಳುವಿಕೆಯನ್ನು (ಅಂದರೆ ಪ್ರತಿಯೊಬ್ಬ ಪ್ರಜೆಯ ವೈಯಕ್ತಿಕ ಮೊಬೈಲ್ ಫೋನ್‌ಗಳಲ್ಲಿ ತನ್ನ ಆ್ಯಪ್ ಅನ್ನು ಕಡ್ಡಾಯವಾಗಿ ಇರಿಸುವ ಪ್ರಯತ್ನ) ಈವರೆಗೆ ಯಾವ ದೇಶವೂ ಮಾಡಿರಲಿಲ್ಲ. ಪುಟಿನ್ ಆಳುತ್ತಿರುವ ರಷ್ಯಾ ಇದನ್ನು ಪ್ರಯತ್ನಿಸಿದ ಏಕೈಕ ದೇಶ” ಎಂದು ‘ದಿ ಇಂಡಿಯಾ ಕೇಬಲ್’ ನ್ಯೂಸ್‌ಲೆಟರ್ ಹೇಳಿದೆ. ಇದೇ ವಿಷಯಕ್ಕೆ ಎಕ್ಸ್‌ ಬಳಕೆದಾರರೊಬ್ಬರು ಉತ್ತರ ಕೊರಿಯಾವನ್ನೂ ಉದಾಹರಣೆಯಾಗಿ ಕೊಟ್ಟಿದ್ದಾರೆ.

“ಸಂಚಾರ್ ಸಾಥಿ ಆ್ಯಪ್’ ಅನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿ, ಅದನ್ನು ಯಾವತ್ತೂ ಡಿಲಿಟ್ ಮಾಡಲು ಸಾಧ್ಯವಿಲ್ಲದಂತೆ ಮಾಡಿದ್ದಾರೆ. ಇದರಿಂದ ಇದು ನಿಮ್ಮ ಫೋನ್‌ನಲ್ಲಿ ಸದಾ ಕಾರ್ಯನಿರ್ವಹಿಸುತ್ತಿರುವ ‘ಸರ್ಕಾರದ ಟ್ರ್ಯಾಕರ್’ ಆಗಿ ಮಾರ್ಪಟ್ಟಿದೆ” ಎಂದು ಪತ್ರಕರ್ತ ನಿಖಿಲ್ ಪಹ್ವಾ ಎಕ್ಸ್‌ನಲ್ಲಿ ಬರೆದಿದ್ದಾರೆ.

“ಸರ್ಕಾರ ಈಗಿನ ಕ್ರಮಕ್ಕೆ (ಅಂದರೆ ಸಂಚಾರ್ ಸಾಥಿ ಆ್ಯಪ್ ಅನ್ನು ಕಡ್ಡಾಯವಾಗಿ ಫೋನ್‌ಗಳಲ್ಲಿ ಎಂಬೆಡ್ ಮಾಡುವುದು) ಯಶಸ್ವಿಯಾಗಿ ಮಾಡಿದರೆ, ಮುಂದೇನು? ಕಡ್ಡಾಯ ಡಿಜಿಟಲ್ ಐಡಿ ಆ್ಯಪ್? ಪ್ರತಿ ಡಿವೈಸ್‌ನಲ್ಲಿ ಡಿಜಿಯಾತ್ರಾ ಆ್ಯಪ್ ಅನ್ನು ಬಲವಂತವಾಗಿ ಇನ್‌ಸ್ಟಾಲ್ ಮಾಡುವುದು? ವಿಪಿಎನ್‌ಗಳನ್ನು ನಿಷ್ಕ್ರಿಯಗೊಳಿಸುವ ಅಥವಾ ನಿಮ್ಮ ಆ್ಯಪ್ ಮತ್ತು ಬ್ರೌಸರ್ ಹಿಸ್ಟರಿಯನ್ನು ಟ್ರ್ಯಾಕ್ ಮಾಡುವ ಆ್ಯಪ್? ಪ್ರತಿ ತಿಂಗಳು ನಿಮ್ಮ ಮೆಸೇಜ್‌ಗಳ ಕಾಪಿಗಳನ್ನು ಸರ್ಕಾರಕ್ಕೆ ಕಳುಹಿಸುವ ಆ್ಯಪ್?” ಎಂದು ಪಹ್ವಾ ಪ್ರಶ್ನಿಸಿದ್ದಾರೆ.

“ಒಮ್ಮೆ ಆಪರೇಟಿಂಗ್ ಸಿಸ್ಟಂ (ಒಎಸ್‌) ಎಂಬ ಆಳದ ಪದರವನ್ನು ಸರ್ಕಾರಕ್ಕೆ ತೆರೆದುಕೊಟ್ಟರೆ, ಅದು ಎಂದಿಗೂ ಮತ್ತೆ ಮುಚ್ಚಲ್ಪಡುವುದಿಲ್ಲ” ಎಂದಿದ್ದಾರೆ.

“ಈ ಆದೇಶವು ವೈಯಕ್ತಿಕ ಡಿಜಿಟಲ್ ಸಾಧನಗಳ ಮೇಲೆ ಸರ್ಕಾರದ (ಎಕ್ಸಿಕ್ಯೂಟಿವ್) ನಿಯಂತ್ರಣವನ್ನು ಅತ್ಯಂತ ತೀಕ್ಷ್ಣವಾಗಿಯೂ, ಆಳವಾಗಿಯೂ ವಿಸ್ತರಿಸುತ್ತದೆ. ಇದು ತುಂಬಾ ಆತಂಕಕಾರಿ ಬೆಳವಣಿಗೆ” ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ (ಐಎಫ್‌ಎಫ್‌) ತನ್ನ ವಿವರವಾದ ಹೇಳಿಕೆಯಲ್ಲಿ ತಿಳಿಸಿದೆ.

ಅನೇಕರು ಸರ್ಕಾರ ಸಂಗ್ರಹಿಸುವ ಡೇಟಾವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಲ್ಲಿ ಯಾವುದೇ ರಕ್ಷಣೆ ಇಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ.

“ದುಃಖದ ಸಂಗತಿಯೇನೆಂದರೆ, ಭಾರತ ಸರ್ಕಾರ ನನ್ನ ಡೇಟಾ ಮತ್ತು ಗೌಪ್ಯತೆಯನ್ನು ಕಾಪಾಡುವ ಬಗ್ಗೆ ತೀರಾ ನಿರ್ಲಕ್ಷ್ಯ ತೋರಿದೆ. ನಾನು ಮೂಲಭೂತವಾಗಿ ಸರ್ಕಾರಕ್ಕೆ ಪ್ರಜೆಗಳ ದತ್ತಾಂಶವನ್ನು ನೋಡುವ ಹಕ್ಕು ಇದೆ ಎಂಬುದಕ್ಕೆ ವಿರೋಧಿ ಅಲ್ಲ, ಆದರೆ ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಲ್ಲಿ ಸರ್ಕಾರದ ಅಸಮರ್ಥತೆಯೇ ದೊಡ್ಡ ಸಮಸ್ಯೆ” ಎಂದು ಆನಂದ್ ಶಂಕರ್ ಎಂಬ ಎಕ್ಸ್ ಬಳಕೆದಾರ ಬರೆದುಕೊಂಡಿದ್ದಾರೆ.

“ವಿರೋಧ ಪಕ್ಷ ಕಾಂಗ್ರೆಸ್ ಈ ಆ್ಯಪ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. “ಬಿಗ್ ಬ್ರದರ್ (ಸರ್ಕಾರ) ನಮ್ಮ ಮೇಲೆ ಕಣ್ಗಾವಲಿಡಲು ಬಿಡುವುದಿಲ್ಲ. ದೂರಸಂಪರ್ಕ ಇಲಾಖೆಯ ಈ ಆದೇಶ ಸಂವಿಧಾನ ವಿರೋಧಿಯಾಗಿದೆ. ಗೌಪ್ಯತೆಯ ಹಕ್ಕು ಎಂಬುದು ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಅವಿಭಾಜ್ಯ ಅಂಗ. ಇದನ್ನು ಸಂವಿಧಾನದ 21ನೇ ವಿಧಿಯಲ್ಲಿ ಖಾತರಿಪಡಿಸಲಾಗಿದೆ” ಎಂದು ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದಾರೆ.

ವೇಣುಗೋಪಾಲ್ ಅವರು ಸಂಚಾರ್ ಸಾಥಿ ಆ್ಯಪ್ ಅನ್ನು ‘ಡಿಸ್ಟೋಪಿಯನ್ ಟೂಲ್’ (ಭಯಾನಕ ಭವಿಷ್ಯದ ಸಾಧನ) ಎಂದಿದ್ದಾರೆ. ಡಿಲಿಟ್ ಮಾಡಲು ಆಗದಂತೆ ಮೊದಲೇ ಇನ್‌ಸ್ಟಾಲ್ ಮಾಡುವ ಸರ್ಕಾರಿ ಆ್ಯಪ್ ಪ್ರತಿಯೊಬ್ಬ ಭಾರತೀಯನ ಮೇಲೂ ಕಣ್ಗಾವಲು ಇಡುವ ಭಯಾನಕ ಸಾಧನ. ಇದು ಪ್ರತಿಯೊಬ್ಬ ಪ್ರಜೆಯ ಎಲ್ಲಾ ಚಲನ-ವಲನ ಸಂಪರ್ಕ, ನಿರ್ಧಾರಗಳನ್ನು ಗಮನಿಸುವ ಒಂದು ಮಾರ್ಗವಾಗಿದೆ. ಇದು ಭಾರತೀಯರ ಸಾಂವಿಧಾನಿಕ ಹಕ್ಕುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಒಂದು ಭಾಗವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಬಿಡುವುದಿಲ್ಲ. ನಾವು ಈ ಆದೇಶವನ್ನು ಸಂಪೂರ್ಣ ತಿರಸ್ಕರಿಸುತ್ತೇವೆ ಮತ್ತು ತಕ್ಷಣವೇ ಇದನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇವೆ” ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ಪೆಗಾಸಸ್ ಸ್ಪೈವೇರ್ ಕೂಡ ಇಷ್ಟು ಭಯಾನಕವಾಗಿರಲಿಲ್ಲ, ಈ ಸಂಚಾರ್ ಸಾಥಿ ಆ್ಯಪ್ ಅದಕ್ಕಿಂತಲೂ ದೊಡ್ಡ ಅಪಾಯ ಎಂದು ಪತ್ರಕರ್ತೆ ಸುಹಾಸಿನಿ ಹೈದರ್ ಆತಂಕ ವ್ಯಕ್ತಪಡಿಸಿದ್ದಾರೆ.

“ಮುಂದಿನ ಹೆಜ್ಜೆ ಸ್ಪಷ್ಟವಾಗಿದೆ, 140 ಕೋಟಿ ಜನರ ಕಾಲಿಗೆ ಎಲೆಕ್ಟ್ರಾನಿಕ್ ಕಡಗ (ankle monitor), ಗಂಟಲಿಗೆ ಕಾಲರ್, ಮೆದುಳಿನಲ್ಲಿ ಚಿಪ್ ಹಾಕುವುದು! ಅದಾದ ಮೇಲೆಯಾದರೂ ಸರ್ಕಾರಕ್ಕೆ ನಾವು ನಿಜವಾಗಿ ಏನು ಯೋಚಿಸುತ್ತೇವೆ, ಏನು ಮಾಡುತ್ತೇವೆ ಎಂಬುದು ಪೂರ್ತಿಯಾಗಿ ಗೊತ್ತಾಗುತ್ತದೆ” ಎಂದು ಕೇರಳದ ಸಿಪಿಐಎಂ ಸಂಸದ ಜಾನ್ ಬ್ರಿಟ್ಟಾಸ್ ವ್ಯಂಗ್ಯವಾಗಿ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...