Homeಅಂತರಾಷ್ಟ್ರೀಯಕೊರೊನಾದಿಂದ ಉಂಟಾದ ಮಹಾನ್‌ ನಿರುದ್ಯೋಗ: ಅಮೇರಿಕದ ಜನರು ತಮ್ಮ ಅಹಂ ಬದಿಗಿಟ್ಟು ನೆರವು ಕೇಳುತ್ತಿದ್ದಾರೆ.

ಕೊರೊನಾದಿಂದ ಉಂಟಾದ ಮಹಾನ್‌ ನಿರುದ್ಯೋಗ: ಅಮೇರಿಕದ ಜನರು ತಮ್ಮ ಅಹಂ ಬದಿಗಿಟ್ಟು ನೆರವು ಕೇಳುತ್ತಿದ್ದಾರೆ.

ಕೊರೋನ ವೈರಸ್ಸಿನಿಂದಾಗಿ ತಮ್ಮ ಕೆಲಸವನ್ನು ಕಳೆದುಕೊಂಡಿರುವ ಅಮೆರಿಕದ ಹಲವು ಕಾರ್ಮಿಕರು ತಮ್ಮ ಜೀವಿತದಲ್ಲಿ ಮೊತ್ತ ಮೊದಲ ಬಾರಿಗೆ ಒಲ್ಲದ ಮನಸ್ಸಿನಿಂದ ದಾನವನ್ನು ಮತ್ತು ನಿರುದ್ಯೋಗಿಗಳಿಗೆ ನೀಡುವ ಸೌಲಭ್ಯಗಳನ್ನು ಕೋರುತ್ತಿದ್ದಾರೆ.

- Advertisement -
- Advertisement -

ಕೊರೋನ ದಾಳಿಯಿಂದ ಜಗತ್ತಿನ ಜನರೆಲ್ಲರೂ ಕಂಗಾಲಾಗಿದ್ದಾರೆ. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬಂದ ವರದಿ ಅಲ್ಲಿಯ ಜನರ ಕಷ್ಟವನ್ನು ನಮಗೆ ಪರಿಚಯಿಸುತ್ತದೆ. ನಾವು ನಮ್ಮ ಆರ್ಥಿಕತೆಯನ್ನು ಅವರ ಹಾದಿಯಲ್ಲಿ ಕಟ್ಟಲು ಹೊರಟಿರುವುದರಿಂದ ನಮಗೆ ಇದು ಉಪಯುಕ್ತವಾಗಬಹುದೆಂದು, ಟಿ.ಎಸ್.ವೇಣುಗೋಪಾಲ್ ಅವರು ಅನುವಾದಿಸಿ ಹಂಚಿಕೊಂಡಿದ್ದಾರೆ.

ಕಾರಾ ಬಕ್ಲಿ, ನ್ಯೂಯಾರ್ಕ್ ಟೈಮ್ಸ್, 31 ಮಾರ್ಚಿ 2020

ಅನುವಾದ: ಟಿ.ಎಸ್.ವೇಣುಗೋಪಾಲ್

ದಕ್ಷಿಣ ಡೆಲ್ಲಾಸ್‌ನಲ್ಲಿ ಆಹಾರದ ಬ್ಯಾಂಕಿಗೆ ಒಂದು ಮಿನಿವ್ಯಾನ್, ಷವರ್ಲೆ ಟಾಹೋ, ಸೆಡಾನ್, ಪುರಾತನ ಜಾಗ್ವಾರ್ ಹೀಗೆ ಕಾರುಗಳು ಪ್ರವಾಹದೋಪಾದಿಯಲ್ಲಿ ಬಂದವು. ಈ ಕಾರುಗಳಲ್ಲಿ ಕುಳಿತಿದ್ದವರು ತಾವು ಇಲ್ಲಿಗೆ ಬರಬೇಕಾಗಬಹುದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಹೀಗೆ ಬಂದವರಲ್ಲಿ ಲ್ಯಾಂಡ್‌ಸ್ಕೇಪರ್, ಪ್ರೌಢಶಾಲೆಯ ಆಡಳಿತಗಾರ, ಕಾಲೇಜು ವಿದ್ಯಾರ್ಥಿ, ಗುಮಾಸ್ತನೂ ಮತ್ತು ಲೆಸ್ಸಿಯಂತಹ ವೇರ್‌ಹೌಸ್ ಕಾರ್ಮಿಕ, ಹೀಗೆ ಯಾರ‍್ಯಾರೋ ಇದ್ದರು. ಇವರಲ್ಲಿ ಹೆಚ್ಚಿನವರು ಕ್ರಾಸ್ ರೋಡ್ಸ್ ಕಮ್ಯುನಿಟಿ ಸರ್ವಿಸಸ್‌ಗೆ ಮೊದಲ ಬಾರಿಗೆ ಬಂದಿದ್ದರು; ಅವರು ಹಿಂದೆಂದೂ ಅಲ್ಲಿಗೆ ಬಂದಿರಲಿಲ್ಲ. ಅವರೆಲ್ಲಾ ಕೊರೋನ ಮಹಾಮಾರಿಯಿಂದ ಆರ್ಥಿಕತೆ ನೆಲಕಚ್ಚಿದ್ದರಿಂದ ಕೆಲಸ ಕಳೆದುಕೊಂಡವರು.

ಇಪ್ಪತ್ತೇಳರ ಹರೆಯದ ಎರಡು ಮಕ್ಕಳ ತಂದೆ ಹಾಗೆ ಲೆಸ್ಸಿ ಕೂಡ ಉದ್ಯೋಗ ಕಳೆದುಕೊಂಡವನೆ. ಅವನ ಕಾರಿನ ಡಿಕ್ಕಿಗೆ ಕೈಗವುಸು ಧರಿಸಿದ್ದ ಉಗ್ರಾಣದ ಕೆಲಸಗಾರ ಆಹಾರದ ಡಬ್ಬವೊಂದನ್ನು ಇಡುತ್ತಿದ್ದಾಗ, “ನಿಜವಾಗಿಯಾದರೂ ನಾನಿದನ್ನು ಎಂದೂ ಮಾಡಬೇಕಾಗಿರಲಿಲ್ಲ. ಆದರೆ ಇದನ್ನೆಲ್ಲಾ ನನ್ನ ಮಕ್ಕಳಿಗಾಗಿ ಮಾಡಬೇಕಾಗಿದೆ” ಎಂದು ನೋವು ತೋಡಿಕೊಂಡ. ಅವನು ಪಕ್ಕದ ಮನೆಯವರೊಂದಿಗೆ ಆಹಾರಕ್ಕಾಗಿ ಅಲ್ಲಿಗೆ ಬಂದಿದ್ದ.

ನೂರಾರು, ಸಾವಿರಾರು ಅಮೆರಿಕನ್ನರು ತಮ್ಮ ಜೀವಮಾನದಲ್ಲಿ ಮೊತ್ತ ಮೊದಲಬಾರಿ ಹೀಗೆ ಸಹಾಯ ಕೇಳುತ್ತಿದ್ದಾರೆ. ಹೀಗೆ ಕೇಳುತ್ತಿರುವವರಲ್ಲಿ ಲಾಸ್ ಅಂಜಲಿಸ್‌ನ ಉಗುರುಗಳ ತಂತ್ರಜ್ಞರಿಂದ ಹಿಡಿದು ಫೋರ್ಟ್ ಲಾಡರ್‌ಡೇಲ್‌ನ ವಿಮಾನ ನಿಲ್ದಾಣದ ಕಾರ್ಮಿಕರು, ಫೀನಿಕ್ಸ್ನ ಬಾರ್ ಟೆಂಡರ್‌ಗಳಿಂದ ಮೊದಲ್ಗೊಂಡು ಮಿನ್ನೆಸೋಟದ ಹಿಂದಿನ ರಿಯಾಲಿಟಿ ಷೋದ ಸ್ಪರ್ಧಿಗಳವರೆಗೆ ಹಲವು ಬಗೆಯ ಜನರಿದ್ದಾರೆ. ನಾಚಿಕೆ ಅಪಮಾನಗಳನ್ನು ಬದಿಗಿಟ್ಟು, ಇದಕ್ಕಿಂತಲೂ ಹೀನಾಯವಾದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವವರ ಬಗ್ಗೆ ಪಾಪಪ್ರಜ್ಞೆಯಿಂದ ವಿಸ್ಮಯಗೊಳ್ಳುತ್ತಾ, ಅವರು ತಾವು ನಿರುದ್ಯೋಗಿಗಳೆಂದು ಅರ್ಜಿ ಹಾಕಿಕೊಳ್ಳುತ್ತಿದ್ದಾರೆ. ಗೋಫಂಡ್‌ಮಿ ಸಂಸ್ಥೆಯ ಸಹಾಯ ಕೇಳುತ್ತಿದ್ದಾರೆ, ಇನ್‌ಸ್ಟಾಗ್ರಾಂ ಮೂಲಕ ಹಣ ಕೊಡಿ ಎಂದು ಕೇಳುತ್ತಿದ್ದಾರೆ. ತಮ್ಮಷ್ಟೇ ಕಷ್ಟದಲ್ಲಿ ಇರುವ ಸಹೋದ್ಯೋಗಿಗಳು ನೀಡುತ್ತಿರುವ ಸಹಾಯವನ್ನು ಮಾತಿಲ್ಲದೆ ಸ್ವೀಕರಿಸುತ್ತಿದ್ದಾರೆ ಮತ್ತು ತುಂಬಾ ದೊಡ್ಡ ಸಂಖ್ಯೆಯಲ್ಲಿ ಆಹಾರದ ಬ್ಯಾಂಕುಗಳ ಬಳಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದೆಂದೂ ಹೀಗಾಗಿರಲಿಲ್ಲ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ಬ್ಯಾಂಕುಗಳು ಹೆಣಗಾಡುತ್ತಿವೆ. ಏಕೆಂದರೆ ಆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರಲ್ಲಿ ಹೆಚ್ಚಿನವರು ನಿವೃತ್ತರು ಮತ್ತು ಈಗ ಸುರಕ್ಷತೆಯ ಕಾರಣದಿಂದಾಗಿ ಮನೆಯಲ್ಲೇ ಉಳಿದಿದ್ದಾರೆ.

ಮೆಟ್ ಕೌನ್ಸಿಲ್ ಅನ್ನುವುದು ನ್ಯೂಯಾರ್ಕ್ ನಗರದಲ್ಲಿ ಆಹಾರ ಮತ್ತು ವಸತಿಯ ಸಹಾಯವನ್ನು ನೀಡುವ ನಾನ್‌ಪ್ರಾಫಿಟ್ ಸಂಸ್ಥೆ. ಅದರ ಚೀಫ್ ಎಕ್ಸಿಕ್ಯುಟಿವ್ ಡೇವಿಡ್ ಗ್ರೀನ್ ಫೀಲ್ಡ್ ಹೇಳುತ್ತಾರೆ, “ಆರಂಭದಲ್ಲಿ ರೀಟೇಲ್ ಕಾರ್ಮಿಕರು, ಅಡಿಗೆಯವರು, ವೇಯ್ಟರ್‌ಗಳು ಮತ್ತು ಹೋಟೆಲ್ ಮಾಲಿಕರು ಸಹಾಯ ಕೇಳಿಕೊಂಡು ಬಂದರು. ಈಗ ಹೋದ ವಾರ ಕಾನೂನು ಉದ್ದಿಮೆಗಳ ಉದ್ಯೋಗಿಗಳು ಬಂದರು. ಅವರಲ್ಲಿ ಹೆಚ್ಚಿನವರಿಗೆ ನಿರುದ್ಯೋಗ ಎಂದರೆ ಏನೆಂದೇ ತಿಳಿಯದು.”

ಈ ಬಿಕ್ಕಟ್ಟು ಅಮೇರಿಕೆಯ ಎರಡು ಸಿದ್ಧಾಂತಗಳನ್ನು ಪರಸ್ಪರ ಮುಖಾಮುಖಿಯಾಗಿಸುತ್ತಿದೆ – ಒಂದು ಐಕ್ಯತೆಯನ್ನು ಸಾರುವ E Pluribus Unum  ಎಂಬ ಧ್ಯೇಯ ಮತ್ತು ಎರಡನೆಯದಾಗಿ ಕಠಿಣ ಪರಿಶ್ರಮಕ್ಕೆ ಫಲವಿದ್ದೇ ಇದೆ ಎಂಬ ಆಳವಾದ ನಂಬಿಕೆ. ಒಳ್ಳೆಯ ದಿನಗಳಲ್ಲಿ ಇವೆರಡೂ ಸಿದ್ಧಾಂತಗಳೂ ಒಟ್ಟೊಟ್ಟಿಗೆ ಇದ್ದವು. ಇಂದು ಇವೆರಡಕ್ಕೂ ಪರೀಕ್ಷೆಯ ಕಾಲ. ಹೊಸದಾಗಿ ನಿರುದ್ಯೋಗಿಯಾದವರಿಗೆ ತಮ್ಮನ್ನು ಕುರಿತ ಮತ್ತು ತಮ್ಮ ದೇಶವನ್ನು ಕುರಿತ ನಂಬಿಕೆಗಳನ್ನು ಪುನರ್‌ಮೌಲ್ಯಮಾಪನ ಮಾಡಿಕೊಳ್ಳುವುದಕ್ಕೆ ಇದು ಒತ್ತಾಯಿಸುತ್ತಿದೆ. ಮಿನ್ನೆಸೋಟದ ಸೈಂಟ್ ಲೂಯಿ ಪಾರ್ಕಿನಲ್ಲಿ 61 ವರ್ಷದ ತಂತ್ರಜ್ಞ ಸ್ಕಾಟ್ ಸೋಯಿಷ್ ಮೊತ್ತ ಮೊದಲ ಬಾರಿಗೆ ನಿರುದ್ಯೋಗಿ ಅನುಕೂಲತೆಗಳಿಗಾಗಿ ಅರ್ಜಿ ಹಾಕಿಕೊಳ್ಳುತ್ತಿದ್ದಾನೆ. ಒಂದು ವಾರದಲ್ಲಿ ನಿರುದ್ಯೋಗ ಭತ್ಯೆಗಾಗಿ 33 ಲಕ್ಷ ಜನ ಅರ್ಜಿ ಹಾಕಿಕೊಂಡಿದ್ದಾರೆ. ಈ ಸಂಖ್ಯೆ ಈವರೆಗಿನ ಎಲ್ಲಾ ದಾಖಲೆಗಳನ್ನೂ ಮುರಿದಿದೆ. ಯಜಮಾನರ ಪೇ ರೋಲ್ ತೆರಿಗೆಗಳನ್ನು ಬಳಸಿಕೊಂಡು ಕೊಡುತ್ತಿರುವ ಸಹಾಯವನ್ನು ಕೇಳುವಂತಹ ಜನರು ಸೋಮಾರಿಗಳು, ಅವರು ಶ್ರಮಪಟ್ಟು ದುಡಿಯುತ್ತಿಲ್ಲ ಎಂದು ಈವರೆಗೆ ಆಳವಾಗಿ ನಂಬಿದ್ದ ಸ್ಕಾಟ್ ಈಗ ತನ್ನ ನಂಬಿಕೆಯನ್ನು ಬಿಡಬೇಕಾಯಿತು. “ನಿಜವಾಗಿ ಹೇಳಬೇಕೆಂದರೆ, ಜನರಿಗೆ ಬೇರೆ ಆಯ್ಕೆಯೇ ಇಲ್ಲ. ಅವರನ್ನು ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದು ಹೇಳಿಬಿಟ್ಟರೆ ಯಾರಾದರೂ ಏನು ಮಾಡುತ್ತಾರೆ?” ಎಂದು ಸ್ಕಾಟ್ ಸೋಯಿಷ್ ಕೇಳುತ್ತಾನೆ.

ಲಾಸ್ ಅಂಜಲಿಸ್‌ನಲ್ಲಿ 29ರ ಹರೆಯದ ಉಗುರಿನ ತಂತ್ರಜ್ಞೆ ಸಮಂತಾ ಪಸಾಯೆ ತಾನು ಕೆಲಸ ಮಾಡುತ್ತಿದ್ದ ಸಲೋನ್ ಮುಚ್ಚಿಹೋದ ಮೇಲೆ ಏನಾದರೂ ಒಂದಿಷ್ಟು ದಾನ ನೀಡುವಂತೆ ಇನ್‌ಸ್ಟಾಗ್ರಾಂ ಮೂಲಕ ಕೇಳಿಕೊಂಡಳು. “ನಾನು ಯಾರ ಸಹಾಯವನ್ನೂ ಕೇಳುವವಳಲ್ಲ. ಎಲ್ಲವನ್ನೂ ನನ್ನಷ್ಟಕ್ಕೇ ಸ್ವತಂತ್ರವಾಗಿ ಮಾಡಿಕೊಳ್ಳುವವಳು. ಆದರೆ ಈ ಹೊತ್ತಿನಲ್ಲಿ ನನ್ನ ಅಭಿಮಾನವನ್ನು ಬದಿಗಿಡಬೇಕಾಯಿತು.” ಎಂದು ಹೇಳಿದಳು.

41 ವರ್ಷದ, ಎರಡು ಮಕ್ಕಳ ತಂದೆ ಕಾಡ್ರಿಂಗ್ಟನ್ ಫುಡ್ ಬ್ಯಾಂಕಿಗೆ ಹೋದ. ಆದರೆ ಅಲ್ಲೂ ಸ್ಟಾಕ್ ಖಾಲಿಯಾಗಿತ್ತು. ಮತ್ತೆ ಕಳೆದ ವಾರ, ಬೇಗನೇ ಹೋಗಿದ್ದ. ಆದರೆ ಇವನು ಹೋಗುವ ಮೊದಲೇ ಜನ ಸೇರಿದ್ದರು. ಒಂದು ಬ್ಯಾಗ್ ಬೀನ್ಸ್ ಮಾತ್ರ ಉಳಿದಿತ್ತು. ಸ್ನೇಹಿತರು 100 ಡಾಲರ್ ಸೇರಿಸಿಕೊಟ್ಟರು. ಅದೂ ಈಗ ಹೆಚ್ಚು ಕಮ್ಮಿ ಮುಗಿದಿದೆ. ಈಗ ದಿನಕ್ಕೆ ಒಂದು ಹೊತ್ತು ತಿಂದುಕೊಂಡಿದ್ದಾನೆ. ಎರಡು ಬ್ರೆಡ್ ಚೂರಿನ ನಡುವೆ ಫಿಲ್ಲಿಂಗನ್ನು ಕಲ್ಪಿಸಿಕೊಂಡು ತಿನ್ನುತ್ತಿದ್ದಾನೆ. “ಪ್ರತಿ ವಾರ 1500 ಡಾಲರ್‌ನಿಂದ 2000 ಡಾಲರನ್ನು ದುಡಿಯುತ್ತಿದ್ದವನು ಈ ಸ್ಥಿತಿಗೆ ಇಳಿದಿದ್ದೇನೆ” ಎನ್ನುತ್ತಾನೆ.

ಅಮೆರಿಕೆಯಲ್ಲಿ 19ನೇ ಶತಮಾನದಲ್ಲಿ ಧಾರ್ಮಿಕ ಸಂಸ್ಥೆಗಳು ಪ್ರಾರಂಭಿಸಿದ್ದ ವಲಸಿಗರ ಸಹಾಯ ಗುಂಪುಗಳ ಮೂಲಕ ದಾನಕೊಡುವ ದೀರ್ಘವಾದ ಪರಂಪರೆ ಇತ್ತು. ಜೊತೆಗೆ 20ನೇ ಶತಮಾನದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಇದ್ದವು. ಹಾಗಿದ್ದಾಗ್ಯೂ ಇಂದಿಗೂ ನಿಷ್ಠುರವಾದ ವ್ಯಕ್ತಿವಾದವೇ ಅಮೆರಿಕೆಯ ರಾಷ್ಟ್ರೀಯ ಅಸ್ಮಿತೆಯ ಮುಖ್ಯ ಲಕ್ಷಣವಾಗಿದೆ.

ಅಮೇರಿಕೆಯ ಆಲಿಸ್ ಫೊದರ್‌ಗಿಲ್ ಪ್ರಕಾರ “ಅಮೇರಿಕೆಯ ಬಹುಪಾಲು ಜನ ತಾವು ಸ್ವಾವಲಂಬಿಗಳು ಮತ್ತು ಸ್ವತಂತ್ರರು ಎಂದು ಭಾವಿಸಿಕೊಳ್ಳುವುದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ.” ಆಲಿಸ್ ಫೊದರ್‌ಗಿಲ್ ವರ್ಮೋಂಟ್ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕಿ. ಆಕೆ ನೈಸರ್ಗಿಕ ದುರಂತಗಳು ಮಾನವನ ಮೇಲೆ ಮಾಡುವ ಪರಿಣಾಮವನ್ನು ಕುರಿತು ಅಧ್ಯಯನ ಮಾಡಿದ್ದಾರೆ. ಆಕೆ ಹೇಳುವಂತೆ ಯಾರಿಗೆ ತುಂಬಾ ನೆರವು ಬೇಕೊ ಅವರೇ ನೆರವನ್ನು ಕೇಳಲು ನಾಚಿಕೆಪಟ್ಟುಕೊಳ್ಳುತ್ತಿದ್ದಾರೆ. ಉತ್ತರ ಡಕೋಟದಲ್ಲಿ ಪ್ರವಾಹದಿಂದ ಅಪಾರ ಹಾನಿಗೊಳಗಾಗಿ ಸಂಕಟಕ್ಕೆ ಸಿಲುಕಿದ ಮಹಿಳೆಯರನ್ನು ಅಧ್ಯಯನ ಮಾಡಿದಾಗ, ಅದರಲ್ಲಿ ತುಂಬಾ ಸಂಕಟಕ್ಕೆ ಸಿಕ್ಕವರು ಮಧ್ಯಮ ವರ್ಗದವರು ಮತ್ತು ಕಾರ್ಮಿಕ ಮಹಿಳೆಯರು. ಆದರೆ ಅವರು ತಮ್ಮ ಅಂತಸ್ತಿಗೆ ಚ್ಯುತಿಯಾಗುತ್ತದೆ ಅನ್ನುವ ಗಾಬರಿಯಿಂದ ಸಾರ್ವಜನಿಕ ನೆರವನ್ನು ಬಯಸಲಿಲ್ಲ. ಅವರಿಗೆ ಬಡವರಾಗಿ ಕಾಣಿಸಿಕೊಳ್ಳುವುದು ಇಷ್ಟವಿರಲಿಲ್ಲ. ತಾವು ಒಲ್ಲದ ಮನಸ್ಸಿನಿಂದ ನೆರವನ್ನು ಸ್ವೀಕರಿಸುತ್ತಿದ್ದೇವೆ ಎಂಬುದನ್ನು ಉಳಿದವರಿಗೆ ಹಾಗೂ ತಮಗೇ ಸ್ಪಷ್ಟಪಡಿಸಿಕೊಳ್ಳಲು ಹೆಣಗುತ್ತಿದ್ದಾರೆ. ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಉದಾಹರಣೆಗೆ, ದಾನಕೊಟ್ಟ ವಸ್ತುಗಳಿಗೆ ಹಣವನ್ನು ಕೊಡುತ್ತೇವೆ ಅನ್ನುವುದು, ಅವರಿಗೆ ಸರ್ಕಾರ ಕೊಟ್ಟ ಟ್ರೈಲರುಗಳನ್ನು “ಮನೆ” ಅಂತ ಒಪ್ಪಿಕೊಳ್ಳದೆ ಇರುವುದು, ಇತ್ಯಾದಿ.

ಜೀವನದಲ್ಲೇ ಮೊದಲ ಬಾರಿಗೆ ದಾನಕೇಳಲು ಬಂದವರು “ಕ್ಷಮಿಸಿ, ಆದರೆ ನನಗೆ ಸಹಾಯ ಮಾಡಬಹುದಾ? ನನ್ನನ್ನು ಕ್ಷಮಿಸಿ, ಆದರೆ ನನಗೆ ಆಹಾರ ಬೇಕು, ನನ್ನನ್ನು ಕ್ಷಮಿಸಿ, ಆದರೆ ನನಗೆ ಬಾಡಿಗೆ ಬೇಕು, ನನ್ನನ್ನು ಕ್ಷಮಿಸಿ, ಆದರೆ ನನಗೆ ಸಹಾಯ ಬೇಕು” ಅಂತ ಕ್ಷಮೆ ಯಾಚಿಸುವ ದನಿಯಲ್ಲಿ ಕೇಳುತ್ತಾರೆ ಎನ್ನುತ್ತಾರೆ ಮೆಟ್ ಕೌನ್ಸಿಲಿನ ಗ್ರೀನ್‌ಫಿಲ್ಡ್.

ಕೆಲವರಂತೂ ಸೌಲಭ್ಯವನ್ನು ಕೇಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವುದಕ್ಕೂ ಎರಡೆರಡು ಬಾರಿ ಯೋಚಿಸುತ್ತಾರೆ. ತಮಗೆ ಅರ್ಹತೆಯಿದ್ದರೂ ತಮಗಿಂತಲೂ ಹೆಚ್ಚು ಅವಶ್ಯಕತೆ ಇರುವವರು ಇರಬಹುದು ಅನ್ನುವ ಯೋಚನೆ ಈ ರೀತಿ ಹಿಂದೇಟು ಹಾಕುವುದಕ್ಕೆ ಕಾರಣವಿರಬಹುದೇ?

36 ವರ್ಷದ ಕಿರ್ಕ್ ಡಿವಿಂಡ್ಟ್, ಮಿನ್ನೆಸೋಟದ ಬ್ರೂಕ್ಲಿನ್ ಪಾರ್ಕಿನಲ್ಲಿ ಒಬ್ಬ ಟ್ರೈನರ್, “ದಿ ಬ್ಯಾಚುಲರ್” ಎಂಬ ಟೆಲಿವಿಷನ್ ಫ್ರಾಂಚೈಸ್‌ನಲ್ಲಿ ಮೂರು ಬಾರಿ ಸ್ಪರ್ಧಿಸಿದ್ದವನು. ಅವನ ಕಾರ್ಯಕ್ರಮಗಳೆಲ್ಲಾ ರದ್ದಾದ ಮೇಲೆ ಅವನ ವ್ಯಾಪಾರ ಸ್ಥಗಿತಗೊಂಡಿತು. ಸ್ವಲ್ಪ ಉಳಿತಾಯ ಇತ್ತು. ಅವರ ಅಮ್ಮ ನಿರುದ್ಯೋಗಿ ಭತ್ಯೆಗೆ ಅರ್ಜಿ ಸಲ್ಲಿಸಲು ಒತ್ತಾಯಿಸಿದಾಗ ಅವನು ಹಿಂದೇಟು ಹಾಕಿದ. “ಅರ್ಜಿ ಹಾಕಬಹುದಾದ ಎಷ್ಟೋ ಜನರಿಗಿಂತ ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ” ಅಂದ, ಆದರೆ “ಅದಕ್ಕೆ ನಾನೇನು ಮಾಡುವುದು?” ಅರ್ಜಿ ಹಾಕಲು ನಿರ್ಧರಿಸಿದ.

ಫಿನಿಕ್ಸ್‌ನಲ್ಲಿ ರೇವನ್ ಗ್ರೀನ್ ಅನ್ನುವಳು 28 ವರ್ಷ ತಾಯಿ. ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಜೊತೆ ಒಂಟಿಯಾಗಿದ್ದಾಳೆ. ತನ್ನ ಮೂರೂ ಕೆಲಸಗಳನ್ನು ಕಳೆದುಕೊಂಡು ಒಂದೇ ವಾರದಲ್ಲಿ ಗೋಫಂಡ್‌ಮಿಗೆ ಶರಣಾಗಿದ್ದಾಳೆ. ಅವಳಲ್ಲಿದ್ದ ಹಣ ಕೆಲವು ದಿನಗಳ ದಿನಸಿಗೆ ಸಾಲುತ್ತಿತ್ತು. ಆದರೆ ಕಾರಿಗೆ ಹಣ ಕೊಡಬೇಕಾಗಿ ಬಂದು ಪೂರ್ತಿ ಪಾಪರ್ ಆಗಿಬಿಟ್ಟಿದ್ದಾಳೆ. ಅವಳು ಆ ಸೌಲಭ್ಯಕ್ಕೆ ಅರ್ಹಳೋ ಇಲ್ಲವೋ ಅನ್ನುವುದೂ ಅವಳಿಗೆ ಗೊತ್ತಿಲ್ಲ. ಅವಳು ಗೋಪಂಢ್‌ಮಿ ಪೇಜ್ ಪ್ರಾರಂಭಿಸಿ 1500 ಡಾಲರ್ ಹಣಕ್ಕಾಗಿ ಕೇಳಿಕೊಂಡಿದ್ದಾಳೆ. ನೆರವು ಕೇಳಬೇಕಲ್ಲ ಅಂತ ಕಸಿವಿಸಿಗೊಂಡಿದ್ದಾಳೆ. ಸಾಮಾಜಿಕ ತಾಣದಲ್ಲಿ ಅದನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾಳೆ. “ನಾನು ಹೀಗೆ ಸಂಕಟದಲ್ಲಿದ್ದೇನೆ ಅಂತ ಜನಕ್ಕೆ ಗೊತ್ತಾಗುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ” ಎನ್ನುತ್ತಾಳೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಗೋಪಂಡ್‌ಮಿಗೆ ಬಂದ ಡೊನೇಷನ್ ಎಲ್ಲಾ ಖಾಲಿಯಾಗಿದೆ.

ಪರಿಸ್ಥಿತಿಯಲ್ಲಿ ಆದ ದಿಢೀರ್ ಬದಲಾವಣೆಯಿಂದ ಅಮೇರಿಕಕ್ಕೆ ಹೋಗುವ ಕನಸಿನ ಸುತ್ತಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ವಲಸೆಗಾರರರಿಗೆ ತುಂಬಾ ಕಷ್ಟವಾಗಿರಬೇಕು.

48 ವಯಸ್ಸಿನ ಅಲೆಕ್ಸಾ ರೋಟಾರು ಬೆವರ್ಲಿ ಹಿಲ್‌ನಲ್ಲಿ ಒಬ್ಬ ಸಿನಿಮಾ ನಿರ್ಮಾಪಕ ಮತ್ತು ನಟ. ಅವನು ತನ್ನ 21ನೇ ವಯಸ್ಸಿನಲ್ಲಿ ರೊಮೇನಿಯವನ್ನು ಬಿಟ್ಟು ಬಂದ. “ಒಂದು ಕಮ್ಯುನಿಸ್ಟ್ ದೇಶದಿಂದ ಬಂದ ನನಗೆ ಕ್ಷೇಮ ರಾಜ್ಯದ ಕಲ್ಪನೆ ತುಂಬಾ ಸ್ವಾಭಾವಿಕ. ನಾನು ಅಮೇರಿಕಾಕ್ಕೆ ಬಂದಾಗ ನನಗೆ ಇದರ ಅವಶ್ಯಕತೆ ಬರುತ್ತದೆ ಅಂದುಕೊಂಡಿರಲಿಲ್ಲ.” ತನ್ನ ಇಡೀ ಉದ್ಯೋಗ ನೆಲಕಚ್ಚಿದ ಮೇಲೆ ಈಗ ಅವನು ನಿರುದ್ಯೋಗ ಭತ್ಯೆಗಾಗಿ ಅರ್ಜಿ ಹಾಕಲು ಯೋಚಿಸುತ್ತಿದ್ದಾನೆ. ತಾನು ಕಟ್ಟಬೇಕಾದ ಹಣದ ಬಗ್ಗೆ ಅವನಿಗೆ ಚಿಂತೆಯಾಗಿದೆ. “ನನಗೆ ಸ್ವಲ್ಪ ಮುಜುಗರವಾಗುತ್ತಿತ್ತು. ನನ್ನ ಮಗನ ಚಿಂತೆಯಿಂದ ಈಗ ಮುಜುಗರವನ್ನು ಮೀರಿಕೊಂಡಿದ್ದೇನೆ” ಎನ್ನುತ್ತಾನೆ.

38 ವಯಸ್ಸಿನ ಅರ್ನೆಸ್ಟ್ ವರ್ಜಿಲ್ ಹೈಟಿಯಿಂದ ತನ್ನ ಹೆಂಡತಿಯ ಜೊತೆಯಲ್ಲಿ 2012ರಲ್ಲಿ ಇಲ್ಲಿಗೆ ಬಂದ. ವಿರಾಮವೇ ಇಲ್ಲದೆ ದುಡಿದ. ಎರಡು ಕಡೆ ಕೆಲಸ ಮಾಡುತ್ತಿದ್ದ. ಒಂದು ವಿಮಾನ ನಿಲ್ದಾಣದಲ್ಲಿ ವೀಲ್‌ಛೇರ್ ಸಹಾಯಕನಾಗಿ ಮತ್ತು ಇನ್ನೊಂದು ವಿದೇಶದಿಂದ ಪ್ರಯಾಣಿಕರಿಗೆ ಕಸ್ಟಮರ್ ಸಪೋರ್ಟ್ ನೀಡುವುದು. ಅವನ ಪತ್ನಿ ಕೂಡ ದುಡಿಯುತ್ತಿದ್ದಳು. ಅವರು ಕಷ್ಟಪಟ್ಟು ಒಂದು ಮನೆ ಕೊಳ್ಳುವುದಕ್ಕೆಂದು ಉಳಿಸಿ, ಕಳೆದ ವರ್ಷ ಒಂದು ಮನೆಯನ್ನು ಕೊಂಡರು. ಅಲ್ಲಿ ಅವರ ಮೂರು ಮಕ್ಕಳನ್ನು ಸಾಕುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಇಬ್ಬರೂ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.

ಬ್ಯಾಂಕಿಗೆ ಹಣವನ್ನು ಪಾವತಿಸಲು ಸ್ವಲ್ಪ ಸಮಯ ಬೇಕು ಎಂದು ಕೇಳಿಕೊಳ್ಳಬೇಕಲ್ಲಾ ಎಂದು ವರ್ಜಿಲ್‌ನ ಹೆಂಡತಿ ಅಳುತ್ತಿದ್ದಳು. ವರ್ಜಿಲ್ ಈಗಲೂ ಆಹಾರದ ಕೂಪನ್ನಿಗೆ ಮತ್ತು ನಿರುದ್ಯೋಗದ ಅನುಕೂಲಕ್ಕೆ ಪ್ರಯತ್ನಿಸುತ್ತಿದ್ದಾನೆ. ಫುಡ್ ಬ್ಯಾಂಕಿಗೆ ಹೋದರೆ ವೈರಾಣು ಬರಬಹುದೇನೋ ಅನ್ನುವ ಗಾಬರಿ ಅವನಿಗೆ. ಅವರಿಗೆ ಹಿಂದೆಂದೂ ಇಂತಹ ನೆರವಿನ ಅವಶ್ಯಕತೆ ಬಂದೇ ಇರಲಿಲ್ಲ. ನಾವೂ ಬರಿದಾಗಿಬಿಟ್ಟಿದ್ದೇವೆ. “ಇವೆಲ್ಲಾ ನಮಗೆ ಅಭ್ಯಾಸವೇ ಇಲ್ಲ. ಅಮೇರಿಕೆಯ ಕನಸು ಈಡೇರಬೇಕಾದರೆ ತುಂಬಾ ತುಂಬಾ ಕಷ್ಟ ಪಡಬೇಕು ಅಂತ ಗೊತ್ತಿತ್ತು. ಆದರೆ ನಿರುದ್ಯೋಗ ಭತ್ಯೆಗೆ ಅರ್ಜಿ ಹಾಕಬೇಕು ಅನ್ನುವ ಅಂದಾಜು ಇರಲಿಲ್ಲ. ನಮಗೆ ಬೇರೆ ಆಯ್ಕೆಯೇ ಇಲ್ಲ, ಇನ್ಯಾವ ದಾರಿಯೂ ಇಲ್ಲ್ಲ” ಎನ್ನುತ್ತಾನೆ ವರ್ಜಿಲ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...