Homeಅಂಕಣಗಳುತಬ್ಲೀಘ ಜಮಾತು ಬಗ್ಗೆ ನಿಮಗೆಷ್ಟು ಗೊತ್ತು?

ತಬ್ಲೀಘ ಜಮಾತು ಬಗ್ಗೆ ನಿಮಗೆಷ್ಟು ಗೊತ್ತು?

- Advertisement -
- Advertisement -

ಈಗ ಎಲ್ಲೆ ನೋಡಿದರೂ ತಬ್ಲೀಘ ಜಮಾತಿನ ಮಾತೇ ಮಾತು. ಇದರಿಂದಾಗಿ ಠೀವಿಯವರಿಗೆ ಟಿಆರಪಿ ಜಮಾ ಆಗಿದ್ದೇ ಆಗಿದ್ದು.
ಹೀಗಾಗಿಯೇ ಈ ಬಾರಿ ಇಲ್ಲಿಯೂ ಅದೇ ಮಾತು.

ತಬ್ಲೀಘ ಜಮಾತು ಅಂದರ `ಸಂದೇಶ ವಾಹಕರ ಸಮಿತಿ’. ಮರಕಜ ಅಂದರ ಕೇಂದ್ರ. ಇಜ್ತೆಮಾ ಅಂದರ ಸಮಾರಂಭ. ನಿಜಾಮುದ್ದೀನ ಅಂದರ ದೆಹಲಿಯ ನಿಜಾಮುದ್ದೀನ ಪ್ರದೇಶದಾಗ ಇರೋ ತಬ್ಲೀಘಿನ ಮಸೀದಿ. ಅಲ್ಲಿ ಮಾರ್ಚು 10 ರಿಂದ 13 ರವರೆಗೆ ಇಸ್ಲಾಮಿನ ಅಂತಾರಾಷ್ಟ್ರೀಯ ಸಮಾವೇಶ ನಡೆಯಿತು. ಅದರಲ್ಲಿ ಸುಮಾರು 3,600 ಜನ ಸೇರಿದ್ದರು. ಅವರು ಫೆಬ್ರವರಿ ಒಂದರಿಂದ ಅಲ್ಲಿಗೆ ಹೋಗಿ ಸೇರಿಕೊಂಡು ಮಾರ್ಚ 29 ರವರೆಗೂ ಇದ್ದರು. ಫೆಬ್ರವರಿಯೊಳಗ ಇಂಡೋನೇಷಿಯಾದಾಗ ಇಂಥಾದ್ದ ಒಂದು ಮೀಟಿಂಗ ಆಗಿತ್ತು. ಅದಕ್ಕ ಹೋಗಿ ಬಂದವರು ಕೆಲವರು ಇಲ್ಲಿಗೆ ಬಂದಿದ್ದರು. ಅವರೊಳಗ ಕೆಲವರಿಗೆ ಸೋಂಕು ತಗಲಿ ಬ್ಯಾರೆದವರಿಗೆ ಬಂತು.ಅವರನ್ನ ದೆಹಲಿ ಮಹಾನಗರ ಪಾಲಿಕೆ ಅವರು ಅವರವರ ಊರಿಗೆ ವಾಪಸ್ಸು ಕಳಿಸಲಾರದೇ ದೆಹಲಿಯ ಫಿರೋಜ ಷಾ ಕೋಟ್ಲಾ ಕ್ರಿಕೆಟ್ಟು ಆಟದ ಮೈದಾನದಾಗ ಪ್ರತ್ಯೇಕಿಸಿ (ಐಸೋಲೇಷನ್ನು), ಸಂಪರ್ಕ ನಿರೋಧಿಸಿ (ಕ್ವಾರಂಟೈನು) ಮಾಡಿ ಬಿಟ್ಟಿದ್ದರ ಆ ಸೋಂಕು ಬ್ಯಾರೆದವರಿಗೆ ಹರಡತಿದ್ದಿಲ್ಲ.

ಇನ್ನು ಕೇಂದ್ರ ಗೃಹ ಮಂತ್ರಿಯ ಕೈಕೆಳಗೆ ಕೆಲಸ ಮಾಡೋ ದೆಹಲಿ ಪೋಲಿಸರು ಥೇಟು ಹಳೇ ಕನ್ನಡ ಸಿನಿಮಾದಾಗಿನ ಪೋಲಿಸರು ಮಾಡಿದಂಗ ಎಲ್ಲಾ ಮುಗದ ಮ್ಯಾಲೆ ಕ್ರೈಂ ಸೀನಿಗೆ ಬಂದರು. ನಿಜಾಮುದ್ದೀನದ ಮುಖ್ಯಸ್ಥರು ದೆಹಲಿ ಪೋಲಿಸರು ಮತ್ತು ದೆಹಲಿ ಸರಕಾರಕ್ಕ ತಮ್ಮ ಕಾರ್ಯಕ್ರಮ ಮುಗದ ಮ್ಯಾಲೆ ಎರಡು ಪತ್ರ ಬರದರು. ನಮಗ ವಾಹನ ಪರವಾನಗಿ ಮತ್ತು ಪಾಸು ಕೊಡರಿ ಅಂದರ ಕೊಟ್ಟಿಲ್ಲ ಅಂತ ಹೇಳಿದ್ದರು. ಅವು ಕಿವುಡು ಸರಕಾರಕ್ಕ ಕೇಳಲಿಲ್ಲ.

ಮಾರ್ಚು 29 ನೇ ತಾರೀಕಿಗೆ ಪೋಲಿಸರು ಹಾಗೂ ಪಾಲಿಕೆ ಅಧಿಕಾರಿಗಳು ಮರಕಜದಿಂದ ಸುಮಾರು ಒಂದು ಸಾವಿರ ಜನರನ್ನ ಹೊರಗೆ ಕಳಿಸಿದರು. ಇಲ್ಲೇ ತಪ್ಪು ಮಾಡಿದರು. ಅವರನ್ನ ಅವರವರ ರಾಜ್ಯಕ್ಕ ಕಳಸೋ ಬದಲಿಗೆ ಅಲ್ಲೇ ದೆಹಲಿ ಒಳಗ ಇಟಗೊಂಡಿದ್ದರ ಈ ಪರಿಸ್ಥಿತಿ ಬರತಿರಲಿಲ್ಲ.

ಅದು ಹೋಗಲಿ ಬಿಡ್ರಿ. ತಬ್ಲೀಘು ಅಂದರೆ ಯಾರು? ಮುಸ್ಲೀಮರ ಒಳ ಪಂಗಡಗಳ ಬಗ್ಗೆ ತಿಳಕೊಂಡರ ಇದು ಅರ್ಥ ಆಗತದ. ಪ್ರವಾದಿ ಮೊಹಮ್ಮದ ಅವರು ಕಡೆಯ ಪ್ರವಾದಿ, ಸಂತ – ಸಂದೇಶವಾಹಕ ಅಂತ ತಿಳಕೊಂಡವರು ಸುನ್ನಿಗಳು. ಹಂಗೇನಿಲ್ಲ, ದೇವರು ಇಗಲೂ ಸಂದೇಶವಾಹಕರನ್ನ ಕಳಿಸಬಹುದು ಅಂತ ತಿಳಕೊಂಡವರು ಶಿಯಾ ಪಂಥಿಗಳು. ಭಾರತದೊಳಗ ಇರೋ ಮುಸ್ಲೀಮರ ಪೈಕಿ 90 ಶೇಕಡಾ ಜನ ಸುನ್ನಿಗಳು. ಅವರೊಳಗ ನಾಲ್ಕು – ಐದು ಸಿದ್ಧಾಂತ ಆಧಾರಿತ ಪಂಗಡಗಳು ಅವ. ಉದಾಹರಣಗೆ ಜಮಾತೇ ಇಸ್ಲಾಮಿ. ಇವರು ಮೌಲಾನಾ ಮೌದೂದಿ ಅನ್ನೂ ಧರ್ಮ ಗುರುವಿನ ಸಿದ್ಧಾಂತ ಪಾಲಿಸೋರು. ಮುಸ್ಲೀಮರು ಇತರ ಧರ್ಮದವರ ಜೊತೆ ಸ್ನೇಹ ಸಂಬಂಧ ಹೊಂದಿರಬೇಕು, ಕುರಾನನ್ನು ಭಾರತೀಯ ಭಾಷೆಗಳಿಗೆ ಭಾಷಾಂತರಿಸಬೇಕು, ವಿಜ್ಞಾನ, ರಾಜಕೀಯ ಪ್ರಜ್ಞೆ, ಆರ್ಥಿಕ ಪರಿಸ್ಥಿತಿ ಇವೆಲ್ಲದರ ಬಗ್ಗೆ ಮುಸ್ಲೀಮರು ಚಿಂತಿಸುತ್ತಾ ಇರಬೇಕು ಅಂತ ಇವರು ನಂಬತಾರ. ಅದರಂಗ ನಡಕೊಳ್ಳಲಿಕ್ಕೆ ಪ್ರಯತ್ನ ಮಾಡತಾರ. ಜಮಾತುಲ್ ಉಲೇಮಾ ಅನ್ನೋದು ಧರ್ಮಗುರುಗಳ ಸಂಘಟನೆ. ಅದರಾಗ ಬರೇ ಧರ್ಮದ ವಿಚಾರನ ಜಾಸ್ತಿ.

ತಬ್ಲೀಘ ಅನ್ನೋದು ಮುಸಲ್ಮಾನರು ಒಳ್ಳೆಯ ಮುಸಲ್ಮಾನರಾಗಿರಬೇಕು, ತಮ್ಮ ಧರ್ಮದ ಆಚರಣೆಗಳನ್ನ ಮರಿಯಬಾರದು, ದಿನಕ್ಕ ಐದು ಸಲೆ ನಮಾಜು ಮಾಡಬೇಕು, ರಮಝಾನಿನಲ್ಲಿ ಉಪವಾಸ ಮಾಡಬೇಕು, ಸುಳ್ಳು ಹೇಳಬಾರದು, ಜೂಜು ಆಡಬಾರದು, ಚುಗಲಿ (ಪುಕಾರು) ಎಬ್ಬಿಸಬಾರದು, ಇತ್ಯಾದಿಗಳನ್ನು ಮುಸಲ್ಮಾನರಿಗೆ ಹೇಳಿಕೊಡುವ ಸಂಸ್ಥೆ. ಇವರು ಮುಸಲ್ಮಾನೇತರರ ಹತ್ತಿರ ವ್ಯಾಪಾರ – ವ್ಯವಹಾರ ಮಾಡತಾರ ಆದರ ಧರ್ಮದ ಮಾತಾಡೋದಿಲ್ಲ. ಧರ್ಮ ಪ್ರಚಾರ ಅಂತೂ ದೂರದ ಮಾತು.

ಇನ್ನು ಅವರು ರಾಜಕೀಯ- ವಿಜ್ಞಾನ-ಆರ್ಥಿಕ – ಸಾಮಾಜಿಕ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡೋದಿಲ್ಲ. ಇಂಥಾ ಸಮಕಾಲಿನ ವಿಚಾರಗಳನ್ನು ಜಮಾತೆ ಇಸ್ಲಾಮನವರು ಚರ್ಚೆ ಮಾಡತಾರ. ತಬ್ಲೀಘನವರು ಮಾಡೋದಿಲ್ಲ. ಇಸ್ಲಾಮಿಕ್ ಇತಿಹಾಸಕಾರ ಸಯ್ಯದ ಉಬೇದುರ ರಹಮಾನ ಅವರು ತಬ್ಲೀಘಿನ ಈಗಿನ ಮುಖ್ಯಸ್ಥ ಮೌಲಾನಾ ಸಾದ ಅವರನ್ನು ನವಂಬರನಲ್ಲಿ ಭೇಟಿಯಾಗಿ ಎನ್‍ಆರ್‍ಸಿ ಸಿಎಎ ಬಗ್ಗೆ ಕೇಳಿದಾಗ “ಅದೇನೂ ಗಂಭೀರ ಸಮಸ್ಯೆ ಅಲ್ಲ, ಅದು ದೇಹಕ್ಕೆ ಸಣ್ಣ ರೋಗ ಬಂದಂತೆ. ಅದು ಕೆಲವು ದಿನಗಳ ನಂತರ ಸರಿ ಯಾಗುತ್ತದೆ” ಅಂತ ಹೇಳಿದರಂತ. ಅವರು ಹಾಗೇಕೆ ಹೇಳಿದರು ಅಂದರೆ ಅವರಿಗೆ ಅದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಅಂತ ಹೇಳಿ ರಹಮಾನ ಅವರು ಇತ್ತೀಚೆಗೆ ಬರೆದ ಲೇಖನದಲ್ಲಿ ಹೇಳಿಕೊಂಡಾರ.

ಸಾದ ಅವರನ್ನ ಇಸ್ಲಾಮಿನ ಇತರ ಪಂಗಡಗಳು ದೂರ ಇಟ್ಟಾರ. ಐದಾರು ವರ್ಷದ ಹಿಂದ ಅವರು `ದೆಹಲಿಯ ನಿಜಾಮುದ್ದೀನ ಅಂದರೆ ಇಸ್ಲಾಮಿನ ಮಕ್ಕಾ- ಮದೀನಾ ಬಿಟ್ಟರೆ ಅತಿ ಪವಿತ್ರ ಮಸೀದಿ’ ಅಂತ ಘೋಷಿಸಿದರು. ಮೊದಲನೇಯದಾಗಿ ಅದು ಸುಳ್ಳು ಯಾಕಂದರ ಇಸ್ಲಾಮಿನ ಮೂರನೇ ಪವಿತ್ರ ಮಸೀದಿ ಜರೂಸಲ್ಲಮಿನ ಮಸೀದಿ.

ಇನ್ನೊಂದು ಅದು ಅತಾರ್ಕಿಕ. ಒಂದು ನೂರಕ್ಕೂ ಕಮ್ಮಿ ವಯಸ್ಸಿನ ಮಸೀದಿ 1,400 ವರ್ಷದ ಧರ್ಮದ ಮೂರನೇ ಪವಿತ್ರ ಸ್ಥಾನ ಆಗಲಿಕ್ಕೆ ಹೆಂಗ ಸಾಧ್ಯ ಅದ?

ಸಾದ ಅವರ ವಿರುದ್ಧ ದೇವಬಂದನ ವಿಧ್ವಾಂಸರು ಫತ್ವಾ (ಅಭಿಪ್ರಾಯ) ಹೊರಡಿಸಿದರು. ಆ ನಂತರ ಅವರ ಗುಂಪು ವಿಭಜನೆ ಆತು. ಈಗ ನಿಜಾಮುದ್ದೀನ ಮಸೀದಿ ಹಾಗೂ ಶೂರಾ ಮಸೀದಿ ಅಂತ ಎರಡು ಗುಂಪು ಅವ. ನಿಜಾಮುದ್ದೀನನ ಹಿಂಬಾಲಕರು ಉತ್ತರ ಭಾರತದಾಗ ಜಾಸ್ತಿ ಇದ್ದರ ಶೂರಾದ ನಂಬಿಕಸ್ತರು ದಕ್ಷಿಣ ಭಾರತದಾಗ ಜಾಸ್ತಿ.

ಕರ್ನಾಟಕದ ಹೆಚ್ಚಾನು ಹೆಚ್ಚು ಮುಸ್ಲೀಮರು ಶೂರಾ ಮಸೀದಿಗೆ ನಡಕೊಳ್ಳೋರು.

ಮಹಮ್ಮದ ಇಲ್ಯಾಸ ಅನ್ನುವ ದೇವಬಂದಿ ಧರ್ಮ ಗುರುಗಳು ತಬ್ಲೀಘ ಜಮಾತನ್ನು 1926-27 ರೊಳಗ ಆರಂಭ ಮಾಡಿದರು. ಅವರಿಗೆ ಮುಸ್ಲೀಮರಿಗೆ ತಮ್ಮ ಧರ್ಮದ ಅರಿವಿಲ್ಲ. ಅವರ ಆಚಾರ – ವಿಚಾರ ಧರ್ಮಸಿಂಧುವಿನ ಪ್ರಕಾರ ಇಲ್ಲ ಅನ್ನುವ ಕೊರಗು ಇತ್ತು. ಅತಿ ಕಮ್ಮಿ ಖರ್ಚಿನಲ್ಲಿ ಸಂಘಟನೆ ಕಟ್ಟಬೇಕು, ಅತಿ ಬಡವರು, ಅಶಿಕ್ಷಿತರು ಇದರಿಂದ ಲಾಭ ಪಡಿಬೇಕು ಅಂತ ಅವರಿಗೆ ಅನ್ನಿಸಿತು. ಅವರ ಚಿಂತನೆ ಪ್ರಕಾರ ಇಂದಿಗೂ ತಬ್ಲೀಘಿನವರು ಸಮಾಜದ ಅತ್ಯಂತ ಬಡ- ಅಶಿಕ್ಷಿತರ ನಡುವೆ ಕೆಲಸಾ ಮಾಡತಾರ. ಕೂಲಿಕಾರರು, ದುಡಕೊಂಡು ತಿನ್ನೋರು, ಟೈರು ಪಂಚರ ಮಾಡೊರು, ಕಾಯಿಪಲ್ಯಾ ಮಾರಾಟ ಮಾಡೋರು, ಭಿಕ್ಷಾ ಬೇಡೋ ಫಕೀರರು, ಇಂಥವರೆಲ್ಲಾ ಇದರ. ಅವರ ನಡೂವನ ಇರತಾರ. ಸಂಘಟನೆಗೆ ಬಹಳ ಕಟ್ಟು ಪಾಡು ಇಲ್ಲ. ಸಭೆಗೆ ಅವರು ಖರ್ಚು ಮಾಡೋದಿಲ್ಲ. ಮಸೀದಿ ಪ್ರಾಂಗಣದಾಗನ ಸಭೆ.

ಸದಸ್ಯರು ಪ್ರವಾಸ ಮಾಡೋದು ಕಡ್ಡಾಯ. ಅವರು ವರ್ಷಕ್ಕ 10 ರಿಂದ 40 ದಿವಸ ಪ್ರವಾಸ ಮಾಡತಾರ. ಅವರು ಪ್ರವಾಸ ಮಾಡುವಾಗ ಕಡ್ಡಾಯವಾಗಿ ಮಸೀದಿಯೊಳಗ ಇರತಾರ. ಅಲ್ಲೇ ಒಲಿ ಹಚ್ಚಿ ಅಡಗಿ ಮಾಡತಾರ. ಅಲ್ಲೇ ಮಲಕೋತಾರ. ಸಂಜೆ ನಮಾಜಿಗೆ ಮೊದಲು ಸ್ಥಳೀಯ ನಾಯಕನೊಬ್ಬನನ್ನು ಕರಕೊಂಡು ಹೋಗಿ ಮುಸ್ಲೀಮ ಮನಿ- ಮನಿಗೆ ಹೋಗಿ ಪ್ರಾರ್ಥನೆಗೆ ಕರೀತಾರ. ಪ್ರಾರ್ಥನೆ ನಂತರದ ಭಾಷಣ ಸಂಘಟನೆಯ ನಾಯಕರೇ ಮಾಡಬೇಕಂತ ಇಲ್ಲ. ಹೊಸದಾಗಿ ಸೇರಿದ ಯುವಕರ ಹತ್ತರನೂ ಭಾಷಣ ಮಾಡಸ್ತಾರ. ಅತಿ ಕಮ್ಮಿ ಖರ್ಚಿನಾಗ ಸಂಘಟನೆ ನಡಸಬೇಕು ಅನ್ನೋದು ಒಂದು ಅವರ ನಿಯಮ.

ಅವರು ಹೆಚ್ಚು ಓದಿರೋದಿಲ್ಲ. ಅರ್ಧಕ್ಕ ಸಾಲಿ ಬಿಟ್ಟಿರತಾರ. ದಿನ ನಿತ್ಯ ಪೇಪರ್ ಓದೋದಿಲ್ಲ. ಠೀವಿ ನೋಡಿ- ಚರ್ಚೆ ಮಾಡಿ, ಸೋಷಿಯಲ್ ಮೀಡಿಯಾದಾಗ ವಿಚಾರ ವಿನಿಮಯ ಮಾಡೋ ಅಷ್ಟು ಅವರಿಗೆ ಶಿಕ್ಷಣ ಇರಂಗಿಲ್ಲ. ಹೊಟ್ಟಿ ತುಂಬಿಕೊಳ್ಳೋದರಾಗ ಅವರ ಶಕ್ತಿ- ಬುದ್ಧಿ ಖರ್ಚಾಗಿರತದ. ನಾ ಎಲ್ಲೆ ಧರ್ಮ ಬಿಟ್ಟು ಹೊಂಟೇನೋ ಅನ್ನೋ ಹೆದರಿಕಿ ಒಳಗ ಅವರು ತಬ್ಲೀಘಿಗೆ ಬಂದಿರತಾರ.

ತಬ್ಲೀಘು- ಜಮಾತು-ನಿಜಾಮುದ್ದೀನು- ಮರಕಜು- ಇಜ್ತೆಮಾ ಅನ್ನೋದು ಇತರರಿಗೆ ಎಷ್ಟು ಅಪರಿಚಿತನೋ, ಇವರಿಗೆ ಕೋವಿಡ್ಡು-ಐಸೋಲೇಷನ್ನು – ಕ್ವಾರಂಟೈನು- ಪಿಸಿಆರು- ಥ್ರೋಟು ಸ್ವಾಬು- ಹರ್ಡು ಇಮ್ಯನಿಟಿ ಅನ್ನೋವೆಲ್ಲಾ ಅಷ್ಟೇ ಅಪರಿಚಿತ.
ಇದು ಇತರರಿಗೆ ಅರ್ಥ ಆದರೆ ಅರ್ಧ ಕೆಲಸ ಆದಹಂಗ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಿಮ್ಮ ಪತ್ರಿಕೆಯ ಬರಹಗಳು ಅಚ್ಚುಕಟ್ಟಾಗಿ ಮೂಡಿ ಬರ್ತಿವೆ ಸರ್ ತಮ್ಮ ಪತ್ರಿಕೆ ಇನ್ನಷ್ಟು ಹೆಸರು ಮಾಡಲಿ…..

    ನಿಮ್ಮ ಪತ್ರಿಕೆಯಲ್ಲಿ ನನ್ನತ ಅವ್ಯಾಸ ಬರಗಾರರಿಗೆ
    ಅವಕಾಶ ಕೊಡಿ.. ಸರ್
    ಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...