Homeಚಳವಳಿಪ್ರೀತಿ ಕೊಂದ ಜಾತಿ... ಜಾತಿಯನ್ನು ಕೊಲ್ಲುವುದು ಯಾವಾಗ?

ಪ್ರೀತಿ ಕೊಂದ ಜಾತಿ… ಜಾತಿಯನ್ನು ಕೊಲ್ಲುವುದು ಯಾವಾಗ?

- Advertisement -
- Advertisement -

ಘಟನೆ ನಡೆದು ಕೇವಲ 4 ದಿನಗಳಾಗಿವೆ. ಆಗಲೇ ತೆಲಂಗಾಣವೂ ಸೇರಿದಂತೆ ದೇಶಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ. ಹತ್ಯೆಗೀಡಾದ ಪ್ರಣಯ್‍ನ ಪ್ರಿಯ ಪತ್ನಿ ಅಮೃತಾ ತೆರೆದ ‘ಜಸ್ಟೀಸ್ ಫಾರ್ ಪ್ರಣಯ್’ ಫೇಸ್‍ಬುಕ್ ಪುಟದ ಪ್ರಕಾರ ವಿದೇಶಗಳಲ್ಲೂ ಸಾರ್ವಜನಿಕ ಸಂತಾಪ ಮತ್ತು ಪ್ರತಿಭಟನೆ ನಡೆದಿದೆ.

ಪ್ರಣಯ್ ಎಂಬ ದಲಿತ ಹುಡುಗ, ಅಮೃತಾ ಎಂಬ ಮೇಲ್ಜಾತಿಯ ಹುಡುಗಿಯನ್ನು ಮದುವೆಯಾದದ್ದಕ್ಕಾಗಿ, ಅಮೃತಾಳ ತಂದೆ ಮಾರುತಿರಾವ್ ಕೊಲೆ ಮಾಡಿಸಿದ್ದು ಎಂಬಲ್ಲಿಂದ ಎಲ್ಲಾ ವಿವರಗಳು ಈಗಾಗಲೇ ಓದಿರುತ್ತೀರಿ.
ಪ್ರಶ್ನೆಯಿರುವುದು ಈ ಲೇಖನ ಮಾಡುವುದರ ಜೊತೆಗೆ ‘ಪತ್ರಿಕೆ’ಯ ಜವಾಬ್ದಾರಿ ಮುಗಿದು ಹೋಗುತ್ತದೆಯೇ?

ಫೇಸ್‍ಬುಕ್‍ನಲ್ಲಿ ಆಕ್ರೋಶ, ಕಂಬನಿ ತೋರಿದಾಗ ಮುಗಿದು ಹೋಗುವಂತೆ. ಈಗೀಗ ಅಭಿವ್ಯಕ್ತಿಗೆ ಹೊಸ ದಾರಿಗಳು ಇವೆ. ಫೇಸ್‍ಬುಕ್, ವಾಟ್ಸಾಪ್ ಡಿಪಿ (ಪ್ರೊಫೈಲ್ ಚಿತ್ರ) ಬದಲಿಸುವುದ, ಪೋಸ್ಟರ್ ಮಾಡಿ ಹಂಚಿಕೊಳ್ಳುವುದು. ತಾರಾಮಾರಾ ವ್ಯವಸ್ಥೆಯನ್ನು ಬಯ್ದುಕೊಳ್ಳುವುದು. ನಂತರ ಇನ್ನೊಂದು ಇಂತಹ ಘಟನೆ ನಡೆಯುವವರೆಗೆ ನಡುವೆ ಅದೂ ಇದೂ ಮಾಡಿಕೊಳ್ಳುವುದು. ಮತ್ತೊಂದು ಭೀಕರ ಘಟನೆ ನಡೆದಾಗ ಎಲ್ಲವೂ ಪುನರಾವರ್ತನೆ.

ಹಾಗಾಗಬಾರದೆಂದರೆ ಇನ್ನಷ್ಟು ಆಳಕ್ಕೆ ಹೋಗುವ ಅಗತ್ಯವಿದೆ. ಈ ರೀತಿಯ ಜಾತಿ ಹತ್ಯೆಯಾಗುತ್ತಿರುವ ಸಂದರ್ಭದಲ್ಲೇ, ಎಸ್‍ಸಿ-ಎಸ್‍ಟಿ ಅಟ್ರಾಸಿಟಿ ಕಾಯ್ದೆ ದುರ್ಬಲವಾಗುತ್ತಿದೆ. ಅಕ್ಷರದ ಅರಿವನ್ನೂ ಶೋಷಿತ ಸಮುದಾಯಗಳು ಪಡೆದುಕೊಳ್ಳಲು ಒದ್ದಾಡಬೇಕಾದ ಸ್ಥಿತಿ ಇನ್ನೂ ಇರುವಾಗಲೇ, ಮೀಸಲಾತಿ ತೆಗೆಯಿರಿ ಎಂದು ಕೂಗಾಡುವ ಮನಸ್ಸುಗಳು ಇವೆ. ಇದನ್ನು ಎಲ್ಲಿಂದ ಬದಲಿಸುವುದು? ಹಾಗೆಯೇ ಅದೆಷ್ಟನೇ ಬಾರಿಯೋ, ಕಮ್ಯುನಿಸ್ಟರು ಮತ್ತು ಅಂಬೇಡ್ಕರ್‌ವಾದಿಗಳು ಚರ್ಚೆ ಕನ್ನಡ ಫೇಸ್‍ಬುಕ್ ವಲಯದಲ್ಲಿ ಶುರುವಾಗಿದೆ. ಅದು ಮುಗಿಯುವುದೂ ಕಷ್ಟ.

ಇದು ಮತ್ತೊಂದು ಹತಾಶೆಯ ಸಂದರ್ಭ ವಾಗಬಾರದು ಎಂಬ ಕಾರಣಕ್ಕೆ ಪತ್ರಿಕೆಯು ವಿವಿಧ ಹಿನ್ನೆಲೆಗಳಿಗೆ ಸೇರಿದ ಮೂವರಿಂದ ಈ ಹೊತ್ತಿನ ಮಾತುಗಳನ್ನು ಬರೆದುಕೊಡುವಂತೆ ಕೇಳಿತು. ಈ ಅಂಶಗಳ ಕುರಿತು ಚರ್ಚೆಯಾಗಬೇಕೆಂದು ಬಯಸುತ್ತೇವೆ. ಆದರೆ, ಈ ಚರ್ಚೆಯು ಆಳಕ್ಕೆ ಹೋಗಬೇಕು; ಪರಿಹಾರದ ಕುರಿತು ಸಾಗಬೇಕು. ಸಾಮೂಹಿಕ ಕ್ರಿಯಾಶೀಲತೆಯ ಮೂಲಕ ದಾರಿ ಕಂಡುಕೊಳ್ಳುವಂತೆ ಆಗಬೇಕು.

ಇಲ್ಲದಿದ್ದರೆ, ತನ್ನ ತಂದೆಯಿಂದಲೇ ಕೊಲೆಗೀಡಾದ ಮಂಡ್ಯ ಜಿಲ್ಲೆ ಆಬಲವಾಡಿ ಸುವರ್ಣಳ ಕೇಸಿನಲ್ಲಿ ಆದಂತೆ ಆಗಿಬಿಡಬಹುದು. ಘಟನೆಯ ತರುವಾಯ ಅದನ್ನು ಹೊರತರುವಲ್ಲಿ ಕೆಲವು ಸಂಘಟನೆಗಳ ಬೆಂಬಲವಿದ್ದೂ, ಬಲಾಢ್ಯ ಕೊಲೆಗಡುಕ ತಂದೆಯ ಬಂಧನವಾಗಿದ್ದಾಗ್ಯೂ ನಿಧಾನಕ್ಕೆ ಮೊಕದ್ದಮೆಯ ವಿಚಾರಣೆಯು ನಿರಾಶಾದಾಯಕವಾಗಿ ಸಾಗುತ್ತಿದೆ. ಕೆಲವೇ ತಿಂಗಳಲ್ಲಿ ಜಾಮೀನು ಸಿಕ್ಕಿಬಿಟ್ಟಿತು. ಜಾಮೀನಾದ ನಂತರ ಹಳ್ಳಿಗೆ ಹೋಗಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ. ನಂತರ ಜಾಮೀನು ರದ್ದಾದರೂ, ಇನ್ನೊಂದಷ್ಟು ದಿನಗಳ ನಂತರ ಜೈಲಿನಿಂದ ಹೊರಗೆ ಬರಲು ಸಾಧ್ಯವಾಯಿತು. ‘ಮರ್ಯಾದೆ ಸ್ಥಿರಗೊಂಡಿತು’. ಅಂತಿಮವಾಗಿ ಕಂಬಾಲಪಲ್ಲಿಯಲ್ಲಿ ಆದಂತೆ ಇಲ್ಲಿಯೂ ಸಾಕ್ಷಿಗಳೇ ಉಲ್ಟಾ ಹೊಡೆಯಬಹುದು.

ಇದನ್ನೂ ಓದಿ; ಅಂತರ್ಜಾತಿ ವಿವಾಹದಿಂದ ಹತ್ಯೆಯಾದ ಪ್ರಣಯ್ ಹೆಂಡತಿ ಅಮೃತಗೆ ತಂದೆಯಿಂದ ಮತ್ತೆ ಬೆದರಿಕೆ: ದೂರು ದಾಖಲು

ಹಾಗಾದರೆ ಈ ಜಾತಿ ಹತ್ಯೆಗಳಿಗೆ ನಿಜಕ್ಕೂ ಶಿಕ್ಷೆ ಹೇಗೆ ಆಗುತ್ತದೆ? ಇದು ಕೇವಲ ನ್ಯಾಯಾಲಯಗಳಲ್ಲಿ ಬಗೆಹರಿಯುವ ವಿಷಯ ಅಲ್ಲ ಎಂದಾದಲ್ಲಿ ಸಮಾಜದಲ್ಲಿ ಬಗೆಹರಿಸುವ ವಿಧಾನ ಯಾವುದು ಎಂಬುದನ್ನು ಮನುಷ್ಯ ಧರ್ಮದ ಮೇಲೆ ವಿಶ್ವಾಸವುಳ್ಳ ಎಲ್ಲರೂ ಚಿಂತಿಸಬೇಕು. ಅಂತಹ ಚರ್ಚೆಯನ್ನಷ್ಟೇ ಈ ಸಂಚಿಕೆಯಲ್ಲಿ ಆರಂಭಿಸಲಾಗಿದೆ. ಸಾಂದರ್ಭಿಕವಾದ ಬರಹಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಇದರೊಂದಿಗೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ಏಕೆಂದರೆ ಇಂತಹ ಹತ್ಯೆಗಳು ಇದೊಂದೇ ಅಲ್ಲ. ಅವೂ ಇದರೊಂದಿಗೆ ಮುಗಿಯುವುದಿಲ್ಲ.

 

ಗಂಡನ ಕೊಲೆಯ ವಿರುದ್ಧ ಅಮೃತಾಳ ಅಭಿಯಾನ

ಎಲ್ಲರೂ ತಾಯಿಯ ಪ್ರೀತಿಯ ಬಗ್ಗೆಯೇ ಮಾತಾಡುತ್ತಾರೆ; ತಂದೆಯ ತ್ಯಾಗದ ಬಗ್ಗೆ ಯಾರು ಮಾತನಾಡುವುದಿಲ್ಲ’ ಎಂದು ಸೆಪ್ಟೆಂಬರ್ 9ರಂದು ಫಾಧರ್‌ ಡೇಯಂದು ತನ್ನ ಫೇಸ್‍ಬುಕ್ ವಾಲ್ ಮೇಲೆ ಬರೆದುಕೊಂಡಿದ್ದಳು ಅಮೃತಾ. ಅವಳ ಗಂಡ ಪ್ರಣಯ್‍ನನ್ನು, ಆಕೆಯ ಎದುರಿಗೇ ಅದೇ ತಂದೆ ಸೆ.16ರಂದು ಕೊಲ್ಲಿಸಿದ.

ತಂದೆಯೊಂದಿಗೆ ಅಮೃತ

 

ಪ್ರಣಯ್ ಗರ್ಭಿಣಿಯಾದ ತನ್ನ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಸಮಯವನ್ನು ಕಾದು ನೋಡಿ ಅವನ ಮೇಲೆ ದಾಳಿಮಾಡಿ ಮಚ್ಚಿನಲ್ಲಿ ಕೊಚ್ಚಿ ಭೀಕರವಾಗಿ ಕೊಂದು ಹಾಕಿದ್ದಾರೆ. ಈ ಹತ್ಯೆಗೆ ಹುಡುಗಿಯ ತಂದೆ ಮಾರುತಿರಾವ್ ಒಂದು ಕೋಟಿ ರೂಪಾಯಿಗಳ ಸುಪಾರಿ ಕೊಟ್ಟಿದ್ದೆ ಎಂಬ ಹೇಳಿಕೆ ಕೊಟ್ಟಿದ್ದಾನೆ.

ಕೇವಲ 7 ದಿನಗಳ ಹಿಂದೆಯಷ್ಟೇ ತಂದೆಯ ತ್ಯಾಗದ ಕುರಿತು ಸಾರ್ವಜನಿಕವಾಗಿ ಅಮೃತಾ ಬರೆದ ಪೋಸ್ಟಿಗೆ ಈಗ ನೂರಾರು ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಆಕೆ ಬರೆದ ಪೋಸ್ಟನ್ನು ನೋಡಿದರೆ ಎಂತವರಿಗಾದರೂ ಕಣ್ಣುತುಂಬಿ ಬರುವುದಂತೂ ನಿಜ. ಆದರೆ ಆ ಕಟುಕ ತಂದೆಯ ಮನಸ್ಸು ಮಾತ್ರ ಕರಗದೇ ಇರುವುದು ಜಡ್ಡುಗಟ್ಟಿದ ಜಾತಿ ರೋಗದ ಮತ್ತು ಜಾತಿಯು ಪ್ರತಿಷ್ಠೆಯ ಸಂಕೇತವಾಗಿರುವುದರ ಕುರುಹಾಗಿದೆ.

ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಇದು ಅಂತರ್ಜಾತಿ ಮದುವೆಯನ್ನು ಒಪ್ಪದ ಮೇಲ್ಜಾತಿಯ ಶ್ರೀಮಂತ ಕುಟುಂಬದ ಯಜಮಾನ ನಡೆಸಿರುವ ಘೋರ ಹತ್ಯೆ. ಆ ಕುರಿತ ವಿವರಗಳು ಈಗಾಗಲೇ ಫೇಸ್‍ಬುಕ್ ಮೂಲಕ ಎಲ್ಲರಿಗೂ ಗೊತ್ತಿದೆ. ಆದರೆ, ತನ್ನ ಫೇಸ್‍ಬುಕ್‍ನಲ್ಲಿ ಏನು ಬರೆದುಕೊಂಡಿದ್ದಳು ಎಂಬುದು ಇಡೀ ದುರಂತ ಕಥಾನಕದ ಇತರ ಮಗ್ಗುಲುಗಳನ್ನೂ ತೋರಿಸುತ್ತದೆ.

ತಾನು ‘ಕೆಳ’ಜಾತಿಯ ಪ್ರಣಯ್‍ನನ್ನು ಮದುವೆಯಾದ ಕಾರಣಕ್ಕೆ ತಂದೆ ಮುನಿಸಿಕೊಂಡರೂ ಸಹ ಆಕೆ ತನ್ನ ಫೇಸ್‍ಬುಕ್ ಖಾತೆಯಲ್ಲಿ ತಂದೆಯ ಜನುಮದಿನಕ್ಕೆ ಶುಭ ಕೋರಿದ್ದಾಳೆ. ಅಷ್ಟೇ ಅಲ್ಲದೇ ತಂದೆ ಮತ್ತು ಮಗಳ ಸಂಬಂಧದ ಬಗ್ಗೆಯು ಕೆಲವು ಭಾವನಾತ್ಮಕ ವಿಡಿಯೋಗಳನ್ನು ಕೂಡ ಶೇರ್ ಮಾಡಿದ್ದಾಳೆ.

ಪ್ರಣಯ್ ಮತ್ತು ಅಮೃತ ವರ್ಷಿಣಿ ಒಂಬತ್ತನೇ ತರಗತಿಯಿಂದ ಕ್ಲಾಸ್‍ಮೇಟ್ಸ್ ಮತ್ತು ಬಿ.ಟೆಕ್ ಮುಗಿಸಿದ ನಂತರ ಅವರ ಪ್ರೀತಿಯು ಮದುವೆಯವರೆಗೆ ಹೋಗಿದೆ. ತಮ್ಮಿಬ್ಬರ ಚಿಕ್ಕವಯಸ್ಸಿನ ಫೋಟೋಗಳನ್ನೂ ಷೇರ್ ಮಾಡಿರುವ ಅಮೃತಾ ಆತನನ್ನು ಹಚ್ಚಿಕೊಂಡಿರುವುದು ಎದ್ದು ಕಾಣುತ್ತದೆ.

ತೆಲುಗು ಸಿನೆಮಾದ ಗಾಢ ಪ್ರಭಾವ ಇವರ ಮೇಲಿರುವುದು ಎದ್ದು ಕಾಣುತ್ತದೆ. ಇವರು ಮಾಡಿರುವ ತೆಲುಗು ಸಿನೆಮಾಗಳ ಕೆಲವು ಡಬ್‍ಸ್ಮಾಷ್‍ಗಳು ಮತ್ತು ಅಮೃತ ಹಾಕಿದ ತಮ್ಮ ಜೋಡಿಯ ಮುದ್ದಾದ ಫೋಟೋಗಳ ಮೇಲೆ ಬರೆದ ತಲೆ ಬರಹಗಳು ಅವರು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದನ್ನೂ ಹೇಳುತ್ತವೆ.
ಹಾಗೆಯೇ ಈ ಕಾಲದಲ್ಲಿನ ಶ್ರೀಮಂತರ ಮತ್ತು ಮೇಲ್ಮಧ್ಯಮ ವರ್ಗದ ಮದುವೆಯ ಭಾಗವಾಗಿರುವ ಪ್ರೀ ವೆಡ್ಡಿಂಗ್ ಶೂಟ್ ಸಹಾ ಈಕೆಯ ಫೇಸ್‍ಬುಕ್‍ನಲ್ಲಿ ಬಿತ್ತರವಾಗಿದೆ.

ಅದನ್ನು ಸಾಕಷ್ಟು ಜನ ನೋಡಿದ್ಧಾರೆ. ಈ ವಿಡಿಯೋಗೆ ಹೆಚ್ಚು ಲೈಕ್ಸ್ ಬಂದಿರುವುದನ್ನು ನೋಡಿದ ಅಮೃತಾಳ ತಂದೆ, ನಿನ್ನ ಗಂಡನ ಸಾವಿನ ವಿಡಿಯೋ ಕೂಡ ಇದಕ್ಕಿಂತ ಹೆಚ್ಚು ಜನ ನೋಡುತ್ತಾರೆ ಎಂದಿದ್ದನಂತೆ. ಈ ವಿಡಿಯೋ ನೋಡಿ ಮಾರುತಿರಾವ್ ಮತ್ತಷ್ಟು ಕೆರಳಿದ್ದನೆಂದು ಹೇಳುವ ವಿಡಿಯೋ ಈಗಾಗಲೇ ಯೂಟ್ಯೂಬ್‍ನಲ್ಲಿ ಓಡಾಡುತ್ತಿದೆ. ಸರಿಯೋ ತಪ್ಪೋ, ಇಂದಿನ ಯುವಜನರ ಮನೋಭಾವ, ಮದುವೆಯ ಮಾರುಕಟ್ಟೆ, ಸಿನೆಮಾ ಸಂಸ್ಕೃತಿಯ ಪ್ರಭಾವ ಎಲ್ಲವೂ ಫೇಸ್‍ಬುಕ್‍ನಲ್ಲಿ ಎದ್ದು ಕಾಣುತ್ತದೆ.

ತನ್ನ ಪ್ರೇಮಿಯೆಡೆಗಿನ ಪ್ರೀತಿಯೂ ಉತ್ಕಟವಾಗಿ ಮತ್ತು ಎಂದೆಂದೂ ಬಿಟ್ಟಿರಲಾರೆನೆಂಬ ಭಾವವನ್ನು ಹಲವು ಪೋಸ್ಟ್‌ಗಳಲ್ಲಿ ಅವರು ವ್ಯಕ್ತಪಡಿಸುತ್ತಾರೆ; ಅದೇ ರೀತಿಯಲ್ಲಿ ತಂದೆಯ ಕುರಿತ ಉತ್ಕಟ ಅಭಿಮಾನವೂ ಫೇಸ್‍ಬುಕ್‍ನಲ್ಲೇ ಕಾಣುತ್ತದೆ.

ತನ್ನ ಗಂಡನ ಹತ್ಯೆಯ ನಂತರ ತಂದೆಯ ಕುರಿತು ಆಕ್ರೋಶಭರಿತಳಾಗಿರುವ ಅಮೃತ ‘ಜಸ್ಟೀಸ್ ಫಾರ್ ಪ್ರಣಯ್’ ಎಂಬ ಪೇಸ್‍ಬುಕ್ ಪೇಜ್ ತೆರೆದು, ತನ್ನ ತಂದೆಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾಳೆ. ಅಲ್ಲೂ ಮೂರು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಒಂದು, ಅಮೃತಾ ಮತ್ತು ಪ್ರಣಯ್‍ರ ಮುಗ್ಧ ಪ್ರೀತಿಯ ಪರವಾಗಿ ದನಿಯೆತ್ತಿ ಸಹಾನುಭೂತಿ ವ್ಯಕ್ತಪಡಿಸಿ ಸಂತಾಪ ಸೂಚಿಸುವ ಬಹುತೇಕರು. ಎರಡು, ನಿನ್ನಿಂದ ಮತ್ತು ನಿನ್ನಂತಹ ಜಾತಿಯ ಜನರಿಂದ ಪ್ರಣಯ್ ಥರದವರು ಕೊಲೆಯಾಗುತ್ತಿದ್ದಾರೆ; ನೀನು ನಿನ್ನ ಪಾಡಿಗಿರು ಎಂದು ಹೇಳುವ ಪ್ರಣಯ್‍ನ ಪರವಾಗಿ ನಿಂತ ಬೆರಳೆಣಿಕೆಯವರು. ಮೂರು, ಮೀಸಲಾತಿ ತೆಗೆಯಲು ಹೋರಾಡು; ಆಗಲೇ ಜಾತಿಯೂ ಹೋಗುತ್ತೆ ಎಂದು ಹೇಳುವ ಕೆಲವರು.

ಪ್ರೀತಿ, ದ್ವೇಷ, ಹೋರಾಟ, ಕ್ರೌರ್ಯ ಎಲ್ಲವೂ ಸಾಮಾಜಿಕ ಜಾಲತಾಣಗಳ ಭಾಗವಾಗುತ್ತಿರುವ ದಿನಗಳಲ್ಲಿ ನಮ್ಮೆಲ್ಲರ ಬದುಕಿನ ಮೇಲೂ ಸಮಾಜದ ಪ್ರಭಾವ ಮತ್ತಷ್ಟು ಹೆಚ್ಚಾಗುತ್ತದೆ. ಅದೇ ಸಮಾಜದಲ್ಲಿ ಎಲ್ಲವೂ ಮಾಡ್ರನ್ ಆಗುತ್ತಾ, ಜಾತಿಯ ವಿಷಯದಲ್ಲಿ ಮಾತ್ರ ಹಿಂದುಳಿಯುತ್ತಿರುವುದು ವಿಪರ್ಯಾಸ.

– ಅನಿಲ್‍ಕುಮಾರ್ ಚಿಕ್ಕದಾಳವಟ್ಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ ಬಿಜೆಪಿಗೆ ಹಿರಿಯ ನಟ ಎಸ್. ದೇವನ್ ಗುಡ್‌ಬೈ: ‘ದಳಪತಿ’ ವಿಜಯ್ ಟಿವಿಕೆ ಪಕ್ಷ ಸೇರಲು ಒಲವು!

ಮಲಯಾಳಂ ನಟ ಹಾಗೂ ರಾಜಕಾರಣಿ ಎಸ್. ದೇವನ್ ಅವರು ತಮಿಳುನಾಡಿನ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕೇರಳ...

ಮತ್ತೆ ಜೈಲಿನಿಂದ ಹೊರಬಂದ ಅತ್ಯಾಚಾರಿ ರಾಮ್ ರಹೀಮ್! 6 ವರ್ಷದಲ್ಲಿ 17ನೇ ಬಾರಿ ಪೆರೋಲ್

ನವದೆಹಲಿ/ರೋಹ್ಟಕ್: ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಪುನಃ...

ಎಸ್‌ಐಆರ್‌ ಕರಡು ತಿರಸ್ಕರಿಸಿದ ನಾಗರಿಕ ಸಂಘಟನೆಗಳು; ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ

ಆಗಸ್ಟ್ 24 ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಎಸ್‌ಐಆರ್‌ ಕರಡು ಪಟ್ಟಿಯನ್ನು ಕರ್ನಾಟಕದ ನಾಗರಿಕ ಸಂಘಟನೆಗಳು ತಿರಸ್ಕರಿಸಿದ್ದು, ಲಕ್ಷಾಂತರ ಮತದಾರರಿಗೆ ನೋಟಿಸ್‌ ಕೊಡಲು ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ...

‘ಕೇಂದ್ರ ಸರ್ಕಾರ ಜಾತಿ ಗಣತಿಗೆ ರೂಪಿಸಿರುವ ಪ್ರಶ್ನಾವಳಿ ವಿಧಾನ ದಾರಿತಪ್ಪಿಸುವಂತಿವೆ’: ಹೊಸ ಪ್ರಶ್ನಾವಳಿ ರಚಿಸಲು ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಪತ್ರ

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಶ್ನಾವಳಿಯ ವಿಧಾನವು ಅತ್ಯಂತ ದಾರಿತಪ್ಪಿಸುವಂತಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ...

ಪತ್ರಕರ್ತ ಅಭಿಷೇಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಆದೇಶ

ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು,...

2027ರ ಜನಗಣತಿಯಲ್ಲಿ ಪೋಷಕರ ಧರ್ಮ, ಜನ್ಮಸ್ಥಳದ ವಿವರ ಏಕೆ? ಕೇಂದ್ರದ ವಿರುದ್ಧ ಸಿಪಿಐ(ಎಂ) ಆಕ್ರೋಶ

2027ರ ಜನಗಣತಿ ಪ್ರಶ್ನಾವಳಿಯಲ್ಲಿ ಪೋಷಕರ ಧರ್ಮ ಹಾಗೂ ಜನ್ಮಸ್ಥಳದ ಕುರಿತಾದ ವಿವರಗಳನ್ನು ಸಂಗ್ರಹಿಸಲು ಉದ್ದೇಶಿಸಿರುವುದರ ವಿರುದ್ಧ ಸಿಪಿಐ(ಎಂ) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಕ್ರಮವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುವ...

ಟಿಎಂಸಿ ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಶಾಕ್: 20 ಎಂಪಿಗಳಿಗೆ ನೋಟಿಸ್ ಜಾರಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು, ಎನ್‌ಸಿಪಿಐ (NCPI) ಎಂಬ ಅಷ್ಟಾಗಿ ಜನಪ್ರಿಯವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟವನ್ನು ಸೇರಿಕೊಂಡಿರುವ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಟಿಎಂಸಿ ಪ್ರಧಾನ...

ಹನೂರ್ ‘ಶೂಟೌಟ್’: ದಾಖಲೆಗಳನ್ನು ಬಿಡುಗಡೆ ಮಾಡಿದ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ: ಸಿಬಿಐ ತನಿಖೆಗೆ ಆಗ್ರಹ 

ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದ ಮೂವರ ಸಾವು ಮತ್ತು ಗುಂಡಿನ ಚಕಮಕಿ ಪ್ರಕರಣ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆಗಸ್ಟ್ 15ರಂದು ಹನೂರಿನ ಮರಿಯಮಂಗಲ ಬಿಟ್ ಅರಣ್ಯ...

ಬಿಜೆಪಿ MLC ರವಿಕುಮಾರ್‌ ವಿರುದ್ಧ ಜಾಮೀನು ರಹಿತ ವಾರಂಟ್‌

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ವಿರುದ್ಧ ಅವಹೇಳನಕಾರಿ ಹಾಗೂ ಕೋಮು ಪ್ರಚೋದಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ವಿಚಾರಣೆಗೆ ಹಾಜರಾಗದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಬೆಂಗಳೂರಿನ...

20 ಬಂಡಾಯ ಸಂಸದರ ಅನರ್ಹತೆಗೆ ಒತ್ತಾಯ: ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ

ತಮ್ಮ ಪಕ್ಷದಿಂದ ಪ್ರತ್ಯೇಕಗೊಂಡಿರುವ 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿ ತೃಣಮೂಲ ಕಾಂಗ್ರೆಸ್...