Homeಮುಖಪುಟಪ್ರಪಂಚವನ್ನೇ ಕಟ್ಟಿದ ಮೂಲನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದೇಕೆ?

ಪ್ರಪಂಚವನ್ನೇ ಕಟ್ಟಿದ ಮೂಲನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದೇಕೆ?

“ಸಬ್ ಯಾದ್ ರಖ್ಖಾ ಜಾಯೇಗಾ” ಎಂಬ ಕವಿತೆ ಎಲ್ಲೋ ಹುಟ್ಟಿ ಈಗ ಎಲ್ಲಾ ಕಡೆ ಅನುರಣಿಸುತ್ತಿರುವಾಗ ಕನಸು ಹುಟ್ಟಬಹುದೆಂಬ ಭರವಸೆ ಉಳಿದಿದೆ. ಹೇಗೂ ಶಾಹೀನ್ ಬಾಗ್‍ನ ಹೆಣ್ಣು ಮಕ್ಕಳು ಭರವಸೆಯೊಂದನ್ನು ಬಿಟ್ಟು ಹೋಗಿದ್ದಾರಲ್ಲ!

- Advertisement -
- Advertisement -

“ಇತಿಹಾಸವನ್ನು ಒಂದು ಕುದುರೆಯು ಬರೆದಿತ್ತು ಎಂದೇನಾದರೂ ಆಗಿದ್ದಲ್ಲಿ ಅದು ತನಗೆ ತಿಳಿದಂತೆ ಬರೆದಿರುತ್ತಿತ್ತು” ಎಲ್ಲೊ ಓದಿದ ಇಂಥ ಒಂದು ವಾಕ್ಯಕ್ಕೆ ನನ್ನದೊಂದು ಸೇರ್ಪಡೆ: ಅದು ತನ್ನ ಮೇಲೆ ಕುಳಿತ ಸವಾರನಿಗೆ ತಿಳಿದಂತೆ ಬರೆದಿರುತ್ತಿತ್ತು ಎಂದು.

ಚರಿತ್ರೆಯ ಪುಟಗಳುದ್ದಕ್ಕೂ ದೊಡ್ಡ ದೊಡ್ಡ ಯುದ್ಧಗಳು ಮತ್ತು ಅವುಗಳಲ್ಲಿ ಜಯಿಸಿದವರ ವಿವರಗಳೇ ಕಾಣುತ್ತವೆ. ಇತಿಹಾಸಕಾರರು ಈ ವಿಜಯೀ ಪಡೆಯ ಆಸ್ಥಾನ ಪಂಡಿತರೇ ಆಗಿರುತ್ತಿದ್ದು, ಆ ಕಾಳಗಗಳನ್ನು ಹೆಚ್ಚು ಹೆಚ್ಚು ವರ್ಣರಂಜಿತವಾಗಿ ವಿವರಿಸಿ ದಾಖಲಿಸಿದಷ್ಟೂ ಅವರ ಇನಾಮು ದೊಡ್ಡದಾಗಿರುತ್ತಿತ್ತು. ಸೋಲಿನ ವಿವರಣೆಗಳು ಅದರ ಹೀನಾಯತೆಯನ್ನು ಒತ್ತಿ ಹೇಳಲು ಮತ್ತು ಅದರ ಮುಖಾಂತರ ವಿಜಯಿಗಳ ಶೌರ್ಯಕ್ಕೆ ಮತ್ತಷ್ಟು ಮೆರುಗನ್ನು ತುಂಬುವ ಕಾರಣಕ್ಕಾಗಿರುತ್ತಿತ್ತೇ ವಿನಃ ಸೋಲನ್ನುಂಡ ಜನರ ದಾರುಣ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲುವುದಕ್ಕಾಗಿರಲಿಲ್ಲ.

ಹೀಗಿದ್ದರೂ, ದಾರುಣತೆಯ ಚಿತ್ರಣವೂ ಸಹ ದಾಖಲಾಗಿದೆ. ಅದು ಸೋಲನ್ನುಂಡು ಪಲಾಯನ ಮಾಡಿ ಮತ್ತೊಂದು ನೆಲೆ ಹುಡುಕಿಕೊಂಡ ಜನರ ನೆನಪುಗಳಲ್ಲಿ. ಹೊಸ ನೆಲೆಗಳನ್ನು ಹುಡುಕಿಕೊಂಡ ಅವರು ನೆನಪುಗಳನ್ನು ಉತ್ತಿ ಬಿತ್ತಿ ಕಥೆಯಾಗಿಸಿದರು, ಹಾಡಾಗಿಸಿದರು. ಮುಂದಿನ ಪೀಳಿಗೆಗೆ ನೆನಪುಗಳನ್ನು ಉಳಿಸಿದರು, ಕನಸುಗಳು ಹುಟ್ಟುವಂತೆ ನೋಡಿಕೊಂಡರು. ಜೊತೆಗೆ ಚರಿತ್ರೆಗೆ ಇದನ್ನೂ ತೆರೆದಿಟ್ಟರು: ಸಂಪನ್ಮೂಲಗಳನ್ನು ದೋಚಲು, ಭೂಮಿಯಿರಲಿ, ನೀರಿನ ಸೆಲೆಗಳಾಗಿರಲೀ, ಯುದ್ಧಸಂಹಿತೆಗಳನ್ನೆಲ್ಲಾ ಗಾಳಿಗೆ ತೂರಿ, ಅತ್ಯಂತ ಕುಟಿಲೋಪಾಯಗಳಿಂದ ಮೇಲೆ ಬಿದ್ದು ನಡೆಸಿದ ಹೇಯ ಅಕ್ರಮಣಗಳೇ ಇವು ಎಂದು.

ಮೂಲನಿವಾಸಿಗಳ ಮೇಲೆ ಹೊರಗಿನಿಂದ ಬಂದ ಆಕ್ರಮಣಕಾರರು ನಿರಂತರವಾಗಿ ಯುದ್ಧ ಮಾಡುತ್ತಾ ಅವರಲ್ಲಿದ್ದ ಸಂಪನ್ಮೂಲಗಳನ್ನು ದೋಚುತ್ತಲೂ, ಅವರನ್ನು ದೂರ ದೂರಕ್ಕೆ ಅಟ್ಟುತ್ತಲೂ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸಿಕೊಂಡಿದ್ದೇ ಇವತ್ತು ಚರಿತ್ರೆಯಾಗಿದೆ. ‘ಕೀಳು ಜನರ ಮೇಲೆ ಮಾಡಿದ ಪವಿತ್ರ ಯುದ್ಧ’ವೆಂದು ಅದನ್ನು ವಿಜೃಂಭಿಸಲಾಗಿದೆ. ಅಸುರರು, ರಾಕ್ಷಸರು ಎಂಬ ಸಹಜ ನಾಮಗಳಿಗೆ ಕೀಳಿನ, ಕೇಡಿನ ಗುಣವಾಚಕಗಳನ್ನು ಆರೋಪಿಸಿ, ಅಸುರ, ರಾಕ್ಷಸ ಎಂದರೆ ಕೀಳೇ, ಕೇಡೇ, ಎನ್ನುವಷ್ಟು ಎಲ್ಲವನ್ನು ಸಮೀಕರಿಸಿ, ತಿರುಚಿ ಚರತ್ರೆ ಬರೆಯಲಾಗಿದೆ ಮತ್ತು ನಮ್ಮ ತಲೆಯೊಳಗೆ ಈ ನಂಬಿಕೆಗಳು ಭದ್ರವಾಗಿ ಬೇರೂರುವಂತೆ ಮಾಡಲಾಗಿದೆ.

ಇದು ಕೇವಲ ಭಾರತದಾದ್ಯಂತ ನಡೆದ ಯುದ್ಧಗಳಲ್ಲ. ಜಗತ್ತಿನುದ್ದಕ್ಕೂ ಈ ಬಗೆಯವು ನಡೆದು ಹೋಗಿದ್ದಾವೆ ಮತ್ತು ಹೊಸ ಹೊಸ ರೂಪಗಳಲ್ಲಿ ನಡೆಯುತ್ತಲೇ ಇವೆ.

ಬಂದೂಕಿನ ನಳಿಕೆಯಡಿಯಲ್ಲಿ ಆಫ್ರಿಕಾ ಖಂಡದಿಂದ ಅಪಹರಿಸಲ್ಪಟ್ಟು ದೂರದ ಯಾವುದೋ ದೇಶದಲ್ಲಿ ಕಬ್ಬಿಣದ ಸಂಕೋಲೆಗಳಿಂದ ಬಂಧಿಸಲ್ಪಟ್ಟು ಶತಮಾನದುದ್ದಕ್ಕೂ ದಾಸ್ಯದಲ್ಲಿ ಪ್ರಾಣಿಗಳಂತೆ ಬದುಕಿದ್ದವರು, ದಾಸ್ಯದಿಂದ ಮುಕ್ತರಾಗುತ್ತಲೇ ಕಾಡು, ಮೇಡು, ಮರುಭೂಮಿಯೆಂದು ಸಿಕ್ಕ ಸಿಕ್ಕ ಕಡೆ ಪಲಾಯನ ಮಾಡಿದರು. ಎಲ್ಲೆಲ್ಲಿ ತಲುಪಿಕೊಂಡರೋ ಅಲ್ಲಲ್ಲೇ ನೆಲೆ ನಿಂತರು, ನೆಲೆ ನಿಂತ ಜಾಗವನ್ನೇ ಸಾಗುವಳಿ ಮಾಡಿಕೊಂಡರು. ಇನ್ನೇನು ಹಸಿವನ್ನು ನೀಗಿಸಿಕೊಂಡಿದ್ದೇವೆ ಎನ್ನುತ್ತಲೇ, ಕಪ್ಪು ವರ್ಣೀಯರು ಎಂದೇ ಕರೆಸಿಕೊಂಡಿದ್ದ ಈ ಜನರು ಸಾಗುವಳಿ ಮಾಡಿಕೊಂಡಿದ್ದ ಅಷ್ಟೂ ಭೂಮಿಯನ್ನು ಅವರಿಂದ ಕಿತ್ತುಕೊಳ್ಳಲಾಯಿತು. ಅಮೇರಿಕಾ ದೇಶವು ಅದರ ಕೃಷಿ ಇಲಾಖೆಯಡಿಯಲ್ಲಿ ಹೊಸ ಹೊಸ ಕಾನೂನನ್ನು ಮಾಡಿ ಆ ಭೂಮಿಯೂ ಅವರ ಕೈ ತಪ್ಪಿಹೋಗುವಂತೆ ಮಾಡುವುದರಲ್ಲಿ ಯಶಸ್ವಿಯಾಯಿತು. ಎರಡೆರಡು ಬಾರಿ ಬೇರು ಸಮೇತ ಬುಡಕಿತ್ತು ಬಿಸುಡಲಾಗಿದ್ದ ಈ ಜನರು ಬದುಕುಳಿಯುವುದಕ್ಕೆ ದೊಡ್ಡ ನಗರಗಳ ಸ್ಲಂಗಳಲ್ಲಿ ಕಿಕ್ಕಿರಿದು ತುಂಬಿಹೋದರು.

ಈ ಸಂದರ್ಭದಲ್ಲೇ ಅವರನ್ನೆಲ್ಲಾ ಒಗ್ಗೂಡಿಸುತ್ತಾ, ಮೂವತ್ತೆರಡು ವರ್ಷದ ತರುಣನೊಬ್ಬ “ನನಗೊಂದು ಕನಸಿದೆ” ಎಂದು ಮಾತು ಆರಂಭಿಸುತ್ತಾನೆ. ಬದುಕುಳಿಯಲು ಬೇಕೇ ಬೇಕಾಗಿದ್ದ ಹೋರಾಟವನ್ನು ಮುಂದುವರೆಸಲು ಕರೆಕೊಡುತ್ತಾನೆ. ಈಗವರು ಅಮೇರಿಕಾದ ಕೃಷಿ ಇಲಾಖೆಯ ಮೇಲೆ ದಾವೆ ಹೂಡಿದ್ದಾರೆ. ಪ್ರಪಂಚದಾದ್ಯಂತ ಜನರಿಗೆಲ್ಲಾ ಮಾದರಿಯಾಗುವಂತೆ ತಮ್ಮದೇ ಚರಿತ್ರೆಯನ್ನು ಬರೆಯುತ್ತಿದ್ದಾರೆ.

ಯುರೋಪಿನ ದಾಳಿಕೋರರು ಕಾಲಿಡುವವರೆಗೂ ಅಮೇರಿಕಾದ ನೆಲದಲ್ಲಿ ಉತ್ಕ್ರಷ್ಟವಾದೊಂದು ನಾಗರೀಕತೆಯನ್ನು ಕಟ್ಟಿಕೊಂಡು ಆ ನೆಲದುದ್ದಕ್ಕೂ ಬಾಳಿಕೊಂಡಿದ್ದ ರೆಡ್ ಇಂಡಿಯನ್ನರು, ನಂತರ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಬದುಕುಳಿಯತ್ತಾರೆ. ಅಲ್ಲಲ್ಲೇ ರಿಸರ್ವೇಶನ್‍ಗಳಲ್ಲಿ ವಾಸಮಾಡುತ್ತಿರುವ ಈ ಜನರೀಗ ತಮ್ಮ ನಾಗರಿಕತೆಯನ್ನು ಜೀವಂತವಾಗಿಡಲು ಹೆಣಗಾಡುತ್ತಿದ್ದಾರೆ. ಅದೇ ರೀತಿ ಆಸ್ಟ್ರೇಲಿಯನ್ ಅಬ್‍ಓರಿಜಿನ್ ಜನರೂ ಈಗ ರಿಸರ್ವೇಶನ್‍ಗಳಲ್ಲಿ ವಾಸಿಸುತ್ತಿದ್ದಾರೆ. ಪ್ರಕೃತಿಯ ಬಗೆಗಿನ ಒಂದು ಅತ್ಯದ್ಭುತ ಒಳನೋಟವನ್ನು ಮತ್ತು ಸಾಮರಸ್ಯವನ್ನು ತಮ್ಮದಾಗಿಸಿಕೊಂಡು ಬದುಕಿಕೊಂಡಿದ್ದ ಜನರಿವರು.

ಇನ್ನು ಯುರೋಪಿನಾದ್ಯಂತ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಟ್ಟಾಡಿಸಿಕೊಳ್ಳುತ್ತಾ ಬದುಕುತ್ತಿರುವ ಜಿಪ್ಸಿ ಜನಾಂಗದವರು ಇವತ್ತಿಗೂ ಸರಿಯಾದ ನೆಲೆ ಇಲ್ಲದೇ ಅಲೆಮಾರಿಗಳಂತೆಯೇ ಉಳಿದಿದ್ದಾರೆ.

ಪಶ್ಚಿಮದ ಶ್ರೀಮಂತ ರಾಷ್ಟ್ರಗಳ ಪೂರಾ ಸಹಕಾರಕೊಂದಿಗೇ ಇಸ್ರೇಲು ಪ್ಯಾಲೆಸ್ತೈನ್ ಮೇಲೆ ಆಕ್ರಮಣ ಮಾಡುತ್ತದೆ ಮತ್ತು ಅವರ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಲೇ ಮುಂದುವರೆದಿದೆ. ಅದೇ ಹೊತ್ತಿಗೆ ಈ ಪುಟ್ಟ ಪ್ಯಾಲೆಸ್ತೈನ್ ದೇಶದ ಜನರು, ನೆರೆಹೊರೆಯ ಅರಬ್ ದೇಶಗಳ ಸಹಕಾರವಿಲ್ಲದೇ ತಮ್ಮ ದೇಹಗಳನ್ನೇ ಬಾಂಬುಗಳನ್ನಾಗಿ ಮಾಡಿಕೊಂಡು ತಮ್ಮ ನೆಲವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದೇ ಇಸ್ರೇಲಿನಲ್ಲಿರುವವರು ದಶಕಗಳ ಹಿಂದೆಯಷ್ಟೇ ನಾಜಿಗಳು ನಡೆಸಿದ ಮೈ ನಡುಗಿಸುವಂತ ಹಿಂಸೆ ಮತ್ತು ನರಮೇಧದಿಂದ ಬದುಕುಳಿದು ಪಲಾಯನ ಮಾಡಿದವರೇ ಎನ್ನುವುದು ಜಗತ್ತಿನ ವಿಪರ್ಯಾಸಗಳಲ್ಲೊಂದು.

ನೆಲ ಮತ್ತು ನೀರಿನಂತೆ, ತೈಲವೂ ಅತ್ಯಮೂಲ್ಯವಾದ ಸಂಪನ್ಮೂಲವಾದ ಕೂಡಲೇ ಅದರ ಮೇಲಿನ ಹಿಡಿತಕ್ಕಾಗಿ ಜಗತ್ತಿನ ಶ್ರೀಮಂತ ರಾಷ್ಟ್ರಗಳು ತೈಲ ಸಂಪತ್ತು ತುಂಬಿದ ದೇಶಗಳ ಮೇಲೆ ನಿರಂತರವಾಗಿ ಬಾಂಬ್ ಬೀಳಿಸುತ್ತಿದ್ದಾರೆ ಅಥವಾ ಬಾಂಬ್ ಬೀಳುವಂತೆ ನೋಡಿಕೊಳ್ಳುತ್ತದ್ದಾರೆ. ಸಿರಿಯಾ ನಿರಾಶ್ರಿತರ ಪಲಾಯನ, ಯೆಮನ್ನರ ಹಸಿವು ಇವತ್ತು ಅತ್ಯಂತ ದಾರುಣ ಸ್ಥಿತಿಯಲ್ಲಿದೆ. ಅಳಲೂ ಶಕ್ತಿಯಿಲ್ಲದಂತಾಗಿರುವ ಯೆಮೆನ್ನಿನ ಮಕ್ಕಳು ಅಸುನೀಗುತ್ತಿದ್ದರೆ, ನೆಲೆದಾಳದ ಬಂಕರ್‌ಗಳಲ್ಲಿ ಆಶ್ರಯ ಪಡೆದ ಸಿರಿಯಾದ ಮಕ್ಕಳು ಗೋಳಿಡುತ್ತಾ, ನಿರಂತರವಾಗಿ ಬೀಳುತ್ತಿರುವ ಬಾಂಬ್‍ಗಳಿಂದ ನಮ್ಮನ್ನು ರಕ್ಷಿಸಿ ಎಂದು ಇಡೀ ಪ್ರಪಂಚಕ್ಕೆ ಕರೆಕೊಡುತ್ತಿದ್ದಾರೆ.

ಹಾಗೇ ಉತ್ತರ ಆಫ್ರಿಕಾ ದೇಶಗಳಿಂದ ಯುರೋಪಿಗೆ ವಲಸೆ ಹೋಗುವ ಜನಗಳನ್ನು ಮೆಡಿಟರೇನಿಯನ್ ಸಮುದ್ರವು ಅಪೋಷನ ತೆಗೆದುಕೊಳ್ಳುವ ಬಗೆ ಬಗೆ ಚಿತ್ರಗಳು ತೆರೆದುಕೊಳ್ಳುತ್ತಿರುವದನ್ನು ನಾವು ನೋಡುತ್ತಲೇ ಇದ್ದೇವೆ. ಇತ್ತ ಡ್ರಗ್ ಮಾಫಿಯಾದ ಹಿಂಸೆಯಿಂದ ಪಾರಾಗಲು ಮೆಕ್ಸಿಕನ್ನರು ಅಮೇರಿಕಾ ದೇಶಕ್ಕೆ ವಲಸೆ ಹೋಗುವುದೂ, ಅವರನ್ನು ತಡೆಯಲು ನೂರಾರು ಮೈಲಿಯುದ್ದೂಕ್ಕೂ ಎತ್ತೆತ್ತರ ಗೋಡೆ ಕಟ್ಟುವುದೂ ನಡೆದೇ ಇದೆ. ಇತ್ತೀಚಿಗೆಷ್ಟೇ ಮಯನ್ಮಾರ್ ಬೌದ್ಧರು ನಡೆಸಿದ ಆಕ್ರಮಣದಲ್ಲಿ ಜೀವವುಳಿಸಿಕೊಳ್ಳಲು ಬಾಂಗ್ಲಾ ಮತ್ತು ಭಾರತದ ಗಡಿಗೆ ಓಡಿಬಂದಿದ್ದ ರೊಹಿಂಗ್ಯಗಳ ನೆನಪು ನಮ್ಮಲ್ಲನ್ನೂ ಮಾಸಿಲ್ಲ. ಟೆಬೆಟಿಯನ್ನರು ಮತ್ತೆ ತಮ್ಮ ನೆಲ ಸೇರಿಕೊಳ್ಳುವ ಕನಸನ್ನು ಜೀವಂತವಾಗಿರಿಸಿಕೊಂಡೇ ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಮೊದಲು ಅಲ್ಲೊ ಇಲ್ಲೊ ನಡೆಯುತ್ತಿದ್ದ ಈ ಪಲಾಯನಗಳು ಪ್ರಕೃತಿ ವಿಕೋಪದ ಕಾರಣವೂ ಸೇರಿಕೊಂಡು ಮತ್ತಷ್ಟು ವ್ಯಾಪಕವಾಗಿಯೂ ನಿರಂತರವಾಗಿಯೂ ಆಗಿಹೋಗುತ್ತಿರುವುದೇ ಇವತ್ತಿನ ವಾಸ್ತವ.

ಇದಲ್ಲಕ್ಕಿಂತಲೂ ಮಿಗಿಲಾಗಿ ಜನರಿಂದಲೇ ಆರಿಸಿಬಂದು ಆಡಳಿತ ಮಾಡುವ ಪ್ರತಿನಿಧಿಗಳು ಕಾರ್ಪೋರೇಟ್ ಕುಳಗಳ ಏಜೆಂಟರುಗಳಾಗಿ ಬದಲಾದ ಈ ಕಾಲಘಟ್ಟದಲ್ಲಿ ಕೆಳಸ್ತರದಲ್ಲಿ ಬದುಕು ಮಾಡಿಕೊಂಡಿರುವ ಜನರಿಗೆ ಇದಕ್ಕಿಂತ ಹೊರತಾದ ಬದುಕೇ ಇಲ್ಲವೆನೋ ಎನ್ನುವಂತ ಸ್ಥಿತಿ ಪ್ರಪಂಚದಾದ್ಯಂತವೂ ತರೆದುಕೊಳ್ಳುತ್ತಿದೆ. ಇಂಥ ಒಂದು ಸಂದರ್ಭದಲ್ಲೇ ಮಾರ್ಚ್ 26ರ ಬೆಳಗ್ಗೆ, ಲಾಕ್‍ಡೌನ್ ಕಾರಣಕ್ಕಾಗಿ ವಲಸೆಕಾರ್ಮಿಕರು ಭಾರತದ ಮಹಾನಗರಗಳ ರಸ್ತೆಯಲ್ಲಿ ಕಿಕ್ಕಿರಿದು ತುಂಬಿಹೋದರು. ಬೇಕೆಂದಾಗ ಕೆಲಸಕ್ಕೆ ಹಾಜರಿರಬೇಕು, ಅನಂತರ ಎಲ್ಲೂ ಕಾಣಿಸಿಕೊಳ್ಳಬಾರದೆನ್ನುವ ಅಲಿಖಿತ ಕಾನೂನು ಇರುವುದರಿಂದ ಕೆಲಸವಾದ ಕೂಡಲೇ ಎಲ್ಲೋ ಸಂದಿಗೊಂದಿಗಳಲ್ಲಿ, ಸ್ಲಂಗಳಲ್ಲಿ, ರೈಲ್ವೇ ಲೈನಿನ ಪಕ್ಕದಲ್ಲಿ ಬದುಕಿಕೊಂಡಿದ್ದ ಜನರು ಆದಿನ ಬುದಬುದನೇ ಬೀದಿಗೆ ಬಂದು ಬಿದ್ದರು. ಪೋಲೀಸರ ಲಾಠಿ ಏಟುಗಳೂ ಅವರನ್ನು ತಡೆಯಲಿಲ್ಲ. ಊರಿಗೆ ಹೋಗುತ್ತೇವೆಂದು ತಯಾರಾಗಿ ನಿಂತರು. ಗಾಡಿಗಳ ವ್ಯವಸ್ಥೆ ನಿಂತುಹೋಗಿದ್ದರಿಂದ ನಡೆದೇ ಬಿಡುತ್ತೇವೆಂದರು. ಲಾಕ್‍ಡಾನ್ ಕಾರಣಕ್ಕಾಗಿ ಆಹಾರ ನೀರಿನ ಯಾವ ವ್ಯವಸ್ಥೆಯೂ ಇಲ್ಲದಿದ್ದರೂ, ಬೇಸಿಗೆಯ ದಿನಗಳಲ್ಲಿ ಎಲೆಗಳನ್ನೆಲ್ಲಾ ಉದುರಿಸಿಕೊಂಡು ಬೋಳಾದ ಮರಗಳ ಕೆಳಗೆ ರಸ್ತೆ ಕಾದು ನಿಂತಿದ್ದರೂ ಈ ಕಠೋರ ಪರಸ್ಥಿತಿ ಅವರನ್ನು ಹಿಮ್ಮೆಟಿಸಲ್ಲಿಲ್ಲ.

ಸರ್ಕಾರದ ಅಣತಿಯಂತೆ ಎಲ್ಲಾದರೂ ವಾಪಾಸು ಉಳಿದುಬಿಟ್ಟಿದ್ದರೆ ಇದಕ್ಕಿಂತಲೂ ಘೋರ ವಾಸ್ತವವನ್ನು ಎದುರಿಸಬೇಕಾಗಬಹುದು ಎಂಬ ಅರಿವು ಅವರೊಳಗೆ ಇತ್ತೆ? ಅಥವಾ ಕಂಬಳಿಹುಳಗಳಂತೆ ಒಬ್ಬರನ್ನೊಬ್ಬರು ಸುಮ್ಮನೇ ಹಿಂಬಾಲಿಸಿಕೊಂಡು ನಡೆದರೆ? ಅಂತೂ ಲಕ್ಷ ಲಕ್ಷ ಕಾರ್ಮಿಕರು ತಂತಮ್ಮ ಗ್ರಾಮಗಳಿಗೆ ನಡೆದು ಹೊರಟೇ ಬಿಟ್ಟರು.

ಅದೆಂಥ ಶಕ್ತಿ ಅವರನ್ನು ಹಾಗೆ ಮಾಡಿಸಿತ್ತು? ಆಹಾರ ನೀರಿನ ವ್ಯವಸ್ಥೆ ಇಲ್ಲದೆಯೂ 600-700 ಕಿ.ಮೀ ನಡೆದೇ ಬಿಡುವಂಥ ಅದೆಂಥ ಕಠಿಣಬಾಳು ಅವರಿಗೆ ಆ ಸಹಿಷ್ಣುತೆಯನ್ನು ತಂದುಕೊಟ್ಟಿತ್ತು?

ಈಗ ಆ ಕಾಲುಗಳೆಲ್ಲಾ ದೂರ ದೂರ ಸರಿದು ಹೋಗಿದ್ದಾವೆ. ಶುರುವಿನಲ್ಲಿ ಮಾಧ್ಯಮದವರು ಅವರನ್ನು ಹಿಂಬಾಲಿಸಿ ತಾಜಾ ತಾಜಾ ಚಿತ್ರಗಳನ್ನು ಮುಟ್ಟಿಸಿದರು. ಅವರಾದರೂ ಎಷ್ಟು ದೂರ ಹಿಂಬಾಲಿಸಿಯಾರು? ಕುಂಟುವ ಕಾಲುಗಳು, ರಕ್ತ ವಸರುವ ಕಾಲುಗಳು, ಚಪ್ಪಲಿ ಇಲ್ಲದ ಕಾಲುಗಳು, ಪುಟ್ಟ ಪುಟ್ಟ ಕಾಲುಗಳು, ವಯಸ್ಸಾದ ಕಾಲುಗಳು, ಗರ್ಭಿಣಿ ಬಾಣಂತಿಯರ ಕಾಲುಗಳು ಎಲ್ಲವೂ ದೂರ ದೂರ ಸರಿದು ಹೋದವು.

ಸೈಕಲ್ಲಿನ ಮುಂದೆ ಹಗ್ಗದಿಂದ ಕಟ್ಟಿದ್ದ, ಬಾಡಿದ ಹರಿವೆ ಸೊಪ್ಪಿನಂತೆ ಮುಂದಕ್ಕೆ ಬಾಗಿದ್ದ ಆ ಮಗು ಮನೆ ತಲುಪಿದೆಯೇ? ಕಾನ್ಪುರದ ಒಂಟಿ ತಾಯಿಯನ್ನು, ಎರಡು ಚಿಕ್ಕ ತಂಗಿಯರನ್ನು ಸೇರಿಕೊಳ್ಳಲಾಗದೇ ಕುಂಟುಗಾಲೊಂದನ್ನು ಎಳೆಯುತ್ತಾ, ಅಳುತ್ತಾ, ತೆವಳುತ್ತಿದ್ದ ಕೋಮಲ ಮನೆ ಸೇರಿದಳೇ? ನಡೆದೇ ಬೀಡುತ್ತೇನೆಂದು ಕಾಲಿಗೆ ಕಟ್ಟಿದ್ದ ಪ್ಲಾಸ್ಟರನ್ನು ಬಿಚ್ಚುತ್ತಿದ್ದ ಆ ಹುಡುಗ ಮನೆ ಸೇರಿದನೇ? ಎರಡೆರಡು ಮಕ್ಕಳನ್ನು ಹೆಗಲ ಮೇಲೆ ಕುರಿಸಿಕೊಂಡು ಸಾಗುತ್ತಿದ್ದ ಆ ತಂದೆ ಮನೆ ಸೇರಿದನೇ? ತಿಂಗಳ ಮಗುವನ್ನು ಎದೆಗವುಚಿಕೊಂಡು ನಡೆಯುತ್ತಿದ್ದ ಆ ತಾಯಿ ಮನೆ ಸೇರಿದಳೆ?

ತಾಯಿಯ ಕಂಕುಳಲ್ಲೇ ಒಂದೂರಿನಿಂದ ಇನ್ನೊಂದೂರಿಗೆ ವಲಸೆ ಹೋಗುತ್ತಾ, ಸ್ಲಂನಂಥ ಜಾಗದಲ್ಲಿ ವಾಸಿಸುತ್ತಾ ಇರುವ ಮಕ್ಕಳು ನೆನಪನ್ನು ಉಳಿಸಿಕೊಂಡಾವೆ? ನಿಯಾನ್ ಬೆಳಕಿನಲ್ಲೋ ಅಥವಾ ಹೊಗೆಯಿಂದಲೋ ಮಬ್ಬಾದ ಆಕಾಶದಲ್ಲಿ ಮಬ್ಬಾಗಿ ಕಾಣುವ ನಕ್ಷತ್ರಗಳಲ್ಲಿ ಒಂದು ರೋಹಿತನೆಂದು ಗುರುತಿಸಿಯಾವೆ?

“ಸಬ್ ಯಾದ್ ರಖ್ಖಾ ಜಾಯೇಗಾ” ಎಂಬ ಕವಿತೆ ಎಲ್ಲೋ ಹುಟ್ಟಿ ಈಗ ಎಲ್ಲಾ ಕಡೆ ಅನುರಣಿಸುತ್ತಿರುವಾಗ ಕನಸು ಹುಟ್ಟಬಹುದೆಂಬ ಭರವಸೆ ಉಳಿದಿದೆ. ಹೇಗೂ ಶಾಹೀನ್ ಬಾಗ್‍ನ ಹೆಣ್ಣು ಮಕ್ಕಳು ಭರವಸೆಯೊಂದನ್ನು ಬಿಟ್ಟು ಹೋಗಿದ್ದಾರಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...