ಮಹಾಭಾರತದ ಪರೀಕ್ಷಿತನ ಕತೆ ಎಲ್ಲಾರಿಗೂ ಗೊತ್ತು. ಅಜ್ಞಾತವಾಸದ ಕಾಲದಾಗ ಅರ್ಜುನ ವಿರಾಟರಾಜನ ಮಗಳು ಉತ್ತರಾಗ ಭರತನಾಟ್ಯ ಕಲಿಸತಾನ. ಒಂದು ವರ್ಷದ ನಂತರ ಅವಳನ್ನ ಸೊಸೆಯಾಗಿ ಮಾಡಿಕೋತಾನ. ಅವಳ ಮಗ ಪರೀಕ್ಷಿತ. ಧರ್ಮರಾಜನ ನಂತರ ಅವನೇ ಹಸ್ತಿನಾಪುರದ ರಾಜ. “ನಿನ್ನ ಸಾವು ಹಾವಿನ ವಿಷದಿಂದ” ಅಂತ ಹೇಳಿ ಅವನಿಗೆ ಋಷಿಯೊಬ್ಬ ಶಾಪ ಕೊಡತಾನ. ಪರೀಕ್ಷಿತ ಹೆದರಿ ತನ್ನ ದೇಶದ ಎಲ್ಲಾ ಹಾವುಗಳನ್ನು ಕೊಲ್ಲಲಿಕ್ಕೆ ಸರ್ಪ ಸಂಹಾರ ಯಾಗ ಮಾಡತಾನ. ಆದರೂ ಸಹಿತ ಹಾವುಗಳ ರಾಜ ತಕ್ಷಕ ಒಂದು ಸಣ್ಣ ಕ್ರಿಮಿಯಾಗಿ ಅವನು ತಿನ್ನೋ ಹಣ್ಣಿನೊಳಗ ಸೇರಿಕೊಂಡು ಆತನ್ನ ಕೊಲ್ಲತಾನ.
ಆ ಹಣ್ಣು ತಿನ್ನೋ ಮುಂಚೆ ಆ ರಾಜ ಅದನ್ನ ಪರೀಕ್ಷೆ ಮಾಡಿದ್ದರ ಅವನ ಜೀವಾ ಉಳೀತಿತ್ತು ಅಂತ ಒಂದೊಂದು ಸರ್ತಿ ಅನ್ನಸತದ.
ಇದು ಯಾಕ ನೆನಪು ಮಾಡಬೇಕಾತು ಅಂದರ ಈ ಕಿರೀಟಿ ವೈರಸ್ಸಿನ ಸಂಕಟದೊಳಗ ನಮ್ಮ ಸರಕಾರದ ಮೇಲೆ ಇರೋ ಆರೋಪ ಏನಂದರ ಅದು ಎಷ್ಟು ಬೇಕೋ ಅಷ್ಟು ಪರೀಕ್ಷೆ ಮಾಡತಾ ಇಲ್ಲಾ ಅಂತ. ಒಂದು ನೂರಾ ಮೂವತ್ತು ಕೋಟಿ ಜನಾ ಇರೋ ಈ ದೇಶದೊಳಗ ಬರೇ ಹದಿಮೂರು ಲಕ್ಷ ಪರೀಕ್ಷೆ ಆಗಿದಾವು. ಖರೇ ಹೇಳಬೇಕಂದರ ಒಂದು ದಿನಕ್ಕ ಹತ್ತು ಲಕ್ಷದ ಲೆಕ್ಕದಾಗ ನೂರು ದಿನಕ್ಕ ಹತ್ತು ಕೋಟಿ ಪರೀಕ್ಷೆ ಆಗಬೇಕಿತ್ತು ಅಂತ ತಜ್ಞರ ಅಂಬೋಣ.
ನೀವು ಯಾಕ ಮಾಡತಿಲ್ಲಾ ಅಂತ ಯಾರನ್ನೂ ಕೇಳಂಗಿಲ್ಲ. ಯಾರನ್ನ ಕೇಳತೀರಿ? ಅಧಿಕಾರಿನ್ನ ಕೇಳಿದರ ರಾಜಕಾರಣಿ ಕಡೆ ತೋರಸತಾರ. ರಾಜಕಾರಣಿ ಪ್ರಧಾನಿ ಕಚೇರಿ ಕಡೆ ತೋರಸತಾರ. ಅಲ್ಲಿ ನೋಡಿದರೆ ಪಂತ ಪ್ರಧಾನರು ಬಾಯಿಗೆ ಶಾಲು ಕಟ್ಟಿಕೊಂಡು ಕೂತಾರ.
ಸರಕಾರ ಯಾಕ ಪರೀಕ್ಷೆ ಹೆಚ್ಚು ಮಾಡತಾ ಇಲ್ಲ? ಯಾಕಂದರ ಒಂದು ಪರೀಕ್ಷೆಗೆ ಸುಮಾರು 5,000 ರೂಪಾಯಿ ಬೇಕಾಗತದ. ಎಲ್ಲರಿಗೂ ಮಾಡೋವಷ್ಟು ನಮ್ಮಲ್ಲೆ ದುಡ್ಡು ಇಲ್ಲ. ಇದ್ದರೂ ನಾವು ಮಾಡಂಗಿಲ್ಲ. ಯಾಕಂದ್ರ ಪೋಲಿಯೋದ ಗತೆ ಮನಿ – ಮನೀಗೆ ಹೋಗಿ ಮಾಡಿದರ ಜನಾ ಹೆದರಿಕೋತಾರ ಅಂತ ನಮ್ಮನ್ನಾಳುವವರು ಹೇಳಿಕೋತ ಹೊಂಟಾರ.
ಆದರ ಈ ಅಸಹಾಯಕ ಉತ್ತರದ ಹಿಂದ ಒಂದು ಕುತಂತ್ರ ಇದ್ದಂಗ ಕಾಣತದ. ಇವರು ಕೊರೋನಾ ಪರೀಕ್ಷೆಯನ್ನ ಸಹಿತ ರಾಜಕೀಯ ತಂತ್ರ ಮಾಡಿಕೊಂಡಂಗ ಕಾಣತಾರ. ದೆಹಲಿ ನಿಜಾಮುದ್ದೀನಿಗೆ ಹೋದ ಮುಸ್ಲೀಮರು ಇದನ್ನು ಹಬ್ಬಿಸಿದರು ಅಂತ ಹೇಳಿ ಜನರನ್ನ ಮುಸ್ಲೀಮರ ವಿರುದ್ಧ ಎತ್ತಿ ಕಟ್ಟೋದು, ಅಲ್ಲಿಗೆ ಹೋಗಿ ಬಂದವರ ಮೊದಲನೇ ಹಾಗೂ ಎರಡನೇ ಸಂಪರ್ಕಕ್ಕ ಬಂದ ವ್ಯಕ್ತಿಗಳನ್ನ ಅಷ್ಟ ಪರೀಕ್ಷೆ ಮಾಡೋದು, ಇದು ನಡದು ಬಿಟ್ಟದ. ಆ ಮುಸ್ಲೀಮರು ಇರೋ ಪ್ರದೇಶಗಳನ್ನ ಕಂಟೇನಮೆಂಟು ಜೋನ್ ಅಂತ ಮಾಡಿ ಅಲ್ಲಿ ಸೀಲ್ ಡೌನು ಮಾಡಿ ಅವರಿಗೆ ನೀರು- ನಿಡಿ ಸಿಗಲಾರದ ಹಂಗ ಮಾಡೋದು. ಅದರ ಬಗ್ಗೆ ಎಲ್ಲರಿಗೂ ಒಂದು ಕೆಟ್ಟ ಭಾವನಾ ಬಂದು ಮೈಲಿಗೆ ಪ್ರದೇಶ ಅಂತ ಮಾಡಿ ಅದರಿಂದ ಎಲ್ಲರೂ ದೂರ ಇರೋ ಹಂಗ ಮಾಡೋದು ಇವರ ಹುನ್ನಾರ ಅಂತ ಅನ್ನಸತದ.
ಇದ ಸರಕಾರ `ನಮಸ್ತೇ ಟ್ರಂಪ’ ಸಮಾರಂಭಕ್ಕೆ ಹೋದವರನ್ನು ಯಾಕ ಪರೀಕ್ಷೆ ಮಾಡತಿಲ್ಲಾ? ಮಾಡಿದರೂ ಕೂಡ ಅಹಮದಾಬಾದಿಗೆ ಹೋಗಿ ಬಂದವರು ಅಂತ ಹೇಳತದ ಹೊರತು, ಟ್ರಂಪ ಸಮಾರಂಭಕ್ಕೆ ಹೋದವರು ಅಂತ ಹೇಳಂಗಿಲ್ಲ. ಅವರ ಮೊದಲನೇ – ಎರಡನೇ ಸಂಪರ್ಕಗಳನ್ನ ಪರೀಕ್ಷೆ ಮಾಡತಾ ಇಲ್ಲ. ಅವರ ಮನೆಗಳನ್ನು ಸೀಲು ಡೌನು ಮಾಡಿ ಅದಕ್ಕ ಮೈಲಿಗೆ ಪ್ರದೇಶ ಅಂತ ಹೇಳತಾ ಇಲ್ಲ.
ಜನವರಿಯಿಂದ ಮಾರ್ಚ 24 ರವರಗೆ ಭಾರತಕ್ಕ 20 ಲಕ್ಷ ಜನ ವಿಮಾನಗಳಿಂದ ಬಂದಾರಂತ. ಅವರನ್ನು ಕಡ್ಡಾಯ ಪರೀಕ್ಷೆ ಮಾಡಿಲ್ಲ. ಅವರ ಮೊದಲನೇ ಎರಡನೇ ಸಂಪರ್ಕ ಪರೀಕ್ಷೆ ಮಾಡಿಲ್ಲ. ಅವರ ಪ್ರದೇಶಕ್ಕೆ ಮೈಲಿಗೆ ಅಂಟಿಸಿಲ್ಲ.
ಫೆಬ್ರವರಿ- ಮಾರ್ಚಿ ತಿಂಗಳದಾಗ ಈ ದೇಶದ ಅನೇಕ ಹಳ್ಳಿ- ನಗರದೊಳಗ ಜಾತ್ರಿ- ಉತ್ಸವ- ಹಬ್ಬ ಆಗಿದಾವು, ಅಲ್ಲಿಗೆ ಲಕ್ಷಾಂತರ ಜನಾ ಹೋಗಿ ಬಂದಾರು. ಅವರನ್ನ ಪರೀಕ್ಷೆ ಮಾಡಿಲ್ಲ. ಅವರ ಸಂಪರ್ಕಕ್ಕ ಬಂದವರನ್ನ ಪರೀಕ್ಷೆ ಮಾಡಿಲ್ಲ. ಅವರಿಗೆ ಮೈಲಿಗೆ ಅಂಟಿಸಿಲ್ಲ.
ಬೆಂಗಳೂರು- ಮಂಗಳೂರು- ಬಾಗಲಕೋಟಿಯೊಳಗ ಐಟಿ ಕಂಪನಿ ಉದ್ಯೋಗಿಗಳಿಂದ ಸೋಂಕು ಹರಡೇತಿ. ಅವರಿಗೆ ಐಟಿ ಬಾಂಬ್ ಅಂತ ಹಣೆ ಪಟ್ಟಿ ಕಟ್ಟಿಲ್ಲ. ಅವರಿರೋ ಪ್ರದೇಶಗಳಿಗೆ ಮೈಲಿಗೆ ಅಂಟಿಲ್ಲ.
ಮೈಸೂರಿನ ಕಾರಖಾನೆಗೆ ಚೈನಾದಿಂದ ಸೋಂಕು ಬಂದೇತಿ ಅಂತಾರು. ಅದನ್ನ ಸರಿಯಾಗಿ ತನಿಖೆ ನಡಸಲಿಲ್ಲ. ಚೈನಾದ ಕಂಪನಿಗಳ ಜೊತೆ ವ್ಯಾಪಾರ – ವ್ಯವಹಾರ ನಡೆಸೋ ಸಾವಿರಾರು ಕಂಪನಿಗಳು ಹಳ್ಳಿಹಳ್ಳಿಗಳೊಳಗ ಅದಾವು. ಅವಕ್ಕ ಯಾರು ಮೈಲಿಗೆ ಅಂಟಿಸಿಲ್ಲ.
ಹಂಗಾರ ಸರಕಾರ ಮಾಡತಾ ಇರೋ ಮಸಲತ್ತು ಏನು?
ಐವತ್ತು ದಿವಸ ಅಗದೀ ಕಟ್ಟಾ ಲಾಕ್ ಡೌನ್ ಮಾಡಿ, ಹಾಲು ತರಲಿಕ್ಕೆ ಹೋದ ಮುದಕೀಯರ ಮ್ಯಾಲೆಲ್ಲಾ ಲಾಠಿ ಬಾರಿಸಿದ ಸರಕಾರ ಒಂದು ದಿವಸ ಮುಂಜಾನೆ ದೇಶದಾಗಿನ ಹೆಂಡದಂಗಡಿ ಎಲ್ಲಾ ತಗದು ಎಲ್ಲಾ ಕುಡಕರನ್ನು ಖುಷಿಯಾಗಿಸಿತು. ಹೆಂಡದಂಗಡಿ ಮುಂದ ಒಬ್ಬರ ಮ್ಯಾಲೆ ಒಬ್ಬರು ಬಿದ್ದು ಎಷ್ಟು ಜನರಿಗೆ ಕೊರೋನಾ ಹರಡಿತು ಅಂತ ಯಾರೂ ಪರೀಕ್ಷೆ ಮಾಡಲಿಲ್ಲ.
ಇದರ ಹಿಂದಿನ ಲೆಕ್ಕಾಚಾರ ಏನು? ಜನಾ ಸತ್ತರ ಸಾಯಲಿ, ನಮಗ ರೊಕ್ಕ ಬರಲಿ, ಅಂತೇನು ?
ಇದು ಜಾಗತಿಕ ಪರೀಕ್ಷೆಗೆ ಸಮಯ ಅಲ್ಲ. ಟಾರ್ಗೆಟೆಡ್ ಟೆಸ್ಟಿಂಗ್ನ ಸಮಯ ಅಂತ ಅಧಿಕಾರಿಗಳು ಅನ್ನಾಕ ಹತ್ಯಾರು. ಹಿಂಗಂದರ ಏನು? ಕೊರೋನಾ ಪರೀಕ್ಷೆ ಅಂದರ ಯಾರದರ ದೇಶಾಭಿಮಾನವನ್ನು ಒರೆಗೆ ಹಚ್ಚೋದೋ ಅಥವಾ ಬಡವರನ್ನ ಬಲಿ ಕೊಡೋದೋ?
ಮೊನ್ನೆ ಡೊನಾಲ್ಡಪ್ಪಾ ಟ್ರಂಪಣ್ಣನವರ ಅವರು ತಮ್ಮ ಬಿಳೀಮನಿಯೊಳಗ ಒಂದು ಪತ್ರಿಕಾ ಗೋಷ್ಠಿ ಕರದಿದ್ದರು. ಅದರಾಗ ಒಬ್ಬಕಿ ಹೆಣಮಗಳು ಅಮೇರಿಕಾದ ಕೊರೋನಾ ಪರೀಕ್ಷಾ ಪ್ರಮಾಣದ ಬಗ್ಗೆ, ಅಲ್ಲಿನ ಸರಕಾರದ ಇತರ ಕ್ರಮಗಳ ಬಗ್ಗೆ ಕೇಳಿದಾಗ ಸಿಟ್ಟಿಗೆದ್ದು ಬಿಟ್ಟರು. ನನ್ನೇನು ಕೇಳತೀರಿ, ಚೈನಾನ್ನ ಕೇಳರಿ ಅಂತ ಭುಸುಭುಸು ಮಾಡಿಕೋತ ಗೋಷ್ಠಿ ಅರ್ಧಾಕ್ಕ ನಿಲ್ಲಿಸಿ ಎದ್ದು ಹೋದರು. ಅವರ ಕೋಪ ಮತ್ತು ಅಮೇರಿಕಾದ ಹತಾಶ ಪರಿಸ್ಥಿತಿ ಬಗ್ಗೆ ಅಲ್ಲಿನ ಪತ್ರಿಕೆಗಳು ಬರದವು.
ನಮ್ಮಲ್ಲೂ ಹಿಂಗೇನಾರ ಆದರ ಪತ್ರಿಕೆಗಳು ಬರೀಬಹುದೇನೋ. ಆದರ ಇಲ್ಲಿನ ಬಿಳೀಮನಿಯೊಳಗ ಪತ್ರಿಕಾ ಗೋಷ್ಠಿನ ಇಲ್ಲಲ್ಲಾ?


