Homeಮುಖಪುಟಮೋದಿ 2.1: ಆರ್ಥಿಕ ಸಮಸ್ಯೆಗೆ ಪರಿಹಾರ ಕಾಣದ ಕೇಂದ್ರ ಸರ್ಕಾರಕ್ಕೆ ಕೊರೊನಾ ನೆಪ!

ಮೋದಿ 2.1: ಆರ್ಥಿಕ ಸಮಸ್ಯೆಗೆ ಪರಿಹಾರ ಕಾಣದ ಕೇಂದ್ರ ಸರ್ಕಾರಕ್ಕೆ ಕೊರೊನಾ ನೆಪ!

- Advertisement -
- Advertisement -

ಮೋದಿ 2.0 ಸರ್ಕಾರದ ಮೊದಲ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಎಂದಿನಂತೆ ಮಾಧ್ಯಮಗಳು ಅಸಲಿ ವಿಚಾರಗಳನ್ನು ದೂರವಿಟ್ಟು ವಿಶ್ಲೇಷಣೆ ಮಾಡುವ ಸಾಧ್ಯತೆಗಳೇ ಹೆಚ್ಚು. ಟ್ವಿಟ್ಟರ್‍ನಲ್ಲಿ ಹಲವಾರು ಟಿವಿ ಚಾನಲ್‍ಗಳು ಮೋದಿ ಆಡಳಿತದ ಬಗ್ಗೆ ಹಲವಾರು ಪೋಲ್‍ಗಳನ್ನು ಸೃಷ್ಟಿಸಿತ್ತು. ರಿಪಬ್ಲಿಕ್ ಟಿವಿಯು ಕೂಡಾ ಮೋದಿಯವರಿಗೆ ಅನುಕೂಲವಾಗುವಂತ ಪ್ರಶ್ನೆಯೊಂದನ್ನೇ ಕೇಳಿತ್ತು. “ಮೋದಿ ಸರ್ಕಾರದ ಒಂದು ವರ್ಷ, ಯಾರು ಹೆಚ್ಚು ಚೆನ್ನಾಗಿ ಕೆಲಸ ಮಾಡಿದ್ದು? ಮೋದಿ ಅಥವಾ ಪ್ರತಿಪಕ್ಷ” ಎಂಬ ಪ್ರಶ್ನೆಗೆ ಆಶ್ಚರ್ಯಕರ ರೀತಿಯಲ್ಲಿ ಶೇ.57 ಜನರು ವಿರೋಧ ಪಕ್ಷದವರೇ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಓಟ್ ಮಾಡಿದ್ದಾರೆ! ಇದೆಲ್ಲದರ ಆಚೆಗೂ ಹೆಚ್ಚಿನ ಮಾಧ್ಯಮಗಳು ಉದ್ಯೋಗ, ಆರ್ಥಿಕತೆ, ಬಡತನ, ಮಾನವ ಅಭಿವೃದ್ಧಿ ಸೂಚ್ಯಾಂಕ, ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಸೂಚ್ಯಂಕಗಳ ಕುರಿತು ಮಾತನಾಡುವ ಸಾಧ್ಯತೆ ಬಹಳ ಕಡಿಮೆ.

2014ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೋಲಲು ಬಿಜೆಪಿ ಬಳಸಿಕೊಂಡ ಅಸ್ತ್ರಗಳಲ್ಲಿ ಜಿಡಿಪಿ ಕುಸಿತ, ಭ್ರಷ್ಟಾಚಾರ ಆರ್ಥಿಕತೆ, ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ, ನಿರುದ್ಯೋಗ ಇತ್ಯಾದಿಗಳಿದ್ದವು. ಈ ಮುಖ್ಯ ವಿಚಾರಗಳ ಮೇಲೆ ಚುನಾವಣೆ ಪ್ರಚಾರ ನಡೆದುದಷ್ಟೇ ಅಲ್ಲದೇ ಆಶ್ವಾಸನೆ ವಚನಗಳ ಮಾಹಾಪೂರವೇ ಹರಿದಿತ್ತು. ಯುವಜನರೂ ಸಹಾ ಬಲಿಷ್ಠ ದೇಶದ ಕನಸು ಕಂಡರು. ಬಿಜೆಪಿಯನ್ನು ಗೆಲ್ಲಿಸಿಕೊಂಡರು. 2019ರ ಚುನಾವಣೆ ಹೊತ್ತಿಗೆ ಈ ಯಾವ ವಿಷಯವೂ ಚುನಾವಣೆ ಪ್ರಚಾರದ ಆಶ್ವಾಸನೆಯೇ ವಿಷಯವಾಗಲಿಲ್ಲ. ಆದರೆ ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿರುವ ಮತ್ತು ನಿರುದ್ಯೋಗವು ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಅವುಗಳ ಕುರಿತು ಮಾತನಾಡದಿರಲು ಸಾಧ್ಯವಿಲ್ಲ.

ಕೇವಲ ನಾಲ್ಕು ಗಂಟೆಗಳ ಕಾಲಾವಕಾಶ ನೀಡಿ ಲಾಕ್‍ಡೌನ್ ಘೋಷಿಸಿದ್ದರ ಪರಿಣಾಮವಾಗಿ ವಲಸೆ ಕಾರ್ಮಿಕರು ಇಂದಿಗೂ ತಮ್ಮ ಮನೆಗಳನ್ನು ತಲುಪಲಾಗದೆ ಬೀದಿಪಾಲಾಗಿರುವುದನ್ನು ನಾವು ನೋಡುತ್ತಲಿದ್ದವೆ. ತಯಾರಿ ಇಲ್ಲದೆ ಘೋಷಿಸಿದ ಲಾಕ್‍ಡೌನ್ ನಂತರದ ದೇಶದ ಆರ್ಥಿಕತೆಯ ಬಗ್ಗೆ ಹಲವಾರು ಆರ್ಥಿಕ ತಜ್ಞರು, ಅಂಕಿಅಂಶ ಸಂಸ್ಥೆಗಳು ಆತಂಕಕಾರಿ ವರದಿಗಳನ್ನು ನೀಡುತ್ತಿದ್ದಾರೆ. ಈ ಸದ್ಯ ಭಾರತವು ಉದಾರೀಕರಣ ನಂತರದ ಕಾಲಘಟ್ಟದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ಕಳೆದ 69 ವರ್ಷದಲ್ಲಿ ಭಾರತವು ಕೇವಲ ಮೂರು ಬಾರಿ ದೊಡ್ಡ ಆರ್ಥಿಕ ಹಿಂಜರಿತ ಕಂಡಿದ್ದು ಇದೀಗ ನಾಲ್ಕನೆಯ ಆರ್ಥಿಕ ಹಿಂಜರಿತ ಕಾಣುತ್ತಿದೆ. 1958, 1966 ಮತ್ತು 1980ರ ನಂತರ ಇದೀಗ ನಾಲ್ಕನೆಯದು. ಈ ಹಿಂದಿನ ಹಿಂಜರಿತಗಳಲ್ಲಿ ಮುಂಗಾರು ಕೈ ಕೊಟ್ಟು ಕೃಷಿಯ ಮೇಲೆ ಬಿದ್ದ ಹೊಡೆತದಿಂದಾಗಿ ಬಿಕ್ಕಟ್ಟು ಉಂಟಾಗಿತ್ತು.

ಆದರೆ ಈ ಸಾರಿಯದ್ದು ಭಿನ್ನ. ಮಂಗಳವಾರದ ಹೊತ್ತಿಗೆ ಪ್ರಸ್ತುತ ಹಣಕಾಸು ಅವಧಿಯಲ್ಲಿ ಜಿಡಿಪಿ ಶೇ.5ರಷ್ಟು ಕುಸಿದಿದೆ ಎಂದು ಸಿ.ಆರ್.ಎಸ್.ಐ.ಎಲ್ ತಿಳಿಸಿದ್ದು ಎಸ್.ಬಿ.ಐ ಪ್ರಕಾರ ಮುಂದಿನ ಹಣಕಾಸು ಅವಧಿಗೆ ಸರಾಸರಿ ಶೇ.4.2ರಷ್ಟು ಇಳಿಯಲಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಸಿ.ಆರ್.ಎಸ್.ಐ.ಎಲ್ ವರದಿಯ ಪ್ರಕಾರ ಜಿಡಿಪಿ ಬೆಳವಣಿಗೆ ಮತ್ತಷ್ಟು ಕುಸಿಯಲಿದ್ದು ಜಿಡಿಪಿಯ ಶೇ.10%ರಷ್ಟು ಶಾಶ್ವತವಾಗಿ ನಷ್ಟವಾಗಲಿದೆ ಎಂದು ವರದಿ ನೀಡಿದೆ. ಎಸ್.ಬಿ.ಐನ ಆರ್ಥಿಕ ತಜ್ಞರ ಪ್ರಕಾರ ಲಾಕ್‍ಡೌನ್‍ನ ಮೊದಲ 7 ದಿನದಲ್ಲೇ ಕನಿಷ್ಠ 1.4 ಲಕ್ಷ ಕೋಟಿ ನಷ್ಟವಾಗಿದೆ. ಸುಮಾರು 50%ರಷ್ಟು ನಷ್ಟ ಕೆಂಪು ವಲಯದಿಂದ ಉಂಟಾಗಿದ್ದರೆ ಉಳಿದಂತೆ ಶೇ.90 ನಷ್ಟ ಉಂಟಾಗಿದೆ ಎಂದು ಅಂದಾಜಿಸಿದೆ.

ಹಾಗಾದರೆ ಲಾಕ್‍ಡೌನ್ ಮುಂಚೆ ಆರ್ಥಿಕತೆ ಚೆನ್ನಾಗಿತ್ತೆ? ಫೆಬ್ರವರಿ 1ರಂದು 2020-21ನೇ ಸಾಲಿನ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ ಬೆನ್ನಲ್ಲೇ ಜಿಡಿಪಿ ಶೇ.5 (9 ಹಣಕಾಸು ವರ್ಷದಲ್ಲಿಯೇ ಅತ್ಯಂತ ಕಡಿಮೆ)ಗೆ ಕುಸಿದಿತ್ತು. ಇದು 1976 ನಂತರ ಭಾರತ ಕಂಡ ಐತಿಹಾಸಿಕ ಕುಸಿತವಾಗಿತ್ತು. ಅಲ್ಲದೆ 2019ರ ಅಂತ್ಯದಿಂದಲೇ ಉತ್ಪಾದನಾ, ಆಟೋಮೊಬೈಲ್ ಕ್ಷೇತ್ರದಲ್ಲಿಯೂ ಕುಸಿತ ಕಂಡಿದ್ದು ಟಿವಿಎಸ್, ಪಾರ್ಲೆಗಳಲ್ಲದೇ ಹಲವು ದೊಡ್ಡ ದೊಡ್ಡ ಉದ್ದಿಮೆಗಳು ನಷ್ಟ ಅನುಭವಿಸುತ್ತಿರುವ ವರದಿಗಳು ಹೊರಬಂದಿದ್ದವು. ಆರ್ಥಿಕ ಬಿಕ್ಕಟ್ಟಿನ ಸುಳಿವುಗಳು 2019ರಲ್ಲಿಯೇ ಸಿಕ್ಕು ಆರ್ಥಿಕ ತಜ್ಞರು ಎಚ್ಚರಿಸುತ್ತಲೇ ಬಂದಿದ್ದರು. ಇದಕ್ಕೆ ಪೂರಕವಾದ ತಯಾರಿ ಇಲ್ಲದ ಕಾರಣ ಲಾಕ್‍ಡೌನ್ ನಂತರದಲ್ಲಿ ಆರ್ಥಿಕತೆ ಮತ್ತಷ್ಟು ಹದಗೆಟ್ಟಿತು.

ಇನ್ನು ನಿರುದ್ಯೋಗದ ವಿಚಾರ. 2014ರ ಚುನಾವಣೆಯಲ್ಲಿ ಪ್ರಮುಖ ಆಶ್ವಾಸನೆಗಳಲ್ಲಿ ಒಂದಾಗಿದ್ದು ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ. ಮೊದಲೇ ತಿಳಿಸಿದ ಹಾಗೆ 2109ರ ಚುನಾವಣೆಯಲ್ಲಿ ಈ ಮಾತು ಕಾಣೆಯಾಗಿತ್ತು. 2016ರಲ್ಲಿ ನೋಟು ಅಮಾನ್ಯೀಕರಣ ನಂತರದಲ್ಲಿ ಸಣ್ಣ ಅತಿ ಸಣ್ಣ ಕೈಗಾರಿಕೆಗಳು ಮತ್ತು ಉದ್ದಿಮೆಗಳು ದೊಡ್ಡ ಪೆಟ್ಟನ್ನು ತಿಂದ ನಂತರದಿಂದಲೇ ಮೊದಲೇ ಇದ್ದ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಾ ಹೋಯಿತು. ಇದೀಗ ಲಾಕ್‍ಡೌನ್ ನಂತರದಲ್ಲಿ ಏನಾಗಿದೆ ಎಂದು ನೋಡೋಣ.

ಸಿ.ಎಮ್.ಐ.ಇ. (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ವರದಿಯ ಪ್ರಕಾರ ಲಾಕ್‍ಡೌನ್ ನಂತರದಲ್ಲಿ ದೇಶದಲ್ಲಿ ನಿರುದ್ಯೋಗವು ಸರಾಸರಿ ಶೇ.28ರಿಂದ ಶೇ.29ಕ್ಕೆ ಏರಿಕೆ ಕಂಡಿದೆ. ಕಾರ್ಮಿಕರ ಭಾಗವಹಿಸುವಿಕೆ ಶೇ.38.7ಕ್ಕೆ ಕುಸಿದಿದೆ ಎಂದು ಹೇಳಿದೆ. ಇನ್ನೂ ಸುಮಾರು 7.7 ಕೋಟಿ ಯುವಜನರು ಉದ್ಯೋಗ ಇಲ್ಲದಿದ್ದರೂ ಉದ್ಯೋಗವನ್ನು ಹುಡುಕುತ್ತಿಲ್ಲ. ಇವರನ್ನು ನಿರುದ್ಯೋಗ ಪಟ್ಟಿಗೆ ಸೇರಿಸಿಲ್ಲ. ಇವರನ್ನೂ ಸೇರಿಸಿದರೆ ನಿರುದ್ಯೋಗದ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದೂ ತಿಳಿಸಿದೆ. ಸಾಮಾನ್ಯ ದಿನಗಳಲ್ಲಿ 1,17,000 ಜನರು ಉದ್ಯೋಗವನ್ನು ಅರಸುತ್ತಾ ಸಂದರ್ಶನ ನೀಡಲು ಬರುತ್ತಿದ್ದರು. ಆದರೆ ಅದು ಈಗ 11 ರಿಂದ 12 ಸಾವಿರ ಜನರಿಗೆ ಇಳಿದಿದೆ, ಅವರು ದೂರವಾಣಿ ಮುಖಾಂತರ ಸಂದರ್ಶನ ನೀಡುತ್ತಿದ್ದಾರೆ ಎಂದು ಹೇಳಿದೆ. ಬರುವ ದಿನಗಳಲ್ಲಿ 2 ಕೋಟಿ ಉದ್ಯೋಗವನ್ನು ಹೇಗೋ ಸೃಷ್ಟಿ ಮಾಡಬಹುದು. ಆದರೆ ಸವಾಲು ಇರುವುದು ಇದರ ಐದು ಪಟ್ಟು ಹೆಚ್ಚು ಅಗತ್ಯವಿರುವ 10.2 ಕೋಟಿ ಉದ್ಯೋಗಗಳನ್ನು ಹೇಗೆ ಸೃಷ್ಟಿ ಮಾಡುವುದು? ಎಂದು ಸಿಎಮ್‍ಐಇ ಆತಂಕ ವ್ಯಕ್ತಪಡಿಸಿದೆ.

ಈ ಪ್ರಮಾಣದ ನಿರುದ್ಯೋಗವೂ ಕೂಡ ಕೇವಲ ಲಾಕ್‍ಡೌನ್‍ನಿಂದಾಗಿ ಸೃಷ್ಟಿಯಾಗಿದ್ದಲ್ಲ. 2019ರಲ್ಲಿಯೇ ಎನ್‍ಎಸ್‍ಎಸ್‍ಓ ನಿರುದ್ಯೋಗದ ವರದಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿತ್ತು. ಆದರೆ ಚುನಾವಣೆ ಹತ್ತಿರವಿದ್ದ ಕಾರಣ ಕೇಂದ್ರ ಸರ್ಕಾರವು ಆ ವರದಿಯನ್ನು ಬಹಿರಂಗವಾಗದಂತೆ ನೋಡಿಕೊಂಡಿತು! ಚುನಾವಣೆ ಫಲಿತಾಂಶದ ನಂತರ ಎನ್‍ಎಸ್‍ಎಸ್‍ಓ ವರದಿಯನ್ನು ಬಿಡುಗಡೆಗೊಳಿಸಿತು. ಅದರ ವರದಿಯ ಪ್ರಕಾರ ಶೇ.6.1ರಷ್ಟು ನಿರುದ್ಯೋಗ ಏರಿಕೆಯಾಗಿತ್ತು. ಇದು ಕಳೆದ 45ವರ್ಷದಲ್ಲಿಯೇ ಐತಿಹಾಸಿಕ ಏರಿಕೆ ಎಂದು ವರದಿಯಾಗಿತ್ತು. ನಿರುದ್ಯೋಗದ ಏರಿಕೆ ಅಲ್ಲಿಗೆ ನಿಲ್ಲದೆ ಮಾರ್ಚ್ 2020ರ ಹೊತ್ತಿಗೆ ಅದು ಶೇ.8ಕ್ಕೆ ಏರುತ್ತಾ ಸಾಗಿತ್ತು.

ಒಟ್ಟಾರೆಯಲ್ಲಿ ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಏರಿಕೆ ಲಾಕ್‍ಡೌನ್ ಮುಂಚೆಯಿಂದಲೂ ಶುರುವಾದ ಪ್ರಕ್ರಿಯೆ ಆಗಿದೆ ಎನ್ನುವುದು ನಾವು ಅರ್ಥ ಮಾಡಿಕೊಳ್ಳಬೇಕಿರುವ ಸಂಗತಿ.

ಈ ಎಲ್ಲಾ ಆತಂಕಕಾರಿ ಅಂಕಿಅಂಶದ ಹೊರತಾಗಿ ಅತ್ಯಂತ ಭಯಾನಕ ವಿಚಾರವೆಂದರೆ ಇದರ ಕುರಿತು ಸರ್ಕಾರದ ಪ್ರತಿಕ್ರಿಯೆ ಮತ್ತು ಅದಕ್ಕಾಗಿನ ತಯಾರಿಗಳು. ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಏರಿಕೆಯ ಕುರಿತು ಮೋದಿ ಸರ್ಕಾರ ಇದನ್ನು ಸಮರ್ಥವಾಗಿ ನಿಭಾಯಿಸುವುದು ಹಾಗಿರಲಿ ಆರ್ಥಿಕ ಬಿಕ್ಕಟ್ಟು ಮತ್ತು ನಿರುದ್ಯೋಗ ಇರುವದನ್ನೇ ಒಪ್ಪಿಕೊಳ್ಳಲು ತಯಾರಿಲ್ಲ! 2014ರ ನಂತರದಲ್ಲಿ ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ವಿಫಲವಾದ ಸ್ಕಿಲ್ ಇಂಡಿಯಾದಂತಹ ಹೆಸರಿಗಾದರೂ ಕೆಲವು ಯೋಜನೆಗಳನ್ನು ಜನಪ್ರಿಯ ಮಾಡಲು ಪ್ರಯತ್ನಿಸಿತ್ತು. ಆದರೆ 2019ರ ನಂತರದಲ್ಲಿ ಯಾವುದೇ ಪ್ರಯತ್ನಕ್ಕೆ ಗಮನ ನೀಡಿಲ್ಲ. ಲಾಕ್‍ಡೌನ್ ನಂತರದಲ್ಲಿಯೂ ಘೋಷಣೆ ಮಾಡಿದ 20 ಲಕ್ಷಕೋಟಿ ಪ್ಯಾಕೇಜ್‍ನಲ್ಲಿಯೂ ಸಣ್ಣ, ಮಧ್ಯಮ ಕೈಗಾರಿಕೆಗಳ ನಿಜವಾದ ಬೇಡಿಕೆಗಳ ಕುರಿತು ಯಾವುದೇ ಪ್ಯಾಕೇಜ್ ಇಲ್ಲ. ಕೃಷಿಗೆ ಸಂಬಂಧಿಸಿದಂತೆ ಹೊಸ ಯೋಜನೆಯೂ ಇಲ್ಲ. ಉದ್ಯೋಗ ಸೃಷ್ಟಿಯ ಬಗ್ಗೆಯೂ ನಿರ್ದಿಷ್ಟ ಮಾತುಗಳು ಕಂಡುಬಂದಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ, ಹೋಟೆಲ್‍ನಂತಹ ಸಣ್ಣ ಕೈಗಾರಿಕೆಗಳ ಕುರಿತು ಕೇಳಿದ ಬಹುಮುಖ್ಯ ಪ್ರಶ್ನೆಗೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ‘ಠೀಕ್ ಹೈ’ ಎಂಬ ಉತ್ತರವನ್ನು ಕೊಟ್ಟು ಎದ್ದುಹೋದರು!

ಇದು ಪ್ರವಾಸೋದ್ಯಮ, ಹೋಟೆಲ್ ಉದ್ದಿಮೆಗಳ ವಿಚಾರವಷ್ಟೇ ಅಲ್ಲ. ಈ ಸರ್ಕಾರಕ್ಕೆ ಆರ್ಥಿಕತೆಯನ್ನು ಎದ್ದು ನಿಲ್ಲಿಸುವಂತಹ ಯಾವುದೇ ಕ್ರಮ ಗೊತ್ತಿದ್ದಂತೆ ಕಾಣಿಸುತ್ತಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಆರ್ಥಿಕ ಸಮಸ್ಯೆ ಇರುವುದನ್ನು ಒಪ್ಪಿರಲಿಲ್ಲ. ತೀರಾ ಇತ್ತೀಚೆಗೆ ಲಾಕ್‍ಡೌನ್‍ನಿಂದ ಆರ್ಥಿಕತೆಗೇನೂ ಸಮಸ್ಯೆಯಿಲ್ಲ ಎಂದು ಆರ್ಥಿಕ ಖಾತೆ ರಾಜ್ಯ ಸಚಿವರೊಬ್ಬರು ಹೇಳಿದ್ದರು. ಒಂದು ವೇಳೆ ಒಪ್ಪಿಕೊಂಡರೂ, ಬೇಡಿಕೆ ಹೆಚ್ಚಿಸುವುದಕ್ಕಿಂತ ಹೆಚ್ಚೆಚ್ಚು ಸರಬರಾಜು ಹೆಚ್ಚುವ ಕಡೆಗೆ ಈ ಸರ್ಕಾರದ ಒತ್ತು ನಿರಂತರವಾಗಿರುತ್ತದೆ. ಇದು ಕೊರೊನಾ ಲಾಕ್‍ಡೌನ್‍ನ ಕಾಲದಲ್ಲೂ ಮುಂದುವರೆಯಿತು. ಹೀಗಾಗಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ ಎಂದು ನಿರೀಕ್ಷಿಸುವುದೇ ದುಬಾರಿಯಾಗಬಹುದು. ಹೆಚ್ಚೆಂದರೆ ಎಲ್ಲಕ್ಕೂ ಕೊರೊನಾವೇ ಕಾರಣ ಎಂಬ ಸಬೂಬನ್ನು ಅತ್ಯಂತ ಸಮರ್ಥವಾಗಿ ನೀಡುವ ದಾರಿಯನ್ನು ಹುಡುಕಿಕೊಳ್ಳಬಹುದು ಅಷ್ಟೇ. ಈ ಹಿನ್ನೆಲೆಯಲ್ಲಿ ಆರ್ಥಿಕ ತಜ್ಞರ ಅನಿಸಿಕೆಗಳನ್ನು ಅನುಸರಿಸಿ ದೇಶದ ಎಲ್ಲಾ ಜನರೂ ಅರ್ಥಸಾಕ್ಷರರಾಗುವ ಅಗತ್ಯವಿದೆ. ಆ ಮೂಲಕ ಸೂಕ್ತವಾದ ಪರಿಹಾರ ಕ್ರಮಗಳು ಜನಾಂದೋಲನದಿಂದಲೇ ಹೊರಹೊಮ್ಮುವಂತಾದರೆ ಏನಾದರೂ ಬದಲಾವಣೆ ಬರುವ ಸಾಧ್ಯತೆ ತೆರೆದುಕೊಳ್ಳುತ್ತದೆ.


ಇದನ್ನು ಓದಿ: ಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...