2019-20 ನೇ ಸಾಲಿನ ಆರ್ಥಿಕ ವರ್ಷದಲ್ಲಿ 57,128 ಕೋಟಿ ರೂಗಳ ಹೆಚ್ಚಿನ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡುವುದಕ್ಕೆ RBI ಒಪ್ಪಿಗೆ ಸೂಚಿಸಿದೆ. RBI ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ 584ನೇ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ.
ತೀವ್ರ ಆರ್ಥಿಕ ಕುಸಿತ ಮತ್ತು ಕೊರೊನಾ ಸಾಂಕ್ರಾಮಿಕದ ಸಮಸ್ಯೆಯಿಂದ ಸರ್ಕಾರದ ಆದಾಯ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿದ್ದರಿಂದ ಏಪ್ರಿಲ್-ಜೂನ್ ಅವಧಿಯಲ್ಲಿ ವಿತ್ತೀಯ ಕೊರತೆಯು ದಾಖಲೆಯ 6.62 ಲಕ್ಷಕೋಟಿ ರೂಗಳಿಗೆ ಏರಿಕೆಯಾಗಿರುವ ಸಂದರ್ಭದಲ್ಲಿ ಈ ಪ್ರಸ್ತಾವಕ್ಕೆ ಒಪ್ಪಿಗೆಯನ್ನು ಸೂಚಿಸಲಾಗಿದೆ.
ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಪರಿಣಾಮವನ್ನು ನಿಯಂತ್ರಿಸುವ ಮತ್ತು ಇತರ ಕ್ರಮಗಳನ್ನು ಪರಿಶೀಲಿಸಿದ ನಂತರ RBI ಆಡಳಿತವು 2019-20ರ (ಜುಲೈನಿಂದ ಜೂನ್ ವರೆಗೆ) ಲೆಕ್ಕಪತ್ರ ವರ್ಷಕ್ಕಾಗಿ ಹೆಚ್ಚುವರಿಯಾಗಿ 57.128 ಕೋಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲು ಒಪ್ಪಿದೆ. ಈ ಅವಧಿಯನ್ನು ಲೆಕ್ಕಪತ್ರ ವರ್ಷವೆಂದು ಪರಿಗಣಿಸಲಾಗುತ್ತದೆ.
2020-21 ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಆರ್ಬಿಐ ಮತ್ತು ಇತರ ಸರ್ಕಾರೀ ಹಣಕಾಸು ಸಂಸ್ಥೆಗಳಿಂದ ರೂ. 60,000 ಕೋಟಿ ಲಾಭಾಂಶವನ್ನು ಅಂದಾಜಿಸಲಾಗಿದೆ. ಆರ್ಬಿಐನಿಂದ ಹಣದ ಪಾವತಿಯನ್ನು ಹೆಚ್ಚಿಸುವಂತೆ ಸರ್ಕಾರವು ಇತ್ತೀನ ವರ್ಷಗಳಲ್ಲಿ ಒತ್ತಡವನ್ನು ಹಾಕುತ್ತಿದೆ.
ಕಳೆದ ವರ್ಷ RBI ರೂ. 1.23 ಲಕ್ಷಕೋಟಿ ಲಾಭಾಂಶ ಮತ್ತು ರೂ. 52,640 ಕೋಟಿ ಹೆಚ್ಚುವರಿ ಬಂಡವಾಳ ಸೇರಿದಂತೆ ರೂ. 1.76 ಲಕ್ಷಕೋಟಿ ದಾಖಲೆ ಮೊತ್ತವನ್ನು ಸರ್ಕಾರಕ್ಕೆ ನೀಡಿತ್ತು.
ಈಗ ಕೊರೊನಾದಿಂದಾಗಿ ಉಂಟಾಗುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಹಾಗೂ ಆರ್ಥಿಕತೆಯನ್ನು ಬೆಂಬಲಿಸಲು ಸರ್ಕಾರವು ಅಂದಾಜು, 60,000 ಕೋಟಿ ರೂ. ಬಯಸಿತ್ತು ಎನ್ನಲಾಗಿದೆ.
ಕೊರೊನಾ ವೈರಸ್ ಅನ್ನು ಎದುರಿಸಲು ಘೋಷಿಸಿದ ಸಂಪೂರ್ಣ ಲಾಕ್ಡೌನ್ನಿಂದಾಗಿ ಬಡವರಿಗೆ ಸಹಾಯ ಮಾಡಲು ಮತ್ತು ಆರ್ಥಿಕತೆಯ ವಿವಿಧ ವಿಭಾಗಗಳನ್ನು ಪುನರುಜ್ಜೀವನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮೇ 12 ರಂದು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದರು.
ಸ್ಥಗಿತಗೊಂಡ ಆರ್ಥಿಕತೆಯು ಸರ್ಕಾರದ ತೆರಿಗೆ ಸಂಗ್ರಹವನ್ನು ಭಾದಿಸಿತ್ತು. ಇದರ ಪರಿಣಾಮವಾಗಿ ಹಣಕಾಸಿನ ಕೊರತೆಯು ಜೂನ್ನಲ್ಲಿ ಕೊನೆಗೊಂಡ ತ್ರೈಮಾಸಿಕ ಹಣಕಾಸು ಅವಧಿಯಲ್ಲಿ 6.6 ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ.
ನಾಲ್ಕು ದಶಕಗಳಲ್ಲಿ ದೇಶದ ಜಿಡಿಪಿ ಮೊದಲ ಬಾರಿಗೆ ಸಂಕುಚಿತಗೊಳ್ಳುವ ನಿರೀಕ್ಷೆಯಿರುವುದರಿಂದ ಹಣಕಾಸಿನ ಕೊರತೆಯು ಸುಮಾರು 7.5% ಕ್ಕೆ ಹೆಚ್ಚಾಗುತ್ತದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕತೆಯು ಸುಮಾರು 5.3% ರಷ್ಟು ಕುಗ್ಗುತ್ತದೆ ಎಂದು ಅಧ್ಯಯನಗಳು ಅಂದಾಜಿಸಿವೆ.
ಬಿಮಲ್ ಜಲನ್ ಸಮಿತಿಯ ಶಿಫಾರಸುಗಳ ಪ್ರಕಾರ ಪಾವತಿಸಬೇಕಾದ ಲಾಭಾಂಶವನ್ನು ನಿರ್ಧರಿಸಲು ಹೊಸ ಬಂಡವಾಳ ಚೌಕಟ್ಟನ್ನು ಅಳವಡಿಸಿಕೊಂಡ ನಂತರ ಕಳೆದ ವರ್ಷ ಕೇಂದ್ರ ಬ್ಯಾಂಕ್ 1.76 ಲಕ್ಷ ಕೋಟಿ ರೂ. ವನ್ನು ಪಾವತಿಸಿತ್ತು.
ಓದಿ: ಮನೆಯಲಿ ಇದ್ದರೆ ಚಿನ್ನ ಚಿಂತೆ ಯಾಕೆ ಅಣ್ಣ?! ರಿಸರ್ವ್ ಬ್ಯಾಂಕ್ ಮೀಸಲು ನಿಧಿಗೆ ಸರಕಾರದ ಕನ್ನ!!