Homeನ್ಯಾಯ ಪಥಅರೆಕ್ರಾಂತಿಕಾರಿ ಪೂಜಾರಿ ಈಗೇನು ಮಾಡ್ತವ್ರೆ?

ಅರೆಕ್ರಾಂತಿಕಾರಿ ಪೂಜಾರಿ ಈಗೇನು ಮಾಡ್ತವ್ರೆ?

- Advertisement -
- Advertisement -

ಶುದ್ಧೋಧನ |
ಕಾಂಗ್ರೆಸಿನ ಹಳೆ ತಲೆಯಾಳು ಬಿ.ಜನಾರ್ಧನ ಪೂಜಾರಿ ಎಂದರೇನೇ ಏನೋ ಒಂಥರಾ ವಿಭಿನ್ನ-ವಿಶೇಷ-ವಿಚಿತ್ರ! ಮಾತು ನೇರಾನೇರ; ನಡೆ ನಿಷ್ಠೂರ; ಕಠೋರ ಪಕ್ಷ ನಿಷ್ಠ; ಬಡವರ ಬಗ್ಗೆ ಬಗ್ಗದ ಬದ್ಧತೆ. ಇದು ಬ್ರ್ಯಾಂಡ್ ಪೂಜಾರಿ ಎಂಬ ಕಾಲವೊಂದಿತ್ತು. ಮಂಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದು, ಅಷ್ಟೇ ಬಾರಿ ಸೋತಿರುವ ಪುಜಾರಿ ದೇಶದಾದ್ಯಂತ ಸಾಲ ಮೇಳದ ಪೂಜಾರಿ ಎಂತಲೇ ಹೆಸರುವಾಸಿ. ಕಾಂಗ್ರೆಸ್‍ನ ಅಂದಿನ ಅಧಿನಾಯಕರಾದ ಇಂದಿರಾ, ರಾಜೀವ್, ನರಸಿಂಹರಾವ್‍ರಂಥವರಿಗೆ ನಿಯತ್ತಿನಿಂದ ಕೆಲಸ ಮಾಡಿ ರಿಸ್ಕ್ ಎದುರಿಸಿದ್ದರು. ಎರಡೆರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪೂಜಾರಿ ಬೆಳಗಿನ ಜಾವ 2-3 ಗಂಟೆ ತನಕ ಪಾರ್ಟಿ ಆಫೀಸಿನಲ್ಲಿ ಕುಂತು ದುಡಿದು ಸುದ್ದಿಯಾಗಿದ್ದರು.
ಇಂಥ ಜನಪರ ಜನಾರ್ಧನ ಪೂಜಾರಿಗೀಗ ಬರೋಬ್ಬರಿ ಎಂಬತ್ತೊಂದರ ಹರಯ!! ಹಾಗಾಗಿಯೇ ಇರಬೇಕು; ನೀತಿ-ನಿಲುವಿನಲ್ಲೂ ಎಡಬಿಡಂಗಿತನ ಶುರುವಾಗಿದೆ. ಅವರ ಮಾತು-ಕತೆ ನೋಡಿದರೆ ಹಿಂದಿನ ಪೂಜಾರಿ ಅದೆಲ್ಲೋ ಕಳೆದು ಹೋಗಿದ್ದಾರೆಂದು ಅನ್ನಿಸದೇ ಇರದು. ಇವರು ರಾಜಕಾರಣಿಯೇ, ಸಮಾಜ ಸುಧಾರಕರೋ, ಗುಡಿ ಕಟ್ಟುವ ಧರ್ಮಾತ್ಮನೋ ಎಂಬ ಗೊಂದಲ. ಸ್ವಪಕ್ಷ ಕಾಂಗ್ರೆಸ್‍ನ್ನು ನಡುಬೀದಿಯಲ್ಲಿ ನಿಂತು ಹೀಯಾಳಿಸಿ ಡ್ಯಾಮೇಜು ಮಾಡುವ ಪೂಜಾರಿ ಆರೆಸೆಸ್‍ನ ಕಲ್ಲಡ್ಕ ಭಟ್ಟನ ಕಂಡಾಗೆಲ್ಲಾ ಅಲ್ಲೇ ಮುದ್ದಾಡುತ್ತಿದ್ದಾರೆ. ಪೂಜಾರಿಯ ಪೂರ್ವಾಶ್ರಮ ಸಂಘಪರಿವಾರ ಕಳೆದ ಮೂರ್ನಾಲ್ಕು ವರ್ಷದಿಂದ ಆತನ ಬಾಯಿಂದ ಹೊರಬರುತ್ತಿರುವ ಅಣಿ ಮುತ್ತು, ಮಾಡುವ ಭಾಷಣ, ಪ್ರದರ್ಶಿಸುವ ವಿಭೀಷಣ, ಕೊಡುವ ಹೇಳಿಕೆ, ವೇದಿಕೆಯಲ್ಲಿ ಹಳೆ ಶಿಷ್ಯ ರಮಾನಾಥ ರೈ ತನಗೆ ಅವಾಚ್ಯ ಶಬ್ದದಿಂದ ಬೈದನೆಂದು ಗೊಳೋ ಎಂದು ಅಳುವುದೆಲ್ಲ ಬಿಜೆಪಿ ಪರಿವಾರಕ್ಕೆ ಭರ್ತಿ ಅನುಕೂಲ ಮಾಡಿಕೊಡುತ್ತಿದೆ.
ಪೂಜಾರಿಯಂಥ ಸೋಕಾಲ್ಡ್ ಸೆಕ್ಯುಲರ್ ಹಿರಿಯ ಕಾಂಗ್ರೆಸಿಗನೇ ಸಿದ್ದು ಸಿಎಂ ಆಗಿದ್ದಾಗ ಟೀಕಿಸಿದ್ದು ಒಂದೆರಡು ಬಾರಿಯಲ್ಲ. ಬಿಜೆಪಿಯ ವೋಟ್‍ಬ್ಯಾಂಕ್ ಕಾರ್ಯಸೂಚಿಯಾದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಕ್ಕೆ ಪೂಜಾರಿ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ವಿಚಾರವಾದಿ ಕೆ.ಎಸ್.ಭಗವಾನ್‍ರಂಥವರ ಮೇಲೆ ಮುರಕೊಂಡು ಬೀಳುವ ಪೂಜಾರಿ ಮರುಕ್ಷಣವೇ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಹೆಂಗಸರು ಹೋಗಿ ಬರಲು ಕೇರಳ ಸಿಎಂ ಪಿಣರಾಯಿ ವಿಜಯನ್ ಕಟ್ಟುನಿಟ್ಟಿನ ವ್ಯವಸ್ಥೆ ಕಲ್ಪಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಅಸಂಬದ್ಧವಾಡುತ್ತಾರೆ. ಒಮ್ಮೆ ಮನುವಾದಿಯಂತೆ ಇನ್ನೊಮ್ಮೆ ಮನುಷ್ಯತ್ವವಾದಿಯಂತೆ ಪೋಸು ಕೊಡುತ್ತಿರೋದು ಕಂಡು ಪೂಜಾರಿಯವರಿಗೆ ವಯೋಸಹಜ ಅರಳುಮರಳು ಶುರುವಾಗಿದೆಯಾ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ತನ್ನ “ಸಾಲ ಮೇಳದ ಸಂಗ್ರಾಮ” ಆತ್ಮಕತೆಯಲ್ಲಿ ಇಂದಿರಾಗಾಂಧಿಗೆ “ಬಂ” ಹೊಡೆಯಲು ಹೋಗಿದ್ದನ್ನು ತಾನು ಕಂಡಿದ್ದೇನೆಂದು ಜನ ನಂಬಲು ಅಸಾಧ್ಯವಾದದ್ದನ್ನೆಲ್ಲ ಬರೆದುಕೊಂಡಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ಮುತ್ಸದ್ಧಿ ನಾಯಕ ಎನಿಸಿದ್ದ ಪೂಜಾರಿಯವರ ಮಾತಿಗಷ್ಟೇ ಅಲ್ಲ, ಮನಸ್ಸು-ಮೆದುಳಿಗೂ ತೂಕ ತಪ್ಪಿಹೋಗಿದೆ ಎನಿಸುತ್ತದೆ.
ತಮ್ಮ ಈ ಹುಚ್ಚಾಟಗಳಿಂದ ಪೂಜಾರಿ ಇತ್ತೀಚಿನ ವರ್ಷದಲ್ಲಿ ಚೆಡ್ಡಿ, ಭಜರಂಗಿಗಳ ಡಾರ್ಲಿಂಗ್ ಆಗಿಹೋಗಿದ್ದಾರೆ. ಮಂಗಳೂರಿನ ಕುದ್ರೋಳಿಯಲ್ಲಿ ಗೋಕರ್ಣನಾಥ ದೇವಾಲಯ ಕಟ್ಟಿರುವ ಪೂಜಾರಿ ಪ್ರತಿವರ್ಷ ನವರಾತ್ರಿಯಲ್ಲಿ ಭರ್ಜರಿ ದಸರಾ ಉತ್ಸವ ಮಾಡುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಒಮ್ಮೆ ಗಂಡನ ಕಳಕೊಂಡ ಹೆಂಗಸರಿಗೆ ತನ್ನ ದೇಗುಲಕ್ಕೆ ಕರೆದು ಕುಂಕುಮ-ಹೂವು ಕೊಡಿಸಿದ್ದ, ಹೆಂಗಸರಿಂದ ದೇವಸ್ಥಾನದ ಪೂಜೆ ಮಾಡಿಸಿದ್ದ ಕ್ರಾಂತಿಕಾರಿ ಪೂಜಾರಿ ಆನಂತರ ಭ್ರಾಂತಿಗೀಡಾಗಿದ್ದು ವಿಚಿತ್ರವಾದರೂ ಸತ್ಯ. ಕರಾವಳಿಯಲ್ಲಿ ಈ ದೊಡ್ಡ ನಾಯಕ ನೆಲೆ-ಬೆಲೆ ಕಳಕೊಂಡು ಅದ್ಯಾವುದೋ ಕಾಲವಾಗಿ ಹೋಗಿದೆ. ಎಸ್ಸೆಸ್ಸೆಲ್ಸಿಯೂ ಪಾಸಾಗದ, ಗ್ರಾಮ ಪಂಚಾಯ್ತಿ ಮೆಂಬರಿಕೆಗೂ ಲಾಯಕ್ಕಿಲ್ಲದ ನಳೀನ್‍ಕುಮಾರ್ ಕುಟೀಲ್ ಎಂಬ ಬೆಂಕಿ ಬ್ರ್ಯಾಂಡಿನ ಚೆಡ್ಡಿ ಎದುರು ಪೂಜಾರಿ ಒಂದೂವರೆ ಲಕ್ಷ ಮತದಂತರದಿಂದ ಲಗಾಟಿ ಹೊಡೆಯುತ್ತಾರೆಂದರೆ ಆತ ಅದ್ಯಾವ ಪರಿ ಕಾಂಗೆಸ್‍ಗೆ ಹಾನಿ ಮಾಡಿರಬಹುದೆಂದು ಊಹಿಸಿ!
ಮಾಜಿ ಮಂತ್ರಿ ರಮಾನಾಥ ರೈ, ವಿನಯಕುಮಾರ್ ಸೊರಕೆ, ಹಾಲಿ ಮಂತ್ರಿ ಯು.ಟಿ.ಖಾದರ್, ಎಮ್ಮೆಲ್ಸಿ ಕಂ ಡಿಸಿಸಿ ಅಧ್ಯಕ್ಷ ಹರೀಶ್ ಪೂಜಾರಿ, ಕಳ್ಳಿಗೆ ತಾರಾನಾಥ ಶೆಟ್ಟಿ….. ವಗೈರೆಗಳು ಪೂಜಾರಿ ಗರಡಿಯಲ್ಲಿ ಪಳಗಿದ ಪರಾಕ್ರಮಿಗಳು. ಆದರೆ ಇವತ್ತು ಇವರ್ಯಾರೂ ಗುರುವಿನ ಹತ್ತಿರವೂ ಸುಳಿಯುತ್ತಿಲ್ಲ. ದೂರದಿಂದ ಕಂಡರೆ ತಲೆ ತಪ್ಪಿಸಿಕೊಂಡುಬಿಡುತ್ತಾರೆ.
ಕಾಂಗ್ರೆಸ್ ಹಣಿಯಲು ಬಿಜೆಪಿಗಳ ಪೂಜಾರಿಯನ್ನು ಅಸ್ತ್ರ ಮಾಡಿಕೊಂಡು ಬೇಕಷ್ಟು ಫಾಯ್ದೆ ಎತ್ತಿದರು; ಯಾವಾಗ ಸಾಲಮೇಳದ ಸಂಗ್ರಾಮ ಹೂರಣ ಹೊರಬಂತೋ ಆಗ ಕೈ ಕೊಟ್ಟು ಓಡಿದರು.
ಆ ಆತ್ಮಕತೆಯಲ್ಲಿ ಪೂಜಾರಿ ಆರೆಸೆಸ್‍ನ ಅಪಪ್ರಚಾರದ ಹಸೀ ಸುಳ್ಳುಗಳು ತನ್ನನ್ನು ಇಲೆಕ್ಷನ್‍ನಲ್ಲಿ ಸೋಲಿಸಿತೆಂದು ಬರೆದದ್ದು ಚಡ್ಡಿ ನವಾಬರ ಕಣ್ಣು ಕೆಂಪು ಮಾಡಿಸಿತ್ತು. ಆದರೆ ಇವತ್ತು ಕರಾವಳಿಯಲ್ಲಿ ಕಾಂಗ್ರೆಸ್ ಆವಸಾನ ಕಂಡಿದ್ದರೆ ಅದು ಕೋಮು ಪಿತೂರಿಯ ಹಿಕಮತ್ತಿಗಿಂತ ಹೆಚ್ಚಾಗಿ ಜನಾರ್ಧನ ಪೂಜಾರಿ, ವೀರಪ್ಪ ಮೋಯ್ಲಿ ಮತ್ತು ಆಸ್ಕರ್ ಫರ್ನಾಂಡಿಸ್ ಎಂಬ ಕಾಂಗ್ರೆಸ್ ನಾಯಕತ್ರಯರ ಒಣ ಪ್ರತಿಷ್ಠೆಯ ಕಿತ್ತಾಟದಿಂದ ಎಂಬುದು ಮಾತ್ರ ಸತ್ಯ.
ಈ ಸೆಟ್‍ದೋಸೆ ಧುರೀಣರಲ್ಲಿ ಹೆಚ್ಚು ಜನಪ್ರಿಯತೆಯಿದ್ದಿದ್ದು ಜನಾರ್ಧನ ಪೂಜಾರಿಗೆ ಆಗಿತ್ತು. ಆತ ಧ್ವನಿಯಿಲ್ಲದವರೊಂದಿಗೆ ಸಲೀಸಾಗಿ ಬೆರೆಯುತ್ತ ಒಣ ಮೀನು ತಿಂದು ಕೊಚ್ಚಿಲಕ್ಕಿ ಗಂಜಿ ಉಣ್ಣುವ ಸರಳ ಮನುಷ್ಯನಾಗಿದ್ದರು. ಈ ಪೂಜಾರಿಗೆ ರಾಜಕಾರಣಿ ದೀಕ್ಷೆ ಕೊಟ್ಟಿದ್ದು ಮಾಜಿ ಸಿಎಂ ವೀರಪ್ಪ ಮೊಯ್ಲಿ. ಅಂದು ಮಂಗಳೂರು ಸಂಸದನಾಗಿದ್ದ ಕೆ.ಕೆ.ಶೆಟ್ಟಿಗೂ ಮೊಯ್ಲಿಗೂ ಆಗಿಬರುತ್ತಿರಲಿಲ್ಲ. ಹೀಗಾಗಿ ಜಿಲ್ಲೆಯ ಬಹುಸಂಖ್ಯಾತ ಜಾತಿಯ(ಬಿಲ್ಲವ) ಪೂಜಾರಿಯನ್ನು ಎಂಪಿ ಕ್ಯಾಂಡಿಡೇಟು ಮಾಡಲು ಮೊಯ್ಲಿ ಯಶಸ್ವಿ ಮಸಲತ್ತು ಮಾಡಿದರು. ಆ ಬಳಿಕ ದಿಲ್ಲಿ ದರ್ಬಾರಿನಂತೆ ಪಗಡೆ ಉರುಳಿಸಿ ಚಂದ ನೋಡಿದರು. ನಿತ್ಯ ತ್ರಿಕೋನ ಜಗಳ-ಕದನ ನಡೆಯಿತು. ಮೊಯ್ಲಿ ಸಿಎಂ ಆದಾಗ ಉಪಾಯವಾಗಿ ಪೂಜಾರಿ ಬಾಲ ಕಟ್ ಮಾಡಿದರು. ಅತ್ತ ಪೂಜಾರಿ ಲೋಕಸಭೆ ಇಲೆಕ್ಷನ್‍ಗಳಲ್ಲಿ ಸೋಲಲು, ಇತ್ತ ಮೊಯ್ಲಿ ಒಮ್ಮೆ ಚಿಕ್ಕಮಗಳೂರಿನಿಂದ ಇನ್ನೊಮ್ಮೆ ಮಂಗಳೂರಿಂದ ಸೋಲಲು ಇವರಿಬ್ಬರ ಕಾಲೆಳೆದಾಟಗಳೇ ಕಾರಣ. ಈಗ ಅದೇ ಪೂಜಾರಿ ತಾನೇ ಮುಂಬರುವ ಎಂಪಿ ಇಲೆಕ್ಷನ್‍ನಲ್ಲಿ ಕಾಂಗ್ರೆಸ್ ಕ್ಯಾಂಡಿಟೇಟ್ ಅಂತಿದ್ದಾರೆ.
ಆದರೆ ಟಿಕೆಟ್ ತರುವ ಅಥವಾ ಅಖಾಡಕ್ಕೆ ಇಳಿಯುವ ಉತ್ಸಾಹ-ಚೈತನ್ಯ ಈಚೆಗಷ್ಟೇ ಆಸ್ಪತ್ರೆಯಲ್ಲಿ ದಾಖಲಾಗಿ ಹೊರಬಂದಿರುವ ವಯೋವೃದ್ಧ ಪೂಜಾರಿಗಿಲ್ಲ. ಪಾರ್ಟಿಯವರನ್ನೇ ಬಾಯಿಗೆ ಬಂದಂತೆ ಟೀಕಿಸಿದ್ದ ಪೂಜಾರಿಗೆ ಹೈಕಮಾಂಡ್ ಮತ್ತೆ ಛಾನ್ಸ್ ಕೊಡುವುದೂ ಕಷ್ಟವೇ. ಹಾಗಿದ್ದರೆ ಪೂಜಾರಿ ತಾನು ದಿಲ್ಲಿಯಲ್ಲಿ ಪ್ರಯತ್ನ ಮಾಡಿ ಟಿಕೆಟ್ ತರುತ್ತೇನೆಂದು ಹೇಳಿದ್ದಾದರೂ ಯಾಕೆ? ಉತ್ತರ ತುಂಬ ಸರಳ. ಕಾಂಗ್ರೆಸ್‍ನಿಂದ ಸ್ಪರ್ಧಿಸುವ ತಯಾರಿಯಲ್ಲಿ ತೊಡಗಿರುವ ಮೊಯ್ಲಿ ಬಣದ ರಮಾನಾಥ ರೈಗೆ ಟಿಕೆಟ್ ತಪ್ಪಿಸುವ ಹುನ್ನಾರವಷ್ಟೇ. ಪೂಜಾರಿ ಸ್ವಜಾತಿ ಬಂಧು ವಿನಯ್‍ಕುಮಾರ್ ಸೊರಕೆ ಪರವಿದ್ದಾರೆ. ಈ ಸೊರಕೆ ಒಂದು ಬಾರಿ ಉಡುಪಿಯಿಂದ ಎಂಪಿಯಾಗಿದ್ದರು. ಮರು ಬಾರಿ ಮಣ್ಣು ಮುಕ್ಕಿದರು. ಕ್ಷೇತ್ರ ಮರುವಿಂಗಡಣೆ ನಂತರ ಉಡುಪಿಗೆ ಚಿಕ್ಕಮಗಳೂರು ಸೇರಿಸಲಾಗಿದೆ. ಹೊಸ ಕ್ಷೇತ್ರದಲ್ಲಿ ಸೊರಕೆಗೆ ಕಿಮ್ಮತ್ತಿಲ್ಲ. ಹಾಗಾಗಿ ಆತ ತನ್ನ ತಾವರೂರು ಪುತ್ತೂರು ಒಳಗೊಂಡಿರುವ ಮಂಗಳೂರು ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ. ಅಲ್ಲಿ ಬಿಲ್ಲವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಂಟರು ಹೆಚ್ಚಿದ್ದಾರೆ. ಒಳಗೊಳಗೇ ರಾಜಿಯಾಗಿರುವ ರೈ-ಸೊರಕೆ ಕ್ಷೇತ್ರ ಅದಲು-ಬದಲು ಮಾಡಿಕೊಳ್ಳುವ ಪ್ಲಾನ್ ಹಾಕಿದ್ದಾರೆ. ಬಿಲ್ಲವರ ನಾಯಕಾಗ್ರೇಸ ಪೂಜಾರಿಯನ್ನು ಎದುರು ಹಾಕಿಕೊಂಡಿರುವ ರೈಗೆ ಆ ಜಾತಿಯ ಮತ ಬೀಳೋದು ಅನುಮಾನ. ಮಂತ್ರಿಯಾಗಿದ್ದಾಗ ಮುಳ್ಳಾಟ ಮಾಡುತ್ತಿದ್ದ ರೈ ಬಗ್ಗೆ ಸ್ಥಳೀಯ ಕಾಂಗ್ರೆಸಿಗರಿಗೂ ಬೇಸರವಿದೆ.
ಇದೆಲ್ಲ ಲೆಕ್ಕಚಾರ ತೆಗೆದಿರುವ ರೈ ನಿಧಾನವಾಗಿ ಉಡುಪಿಯತ್ತ ವಲಸೆ ಆರಂಭಿಸಿದ್ದಾರೆ. ಸೊರಕೆಗೋ ಉಡುಪಿಗಿಂತ ಮಂಗಳೂರು ಸುರಕ್ಷಿತ ನಿಜ. ಆದರೆ ಸಂಘ ಪರಿವಾರದ ಕೋಮು ಕೆನ್ನೀರಿನಿಂದ ತಲೆ ತೊಳೆಸಿಕೊಂಡಿರುವ ಬಿಲ್ಲವರ ಸೆಳೆಯುವುದು ಸೊರಕೆಗೆ ಅಷ್ಟು ಸುಲಭವಿಲ್ಲ ಎಂದು ಕಾಂಗ್ರೆಸಿಗರೇ ವಿಶ್ಲೇಷಿಸುತ್ತಿದ್ದಾರೆ. ಎರಡು ದಶಕಗಳಿಂದ ಬಿಜೆಪಿ ವಶದಲ್ಲಿರುವ ಮಂಗಳೂರು ಕ್ಷೇತ್ರ ಗೆಲ್ಲಲೇಬೇಕೆಂಬ ಪ್ರಾಮಾಣಿಕ ಇಚ್ಛೆ ಕಾಂಗ್ರೆಸ್ ಕಿಂಗ್‍ಗಳಿಗೆ ಇದ್ದರೆ, ಹಿಂದೂಗಳಿಗೂ ಸಹ್ಯ ಮುಖವಾದ ಮಂತ್ರಿ ಯು.ಟಿ.ಖಾದರ್ ಅಥವಾ ಜೈನ್ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು.
ಜೈನ್ ಕ್ಯಾಂಡಿಡೇಟ್ ಧರ್ಮಸ್ಥಳದಲ್ಲಿ ಕುಳಿತು ಆಶೀರ್ವಾದ ಪಡೆದರೆ ಗೆಲುವು ಸುಲಭ. ಧರ್ಮಸ್ಥಳದ ಜೈನ್ ದೇವಧೂತನಿಗೆ ಆರೆಸೆಸ್ ಅಂದರೆ ಅಷ್ಟಕಷ್ಟೇ. ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸಲ್ಲಿ ಆರೋಪ ತನ್ನ ವಂಶಸ್ಥರ ಮೇಲೆ ಬಂದಾಗ ಚೆಡ್ಡಿಗಳು ನೆರವಿಗೆ ಬರದೇ ಷಡ್ಯಂತ್ರ ಮಾಡಿದ್ದರೆಂಬ ಆಕ್ರೋಶ ದೇವಧೂತನಿಗಿದೆ! ಈ ಧರ್ಮಕಾರಣ ಬಳಸಿಕೊಳ್ಳುವ ಜಾಣ್ಮೆ ಕಾಂಗ್ರೆಸ್ ದೊರೆಗಳಿಗಿದೆಯಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...