Homeಮುಖಪುಟದೇಶದ ರಾಜಕೀಯಕ್ಕೆ ತಿರುವು ನೀಡುವುದೇ ಬಿಹಾರ ಚುನಾವಣೆ?

ದೇಶದ ರಾಜಕೀಯಕ್ಕೆ ತಿರುವು ನೀಡುವುದೇ ಬಿಹಾರ ಚುನಾವಣೆ?

2005ರಿಂದ ಈವರೆಗೆ ನಿತೀಶ್ ಕುಮಾರ್ ಬಿಹಾರದ ರಾಜಕೀಯ ಹಾದಿಯಲ್ಲಿ ಮತ್ತೆ ಹಿಂದಿರುಗಿ ನೋಡಿದ್ದೆ ಇಲ್ಲ. ಆದರೆ, ಪ್ರಸ್ತುತ ಚುನಾವಣೆಯಲ್ಲಿ ಅವರು ಅದೇ ಆತ್ಮವಿಶ್ವಾಸವನ್ನು ಹೊಂದಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

- Advertisement -
- Advertisement -

ಒಂದು ಕಾಲದಲ್ಲಿ ಮಾಫಿಯಾ ರಾಜ್ಯ-ಜಂಗಲ್ ರಾಜ್ಯ ಎಂದೇ ಕುಖ್ಯಾತಿ ಪಡೆದಿದ್ದ ಬಿಹಾರ ಇಡೀ ಭಾರತದಲ್ಲಿ ಅತ್ಯಂತ ಹಿಂದುಳಿದ ರಾಜ್ಯ ಎಂಬ ಅಪಕೀರ್ತಿಗೂ ಪಾತ್ರವಾಗಿತ್ತು. ಜನರ ಜೀವನ ಮಟ್ಟ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಸಿಲುಕಿ ನಲುಗಿ ಹೋಗಿತ್ತು. ಬಡತನ, ನಿರುದ್ಯೋಗ, ಅನಕ್ಷರತೆ ಜನರನ್ನು ಅಕ್ಷರಶಃ ಕಿತ್ತು ತಿನ್ನುವ ಹಂತಕ್ಕೆ ತಲುಪಿತ್ತು. ಇವೆಲ್ಲಕ್ಕೂ ಬಿಹಾರದಲ್ಲಿ ಹದಗೆಟ್ಟಿರುವ ರಾಜಕೀಯ ವ್ಯವಸ್ಥೆ ಮತ್ತು ಆಳುವವರ ಅಸಡ್ಡೆಯೇ ಕಾರಣ ಎಂಬ ಮಾತುಗಳು ಪ್ರಚಾರದಲ್ಲಿದ್ದವು. ಹೀಗಾಗಿ ಈ ವ್ಯವಸ್ಥೆಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂಬ ವಾದ ಇಡೀ ದೇಶದಾದ್ಯಂತ ಮುಂಚೂಣಿಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಬಿಹಾರದಲ್ಲಿ ಹೊಸ ಮಿಂಚು ಹರಿಸಿದ್ದ ಪಕ್ಷವೇ ಜೆಡಿಯು (ಜನತಾದಳ).

ಹಿರಿಯ ರಾಜಕಾರಣಿ ಮತ್ತು ಹೋರಾಟಗಾರ ಜಾರ್ಜ್ ಫರ್ನಾಂಡಿಸ್, ನಿತೀಶ್ ಕುಮಾರ್ ಮತ್ತು ಶರದ್ ಯಾದವ್ ನೇತೃತ್ವದಲ್ಲಿ 2003ರಲ್ಲಿ ಸ್ಥಾಪನೆಯಾದ ಜನತಾದಳ ಬಿಹಾರದ ಜನರಲ್ಲಿ ಬದಲಾವಣೆಯ ಭರವಸೆ ನೀಡಿತ್ತು. ಪರಿಣಾಮ ಕೇವಲ ಎರಡು ವರ್ಷದಲ್ಲಿ ಅಂದರೆ 2005ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜೆಡಿಯು ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ಬರೋಬ್ಬರಿ 163 ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ಭರ್ಜರಿ ಬಹುಮತ ನೀಡಿದ್ದರು. ನಿತೀಶ್ ಕುಮಾರ್ ಮೊದಲ ಬಾರಿಗೆ ಪೂರ್ಣಾವಧಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು.

PC : Zee News, (ಶರದ್ ಯಾದವ್)

2005ರಿಂದ ಈವರೆಗೆ ನಿತೀಶ್ ಕುಮಾರ್ ಬಿಹಾರದ ರಾಜಕೀಯ ಹಾದಿಯಲ್ಲಿ ಮತ್ತೆ ಹಿಂದಿರುಗಿ ನೋಡಿದ್ದೆ ಇಲ್ಲ. ಆದರೆ, ಪ್ರಸ್ತುತ ಚುನಾವಣೆಯಲ್ಲಿ ಅವರು ಅದೇ ಆತ್ಮವಿಶ್ವಾಸವನ್ನು ಹೊಂದಿದ್ದಾರೆಯೇ ಎಂಬುದರ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಏಕೆಂದರೆ ನಿತೀಶ್ ಅವರ 15 ವರ್ಷಗಳ ಆಳ್ವಿಕೆಯಲ್ಲೂ ಬಿಹಾರದ ಜನರ ಬದುಕು ಹೇಳಿಕೊಳ್ಳುವಂತಹ ಬದಲಾವಣೆಯನ್ನೇನೂ ಕಂಡಿಲ್ಲ. ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಗುಳೆ ಹೊರಡುವವರ ಸಂಖ್ಯೆಯಲ್ಲಿ ಈಗಲೂ ಬಿಹಾರದ್ದೇ ಅಗ್ರಸ್ಥಾನ. ಈ ರಾಜ್ಯದ ಶೈಕ್ಷಣಿಕ ಹಾಗೂ ಆರ್ಥಿಕ ಬೆಳವಣಿಗೆಯೂ ಅಷ್ಟಕ್ಕಷ್ಟೆ. ಹೀಗಾಗಿ ಬಿಹಾರದ ಮತದಾರ ದಶಕಗಳ ನಂತರ ಮತ್ತೆ ಬದಲಾವಣೆಯ ಕಡೆಗೆ ಮುಖ ಮಾಡಿದ್ದಾನೆ ಎನ್ನುತ್ತಿವೆ ಚುನಾವಣಾ ಕಣದ ವರದಿಗಳು.

ಎಡಬಿಡಂಗಿಯಾದ ನಿತೀಶ್ ಕುಮಾರ್

ಎನ್‍ಡಿಎ ಮೈತ್ರಿಕೂಟದಲ್ಲಿ ನಿತೀಶ್ ಕುಮಾರ್ ಅವರದ್ದು ಹಿರಿಯ ನಾಯಕತ್ವ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಿತೀಶ್ ಕುಮಾರ್ ಕೇಂದ್ರ ರೈಲ್ವೆ ಸಚಿವರಾಗಿಯೂ ಕರ್ತವ್ಯ ನಿಭಾಯಿಸಿದ್ದರು. 2005ರಲ್ಲಿ ಬಿಹಾರದ ಸಿಎಂ ಆದನಂತರ ಅವರು ಹಲವು ಗಮನಾರ್ಹ ಜನಪರ ಕೆಲಸಗಳ ಮೂಲಕ ಗಮನ ಸೆಳೆದದ್ದು ಸುಳ್ಳಲ್ಲ.

ಇದನ್ನೂ ಓದಿ: ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಂದ ಪ್ರತ್ಯೇಕ ಜಾಹೀರಾತು!

ಈ ನಡುವೆ 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್‍ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆ ನಿತೀಶ್ ಕನಲಿ ಕೆಂಡವಾಗಿದ್ದರು. ಗೋದ್ರಾ ಹತ್ಯಾಕಾಂಡದ ಸಮಯದಲ್ಲಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದವರು ಪ್ರಧಾನಿ ಹುದ್ದೆಗೆ ಏರುವುದು ಸರಿಯಲ್ಲ ಎಂದು ಹೇಳುವ ಮೂಲಕ ತನ್ನನ್ನು ಜಾತ್ಯತೀತವಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮುಂದಾಗಿದ್ದರು. ನಂತರ ಎನ್‌ಡಿಎ ಮೈತ್ರಿಯಿಂದಲೇ ಹೊರನಡೆದು ತನ್ನ ಸಾಂಪ್ರದಾಯಿಕ ಎದುರಾಳಿ ಆರ್‌ಜೆಡಿ ಜೊತೆಗೆ ಮೈತ್ರಿ ಸಾಧಿಸಿ ಮತ್ತೆ ಅಧಿಕಾರ ಅನುಭವಿಸಿದ್ದರು. ನಿತೀಶ್ ಅವರ ಈ ನಡೆ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

ಆದರೆ, ಮಹಾಘಟಬಂಧನ್ ಜೊತೆ ಸೇರಿ ಅಧಿಕಾರ ನಡೆಸಿದ್ದ ನಿತೀಶ್ ಕುಮಾರ್ ಅರ್ಧದಲ್ಲೆ ಮೈತ್ರಿ ಮುರಿದು ಮತ್ತೆ ಬಿಜೆಪಿ ಜೊತೆಗೆ ಸಖ್ಯ ಬೆಳೆಸಿದ್ದರು. ಹಾಗಾಗಿ ಜನಾದೇಶಕ್ಕೆ ವಿರುದ್ಧವಾದ ಮೈತ್ರಿ ಅದಾಗಿತ್ತೆಂದು ಬಿಹಾರದ ಹಲವು ಮತದಾರರಿಗೆ ಅದು ಬೇಸರ ಉಂಟುಮಾಡಿರಬಹುದೆಂದು ಹಾಗೂ ಆಡಳಿತ ವಿರೋಧಿ ಅಲೆಯೂ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ ಎಂಬ ಅಭಿಪ್ರಾಯಗಳೂ ಚಾಲ್ತಿಯಲ್ಲಿವೆ.

ನಿತೀಶ್‍ಗೆ ಮುಳ್ಳಾಗಲಿದ್ದಾರೆಯೇ ತೇಜಸ್ವಿ-ಪಾಸ್ವಾನ್?

ಒಂದೆಡೆ ನಿತೀಶ್ ಕುಮಾರ್ ಐದನೇ ಬಾರಿಗೆ ಸಿಎಂ ಆಗುವ ಕನಸು ಕಾಣುತ್ತಿದ್ದರೆ ಮತ್ತೊಂದೆಡೆ ಆರ್‌ಜೆಡಿ ಪಕ್ಷದ ಯುವ ನಾಯಕ ತೇಜಸ್ವಿ ಯಾದವ್ ಬಿಹಾರ ರಾಜಕೀಯದಲ್ಲಿ ಹೊಸದೊಂದು ಸಂಚಲನವನ್ನೇ ಸೃಷ್ಟಿಸುತ್ತಿದ್ದಾರೆ.

ತೇಜಸ್ವಿ ಯಾದವ್ ತಮ್ಮ ವಿಶಿಷ್ಟ ರಾಜಕೀಯ ಪರಿಭಾಷೆ ಮತ್ತು ತಂತ್ರಗಾರಿಕೆಯ ಮೂಲಕ ದಿಢೀರನೇ ಚುನಾವಣಾ ಪ್ರಚಾರಾಂದೋಲನದ ಕೇಂದ್ರಬಿಂದುವಾಗಿದ್ದಾರೆ. ಮತ್ತೊಂದು ಕಡೆ ದೆಹಲಿ ಮಟ್ಟದಲ್ಲಿ ಎನ್‍ಡಿಎ ಮೈತ್ರಿಯಲ್ಲಿ ಮುಂದುವರಿದಿದ್ದರೂ ರಾಜ್ಯ ಮಟ್ಟದಲ್ಲಿ ನಿತೀಶ್ ಕುಮಾರ್ ವಿರುದ್ಧ ಭರ್ಜರಿ ಸಮರ ಸಾರಿರುವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಐದನೇ ಬಾರಿ ಮುಖ್ಯಮಂತ್ರಿಯಾಗುವ ನಿತೀಶ್ ಕನಸಿಗೆ ಕೊಳ್ಳಿ ಇಡಲಿದ್ದಾರೆ ಎಂಬ ಮಾತುಗಳು ಬಿಹಾರದ ರಾಜಕೀಯ ಪಡಸಾಲೆಗಳಲ್ಲಿ ಚಾಲ್ತಿಯಲ್ಲಿವೆ.

ವಾಸ್ತವವಾಗಿ ಬಿಹಾರದ ಚುನಾವಣಾ ಕಣದಲ್ಲಿ ಕಳೆದ ಒಂದು ವಾರದಿಂದ ಇಡೀ ಪ್ರಚಾರ ವಾಗ್ವಾದದ ದಿಕ್ಕುದೆಸೆಯನ್ನು ನಿರ್ಧರಿಸುತ್ತಿರುವುದೇ ತೇಜಸ್ವಿ ಯಾದವ್ ಎಂದು ವರದಿಗಳು ಹೇಳುತ್ತಿವೆ. ನಿರುದ್ಯೋಗ, ಬಡತನ, ಉದ್ಯೋಗ ಸೃಷ್ಟಿಯ ಭರವಸೆ, ಬೆಲೆ ಏರಿಕೆ, ಕೊರೊನಾ ಲಾಕ್‍ಡೌನ್ ಮತ್ತು ಅದು ಸೃಷ್ಟಿಸಿದ ಅನಾಹುತಗಳ ಬಗ್ಗೆ ತಮ್ಮ ಪ್ರಚಾರದಲ್ಲಿ ಒತ್ತಿ ಒತ್ತಿ ಹೇಳುತ್ತಿರುವ ತೇಜಸ್ವಿ ರಾಜ್ಯದ ಜ್ವಲಂತ ವಿಷಯಗಳ ಜೊತೆಗೆ ರಾಜ್ಯ ಮತ್ತು ಕೇಂದ್ರ ನಾಯಕತ್ವಗಳ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದಾರೆ.

PC : India Today

ಅಭಿವೃದ್ಧಿ ಕುರಿತು ಬಹಿರಂಗ ಪ್ರಚಾರಕ್ಕೆ ಬನ್ನಿ ಎಂದು ಸಿಎಂ ನಿತೀಶ್ ಕುಮಾರ್ ವಿರುದ್ಧ ಸವಾಲುಗಳನ್ನೆಸೆಯುತ್ತಿರುವ ತೇಜಸ್ವಿ ಅವರ ಬಿಹಾರಿ ಶೈಲಿಯ ಮಾತುಗಾರಿಕೆ, ಆ ಕ್ಷಣದಲ್ಲೇ ಎದುರಿನ ಜನಸಮೂಹದೊಂದಿಗೆ ತಮ್ಮನ್ನು ತಾವು ಬೆಸೆದುಕೊಳ್ಳುವ ತಮ್ಮ ತಂದೆ ಲಾಲೂ ಪ್ರಸಾದ್‍ರಿಂದ ಬಳುವಳಿಯಾಗಿ ಪಡೆದಿರುವಂತಹ ವಿಶಿಷ್ಟ ಮಾತುಗಾರಿಕೆಯ ವರಸೆ, ದಿಟ್ಟ ಮತ್ತು ನಿರ್ಭೀತಿಯ ಪ್ರಶ್ನೆಗಳನ್ನು ಎತ್ತುವ ರೀತಿ ಎಲ್ಲವೂ ಮತದಾರರ ಸಮೂಹದ ನಡುವೆ ತೇಜಸ್ವಿಗೆ ದೊಡ್ಡ ಮಟ್ಟದ ಬೆಂಬಲ ದಕ್ಕಿಸಿಕೊಟ್ಟಿವೆ ಎನ್ನಲಾಗುತ್ತಿದೆ. ಹಾಗಾಗಿಯೇ ಕಳೆದ ಒಂದು ವಾರದಿಂದ ತೇಜಸ್ವಿ ಯಾದವ್ ರ್ಯಾಲಿಗಳಲ್ಲಿ ಕಿಕ್ಕಿರಿಯುತ್ತಿರುವ ಭಾರೀ ಜನಜಂಗುಳಿ ಸಹಜವಾಗೇ ಆಡಳಿತಾರೂಢ ಎನ್‍ಡಿಎ ಮೈತ್ರಿಯಲ್ಲಿ ದೊಡ್ಡ ಮಟ್ಟದ ಗಲಿಬಿಲಿಗೆ ಕಾರಣವಾಗಿದೆ. ಇದು ಮತಗಳಾಗಿ ಪರಿವರ್ತನೆ ಆಗಲಿದೆಯೇ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ನಗೆಪಾಟಲಿಗೀಡಾದ ಬಿಜೆಪಿ ಪ್ರಣಾಳಿಕೆ ಮತ್ತು ಅಪ್ರಬುದ್ಧ ಪ್ರಚಾರ

ಲಾಕ್‍ಡೌನ್‍ನಿಂದಾಗಿ ಬಿಹಾರದ ಸಾಕಷ್ಟು ಜನ ಅಕ್ಷರಶಃ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ಆದರೆ, ಬಿಜೆಪಿ ಮುಂದಾಳತ್ವದ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಸ್ಪಂದಿಸಿದನ್ನು ಜನ ಗಮನಿಸಿದ್ದಾರೆ. ಜನರ ಅಗತ್ಯಗಳನ್ನು ಮರೆತು ಅದು ತನ್ನ ರಾಜಕೀಯದಲ್ಲಿಯೇ ಮುಳುಗಿತ್ತು. ಎನ್‍ಡಿಎ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಬಿಹಾರಿ ನೆಲದಲ್ಲಿ ನಿಂತು ರಾಮಮಂದಿರ, ಸೀತೆ, ಜಮ್ಮು ಕಾಶ್ಮೀರದ ಕುರಿತು ಮಾತನಾಡುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಕಿಡಿಕಾರುತ್ತಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಮತ ಹಾಕಿದರೆ ಎಲ್ಲಾ ಬಿಹಾರಿಗಳಿಗೂ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಈ ವಿಚಾರ ದೇಶದಾದ್ಯಂತ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.

ಇದನ್ನೂ ಓದಿ: ಬಿಹಾರ ಚುನಾವಣೆ: #BiharRejectsModi ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್!

“ಬಿಹಾರ ಮಾತ್ರ ಭಾರತದಲ್ಲಿದೆಯೇ ಉಳಿದ ರಾಜ್ಯಗಳಿಗೆ ಲಸಿಕೆ ಇಲ್ಲವೇ?, ಕೊರೊನಾವನ್ನೂ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ” ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಸಹ ಜನ ಈ ಕುರಿತು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಅಲ್ಲದೆ, “ಜಮ್ಮು ಕಾಶ್ಮೀರ ಪಾಕಿಸ್ತಾನದ ಉಲ್ಲೇಖ ನಮಗೇಕೆ, ನಮಗೆ ಕೆಲಸ ಕೊಡಿ ಸ್ವಾಮಿ” ಎಂಬಿತ್ಯಾದಿಯಾಗಿ ನಿತೀಶ್ ಕುಮಾರ್ ಪ್ರಚಾರ ನಡೆಸುವ ಕಡೆಯೆಲ್ಲಾ ಕಳೆದ ಒಂದು ತಿಂಗಳಿಂದ ಯುವ ಜನ ಘೋಷಣೆಗಳನ್ನು ಕೂಗಿದರು ಎಂದು ವರದಿಯಾಗಿದ್ದವು. ಇನ್ನೂ ಕೆಲವೆಡೆ ಬೆಲೆ ಏರಿಕೆಯನ್ನು ವಿರೋಧಿಸಿ ನಿತೀಶ್ ವಿರುದ್ಧ ಈರುಳ್ಳಿಗಳನ್ನು ಎಸೆಯುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಎನ್‍ಡಿಎ ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

ಬಿಜೆಪಿಗೆ ಬೆನ್ನುತೋರಿಸುತ್ತಿರುವ ಮೇಲ್ಜಾತಿ ಮತಗಳು

ರಾಜ್ಯ ಸರ್ಕಾರದ ಬಗ್ಗೆ ‘ಮೇಲ್ಜಾತಿ’ ಹಿಂದೂ ಮತದಾರರ ವರ್ತನೆ ಬಿಹಾರದ ವಿವಿಧ ಪ್ರದೇಶಗಳಲ್ಲಿ ಗಮನಾರ್ಹವಾಗಿ ಭಿನ್ನವಾಗಿದೆ. ದಕ್ಷಿಣ ಮತ್ತು ಮಧ್ಯ ಬಿಹಾರದಲ್ಲಿ, ಪ್ರಬಲ ಭೂಮಿಹಾರರು ಮತ್ತು ರಜಪೂತರು ಚದುರಿದ ಮತದಾರರ ಗುಂಪಾಗಿ ಕಾಣುತ್ತಾರೆ. ಇವರು ಹೆಚ್ಚಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರಕ್ಕೆ ಆದ್ಯತೆ ನೀಡುತ್ತಾರೆ. ಆದರೆ, ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಈಗ ಈ ಮತದಾರರು ಆಕ್ರೋಶಗೊಂಡಿದ್ದಾರೆ.

ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು. ಆದರೆ, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗಬಾರದು ಎಂಬುದು ಇವರ ನಿಲುವು. ಹೀಗಾಗಿ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗುವುದಾದರೆ ಎನ್‍ಡಿಎ ಮೈತ್ರಿಕೂಟದ ಸಖ್ಯವನ್ನೇ ತ್ಯಜಿಸಲು ನಾವು ಸಿದ್ಧ ಎಂಬಂತಹ ಮಾತುಗಳು ಮೇಲ್ಜಾತಿ ಮತದಾರರಿಂದ ಕೇಳಿಬರುತ್ತಿದೆ.

ಇದಕ್ಕೆ ವ್ಯತಿರಿಕ್ತವಾಗಿ, ವಿಶೇಷವಾಗಿ ಉತ್ತರ ಬಿಹಾರದಲ್ಲಿ ಪ್ರಭಾವಶಾಲಿ ಬ್ರಾಹ್ಮಣರು ನಿತೀಶ್ ಸರ್ಕಾರವನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ, ಆರ್‌ಜೆಡಿ ನೇತೃತ್ವದ ಮೈತ್ರಿಕೂಟದ ಅಭಿಯಾನವು ತೀವ್ರವಾಗಿ ಏರಿದಂತೆ, ಬ್ರಾಹ್ಮಣ ಸಮುದಾಯದ ಸದಸ್ಯರು ಬೀದಿಗಳಲ್ಲಿ ‘ಜಂಗಲ್‍ರಾಜ್‍ನ ಸ್ಥಾಪನೆಯಾಗಲು ಬಿಡಬೇಡಿ’ ಎಂಬ ಕೂಗಿನ ಜೊತೆಗೆ ಆಕ್ರಮಣಕಾರಿಯಾಗಿ ಪ್ರಚಾರ ಮಾಡಲು ಬೀದಿಗಿಳಿದಿದ್ದಾರೆ.

PC : Telegraph India, (ಲಾಲು ಪ್ರಸಾದ್ ಯಾದವ್)

ಬಿಜೆಪಿ ಮೈತ್ರಿಕೂಟವು ಆಡಳಿತ ಜನತಾದಳ (ಯುನೈಟೆಡ್), ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ನಡೆದ ಅವ್ಯವಹಾರವನ್ನು ಉಲ್ಲೇಖಿಸಲು ಜಂಗಲ್‍ರಾಜ್ ಪದದ ಪ್ರಚಾರ ಮಾಡುತ್ತಿದ್ದಾರೆ. ಆದರೂ, ಉತ್ತರ ಬಿಹಾರದ ಪ್ರಭಾವಿ ಸಮುದಾಯವಾದ ಭೂಮಿಹಾರರು ಮತ್ತು ರಜಪೂತರು ಜೆಡಿಯು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಬಗ್ಗೆ ಈವರೆಗೆ ಖಚಿತ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗುತ್ತಿದೆ.

ಈ ನಡುವೆ ಕಾಂಗ್ರೆಸ್ ಆರ್‌ಜೆಡಿ ಮೈತ್ರಿಕೂಟ ಅಧಿಕ ಕ್ಷೇತ್ರಗಳಲ್ಲಿ ಮೇಲ್ಜಾತಿ ಅಭ್ಯರ್ಥಿಗಳಿಗೆ ಟಿಕಟ್ ನೀಡಿದ್ದಾರೆ. ಹೀಗಾಗಿ ಗೊಂದಲದಲ್ಲಿರುವ ಬಿಜೆಪಿ-ಜೆಡಿಯು ಪಕ್ಷದ ಸಂಪ್ರದಾಯಸ್ಥ ಮೇಲ್ಜಾತಿಯ ಮತಗಳು ಕಾಂಗ್ರೆಸ್- ಆರ್‌ಜೆಡಿ ಪಾಲಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಬಿಹಾರದಲ್ಲಿ ಮೇಲ್ಜಾತಿ ಸಮುದಾಯ ಒಟ್ಟಾಗಿ ರಾಜ್ಯದ ಜನಸಂಖ್ಯೆಯ ಶೇ.15 ರಷ್ಟನ್ನು ಹೊಂದಿವೆ. 1990ರ ದಶಕದಲ್ಲಿ ಮಂಡಲ್ ಯುಗ ಪ್ರಾರಂಭವಾದಾಗಿನಿಂದಲೂ ಅವರು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂಬ ಪುಕಾರನ್ನು ಎಬ್ಬಿಸಲಾಗಿದೆ. ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಅವರ ಪ್ರಾಬಲ್ಯವನ್ನು ಪ್ರಶ್ನಿಸಲಾಗಿ, ತರುವಾಯದ ಅವಧಿಯಲ್ಲಿ ಹಿಂದುಳಿದ ವರ್ಗದ ರಾಜಕಾರಣ ನ್ಯಾಯಯುತವಾಗಿ ಸ್ಥಾಪನೆಗೊಂಡಿತು. ಇದು ಮೇಲ್ಜಾತಿಗಳಿಗೆ ಕಸಿವಿಸಿ ತಂದಿದೆ.

ಆರ್‌ಜೆಡಿ ತನ್ನ ಎರಡನೆಯ ಅಧಿಕಾರಾವಧಿಯಲ್ಲಿ 1995-2000ರ ಅವಧಿಯಲ್ಲಿ ಭೂಮಿಹಾರ್‌ಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳಲು ಪ್ರಯತ್ನಿಸಿತು. ಅದರೆ ಯಶಸ್ವಿ ಆಗಲಿಲ್ಲ. ಈ ಗುಂಪುಗಳಲ್ಲಿ ನಿತೀಶ್ ಪರ ಹೆಚ್ಚಾಗಿ ಒಲವು ತೋರದ ಕಾರಣ, ಬ್ರಾಹ್ಮಣರ ಕೊನೆಯ ಸಂಘಟಿತ ಪ್ರಯತ್ನಗಳ ಹೊರತಾಗಿಯೂ ನೀತೀಶ್ ವಿರುದ್ಧ ಮನೋಭಾವ ಬಲವಾಗಿ ಬೆಳೆಯುತ್ತಿದೆ.

ಒಟ್ಟಾರೆ ಬಿಹಾರದಲ್ಲಿ ಕಳೆದ ಒಂದೂವರೆ ದಶಕಗಳಲ್ಲಿ ನಡೆದ ಯಾವ ಚುನಾವಣೆಗಳಿಗಿಂತಲೂ ಈ ಬಾರಿಯ ಚುನಾವಣೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.

ಇದಕ್ಕೆ ನಾನಾ ಕಾರಣಗಳೂ ಇವೆ. ಸಾಮಾನ್ಯವಾಗಿ ಎಲ್ಲಾ ಚುನಾವಣೆಗಳಲ್ಲೂ ಜಾತಿ, ಧರ್ಮ ಮತ್ತು ಕೆಲವರ ಪ್ರತಿಷ್ಠೆಯ ಕಣವಾಗಷ್ಟೇ ಇದ್ದ ಬಿಹಾರ ಚುನಾವಣೆಯಲ್ಲಿ ಮೊದಲ ಬಾರಿಗೆ ಅಭಿವೃದ್ಧಿ, ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ ಹಾಗೂ ಆರ್ಥಿಕ ವಿಚಾರಗಳು ಚಾಲ್ತಿಗೆ ಬಂದಿವೆ.

ಈ ಹೊಸ ಬೆಳವಣಿಗೆಗಳನ್ನೇ ಮುಂದಿಟ್ಟು ಹಲವು ರಾಜಕೀಯ ತಜ್ಞರು ಫಲಿತಾಂಶದ ಕುರಿತು ನಾನಾ ವಿಶ್ಲೇಷಣೆಗಳನ್ನೂ ಮಾಡಿದ್ದಾರೆ, ಮಾಡುತ್ತಿದ್ದಾರೆ.

ನಿಜಕ್ಕೂ ಬಿಹಾರಿಗಳ ಆಯ್ಕೆ ಏನು? ಎಂಬ ನಿಖರ ಮಾಹಿತಿಗಾಗಿ ನವೆಂಬರ್ 10ರ ಫಲಿತಾಂಶದವರೆಗೆ ಕಾಯಲೇಬೇಕಿದೆ.


ಇದನ್ನೂ ಓದಿ: ಬಿಹಾರ ಚುನಾವಣೆ: ಮುಖ್ಯಮಂತ್ರಿ ನಿತೀಶ್ ಕುಮಾರ್‌ ಮೇಲೆ ಈರುಳ್ಳಿ ಎಸೆದು ಆಕ್ರೋಶ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...