Homeಮುಖಪುಟದೇಶದ ರಾಜಕೀಯಕ್ಕೆ ತಿರುವು ನೀಡುವುದೇ ಬಿಹಾರ ಚುನಾವಣೆ?

ದೇಶದ ರಾಜಕೀಯಕ್ಕೆ ತಿರುವು ನೀಡುವುದೇ ಬಿಹಾರ ಚುನಾವಣೆ?

2005ರಿಂದ ಈವರೆಗೆ ನಿತೀಶ್ ಕುಮಾರ್ ಬಿಹಾರದ ರಾಜಕೀಯ ಹಾದಿಯಲ್ಲಿ ಮತ್ತೆ ಹಿಂದಿರುಗಿ ನೋಡಿದ್ದೆ ಇಲ್ಲ. ಆದರೆ, ಪ್ರಸ್ತುತ ಚುನಾವಣೆಯಲ್ಲಿ ಅವರು ಅದೇ ಆತ್ಮವಿಶ್ವಾಸವನ್ನು ಹೊಂದಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

- Advertisement -
- Advertisement -

ಒಂದು ಕಾಲದಲ್ಲಿ ಮಾಫಿಯಾ ರಾಜ್ಯ-ಜಂಗಲ್ ರಾಜ್ಯ ಎಂದೇ ಕುಖ್ಯಾತಿ ಪಡೆದಿದ್ದ ಬಿಹಾರ ಇಡೀ ಭಾರತದಲ್ಲಿ ಅತ್ಯಂತ ಹಿಂದುಳಿದ ರಾಜ್ಯ ಎಂಬ ಅಪಕೀರ್ತಿಗೂ ಪಾತ್ರವಾಗಿತ್ತು. ಜನರ ಜೀವನ ಮಟ್ಟ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಸಿಲುಕಿ ನಲುಗಿ ಹೋಗಿತ್ತು. ಬಡತನ, ನಿರುದ್ಯೋಗ, ಅನಕ್ಷರತೆ ಜನರನ್ನು ಅಕ್ಷರಶಃ ಕಿತ್ತು ತಿನ್ನುವ ಹಂತಕ್ಕೆ ತಲುಪಿತ್ತು. ಇವೆಲ್ಲಕ್ಕೂ ಬಿಹಾರದಲ್ಲಿ ಹದಗೆಟ್ಟಿರುವ ರಾಜಕೀಯ ವ್ಯವಸ್ಥೆ ಮತ್ತು ಆಳುವವರ ಅಸಡ್ಡೆಯೇ ಕಾರಣ ಎಂಬ ಮಾತುಗಳು ಪ್ರಚಾರದಲ್ಲಿದ್ದವು. ಹೀಗಾಗಿ ಈ ವ್ಯವಸ್ಥೆಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂಬ ವಾದ ಇಡೀ ದೇಶದಾದ್ಯಂತ ಮುಂಚೂಣಿಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಬಿಹಾರದಲ್ಲಿ ಹೊಸ ಮಿಂಚು ಹರಿಸಿದ್ದ ಪಕ್ಷವೇ ಜೆಡಿಯು (ಜನತಾದಳ).

ಹಿರಿಯ ರಾಜಕಾರಣಿ ಮತ್ತು ಹೋರಾಟಗಾರ ಜಾರ್ಜ್ ಫರ್ನಾಂಡಿಸ್, ನಿತೀಶ್ ಕುಮಾರ್ ಮತ್ತು ಶರದ್ ಯಾದವ್ ನೇತೃತ್ವದಲ್ಲಿ 2003ರಲ್ಲಿ ಸ್ಥಾಪನೆಯಾದ ಜನತಾದಳ ಬಿಹಾರದ ಜನರಲ್ಲಿ ಬದಲಾವಣೆಯ ಭರವಸೆ ನೀಡಿತ್ತು. ಪರಿಣಾಮ ಕೇವಲ ಎರಡು ವರ್ಷದಲ್ಲಿ ಅಂದರೆ 2005ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜೆಡಿಯು ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ಬರೋಬ್ಬರಿ 163 ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ಭರ್ಜರಿ ಬಹುಮತ ನೀಡಿದ್ದರು. ನಿತೀಶ್ ಕುಮಾರ್ ಮೊದಲ ಬಾರಿಗೆ ಪೂರ್ಣಾವಧಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು.

PC : Zee News, (ಶರದ್ ಯಾದವ್)

2005ರಿಂದ ಈವರೆಗೆ ನಿತೀಶ್ ಕುಮಾರ್ ಬಿಹಾರದ ರಾಜಕೀಯ ಹಾದಿಯಲ್ಲಿ ಮತ್ತೆ ಹಿಂದಿರುಗಿ ನೋಡಿದ್ದೆ ಇಲ್ಲ. ಆದರೆ, ಪ್ರಸ್ತುತ ಚುನಾವಣೆಯಲ್ಲಿ ಅವರು ಅದೇ ಆತ್ಮವಿಶ್ವಾಸವನ್ನು ಹೊಂದಿದ್ದಾರೆಯೇ ಎಂಬುದರ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಏಕೆಂದರೆ ನಿತೀಶ್ ಅವರ 15 ವರ್ಷಗಳ ಆಳ್ವಿಕೆಯಲ್ಲೂ ಬಿಹಾರದ ಜನರ ಬದುಕು ಹೇಳಿಕೊಳ್ಳುವಂತಹ ಬದಲಾವಣೆಯನ್ನೇನೂ ಕಂಡಿಲ್ಲ. ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಗುಳೆ ಹೊರಡುವವರ ಸಂಖ್ಯೆಯಲ್ಲಿ ಈಗಲೂ ಬಿಹಾರದ್ದೇ ಅಗ್ರಸ್ಥಾನ. ಈ ರಾಜ್ಯದ ಶೈಕ್ಷಣಿಕ ಹಾಗೂ ಆರ್ಥಿಕ ಬೆಳವಣಿಗೆಯೂ ಅಷ್ಟಕ್ಕಷ್ಟೆ. ಹೀಗಾಗಿ ಬಿಹಾರದ ಮತದಾರ ದಶಕಗಳ ನಂತರ ಮತ್ತೆ ಬದಲಾವಣೆಯ ಕಡೆಗೆ ಮುಖ ಮಾಡಿದ್ದಾನೆ ಎನ್ನುತ್ತಿವೆ ಚುನಾವಣಾ ಕಣದ ವರದಿಗಳು.

ಎಡಬಿಡಂಗಿಯಾದ ನಿತೀಶ್ ಕುಮಾರ್

ಎನ್‍ಡಿಎ ಮೈತ್ರಿಕೂಟದಲ್ಲಿ ನಿತೀಶ್ ಕುಮಾರ್ ಅವರದ್ದು ಹಿರಿಯ ನಾಯಕತ್ವ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಿತೀಶ್ ಕುಮಾರ್ ಕೇಂದ್ರ ರೈಲ್ವೆ ಸಚಿವರಾಗಿಯೂ ಕರ್ತವ್ಯ ನಿಭಾಯಿಸಿದ್ದರು. 2005ರಲ್ಲಿ ಬಿಹಾರದ ಸಿಎಂ ಆದನಂತರ ಅವರು ಹಲವು ಗಮನಾರ್ಹ ಜನಪರ ಕೆಲಸಗಳ ಮೂಲಕ ಗಮನ ಸೆಳೆದದ್ದು ಸುಳ್ಳಲ್ಲ.

ಇದನ್ನೂ ಓದಿ: ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಂದ ಪ್ರತ್ಯೇಕ ಜಾಹೀರಾತು!

ಈ ನಡುವೆ 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್‍ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆ ನಿತೀಶ್ ಕನಲಿ ಕೆಂಡವಾಗಿದ್ದರು. ಗೋದ್ರಾ ಹತ್ಯಾಕಾಂಡದ ಸಮಯದಲ್ಲಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದವರು ಪ್ರಧಾನಿ ಹುದ್ದೆಗೆ ಏರುವುದು ಸರಿಯಲ್ಲ ಎಂದು ಹೇಳುವ ಮೂಲಕ ತನ್ನನ್ನು ಜಾತ್ಯತೀತವಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮುಂದಾಗಿದ್ದರು. ನಂತರ ಎನ್‌ಡಿಎ ಮೈತ್ರಿಯಿಂದಲೇ ಹೊರನಡೆದು ತನ್ನ ಸಾಂಪ್ರದಾಯಿಕ ಎದುರಾಳಿ ಆರ್‌ಜೆಡಿ ಜೊತೆಗೆ ಮೈತ್ರಿ ಸಾಧಿಸಿ ಮತ್ತೆ ಅಧಿಕಾರ ಅನುಭವಿಸಿದ್ದರು. ನಿತೀಶ್ ಅವರ ಈ ನಡೆ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

ಆದರೆ, ಮಹಾಘಟಬಂಧನ್ ಜೊತೆ ಸೇರಿ ಅಧಿಕಾರ ನಡೆಸಿದ್ದ ನಿತೀಶ್ ಕುಮಾರ್ ಅರ್ಧದಲ್ಲೆ ಮೈತ್ರಿ ಮುರಿದು ಮತ್ತೆ ಬಿಜೆಪಿ ಜೊತೆಗೆ ಸಖ್ಯ ಬೆಳೆಸಿದ್ದರು. ಹಾಗಾಗಿ ಜನಾದೇಶಕ್ಕೆ ವಿರುದ್ಧವಾದ ಮೈತ್ರಿ ಅದಾಗಿತ್ತೆಂದು ಬಿಹಾರದ ಹಲವು ಮತದಾರರಿಗೆ ಅದು ಬೇಸರ ಉಂಟುಮಾಡಿರಬಹುದೆಂದು ಹಾಗೂ ಆಡಳಿತ ವಿರೋಧಿ ಅಲೆಯೂ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ ಎಂಬ ಅಭಿಪ್ರಾಯಗಳೂ ಚಾಲ್ತಿಯಲ್ಲಿವೆ.

ನಿತೀಶ್‍ಗೆ ಮುಳ್ಳಾಗಲಿದ್ದಾರೆಯೇ ತೇಜಸ್ವಿ-ಪಾಸ್ವಾನ್?

ಒಂದೆಡೆ ನಿತೀಶ್ ಕುಮಾರ್ ಐದನೇ ಬಾರಿಗೆ ಸಿಎಂ ಆಗುವ ಕನಸು ಕಾಣುತ್ತಿದ್ದರೆ ಮತ್ತೊಂದೆಡೆ ಆರ್‌ಜೆಡಿ ಪಕ್ಷದ ಯುವ ನಾಯಕ ತೇಜಸ್ವಿ ಯಾದವ್ ಬಿಹಾರ ರಾಜಕೀಯದಲ್ಲಿ ಹೊಸದೊಂದು ಸಂಚಲನವನ್ನೇ ಸೃಷ್ಟಿಸುತ್ತಿದ್ದಾರೆ.

ತೇಜಸ್ವಿ ಯಾದವ್ ತಮ್ಮ ವಿಶಿಷ್ಟ ರಾಜಕೀಯ ಪರಿಭಾಷೆ ಮತ್ತು ತಂತ್ರಗಾರಿಕೆಯ ಮೂಲಕ ದಿಢೀರನೇ ಚುನಾವಣಾ ಪ್ರಚಾರಾಂದೋಲನದ ಕೇಂದ್ರಬಿಂದುವಾಗಿದ್ದಾರೆ. ಮತ್ತೊಂದು ಕಡೆ ದೆಹಲಿ ಮಟ್ಟದಲ್ಲಿ ಎನ್‍ಡಿಎ ಮೈತ್ರಿಯಲ್ಲಿ ಮುಂದುವರಿದಿದ್ದರೂ ರಾಜ್ಯ ಮಟ್ಟದಲ್ಲಿ ನಿತೀಶ್ ಕುಮಾರ್ ವಿರುದ್ಧ ಭರ್ಜರಿ ಸಮರ ಸಾರಿರುವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಐದನೇ ಬಾರಿ ಮುಖ್ಯಮಂತ್ರಿಯಾಗುವ ನಿತೀಶ್ ಕನಸಿಗೆ ಕೊಳ್ಳಿ ಇಡಲಿದ್ದಾರೆ ಎಂಬ ಮಾತುಗಳು ಬಿಹಾರದ ರಾಜಕೀಯ ಪಡಸಾಲೆಗಳಲ್ಲಿ ಚಾಲ್ತಿಯಲ್ಲಿವೆ.

ವಾಸ್ತವವಾಗಿ ಬಿಹಾರದ ಚುನಾವಣಾ ಕಣದಲ್ಲಿ ಕಳೆದ ಒಂದು ವಾರದಿಂದ ಇಡೀ ಪ್ರಚಾರ ವಾಗ್ವಾದದ ದಿಕ್ಕುದೆಸೆಯನ್ನು ನಿರ್ಧರಿಸುತ್ತಿರುವುದೇ ತೇಜಸ್ವಿ ಯಾದವ್ ಎಂದು ವರದಿಗಳು ಹೇಳುತ್ತಿವೆ. ನಿರುದ್ಯೋಗ, ಬಡತನ, ಉದ್ಯೋಗ ಸೃಷ್ಟಿಯ ಭರವಸೆ, ಬೆಲೆ ಏರಿಕೆ, ಕೊರೊನಾ ಲಾಕ್‍ಡೌನ್ ಮತ್ತು ಅದು ಸೃಷ್ಟಿಸಿದ ಅನಾಹುತಗಳ ಬಗ್ಗೆ ತಮ್ಮ ಪ್ರಚಾರದಲ್ಲಿ ಒತ್ತಿ ಒತ್ತಿ ಹೇಳುತ್ತಿರುವ ತೇಜಸ್ವಿ ರಾಜ್ಯದ ಜ್ವಲಂತ ವಿಷಯಗಳ ಜೊತೆಗೆ ರಾಜ್ಯ ಮತ್ತು ಕೇಂದ್ರ ನಾಯಕತ್ವಗಳ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದಾರೆ.

PC : India Today

ಅಭಿವೃದ್ಧಿ ಕುರಿತು ಬಹಿರಂಗ ಪ್ರಚಾರಕ್ಕೆ ಬನ್ನಿ ಎಂದು ಸಿಎಂ ನಿತೀಶ್ ಕುಮಾರ್ ವಿರುದ್ಧ ಸವಾಲುಗಳನ್ನೆಸೆಯುತ್ತಿರುವ ತೇಜಸ್ವಿ ಅವರ ಬಿಹಾರಿ ಶೈಲಿಯ ಮಾತುಗಾರಿಕೆ, ಆ ಕ್ಷಣದಲ್ಲೇ ಎದುರಿನ ಜನಸಮೂಹದೊಂದಿಗೆ ತಮ್ಮನ್ನು ತಾವು ಬೆಸೆದುಕೊಳ್ಳುವ ತಮ್ಮ ತಂದೆ ಲಾಲೂ ಪ್ರಸಾದ್‍ರಿಂದ ಬಳುವಳಿಯಾಗಿ ಪಡೆದಿರುವಂತಹ ವಿಶಿಷ್ಟ ಮಾತುಗಾರಿಕೆಯ ವರಸೆ, ದಿಟ್ಟ ಮತ್ತು ನಿರ್ಭೀತಿಯ ಪ್ರಶ್ನೆಗಳನ್ನು ಎತ್ತುವ ರೀತಿ ಎಲ್ಲವೂ ಮತದಾರರ ಸಮೂಹದ ನಡುವೆ ತೇಜಸ್ವಿಗೆ ದೊಡ್ಡ ಮಟ್ಟದ ಬೆಂಬಲ ದಕ್ಕಿಸಿಕೊಟ್ಟಿವೆ ಎನ್ನಲಾಗುತ್ತಿದೆ. ಹಾಗಾಗಿಯೇ ಕಳೆದ ಒಂದು ವಾರದಿಂದ ತೇಜಸ್ವಿ ಯಾದವ್ ರ್ಯಾಲಿಗಳಲ್ಲಿ ಕಿಕ್ಕಿರಿಯುತ್ತಿರುವ ಭಾರೀ ಜನಜಂಗುಳಿ ಸಹಜವಾಗೇ ಆಡಳಿತಾರೂಢ ಎನ್‍ಡಿಎ ಮೈತ್ರಿಯಲ್ಲಿ ದೊಡ್ಡ ಮಟ್ಟದ ಗಲಿಬಿಲಿಗೆ ಕಾರಣವಾಗಿದೆ. ಇದು ಮತಗಳಾಗಿ ಪರಿವರ್ತನೆ ಆಗಲಿದೆಯೇ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ನಗೆಪಾಟಲಿಗೀಡಾದ ಬಿಜೆಪಿ ಪ್ರಣಾಳಿಕೆ ಮತ್ತು ಅಪ್ರಬುದ್ಧ ಪ್ರಚಾರ

ಲಾಕ್‍ಡೌನ್‍ನಿಂದಾಗಿ ಬಿಹಾರದ ಸಾಕಷ್ಟು ಜನ ಅಕ್ಷರಶಃ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ಆದರೆ, ಬಿಜೆಪಿ ಮುಂದಾಳತ್ವದ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಸ್ಪಂದಿಸಿದನ್ನು ಜನ ಗಮನಿಸಿದ್ದಾರೆ. ಜನರ ಅಗತ್ಯಗಳನ್ನು ಮರೆತು ಅದು ತನ್ನ ರಾಜಕೀಯದಲ್ಲಿಯೇ ಮುಳುಗಿತ್ತು. ಎನ್‍ಡಿಎ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಬಿಹಾರಿ ನೆಲದಲ್ಲಿ ನಿಂತು ರಾಮಮಂದಿರ, ಸೀತೆ, ಜಮ್ಮು ಕಾಶ್ಮೀರದ ಕುರಿತು ಮಾತನಾಡುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಕಿಡಿಕಾರುತ್ತಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಮತ ಹಾಕಿದರೆ ಎಲ್ಲಾ ಬಿಹಾರಿಗಳಿಗೂ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಈ ವಿಚಾರ ದೇಶದಾದ್ಯಂತ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.

ಇದನ್ನೂ ಓದಿ: ಬಿಹಾರ ಚುನಾವಣೆ: #BiharRejectsModi ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್!

“ಬಿಹಾರ ಮಾತ್ರ ಭಾರತದಲ್ಲಿದೆಯೇ ಉಳಿದ ರಾಜ್ಯಗಳಿಗೆ ಲಸಿಕೆ ಇಲ್ಲವೇ?, ಕೊರೊನಾವನ್ನೂ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ” ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಸಹ ಜನ ಈ ಕುರಿತು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಅಲ್ಲದೆ, “ಜಮ್ಮು ಕಾಶ್ಮೀರ ಪಾಕಿಸ್ತಾನದ ಉಲ್ಲೇಖ ನಮಗೇಕೆ, ನಮಗೆ ಕೆಲಸ ಕೊಡಿ ಸ್ವಾಮಿ” ಎಂಬಿತ್ಯಾದಿಯಾಗಿ ನಿತೀಶ್ ಕುಮಾರ್ ಪ್ರಚಾರ ನಡೆಸುವ ಕಡೆಯೆಲ್ಲಾ ಕಳೆದ ಒಂದು ತಿಂಗಳಿಂದ ಯುವ ಜನ ಘೋಷಣೆಗಳನ್ನು ಕೂಗಿದರು ಎಂದು ವರದಿಯಾಗಿದ್ದವು. ಇನ್ನೂ ಕೆಲವೆಡೆ ಬೆಲೆ ಏರಿಕೆಯನ್ನು ವಿರೋಧಿಸಿ ನಿತೀಶ್ ವಿರುದ್ಧ ಈರುಳ್ಳಿಗಳನ್ನು ಎಸೆಯುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಎನ್‍ಡಿಎ ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

ಬಿಜೆಪಿಗೆ ಬೆನ್ನುತೋರಿಸುತ್ತಿರುವ ಮೇಲ್ಜಾತಿ ಮತಗಳು

ರಾಜ್ಯ ಸರ್ಕಾರದ ಬಗ್ಗೆ ‘ಮೇಲ್ಜಾತಿ’ ಹಿಂದೂ ಮತದಾರರ ವರ್ತನೆ ಬಿಹಾರದ ವಿವಿಧ ಪ್ರದೇಶಗಳಲ್ಲಿ ಗಮನಾರ್ಹವಾಗಿ ಭಿನ್ನವಾಗಿದೆ. ದಕ್ಷಿಣ ಮತ್ತು ಮಧ್ಯ ಬಿಹಾರದಲ್ಲಿ, ಪ್ರಬಲ ಭೂಮಿಹಾರರು ಮತ್ತು ರಜಪೂತರು ಚದುರಿದ ಮತದಾರರ ಗುಂಪಾಗಿ ಕಾಣುತ್ತಾರೆ. ಇವರು ಹೆಚ್ಚಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರಕ್ಕೆ ಆದ್ಯತೆ ನೀಡುತ್ತಾರೆ. ಆದರೆ, ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಈಗ ಈ ಮತದಾರರು ಆಕ್ರೋಶಗೊಂಡಿದ್ದಾರೆ.

ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು. ಆದರೆ, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗಬಾರದು ಎಂಬುದು ಇವರ ನಿಲುವು. ಹೀಗಾಗಿ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆಗುವುದಾದರೆ ಎನ್‍ಡಿಎ ಮೈತ್ರಿಕೂಟದ ಸಖ್ಯವನ್ನೇ ತ್ಯಜಿಸಲು ನಾವು ಸಿದ್ಧ ಎಂಬಂತಹ ಮಾತುಗಳು ಮೇಲ್ಜಾತಿ ಮತದಾರರಿಂದ ಕೇಳಿಬರುತ್ತಿದೆ.

ಇದಕ್ಕೆ ವ್ಯತಿರಿಕ್ತವಾಗಿ, ವಿಶೇಷವಾಗಿ ಉತ್ತರ ಬಿಹಾರದಲ್ಲಿ ಪ್ರಭಾವಶಾಲಿ ಬ್ರಾಹ್ಮಣರು ನಿತೀಶ್ ಸರ್ಕಾರವನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ, ಆರ್‌ಜೆಡಿ ನೇತೃತ್ವದ ಮೈತ್ರಿಕೂಟದ ಅಭಿಯಾನವು ತೀವ್ರವಾಗಿ ಏರಿದಂತೆ, ಬ್ರಾಹ್ಮಣ ಸಮುದಾಯದ ಸದಸ್ಯರು ಬೀದಿಗಳಲ್ಲಿ ‘ಜಂಗಲ್‍ರಾಜ್‍ನ ಸ್ಥಾಪನೆಯಾಗಲು ಬಿಡಬೇಡಿ’ ಎಂಬ ಕೂಗಿನ ಜೊತೆಗೆ ಆಕ್ರಮಣಕಾರಿಯಾಗಿ ಪ್ರಚಾರ ಮಾಡಲು ಬೀದಿಗಿಳಿದಿದ್ದಾರೆ.

PC : Telegraph India, (ಲಾಲು ಪ್ರಸಾದ್ ಯಾದವ್)

ಬಿಜೆಪಿ ಮೈತ್ರಿಕೂಟವು ಆಡಳಿತ ಜನತಾದಳ (ಯುನೈಟೆಡ್), ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ನಡೆದ ಅವ್ಯವಹಾರವನ್ನು ಉಲ್ಲೇಖಿಸಲು ಜಂಗಲ್‍ರಾಜ್ ಪದದ ಪ್ರಚಾರ ಮಾಡುತ್ತಿದ್ದಾರೆ. ಆದರೂ, ಉತ್ತರ ಬಿಹಾರದ ಪ್ರಭಾವಿ ಸಮುದಾಯವಾದ ಭೂಮಿಹಾರರು ಮತ್ತು ರಜಪೂತರು ಜೆಡಿಯು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಬಗ್ಗೆ ಈವರೆಗೆ ಖಚಿತ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗುತ್ತಿದೆ.

ಈ ನಡುವೆ ಕಾಂಗ್ರೆಸ್ ಆರ್‌ಜೆಡಿ ಮೈತ್ರಿಕೂಟ ಅಧಿಕ ಕ್ಷೇತ್ರಗಳಲ್ಲಿ ಮೇಲ್ಜಾತಿ ಅಭ್ಯರ್ಥಿಗಳಿಗೆ ಟಿಕಟ್ ನೀಡಿದ್ದಾರೆ. ಹೀಗಾಗಿ ಗೊಂದಲದಲ್ಲಿರುವ ಬಿಜೆಪಿ-ಜೆಡಿಯು ಪಕ್ಷದ ಸಂಪ್ರದಾಯಸ್ಥ ಮೇಲ್ಜಾತಿಯ ಮತಗಳು ಕಾಂಗ್ರೆಸ್- ಆರ್‌ಜೆಡಿ ಪಾಲಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಬಿಹಾರದಲ್ಲಿ ಮೇಲ್ಜಾತಿ ಸಮುದಾಯ ಒಟ್ಟಾಗಿ ರಾಜ್ಯದ ಜನಸಂಖ್ಯೆಯ ಶೇ.15 ರಷ್ಟನ್ನು ಹೊಂದಿವೆ. 1990ರ ದಶಕದಲ್ಲಿ ಮಂಡಲ್ ಯುಗ ಪ್ರಾರಂಭವಾದಾಗಿನಿಂದಲೂ ಅವರು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂಬ ಪುಕಾರನ್ನು ಎಬ್ಬಿಸಲಾಗಿದೆ. ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಅವರ ಪ್ರಾಬಲ್ಯವನ್ನು ಪ್ರಶ್ನಿಸಲಾಗಿ, ತರುವಾಯದ ಅವಧಿಯಲ್ಲಿ ಹಿಂದುಳಿದ ವರ್ಗದ ರಾಜಕಾರಣ ನ್ಯಾಯಯುತವಾಗಿ ಸ್ಥಾಪನೆಗೊಂಡಿತು. ಇದು ಮೇಲ್ಜಾತಿಗಳಿಗೆ ಕಸಿವಿಸಿ ತಂದಿದೆ.

ಆರ್‌ಜೆಡಿ ತನ್ನ ಎರಡನೆಯ ಅಧಿಕಾರಾವಧಿಯಲ್ಲಿ 1995-2000ರ ಅವಧಿಯಲ್ಲಿ ಭೂಮಿಹಾರ್‌ಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳಲು ಪ್ರಯತ್ನಿಸಿತು. ಅದರೆ ಯಶಸ್ವಿ ಆಗಲಿಲ್ಲ. ಈ ಗುಂಪುಗಳಲ್ಲಿ ನಿತೀಶ್ ಪರ ಹೆಚ್ಚಾಗಿ ಒಲವು ತೋರದ ಕಾರಣ, ಬ್ರಾಹ್ಮಣರ ಕೊನೆಯ ಸಂಘಟಿತ ಪ್ರಯತ್ನಗಳ ಹೊರತಾಗಿಯೂ ನೀತೀಶ್ ವಿರುದ್ಧ ಮನೋಭಾವ ಬಲವಾಗಿ ಬೆಳೆಯುತ್ತಿದೆ.

ಒಟ್ಟಾರೆ ಬಿಹಾರದಲ್ಲಿ ಕಳೆದ ಒಂದೂವರೆ ದಶಕಗಳಲ್ಲಿ ನಡೆದ ಯಾವ ಚುನಾವಣೆಗಳಿಗಿಂತಲೂ ಈ ಬಾರಿಯ ಚುನಾವಣೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.

ಇದಕ್ಕೆ ನಾನಾ ಕಾರಣಗಳೂ ಇವೆ. ಸಾಮಾನ್ಯವಾಗಿ ಎಲ್ಲಾ ಚುನಾವಣೆಗಳಲ್ಲೂ ಜಾತಿ, ಧರ್ಮ ಮತ್ತು ಕೆಲವರ ಪ್ರತಿಷ್ಠೆಯ ಕಣವಾಗಷ್ಟೇ ಇದ್ದ ಬಿಹಾರ ಚುನಾವಣೆಯಲ್ಲಿ ಮೊದಲ ಬಾರಿಗೆ ಅಭಿವೃದ್ಧಿ, ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ ಹಾಗೂ ಆರ್ಥಿಕ ವಿಚಾರಗಳು ಚಾಲ್ತಿಗೆ ಬಂದಿವೆ.

ಈ ಹೊಸ ಬೆಳವಣಿಗೆಗಳನ್ನೇ ಮುಂದಿಟ್ಟು ಹಲವು ರಾಜಕೀಯ ತಜ್ಞರು ಫಲಿತಾಂಶದ ಕುರಿತು ನಾನಾ ವಿಶ್ಲೇಷಣೆಗಳನ್ನೂ ಮಾಡಿದ್ದಾರೆ, ಮಾಡುತ್ತಿದ್ದಾರೆ.

ನಿಜಕ್ಕೂ ಬಿಹಾರಿಗಳ ಆಯ್ಕೆ ಏನು? ಎಂಬ ನಿಖರ ಮಾಹಿತಿಗಾಗಿ ನವೆಂಬರ್ 10ರ ಫಲಿತಾಂಶದವರೆಗೆ ಕಾಯಲೇಬೇಕಿದೆ.


ಇದನ್ನೂ ಓದಿ: ಬಿಹಾರ ಚುನಾವಣೆ: ಮುಖ್ಯಮಂತ್ರಿ ನಿತೀಶ್ ಕುಮಾರ್‌ ಮೇಲೆ ಈರುಳ್ಳಿ ಎಸೆದು ಆಕ್ರೋಶ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...