| ಪಿ.ಕೆ. ಮಲ್ಲನಗೌಡರ್ |
‘ದೊಡ್ಡವರಿಗೆ’ ಕಪ್ಪ ಪಾವತಿಸಿದ ಎಲ್ಲ ಡೈರಿ-ಕೇಸುಗಳಂತೆ ಯಡಿಯೂರಪ್ಪರ ಡೈರಿ-ಕೇಸೂ ಪ್ರಚಲಿತಕ್ಕೆ ಬಂದಷ್ಟೇ ವೇಗವಾಗಿ ಗಾಯಬ್ ಆಗಿದೆ!
ಯಡಿಯೂರಪ್ಪ ಮತ್ತು ಬಿಜೆಪಿಯ ಪ್ರಮುಖ ನಾಯಕರು ಡೈರಿ ನಕಲಿ ಎನ್ನುತ್ತಿದ್ದಾರೆಯೇ ಹೊರತು, ಬಿಜೆಪಿಯಲ್ಲಿ ಹೈಕಮಾಂಡಿಗೆ ಕಪ್ಪ ನೀಡುವ ಪದ್ಧತಿ ಇಲ್ಲ ಎಂದೂ ಎಲ್ಲೂ ಹೇಳಿಲ್ಲ, ಹೇಳುವುದೂ ಇಲ್ಲ. ಆದರೆ ಹಿಂದೊಮ್ಮೆ ಇದೇ ಯಡಿಯೂರಪ್ಪ ಮತ್ತು ದಿ. ಅನಂತಕುಮಾರ್ ತಾವೂ ಹೈಕಮಾಂಡಿಗೆ ಕಪ್ಪ ನೀಡಿದ್ದರ ಕುರಿತು ಚರ್ಚೆ ಮಾಡಿದ್ದ ವಿಡಿಯೋ ಕೂಡ ಬಹಿರಂಗವಾಗಿತ್ತು. ಆ ಕೇಸೂ ಗಾಯಬ್!
ಅಧಿಕಾರದಲ್ಲಿದ್ದವರು ಅವರ ಪಕ್ಷದ ಹೈಕಮಾಂಡಿಗೆ ನೂರು-ಸಾವಿರ ಕೋಟಿಗಳಲ್ಲಿ ಪೇಮೆಂಟ್ ಮಾಡುವುದು ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಕಾಮನ್ ಥಿಂಗ್… ಆದರೆ, ಚುನಾವಣೆಯ ಈ ಸಂದರ್ಭದಲ್ಲೂ ಯಡಿಯೂರಪ್ಪರ ಡೈರಿ ವಿಷಯ ಲೀಕ್ ಆದಷ್ಟೇ ವೇಗವಾಗಿ ನೇಪಥ್ಯಕ್ಕೆ ಸರಿದಿದೆ. ಸಹಾರಾ ಇಂಡಿಯಾದ ಡೈರಿಯಲ್ಲಿ ನಮೋಗೆ ಪಾವತಿಸಿದ್ದ ಮೊತ್ತದ ವಿಷಯವೂ, ಒಂದು ಹಾಳೆ ತುಂಡಿಗೆ ಕಾನೂನಿನ ಮಾನ್ಯತೆಯಿಲ್ಲ ಎಂದು ಮಣ್ಣುಪಾಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗೆಯೇ ಸಿದ್ದರಾಮಯ್ಯರ ಆಪ್ತ ಎನ್ನಲಾದ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿ ವಿಷಯವೂ ಈಗ ಮರೆತುಹೋಗಿದೆ. ಅಂದರೆ ಇಂತಹ ವಿಷಯಗಳು ವಿರೋಧಿಗಳು ಆ ಸಂದರ್ಭಕ್ಕೆ ಬಳಸುವ ಕಾಟಾಚಾರದ ಅಸ್ತ್ರಗಳಷ್ಟೇ ಆಗಿವೆ. ಅದಕ್ಕಿಂತ ಮುಖ್ಯವಾಗಿ, ಅವೆಲ್ಲವೂ ಅವರಿಗೆಲ್ಲ ಸಹಜ ವಿದ್ಯಮಾನಗಳಷ್ಟೇ. ಲೀಕಾದಾಗ ವಿರೋಧಿಯನ್ನು ಹಣಿದಂತೆ ಮಾಡುವುದು, ನಂತರ ‘ಹೊಂದಾಣಿಕೆ’ ಆಗುವುದು…..ಜನ ಥೂ ಎನ್ನುತ್ತಲೇ ಮರೆತುಬಿಡುವುದು…
In between the lines….
ಡೈರಿಯಲ್ಲಿ ಇಂತಿಂಥವರಿಗೆ ಇಷ್ಟು ಎಂಬ ಸಾಲುಗಳು….ಆದರೆ ಯಾವ ಕಾಲಘಟ್ಟದಲ್ಲಿ ಪೇಮೆಂಟಾಯಿತು, ಆಗಿನ ಸಂದರ್ಭ ಹೇಗಿತ್ತು ಎಂಬುದನ್ನು ಸಾಲುಗಳ ನಡುವೆ ಹುಡುಕಿದಾಗ, ಅಸಲಿ ಸತ್ಯಗಳ ದರ್ಶನವಾಗುತ್ತದೆ.
ಯಡಿಯೂರಪ್ಪರ ಈ ಡೈರಿ 2017ರಲ್ಲಿ ಆಗಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದಾಗ ವಶಪಡಿಸಿಕೊಂಡಿದ್ದು. ಯಡಿಯೂರಪ್ಪರ ಡೈರಿ ಅಥವಾ ಅದರ ಭಾಗದ ನಕಲು ಪ್ರತಿ ಡಿ.ಕೆ.ಶಿವಕುಮಾರ್ ಮನೆ ತಲುಪುವ ಮೊದಲು, ಬಿಜೆಪಿಯಲ್ಲಿರುವ ಯಡಿಯೂರಪ್ಪರ ಹಿತಶತ್ರುಗಳ ಕೈಗಳಲ್ಲಿ ಓಡಾಡಿ ಬಂದಿತ್ತು. ಈ ಡೈರಿ ಸ್ಟೋರಿಯಲ್ಲಿ ಈಶ್ವರಪ್ಪ ಅವರ ಆಪ್ತ ಸಲಹೆಗಾರನ ಕಿಡ್ನ್ಯಾಪ್, ಯಡಿಯೂರಪ್ಪ ಆಪ್ತ ಸಹಾಯಕ ರೌಡಿಗಳಿನ್ನು ಬಳಸಿಕೊಂಡು ನಡೆಸಿದ ಪಿತೂರಿ-ಇಂತಹ ಸೈಡ್ಸೀನುಗಳೂ ಹಾಗೆ ಬಂದು ಹೀಗೆ ಹೋಗಿವೆ. ಡಿ.ಕೆ.ಶಿವಕುಮಾರ್ ಕೈಗೆ ಅದನ್ನು ದಿ. ಅನಂತಕುಮಾರ್ ತಲುಪಿಸಿದ್ದರು ಎಂಬುದು ಈ ಕತೆಯ ಭಾಗ. ಈ ನೈಜ ಕತೆಯ ಚಿತ್ರಣವನ್ನು ಐಟಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅರ್ಥ ಸಚಿವ ಅರುಣ ಜೇಟ್ಲಿ ಗಮನಕ್ಕೆ ತಂದು ಕ್ರಮಕ್ಕೆ ಆಗ್ರಹಿಸಿದರೂ ಯಾವುದೇ ಕ್ರಮ ಜರುಗಿಸಲಿಲ್ಲ. 2004-13ರ ಅವಧಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ ಜೇಟ್ಲಿ ಆಗಿನ ಭರಪೂರ ಸುಗ್ಗಿಯಲ್ಲಿ ಸಂಪನ್ನರೇನೂ ಆಗಿರಲಿಲ್ಲ, ಸಂಪತ್ತು ಮಾಡಿಕೊಂಡೇ ದೆಹಲಿ ಕಡೆ ಹೋದವರು.
ಕುರ್ಚಿ-ಆಪರೇಷನ್ ಕಮಲ-ಪೇಮೆಂಟು!
ಇಲ್ಲಿ ನೂರಾರು, ಸಾವಿರಾರು ಕೋಟಿ ಹಣ ಸಂದಾಯವಾಗುವುದಕ್ಕೂ, 2008ರ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಲಿಂಕ್ ಇದೆ. ಆಗ ಬಹುಮತಕ್ಕೆ ತುಂಬ ಹತ್ತಿರ ಬಂದು ಮುಗ್ಗರಿಸಿದ್ದ ಬಿಜೆಪಿ, ಆಪರೇಷನ್ ಕಮಲ ಎಂಬ ಹೇಯ ದಂಧೆ ಶುರು ಮಾಡಿತು. ಅವ್ಯಾಹತವಾಗಿ ಕೊಳ್ಳೆ ಹೊಡೆದ ಬಳ್ಳಾರಿಯ ಗಣಿ ದುಡ್ಡು ಇಡೀ ರಾಜಕಾರಣವನ್ನೇ ನಿಯಂತ್ರಿಸತೊಡಗಿತು. ಅಂತಹ ದುಡ್ಡಿನಿಂದಲೇ ಯಡಿಯೂರಪ್ಪ ಅಗತ್ಯದ ಬಹುಮತವನ್ನು ಉಳಿಸಿಕೊಂಡರು. ಅದು ಜನಾರ್ದನ ರೆಡ್ಡಿಯ ಕೃಪೆ ಎಂಬ ವಿಷಯ ಡೈರಿಯಲ್ಲೂ ಪ್ರಸ್ತಾಪವಾಗಿದೆ.
ಅಂದರೆ ಪ್ರಜಾಪ್ರಭುತ್ವವನ್ನೇ ಚಿಲ್ಲರೆ ಮಾಡಿದ ಸಾವಿರ ಕೋಟಿಗಳ ಆಪರೇಷನ್ ಕಮಲ, ಅವತ್ತು ರಾಷ್ಟ್ರಮಟ್ಟದಲ್ಲಿ ಚಿಲ್ಚಿಲ್ರೆ ಆಗಿದ್ದ ಬಿಜೆಪಿಗೆ ಒಂದು (ಅನೈತಿಕ) ಶಕ್ತಿಯನ್ನು, ಲೂಟಿ ಹೊಡೆದ ದುಡ್ಡಲ್ಲಿ ಹೇಗೆಲ್ಲ ಲಾಭ ಹೊಡೆಯಬಹುದು ಎಂಬುದನ್ನು ಕಲಿಸಿಕೊಟ್ಟಿತು. ಅದಕ್ಕೆ ಮೊದಲ ಇದನ್ನೆಲ್ಲ ಅದು ಮಾಡಿಯೇ ಇಲ್ಲವಂತಲ್ಲ. ಆದರೆ, ಆಪರೇಷನ್ ಕಮಲದ ಎಫೆಕ್ಟು ಬಿಜೆಪಿಗೆ ಆಶಾಕಿರಣವೇ ಆಗಿ ಬಿಟ್ಟಿತು. ರಾಜ್ಯವೊಂದರಲ್ಲಿ ಸರ್ಕಾರವನ್ನು ಮಾಡಬಹುದು, ಅಲ್ಲಿ ಸರ್ಕಾರ ಮಾಡಲು ‘ವ್ಯವಸ್ಥೆ’ ಮಾಡಿದ ಲೂಟಿಕೋರರನ್ನು ಜನನಾಯಕ ಎಂದೂ ಬಿಂಬಿಸಬಹುದು, ಅದರ ಜೊತೆಗೆ ರಾಷ್ಟ್ರಮಟ್ಟದ ಲೆವೆಲ್ನಲ್ಲಿ ಇರುವ ‘ಪರಿಶುದ್ಧ’ ನಾಯಕರಿಗೆ ಅನಾಯಾಸವಾಗಿ ನೂರು ಕೋಟಿಗಳ ಉಡುಗೊರೆಯೂ ಪಕ್ಕಾ…..
ಲೂಟಿಕೋರರ ಡೈರೆಕ್ಟ್ ಎಂಟ್ರಿ
ಅಲ್ಲಿಂದ ಶುರುವಾಯಿತು ಲಜ್ಜೆಯೇ ಇಲ್ಲದ ಹೊಸ ಮಾದರಿಯ ಹಲ್ಕಟ್ ವ್ಯವಸ್ಥೆ. ಹಿಂದೆನೂ ಹಿಂಗೇ ಹೈಕಮಾಂಡ್ಗಳು ರೊಕ್ಕ ಬಳಿದುಕೊಳ್ಳುವ ಪಿಡುಗು ಇತ್ತಾದರೂ, ಅದು ನೇರಾನೇರ ಸಂವಿಧಾನಿಕ ವ್ಯವಸ್ಥೆಗೆ ಸವಾಲು ಎಸೆಯುವ ಮಟ್ಟಕ್ಕೆ ಇಳಿದಿರಲಿಲ್ಲ. ಹಿಂದೆಯೂ ಕಾಂಗ್ರೆಸ್ ಮತ್ತು ಬಿಜೆಪಿ ಬಂಡವಾಳಶಾಹಿಗಳ ನೂರಾರು ಕೋಟಿ (ಹೊಲಸನ್ನು) ನೆಕ್ಕುತ್ತಲೇ ಬಂದಿದ್ದವು.
ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪ ಗಣಿಗಳ್ಳರ ಜೊತೆ ಶುರು ಮಾಡಿದ ಆಪರೇಷನ್ ಕಮಲ ಒಂದಿಷ್ಟು ಹೊಸ ‘ಸಾಧ್ಯತೆ’ಗಳನ್ನಷ್ಟೇ ಅಲ್ಲ, ಹೊಸ ಕಬಳಿಕೆಯ ಮಾರ್ಗಗಳನ್ನೂ ಬಿಜೆಪಿಗೆ ಒದಗಿಸಿತು. ಹಿಂದೆಲ್ಲ ಅಂಬಾನಿ, ಟಾಟಾ, ಅದಾನಿ, ವೇದಾಂತ್, ಮಲ್ಯ ನೀರವ್ eಣಛಿ (ಹಿಂದೆಲ್ಲ ಕರ್ನಾಟಕದಲ್ಲಿ ಹೆಂಡದ ಲಾಬಿ, ಕ್ಯಾಪಿಟೇಷನ್ ಲಾಬಿ ಮತ್ತು ಒಂದು ಹಂತದಲ್ಲಿ ಎಸ್.ಎಂ.ಕೃಷ್ಣ ಇದ್ದಾಗ ಐಟಿ-ಬಿಟಿ ಲಾಬಿ) ಕೊಡುತ್ತಿದ್ದ ಪಾರ್ಟಿ ಫಂಡ್ ಎಂಬ ಸಾವಿರಾರು ಕೋಟಿಗಳ ಎಂಜಲನ್ನು, ಕೇವಲ ಕರ್ನಾಟಕ ರಾಜ್ಯವೊಂದರ ಗಣಿಗಳ್ಳರು ನೀಡುವುದಷ್ಟೇ ಅಲ್ಲ, ಸರ್ಕಾರ ರಚನೆಗೆ ಬೇಕಾದ ಬಹುಮತವನ್ನೂ ಅವರು ತಾವೇ ಖುದ್ದು ನಿಂತು ಖರೀದಿಸಬಲ್ಲರು…. ಅದಕ್ಕೆ ಅಡಚಣೆ ಆಗಬಹುದಾದ ಸಾಂವಿಧಾನಿಕ ಮಾರ್ಗಗಳಿಗೂ ಪರ್ಯಾಯ ಹಾದಿ ಹುಡುಕಲು ಮತ್ತೆ ಅವರು ಸಾವಿರ ಕೋಟಿಗಳ ಲೆಕ್ಕದಲ್ಲಿ ಖರ್ಚು ಮಾಡಬಲ್ಲರು…. ಈ ಸತ್ಯಗಳು 2008ರಲ್ಲಿ ಯಡಿಯೂರಪ್ಪ ಸರ್ಕಾರ ಸ್ಥಾಪನೆ ಆದ ಕೂಡಲೇ ಬಿಜೆಪಿಯ ದೆಹಲಿಯ ತಿಮಿಂಗಲಗಳೆಲ್ಲ ಬಾಯಿ ತೆಗೆದು ಕುಳಿತವು. ಆ ವಿಶಾಲ ಬಾಯಿಗಳಿಗೆ ರಾಜ್ಯದ ಗಣಿ ಸಂಪತ್ತಿನ ಲೂಟಿಯ ದುಡ್ಡನ್ನು ತುರುಕುತ್ತ ಬರಲಾಗಿತು.
ಸಿಕ್ಕಷ್ಟು (ಡೈರಿಯ ಲೆಕ್ಕ 2,800 ಕೋಟಿ….) ಬಾಚಿಕೊಂಡ ಹೈಕಮಾಂಡ್ ಮತ್ತು ಬಿಜೆಪಿ ಸೆಂಟ್ರಲ್ ಕಮಿಟಿಗಳು ಯಾರೂ ಯಡಿಯೂರಪ್ಪ ಜೈಲು ಸೇರಿದ ಮೇಲೆ ಅವರ ನೆರವಿಗೆ ಬರಲಿಲ್ಲ…
ಆ ಸಿಟ್ಟೇ ಡೈರಿ ಎಂಟ್ರಿಗೆ ಮೂಲ!
ಯಡಿಯೂರಪ್ಪ ಡೈರಿಯಲ್ಲಿ ಯಾವ ದಿನ ಇದನ್ನೆಲ್ಲ ಬರೆದರು, ಯಾವಾಗ ಪೇಮೆಂಟಾಯಿತು ಎಂಬುದನ್ನು ನಿಖರವಾಗಿ ಹೇಳುವ ಅಂಶಗಳಿಲ್ಲ. 2009ರ ಜನವರಿ 17, 18ರ ಡೇಟ್ ಸಾಲಿನಲ್ಲಿ ಅವರು ತಾವು ನೀಡಿದ ಸಾವಿರಾರು ಕೋಟಿಗಳನ್ನು ನಮೂದಿಸಿದ್ದಾರೆ. ಆದರೆ ಅದನ್ನು ಅವರು ಅವತ್ತೇ ಬರೆದರೇ ಎಂಬುದಕ್ಕೆ ಪುರಾವೆಯಿಲ್ಲ. ಆದರೆ ಅರ್ಥ ಸಚಿವ ಜೇಟ್ಲಿ ಎದುರು ಈ ವಿಷಯ ಎತ್ತಿಕೊಂಡು ಹೋದ ದಿಟ್ಟ ತೆರಿಗೆ ಅಧಿಕಾರಿಯ (ಜಾಲತಾಣಿಗರ ಗಮನಕ್ಕೆ: ಕ್ಯಾರಾವಾನ್ ಬಳಿ ಆ ಅಧಿಕಾರಿ ಅರ್ಥ ಸಚಿವರಿಗೆ ಬರೆದಿರುವ ನೋಟ್ಸ್ ಇವೆ, ಪೇಮೆಂಟ್ ಲಿಸ್ಟಲ್ಲಿ ಜೇಟ್ಲಿ ಹೆಸರಿದ್ದರೂ ಅವರು ಮುನ್ನುಗ್ಗಿದ್ದಾರೆ…. ಮತ್ತು ದೇಶದ ಪ್ರಜ್ಞಾವಂತರಿಗೆ ಕ್ಯಾರಾವಾನ್ ಬಗ್ಗೆ ದೊಡ್ಡ ವಿಶ್ವಾಸವಿದೆ) ನೋಟ್ ಆಧಾರದಲ್ಲಿ ಹೇಳುವುದಾದರೆ, ಬಿಜೆಪಿ ತೊರೆದು ಕೆಜೆಪಿ ಕಟ್ಟುವ ಕ್ಷಿಪ್ರ ಕಸರತ್ತಿನ ನಡುವಿನ ಸಣ್ಣ ಅವಧಿಯಲ್ಲಿ ಯಡಿಯೂರಪ್ಪ ಇದನ್ನು ದಾಖಲಿಸಿದ್ದಾರೆ….
ತಾನು ಜೈಲಿಗೆ ಬಿದ್ದಾಗ ಬೆಂಗಳೂರಲ್ಲಿ ಬಿಜೆಪಿ ರೋಡ್ ಶೋ ಮಾಡಿದ್ದ ಲಾಲಕೃಷ್ಣ ಅದ್ವಾನಿ ತಮ್ಮ ಬಗ್ಗೆ ತುಚ್ಛಕರವಾಗಿ ಮಾತಾಡಿದ್ದು, ಅವರಿಗೆ 50 ಕೋಟಿ ನೀಡಿದ ಯಡ್ಡಿಗೆ ಆಘಾತ ಮೂಡಿಸಿರಲೂಬಹುದು. ಮುಂದೆ, 2013ರ ವಿಧಾನಸಭೆಗೆ ಸಾಕಷ್ಟು ಮೊದಲೇ, ತನ್ನಿಂದ ಸಾವಿರ ಕೋಟಿ ಪಡೆದ ಬಿಜೆಪಿ ಸೆಂಟ್ರಲ್ ಕಮಿಟಿ, 100 ಕೋಟಿ ಇಸ್ಕೊಂಡ ರಾಜನಾಥ ಸಿಂಗ್, ತಲಾ 100ರಿಂದ 200 ಕೋಟಿ ಗೆಬರಿಕೊಂಡ ಜೇಟ್ಲಿ, ಗಡ್ಕರಿ ಇತ್ಯಾದಿಗಳ ಬಗ್ಗೆ ಅಸಾಧ್ಯ ಕೋಪ ಉಕ್ಕಿದಾಗ ಯಡ್ಡಿ ಅದನ್ನೆಲ್ಲ ದಾಖಲೆ ಮಾಡಿ ಸಮಾಧಾನ ಪಟ್ಟಿರಬಹುದು…
ಬಿಜೆಪಿಯ ಮೂರ್ಖ ಪ್ರಶ್ನೆಗಳು
ಈಗ ಬಿಜೆಪಿ 10 ಪ್ರಶ್ನೆಗಳನ್ನು ಮುಂದೆ ಮಾಡಿ ಕಾಂಗ್ರೆಸ್ ಉತ್ತರಿಸಲಿ ಎಂದಿದೆ. ಈಗ ಆ ಪ್ರಶ್ನೆಗಳು ಕಾಂಗ್ರೆಸ್, ಬಿಜೆಪಿಗೂ ಮುಖ್ಯವಲ್ಲ. ಆ ಡೈರಿಯನ್ನು ಯಾರು ಕೊಟ್ಟರು, ಯಾವಾಗ ಕೊಟ್ಟರು, ಡೈರಿ ಬರೆಯುವ ವ್ಯಕ್ತಿ ಪ್ರತಿ ಪೇಜ್ನಲ್ಲೂ ಸಹಿ ಹಾಕುತ್ತಾನಾ- ಹೀಗೆಲ್ಲ ಸಿ.ಟಿ. ರವಿ ತರಹದವರು ಅರಚಾಡಿದ್ದಾರೆ. ಐಟಿ ಅಧಿಕಾರಿ ಜೇಟ್ಲಿಗೆ ಕೊಟ್ಟ ವಿವರದಲ್ಲೇ, ಅದನ್ನು ಅನಂತಕುಮಾರ್ ಡಿ.ಕೆ.ಶಿವಕುಮಾರ್ಗೆ ಕೊಟ್ಟರು ಎಂದಿದೆ. ಅದನ್ನು ಕ್ಯಾರಾವಾನ್ಗೆ ಅಥವಾ ಆ ಐಟಿ ಅಧಿಕಾರಿಗೆ ಕೇಳಿ… ಚೆಕ್ನಲ್ಲೆ ಲಂಚ ಹೊಡೆದ ಲೂಟಿಕೋರ ಮೂರ್ಖ ಪ್ರತಿ ಪೇಜ್ನಲ್ಲೂ ಸಹಿ ಹಾಕುವುದರಲ್ಲಿ ಆಶ್ಚರ್ಯವೇನೂ ಇಲ್ಲ ಅಲ್ಲವೇ?
ಡೈರಿ, ಆಡಿಯೋ…ಎಲ್ಲವೂ ಗಾಯಬ್
ಜನಸಾಮಾನ್ಯರು ಅರ್ಥ ಮಾಡಬೇಕಾದ ಒಂದು ಸಂಗತಿ ಎಂದರೆ, ಸ್ಫೋಟಗೊಳ್ಳುವ ಡೈರಿಯ ಸುದ್ದಿ ಎರಡು ದಿನದ್ದು, ಆಡಿಯೋದ ಗದ್ದಲ ಒಂದು ವಾರದ್ದು…ತನಿಖೆ ಆಗಲ್ಲ, ತನಿಖೆಗೆ ಆದೇಶ ಹೊರಡಿಸಿದರೂ ಅಲ್ಲೂ ತನಿಖೆಯೇ ನಡೆಯಲ್ಲ! ಗೋವಿಂದರಾಜು ಡೈರಿ, ಯಡ್ಡಿಯ ಆಡಿಯೋಸ್ ಮತ್ತು ಈಗಿನ ಡೈರಿ, ನಮೋ ಪೇಮೆಂಟ್ನ ಸಹಾರಾ ಡೈರಿ ಪೇಜ್- ಇವೆಲ್ಲವನ್ನೂ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಮಾಫಿಯಾ ಇದೆ. ಅದು ರೌಡಿಗಳ ಮಾಫಿಯಾ ಅಲ್ಲ. ಅದು ಪೊಲಿಟಿಕಲ್ ಮಾಫಿಯಾ. ಅದರಲ್ಲಿ ಎಲ್ಲ ಪ್ರಮುಖ ಪಕ್ಷಗಳ ‘ಬ್ರ್ಯಾಂಡ್’ ಲೀಡರುಗಳ ಜೊತೆಗೆ, ಸಭ್ಯ, ಸೌಮ್ಯ ಮುಖವಾಡದ ನೇತಾರರೂ ಇದ್ದಾರೆ…..
ಬಿಜೆಪಿ ವಶದಲ್ಲಿ ಐಟಿ ಡಿಪಾರ್ಟಮೆಂಟ್!
ಸಿಬಿಐ, ಆರ್ಬಿಐ, ಇ.ಡಿ., ಸ್ವಾಯತ್ತ ವಿವಿಗಳು, ದತ್ತಾಂಶ ಶೇಖರಣಾ ಸಂಸ್ಥೆಗಳು ಎಲ್ಲವನ್ನೂ ಮೂರಾಬಟ್ಟೆ ಮಾಡಿದ ಮೋದಿ-ಶಾ ಎಂಬ ದಗಲ್ಬಾಜಿ ಜೋಡಿ ಐ.ಟಿ ಇಲಾಖೆಯನ್ನಂತೂ ಪೂರಾ ಅಧ್ವಾನಗೊಳಿಸಿಬಿಟ್ಟಿವೆ. ತಮಗಾಗದ ರಾಜಕೀಯ ವಿರೋಧಿಗಳ ಮೇಲೆ ಐಟಿ ಇಲಾಖೆಯನ್ನು ಛೂ ಬಿಡುವ ದುರ್ಮಾರ್ಗವನ್ನು ಕಂಡುಕೊಂಡರು. ಆ ಮೂಲಕವೇ ಕೆಲವು ‘ಜನಪ್ರಿಯ’ರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡರು…
ಯಡ್ಡಿ ಡೈರಿ ವಿಷಯ ಲೀಕಾದ ಮರುದಿನವೇ ‘ಕೇಂದ್ರೀಯ ನೇರ ತೆರಿಗೆ ಮಂಡಳಿ’ ಕ್ವಿಕ್ ಆಗಿ ಪ್ರತಿಕ್ರಿಯೆ ನೀಡಿ, ಅವೆಲ್ಲ ಪೇಜುಗಳು ನಕಲಿ ಎಂಬರ್ಥದಲ್ಲಿ ಧಾವಂತದ ಸ್ಟೇಟ್ಮೆಂಟ್ ಬಿಡುಗಡೆ ಮಾಡುತ್ತದೆ. ಈ 4-5 ವರ್ಷ ಐಟಿ ಇಲಾಖೆಯ ಮುಖ್ಯಸ್ಥನಾಗಿ ಬಿಜೆಪಿಗೆ ಸಕಲ ಸೇವೆ ನೀಡಿದ ಸುಶೀಲ್ ಚಂದ್ರ ಎಂಬ ಐಆರ್ಎಸ್ ಅಧಿಕಾರಿ ಈಗ ಚುನಾವಣಾ ಆಯುಕ್ತ! ಅಧಿಕಾರಿಗಳು ಬಿಜೆಪಿಯ ಸೇವೆಗೆ ಏಕೆ ಅಷ್ಟು ಧಾವಂತ ಪಡುತ್ತಾರೆ ಎಂಬುದಕ್ಕೆ ಇನ್ನೇನು ನಿದರ್ಶನ ಬೇಕು.
ಯಡ್ಡಿ-ಡಿಕೆಶಿ-ಕುಮಾರಸ್ವಾಮಿ: ಸ್ಯಾಂಪಲ್ ಐಟೆಮ್ಸ್
ಯಡಿಯೂರಪ್ಪ ಎಂಬ ಹುಂಬ ಶೂದ್ರನ ಡೈರಿ ಚಾಲಾಕಿ ಶೂದ್ರ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಸಿಗುತ್ತದೆ. ಡಿ.ಕೆ. ಶಿವಕುಮಾರ್ಗೆ ಅದನ್ನು ತಲುಪಿಸಿದ ಬ್ರಾಹ್ಮಣ ನಾಯಕ ತೆರೆಮರೆಯಲ್ಲೇ ಇರುತ್ತಾರೆ!
ಇಲ್ಲಿ ಡಿಕೆಶಿಯ ಮನೆಗೆ ಹೋಗಿ ಗುಸುಗುಸು ಮಾತಾಡುತ್ತಾರೆ. ಶೋಭಾ ಕರಂದ್ಲಾಜೆಯವರ ವಿದ್ಯುತ್, ಇಂಧನ ಖರೀದಿಯ ಅಕ್ರಮಗಳನ್ನು ಮುಚ್ಚಲು (ಅವತ್ತಿನ್ನೂ ಎಚ್ಡಿಕೆ ಜೊತೆ ಹಾವು ಮುಂಗುಸಿ ಸಂಬಂಧ ಹೊಂದಿದ್ದ) ಡಿ.ಕೆ.ಶಿವಕುಮಾರ್ ಸೀದಾ ಕುಮಾರಸ್ವಾಮಿಯ ಮನೆಗೆ ಹೋಗಿ ಸದನ ಸಮಿತಿಯ ವರದಿಗೆ ಸಹಿ ಪಡೆಯುತ್ತಾರೆ…
ದೇವದುರ್ಗದ ಐಬಿಯಲ್ಲಿ ಜೆಡಿಎಸ್ ಯುವ ಮುಖಂಡನಿಗೆ ಆಮಿಷ ಒಡ್ಡಿ ಸಿಕ್ಕಿಬಿದ್ದ ಯಡಿಯೂರಪ್ಪ ಈಗಲೂ ಆರಾಮಾಗೇ ಇದ್ದಾರೆ. ಅವರ ಆಡಿಯೋ ಕುರಿತ ಎಸಿಬಿ ತನಿಖೆ ಮಕಾಡೆ ಮಲಗಿದೆ….