Homeಅಂಕಣಗಳುಚಳಿಮಳೆಗೆ ಬಗ್ಗದ ರೈತರೂ ಮತ್ತು ಬರ ಬಿದ್ದ 56 ಅಂಗುಲದ ಎದೆಯೂ: ಉಮಾಪತಿ ಡಿ

ಚಳಿಮಳೆಗೆ ಬಗ್ಗದ ರೈತರೂ ಮತ್ತು ಬರ ಬಿದ್ದ 56 ಅಂಗುಲದ ಎದೆಯೂ: ಉಮಾಪತಿ ಡಿ

- Advertisement -
- Advertisement -

ಸಕಾಲಕ್ಕೆ ಬೀಳುವ ಮಳೆಯನ್ನು ರೈತರು ಬಗೆ ಬಗೆಯಾಗಿ ಬಣ್ಣಿಸಿ ಸಂತಸಪಡುವುದುಂಟು. ಉತ್ತರ ಭಾರತದ ಕಡೆಗೆ ಇಂತಹ ಮಳೆ ಸುರಿದರೆ ತುಪ್ಪ ಸುರಿಯಿತು, ಬಂಗಾರವೇ ಭುವಿಗಿಳಿಯಿತು ಎಂದು ಉದ್ಗರಿಸುತ್ತಾರೆ. ಹಿಂದಿ-ಪಂಜಾಬಿ ಸೀಮೆಯ ಹೊಲಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಇದೀಗ ಕಾಣುವುದು ಸಾಸಿವೆ ಪೈರಿನ ಹಳದಿ ಹೂ ವಿಸ್ತಾರ. ದಕ್ಷಿಣದವರು ಒಗ್ಗರಣೆಗೆ-ಉಪ್ಪಿನಕಾಯಿಗೆ ಮಾತ್ರವೇ ಸಾಸಿವೆ ಬಳಸಿದರೆ, ಉತ್ತರಪ್ರದೇಶ, ಬಿಹಾರ, ರಾಜಸ್ತಾನ, ಹರಿಯಾಣ, ಪಂಜಾಬ್, ದೆಹಲಿ ಮಾತ್ರವಲ್ಲದೆ ಒಡಿಶಾ ಬಂಗಾಳ ಅಸ್ಸಾಮಿನಲ್ಲಿ ಅಡುಗೆ ಎಣ್ಣೆಯಾಗಿ ಸಾಸಿವೆ ಎಣ್ಣೆಯೇ ಜನಪ್ರಿಯ. ಹೀಗಾಗಿ ಸಾಸಿವೆ ಭಾರೀ ಪ್ರಮಾಣದ ಬೆಳೆ. ಕೊರೆಯುವ ಚಳಿಯಲ್ಲಿ ಮೈಯಲ್ಲಿ ಬಿಸಿ ಹುಟ್ಟಿಸುವ ಆಹಾರ ಸಾಸಿವೆ. ಸಾಸಿವೆ ಸೊಪ್ಪನ್ನು ಅರೆದು ಮಾಡಿದ ಪಲ್ಯ ಮತ್ತು ಮುಸುಕಿನ ಜೋಳದ ರೊಟ್ಟಿ ಚಳಿಯನ್ನು ಓಡಿಸುವ ಜನಪ್ರಿಯ ಮತ್ತು ರುಚಿಕರ ಖಾದ್ಯ. ರಸ್ತೆ ಬದಿಯ ಡಾಬಾಗಳಿಂದ ಹಿಡಿದು ಪಂಚತಾರಾ ಹೋಟೆಲುಗಳೂ ಉಣಬಡಿಸುವ ಊಟ ’ಸರಸೋಂ ದಾ ಸಾಗ್- ಮಕ್ಕೀ ದೀ ರೋಟಿ’.

ಉತ್ತರ ಭಾರತದುದ್ದಗಲವನ್ನು ಶೀತ ಮಾರುತಗಳು ರಾಚಿ ಬಡಿಯತೊಡಗಿವೆ. ಇಂತಹ ಜನವರಿಯಲ್ಲಿ ಅಷ್ಟಿಷ್ಟು ಮಳೆ ಬೀಳುವುದುಂಟು. ಆದರೆ ಕಳೆದ ಮೂರು ದಿನಗಳಿಂದ ಅನಿರೀಕ್ಷಿತವಾಗಿ ದೊಡ್ಡ ಮಳೆಯೇ ಸುರಿಯತೊಡಗಿದೆ ಮತ್ತು ಸತತವಾಗಿ ಸುರಿಯತೊಡಗಿದೆ. ಮೇ-ಜೂನ್-ಜುಲೈ ತಿಂಗಳುಗಳಲ್ಲಿ ಉಗ್ರ ಉಷ್ಣಮಾರುತಗಳು ನೆಲವನ್ನು ಸುಟ್ಟು, ಕಟುವಾದ ಕರಕಲು ವಾಸನೆಯನ್ನು ಗಾಳಿಗೆ ತೂರಿ ಬೆರೆಸುತ್ತವೆ. ಇವುಗಳ ಪ್ರಕೋಪಕ್ಕೆ ಕಷ್ಟಜೀವಿಗಳು ಕಣ್ಣೀರಿಟ್ಟು ಸಾವುನೋವುಗಳು ಉಂಟಾಗುವುದು ದುರಂತ ವಾರ್ಷಿಕ ವಿಧಿ. ಚಳಿಗಾಲವೂ ಅಂತೆಯೇ. ಹಿಮಾಲಯದ ತಪ್ಪಲು ಸೀಮೆಯಲ್ಲಿ ಹಿಮ ಸುರಿಯತೊಡಗಿದರೆ ಬಯಲು ಸೀಮೆ ಗಡಗಡ ನಡುಗುತ್ತದೆ. ನಿರ್ಗತಿಕರು ರಾತ್ರಿ ವೇಳೆ ಕೈ ಕಾಯಿಸಿಕೊಳ್ಳಲು ಸರ್ಕಾರಗಳೇ ಹಾದಿಬೀದಿಗಳಲ್ಲಿ ಕಟ್ಟಿಗೆ ಉರಿಸುವ ಯೋಜನೆಗಳಿದ್ದವು.

ಕಳೆದ ಗುರುವಾರ ಶುಕ್ರವಾರ ಶೀತಮಾರುತಗಳು ಉತ್ತರದ ತಾಪಮಾನವನ್ನು ಎರಡು ಡಿಗ್ರಿಗಿಂತ ಕೆಳಗಿಳಿಸಿದ್ದವು. ಹದಿನೈದು ವರ್ಷಗಳ ದಾಖಲೆಯ ಚಳಿ. ದೆಹಲಿಯ ಗಡಿಗಳ ಹೆದ್ದಾರಿಗಳ ವಿಸ್ತಾರದಲ್ಲಿ ಆಕಾಶವನ್ನೇ ಹೊದ್ದು ಮೈ ಚಾಚಿದೆ ರೈತ ಪ್ರತಿಭಟನೆ. ಮಣ್ಣಿನ ಮಕ್ಕಳಿಗೆ ಚಳಿ ಮಳೆ ಬಿಸಿಲು ಲೆಕ್ಕವೇ ಅಲ್ಲ. ’ರಾಜ್ಯಗಳಳಿಯಲಿ, ರಾಜ್ಯಗಳುದಿಸಲಿ, ಹಾರಲಿ ಗದ್ದುಗೆ ಮುಕುಟಗಳು… ಬಿತ್ತುಳುವುದ ತಾನು ಬಿಡುವುದೆ ಇಲ್ಲ ಎಂಬ ಕವಿವಾಣಿಯ ಯೋಗಿಗಳು ರೈತರು- ಕೃಷಿ ಕಾರ್ಮಿಕರು. ಆದರೆ ಒಕ್ಕಲುತನದ ಮಳೆಗಾಳಿ ಚಳಿ ಬಿಸಿಲುಗಳ ಗೇಮೆಯ ನಂತರ ತಲೆ ಮರೆಸಿಕೊಂಡು ನಿದ್ರಿಸಲು ಸೂರೊಂದು ಇರುತ್ತದೆ. ಪ್ರತಿಭಟಿಸುತ್ತಿರುವ ರೈತರಿಗೆ ಅಂತಹ ಅನುಕೂಲವಿಲ್ಲ.

ಶೀತದೊಂದಿಗೆ ಮಳೆಯೂ ಸುರಿಯುತ್ತಿದ್ದು ಪ್ರತಿಭಟನಾನಿರತ ರೈತರ ಹಿಟ್ಟು, ಕಾಳು, ಬೇಳೆಗಳು, ಕಟ್ಟಿಗೆ-ಬೆರಣಿ ಉರುವಲುಗಳು, ಹಾಸಿಗೆ ಹೊದಿಕೆ ಬಟ್ಟೆ ಬರೆಗಳು ತೋಯ್ದು ಹೋಗಿವೆ. ದಿನಗಟ್ಟಲೆ ಸೂರ್ಯನ ದರ್ಶನವಿಲ್ಲದೆ ಮುಚ್ಚಿಕೊಂಡ ಆಗಸ. ಜಲನಿರೋಧಕ ಟೆಂಟುಗಳು, ತಾಡಪಾಲುಗಳು ಎಲ್ಲರ ಬಳಿಯೂ ಇಲ್ಲ. ಇದ್ದರೂ ಅವುಗಳಿಂದ ಚಳಿಯನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಟೆಂಟಿನೊಳಗೆ ನೆಲದ ಮೇಲೆ ನೀರು ಹರಿದು ನಿಲ್ಲುವುದನ್ನು ತಡೆಯಲಾಗುವುದಿಲ್ಲ. ಉತ್ತರದ ಚಳಿಯ ಈ ಉಪಟಳದ ತೀವ್ರತೆ ಅನುಭವಿಸಿದವರಿಗಷ್ಟೇ ತಿಳಿದೀತು.

ಅನ್ನ ಬೆಳೆಯುವ ರೈತರು-ಕೂಲಿಕಾರರು ದಿನಗಟ್ಟಲೆ ಈ ಸಂಕಟಕ್ಕೆ ಸಿಲುಕಿದ್ದಾರೆ. ಆದರೆ ಅವರಲ್ಲಿಯ ಪ್ರತಿಭಟನೆಯ ಕಾವು ತುಸುವೂ ಕುಂದಿಲ್ಲ. ವಯಸ್ಸು ಸಂದ ವೃದ್ಧರು ಮಕ್ಕಳು ಕೂಡ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವ ಸಂಘರ್ಷವಿದು. ಆತ್ಮಹತ್ಯೆಗಳೂ ಸೇರಿದಂತೆ ರೈತ ಪ್ರತಿಭಟನೆಯಲ್ಲಿ ಸಾವುಗಳು ನಿತ್ಯ ಸಂಭವಿಸುತ್ತಲೇ ಇವೆ. ಈ ಸಂಖ್ಯೆ ಐವತ್ತನ್ನು ದಾಟಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಒಕ್ಕಲುತನಕ್ಕೆ ಇಳಿದಿರುವ ಜವಾನ್-ಕಿಸಾನ್‌ರು ಕೂಡ ಈ ಪ್ರತಿಭಟನೆಯಲ್ಲಿದ್ದಾರೆ. ಜೈ ಜವಾನ್-ಜೈ ಕಿಸಾನ್ ಎಂದು ಘೋಷಣೆ ಹಾಕುವವರು ತಮ್ಮ ಕಾಮಾಲೆಗೆ ಔಷಧಿ ಸೇವಿಸಿ ಈ ಚಳವಳಿಯನ್ನು ನೋಡಬೇಕಿದೆ.

ಯೋಧರನ್ನೂ ರೈತರನ್ನೂ ಆಕಾಶದೆತ್ತರಕ್ಕೆ ಹೊಗಳುವ ದೊಡ್ಡ ವರ್ಗವೊಂದು ಈ ಚಳವಳಿಯನ್ನು ಹಳಿಯುವ ನೀಚತನಕ್ಕೆ ಇಳಿದಿದೆ. ದೇಶದ ಪ್ರಧಾನಮಂತ್ರಿಯವರ ಐವತ್ತಾರು ಅಂಗುಲದ ಭಾರೀ ಎದೆಯಲ್ಲಿ ದೆಹಲಿಯ ಗಡಿಗಳ ಬಯಲಿನಲ್ಲಿ ಬೀಡು ಬಿಟ್ಟಿರುವ ಕಿಸಾನ್- ಜವಾನ್‌ರ ಕುರಿತು ತುಸುವಾದರೂ ಪಸೆ ಕಂಡಿಲ್ಲದಿರುವುದು ಅತೀವ ವ್ಯಥೆಯ ಸಂಗತಿ. ಎಂತೆಂತಹ ವಿಷಯಗಳ ಕುರಿತು ಟ್ವೀಟ್ ಮಾಡುವ ಪ್ರಧಾನಿಯವರ ಕಲ್ಲು ಗುಂಡಿಗೆಯನ್ನು ರೈತರ ದುಮ್ಮಾನ ತಾಕಿಯೇ ಇಲ್ಲ! ಅವರು ಅಲ್ಲಿ ಚಳಿಮಳೆ ಗಾಳಿಯಲ್ಲಿ ಪಾಡುಪಡುತ್ತಿದ್ದರೆ ಇತ್ತ ಕೋಟಿನ ಮೇಲೆ ಕೋಟು ಉಟ್ಟು ಬೆಚ್ಚಗಿರುವ ದೇಶ ಆಳುವವರಿಗೆ ಮನಸು ಹೇಗೆ ಬರುತ್ತದೆಯೋ ಎಂಬುದು ಸೋಜಿಗದ ಸಂಗತಿ.

ಪ್ರತಿಭಟನಾನಿರತ ರೈತರು ಮೋದಿಯವರ ಶತ್ರುಗಳಲ್ಲ. ಅವರನ್ನು ಗದ್ದುಗೆಯಿಂದ ಇಳಿಸಬೇಕೆಂದು ಕಳೆದ ಆರು ವರ್ಷಗಳಲ್ಲಿ ಒಮ್ಮೆಯೂ ಚಕಾರ ಎತ್ತಿದವರಲ್ಲ. ಆದರೂ ಪ್ರಧಾನಿಯವರು ಅವರನ್ನು ವೈರಿಗಳಂತೆ ಕಾಣುತ್ತಿರುವುದು ದುಃಖದ ಸಂಗತಿ. ಭಾಷಣಗಳಲ್ಲಿ ರೈತನನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುವವರು ಆತ ಪ್ರತ್ಯಕ್ಷನಾಗಿ ಎದುರಾದರೆ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆಯಿದು. ’ಕಲ್ಲನಾಗರೆ ಕಂಡರೆ ಹಾಲೆರೆವರು, ಉಣ್ಣದ ಲಿಂಗಕ್ಕೆ ಬೋನವನಿಕ್ಕುವರು, ಉಣುವ ಜಂಗಮ ಬಂದರೆ ಪೋ ಪೋ ಎಂಬುವರು’ ಎಂಬ ವಚನದಂತೆ ಡಂಭಾಚಾರದ ಪರಾಕಾಷ್ಠೆಯಿದು.


ಇದನ್ನೂ ಓದಿ: ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್‍ಯಾಲಿಯ ಟ್ರೈಲರ್ ಜನವರಿ 7 ರಂದು ತೋರಿಸುತ್ತೇವೆ: ರೈತ ಒಕ್ಕೂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...