Homeಮುಖಪುಟಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ರಂಗಭೂಮಿ ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವ, ಎಚ್ಚರಿಸುವ, ತಪ್ಪುಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಸಿನಿಮಾ ತರದ ಮಾಧ್ಯಮಗಳಿಗೆ ಹೋಲಿಸಿದರೆ ಸೆನ್ಸಾರ್‌ನ ಹೇರಿಕೆ ರಂಗಭೂಮಿಗೆ ಕಡಿಮೆ. ತನಗೆ ಅನಿಸಿದ್ದನ್ನು ಹೇಳುವ, ಚರ್ಚಿಸುವ, ತೋರಿಸುವ ಅವಕಾಶವನ್ನು, ಧೈರ್ಯವನ್ನು ರಂಗಭೂಮಿ ಉಳಿಸಿಕೊಂಡು ಬಂದಿದೆ. ಅದಕ್ಕಾಗಿ ಕೆಲವು ಬಾರಿ ಬಲಿಗಳನ್ನು ಕೊಡಬೇಕಾಗಿ ಬಂದಿದೆ.

- Advertisement -
- Advertisement -

ರಂಗಭೂಮಿ ಮಾಧ್ಯಮದ ದೊಡ್ಡ ಶಕ್ತಿಯಿರುವುದು ಅದು ಜನರನ್ನು ನೇರಾನೇರ, ಜೀವಂತವಾಗಿ ಎದುರುಗೊಳ್ಳುವ ಬಗೆಯಲ್ಲಿ. ಇಂತಹ ಜೀವಂತ ಒಡನಾಟದಲ್ಲಿ ಉಂಟಾಗಬಹುದಾದ ಹಲವು ಬಗೆಯ ಕೊಳು-ಕೊಡುಗೆಗಳು, ಕಟ್ಟಿಕೊಳ್ಳುವ ದೇಶ-ಕಾಲಗಳನ್ನು ರೂಪಾಂತರಗೊಳಿಸುವ ಆಟಗಳು, ಬೇರೆ ಯಾವ ಕಲಾ ಮಾಧ್ಯಮಕ್ಕಿಂತಲೂ ರಂಗಭೂಮಿ ಮಾಧ್ಯಮಕ್ಕೆ ಅನಿವಾರ್ಯ. ಅದನ್ನು ಬಿಟ್ಟು ಆನ್ಲೈನ್ ಥಿಯೇಟರ್, ಡಿಜಿಟಲ್ ಥಿಯೇಟರ್ ರೀತಿಯ ಏನೇ ಕಸರತ್ತು ಮಾಡಿದರೂ ಅದು ’ರಂಗಭೂಮಿ’ ಅನಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹವುಗಳು ನಾವು ಈ ಕ್ಷಣ ಸುಮ್ಮನಿರಲಾದ ಜಿದ್ದಿಗೆ ರೂಪಿಸಿಕೊಂಡ ಕಳಪೆ ಮಾದರಿಗಳು. ನಾನಿಲ್ಲಿ ರಂಗಭೂಮಿ ಮಾಧ್ಯಮದ ಶುದ್ಧತೆಯ ಬಗೆಗೆ ಮಾತಾಡುತ್ತಿಲ್ಲ. (ರಂಗಭೂಮಿ ಯಾವತ್ತಿಗೂ ಶುದ್ಧತೆಯ ವಿರೋಧಿ). ಬದಲಿಗೆ ಬೇರೆ ಯಾವುದೇ ಕಲಾ ಮಾಧ್ಯಮಕ್ಕೂ ಸಾಧ್ಯವಿಲ್ಲದ ರಂಗಭೂಮಿ ಮಾಧ್ಯಮದ ನಿಜ ’ಎಸ್ಸೆನ್ಸ್’ ಕುರಿತು ಮಾತಾಡುತ್ತಿದ್ದೇನೆ.

ಮೊದಲಿನಿಂದಲೂ ರಂಗಭೂಮಿಯ ಈ ಎಸ್ಸೆನ್ಸ್‌ನ ಹುಡುಕಾಟದ ಕುರಿತು ಹಲವು ಪ್ರಯೋಗಗಳು, ಚರ್ಚೆಗಳು, ತಕರಾರುಗಳು ಇದ್ದೇ ಇವೆ. ಡಿಜಿಟಲ್ ಇಡಿಚಿದ ಆರಂಭದ ಕಾಲದಿಂದಲೂ ರಂಗಭೂಮಿ, ತಂತ್ರಜ್ಞಾನವನ್ನು ತನ್ನ ಇರುವಿಕೆಯ ಭಾಗವಾಗಿಸಿಕೊಂಡು ಬೆಳೆಯಲು ಪ್ರಯತ್ನಿಸಿದೆ. ಆದರೆ ಹೆಚ್ಚಿನ ಬಾರಿ ಈ ಪ್ರಯತ್ನಗಳಲ್ಲಿ ಸೋತಿದೆ. ಕೆಲವು ಬಾರಿ ಗಿಮಿಕ್ ಎನ್ನಿಸುವಂತಹ ರೀತಿಯಲ್ಲಿ ತಂತ್ರಜ್ಞಾನವು ಬಳಕೆಯಾಗಿ ತನ್ನ ಪ್ರಯೋಗದಲ್ಲಿ ಗೆದ್ದಿರುವ ಉದಾಹರಣೆಗಳೂ ಇವೆ. ಇಂತಹ ಪ್ರಯೋಗಗಳು ’ನಟ ಮತ್ತು ಪ್ರೇಕ್ಷಕ’ ಜೀವಂತವಾಗಿ ಎದುರುಗೊಳ್ಳುವ ಪ್ರಕ್ರಿಯೆಯನ್ನು ಮತ್ತು ಅವರು ಕೂಡಿ ಕಟ್ಟುವ ಆಟವನ್ನು re-create ಮಾಡಲು ತಿಣುಕಾಡಿ ಹೋಗಿವೆ. ಸಾಮಾನ್ಯವಾಗಿ ರಂಗಭೂಮಿಯಲ್ಲಿ ನಟ ಮತ್ತು ಪ್ರೇಕ್ಷಕರು ಒಬ್ಬರನ್ನೊಬ್ಬರು ಎದುರುಗೊಂಡು ಹಲವು ಬಗೆಯ ರೂಪಾಂತರಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ ಮತ್ತು ಈ ರೂಪಾಂತರವು ಆ ಕ್ಷಣದ ಜೀವಂತ ಒಡನಾಟವನ್ನು ಅವಲಂಬಿಸಿರುತ್ತದೆ. ಬೇರೆಲ್ಲ ಕಲಾಮಾಧ್ಯಮಗಳಿಗೆ ಹೋಲಿಸಿದರೆ ಇಲ್ಲಿ ಪ್ರೇಕ್ಷಕನ ಕ್ರಿಯಾಶೀಲ ಕೊಡುಗೆಯ ಅಗತ್ಯತೆ ಹೆಚ್ಚು. ರಂಗಭೂಮಿ ಬೇರೆ ಕಲಾಮಾಧ್ಯಮಗಳಿಗಿಂತಲೂ ಹೆಚ್ಚಾಗಿ ತನ್ನ ನೋಡುಗನನ್ನು ಸಹ ಸೃಷ್ಟಿಕಾರ ಎಂದು ನಂಬುತ್ತದೆ, ಮತ್ತದು ಸತ್ಯವೂ ಕೂಡ. ನಾಟಕದಲ್ಲಿನ ಪ್ರತಿಯೊಬ್ಬ ನಟನು ಏಕಕಾಲಕ್ಕೆ ತನ್ನ ಕಲ್ಪನಾ ಜಗತ್ತು ಮತ್ತು ಪ್ರೇಕ್ಷಕನ ಕಲ್ಪನಾ ಜಗತ್ತನ್ನು ನಂಬಿ ತನ್ನ ಸೃಜನಶೀಲ ಅಭಿವ್ಯಕ್ತಿಯನ್ನು ಸೃಜಿಸಬೇಕಾಗುತ್ತದೆ, ಕಾಣಿಸಬೇಕಾಗುತ್ತದೆ. ಈ ಕಾರಣದಿಂದಲೇ ರಂಗಭೂಮಿಯ ಮೂಲ ಅಗತ್ಯ ನಟ ಮತ್ತು ಪ್ರೇಕ್ಷಕನ ಜೀವಂತ ಒಡನಾಟದ ಹೊರತಾಗಿ ಬೇರಾವುದು ಅಲ್ಲ. ಮೂಲ ಅಗತ್ಯ ಇಷ್ಟು ಸರಳವಾದ್ದು ಮತ್ತು ಚೆಲುವಾದ್ದು. ಆದ್ದರಿಂದಲೇ ರಂಗಭೂಮಿಯು ಹರಡಿಕೊಂಡಿರುವ ವ್ಯಾಪ್ತಿ ಹೆಚ್ಚು.

ದುರಂತವೊಂದು ಅನಿರೀಕ್ಷಿತವಾಗಿ ಒದಗಿಬಂದಾಗ ಅದಕ್ಕೆ ಪ್ರತಿಕ್ರಿಯಿಸುವ ರೀತಿ ಗೊತ್ತಿಲ್ಲದೇ ಯಾವುದೇ ಜೀವಿಯಾದರೂ ಭಯ ಮತ್ತು ಆತುರದಲ್ಲಿ ಪ್ರತಿಕ್ರಿಯಿಸುವುದು ಸಹಜವಾದ್ದೇ. ಬರ, ಭೂಕಂಪ, ಸುನಾಮಿ, ಪ್ರವಾಹಗಳು ಆದಾಗ ಹೇಗೆ ಪ್ರತಿಕ್ರಿಯಿಸಬೇಕು ಹೇಗೆ ಜೀವ ಉಳಿಸಿಕೊಳ್ಳಬೇಕೆಂದು ಜನಗಳಿಗೆ ತಿಳಿದಿರುವುದಿಲ್ಲ. ಅಳಿವುಉಳಿವಿನ ಸ್ಥಿತಿ ಉಂಟಾದಾಗ ಆತುರದ ಮತ್ತು ಚಡಪಡಿಕೆ ಪ್ರತಿಕ್ರಿಯೆಗಳೆ ಹೆಚ್ಚು. ಆಗ ಇಡೀ ಸಮೂಹ ಒಂದು ರೀತಿಯ social anxiety ಗೆ ಒಳಗಾಗುತ್ತದೆ.

ರಂಗಭೂಮಿ ಸಮುದಾಯದ್ದು ಇದೇ ಬಗೆಯ ವರ್ತನೆ. ತನ್ನನ್ನು ಹೇಗಾದರೂ ಉಳಿಸಿಕೊಳ್ಳುವ ಮತ್ತು ಸುಮ್ಮನೆ ಇರಲಾರದ ಚಡಪಡಿಕೆ. ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ರಂಗಭೂಮಿಯ ಹೆಸರಿನಲ್ಲಿ ರಾಶಿ ರಾಶಿ ಡಿಜಿಟಲ್ ಮೆಟೀರಿಯಲ್ ಇಂತಹ ಸಮಯದಲ್ಲಿ, ಈ ಬಿಕ್ಕಟ್ಟಿನಲ್ಲಿ ಸೃಷ್ಟಿಯಾಯಿತು. ಇದು ರಂಗಭೂಮಿ ತನ್ನ ಮೂಲ ಎಸೆನ್ಸ್ ಇಂದ ದೂರ ನಡೆದು ತನ್ನನ್ನು ತಾನು ದುರ್ಬಲಗೊಳಿಸಿಕೊಂಡ ನಡೆ ಮತ್ತು ಜಗತ್ತಿನಾದ್ಯಂತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ತನ್ನ ರಕ್ಷಕನ ರೀತಿಯಲ್ಲಿ ಕಂಡು ಅವುಗಳೇ ತಮ್ಮ ಉಳಿವಿನ ದಾರಿ ಎಂಬಂತೆ ವರ್ತಿಸಿದ್ದು ಈ ಸಾಮಾಜಿಕ ಆತಂಕದ ಭಾಗವಾಗಿಯೇ.

ಈಗ ಕೊರೊನಾ ನಿಯಮಗಳು ಸಾಕಷ್ಟು ಸಡಿಲಗೊಂಡಿದ್ದರೂ, ಪ್ರೇಕ್ಷಕರ ಜೀವಂತ ಒಡನಾಟದಲ್ಲಿ ನಾಟಕಗಳನ್ನು ಮಾಡಲು ಸಾಧ್ಯವಿದ್ದರು ಅದರ ಕಡೆ ಗಮನ ಕೊಡದೇ ಆನ್ಲೈನ್ ಪ್ಲಾಟ್‌ಫಾರ್ಮ್, zoom ಥಿಯೇಟರ್ ತರದ ವೇದಿಕೆಗಳಲ್ಲಿ ಮುಂದುವರಿದಿರುವುದು ರಂಗಭೂಮಿಯಂತಹ ಮಾಧ್ಯಮಕ್ಕೆ ಮಾಡಬಹುದಾದ ದೊಡ್ಡ ಡ್ಯಾಮೇಜ್. ಮೊದಲೆ ಹೇಳಿದಂತೆ ರಂಗಭೂಮಿ ಮೂಲಭೂತ ಅಗತ್ಯತೇ ಬಹಳ ಸರಳ: ನಟ ಮತ್ತು ಪ್ರೇಕ್ಷಕ. ಆದ್ದರಿಂದರೇ ಅದರ ವ್ಯಾಪ್ತಿ ಹೆಚ್ಚು.

ನಾಟಕವೊಂದು ನಡೆಯಲು ಇಂತಹದ್ದೊಂದು ಜಾಗವೇ ಆಗಬೇಕೆಂದೇನಿಲ್ಲ. ಮನೆ, ಶಾಲೆ, ಬೀದಿ, ಹಳ್ಳಿಯ ಮೈದಾನ, ರಂಗಮಂದಿರಗಳು ಎಲ್ಲಿಯಾದರೂ ಸರಿ. ಪ್ರೇಕ್ಷಕ-ನಟನಿದ್ದರೆ ನಿಂತ ನೆಲವೇ ರಂಗಭೂಮಿಯಾಗುತ್ತದೆ. ಆದ್ದರಿಂದಲೇ ಮೂಲದಲ್ಲಿ ಇದೊಂದು ಸರಳ ಕಲೆ. ಎಲ್ಲರ ಕೈಗೂ ಸಿಗಬಹುದಾದ ಎಲ್ಲರನ್ನೂ ಒಳಗೊಳ್ಳಬಯಸುವ ಸಮುದಾಯದ ಕಲೆ. ಎಲ್ಲಿಯಾದರೂ ಯಾವ ಗಳಿಗೆಯಲ್ಲಾದರೂ ರಂಗಭೂಮಿಯ ಮ್ಯಾಜಿಕ್ ಘಟಿಸಬಹುದು. ಆದರೆ social anxietyಯ ಭಾಗವಾಗಿ ಹುಟ್ಟಿಕೊಂಡ ಡಿಜಿಟಲ್ ವೇದಿಕೆಗಳು ಇಂತಹ ದೈತ್ಯ ಸಾಧ್ಯತೆಯನ್ನು ಕಸಿದುಕೊಳ್ಳುವ ಅಪಾಯವಿದೆ.

ನಾವುಗಳು ಈಗ ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಾಟಕದ ಷೋಗಳನ್ನು ನಡೆಸಿದ ಮತ್ತು ನಡೆಸುತ್ತಿರುವ ಸಂಸ್ಥೆಗಳನ್ನು ಗಮನಿಸಿದರೆ ಅವೆಲ್ಲವೂ ಸರ್ಕಾರಿ ಅಥವಾ ಕಾರ್ಪೊರೆಟ್ ಅನುದಾನ ಪಡೆದ elite ಹಿನ್ನೆಲೆಯ, ರಂಗಭೂಮಿಯ inclusive ಗುಣವನ್ನು ಗಣನೆಗೆ ತೆಗೆದುಕೊಳ್ಳದ ಸಂಸ್ಥೆಗಳು. ಇಂತಹ ಸಂಸ್ಥೆಗಳು ಮತ್ತು ಅವುಗಳು ಮಾಡುವ ಎಲೀಟ್ ರಂಗಭೂಮಿ ಯಾವುದೇ ಅಡಚಣೆಯಿಲ್ಲದೆ ಮುಂದುವರಿಯುತ್ತದೆ. ಆದರೆ ದೊಡ್ಡ ಹೊಡೆತ ಬಿದ್ದಿರುವುದು ಸಾವಿರಾರು ಅಸಂಘಟಿತ ಕಲಾವಿದರುಗಳು ತಮ್ಮ ತಮ್ಮ ಊರು-ಕೇರಿಗಳಲ್ಲಿ ಹತ್ತಾರು ಜನಗಳು ಕೂಡಿ ಕಟ್ಟಿಕೊಂಡು ಆಡುತ್ತಿದ್ದ ಸಮುದಾಯ ರಂಗಭೂಮಿಗೆ. ಇದು ಹೀಗೆ ಮುಂದುವರಿದರೆ ರಂಗಭೂಮಿ ಸಮುದಾಯದ ಕಲೆ ಅನ್ನುವುದಕ್ಕೆ ಅರ್ಥವೇ ಇರುವುದಿಲ್ಲ.

ರಂಗಭೂಮಿ ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವ, ಎಚ್ಚರಿಸುವ, ತಪ್ಪುಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಸಿನಿಮಾ ತರದ ಮಾಧ್ಯಮಗಳಿಗೆ ಹೊಲೀಸಿದರೆ ಸೆನ್ಸಾರ್‌ನ ಹೇರಿಕೆ ರಂಗಭೂಮಿಗೆ ಕಡಿಮೆ. ತನಗೆ ಅನಿಸಿದ್ದನ್ನು ಹೇಳುವ, ಚರ್ಚಿಸುವ, ತೋರಿಸುವ ಅವಕಾಶವನ್ನು, ಧೈರ್ಯವನ್ನು ರಂಗಭೂಮಿ ಉಳಿಸಿಕೊಂಡು ಬಂದಿದೆ. ಅದಕ್ಕಾಗಿ ಕೆಲವು ಬಾರಿ ಬಲಿಗಳನ್ನು ಕೊಡಬೇಕಾಗಿ ಬಂದಿದೆ. (ಕೆಲವು ಸಮಯದಲ್ಲಿ ಕೆಲವು ನಾಟಕಗಳ ಮೇಲೆ ’ಸಂಸ್ಕೃತಿ’ ಉಳಿಸುವವರ ಪ್ರಾಯೋಜಿತ ದಾಳಿಗಳು ನಡೆದಿವೆ).

ಈಗ ಹೆಚ್ಚು ಹೆಚ್ಚು ಆನ್ಲೈನ್ ವೇದಿಕೆಗಳಲ್ಲಿ ರಂಗಭೂಮಿ ಚಟುವಟಿಕೆಗಳನ್ನು ನಡೆಸುವುದು ಅಲ್ಲಿ ತೋರಿಸಬಹುದಾದ, ಹೇಳಬಹುದಾದ ವಸ್ತು ವಿಷಯಗಳ ಮೇಲೆ ಅಘೋಷಿತ ಸೆನ್ಸಾರ್ ಹೇರಿಕೊಂಡಂತೆಯೇ. ಬಿಗ್‌ಬಾಸ್‌ಗಳಿಗೆ ಇವೆಲ್ಲವನ್ನು ತಮ್ಮ ಕಣ್ಗಾವಲಿನಲ್ಲಿ ಇರಿಸಿಕೊಂಡು ವಾಚ್ ಮಾಡುವುದು ಮತ್ತು ಮಾನಿಟರ್ ಮಾಡುವುದು ಸುಲಭ. ಪ್ರಭುತ್ವ ಜನಗಳ imaginationಅನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯಾವಾಗಲೂ ಜಾಲ ಹೂಡುತ್ತದೆ. ಎಲ್ಲವು ಡಿಜಿಟಲ್ ವೇದಿಕೆಗಳಲ್ಲಿ ಸಿಕ್ಕಕೂಡಲೇ ಅದನ್ನು ಸಾಧಿಸಿಕೊಳ್ಳುವುದು ಬಹಳ ಸುಲಭ. ರಂಗಭೂಮಿಯದು ಇದರ ವಿರುದ್ಧ ದಿಕ್ಕು. ತನ್ನ ಪ್ರೇಕ್ಷಕರ imaginationಅನ್ನು ವಿಸ್ತರಿಸುವ ಮತ್ತು ಆ ಮೂಲಕ ಅವರ ಯೋಚನೆ ಮತ್ತು ಅರಿವನ್ನು ವಿಸ್ತರಿಸುವುದು ರಂಗಭೂಮಿಯ ಮೂಲತತ್ವ. ಡಿಜಿಟಲ್ ಥಿಯೇಟರ್ ಪ್ರೇಕ್ಷಕರ imaginationಅನ್ನು ಮಿತಿಗೊಳಿಸುತ್ತದೆ.

ಹೆಚ್ಚಿನ ಜನರುಗಳನ್ನು ರೀಚ್ ಅಗುತ್ತದೆ ಅನ್ನುವ ಏಕೈಕ ಕಾರಣಕ್ಕೆ ಡಿಜಿಟಲ್ ಥಿಯೇಟರ್ ಪ್ಲಾಟ್‌ಫಾರ್ಮ್‌ಳನ್ನು ಈ ಕಾಲದ ಹೊಸ ಅನ್ವೇಷಣೆ ಅನ್ನುವ ರೀತಿಯಲ್ಲು ನೋಡಲಾಗುತ್ತಿದೆ. ಆದರೆ ರಂಗಭೂಮಿ ತನ್ನ ಮೂಲ ಸತುವನ್ನು ಕಳೆದುಕೊಂಡು ರೀಚ್ ಆಗುವ ಸಂಖ್ಯೆಯಲ್ಲಿ ತನ್ನ ಬೆಳವಣಿಗೆಯನ್ನು ಕಾಣುವುದಾದರೆ ಅದರಷ್ಟು ಮರುಭೂಮಿತನ ಮತ್ತೊಂದು ಇರಲಾರದು. ಇಡೀ ರಂಗಭೂಮಿ ಸಮುದಾಯ ಈಗಲಾದರೂ ವ್ಯವಧಾನದಿಂದ ಯೋಚಿಸಿ ಡಿಜಿಟಲ್ ವೇದಿಕೆಗಳಿಂದ ಬದಿಗೆ ಸರಿದು ಕಡಿಮೆ ಸಂಖ್ಯೆಯ ಪ್ರೇಕ್ಷಕರಾದರು ಅವರ ನೇರ ಭಾಗವಹಿಸುವಿಕೆಯಲ್ಲಿ ನಾಟಕಗಳನ್ನು ಆಡದೇ ಹೋದರೆ ಉಳ್ಳವರ ಹೊರತಾಗಿ ಇರುವ ಬೇರೊಂದು ದೊಡ್ಡ ಸಮೂಹವನ್ನು ಮುಟ್ಟುವುದರಿಂದ ವಂಚಿತರಾಗುತ್ತೇವೆ. ಇದು ಹೀಗೆ ಮುಂದುವರಿದರೆ ರಂಗಭೂಮಿ ಸಮುದಾಯದ ಕಲೆ ಅನ್ನುವುದಕ್ಕೆ ಅರ್ಥವೇ ಇರುವುದಿಲ್ಲ.

ಜಗತ್ತ್ತಿನಾದ್ಯಂತ ಕೊರೊನಾ ಕಾರಣದಿಂದಾಗಿ ಎಲ್ಲ ಕ್ಷೇತ್ರಗಳೂ ತಾವು ಕೆಲಸ ಮಾಡುವ ರೀತಿಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿಕೊಂಡಿವೆ ಮತ್ತು ಮಾಡಿಕೊಳ್ಳುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ಕಡೆಗೆ ಮುಖ ಮಾಡಲು ಹವಣಿಸುತ್ತಿದ್ದ ಎಲ್ಲ ಕ್ಷೇತ್ರಗಳ ದೃಷ್ಟಿ ಈಗ ಸ್ಥಳೀಯತೆ ಕಡೆಗೆ ಹೊರಳಿವೆ. ಈ ಬಗೆಯ ನೋಟವು ರಂಗಭೂಮಿಗೂ ಹೊಸ ಚಲನೆಯನ್ನು ನೀಡುವ ನೋಟವಾಗಬಹುದೇನೋ! ಸದಾ ಜಿಲ್ಲಾ ಮತ್ತು ನಗರ ಕೇಂದ್ರಿತವಾದ ಕನ್ನಡ ರಂಗಭೂಮಿ ವಲಯ ಈ ಕಾಲವನ್ನು ಒಂದು ಅವಕಾಶದಂತೆ ಬಳಸಿಕೊಂಡು ಹಳ್ಳಿ ಹಳ್ಳಗಳ ರೀತಿ ರಂಗಭೂಮಿ ಹರಿಯುವಂತೆ ರೂಪಿಸಲು ಸಾಧ್ಯವಾದರೆ ಅದು ಸಣ್ಣ ಮತ್ತು ಆಪ್ತವಾದ ರಂಗಪ್ರಯೋಗಗಳಿಗೆ ದಾರಿ ಮಾಡಿಕೊಡುತ್ತದೆ.

ಇಡಿಯ ಮನುಷ್ಯಕುಲಕ್ಕೆ ಆಪ್ತತೆಯ ಸಂವಾದಗಳು ಎಷ್ಟು ಮುಖ್ಯ ಎನ್ನುವುದನ್ನು ಕೊರೊನಾ ಕಾಲವು ಅಂಕಿ ಅಂಶಗಳ ಮೂಲಕ ನಮಗೆ ಸ್ಪಷ್ಟಪಡಿಸಿದೆ. ರಂಗಭೂಮಿ ಮಾಧ್ಯಮವು ಇದನ್ನು ಗಮನದಲ್ಲಿಟ್ಟುಕೊಂಡು ಮೆಗಾ ಪ್ರಾಜೆಕ್ಟ್‌ಗಳ ಖೆಡ್ಡಾಕ್ಕೆ ಬೀಳದೆ ಸ್ಥಳೀಯ, ಸಣ್ಣ, ಆಪ್ತ ಪ್ರಯೋಗಗಳನ್ನು ಕಟ್ಟಲು ಸಾಧ್ಯವಾದರೆ ಅದು ಈ ಕಾಲದ ಹಲವು ಒಳ ಹೊರಗಿನ ಕಾಯಿಲೆಗಳಿಗೆ ಗುಣಮುಖತೆಯ ದಾರಿ ತೋರಿಸಬಹುದು ಅನಿಸುತ್ತದೆ.

ಈ ರೀತಿಯ ಪ್ರಯೋಗಗಳು ನ್ಯೂಜಿಲ್ಯಾಂಡ್‌ನಂತಹ ದೇಶಗಳಲ್ಲಿ ಆರಂಭವಾಗಿವೆ. ಇದು ರಂಗಭೂಮಿ ಸಮುದಾಯ, ಪ್ರಜ್ಞಾವಂತ ಪ್ರೇಕ್ಷಕ ಸಮುದಾಯ ಮತ್ತು ಸಂವೇದನೆ ಇರಬಹುದಾದ ಸರಕಾರಗಳು ಒಟ್ಟೊಟ್ಟಿಗೆ ಸೇರಿ ಮಾಡಬೇಕಾದ ಕೆಲಸ. ಕೊರೊನಾದಿಂದಾಗಿ ಕಲಾವಿದರ ಬದುಕಿನಲ್ಲಿ ಉಂಟಾಗಿರುವ ಅನಿಶ್ಚಿತತೆಗೆ ಈ ಕ್ಷಣಕ್ಕೆ ಪರಿಹಾರವಂತೂ ಇಲ್ಲ. ಆದರೆ ಈಗ ನಾವು ಇಡಲಿರುವ ಹೊಸ ಬಗೆಯ ಹೆಜ್ಜೆಗಳು ನಮ್ಮೆಲ್ಲರ ಸಾಂಸ್ಕೃತಿಕ ಬದುಕನ್ನು ಮತ್ತು ಕಲಾವಿದರ ಬದುಕನ್ನು ಸಹ್ಯವಾಗಿಸುವಂತೆ ನೋಡಿಕೊಳ್ಳಬೇಕು ಇಲ್ಲದೆ ಹೋದರೆ ಮತ್ತದೇ ಹಳೆಯ ತಪ್ಪುಗಳನ್ನು ಹೊಸತಾಗಿ ಮಾಡಿದಂತಾಗುತ್ತದೆ ಅಷ್ಟೆ.

ಲಕ್ಷ್ಮಣ ಕೆ.ಪಿ

ಲಕ್ಷ್ಮಣ ಕೆ.ಪಿ
ರಂಗಕರ್ಮಿ, ನಟ. ಭಾರತ, ಸಿಂಗಾಪುರ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ನಾಟಕ ಪ್ರದರ್ಶನ ನೀಡಿರುವ ಇವರು, ಅರುಂಧತಿ ರಾಯ್ ಅವರ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಕೃತಿ ಆಧರಿತ ನಾಟಕದಲ್ಲೂ ಅಭಿನಯಿಸಿದ್ದಾರೆ.


ಇದನ್ನೂ ಓದಿ: ದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...