ರಾಜ್ಯದಲ್ಲಿ ಇನ್ನೂ ಕೊರೊನಾ ಮಾರ್ಗಸೂಚಿಗಳು ಜಾರಿಯಲ್ಲಿದೆ. ನಗರದ ಸಾರ್ವಜನಿಕ ಸ್ಥಗಳಲ್ಲಿ ಮಾಸ್ಕ್ ಹಾಕದಿದ್ದರೆ 250 ರೂ ಹಾಗೂ ಗ್ರಾಮಗಳಲ್ಲಿ 100 ರೂಗಳನ್ನು ದಂಡ ಕಟ್ಟಬೇಕಾಗುತ್ತದೆ. ಯಾವುದೆ ರೀತಿಯ ಸಭೆಯಲ್ಲಿ 200 ಕ್ಕಿಂತ ಹೆಚ್ಚಿನ ಜನ ಸೇರಬಾರದು ಎಂಬ ನಿಯಮವಿದೆ. ಆದರೆ ಈ ಮಾರ್ಗಸೂಚಿಗಳು ಕೇವಲ ಸಾಮನ್ಯರಿಗಷ್ಟೇ ಇದೆಯೆ ಎಂಬ ಪ್ರಶ್ನೆಗಳು ಕಾಡುತ್ತಿದೆ.
ಇತ್ತೀಚೆಗಷ್ಟೆ ದಿನಗೂಲಿ ಕೆಲಸ ಮಾಡುವ ಮಹಿಳೆಯಿಂದ 250 ರೂ ದಂಡವನ್ನು ಮಾರ್ಷಲ್ಗಳು ಕಟ್ಟಿಸಿಕೊಂಡಿದ್ದರು. ಒಂದು ದಿನದ ಕೂಲಿ ಕಳೆದು ಕೊಂಡ ಮಹಿಳೆಯ ರೋದನೆ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ಇದಕ್ಕೆ ಇಡೀ ರಾಜ್ಯದ ಜನರು ಮರುಗಿದ್ದರು. ದಿನದಿನವು ಕೊರೊನಾ ನಿಯಮಗಳ ಉಲ್ಲಂಘನೆ ಮಾಡಿದ್ದಾರೆಂದು ಸಾಮಾನ್ಯ ಜನರಿಂದ ಯಾವುದೆ ಕರುಣೆ ತೋರದೆ ದಂಡಗಳನ್ನು ಕಟ್ಟಿಸಲಾಗುತ್ತಿದೆ. ಆದರೆ ಈ ನಿಯಮಗಳು ರಾಜ್ಯವನ್ನು ಆಳುತ್ತಿರುವ ಬಿಜೆಪಿಯ ಸಭೆಗೋ ಅಥವಾ ಬಿಜೆಪಿ ನಾಯಕರಿಗೂ ಅನ್ವಯಿಸುವುದಿಲ್ಲ ಎಂಬ ಅಲಿಖಿತ ನಿಯಮವಿದೆ ಎನ್ನುವ ಅನುಮಾನವಿದೆ.
ಇದನ್ನೂ ನೋಡಿ: ರೈತ ಹೋರಾಟದಲ್ಲಿ ಮಾವೋವಾದಿಗಳಿಲ್ಲ ಎಂದ ಗೃಹ ಸಚಿವಾಲಯ: ಬಿಜೆಪಿ ನಾಯಕನಿಗೆ ಮುಖಭಂಗ
ಬುಧವಾರ ಬೆಂಗಳೂರಿನ ಗಾಯತ್ರಿ ವಿಹಾರ ಪ್ಯಾಲೆಸ್ ಮೈದಾನದಲ್ಲಿ ನಡೆದ ಬಿಜೆಪಿ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಎಲ್ಲಾ ರೀತಿಯ ಕೊರೊನಾ ನೀತಿ ನಿಯಮಗಳನ್ನು ತೂರಲಾಗಿತ್ತು. ಕಾರ್ಯಕ್ರಮದ ವೇದಿಕೆಯ ಮುಂಭಾಗ ಸಾವಿರಾರು ಬಿಜೆಪಿ ಕಾರ್ಯಕರ್ತರು ನೆರೆದಿದ್ದರು. ಆದರೆ ಹೆಚ್ಚಿನ ಕಾರ್ಯಕರ್ತರು ಮಾಸ್ಕ್ ಧರಿಸಿರಲಿಲ್ಲ.
ಅಲ್ಲದೆ, ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು. ಆದರೆ ಇವರಲ್ಲಿ ಹೆಚ್ಚಿನ ಜನರು ಮಾಸ್ಕ್ ಹಾಕಿರಲಿಲ್ಲ. ದೈಹಿಕ ಅಂತರ ಕಾಪಾಡಿರಲಿಲ್ಲ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿನ ಗೆಲುವು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಬೆಂಗಳೂರು ಮಹಾನಗರ ಘಟಕವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮಿಸಿದಾಗ ಮಾಸ್ಕ್ ಧರಿಸಿದ್ದರಾದರೂ, ಅವರ ಸುತ್ತ ಮುತ್ತ ಇದ್ದ ಹೆಚ್ಚಿನ ಜನರು ಮಾಸ್ಕ್ ಧರಿಸಿರುವುದೋ, ದೈಹಿಕ ಅಂತರ ಕಾಪಾಡಿರುವುದೋ ಮಾಡಿರಲಿಲ್ಲ.
ಒಟ್ಟಿನಲ್ಲಿ ರಾಜ್ಯದ ಕಾನೂನು ಕಾಯ್ದೆಗಳನ್ನು ರೂಪಿಸುವ ಮುಖ್ಯಮಂತ್ರಿಗಳು ತಾವೇ ಮಾಡಿರುವ ನಿಯಮಗಳನ್ನು ಪಾಲಿಸದೇ, ಅದನ್ನು ಧಿಕ್ಕರಿಸುವುದು ಎಷ್ಟು ಸರಿ? ಸಾಮಾನ್ಯ ಜನರನ್ನು ಅಡ್ಡಗಟ್ಟಿ ದಂಡ ಕಟ್ಟಿಸಿಕೊಳ್ಳುವ ಪೊಲೀಸರು ಬಿಜೆಪಿ ಕಾರ್ಯಕರ್ತರಿಂದ ದಂಡ ಕಟ್ಟಿಸಿಕೊಳ್ಳಲಿದ್ದಾರೆಯೇ? ಕಾದು ನೋಡಬೇಕಾಗಿದೆ.
ಇದನ್ನೂ ನೋಡಿ: ಟ್ರಂಪ್ ಪರ ಬಿಜೆಪಿಯ ಧ್ವನಿಗಳು..! ಏಕಾಏಕಿ ಅಭಿವ್ಯಕ್ತಿ ಸ್ವಾಂತಂತ್ರ್ಯದ ಜಪ..!