Homeಸಿನಿಮಾಕ್ರೀಡೆಮೊಹಮ್ಮದ್ ಸಿರಾಜ್ ಜನ್ಮದಿನ: ಸ್ಲಂನಿಂದ ಬ್ರಿಸ್ಬೇನ್‌ವರೆಗೆ ಬೆಳೆದು ಬಂದ ಕತೆ

ಮೊಹಮ್ಮದ್ ಸಿರಾಜ್ ಜನ್ಮದಿನ: ಸ್ಲಂನಿಂದ ಬ್ರಿಸ್ಬೇನ್‌ವರೆಗೆ ಬೆಳೆದು ಬಂದ ಕತೆ

ಭಾರತೀಯ ಕ್ರಿಕೆಟ್ ತಂಡದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಮೊಹಮ್ಮದ್ ಸಿರಾಜ್‌ಗೆ 27 ವರ್ಷದ ಸಂಭ್ರಮ. ಅವರು ಬೆಳೆದು ಬಂದುದರ ಕುರಿತ ಬರಹ ಇಲ್ಲಿದೆ.

- Advertisement -
- Advertisement -

ಕ್ರಿಕೆಟ್ ಅಂಗಳದಲ್ಲಿ ಮಾನವೀಯತೆ ಮೆರೆದ ಸಿರಾಜ್, ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಸಿರಾಜ್, ತಂದೆ ಅಗಲಿಕೆಯ ನೋವಲ್ಲೇ ದಾಖಲೆ ಬರೆದ ಸಿರಾಜ್, ಪಾದಾರ್ಪಣೆ ಪಂದ್ಯದಲ್ಲೇ ಶ್ರೀನಾಥ್ ದಾಖಲೆ ಮುರಿದ ಸಿರಾಜ್, ಜನಾಂಗೀಯನಿಂದನೆ ವಿರುದ್ಧ ಆಸ್ಟ್ರೇಲಿಯನ್ನರಿಗೆ ತಕ್ಕ ಉತ್ತರ ನೀಡಿದ ಸಿರಾಜ್ ಇದು ಕಳೆದ ಒಂದು ವಾರದ ಅವಧಿಯಲ್ಲಿ ಕನ್ನಡದ ವಿವಿಧ ದಿನಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕಂಡುಬಂದ ಶೀರ್ಷಿಕೆಗಳು. ಮೊಹಮ್ಮದ್ ಸಿರಾಜ್ ಎಂಬ ಯುವ ಕ್ರೀಡಾಪಟು, ಹೈದರಾಬಾದ್‌ನ ಸ್ಲಂನಲ್ಲಿ ಬೆಳೆದು, ಪಟ್ಟ ಪರಿಶ್ರಮ ಈಗ ಫಲ ಕೊಟ್ಟಿದೆ.

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಲ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಗೆಲುವು ಸಾಧಿಸುವುದಿರಲಿ ಡ್ರಾ ಸಾಧಿಸಿದರೇ ಅದೇ ಹೆಚ್ಚು ಎನ್ನಲಾಗಿತ್ತು. ಆದರೆ, 30 ವರ್ಷಗಳಿಂದ ಬ್ರಿಸ್ಬೇನ್ ಅಂಗಳದಲ್ಲಿ ಸೋಲು ಕಾಣದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅದೇ ಅಂಗಳದಲ್ಲಿ ಭಾರತ ಬಗ್ಗುಬಡಿದಿದೆ. ಈ ಮೂಲಕ 2-1 ಅಂತರದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಆ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಮುಖ ಟೆಸ್ಟ್ ಬೌಲರ್‌ಗಳಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ, ಎರಡನೇ ಟೆಸ್ಟ್ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಿತ್ತು. ತಾವಾಡಿದ ಈ ಮೊದಲ ಟೆಸ್ಟ್ ಪಂದ್ಯದಲ್ಲೇ ತಂಡದ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಭಾಗ್ಯವೂ ಅವರಿಗೆ ದಕ್ಕಿತ್ತು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಸೇರಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದರು. ಕೊನೆಯ ಪಂದ್ಯದಲ್ಲೂ 5 ವಿಕೆಟ್ ಪಡೆದು ಭಾರತದ ಭವಿಷ್ಯದ ವೇಗದ ಬೌಲರ್ ಎಂದು ಗುರುತಿಸಿಕೊಂಡಿದ್ದಾರೆ. ಇದರ ಹಿಂದಿನ ಶ್ರಮ ಅಷ್ಟೇನು ಸುಲಭದ್ದಾಗಿರಲಿಲ್ಲ.

ಸ್ಲಂನಿಂದ ಬ್ರಿಸ್ಬೇನ್‌ವರೆಗೆ

ಮೊಹಮ್ಮದ್ ಸಿರಾಜ್ ಹುಟ್ಟಿದ್ದು ಹೈದರಾಬಾದ್‌ನ ಓಲ್ಡ್ ಸಿಟಿಯ ಬೈಲೇನ್ ಎಂದು ಗುರುತಿಸುವ ಸ್ಲಂನಲ್ಲಿ. ತಂದೆ ಬಡ ಆಟೋ ಡ್ರೈವರ್. ಹೆಸರು ಮೊಹಮ್ಮದ್ ಗೌಸ್. ಓರ್ವ ಅಣ್ಣ ಮತ್ತು ತಂಗಿಯ ತುಂಬು ಕುಟುಂಬದ ಜೊತೆಗೆ ಸ್ಲಂನಲ್ಲೇ ಬಾಲ್ಯ ಕಳೆದ ಸಿರಾಜ್ ಕುಟುಂಬಕ್ಕೆ ತಂದೆಯೊಬ್ಬರ ದುಡಿಮೆಯೇ ಆಧಾರ. ತಂದೆಯ ದುಡಿಮೆ ಮನೆಯ ಖರ್ಚಿಗೆ ಸಾಲದೆ, ಊಟಕ್ಕೂ ಸಮಸ್ಯೆಯಿರುವ ಪರಿಸ್ಥಿತಿಯಲ್ಲಿ, ವಿದ್ಯಾಭ್ಯಾಸದ ಜೊತೆಗೆ ದೊಡ್ಡ ದೊಡ್ಡ ಕ್ಲಬ್‌ಗೆ ಸೇರಿ ಕ್ರಿಕೆಟ್ ಕಲಿಕೆ ಎಂಬುದು ದೂರದ ಮಾತೇ ಸರಿ.

ಆದರೆ, ಸಿರಾಜ್ ತಾನಿದ್ದ ಸ್ಲಂ ಗಲ್ಲಿಯಲ್ಲೇ ತನ್ನ ಗೆಳೆಯರ ಜೊತೆಗೆ ಕ್ರಿಕೆಟ್ ಪಟ್ಟುಗಳನ್ನು ಕಲಿಯಲು ಆರಂಭಿಸಿದ್ದ. ಆತನ ಮೊನಚಾದ ಬೌಲಿಂಗ್‌ನಲ್ಲಿನ ಕೌಶಲ್ಯ ಆತ ಮುಂದಿನ ಹಂತಕ್ಕೆ ಬೆಳೆಯುವಂತೆ ಮಾಡಿತ್ತು. ತನ್ನ ಅಣ್ಣನ ಮಾರ್ಗದರ್ಶನದಂತೆ ಹೈದರಾಬಾದ್‌ನ ಚಾರ್ ಮಿನಾರ್ ಕ್ಲಬ್‌ನಲ್ಲಿ ಡಿವಿಷನ್ ಹಂತದ ಪಂದ್ಯಗಳೊಂದಿಗೆ ಆರಂಭವಾದ ಆತನ ಕ್ರಿಕೆಟ್ ಪಯಣ ನೋಡನೋಡುತ್ತಿದ್ದಂತೆ 2015-16ನೇ ಸಾಲಿನ ರಣಜಿ ಟೂರ್ನಿಯಲ್ಲಿ ಆಂಧ್ರಪ್ರದೇಶ ತಂಡದಲ್ಲಿ ಆಡುವುದಕ್ಕೆ ಆತನಿಗೆ ಸ್ಥಾನ ದೊರಕಿಸಿಕೊಟ್ಟಿತ್ತು.

ಪಾದಾರ್ಪಣೆ ಟೂರ್ನಿಯಲ್ಲೇ ಆತ 41 ವಿಕೆಟ್ ಗಳಿಸುವ ಮೂಲಕ ಆ ಋತುವಿನಲ್ಲಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಆಶಿಶ್ ನೆಹ್ರಾ, ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಆತನ ಬೌಲಿಂಗ್ ಮತ್ತಷ್ಟು ಮಾಗಿತ್ತು. ಪರಿಣಾಮ 2017ರ ಐಪಿಎಲ್ ಋತುವಿನಲ್ಲಿ ಸನ್‌ರೈಸಸ್ ಹೈದರಾಬಾದ್ ತಂಡ ಸಿರಾಜ್‌ರನ್ನು 2.6 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಇದೇ ವರ್ಷ ಅವರು ಭಾರತೀಯ ಟಿ20 ತಂಡಕ್ಕೂ ಪಾದಾರ್ಪಣೆ ಮಾಡಿದ್ದರು. ಈ ವೇಳೆ ದಿ ಹಿಂದೂ ಪತ್ರಿಕೆಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೊಹಮ್ಮದ್ ಸಿರಾಜ್, “ಐಪಿಎಲ್ ಹಣದಿಂದ ನಾನು ಒಂದು ಮನೆಯನ್ನು ಖರೀದಿಸಿ ನನ್ನ ತಂದೆಗೆ ಉಡುಗೊರೆಯಾಗಿ ನೀಡುತ್ತೇನೆ” ಎಂದಿದ್ದರು.

ಸಿರಾಜ್ ಮೊದಲ ಸಂಪಾದನೆಯಲ್ಲಿ, ಸ್ಲಂನಿಂದ ಹೊರಬಂದು ಹೊಸ ಮನೆಗೆ ಹೋಗಿದ್ದಕ್ಕೆ, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದರೇನೋ! ಆದರೆ, ಆ ನಂತರವೂ ಸಿರಾಜ್ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಭಾಗಶಃ ಸಾಮಾಜಿಕ ಜಾಲತಾಣದಲ್ಲಿ ಆತನಷ್ಟು ಟ್ರೋಲ್‌ಗೆ ಒಳಗಾದ ಬೌಲರ್ ಮತ್ತೊಬ್ಬನಿರಲಿಕ್ಕಿಲ್ಲ.

ಟ್ರೋಲಿಗರಿಗೂ ಉತ್ತರ ನೀಡಿದ್ದ ಸಿರಾಜ್

ಸಿರಾಜ್ 2017ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಎದುರು ಐಪಿಎಲ್ ಪಾದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ 2 ವಿಕೆಟ್ ಕಬಳಿಸಿದ್ದ ಸಿರಾಜ್ 4 ಓವರ್‌ಗಳಲ್ಲಿ 38 ರನ್ ಬಿಟ್ಟುಕೊಟ್ಟಿದ್ದರು. ಆ ನಂತರ ಸತತ ಎಲ್ಲಾ ಪಂದ್ಯಗಳಲ್ಲೂ ಭಾರಿ ದುಬಾರಿಯಾಗಿ ಪರಿಣಮಿಸಿದ್ದರು. ಪರಿಣಾಮ ಹೈದರಾಬಾದ್ ತಂಡ ಆತನನ್ನು ಒಂದೇ ವರ್ಷದಲ್ಲಿ ಹೊರಹಾಕಿತ್ತು.

ಈ ವೇಳೆ 2018ರಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಹರಾಜಿನಲ್ಲಿ ಬಿಡ್ ಮಾಡಿ, ಸಿರಾಜ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಹಲವು ಪಂದ್ಯಗಳಲ್ಲಿ ಸಿರಾಜ್‌ಗೆ ಅವಕಾಶವನ್ನೂ ನೀಡಿತ್ತು. ಆದರೆ, 2018-19ರ ಋತುವಿನಲ್ಲೂ ಸಿರಾಜ್ ದುಬಾರಿಯಾಗಿ ಪರಿಣಮಿಸಿದ್ದರು. ಪರಿಣಾಮ ಭಾರತೀಯ ಟಿ20 ತಂಡದಿಂದಲೂ ಹೊರದೂಡಲ್ಪಟ್ಟರು. ಅಲ್ಲಿಗೆ ಅವರ ಕ್ರಿಕೆಟ್ ಕೆರಿಯರ್ ಮುಗಿದೇಹೋಯ್ತು ಎಂದು ಎಲ್ಲಾ ಕ್ರಿಕೆಟ್ ವಿಶ್ಲೇಷಕರೂ ಮಾತನಾಡಲಾರಂಭಿಸಿದ್ದರು. ಆದರೆ, ಆ ಒಂದು ಪಂದ್ಯ ಅವರ ಇಡೀ ಭವಿಷ್ಯವನ್ನೇ ಬದಲಿಸಿತ್ತು.

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಸಿರಾಜ್

2020ರ ಐಪಿಎಲ್ ಟೂರ್ನಿಯನ್ನು ಕೊರೊನಾ ಕಾರಣಕ್ಕೆ ಬಿಸಿಸಿಐ, ದುಬೈಗೆ ಶಿಫ್ಟ್ ಮಾಡಿತ್ತು. ಈ ಟೂರ್ನಿಯಲ್ಲೂ ಸಹ ಆರಂಭದಲ್ಲಿ ಸಿರಾಜ್‌ಗೆ ಅವಕಾಶ ಸಿಗದೆ ಬೆಂಚ್ ಕಾಯುವಂತಹ ಸ್ಥಿತಿಯೇ ಇತ್ತು. ಆದರೆ, ಕೊನೆಗೆ ಅವಕಾಶ ಸಿಕ್ಕಿ, ಆ ಒಂದು ಪಂದ್ಯದಲ್ಲಿ ಆತ ನಿರ್ಮಿಸಿದ ಅಪರೂಪದ ದಾಖಲೆ, ಆತನನ್ನು ಟ್ರೋಲ್ ಮಾಡಿದವರೂ ಸಹ ಮೆಚ್ಚುಗೆ ಸೂಚಿಸುವಂತೆ ಮಾಡಿತ್ತು.

ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ್ದ ಸಿರಾಜ್ ಕೇವಲ 8 ರನ್ ನೀಡಿ ಮಹತ್ವದ 3 ವಿಕೆಟ್ ಕಬಳಿಸಿದ್ದರು. ಅಲ್ಲದೆ ಸತತ ಎರಡು ಓವರ್‌ಗಳನ್ನು ಮೇಡನ್ ಮಾಡಿದ್ದರು. ಟಿ20 ಮಾದರಿ ಚುಟುಕು ಕ್ರಿಕೆಟ್‌ನಲ್ಲಿ ಮೇಡನ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅಲ್ಲದೆ, ಎರಡು ಓವರ್ ಮೇಡನ್ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹಿರಿಮೆಗೆ ಸಿರಾಜ್ ಪಾತ್ರರಾದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇಡೀ ಟೂರ್ನಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ಐಪಿಎಲ್ ಬೆನ್ನಿಗೆ ಆರಂಭವಾಗಲಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು.
ತಂದೆ ಅಗಲಿಕೆಯಲ್ಲೂ ದಾಖಲೆ ಬರೆದ ಸಿರಾಜ್

ಭಾರತ ಕ್ರಿಕೆಟ್ ತಂಡದ ಆಟಗಾರರು ದುಬೈನಿಂದ ಐಪಿಎಲ್ ಮುಗಿಸಿ ನೇರವಾಗಿ ಆಸ್ಟ್ರೇಲಿಯಾ ತೆರಳಿದ್ದರು. ಆದರೆ, ತಂಡ ಆಸ್ಟ್ರೇಲಿಯಾ ತೆರಳಿ ಎರಡನೇ ವಾರಕ್ಕೆ ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ ನಿಧನರಾದರು. ಸಂತಸದಲ್ಲಿದ್ದ ಸಿರಾಜ್‌ಗೆ ಈ ಸುದ್ದಿ ಬರ ಸಿಡಿಲಿನಂತೆ ಎರಗಿತ್ತು. ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಅವರಿಗೆ ಭಾರತಕ್ಕೆ ಹಿಂದಿರುಗುವ ಅವಕಾಶವನ್ನೂ ಬಿಸಿಸಿಐ ನೀಡಿತ್ತು.
ಆದರೆ, ಭಾರತಕ್ಕೆ ಹಿಂದಿರುಗಿದರೆ ಟೆಸ್ಟ್ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ ಎಂದು ಅರಿತಿದ್ದ ಸಿರಾಜ್ “ತನ್ನ ತಂದೆಯ ಕನಸಿನಂತೆ ನಾನು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿಯೇ ಭಾರತಕ್ಕೆ ಹಿಂದಿರುಗುತ್ತೇನೆ, ಅವರ ಕನಸನ್ನು ಪೂರೈಸುತ್ತೇನೆ” ಎಂದು ದೃಢ ನಿಶ್ಚಯ ಮಾಡಿದ್ದರು. ಕೊನೆಗೂ ಅದು ಕೈಗೂಡಿದೆ.

ತಂದೆಯ ಅಗಲಿಕೆಯ ನಡುವೆಯೇ ಟೆಸ್ಟ್ ಪಂದ್ಯವಾಡಿದ್ದ ಸಿರಾಜ್ ಇದೀಗ ಆಸ್ಟ್ರೇಲಿಯಾ ನೆಲದಲ್ಲೊಂದು ಅಪರೂಪದ ದಾಖಲೆ ಮಾಡಿದ್ದಾರೆ. ತಾನಾಡಿದ 3 ಟೆಸ್ಟ್‌ಗಳಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ, ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಎರಡೂ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ ಮೂರನೇ ಭಾರತೀಯ ಬೌಲರ್ ಎಂಬ ದಾಖಲೆಗೂ, ಪಾದಾರ್ಪಣೆ ಮಾಡಿದ ಸರಣಿಯೊಂದರಲ್ಲಿ, ಒಂದೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ ಭಾರತ 5ನೇ ಬೌಲರ್ ಎಂಬ ಹಿರಿಮೆಗೂ ಸಿರಾಜ್ ಪಾತ್ರರಾಗಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ಹಲವು ಸಾಧಕರಿದ್ದಾರೆ. ಎಲ್ಲಾ ಸಾಧಕರ ಯಶಸ್ಸಿನ ಹಿಂದೆಯೂ ಕಠಿಣ ಪರಿಶ್ರಮ ಇದ್ದೇ ಇರುತ್ತದೆ. ಆದರೆ, ಹೈದರಾಬಾದ್‌ನ ಸ್ಲಂನ ಕಠಿಣ ಪರಿಸರದಲ್ಲಿ, ಬಡತನದ ನಡುವೆ ಬೆಳದ ಓರ್ವ ವ್ಯಕ್ತಿ ಭಾರತೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸುವುದು ಅಷ್ಟು ಸುಲಭದ ಮಾತಲ್ಲ. ಮೊಹಮ್ಮದ್ ಸಿರಾಜ್ ಅದನ್ನು ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ತನ್ನ ತಂದೆಯ ಆಸೆಯಂತೆ ಸಾಕಾರ ಮಾಡಿ ಬೆಳೆದು ನಿಂತಿದ್ದಾರೆ. ಅಲ್ಲದೆ, ಅವರಂತಹ ಸಾವಿರಾರು ಹಿಂದುಳಿದ ಸಮುದಾಯಗಳ-ವರ್ಗಗಳ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ: 2020: ಕ್ರೀಡಾ ಕ್ಷೇತ್ರಕ್ಕೆ ಅತಿ ಹೆಚ್ಚು ಮುಳ್ಳಾದ ಕೊರೊನಾ, ಇನ್ನೂ ಸರಿಯದ ಕರಿಛಾಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...