Homeಸಿನಿಮಾಕ್ರೀಡೆಮೊಹಮ್ಮದ್ ಸಿರಾಜ್ ಜನ್ಮದಿನ: ಸ್ಲಂನಿಂದ ಬ್ರಿಸ್ಬೇನ್‌ವರೆಗೆ ಬೆಳೆದು ಬಂದ ಕತೆ

ಮೊಹಮ್ಮದ್ ಸಿರಾಜ್ ಜನ್ಮದಿನ: ಸ್ಲಂನಿಂದ ಬ್ರಿಸ್ಬೇನ್‌ವರೆಗೆ ಬೆಳೆದು ಬಂದ ಕತೆ

ಭಾರತೀಯ ಕ್ರಿಕೆಟ್ ತಂಡದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಮೊಹಮ್ಮದ್ ಸಿರಾಜ್‌ಗೆ 27 ವರ್ಷದ ಸಂಭ್ರಮ. ಅವರು ಬೆಳೆದು ಬಂದುದರ ಕುರಿತ ಬರಹ ಇಲ್ಲಿದೆ.

- Advertisement -
- Advertisement -

ಕ್ರಿಕೆಟ್ ಅಂಗಳದಲ್ಲಿ ಮಾನವೀಯತೆ ಮೆರೆದ ಸಿರಾಜ್, ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಸಿರಾಜ್, ತಂದೆ ಅಗಲಿಕೆಯ ನೋವಲ್ಲೇ ದಾಖಲೆ ಬರೆದ ಸಿರಾಜ್, ಪಾದಾರ್ಪಣೆ ಪಂದ್ಯದಲ್ಲೇ ಶ್ರೀನಾಥ್ ದಾಖಲೆ ಮುರಿದ ಸಿರಾಜ್, ಜನಾಂಗೀಯನಿಂದನೆ ವಿರುದ್ಧ ಆಸ್ಟ್ರೇಲಿಯನ್ನರಿಗೆ ತಕ್ಕ ಉತ್ತರ ನೀಡಿದ ಸಿರಾಜ್ ಇದು ಕಳೆದ ಒಂದು ವಾರದ ಅವಧಿಯಲ್ಲಿ ಕನ್ನಡದ ವಿವಿಧ ದಿನಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕಂಡುಬಂದ ಶೀರ್ಷಿಕೆಗಳು. ಮೊಹಮ್ಮದ್ ಸಿರಾಜ್ ಎಂಬ ಯುವ ಕ್ರೀಡಾಪಟು, ಹೈದರಾಬಾದ್‌ನ ಸ್ಲಂನಲ್ಲಿ ಬೆಳೆದು, ಪಟ್ಟ ಪರಿಶ್ರಮ ಈಗ ಫಲ ಕೊಟ್ಟಿದೆ.

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಲ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಗೆಲುವು ಸಾಧಿಸುವುದಿರಲಿ ಡ್ರಾ ಸಾಧಿಸಿದರೇ ಅದೇ ಹೆಚ್ಚು ಎನ್ನಲಾಗಿತ್ತು. ಆದರೆ, 30 ವರ್ಷಗಳಿಂದ ಬ್ರಿಸ್ಬೇನ್ ಅಂಗಳದಲ್ಲಿ ಸೋಲು ಕಾಣದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅದೇ ಅಂಗಳದಲ್ಲಿ ಭಾರತ ಬಗ್ಗುಬಡಿದಿದೆ. ಈ ಮೂಲಕ 2-1 ಅಂತರದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಆ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಮುಖ ಟೆಸ್ಟ್ ಬೌಲರ್‌ಗಳಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ, ಎರಡನೇ ಟೆಸ್ಟ್ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಿತ್ತು. ತಾವಾಡಿದ ಈ ಮೊದಲ ಟೆಸ್ಟ್ ಪಂದ್ಯದಲ್ಲೇ ತಂಡದ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಭಾಗ್ಯವೂ ಅವರಿಗೆ ದಕ್ಕಿತ್ತು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಸೇರಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದರು. ಕೊನೆಯ ಪಂದ್ಯದಲ್ಲೂ 5 ವಿಕೆಟ್ ಪಡೆದು ಭಾರತದ ಭವಿಷ್ಯದ ವೇಗದ ಬೌಲರ್ ಎಂದು ಗುರುತಿಸಿಕೊಂಡಿದ್ದಾರೆ. ಇದರ ಹಿಂದಿನ ಶ್ರಮ ಅಷ್ಟೇನು ಸುಲಭದ್ದಾಗಿರಲಿಲ್ಲ.

ಸ್ಲಂನಿಂದ ಬ್ರಿಸ್ಬೇನ್‌ವರೆಗೆ

ಮೊಹಮ್ಮದ್ ಸಿರಾಜ್ ಹುಟ್ಟಿದ್ದು ಹೈದರಾಬಾದ್‌ನ ಓಲ್ಡ್ ಸಿಟಿಯ ಬೈಲೇನ್ ಎಂದು ಗುರುತಿಸುವ ಸ್ಲಂನಲ್ಲಿ. ತಂದೆ ಬಡ ಆಟೋ ಡ್ರೈವರ್. ಹೆಸರು ಮೊಹಮ್ಮದ್ ಗೌಸ್. ಓರ್ವ ಅಣ್ಣ ಮತ್ತು ತಂಗಿಯ ತುಂಬು ಕುಟುಂಬದ ಜೊತೆಗೆ ಸ್ಲಂನಲ್ಲೇ ಬಾಲ್ಯ ಕಳೆದ ಸಿರಾಜ್ ಕುಟುಂಬಕ್ಕೆ ತಂದೆಯೊಬ್ಬರ ದುಡಿಮೆಯೇ ಆಧಾರ. ತಂದೆಯ ದುಡಿಮೆ ಮನೆಯ ಖರ್ಚಿಗೆ ಸಾಲದೆ, ಊಟಕ್ಕೂ ಸಮಸ್ಯೆಯಿರುವ ಪರಿಸ್ಥಿತಿಯಲ್ಲಿ, ವಿದ್ಯಾಭ್ಯಾಸದ ಜೊತೆಗೆ ದೊಡ್ಡ ದೊಡ್ಡ ಕ್ಲಬ್‌ಗೆ ಸೇರಿ ಕ್ರಿಕೆಟ್ ಕಲಿಕೆ ಎಂಬುದು ದೂರದ ಮಾತೇ ಸರಿ.

ಆದರೆ, ಸಿರಾಜ್ ತಾನಿದ್ದ ಸ್ಲಂ ಗಲ್ಲಿಯಲ್ಲೇ ತನ್ನ ಗೆಳೆಯರ ಜೊತೆಗೆ ಕ್ರಿಕೆಟ್ ಪಟ್ಟುಗಳನ್ನು ಕಲಿಯಲು ಆರಂಭಿಸಿದ್ದ. ಆತನ ಮೊನಚಾದ ಬೌಲಿಂಗ್‌ನಲ್ಲಿನ ಕೌಶಲ್ಯ ಆತ ಮುಂದಿನ ಹಂತಕ್ಕೆ ಬೆಳೆಯುವಂತೆ ಮಾಡಿತ್ತು. ತನ್ನ ಅಣ್ಣನ ಮಾರ್ಗದರ್ಶನದಂತೆ ಹೈದರಾಬಾದ್‌ನ ಚಾರ್ ಮಿನಾರ್ ಕ್ಲಬ್‌ನಲ್ಲಿ ಡಿವಿಷನ್ ಹಂತದ ಪಂದ್ಯಗಳೊಂದಿಗೆ ಆರಂಭವಾದ ಆತನ ಕ್ರಿಕೆಟ್ ಪಯಣ ನೋಡನೋಡುತ್ತಿದ್ದಂತೆ 2015-16ನೇ ಸಾಲಿನ ರಣಜಿ ಟೂರ್ನಿಯಲ್ಲಿ ಆಂಧ್ರಪ್ರದೇಶ ತಂಡದಲ್ಲಿ ಆಡುವುದಕ್ಕೆ ಆತನಿಗೆ ಸ್ಥಾನ ದೊರಕಿಸಿಕೊಟ್ಟಿತ್ತು.

ಪಾದಾರ್ಪಣೆ ಟೂರ್ನಿಯಲ್ಲೇ ಆತ 41 ವಿಕೆಟ್ ಗಳಿಸುವ ಮೂಲಕ ಆ ಋತುವಿನಲ್ಲಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಆಶಿಶ್ ನೆಹ್ರಾ, ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಆತನ ಬೌಲಿಂಗ್ ಮತ್ತಷ್ಟು ಮಾಗಿತ್ತು. ಪರಿಣಾಮ 2017ರ ಐಪಿಎಲ್ ಋತುವಿನಲ್ಲಿ ಸನ್‌ರೈಸಸ್ ಹೈದರಾಬಾದ್ ತಂಡ ಸಿರಾಜ್‌ರನ್ನು 2.6 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಇದೇ ವರ್ಷ ಅವರು ಭಾರತೀಯ ಟಿ20 ತಂಡಕ್ಕೂ ಪಾದಾರ್ಪಣೆ ಮಾಡಿದ್ದರು. ಈ ವೇಳೆ ದಿ ಹಿಂದೂ ಪತ್ರಿಕೆಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೊಹಮ್ಮದ್ ಸಿರಾಜ್, “ಐಪಿಎಲ್ ಹಣದಿಂದ ನಾನು ಒಂದು ಮನೆಯನ್ನು ಖರೀದಿಸಿ ನನ್ನ ತಂದೆಗೆ ಉಡುಗೊರೆಯಾಗಿ ನೀಡುತ್ತೇನೆ” ಎಂದಿದ್ದರು.

ಸಿರಾಜ್ ಮೊದಲ ಸಂಪಾದನೆಯಲ್ಲಿ, ಸ್ಲಂನಿಂದ ಹೊರಬಂದು ಹೊಸ ಮನೆಗೆ ಹೋಗಿದ್ದಕ್ಕೆ, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದರೇನೋ! ಆದರೆ, ಆ ನಂತರವೂ ಸಿರಾಜ್ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಭಾಗಶಃ ಸಾಮಾಜಿಕ ಜಾಲತಾಣದಲ್ಲಿ ಆತನಷ್ಟು ಟ್ರೋಲ್‌ಗೆ ಒಳಗಾದ ಬೌಲರ್ ಮತ್ತೊಬ್ಬನಿರಲಿಕ್ಕಿಲ್ಲ.

ಟ್ರೋಲಿಗರಿಗೂ ಉತ್ತರ ನೀಡಿದ್ದ ಸಿರಾಜ್

ಸಿರಾಜ್ 2017ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಎದುರು ಐಪಿಎಲ್ ಪಾದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ 2 ವಿಕೆಟ್ ಕಬಳಿಸಿದ್ದ ಸಿರಾಜ್ 4 ಓವರ್‌ಗಳಲ್ಲಿ 38 ರನ್ ಬಿಟ್ಟುಕೊಟ್ಟಿದ್ದರು. ಆ ನಂತರ ಸತತ ಎಲ್ಲಾ ಪಂದ್ಯಗಳಲ್ಲೂ ಭಾರಿ ದುಬಾರಿಯಾಗಿ ಪರಿಣಮಿಸಿದ್ದರು. ಪರಿಣಾಮ ಹೈದರಾಬಾದ್ ತಂಡ ಆತನನ್ನು ಒಂದೇ ವರ್ಷದಲ್ಲಿ ಹೊರಹಾಕಿತ್ತು.

ಈ ವೇಳೆ 2018ರಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಹರಾಜಿನಲ್ಲಿ ಬಿಡ್ ಮಾಡಿ, ಸಿರಾಜ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಹಲವು ಪಂದ್ಯಗಳಲ್ಲಿ ಸಿರಾಜ್‌ಗೆ ಅವಕಾಶವನ್ನೂ ನೀಡಿತ್ತು. ಆದರೆ, 2018-19ರ ಋತುವಿನಲ್ಲೂ ಸಿರಾಜ್ ದುಬಾರಿಯಾಗಿ ಪರಿಣಮಿಸಿದ್ದರು. ಪರಿಣಾಮ ಭಾರತೀಯ ಟಿ20 ತಂಡದಿಂದಲೂ ಹೊರದೂಡಲ್ಪಟ್ಟರು. ಅಲ್ಲಿಗೆ ಅವರ ಕ್ರಿಕೆಟ್ ಕೆರಿಯರ್ ಮುಗಿದೇಹೋಯ್ತು ಎಂದು ಎಲ್ಲಾ ಕ್ರಿಕೆಟ್ ವಿಶ್ಲೇಷಕರೂ ಮಾತನಾಡಲಾರಂಭಿಸಿದ್ದರು. ಆದರೆ, ಆ ಒಂದು ಪಂದ್ಯ ಅವರ ಇಡೀ ಭವಿಷ್ಯವನ್ನೇ ಬದಲಿಸಿತ್ತು.

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಸಿರಾಜ್

2020ರ ಐಪಿಎಲ್ ಟೂರ್ನಿಯನ್ನು ಕೊರೊನಾ ಕಾರಣಕ್ಕೆ ಬಿಸಿಸಿಐ, ದುಬೈಗೆ ಶಿಫ್ಟ್ ಮಾಡಿತ್ತು. ಈ ಟೂರ್ನಿಯಲ್ಲೂ ಸಹ ಆರಂಭದಲ್ಲಿ ಸಿರಾಜ್‌ಗೆ ಅವಕಾಶ ಸಿಗದೆ ಬೆಂಚ್ ಕಾಯುವಂತಹ ಸ್ಥಿತಿಯೇ ಇತ್ತು. ಆದರೆ, ಕೊನೆಗೆ ಅವಕಾಶ ಸಿಕ್ಕಿ, ಆ ಒಂದು ಪಂದ್ಯದಲ್ಲಿ ಆತ ನಿರ್ಮಿಸಿದ ಅಪರೂಪದ ದಾಖಲೆ, ಆತನನ್ನು ಟ್ರೋಲ್ ಮಾಡಿದವರೂ ಸಹ ಮೆಚ್ಚುಗೆ ಸೂಚಿಸುವಂತೆ ಮಾಡಿತ್ತು.

ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ್ದ ಸಿರಾಜ್ ಕೇವಲ 8 ರನ್ ನೀಡಿ ಮಹತ್ವದ 3 ವಿಕೆಟ್ ಕಬಳಿಸಿದ್ದರು. ಅಲ್ಲದೆ ಸತತ ಎರಡು ಓವರ್‌ಗಳನ್ನು ಮೇಡನ್ ಮಾಡಿದ್ದರು. ಟಿ20 ಮಾದರಿ ಚುಟುಕು ಕ್ರಿಕೆಟ್‌ನಲ್ಲಿ ಮೇಡನ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅಲ್ಲದೆ, ಎರಡು ಓವರ್ ಮೇಡನ್ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹಿರಿಮೆಗೆ ಸಿರಾಜ್ ಪಾತ್ರರಾದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇಡೀ ಟೂರ್ನಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ಐಪಿಎಲ್ ಬೆನ್ನಿಗೆ ಆರಂಭವಾಗಲಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು.
ತಂದೆ ಅಗಲಿಕೆಯಲ್ಲೂ ದಾಖಲೆ ಬರೆದ ಸಿರಾಜ್

ಭಾರತ ಕ್ರಿಕೆಟ್ ತಂಡದ ಆಟಗಾರರು ದುಬೈನಿಂದ ಐಪಿಎಲ್ ಮುಗಿಸಿ ನೇರವಾಗಿ ಆಸ್ಟ್ರೇಲಿಯಾ ತೆರಳಿದ್ದರು. ಆದರೆ, ತಂಡ ಆಸ್ಟ್ರೇಲಿಯಾ ತೆರಳಿ ಎರಡನೇ ವಾರಕ್ಕೆ ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ ನಿಧನರಾದರು. ಸಂತಸದಲ್ಲಿದ್ದ ಸಿರಾಜ್‌ಗೆ ಈ ಸುದ್ದಿ ಬರ ಸಿಡಿಲಿನಂತೆ ಎರಗಿತ್ತು. ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಅವರಿಗೆ ಭಾರತಕ್ಕೆ ಹಿಂದಿರುಗುವ ಅವಕಾಶವನ್ನೂ ಬಿಸಿಸಿಐ ನೀಡಿತ್ತು.
ಆದರೆ, ಭಾರತಕ್ಕೆ ಹಿಂದಿರುಗಿದರೆ ಟೆಸ್ಟ್ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ ಎಂದು ಅರಿತಿದ್ದ ಸಿರಾಜ್ “ತನ್ನ ತಂದೆಯ ಕನಸಿನಂತೆ ನಾನು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿಯೇ ಭಾರತಕ್ಕೆ ಹಿಂದಿರುಗುತ್ತೇನೆ, ಅವರ ಕನಸನ್ನು ಪೂರೈಸುತ್ತೇನೆ” ಎಂದು ದೃಢ ನಿಶ್ಚಯ ಮಾಡಿದ್ದರು. ಕೊನೆಗೂ ಅದು ಕೈಗೂಡಿದೆ.

ತಂದೆಯ ಅಗಲಿಕೆಯ ನಡುವೆಯೇ ಟೆಸ್ಟ್ ಪಂದ್ಯವಾಡಿದ್ದ ಸಿರಾಜ್ ಇದೀಗ ಆಸ್ಟ್ರೇಲಿಯಾ ನೆಲದಲ್ಲೊಂದು ಅಪರೂಪದ ದಾಖಲೆ ಮಾಡಿದ್ದಾರೆ. ತಾನಾಡಿದ 3 ಟೆಸ್ಟ್‌ಗಳಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ, ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಎರಡೂ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ ಮೂರನೇ ಭಾರತೀಯ ಬೌಲರ್ ಎಂಬ ದಾಖಲೆಗೂ, ಪಾದಾರ್ಪಣೆ ಮಾಡಿದ ಸರಣಿಯೊಂದರಲ್ಲಿ, ಒಂದೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ ಭಾರತ 5ನೇ ಬೌಲರ್ ಎಂಬ ಹಿರಿಮೆಗೂ ಸಿರಾಜ್ ಪಾತ್ರರಾಗಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ಹಲವು ಸಾಧಕರಿದ್ದಾರೆ. ಎಲ್ಲಾ ಸಾಧಕರ ಯಶಸ್ಸಿನ ಹಿಂದೆಯೂ ಕಠಿಣ ಪರಿಶ್ರಮ ಇದ್ದೇ ಇರುತ್ತದೆ. ಆದರೆ, ಹೈದರಾಬಾದ್‌ನ ಸ್ಲಂನ ಕಠಿಣ ಪರಿಸರದಲ್ಲಿ, ಬಡತನದ ನಡುವೆ ಬೆಳದ ಓರ್ವ ವ್ಯಕ್ತಿ ಭಾರತೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸುವುದು ಅಷ್ಟು ಸುಲಭದ ಮಾತಲ್ಲ. ಮೊಹಮ್ಮದ್ ಸಿರಾಜ್ ಅದನ್ನು ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ತನ್ನ ತಂದೆಯ ಆಸೆಯಂತೆ ಸಾಕಾರ ಮಾಡಿ ಬೆಳೆದು ನಿಂತಿದ್ದಾರೆ. ಅಲ್ಲದೆ, ಅವರಂತಹ ಸಾವಿರಾರು ಹಿಂದುಳಿದ ಸಮುದಾಯಗಳ-ವರ್ಗಗಳ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ: 2020: ಕ್ರೀಡಾ ಕ್ಷೇತ್ರಕ್ಕೆ ಅತಿ ಹೆಚ್ಚು ಮುಳ್ಳಾದ ಕೊರೊನಾ, ಇನ್ನೂ ಸರಿಯದ ಕರಿಛಾಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...