Homeಸಿನಿಮಾಕ್ರೀಡೆಮೊಹಮ್ಮದ್ ಸಿರಾಜ್ ಜನ್ಮದಿನ: ಸ್ಲಂನಿಂದ ಬ್ರಿಸ್ಬೇನ್‌ವರೆಗೆ ಬೆಳೆದು ಬಂದ ಕತೆ

ಮೊಹಮ್ಮದ್ ಸಿರಾಜ್ ಜನ್ಮದಿನ: ಸ್ಲಂನಿಂದ ಬ್ರಿಸ್ಬೇನ್‌ವರೆಗೆ ಬೆಳೆದು ಬಂದ ಕತೆ

ಭಾರತೀಯ ಕ್ರಿಕೆಟ್ ತಂಡದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಮೊಹಮ್ಮದ್ ಸಿರಾಜ್‌ಗೆ 27 ವರ್ಷದ ಸಂಭ್ರಮ. ಅವರು ಬೆಳೆದು ಬಂದುದರ ಕುರಿತ ಬರಹ ಇಲ್ಲಿದೆ.

- Advertisement -
- Advertisement -

ಕ್ರಿಕೆಟ್ ಅಂಗಳದಲ್ಲಿ ಮಾನವೀಯತೆ ಮೆರೆದ ಸಿರಾಜ್, ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಸಿರಾಜ್, ತಂದೆ ಅಗಲಿಕೆಯ ನೋವಲ್ಲೇ ದಾಖಲೆ ಬರೆದ ಸಿರಾಜ್, ಪಾದಾರ್ಪಣೆ ಪಂದ್ಯದಲ್ಲೇ ಶ್ರೀನಾಥ್ ದಾಖಲೆ ಮುರಿದ ಸಿರಾಜ್, ಜನಾಂಗೀಯನಿಂದನೆ ವಿರುದ್ಧ ಆಸ್ಟ್ರೇಲಿಯನ್ನರಿಗೆ ತಕ್ಕ ಉತ್ತರ ನೀಡಿದ ಸಿರಾಜ್ ಇದು ಕಳೆದ ಒಂದು ವಾರದ ಅವಧಿಯಲ್ಲಿ ಕನ್ನಡದ ವಿವಿಧ ದಿನಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕಂಡುಬಂದ ಶೀರ್ಷಿಕೆಗಳು. ಮೊಹಮ್ಮದ್ ಸಿರಾಜ್ ಎಂಬ ಯುವ ಕ್ರೀಡಾಪಟು, ಹೈದರಾಬಾದ್‌ನ ಸ್ಲಂನಲ್ಲಿ ಬೆಳೆದು, ಪಟ್ಟ ಪರಿಶ್ರಮ ಈಗ ಫಲ ಕೊಟ್ಟಿದೆ.

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಲ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಗೆಲುವು ಸಾಧಿಸುವುದಿರಲಿ ಡ್ರಾ ಸಾಧಿಸಿದರೇ ಅದೇ ಹೆಚ್ಚು ಎನ್ನಲಾಗಿತ್ತು. ಆದರೆ, 30 ವರ್ಷಗಳಿಂದ ಬ್ರಿಸ್ಬೇನ್ ಅಂಗಳದಲ್ಲಿ ಸೋಲು ಕಾಣದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅದೇ ಅಂಗಳದಲ್ಲಿ ಭಾರತ ಬಗ್ಗುಬಡಿದಿದೆ. ಈ ಮೂಲಕ 2-1 ಅಂತರದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಆ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಮುಖ ಟೆಸ್ಟ್ ಬೌಲರ್‌ಗಳಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ, ಎರಡನೇ ಟೆಸ್ಟ್ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಿತ್ತು. ತಾವಾಡಿದ ಈ ಮೊದಲ ಟೆಸ್ಟ್ ಪಂದ್ಯದಲ್ಲೇ ತಂಡದ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಭಾಗ್ಯವೂ ಅವರಿಗೆ ದಕ್ಕಿತ್ತು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಸೇರಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದರು. ಕೊನೆಯ ಪಂದ್ಯದಲ್ಲೂ 5 ವಿಕೆಟ್ ಪಡೆದು ಭಾರತದ ಭವಿಷ್ಯದ ವೇಗದ ಬೌಲರ್ ಎಂದು ಗುರುತಿಸಿಕೊಂಡಿದ್ದಾರೆ. ಇದರ ಹಿಂದಿನ ಶ್ರಮ ಅಷ್ಟೇನು ಸುಲಭದ್ದಾಗಿರಲಿಲ್ಲ.

ಸ್ಲಂನಿಂದ ಬ್ರಿಸ್ಬೇನ್‌ವರೆಗೆ

ಮೊಹಮ್ಮದ್ ಸಿರಾಜ್ ಹುಟ್ಟಿದ್ದು ಹೈದರಾಬಾದ್‌ನ ಓಲ್ಡ್ ಸಿಟಿಯ ಬೈಲೇನ್ ಎಂದು ಗುರುತಿಸುವ ಸ್ಲಂನಲ್ಲಿ. ತಂದೆ ಬಡ ಆಟೋ ಡ್ರೈವರ್. ಹೆಸರು ಮೊಹಮ್ಮದ್ ಗೌಸ್. ಓರ್ವ ಅಣ್ಣ ಮತ್ತು ತಂಗಿಯ ತುಂಬು ಕುಟುಂಬದ ಜೊತೆಗೆ ಸ್ಲಂನಲ್ಲೇ ಬಾಲ್ಯ ಕಳೆದ ಸಿರಾಜ್ ಕುಟುಂಬಕ್ಕೆ ತಂದೆಯೊಬ್ಬರ ದುಡಿಮೆಯೇ ಆಧಾರ. ತಂದೆಯ ದುಡಿಮೆ ಮನೆಯ ಖರ್ಚಿಗೆ ಸಾಲದೆ, ಊಟಕ್ಕೂ ಸಮಸ್ಯೆಯಿರುವ ಪರಿಸ್ಥಿತಿಯಲ್ಲಿ, ವಿದ್ಯಾಭ್ಯಾಸದ ಜೊತೆಗೆ ದೊಡ್ಡ ದೊಡ್ಡ ಕ್ಲಬ್‌ಗೆ ಸೇರಿ ಕ್ರಿಕೆಟ್ ಕಲಿಕೆ ಎಂಬುದು ದೂರದ ಮಾತೇ ಸರಿ.

ಆದರೆ, ಸಿರಾಜ್ ತಾನಿದ್ದ ಸ್ಲಂ ಗಲ್ಲಿಯಲ್ಲೇ ತನ್ನ ಗೆಳೆಯರ ಜೊತೆಗೆ ಕ್ರಿಕೆಟ್ ಪಟ್ಟುಗಳನ್ನು ಕಲಿಯಲು ಆರಂಭಿಸಿದ್ದ. ಆತನ ಮೊನಚಾದ ಬೌಲಿಂಗ್‌ನಲ್ಲಿನ ಕೌಶಲ್ಯ ಆತ ಮುಂದಿನ ಹಂತಕ್ಕೆ ಬೆಳೆಯುವಂತೆ ಮಾಡಿತ್ತು. ತನ್ನ ಅಣ್ಣನ ಮಾರ್ಗದರ್ಶನದಂತೆ ಹೈದರಾಬಾದ್‌ನ ಚಾರ್ ಮಿನಾರ್ ಕ್ಲಬ್‌ನಲ್ಲಿ ಡಿವಿಷನ್ ಹಂತದ ಪಂದ್ಯಗಳೊಂದಿಗೆ ಆರಂಭವಾದ ಆತನ ಕ್ರಿಕೆಟ್ ಪಯಣ ನೋಡನೋಡುತ್ತಿದ್ದಂತೆ 2015-16ನೇ ಸಾಲಿನ ರಣಜಿ ಟೂರ್ನಿಯಲ್ಲಿ ಆಂಧ್ರಪ್ರದೇಶ ತಂಡದಲ್ಲಿ ಆಡುವುದಕ್ಕೆ ಆತನಿಗೆ ಸ್ಥಾನ ದೊರಕಿಸಿಕೊಟ್ಟಿತ್ತು.

ಪಾದಾರ್ಪಣೆ ಟೂರ್ನಿಯಲ್ಲೇ ಆತ 41 ವಿಕೆಟ್ ಗಳಿಸುವ ಮೂಲಕ ಆ ಋತುವಿನಲ್ಲಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಆಶಿಶ್ ನೆಹ್ರಾ, ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಆತನ ಬೌಲಿಂಗ್ ಮತ್ತಷ್ಟು ಮಾಗಿತ್ತು. ಪರಿಣಾಮ 2017ರ ಐಪಿಎಲ್ ಋತುವಿನಲ್ಲಿ ಸನ್‌ರೈಸಸ್ ಹೈದರಾಬಾದ್ ತಂಡ ಸಿರಾಜ್‌ರನ್ನು 2.6 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಇದೇ ವರ್ಷ ಅವರು ಭಾರತೀಯ ಟಿ20 ತಂಡಕ್ಕೂ ಪಾದಾರ್ಪಣೆ ಮಾಡಿದ್ದರು. ಈ ವೇಳೆ ದಿ ಹಿಂದೂ ಪತ್ರಿಕೆಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೊಹಮ್ಮದ್ ಸಿರಾಜ್, “ಐಪಿಎಲ್ ಹಣದಿಂದ ನಾನು ಒಂದು ಮನೆಯನ್ನು ಖರೀದಿಸಿ ನನ್ನ ತಂದೆಗೆ ಉಡುಗೊರೆಯಾಗಿ ನೀಡುತ್ತೇನೆ” ಎಂದಿದ್ದರು.

ಸಿರಾಜ್ ಮೊದಲ ಸಂಪಾದನೆಯಲ್ಲಿ, ಸ್ಲಂನಿಂದ ಹೊರಬಂದು ಹೊಸ ಮನೆಗೆ ಹೋಗಿದ್ದಕ್ಕೆ, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದರೇನೋ! ಆದರೆ, ಆ ನಂತರವೂ ಸಿರಾಜ್ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಭಾಗಶಃ ಸಾಮಾಜಿಕ ಜಾಲತಾಣದಲ್ಲಿ ಆತನಷ್ಟು ಟ್ರೋಲ್‌ಗೆ ಒಳಗಾದ ಬೌಲರ್ ಮತ್ತೊಬ್ಬನಿರಲಿಕ್ಕಿಲ್ಲ.

ಟ್ರೋಲಿಗರಿಗೂ ಉತ್ತರ ನೀಡಿದ್ದ ಸಿರಾಜ್

ಸಿರಾಜ್ 2017ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಎದುರು ಐಪಿಎಲ್ ಪಾದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ 2 ವಿಕೆಟ್ ಕಬಳಿಸಿದ್ದ ಸಿರಾಜ್ 4 ಓವರ್‌ಗಳಲ್ಲಿ 38 ರನ್ ಬಿಟ್ಟುಕೊಟ್ಟಿದ್ದರು. ಆ ನಂತರ ಸತತ ಎಲ್ಲಾ ಪಂದ್ಯಗಳಲ್ಲೂ ಭಾರಿ ದುಬಾರಿಯಾಗಿ ಪರಿಣಮಿಸಿದ್ದರು. ಪರಿಣಾಮ ಹೈದರಾಬಾದ್ ತಂಡ ಆತನನ್ನು ಒಂದೇ ವರ್ಷದಲ್ಲಿ ಹೊರಹಾಕಿತ್ತು.

ಈ ವೇಳೆ 2018ರಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಹರಾಜಿನಲ್ಲಿ ಬಿಡ್ ಮಾಡಿ, ಸಿರಾಜ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಹಲವು ಪಂದ್ಯಗಳಲ್ಲಿ ಸಿರಾಜ್‌ಗೆ ಅವಕಾಶವನ್ನೂ ನೀಡಿತ್ತು. ಆದರೆ, 2018-19ರ ಋತುವಿನಲ್ಲೂ ಸಿರಾಜ್ ದುಬಾರಿಯಾಗಿ ಪರಿಣಮಿಸಿದ್ದರು. ಪರಿಣಾಮ ಭಾರತೀಯ ಟಿ20 ತಂಡದಿಂದಲೂ ಹೊರದೂಡಲ್ಪಟ್ಟರು. ಅಲ್ಲಿಗೆ ಅವರ ಕ್ರಿಕೆಟ್ ಕೆರಿಯರ್ ಮುಗಿದೇಹೋಯ್ತು ಎಂದು ಎಲ್ಲಾ ಕ್ರಿಕೆಟ್ ವಿಶ್ಲೇಷಕರೂ ಮಾತನಾಡಲಾರಂಭಿಸಿದ್ದರು. ಆದರೆ, ಆ ಒಂದು ಪಂದ್ಯ ಅವರ ಇಡೀ ಭವಿಷ್ಯವನ್ನೇ ಬದಲಿಸಿತ್ತು.

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಸಿರಾಜ್

2020ರ ಐಪಿಎಲ್ ಟೂರ್ನಿಯನ್ನು ಕೊರೊನಾ ಕಾರಣಕ್ಕೆ ಬಿಸಿಸಿಐ, ದುಬೈಗೆ ಶಿಫ್ಟ್ ಮಾಡಿತ್ತು. ಈ ಟೂರ್ನಿಯಲ್ಲೂ ಸಹ ಆರಂಭದಲ್ಲಿ ಸಿರಾಜ್‌ಗೆ ಅವಕಾಶ ಸಿಗದೆ ಬೆಂಚ್ ಕಾಯುವಂತಹ ಸ್ಥಿತಿಯೇ ಇತ್ತು. ಆದರೆ, ಕೊನೆಗೆ ಅವಕಾಶ ಸಿಕ್ಕಿ, ಆ ಒಂದು ಪಂದ್ಯದಲ್ಲಿ ಆತ ನಿರ್ಮಿಸಿದ ಅಪರೂಪದ ದಾಖಲೆ, ಆತನನ್ನು ಟ್ರೋಲ್ ಮಾಡಿದವರೂ ಸಹ ಮೆಚ್ಚುಗೆ ಸೂಚಿಸುವಂತೆ ಮಾಡಿತ್ತು.

ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ್ದ ಸಿರಾಜ್ ಕೇವಲ 8 ರನ್ ನೀಡಿ ಮಹತ್ವದ 3 ವಿಕೆಟ್ ಕಬಳಿಸಿದ್ದರು. ಅಲ್ಲದೆ ಸತತ ಎರಡು ಓವರ್‌ಗಳನ್ನು ಮೇಡನ್ ಮಾಡಿದ್ದರು. ಟಿ20 ಮಾದರಿ ಚುಟುಕು ಕ್ರಿಕೆಟ್‌ನಲ್ಲಿ ಮೇಡನ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅಲ್ಲದೆ, ಎರಡು ಓವರ್ ಮೇಡನ್ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹಿರಿಮೆಗೆ ಸಿರಾಜ್ ಪಾತ್ರರಾದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಇಡೀ ಟೂರ್ನಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ಐಪಿಎಲ್ ಬೆನ್ನಿಗೆ ಆರಂಭವಾಗಲಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು.
ತಂದೆ ಅಗಲಿಕೆಯಲ್ಲೂ ದಾಖಲೆ ಬರೆದ ಸಿರಾಜ್

ಭಾರತ ಕ್ರಿಕೆಟ್ ತಂಡದ ಆಟಗಾರರು ದುಬೈನಿಂದ ಐಪಿಎಲ್ ಮುಗಿಸಿ ನೇರವಾಗಿ ಆಸ್ಟ್ರೇಲಿಯಾ ತೆರಳಿದ್ದರು. ಆದರೆ, ತಂಡ ಆಸ್ಟ್ರೇಲಿಯಾ ತೆರಳಿ ಎರಡನೇ ವಾರಕ್ಕೆ ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ ನಿಧನರಾದರು. ಸಂತಸದಲ್ಲಿದ್ದ ಸಿರಾಜ್‌ಗೆ ಈ ಸುದ್ದಿ ಬರ ಸಿಡಿಲಿನಂತೆ ಎರಗಿತ್ತು. ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಅವರಿಗೆ ಭಾರತಕ್ಕೆ ಹಿಂದಿರುಗುವ ಅವಕಾಶವನ್ನೂ ಬಿಸಿಸಿಐ ನೀಡಿತ್ತು.
ಆದರೆ, ಭಾರತಕ್ಕೆ ಹಿಂದಿರುಗಿದರೆ ಟೆಸ್ಟ್ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ ಎಂದು ಅರಿತಿದ್ದ ಸಿರಾಜ್ “ತನ್ನ ತಂದೆಯ ಕನಸಿನಂತೆ ನಾನು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿಯೇ ಭಾರತಕ್ಕೆ ಹಿಂದಿರುಗುತ್ತೇನೆ, ಅವರ ಕನಸನ್ನು ಪೂರೈಸುತ್ತೇನೆ” ಎಂದು ದೃಢ ನಿಶ್ಚಯ ಮಾಡಿದ್ದರು. ಕೊನೆಗೂ ಅದು ಕೈಗೂಡಿದೆ.

ತಂದೆಯ ಅಗಲಿಕೆಯ ನಡುವೆಯೇ ಟೆಸ್ಟ್ ಪಂದ್ಯವಾಡಿದ್ದ ಸಿರಾಜ್ ಇದೀಗ ಆಸ್ಟ್ರೇಲಿಯಾ ನೆಲದಲ್ಲೊಂದು ಅಪರೂಪದ ದಾಖಲೆ ಮಾಡಿದ್ದಾರೆ. ತಾನಾಡಿದ 3 ಟೆಸ್ಟ್‌ಗಳಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ, ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಎರಡೂ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ ಮೂರನೇ ಭಾರತೀಯ ಬೌಲರ್ ಎಂಬ ದಾಖಲೆಗೂ, ಪಾದಾರ್ಪಣೆ ಮಾಡಿದ ಸರಣಿಯೊಂದರಲ್ಲಿ, ಒಂದೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ ಭಾರತ 5ನೇ ಬೌಲರ್ ಎಂಬ ಹಿರಿಮೆಗೂ ಸಿರಾಜ್ ಪಾತ್ರರಾಗಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ಹಲವು ಸಾಧಕರಿದ್ದಾರೆ. ಎಲ್ಲಾ ಸಾಧಕರ ಯಶಸ್ಸಿನ ಹಿಂದೆಯೂ ಕಠಿಣ ಪರಿಶ್ರಮ ಇದ್ದೇ ಇರುತ್ತದೆ. ಆದರೆ, ಹೈದರಾಬಾದ್‌ನ ಸ್ಲಂನ ಕಠಿಣ ಪರಿಸರದಲ್ಲಿ, ಬಡತನದ ನಡುವೆ ಬೆಳದ ಓರ್ವ ವ್ಯಕ್ತಿ ಭಾರತೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸುವುದು ಅಷ್ಟು ಸುಲಭದ ಮಾತಲ್ಲ. ಮೊಹಮ್ಮದ್ ಸಿರಾಜ್ ಅದನ್ನು ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ತನ್ನ ತಂದೆಯ ಆಸೆಯಂತೆ ಸಾಕಾರ ಮಾಡಿ ಬೆಳೆದು ನಿಂತಿದ್ದಾರೆ. ಅಲ್ಲದೆ, ಅವರಂತಹ ಸಾವಿರಾರು ಹಿಂದುಳಿದ ಸಮುದಾಯಗಳ-ವರ್ಗಗಳ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ: 2020: ಕ್ರೀಡಾ ಕ್ಷೇತ್ರಕ್ಕೆ ಅತಿ ಹೆಚ್ಚು ಮುಳ್ಳಾದ ಕೊರೊನಾ, ಇನ್ನೂ ಸರಿಯದ ಕರಿಛಾಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...