ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಗಣರಾಜ್ಯೋತ್ಸವದಂದು ನಡೆಸಲು ಉದ್ದೇಶಿಸಿರುವ ಬೃಹತ್ ಟ್ರ್ಯಾಕ್ಟರ್ ರ್ಯಾಲಿಗೆ ದೆಹಲಿ ಪೊಲೀಸರಿಂದ ಲಿಖಿತ ಅನುಮತಿ ಕೋರಿದ್ದಾರೆ. ದೆಹಲಿಯಾದ್ಯಂತ ಸುತ್ತುವರೆದಿರುವ ರಿಂಗ್ ರಸ್ತೆಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಲಕ್ಷಾಂತರ ಹೆಚ್ಚು ಟ್ರಾಕ್ಟರುಗಳು ಭಾಗವಹಿಸಲಿವೆ ಎನ್ನಲಾಗಿದೆ.
ದೆಹಲಿಯ ರಾಜ್ಪಾತ್ನಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ಗೆ ತಮ್ಮ ರ್ಯಾಲಿಯು ಅಡ್ಡಿಯಾಗುವುದಿಲ್ಲ ಎಂದು ರೈತರು ಈಗಾಗಲೇ ಹೇಳಿದ್ದಾರೆ. ಇಂದು ನಡೆಯುವ ಸಭೆಯ ನಂತರ ಪೊಲೀಸರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗೆದ್ದ ಅನ್ನದಾತನ ಹಠ: ಟ್ರಾಕ್ಟರ್ ರ್ಯಾಲಿಗೆ ದೆಹಲಿ ಪೊಲೀಸರು ಹೇಳಿದ್ದೇನು?
ಉದ್ದೇಶಿತ ರ್ಯಾಲಿಗೆ ತಾವು ಪೊಲೀಸ್ ಅನುಮತಿ ಪಡೆದಿದ್ದೇವೆ ಎಂದು ಶನಿವಾರ ರೈತರು ಹೇಳಿಕೊಂಡಿದ್ದರು. ಆದರೆ ಇದನ್ನು ದೆಹಲಿ ಪೊಲೀಸರು ವಿರೋಧಿಸಿದ್ದು, “ರೈತರು ನಮಗೆ ರ್ಯಾಲಿ ನಡೆಯುವ ಮಾರ್ಗದ ಬಗ್ಗೆ ಲಿಖಿತವಾಗಿ ತಿಳಿಸಿಲ್ಲ. ಅದನ್ನು ಲಿಖಿತವಾಗಿ ಸ್ವೀಕರಿಸಿದ ನಂತರ ಈ ಬಗ್ಗೆ ತಿಳಿಸುತ್ತೇವೆ” ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಹೇಳಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ.
ರೈತರ ರ್ಯಾಲಿಯು ರಾಷ್ಟ್ರಕ್ಕೆ ಮುಜುಗರ ಉಂಟು ಮಾಡುತ್ತದೆ ಎಂದು ಆರೋಪಿಸಿ ರ್ಯಾಲಿಯನ್ನು ನಿಲ್ಲಿಸುವಂತೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟನ್ನು ಸಂಪರ್ಕಿಸಿತ್ತು. ನ್ಯಾಯಾಲಯವು, ಇದು “ಕಾನೂನು ಮತ್ತು ಸುವ್ಯವಸ್ಥೆ” ಯ ವಿಷಯವಾಗಿದ್ದು, ರ್ಯಾಲಿಯ ಬಗೆಗಿನ ನಿರ್ಧಾರ ದೆಹಲಿ ಪೊಲೀಸರಿಗೆ ಬಿಟ್ಟಿದ್ದು ಎಂದು ಹೇಳಿತ್ತು.
ಶಾಂತಿಯುತ ಪ್ರತಿಭಟನೆ ನಡೆಸುವುದು ರೈತರ ಸಾಂವಿಧಾನಿಕ ಹಕ್ಕು ಎಂದು ನ್ಯಾಯಾಲಯ ಹೇಳಿತ್ತು. “ಕಾನೂನಿನ ವಿರುದ್ಧ ಪ್ರತಿಭಟಿಸುವ ಮೂಲಭೂತ ಹಕ್ಕನ್ನು ನಾವು ಎತ್ತಿಹಿಡಿಯುತ್ತೇವೆ. ಅದನ್ನು ಇಲ್ಲವಾಗಿಸುವ ಪ್ರಶ್ನೆಯೇ ಇಲ್ಲ. ಆದರೆ ಪ್ರತಿಭಟನೆಯು ಯಾರ ಜೀವ ಅಥವಾ ಆಸ್ತಿಗೆ ಹಾನಿ ಮಾಡಬಾರದು” ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಡಿಸೆಂಬರ್ನಲ್ಲಿ ನಡೆದ ವಿಚಾರಣೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಈ ರೈತ ದೆಹಲಿಯ ರೈತ ಹೋರಾಟದಲ್ಲಿ ಮೃತಪಟ್ಟಿದ್ದಾರೆಯೇ?