Homeಅಂಕಣಗಳುಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

- Advertisement -
- Advertisement -

“ನಾನು ನಾನಲ್ಲ. ನನ್ನ ಹೆಸರೂ ನನ್ನದಲ್ಲ. ನನ್ನ ತಂದೆ-ತಾಯಿ ನನ್ನನ್ನು ಹೆತ್ತವರಲ್ಲ. ನನ್ನ ತಮ್ಮ ಮತ್ತು ತಂಗಿ ನನ್ನ ಒಡಹುಟ್ಟಿದವರಲ್ಲ. ನಾನಾಡುವ ಭಾಷೆ ನನ್ನ ಮಾತೃಭಾಷೆಯಲ್ಲ. ನಾನು ಪಾಲಿಸುವ ಧರ್ಮ ನನ್ನದಲ್ಲ. ನಾನು ವಾಸಿಸುವ ದೇಶ ನನ್ನ ದೇಶವಲ್ಲ. ಅಂದರೆ ನಾನು ಯಾರೆಂದು ನೀವು ಭಾವಿಸಿದ್ದೀರೋ ಆತ ನಾನಲ್ಲ. ನಾನು ನಿಜವಾಗಲೂ ಯಾರೆಂದು ಹೇಳಬೇಕೆಂಬ ಆಶೆ ನನಗೆ; ಆದರೆ ನನ್ನ ಬದುಕಿನ ಪರಿಸ್ಥಿತಿ ನಾನು ನಿಜ ಹೇಳದಂತೆ ತಡೆಯುತ್ತಿದೆ….”

ಇಂತಹ ಪರಿಸ್ಥಿತಿಯಲ್ಲಿರುವ ಒಬ್ಬ ಮನುಷ್ಯನ ಬದುಕು ಹೇಗಿರಬಹುದೆಂದು ತೋರಿಸಿರುವ ಫ್ರೆಂಚ್ ನಿರ್ದೇಶಕ ರಾಡು ಮಹೈಲಿಯಾನು ಅವರ ‘Live and become’ (ಬದುಕು ಮತ್ತು ಬೆಳೆ) ಎಂಬ ಅದ್ಭುತ ಸಿನಿಮಾವನ್ನು ಮೊನ್ನೆ ನೋಡಿದೆ.

ನಮ್ಮಲ್ಲಿ ಬಹಳಷ್ಟು ಜನ ಯಹೂದಿಯರೆಲ್ಲ ಬಿಳಿಯರು ಎಂದು ನಂಬಿದ್ದಾರೆ. ಆದರೆ ಆಫ್ರಿಕಾದ ಇಥಿಯೋಪಿಯಾದಲ್ಲೂ ಕಪ್ಪು ಬಣ್ಣದ ಯಹೂದಿಯರಿದ್ದರು. ಐತಿಹ್ಯದ ಪ್ರಕಾರ ಇಸ್ರೇಲಿನ ರಾಜ ಸಾಲೊಮನ್ ಮತ್ತು ಇಥಿಯೋಪಿಯಾದಲ್ಲಿದ್ದ ಶೀಬಾ ಸಾಮ್ರಾಜ್ಯದ ರಾಣಿಗೆ ಜನಿಸಿದ ಪುತ್ರ ಮನೆಲಿಕ್‌ನ ವಂಶಜರು ಈ ಕಪ್ಪು ಯಹೂದಿಗಳು.

ಎಂಭತ್ತರ ದಶಕದಲ್ಲಿ ಇಥಿಯೋಪಿಯಾದ ಮೇಲೆ ಕ್ಷಾಮ ಮತ್ತು ಆಂತರಿಕ ಯುದ್ಧ ಜೊತೆಜೊತೆಗೆ ದಾಳಿ ಇಟ್ಟಾಗ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆಯ ಸೂಡಾನ್ ದೇಶಕ್ಕೆ ವಲಸೆ ಹೋಗಿ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸಲಾರಂಭಿಸಿದರು. ಅವರಲ್ಲಿ ಯಹೂದಿಯರೂ ಇದ್ದರು. ಅದೇ ಹೊತ್ತಿಗೆ ಜಗತ್ತಿನಾದ್ಯಂತ ಚದುರಿಹೋಗಿದ್ದ ಯಹೂದಿಗಳಿಗೆ ಇಸ್ರೇಲ್ ತನ್ನ ಬಾಗಿಲನ್ನು ತೆರೆಯಿತಲ್ಲದೆ, ಇಥಿಯೋಪಿಯಾದಲ್ಲಿದ್ದ ಯಹೂದಿಯರನ್ನು ಇಸ್ರೇಲಿಗೆ ಹೊತ್ತೊಯ್ಯಲು ’ಅಪರೇಷನ್ ಮೋಸಸ್’ ಎಂಬ ಗುಪ್ತ ಕಾರ್ಯಾಚರಣೆಯನ್ನು ಕೈಗೊಂಡಿತು.

‘Live and become’ಚಿತ್ರದ ಕತೆ ಪ್ರಾರಂಭವಾಗುವುದೇ ಸೂಡಾನ್‌ನಲ್ಲಿನ ಒಂದು ನಿರಾಶ್ರಿತರ ಶಿಬಿರದಲ್ಲಿ. ಭವಿಷ್ಯವೇ ಇಲ್ಲದಂತಹ ಆ ಶಿಬಿರದಲ್ಲಿ ಒಂದು ದಿನ ಯಹೂದಿ ತಾಯಿಯೊಬ್ಬಳ ಮಗ ಅವಳ ಮಡಿಲಲ್ಲೇ ಕೊನೆಯುಸಿರೆಳೆಯುತ್ತಾನೆ. ಅವಳ ದುಃಖವನ್ನು ಕ್ರಿಶ್ಚಿಯನ್ ತಾಯಿಯೊಬ್ಬಳು ದೂರದಿಂದಲೇ ಗಮನಿಸುತ್ತಾಳೆ. ಅದೇ ದಿನ ರಾತ್ರಿ ಹಲವು ಯಹೂದಿಯರನ್ನು ಇಸ್ರೇಲಿಗೆ ಸಾಗಿಸಲು ಲಾರಿಗಳು ಬಂದಾಗ ಆ ಯಹೂದಿ ತಾಯಿ ಲಾರಿಯನ್ನೇರಲು ಜನರ ಸಾಲಿನಲ್ಲಿ ನಿಲ್ಲುತ್ತಾಳೆ. ಆ ಕ್ಷಣ ಕ್ರಿಶ್ಚಿಯನ್ ತಾಯಿಗೆ ಒಂದು ಪರಿಹಾರದ ಸೂತ್ರ ಹೊಳೆಯುತ್ತದೆ. ನಿದ್ರಿಸುತ್ತಿರುವ ತನ್ನ ಕ್ರಿಶ್ಚಿಯನ್ ಮಗನನ್ನು ಎದ್ದೇಳಿಸಿ ಸಾಲುಗಟ್ಟಿ ನಿಂತಿರುವ ಜನರತ್ತ ಬೊಟ್ಟು ಮಾಡಿ “ಹೋಗು” ಎಂದು ಆದೇಶಿಸುತ್ತಾಳೆ. ತನ್ನ ತಾಯಿಯೇ ತನ್ನನ್ನು ಓಡಿಸುತ್ತಿದ್ದಾಳೆ ಎಂದು ಭಾವಿಸುವ ಮಗ ಕಣ್ಣೀರಿಡುತ್ತಾನೆ. ಆದರೆ ಆಕೆ ಕರಗುವುದಿಲ್ಲ “ಹೋಗು, ಬದುಕು ಮತ್ತು ಬೆಳೆ” ಎಂದು ಆತನನ್ನು ದೂಡುತ್ತಾಳೆ. ವಿಧಿ ಇಲ್ಲದೆ ಆತ ಹೋಗುತ್ತಾನೆ. ತನ್ನ ಮಗನನ್ನು ಕಳೆದುಕೊಂಡಿರುವ ಯಹೂದಿ ತಾಯಿಯ ಕೈ ಹಿಡಿಯುತ್ತಾನೆ. ಆಕೆಗೆ ಗೊತ್ತಾಗುತ್ತದೆ: ನರಕ ಸದೃಶವಾಗಿರುವ ಶಿಬಿರದಿಂದ ತನ್ನ ಮಗನನ್ನು ಪಾರು ಮಾಡಲು ಕ್ರಿಶ್ಚಿಯನ್ ತಾಯಿ ತನ್ನೊಂದಿಗೆ ತನ್ನ ಪುತ್ರನನ್ನು ಗುಪ್ತವಾಗಿ ಸಾಗಿಸಲು ಇಚ್ಛಿಸುತ್ತಿದ್ದಾಳೆಂದು. ಆ ಹುಡುಗ ತೀರಿಕೊಂಡಿರುವ ತನ್ನ ಮಗನ ವಯಸ್ಸಿನನೇ ಆದ್ದರಿಂದ ಈತನೇ ತನ್ನ ಮಗ ಎಂದು ಅಧಿಕಾರಿಗಳಿಗೆ ಹೇಳಿ ಅವನನ್ನು ತನ್ನೊಂದಿಗೆ ಇಸ್ರೇಲಿಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ತನ್ನ ಮಗನ ಹೆಸರಾದ ಸಾಲೊಮನ್ ಹೆಸರನ್ನೇ ಈ ಹುಡುಗನಿಗೂ ಇಡುತ್ತಾಳೆ. ತನ್ನ ವಂಶದ ಮತ್ತು ಸಮುದಾಯದ ಪ್ರಮುಖರ ಹೆಸರನ್ನೆಲ್ಲ ಆತನಿಗೆ ಮನವರಿಕೆ ಮಾಡಿಕೊಟ್ಟು “ಎಂದೂ ನೀನು ನಿಜವಾಗಲೂ ಯಾರು ಎಂಬುದನ್ನು ಯಾರಿಗೂ ಹೇಳಬೇಡ” ಎಂದು ಹೇಳಿ ಕ್ಷಯರೋಗದಿಂದ ಸಾಯುತ್ತಾಳೆ.

ಹೊಸ ಹೆಸರು, ಹೊಸ ದೇಶ, ಹೊಸ ಪರಿಸರದಲ್ಲಿ ಬಾಲಕ ಏಕಾಂಗಿಯಾಗುತ್ತಾನೆ. ಆತನನ್ನು ದಾಖಲಿಸಿರುವ ಶಾಲೆಯಿಂದ ಓಡಿಹೋಗಲು ಯತ್ನಿಸುತ್ತಾನೆ, ಇತರೆ ಹುಡುಗರೊಂದಿಗೆ ಬಡಿದಾಡುತ್ತಾನೆ. ಆಹಾರವನ್ನು ತ್ಯಜಿಸಿ ಮೌನವಾಗಿ ಪ್ರತಿಭಟಿಸುತ್ತಾನೆ. ಕೊನೆಗೆ ಅವನನ್ನು ನಿಯಂತ್ರಿಸಲು ಆಗದೇ. ಇಬ್ಬರು ಮಕ್ಕಳನ್ನು ಹೊಂದಿರುವ ಬಿಳಿ ಯಹೂದಿ ದಂಪತಿಗಳಿಗೆ ಅಧಿಕಾರಿಗಳು ಅವನನ್ನು ದತ್ತು ನೀಡುತ್ತಾರೆ. ಅವರ ಮನೆಯಲ್ಲೂ ಬಾಲಕ ತನ್ನ ಬಂಡಾಯವನ್ನು ಮುಂದುವರೆಸುತ್ತಾನೆ. ಆದರೆ ಆ ದಂಪತಿಗಳು ಆತನನ್ನು ನಿಜವಾಗಲೂ ಪ್ರೀತಿಸುತ್ತಾರೆ. ಜನಾಂಗೀಯ ದ್ವೇಷಿಗಳಿಂದ ಅವನನ್ನು ರಕ್ಷಿಸುತ್ತಾರೆ. ತಾವು ನಾಸ್ತಿಕರಾದರೂ ಬಾಲಕನಿಗೆ ಯಹೂದಿ ಸಂಪ್ರದಾಯದಲ್ಲಿ ನಂಬಿಕೆ ಇದೆ ಎಂದು ಭಾವಿಸಿ ಆತನನ್ನು ಧಾರ್ಮಿಕ ಶಾಲೆಗೂ ದಾಖಲಿಸುತ್ತಾರೆ. ಪ್ರೀತಿಯಿಂದಲೇ ಬಾಲಕನ ಬಂಡಾಯವನ್ನು ಮುರಿಯುತ್ತಾರೆ. ತನ್ನನ್ನು ಹೆತ್ತ ತಾಯಿಗೆ ಹಂಬಲಿಸುತ್ತಲೇ, ತನ್ನನ್ನು ರಕ್ಷಿಸಿದ ತಾಯಿ ನೀಡಿದ ಎಚ್ಚರಿಕೆಯನ್ನು ಮರೆಯದೇ ತನ್ನನ್ನು ಸಾಕಿಸಲಹುತ್ತಿರುವ ತಾಯಿಗೆ ಹತ್ತಿರವಾಗುತ್ತಾನೆ.

PC: myCANAL

ಹೊಸ ದೇಶದ ಭಾಷೆ ಮತ್ತು ತನ್ನ ದತ್ತು ಸಂಸಾರದ ಫ್ರೆಂಚ್ ಭಾಷೆಗಳನ್ನು ಕಲಿಯುತ್ತಾನೆ. ಯಹೂದಿ ಸಂಪ್ರದಾಯಗಳನ್ನು ಪಾಲಿಸುತ್ತಾನೆ. ಇಸ್ರೇಲಿನಲ್ಲಿ ವಾಸಿಸುವ ಹಕ್ಕು ತನ್ನಂತಹ ಕಪ್ಪು ಯಹೂದಿಯರಿಗೂ ಇದೆ ಎಂದು ಪ್ರತಿಭಟಿಸುತ್ತಾನೆ, ವಿಧಿ ಇಲ್ಲದೆ ತಾನಿರುವ ಸಂದರ್ಭಕ್ಕೆ ಹೊಂದುಕೊಳ್ಳುತ್ತಾನೆ. ಆದರೆ ಅವನ ಆಳದಲ್ಲಿ ತನ್ನ ಬದುಕೇ ಒಂದು ದೊಡ್ಡ ಸುಳ್ಳು ಎಂಬ ನೋವು ಕಾಡುತ್ತಲೇ ಇರುತ್ತದೆ; ಹೆತ್ತ ತಾಯಿಯ ನೆನಪು ಮರುಕಳಿಸುತ್ತಿರುತ್ತದೆ.

ಆತ ಹದಿಹರೆಯದವನಾದಾಗ ಬಿಳಿ ಯಹೂದಿ ಯುವತಿಯೊಬ್ಬಳು ಅವನನ್ನು ಪ್ರೇಮಿಸಲಾರಂಭಿಸುತ್ತಾಳೆ. ಇಸ್ರೇಲ್ ಸರ್ಕಾರದ ನಿಯಮದ ಪ್ರಕಾರ ಆ ಹಂತದಲ್ಲಿ ಆತ ಸೈನ್ಯವನ್ನು ಸೇರಬೇಕು. ಚಿಕ್ಕವನಿದ್ದಾಗಲೇ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿರುವ ಅವನಿಗೆ ಸೈನ್ಯವನ್ನು ಸೇರಲು ಇಷ್ಟವಿಲ್ಲ. ಅತ್ತ ತನ್ನನ್ನು ಪ್ರೀತಿಸುತ್ತಿರುವ ಹುಡುಗಿಗೆ ತನ್ನ ಬಗ್ಗೆ ಸತ್ಯವನ್ನೂ ಹೇಳಲಾಗದೆ, ಇತ್ತ ಸೈನ್ಯಕ್ಕೆ ಸೇರಿ ಬಂದೂಕು ಹಿಡಿಯಲೂ ಆಗದೆ ಆತ ಫ್ರಾನ್ಸ್ ದೇಶಕ್ಕೆ ಪಲಾಯನ ಮಾಡುತ್ತಾನೆ. ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಡಾಕ್ಟರ್ ಆಗುತ್ತಾನೆ. ’ಗಡಿಗಳಿಲ್ಲದ ವೈದ್ಯರು’ ಎಂಬ ಸರ್ಕಾರೇತರ ಸಂಘಟನೆಯನ್ನು ಸೇರಿ ಯುದ್ಧ ಪೀಡಿತ ಪ್ರದೇಶಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಾನೆ. ಆದರೂ ಯುದ್ಧದ ಹಿಂಸೆ ಅವನನ್ನು ಬಸವಳಿಸುತ್ತದೆ. ಅನಾರೋಗ್ಯದಿಂದ ಹತ್ತು ವರ್ಷಗಳ ನಂತರ ಇಸ್ರೇಲಿಗೆ ವಾಪಸ್ ಬರುತ್ತಾನೆ. ಅಲ್ಲಿ ಅವನ ಹುಡುಗಿ ಆತನಿಗಾಗಿ ಕಾದಿರುತ್ತಾಳೆ. ತನ್ನ ತಂದೆ-ತಾಯಿಯ ವಿರೋಧದ ನಡುವೆಯೂ ಆಕೆ ಅವನನ್ನು ಮದುವೆಯಾಗುತ್ತಾಳೆ. ತಮ್ಮ ಮೊದಲನೆ ರಾತ್ರಿ ತನ್ನ ಹೆಂಡತಿಗಾದರೂ ತನ್ನ ಬಗ್ಗೆ ಸತ್ಯವನ್ನು ಹೇಳಬೇಕೆಂದು ಆತ ಪ್ರಯತ್ನಿಸುತ್ತಾನೆ. ಆದರೆ ಅವಳ ನಿಷ್ಕಳಂಕ ಪ್ರೀತಿ ಅವನ ಬಾಯಿ ಕಟ್ಟಿಹಾಕುತ್ತದೆ.

ಅವರಿಬ್ಬರ ಹೊಸ ಬದುಕು ನೆಮ್ಮದಿಯಿಂದ ಸಾಗುತ್ತದೆ. ಆದರೆ ಯಾವಾಗ ಆಕೆ ಗರ್ಭಿಣಿಯಾಗುತ್ತಾಳೋ ಆಗ ಆತನಿಂದ ಸುಳ್ಳನ್ನು ಮುಂದುವರಿಸಲಾಗುವುದಿಲ್ಲ. ಸತ್ಯ ಹೊರಬರುತ್ತದೆ. ತನ್ನ ಹೆಸರು ಸಾಲೊಮನ್ ಅಲ್ಲ, ತಾನು ಯಹೂದಿ ಅಲ್ಲ, ತಾನು ಇಸ್ರೇಲಿ ಅಲ್ಲ ಎಂದು ಹೇಳಿದಾಗ ಆಕೆ ಕಣ್ಣೀರಿಡುತ್ತಾಳೆ. ತಾನು ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನು ತ್ಯಜಿಸಿದ್ದು ಇಂಥವನಿಗಾಗಿಯೇ ಎಂದು ಕುಪಿತಳಾಗುತ್ತಾಳೆ. ಅವನನ್ನು ತೊರೆದುಹೋಗುತ್ತಾಳೆ.

ಆಗ ಆತನ ನೆರವಿಗೆ ಬರುವುದು ಅವನನ್ನು ಪ್ರೀತಿಯಿಂದ ಸಾಕಿಸಲುಹಿದ ತಾಯಿ. ಆತ ಬೇಕೆಂತಲೇ ಸುಳ್ಳು ಹೇಳಲಿಲ್ಲ, ಬದಲಾಗಿ ಆತ ಇದ್ದ ಸಂದರ್ಭ ಹಾಗಿತ್ತು ಎಂದು ತಾಯಿ ಮನವರಿಕೆ ಮಾಡಿಕೊಟ್ಟ ನಂತರ ಹೆಂಡತಿ ಆತನಲ್ಲಿಗೆ ವಾಪಸ್ ಬರುತ್ತಾಳೆ. ಹಾಗೆ ಬರುವಾಗ “ನಿನಗಾಗಿ ಮೂವರು ತಾಯಂದಿರು ಅದೆಷ್ಟು ಪ್ರೀತಿ ತೋರಿದರು” ಎಂದು ಉದ್ಗಾರವೆತ್ತುತ್ತಾಳೆ ಮತ್ತು ಆತ ತನ್ನ ಹೆತ್ತ ತಾಯಿಯನ್ನು ಹುಡುಕಬೇಕು ಎಂದು ಹೇಳುತ್ತಾಳೆ. ಅವರಿಗೊಬ್ಬ ಮಗ ಜನಿಸಿದಾಗ ಸಾಲೊಮನ್ ಆಫ್ರಿಕಾದ ನಿರಾಶ್ರಿತರ ಶಿಬಿರದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆಗ ಓರ್ವ ಮುದುಕಿ ಆತನ ಕಣ್ಣಿಗೆ ಬೀಳುತ್ತಾಳೆ, “ಅಮ್ಮಾ ಎಂದು ಆಕೆಯನ್ನು ಆಪ್ಪಿಕೊಳ್ಳುತ್ತಾನೆ. ಆಕೆಯ ಆಕ್ರಂದನದೊಂದಿಗೆ ಚಿತ್ರ ಮುಗಿಯುತ್ತದೆ.

ಈ ಜಗತ್ತಿನಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಅದೆಷ್ಟು ಜನ ಏನೇನನ್ನು ಮಾಡಿಲ್ಲ. ಅದೆಷ್ಟೋ ಜನ ಪ್ರಾಣರಕ್ಷಣೆಗಾಗಿ ಇತರರನ್ನು ಕೊಂದಿದ್ದಾರೆ, ಉಪವಾಸದಿಂದ ಸಾಯಬಾರದೆಂದು ಇತರೆ ಮನುಷ್ಯರ ಮಾಂಸವನ್ನು ತಿಂದು ಬದುಕಿದ್ದಾರೆ, ಮೂತ್ರವನ್ನು ಕುಡಿದು ತಮ್ಮ ಪ್ರಾಣ ಹೋಗದಂತೆ ನೋಡಿಕೊಂಡಿದ್ದಾರೆ, ನೂರಾರು ಸುಳ್ಳು ಹೇಳಿದ್ದಾರೆ. ತಮ್ಮನ್ನು ನಂಬಿರುವವರಿಗೇ ದ್ರೋಹ ಬಗೆದಿದ್ದಾರೆ.

‘Live and become’ ನ ನಾಯಕ ಕೂಡ ತನ್ನ ಪ್ರಾಣರಕ್ಷಣೆಗೆ ಸುಳ್ಳು ಹೇಳಿದ್ದಾನೆ. ತನ್ನ ಗುಟ್ಟು ರಟ್ಟಾಗದಂತೆ ಪ್ರತಿಕ್ಷಣ ಎಚ್ಚರಿಕೆ ವಹಿಸಿದ್ದಾನೆ. ಆದರೆ ಪ್ರೀತಿಗೆ ಆ ಸುಳ್ಳನ್ನು ಹೊರಗೆಡಹುವ ಮತ್ತು ಆ ಸುಳ್ಳನ್ನು ಮೀರಿ ಬದುಕುವ ಶಕ್ತಿ ಇದೆ ಎಂದು ಚಿತ್ರ ತೋರಿಸುತ್ತದೆ.

ಪ್ರೀತಿಯೇ ಹೆತ್ತ ತಾಯಿ ಅವನನ್ನು ದೂರ ಕಳುಹಿಸುವಂತೆ ಮಾಡುತ್ತದೆ. ಪ್ರೀತಿಯೇ ಮತ್ತೋರ್ವ ತಾಯಿ ಅವನನ್ನು ರಕ್ಷಿಸುವಂತೆ ಮಾಡುತ್ತದೆ. ಪ್ರೀತಿಯೇ ಮೂರನೆ ತಾಯಿ ಅವನನ್ನು ಸಾಕಿಸಲಹುವಂತೆ ನೋಡಿಕೊಳ್ಳುತ್ತದೆ. ಪ್ರೀತಿಯೇ ಅವನ ಹೆಂಡತಿ ಅವನನ್ನು ಸ್ವೀಕರಿಸುವಂತೆ ಮಾಡುತ್ತದೆ. ದೇಶ, ಭಾಷೆ, ಧರ್ಮ, ಬಣ್ಣದಂತಹ ಗಡಿಗಳನ್ನು ಗುರುತಿಸದ ಪ್ರೀತಿಗೆ ಇರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ಇದು ಆಗಸ್ಟ್ 05, 2009ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಮರುಪ್ರಕಟಣೆ


ಇದನ್ನೂ ಓದಿ: ಗೌರಿ ಕಾರ್ನರ್; ’ಮಾತಿ ಮಾಯ್’ ಸಿನಿಮಾ: ತಾಯಿಯ ಸಂಕಟವನ್ನು ಪಿಶಾಚಿಯ ಕೂಗೆಂದರೆ;

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...