Homeಅಂಕಣಗಳುಗೌರಿ ಕಾರ್ನರ್; ’ಮಾತಿ ಮಾಯ್’ ಸಿನಿಮಾ: ತಾಯಿಯ ಸಂಕಟವನ್ನು ಪಿಶಾಚಿಯ ಕೂಗೆಂದರೆ;

ಗೌರಿ ಕಾರ್ನರ್; ’ಮಾತಿ ಮಾಯ್’ ಸಿನಿಮಾ: ತಾಯಿಯ ಸಂಕಟವನ್ನು ಪಿಶಾಚಿಯ ಕೂಗೆಂದರೆ;

- Advertisement -
- Advertisement -

ಆಕೆಯನ್ನು ಊರಿನವರೆಲ್ಲ ಶವಭಕ್ಷಕ ಪಿಶಾಚಿ ಎಂದು ಕರೆಯುತ್ತಾರೆ. ಅವಳ ಕಣ್ಣು ತಮ್ಮ ಮಕ್ಕಳ ಮೇಲೆ ಬೀಳಬಾರದೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದ್ದರಿಂದಲೇ ಆಕೆ ಊರಿನಿಂದ ದೂರದಲ್ಲಿ ಏಕಾಂಗಿಯಾಗಿ, ನಿರ್ಗತಿಕಳಾಗಿ, ಅರೆಹುಚ್ಚಿಯಾಗಿ ಜೀವಿಸುತ್ತಿದ್ದಾಳೆ.

ಒಮ್ಮೆ ಹತ್ತು ವರ್ಷದ ಹುಡುಗನನ್ನು ಆಕೆ ನೋಡುತ್ತಾಳೆ. ಆಕೆಯ ಕಣ್ಣು ತನ್ನ ಮೇಲೆ ಬಿತ್ತೆಂದು ಹೆದರುವ ಹುಡುಗ ತನ್ನ ತಂದೆಗೆ ಹೇಳುತ್ತಾನೆ. ಆದರೆ ತಂದೆ “ಆಕೆ ನಿನಗೆ ಏನನ್ನೂ ಮಾಡುವುದಿಲ್ಲ, ಹೆದರಬೇಡ” ಅಂತ ಹೇಳುತ್ತಾನೆ. “ಯಾಕ ನನಗೇನೂ ಆಗುವುದಿಲ್ಲ. ಆಕೆ ಮಕ್ಕಳ ಶವಗಳನ್ನು ತಿನ್ನುವ ಪಿಶಾಚಿ ಅಲ್ಲವೇ?” ಎಂದು ಕೇಳಿದಾಗ “ಆಕೆ ನಿನಗೇನು ಮಾಡುವುದಿಲ್ಲ. ಏಕೆಂದರೆ ಆಕೆ ನಿನ್ನ ತಾಯಿ, ಅದಕ್ಕೆ” ಅಂತ ಉತ್ತರಿಸುತ್ತಾನೆ.

ಆ ಹುಡುಗನಿಗೆ ಶಾಕ್ ಆಗುತ್ತೆ. “ಪಿಶಾಚಿಯೊಬ್ಬಳು ಹೇಗೆ ತಾಯಿ ಆಗಲು ಸಾಧ್ಯ?” ಎಂಬ ಪ್ರಶ್ನೆ ಬುದ್ಧಿವಂತನೂ, ತನ್ನ ಶಾಲೆಯಲ್ಲಿ ಮೇಷ್ಟ್ರ ಮೆಚ್ಚುಗೆಯನ್ನೂ ಪಡೆದಿರುವ ಹುಡುಗನನ್ನು ಕಾಡುತ್ತದೆ. “ಒಂದು ದಿನ ನನ್ನ ತಾಯಿ ಆಗಿದ್ದವಳು ಹೇಗೆ ಶವಭಕ್ಷಕ ಪಿಶಾಚಿ ಆದಳು ಹೇಳು” ಎಂದು ತಂದೆಯನ್ನು ಕೇಳುತ್ತಾನೆ. ತಂದೆ ಆ ಕತೆಯನ್ನು ಹೇಳುತ್ತಾ ಹೋದಂತೆ ನಮ್ಮ ಸಮಾಜದಲ್ಲಿನ ಜಾತಿ ವ್ಯವಸ್ಥೆ ಮೂಢನಂಬಿಕೆ, ಮಹಿಳೆಯರ ಶೋಷಣೆ ಎಲ್ಲವೂ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಆಕೆಯ ಹೆಸರು ಚಂಡಿ. ಸುಂದರಿಯೂ, ದಿಟ್ಟೆದೆಯ ಹುಡುಗಿಯೂ ಆಗಿರುವ ಚಂಡಿ ಊರಿನ ಸ್ಮಶಾನವನ್ನು ನೋಡಿಕೊಳ್ಳುತ್ತಿರುವವನ ಏಕೈಕ ಪುತ್ರಿ. ತಮ್ಮ ಜನಾಂಗಕ್ಕೆ ಸತ್ಯ ಹರಿಶ್ಚಂದ್ರ ಎಲ್ಲಾ ಸ್ಮಶಾನಗಳ ಉಸ್ತುವಾರಿಯನ್ನು ನೀಡಿದ್ದ, ಶವಗಳನ್ನು ಹೂಳುವ ತಮ್ಮ ವೃತ್ತಿ ದೇವರಕಾರ್ಯ ಎಂದೇ ನಂಬಿರುವ ಚಂಡಿ, ತನ್ನ ತಂದೆಯ ಮರಣಾನಂತರ ಸ್ಮಶಾನದ ಜವಾಬ್ದಾರಿ ಹೊರುತ್ತಾಳೆ. ಆಕೆ ನೋಡಿಕೊಳ್ಳುತ್ತಿರುವುದು ಮಕ್ಕಳ ಸ್ಮಶಾನವನ್ನು. ಗುಂಡಿ ತೋಡುವುದರಿಂದ ಹಿಡಿದು, ರಾತ್ರಿ ಕಾವಲು ನಿಲ್ಲುವ ಕೆಲಸವನ್ನೂ ಈ ದಲಿತ ಮಹಿಳೆ ನಿಭಾಯಿಸುತ್ತಿರುತ್ತಾಳೆ.

ಆ ಊರಿನಲ್ಲಿ ಸರ್ಕಾರಿ ಕೆಲಸ ಪಡೆದಿರುವ, ಒಂದಿಷ್ಟು ಓದುಬರಹ ಬಲ್ಲ ಏಕೈಕ ಪುರುಷ ನರಸು. ಚಂಡಿ ಮತ್ತು ನರಸು ನಡುವೆ ಪ್ರೇಮಾಂಕುರವಾಗಿ ಮದುವೆ ಆಗುತ್ತಾರೆ, ಅವರಿಗೆ ಒಂದು ಗಂಡು ಮಗುವೂ ಜನಿಸುತ್ತದೆ.

ಆಗ ಚಂಡಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹಸುಗೂಸಿನ ತಾಯಿಯಾಗಿರುವ ಚಂಡಿಗೆ ಮಕ್ಕಳ ಶವಗಳನ್ನು ಹೂಳುವುದು ಅಸಾಧ್ಯವಾಗುತ್ತದೆ. ತನ್ನ ಮಗುವನ್ನೇ ಹೂಳುತ್ತಿದ್ದೇನೆ ಎಂದು ಭಾಸವಾಗುತ್ತದೆ. ಈ ವೃತ್ತಿ ಇನ್ನು ತನಗೆ ಬೇಕಿಲ್ಲ ಅನ್ನಿಸುತ್ತೆ. ಆದರೆ ಇದು ವಂಶಪಾರಂಪರ್ಯವಾಗಿ ತನ್ನ ಸಮುದಾಯ ಮಾಡಿಕೊಂಡು ಬಂದಿರುವ ದೇವರ ಕಾರ್ಯ; ಇದನ್ನು ತ್ಯಜಿಸುವುದಾದರೂ ಹೇಗೆ ಎಂಬ ಗೊಂದಲ ಪ್ರಾರಂಭವಾಗುತ್ತದೆ.

ತನ್ನ ತಳಮಳವನ್ನು ಗಂಡನೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಆತ ಕಿವಿಗೊಡುವುದಿಲ್ಲ. ಒಂದು ದಿನ ಆಕೆ ತುಂಬಾ ಹಚ್ಚಿಕೊಂಡಿರುವ ಸಂಬಂಧಿಕರ ಪುಟ್ಟ ಮಗಳು ತೀರಿಹೋಗುತ್ತಾಳೆ. ಆಕೆಯನ್ನು ತನ್ನ ಮಗಳೆಂದೇ ಭಾವಿಸಿದ್ದ ಚಂಡಿಗೆ ಆ ಬಾಲಕಿಯ ಶವವನ್ನು ಹೂಳುವ ದೌರ್ಭಾಗ್ಯ ಎದುರಾಗುತ್ತದೆ.

ಮನೆಯಲ್ಲಿ ತನ್ನ ಎದೆ ಹಾಲು ಕುಡಿಯುತ್ತಿರುವ ಕೂಸು, ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಚಂಡಿಯ ಎದೆಯಿಂದ ತೊಟ್ಟಿಕುತ್ತಿರುವ ಹಾಲು, ಮಕ್ಕಳನ್ನು ದಫನ್ ಮಾಡುವ ತನ್ನ ಕರ್ಮದ ಬಗ್ಗೆ ಅಸಹನೆ, ಆದರೆ ವಂಶದ ಕರ್ತವ್ಯ ಎಂಬ ಮೂಢನಂಬಿಕೆಯ ಹಿಡಿತ, ಇವೆಲ್ಲ ಗೊಂದಲಗಳನ್ನು ಯಾರ ಮುಂದೆಯೂ ಹೇಳಿಕೊಳ್ಳಲಾಗದೆ ಚಂಡಿ ತತ್ತರಿಸುತ್ತಾಳೆ. ಸೂಕ್ಷ್ಮ ಸ್ವಭಾವದ ಬಾಣಂತಿಯರಿಗೆ ಕೆಲವೊಮ್ಮೆ ಸನ್ನಿ ಆಗುವಂತೆ ಚಂಡಿಯಲ್ಲೂ ವಿಚಿತ್ರ ನಡವಳಿಕೆಗಳು ಕಂಡುಬರುತ್ತವೆ. ಯಾರದೋ ದನಿ ಕೇಳಿಸಿದಂತ, ತನ್ನ ಕರ್ತವ್ಯದ ಬಗ್ಗೆ ತನ್ನ ತಂದೆ ಎಚ್ಚರಿಸಿದಂತೆ ಆಕೆಗೆ ಭಾಸವಾಗುತ್ತದೆ. ಅವಳಲ್ಲಾಗುತ್ತಿರುವ ಬದಲಾವಣೆಗಳನ್ನು ಕಂಡು ಆಕೆಗೆ ಸಹಾಯ ಮಾಡುವ ಬದಲು ಗಂಡ ನರಸು ಕಂಗೆಡುತ್ತಾನೆ. ಈ ಮಧ್ಯೆ ಚಂಡಿ ತುಂಬಾ ಪ್ರೀತಿಸುತ್ತಿದ್ದ ಸಂಬಂಧಿಕರ ಮಗಳನ್ನು ಚಂಡಿಯೇ ಕೊಂದಳೆಂದೂ, ಆ ಬಾಲಕಿಯ ಶವಕ್ಕೆ ತನ್ನ ಎದೆಯಿಂದ ತೊಟ್ಟಿಕ್ಕುತ್ತಿದ್ದ ಹಾಲನ್ನು ಕುಡಿಸಿದಳೆಂದೂ ಜನ ಆರೋಪಿಸುತ್ತಾರೆ.

PC : Oneindian Kannada, (ಮಹಾಶ್ವೇತಾ ದೇವಿ)

ಆಕೆಗೆ ಭೂತ ಹಿಡಿದಿದೆ ಎಂದೂ, ಆಕೆ ಮಕ್ಕಳನ್ನು ಜೀವಂತ ಭಕ್ಷಿಸುತ್ತಾಳೆಂದೂ ಸುಳ್ಳುಗಳು ಊರಲ್ಲಿ ಹಬ್ಬುತ್ತವೆ. ಇದರಿಂದಾಗಿ, ಚಂಡಿಯನ್ನು ಮಾತ್ರವಲ್ಲ ಅವಳ ಗಂಡ ನರಸುನನ್ನೂ ಜನ ವಿಚಿತ್ರವಾಗಿ ನೋಡಲಾರಂಭಿಸುತ್ತಾರೆ. ಇದರ ವಿರುದ್ಧ “ನಾನು ಹಸಿ ಬಾಣಂತಿ, ನನ್ನ ಮಗುವಿಗೆ ಕುಡಿಸಬೇಕಿರುವ ಹಾಲನ್ನು ಮಕ್ಕಳ ಶವಗಳಿಗೆ ಯಾಕೆ ನೀಡಲಿ? ನಾನೆಂದೂ ಯಾರಿಗೂ ನೋವು ಕೂಡ ಮಾಡಿದವಳಲ್ಲ. ಇನ್ನು ಮಕ್ಕಳನ್ನು ಬಲಿ ತೆಗೆದುಕೊಳ್ಳುವ ಪ್ರಶ್ನೆ ಎಲ್ಲಿ” ಎಂದು ಚಂಡಿ ಜಗಳಕ್ಕೆ ನಿಂತರೆ, ನರಸು ಕೂಡ ತನ್ನ ಹಂಡತಿಯ ಬಗ್ಗೆಯೇ ಸಂಶಯಪಡಲಾರಂಭಿಸುತ್ತಾನೆ.

ಒಂದು ರಾತ್ರಿ ಚಂಡಿ ಸ್ಮಶಾನದಲ್ಲಿದ್ದಾಗ ಅಲ್ಲಿಗೆ ಆಗಮಿಸುವ ಹಳ್ಳಿಯ ಜನ ಆಕೆ ಶವಗಳನ್ನು ಹೊರತೆಗೆದು ತಿನ್ನುತ್ತಿದ್ದಳು ಎಂದು ಆರೋಪಿಸಿ ’ಶವಭಕ್ಷಕ ಪಿಶಾಚಿ’ ಎಂದು ಕೂಗಲಾರಂಭಿಸುತ್ತಾರೆ. “ಇಲ್ಲಿ ನರಿಗಳು ಬಂದು ಗುಂಡಿಯನ್ನು ತೋಡಿದ್ದವು. ಅವುಗಳನ್ನು ಓಡಿಸುತ್ತಿದ್ದೆ. ನರಸು ನೀನಾದರೂ ಹೇಳು ನಾನು ಪಿಶಾಚಿ ಅಲ್ಲ” ಎಂದು ಚಂಡಿ ಬೇಡುತ್ತಾಳೆ. ಆದರೆ ಅವಳಿಂದಾಗಿ ಸಮಾಜದಲ್ಲಿ ತನಗಿದ್ದ ಕಿಂಚಿತ್ತು ಮರ್ಯಾದೆಯೂ ಕರಗುತ್ತದೆ ಎಂದು ಭಾವಿಸುವ ನರಸು “ನೀನು ಪಿಶಾಚಿ” ಎಂದು ಹೇಳಿ ತನ್ನ ಹೆಂಡತಿಯನ್ನೇ ಜೀವಂತ ನರಕಕ್ಕೆ ದೂಕುತ್ತಾನೆ.

ಅಂದಿನಿಂದ ಚಂಡಿ ಯಾರಿಗೂ ಬೇಡವಾಗಿರುವ, ಎಲ್ಲರೂ ಹೆದರುವ ’ಶವಭಕ್ಷಕ ಪಿಶಾಚಿ’ಯಾಗಿ ಸಾಮಾಜಿಕ ಬಹಿಷ್ಕಾರದ ಬದುಕು ಸಾಗಿಸುತ್ತಿದ್ದಾಳೆ.

ಹಿಂದೊಮ್ಮೆ ಆಕೆ ಸುಂದರವಾಗಿದ್ದಳು. ತನ್ನನ್ನು ಪ್ರೀತಿಸುತ್ತಿದ್ದ ತಾಯಿಯಾಗಿದ್ದಳು ಎಂದು ಅರಿತ ಅವಳ ಹತ್ತು ವರ್ಷದ ಮಗ ಚಂಡಿಯನ್ನು ಮಾತನಾಡಿಸಲು ಹೋಗುತ್ತಾನೆ. “ನೀನು ಮುಂಚೆ ತುಂಬಾ ಚೆನ್ನಾಗಿದ್ದೆ ಅಲ್ಲಾ ನೋಡಕ್ಕೆ? ನಿನ್ನ ಹತ್ರ ಇರೋದು ಅದೊಂದೇ ಸೀರೇನಾ? ನಿನ್ನೆ ಮನೆಯಲ್ಲಿ ಹಬ್ಬ ಇತ್ತು, ತಗೋ ನಿಂಗೆ ತಿನ್ನೋಕೆ ಮಾಂಸ ತಂದಿದ್ದೀನಿ” ಎಂದೆಲ್ಲಾ ಹೇಳಿ ತನ್ನ ತಾಯಿಯೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾನೆ.

ಹುಡುಗ ಹೋದ ನಂತರ, ಆತನಿಗೆ ಈ ವಿಷಯವೆಲ್ಲಾ ಹೇಗೆ ಗೊತ್ತಾಯಿತು? ತನ್ನ ಗಂಡನೇ ಹೇಳಿರಬೇಕು. ಆದರೆ ಯಾಕೆ ಹೇಳಿದ ಎಂದು ಚಿಂತಿಸುತ್ತಾ ಗಂಡನನ್ನು ತರಾಟೆಗೆ ತೆಗೆದುಕೊಳ್ಳಲು ಚಂಡಿ ಹೊರಡುತ್ತಾಳೆ. ಆದರೆ ಆ ಹಾದುಹೋಗಬೇಕಿರುವ ರೈಲಿನ ಹಳಿ ಮೇಲೆ ಡಕಾಯಿತರು ಮರಗಳನ್ನು ಪೇರಿಸಿಟ್ಟು ಟ್ರೇನಿನಲ್ಲಿರುವ ಹಣವನ್ನು ದೋಚಲು ಸಜ್ಜಾಗಿರುತ್ತಾರೆ.

ಆದರೆ ’ಶವಭಕ್ಷಕ ಪಿಶಾಚಿ’ ಚಂಡಿಯನ್ನು ಕಂಡು ಅವರೆಲ್ಲ ಓಡಿಹೋಗುತ್ತಾರೆ. ರೈಲು ಅಪಘಾತವನ್ನು ತಪ್ಪಿಸಲು ಚಂಡಿ ಪೇರಿಸಿಟ್ಟಿರುವ ಮರಗಳನ್ನು ಸರಿಸಲು ಯತ್ನಿಸುತ್ತಾಳೆ. ಆದರೆ ಅವಳಿಂದಾಗುವುದಿಲ್ಲ. ತನ್ನತ್ತ ದಾವಿಸುತ್ತಿರುವ ಟ್ರೇನ್ ಚಾಲಕನಿಗೆ ಗಾಡಿಯನ್ನು ನಿಲ್ಲಿಸುವಂತೆ ಸೂಚಿಸಲು ಆಕೆ ಟ್ರೇನಿನತ್ತ ಓಡುತ್ತಾಳೆ. ಆದರೆ ಚಾಲಕನಿಗೆ ಆಕೆ ಕಾಣದೆ ಚಂಡಿ ಟ್ರೇನಿನಡಿ ಸಿಕ್ಕು ಸತ್ತುಹೋಗುತ್ತಾಳೆ.

ಢಕಾಯಿತರಿಂದ ಟ್ರೇನನ್ನು ರಕ್ಷಿಸಿದ್ದಕ್ಕೆ ಸರ್ಕಾರ ಅವಳ ಸಂಸಾರಕ್ಕೆ ಪರಿಹಾರ ಧನ ನೀಡಲು ಮುಂದಾಗುತ್ತದೆ. “ಈ ಊರಿನಲ್ಲಿ ಅವಳ ಸಂಬಂಧಿಕರು ಯಾರಾದರೂ ಇದ್ದಾರೆಯೇ?” ಎಂದು ಅಧಿಕಾರಿ ಕೇಳಿದಾಗ, ಎಲ್ಲರೂ ಸುಮ್ಮನಿರುತ್ತಾರೆ. ಹುಡುಗ ತನ್ನ ತಂದೆಯತ್ತ ನೋಡುತ್ತಾನೆ; ಸಾವಿನಲ್ಲಾದರೂ ಆಕೆ ತನ್ನ ಹೆಂಡತಿಯಾಗಿದ್ದಳು ಎಂದು ಒಪ್ಪಿಕೊಳ್ಳಲಿ ತನ್ನ ತಂದೆ ಎಂಬ ಆಶೆಯಿಂದ. ಆದರೆ ನರಸು ಕೂಡ ತುಟಿಪಿಟಿಕ್ ಅನ್ನುವುದಿಲ್ಲ.
ಕೊನೆಗೆ ಹುಡುಗನೇ ಬಾಯಿಬಿಟ್ಟು “ಆಕೆ ನನ್ನ ತಾಯಿ” ಅಂತಾನೆ….

ಇದು ’ಮಾತಿ ಮಾಯ್’ (ನನ್ನ ತಾಯಿ) ಎಂಬ ಮರಾಠಿ ಚಿತ್ರದ ಕತೆ. ಇದು ಪ್ರಖ್ಯಾತ ಬೆಂಗಾಲಿ ಲೇಖಕಿ ಮಹಾಶ್ವೇತಾ ದೇವಿ ಅವರು ಬರೆದಿರುವ ಕತೆಯನ್ನು ಆಧರಿಸಿ ಚಿತ್ರಾ ಪಾಳೇಕರ್ ನಿರ್ದೇಶಿಸಿರುವ ಚಿತ್ರ.
ಚಂಡಿ ಎಂಬ ಮಹಿಳೆಯ ದುರಂತದ ಕತೆಯನ್ನು ಹೇಳುವ ಮೂಲಕ ನಮ್ಮ ಸಮಾಜದಲ್ಲಿ ದಲಿತರು ಅನುಭವಿಸುವ ಅವಮಾನ, ಅದರಲ್ಲೂ ಮಹಿಳೆಯರಿಗಾಗುವ ಅನ್ಯಾಯ, ವೈಯಕ್ತಿಕ ನೆಮ್ಮದಿಗಿಂತ ಸಾಮಾಜಿಕ ಸ್ಥಾನಮಾನಗಳಿಗೆ ಹೆಚ್ಚು ಬೆಲೆ ಕೊಡುವ ಪುರುಷ ಚಿಂತನೆ, ಇವೆಲ್ಲವನ್ನೂ ಚೆನ್ನಾಗಿ ಸೆರೆಹಿಡಿದಿದೆ ’ಮಾತಿ ಮಾಯ್’.

(ಮಾರ್ಚ್ 14, 2007ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಕೋಮುವಾದಿಗಳ ನಡುವೆ ಇಂಥವರೂ ಉಂಟು; ಧರ್ಮಗಳ ನಡುವಿನ ಬಾಂಧವ್ಯಕ್ಕೆ ಉದಾಹರಣೆಗಳು ಅಸಂಖ್ಯಾತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತುಂಬಾ ಸರಳವಾಗಿ ಅರ್ಥವಾಗುವಂತೆ ಈ ಕಥೆಯನ್ನು ಕನ್ನಡದಲ್ಲಿ ಬರೆದವರಿಗೆ ವoದನೆಗಳು. ಯಾರನ್ನು ಕಿಳಾಗಿ ಕಾಣದೆ ಸಮನವಾಗಿ ನೊಡಿ ಹಾಗೆಯೇ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನನಿಸಿ, ಈ ಸಮಾಜದಲ್ಲಿ ಅವರನ್ನು ಬದುಕಲು ಬಿಡಿ, ನಿಮ್ಮ ಮಾತು ಇನ್ನೊಬ್ಬರ ಜಿeವನದಲಿ ಆಟಗಾರರು ನಿವು ಆಗದಿರಿ. ಒಂದು ಹೆಣ್ಣು ಹುಟ್ಟುತ್ತಲೆ ನೊವು, ಸ‍ಂಕಟ ಅನುಭವಿಸುತ್ತಾರೆ. ಗಂಡನಾದವನು ಹೆಣ್ಣುನು ಅರ್ಥ ಮಾಡಿಕೊಳ್ಳಬೇಕು.

LEAVE A REPLY

Please enter your comment!
Please enter your name here

- Advertisment -

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...