Homeಅಂಕಣಗಳುಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

- Advertisement -
- Advertisement -

“ನಾನು ನಾನಲ್ಲ. ನನ್ನ ಹೆಸರೂ ನನ್ನದಲ್ಲ. ನನ್ನ ತಂದೆ-ತಾಯಿ ನನ್ನನ್ನು ಹೆತ್ತವರಲ್ಲ. ನನ್ನ ತಮ್ಮ ಮತ್ತು ತಂಗಿ ನನ್ನ ಒಡಹುಟ್ಟಿದವರಲ್ಲ. ನಾನಾಡುವ ಭಾಷೆ ನನ್ನ ಮಾತೃಭಾಷೆಯಲ್ಲ. ನಾನು ಪಾಲಿಸುವ ಧರ್ಮ ನನ್ನದಲ್ಲ. ನಾನು ವಾಸಿಸುವ ದೇಶ ನನ್ನ ದೇಶವಲ್ಲ. ಅಂದರೆ ನಾನು ಯಾರೆಂದು ನೀವು ಭಾವಿಸಿದ್ದೀರೋ ಆತ ನಾನಲ್ಲ. ನಾನು ನಿಜವಾಗಲೂ ಯಾರೆಂದು ಹೇಳಬೇಕೆಂಬ ಆಶೆ ನನಗೆ; ಆದರೆ ನನ್ನ ಬದುಕಿನ ಪರಿಸ್ಥಿತಿ ನಾನು ನಿಜ ಹೇಳದಂತೆ ತಡೆಯುತ್ತಿದೆ….”

ಇಂತಹ ಪರಿಸ್ಥಿತಿಯಲ್ಲಿರುವ ಒಬ್ಬ ಮನುಷ್ಯನ ಬದುಕು ಹೇಗಿರಬಹುದೆಂದು ತೋರಿಸಿರುವ ಫ್ರೆಂಚ್ ನಿರ್ದೇಶಕ ರಾಡು ಮಹೈಲಿಯಾನು ಅವರ ‘Live and become’ (ಬದುಕು ಮತ್ತು ಬೆಳೆ) ಎಂಬ ಅದ್ಭುತ ಸಿನಿಮಾವನ್ನು ಮೊನ್ನೆ ನೋಡಿದೆ.

ನಮ್ಮಲ್ಲಿ ಬಹಳಷ್ಟು ಜನ ಯಹೂದಿಯರೆಲ್ಲ ಬಿಳಿಯರು ಎಂದು ನಂಬಿದ್ದಾರೆ. ಆದರೆ ಆಫ್ರಿಕಾದ ಇಥಿಯೋಪಿಯಾದಲ್ಲೂ ಕಪ್ಪು ಬಣ್ಣದ ಯಹೂದಿಯರಿದ್ದರು. ಐತಿಹ್ಯದ ಪ್ರಕಾರ ಇಸ್ರೇಲಿನ ರಾಜ ಸಾಲೊಮನ್ ಮತ್ತು ಇಥಿಯೋಪಿಯಾದಲ್ಲಿದ್ದ ಶೀಬಾ ಸಾಮ್ರಾಜ್ಯದ ರಾಣಿಗೆ ಜನಿಸಿದ ಪುತ್ರ ಮನೆಲಿಕ್‌ನ ವಂಶಜರು ಈ ಕಪ್ಪು ಯಹೂದಿಗಳು.

ಎಂಭತ್ತರ ದಶಕದಲ್ಲಿ ಇಥಿಯೋಪಿಯಾದ ಮೇಲೆ ಕ್ಷಾಮ ಮತ್ತು ಆಂತರಿಕ ಯುದ್ಧ ಜೊತೆಜೊತೆಗೆ ದಾಳಿ ಇಟ್ಟಾಗ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆಯ ಸೂಡಾನ್ ದೇಶಕ್ಕೆ ವಲಸೆ ಹೋಗಿ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸಲಾರಂಭಿಸಿದರು. ಅವರಲ್ಲಿ ಯಹೂದಿಯರೂ ಇದ್ದರು. ಅದೇ ಹೊತ್ತಿಗೆ ಜಗತ್ತಿನಾದ್ಯಂತ ಚದುರಿಹೋಗಿದ್ದ ಯಹೂದಿಗಳಿಗೆ ಇಸ್ರೇಲ್ ತನ್ನ ಬಾಗಿಲನ್ನು ತೆರೆಯಿತಲ್ಲದೆ, ಇಥಿಯೋಪಿಯಾದಲ್ಲಿದ್ದ ಯಹೂದಿಯರನ್ನು ಇಸ್ರೇಲಿಗೆ ಹೊತ್ತೊಯ್ಯಲು ’ಅಪರೇಷನ್ ಮೋಸಸ್’ ಎಂಬ ಗುಪ್ತ ಕಾರ್ಯಾಚರಣೆಯನ್ನು ಕೈಗೊಂಡಿತು.

‘Live and become’ಚಿತ್ರದ ಕತೆ ಪ್ರಾರಂಭವಾಗುವುದೇ ಸೂಡಾನ್‌ನಲ್ಲಿನ ಒಂದು ನಿರಾಶ್ರಿತರ ಶಿಬಿರದಲ್ಲಿ. ಭವಿಷ್ಯವೇ ಇಲ್ಲದಂತಹ ಆ ಶಿಬಿರದಲ್ಲಿ ಒಂದು ದಿನ ಯಹೂದಿ ತಾಯಿಯೊಬ್ಬಳ ಮಗ ಅವಳ ಮಡಿಲಲ್ಲೇ ಕೊನೆಯುಸಿರೆಳೆಯುತ್ತಾನೆ. ಅವಳ ದುಃಖವನ್ನು ಕ್ರಿಶ್ಚಿಯನ್ ತಾಯಿಯೊಬ್ಬಳು ದೂರದಿಂದಲೇ ಗಮನಿಸುತ್ತಾಳೆ. ಅದೇ ದಿನ ರಾತ್ರಿ ಹಲವು ಯಹೂದಿಯರನ್ನು ಇಸ್ರೇಲಿಗೆ ಸಾಗಿಸಲು ಲಾರಿಗಳು ಬಂದಾಗ ಆ ಯಹೂದಿ ತಾಯಿ ಲಾರಿಯನ್ನೇರಲು ಜನರ ಸಾಲಿನಲ್ಲಿ ನಿಲ್ಲುತ್ತಾಳೆ. ಆ ಕ್ಷಣ ಕ್ರಿಶ್ಚಿಯನ್ ತಾಯಿಗೆ ಒಂದು ಪರಿಹಾರದ ಸೂತ್ರ ಹೊಳೆಯುತ್ತದೆ. ನಿದ್ರಿಸುತ್ತಿರುವ ತನ್ನ ಕ್ರಿಶ್ಚಿಯನ್ ಮಗನನ್ನು ಎದ್ದೇಳಿಸಿ ಸಾಲುಗಟ್ಟಿ ನಿಂತಿರುವ ಜನರತ್ತ ಬೊಟ್ಟು ಮಾಡಿ “ಹೋಗು” ಎಂದು ಆದೇಶಿಸುತ್ತಾಳೆ. ತನ್ನ ತಾಯಿಯೇ ತನ್ನನ್ನು ಓಡಿಸುತ್ತಿದ್ದಾಳೆ ಎಂದು ಭಾವಿಸುವ ಮಗ ಕಣ್ಣೀರಿಡುತ್ತಾನೆ. ಆದರೆ ಆಕೆ ಕರಗುವುದಿಲ್ಲ “ಹೋಗು, ಬದುಕು ಮತ್ತು ಬೆಳೆ” ಎಂದು ಆತನನ್ನು ದೂಡುತ್ತಾಳೆ. ವಿಧಿ ಇಲ್ಲದೆ ಆತ ಹೋಗುತ್ತಾನೆ. ತನ್ನ ಮಗನನ್ನು ಕಳೆದುಕೊಂಡಿರುವ ಯಹೂದಿ ತಾಯಿಯ ಕೈ ಹಿಡಿಯುತ್ತಾನೆ. ಆಕೆಗೆ ಗೊತ್ತಾಗುತ್ತದೆ: ನರಕ ಸದೃಶವಾಗಿರುವ ಶಿಬಿರದಿಂದ ತನ್ನ ಮಗನನ್ನು ಪಾರು ಮಾಡಲು ಕ್ರಿಶ್ಚಿಯನ್ ತಾಯಿ ತನ್ನೊಂದಿಗೆ ತನ್ನ ಪುತ್ರನನ್ನು ಗುಪ್ತವಾಗಿ ಸಾಗಿಸಲು ಇಚ್ಛಿಸುತ್ತಿದ್ದಾಳೆಂದು. ಆ ಹುಡುಗ ತೀರಿಕೊಂಡಿರುವ ತನ್ನ ಮಗನ ವಯಸ್ಸಿನನೇ ಆದ್ದರಿಂದ ಈತನೇ ತನ್ನ ಮಗ ಎಂದು ಅಧಿಕಾರಿಗಳಿಗೆ ಹೇಳಿ ಅವನನ್ನು ತನ್ನೊಂದಿಗೆ ಇಸ್ರೇಲಿಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ತನ್ನ ಮಗನ ಹೆಸರಾದ ಸಾಲೊಮನ್ ಹೆಸರನ್ನೇ ಈ ಹುಡುಗನಿಗೂ ಇಡುತ್ತಾಳೆ. ತನ್ನ ವಂಶದ ಮತ್ತು ಸಮುದಾಯದ ಪ್ರಮುಖರ ಹೆಸರನ್ನೆಲ್ಲ ಆತನಿಗೆ ಮನವರಿಕೆ ಮಾಡಿಕೊಟ್ಟು “ಎಂದೂ ನೀನು ನಿಜವಾಗಲೂ ಯಾರು ಎಂಬುದನ್ನು ಯಾರಿಗೂ ಹೇಳಬೇಡ” ಎಂದು ಹೇಳಿ ಕ್ಷಯರೋಗದಿಂದ ಸಾಯುತ್ತಾಳೆ.

ಹೊಸ ಹೆಸರು, ಹೊಸ ದೇಶ, ಹೊಸ ಪರಿಸರದಲ್ಲಿ ಬಾಲಕ ಏಕಾಂಗಿಯಾಗುತ್ತಾನೆ. ಆತನನ್ನು ದಾಖಲಿಸಿರುವ ಶಾಲೆಯಿಂದ ಓಡಿಹೋಗಲು ಯತ್ನಿಸುತ್ತಾನೆ, ಇತರೆ ಹುಡುಗರೊಂದಿಗೆ ಬಡಿದಾಡುತ್ತಾನೆ. ಆಹಾರವನ್ನು ತ್ಯಜಿಸಿ ಮೌನವಾಗಿ ಪ್ರತಿಭಟಿಸುತ್ತಾನೆ. ಕೊನೆಗೆ ಅವನನ್ನು ನಿಯಂತ್ರಿಸಲು ಆಗದೇ. ಇಬ್ಬರು ಮಕ್ಕಳನ್ನು ಹೊಂದಿರುವ ಬಿಳಿ ಯಹೂದಿ ದಂಪತಿಗಳಿಗೆ ಅಧಿಕಾರಿಗಳು ಅವನನ್ನು ದತ್ತು ನೀಡುತ್ತಾರೆ. ಅವರ ಮನೆಯಲ್ಲೂ ಬಾಲಕ ತನ್ನ ಬಂಡಾಯವನ್ನು ಮುಂದುವರೆಸುತ್ತಾನೆ. ಆದರೆ ಆ ದಂಪತಿಗಳು ಆತನನ್ನು ನಿಜವಾಗಲೂ ಪ್ರೀತಿಸುತ್ತಾರೆ. ಜನಾಂಗೀಯ ದ್ವೇಷಿಗಳಿಂದ ಅವನನ್ನು ರಕ್ಷಿಸುತ್ತಾರೆ. ತಾವು ನಾಸ್ತಿಕರಾದರೂ ಬಾಲಕನಿಗೆ ಯಹೂದಿ ಸಂಪ್ರದಾಯದಲ್ಲಿ ನಂಬಿಕೆ ಇದೆ ಎಂದು ಭಾವಿಸಿ ಆತನನ್ನು ಧಾರ್ಮಿಕ ಶಾಲೆಗೂ ದಾಖಲಿಸುತ್ತಾರೆ. ಪ್ರೀತಿಯಿಂದಲೇ ಬಾಲಕನ ಬಂಡಾಯವನ್ನು ಮುರಿಯುತ್ತಾರೆ. ತನ್ನನ್ನು ಹೆತ್ತ ತಾಯಿಗೆ ಹಂಬಲಿಸುತ್ತಲೇ, ತನ್ನನ್ನು ರಕ್ಷಿಸಿದ ತಾಯಿ ನೀಡಿದ ಎಚ್ಚರಿಕೆಯನ್ನು ಮರೆಯದೇ ತನ್ನನ್ನು ಸಾಕಿಸಲಹುತ್ತಿರುವ ತಾಯಿಗೆ ಹತ್ತಿರವಾಗುತ್ತಾನೆ.

PC: myCANAL

ಹೊಸ ದೇಶದ ಭಾಷೆ ಮತ್ತು ತನ್ನ ದತ್ತು ಸಂಸಾರದ ಫ್ರೆಂಚ್ ಭಾಷೆಗಳನ್ನು ಕಲಿಯುತ್ತಾನೆ. ಯಹೂದಿ ಸಂಪ್ರದಾಯಗಳನ್ನು ಪಾಲಿಸುತ್ತಾನೆ. ಇಸ್ರೇಲಿನಲ್ಲಿ ವಾಸಿಸುವ ಹಕ್ಕು ತನ್ನಂತಹ ಕಪ್ಪು ಯಹೂದಿಯರಿಗೂ ಇದೆ ಎಂದು ಪ್ರತಿಭಟಿಸುತ್ತಾನೆ, ವಿಧಿ ಇಲ್ಲದೆ ತಾನಿರುವ ಸಂದರ್ಭಕ್ಕೆ ಹೊಂದುಕೊಳ್ಳುತ್ತಾನೆ. ಆದರೆ ಅವನ ಆಳದಲ್ಲಿ ತನ್ನ ಬದುಕೇ ಒಂದು ದೊಡ್ಡ ಸುಳ್ಳು ಎಂಬ ನೋವು ಕಾಡುತ್ತಲೇ ಇರುತ್ತದೆ; ಹೆತ್ತ ತಾಯಿಯ ನೆನಪು ಮರುಕಳಿಸುತ್ತಿರುತ್ತದೆ.

ಆತ ಹದಿಹರೆಯದವನಾದಾಗ ಬಿಳಿ ಯಹೂದಿ ಯುವತಿಯೊಬ್ಬಳು ಅವನನ್ನು ಪ್ರೇಮಿಸಲಾರಂಭಿಸುತ್ತಾಳೆ. ಇಸ್ರೇಲ್ ಸರ್ಕಾರದ ನಿಯಮದ ಪ್ರಕಾರ ಆ ಹಂತದಲ್ಲಿ ಆತ ಸೈನ್ಯವನ್ನು ಸೇರಬೇಕು. ಚಿಕ್ಕವನಿದ್ದಾಗಲೇ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿರುವ ಅವನಿಗೆ ಸೈನ್ಯವನ್ನು ಸೇರಲು ಇಷ್ಟವಿಲ್ಲ. ಅತ್ತ ತನ್ನನ್ನು ಪ್ರೀತಿಸುತ್ತಿರುವ ಹುಡುಗಿಗೆ ತನ್ನ ಬಗ್ಗೆ ಸತ್ಯವನ್ನೂ ಹೇಳಲಾಗದೆ, ಇತ್ತ ಸೈನ್ಯಕ್ಕೆ ಸೇರಿ ಬಂದೂಕು ಹಿಡಿಯಲೂ ಆಗದೆ ಆತ ಫ್ರಾನ್ಸ್ ದೇಶಕ್ಕೆ ಪಲಾಯನ ಮಾಡುತ್ತಾನೆ. ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಡಾಕ್ಟರ್ ಆಗುತ್ತಾನೆ. ’ಗಡಿಗಳಿಲ್ಲದ ವೈದ್ಯರು’ ಎಂಬ ಸರ್ಕಾರೇತರ ಸಂಘಟನೆಯನ್ನು ಸೇರಿ ಯುದ್ಧ ಪೀಡಿತ ಪ್ರದೇಶಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಾನೆ. ಆದರೂ ಯುದ್ಧದ ಹಿಂಸೆ ಅವನನ್ನು ಬಸವಳಿಸುತ್ತದೆ. ಅನಾರೋಗ್ಯದಿಂದ ಹತ್ತು ವರ್ಷಗಳ ನಂತರ ಇಸ್ರೇಲಿಗೆ ವಾಪಸ್ ಬರುತ್ತಾನೆ. ಅಲ್ಲಿ ಅವನ ಹುಡುಗಿ ಆತನಿಗಾಗಿ ಕಾದಿರುತ್ತಾಳೆ. ತನ್ನ ತಂದೆ-ತಾಯಿಯ ವಿರೋಧದ ನಡುವೆಯೂ ಆಕೆ ಅವನನ್ನು ಮದುವೆಯಾಗುತ್ತಾಳೆ. ತಮ್ಮ ಮೊದಲನೆ ರಾತ್ರಿ ತನ್ನ ಹೆಂಡತಿಗಾದರೂ ತನ್ನ ಬಗ್ಗೆ ಸತ್ಯವನ್ನು ಹೇಳಬೇಕೆಂದು ಆತ ಪ್ರಯತ್ನಿಸುತ್ತಾನೆ. ಆದರೆ ಅವಳ ನಿಷ್ಕಳಂಕ ಪ್ರೀತಿ ಅವನ ಬಾಯಿ ಕಟ್ಟಿಹಾಕುತ್ತದೆ.

ಅವರಿಬ್ಬರ ಹೊಸ ಬದುಕು ನೆಮ್ಮದಿಯಿಂದ ಸಾಗುತ್ತದೆ. ಆದರೆ ಯಾವಾಗ ಆಕೆ ಗರ್ಭಿಣಿಯಾಗುತ್ತಾಳೋ ಆಗ ಆತನಿಂದ ಸುಳ್ಳನ್ನು ಮುಂದುವರಿಸಲಾಗುವುದಿಲ್ಲ. ಸತ್ಯ ಹೊರಬರುತ್ತದೆ. ತನ್ನ ಹೆಸರು ಸಾಲೊಮನ್ ಅಲ್ಲ, ತಾನು ಯಹೂದಿ ಅಲ್ಲ, ತಾನು ಇಸ್ರೇಲಿ ಅಲ್ಲ ಎಂದು ಹೇಳಿದಾಗ ಆಕೆ ಕಣ್ಣೀರಿಡುತ್ತಾಳೆ. ತಾನು ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನು ತ್ಯಜಿಸಿದ್ದು ಇಂಥವನಿಗಾಗಿಯೇ ಎಂದು ಕುಪಿತಳಾಗುತ್ತಾಳೆ. ಅವನನ್ನು ತೊರೆದುಹೋಗುತ್ತಾಳೆ.

ಆಗ ಆತನ ನೆರವಿಗೆ ಬರುವುದು ಅವನನ್ನು ಪ್ರೀತಿಯಿಂದ ಸಾಕಿಸಲುಹಿದ ತಾಯಿ. ಆತ ಬೇಕೆಂತಲೇ ಸುಳ್ಳು ಹೇಳಲಿಲ್ಲ, ಬದಲಾಗಿ ಆತ ಇದ್ದ ಸಂದರ್ಭ ಹಾಗಿತ್ತು ಎಂದು ತಾಯಿ ಮನವರಿಕೆ ಮಾಡಿಕೊಟ್ಟ ನಂತರ ಹೆಂಡತಿ ಆತನಲ್ಲಿಗೆ ವಾಪಸ್ ಬರುತ್ತಾಳೆ. ಹಾಗೆ ಬರುವಾಗ “ನಿನಗಾಗಿ ಮೂವರು ತಾಯಂದಿರು ಅದೆಷ್ಟು ಪ್ರೀತಿ ತೋರಿದರು” ಎಂದು ಉದ್ಗಾರವೆತ್ತುತ್ತಾಳೆ ಮತ್ತು ಆತ ತನ್ನ ಹೆತ್ತ ತಾಯಿಯನ್ನು ಹುಡುಕಬೇಕು ಎಂದು ಹೇಳುತ್ತಾಳೆ. ಅವರಿಗೊಬ್ಬ ಮಗ ಜನಿಸಿದಾಗ ಸಾಲೊಮನ್ ಆಫ್ರಿಕಾದ ನಿರಾಶ್ರಿತರ ಶಿಬಿರದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆಗ ಓರ್ವ ಮುದುಕಿ ಆತನ ಕಣ್ಣಿಗೆ ಬೀಳುತ್ತಾಳೆ, “ಅಮ್ಮಾ ಎಂದು ಆಕೆಯನ್ನು ಆಪ್ಪಿಕೊಳ್ಳುತ್ತಾನೆ. ಆಕೆಯ ಆಕ್ರಂದನದೊಂದಿಗೆ ಚಿತ್ರ ಮುಗಿಯುತ್ತದೆ.

ಈ ಜಗತ್ತಿನಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಅದೆಷ್ಟು ಜನ ಏನೇನನ್ನು ಮಾಡಿಲ್ಲ. ಅದೆಷ್ಟೋ ಜನ ಪ್ರಾಣರಕ್ಷಣೆಗಾಗಿ ಇತರರನ್ನು ಕೊಂದಿದ್ದಾರೆ, ಉಪವಾಸದಿಂದ ಸಾಯಬಾರದೆಂದು ಇತರೆ ಮನುಷ್ಯರ ಮಾಂಸವನ್ನು ತಿಂದು ಬದುಕಿದ್ದಾರೆ, ಮೂತ್ರವನ್ನು ಕುಡಿದು ತಮ್ಮ ಪ್ರಾಣ ಹೋಗದಂತೆ ನೋಡಿಕೊಂಡಿದ್ದಾರೆ, ನೂರಾರು ಸುಳ್ಳು ಹೇಳಿದ್ದಾರೆ. ತಮ್ಮನ್ನು ನಂಬಿರುವವರಿಗೇ ದ್ರೋಹ ಬಗೆದಿದ್ದಾರೆ.

‘Live and become’ ನ ನಾಯಕ ಕೂಡ ತನ್ನ ಪ್ರಾಣರಕ್ಷಣೆಗೆ ಸುಳ್ಳು ಹೇಳಿದ್ದಾನೆ. ತನ್ನ ಗುಟ್ಟು ರಟ್ಟಾಗದಂತೆ ಪ್ರತಿಕ್ಷಣ ಎಚ್ಚರಿಕೆ ವಹಿಸಿದ್ದಾನೆ. ಆದರೆ ಪ್ರೀತಿಗೆ ಆ ಸುಳ್ಳನ್ನು ಹೊರಗೆಡಹುವ ಮತ್ತು ಆ ಸುಳ್ಳನ್ನು ಮೀರಿ ಬದುಕುವ ಶಕ್ತಿ ಇದೆ ಎಂದು ಚಿತ್ರ ತೋರಿಸುತ್ತದೆ.

ಪ್ರೀತಿಯೇ ಹೆತ್ತ ತಾಯಿ ಅವನನ್ನು ದೂರ ಕಳುಹಿಸುವಂತೆ ಮಾಡುತ್ತದೆ. ಪ್ರೀತಿಯೇ ಮತ್ತೋರ್ವ ತಾಯಿ ಅವನನ್ನು ರಕ್ಷಿಸುವಂತೆ ಮಾಡುತ್ತದೆ. ಪ್ರೀತಿಯೇ ಮೂರನೆ ತಾಯಿ ಅವನನ್ನು ಸಾಕಿಸಲಹುವಂತೆ ನೋಡಿಕೊಳ್ಳುತ್ತದೆ. ಪ್ರೀತಿಯೇ ಅವನ ಹೆಂಡತಿ ಅವನನ್ನು ಸ್ವೀಕರಿಸುವಂತೆ ಮಾಡುತ್ತದೆ. ದೇಶ, ಭಾಷೆ, ಧರ್ಮ, ಬಣ್ಣದಂತಹ ಗಡಿಗಳನ್ನು ಗುರುತಿಸದ ಪ್ರೀತಿಗೆ ಇರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ಇದು ಆಗಸ್ಟ್ 05, 2009ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಮರುಪ್ರಕಟಣೆ


ಇದನ್ನೂ ಓದಿ: ಗೌರಿ ಕಾರ್ನರ್; ’ಮಾತಿ ಮಾಯ್’ ಸಿನಿಮಾ: ತಾಯಿಯ ಸಂಕಟವನ್ನು ಪಿಶಾಚಿಯ ಕೂಗೆಂದರೆ;

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...