Homeಅಂಕಣಗಳುಬೇಡವಾದ ಮುಸ್ಲಿಮರ ಓಟು

ಬೇಡವಾದ ಮುಸ್ಲಿಮರ ಓಟು

- Advertisement -
- Advertisement -
  • ರಹಮತ್ ತರೀಕೆರೆ |

ಈಚೆಗೆ ಕೆ.ಎಸ್. ಈಶ್ವರಪ್ಪನವರು ‘ನಮಗೆ ಮುಸ್ಲಿಮರ ಓಟಿನ ಅಗತ್ಯವಿಲ್ಲ’ ಎಂದು ಹೇಳಿದರು. ಸಜ್ಜನಿಕೆಗೆ ಹೆಸರಾಗಿದ್ದ ವಾಜಪೇಯಿ ಕೂಡ ಲಖನೋದಲ್ಲಿ ಚುನಾವಣೆಗೆ ನಿಂತಾಗ ‘ವಿ ಕ್ಯನ್ ಡೂ ವಿತ್‍ಔಟ್ ದೆಮ್’ ಎಂದು ಹೇಳಿದ್ದುಂಟು. ಬಿಜೆಪಿಯಲ್ಲಿ ಇದೇನು ಹೊಸಕರೆಯಲ್ಲ. ಮುಸ್ಲಿಮರಿಗೆ ಟಿಕೇಟು ಕೊಡದಿರುವುದರಲ್ಲೂ ಈ ಧೋರಣೆ ವ್ಯಕ್ತವಾಗಿದೆ. ಘಾತುಕವಾದದ್ದು ಓಟು ಹಾಕುವುದು-ಹಾಕದಿರುವುದಲ್ಲ. ನಾವು-ಅವರು ಎಂದು ವಿಭಜಿಸುವುದು. ನಿಜ, ಭಾರತದ ಬಹುತೇಕ ಮುಸ್ಲಿಮರು ಬಿಜೆಪಿಗೆ ಓಟುಹಾಕುವುದಿಲ್ಲ. ಆದರೆ ಚುನಾವಣಾ ರಾಜಕಾರಣದಲ್ಲಿ ಮುಸ್ಲಿಮರ ಹಾಗೂ ಬಿಜೆಪಿಯ ಸಂಬಂಧ ಇಷ್ಟು ಸರಳವಾಗಿದೆಯೇ?

ಈಶ್ವರಪ್ಪನವರ ಮಾತು ಕೇಳಿದಾಗ ತಟ್ಟನೆ ನೆನಪಾಗಿದ್ದು, ಹಳ್ಳಿಯೊಂದರಲ್ಲಿರುವ ನನ್ನಕ್ಕನ ಅಳಿಯ; ಹೆಂಡತಿ ಬಾನುವಿನ ತವರೂರಲ್ಲಿರುವ ಅವಳ ಚಿಕ್ಕಪ್ಪನ ಮಗ. ಇವರು ಬಿಜೆಪಿ ಕಾರ್ಯಕರ್ತರು. ಇಬ್ಬರಿಗೂ ಆರೆಸ್ಸೆಸ್ ಗೊತ್ತು. ಆದರೆ ಅವರ ಕಣ್ಣೆದುರು ಇರುವುದು ಆರೆಸ್ಸೆಸ್, ವಿಎಚ್‍ಪಿ, ಭಜರಂಗದಳವಲ್ಲ. ತಮ್ಮೂರಿನಲ್ಲಿ ರಾಜಕೀಯ ಅವಕಾಶ ಅರಸುತ್ತ ಬಿಜೆಪಿಗೆ ಹೋಗಿರುವ ವ್ಯಕ್ತಿಯ ಜತೆಗಿರುವ ಲಾಗಾಯ್ತಿನ ಆಪ್ತ ಸಂಬಂಧ; ಅವಕಾಶವಾದ. ಬಳ್ಳಾರಿಯಲ್ಲೂ ರಾಮುಲು-ರೆಡ್ಡಿಗಳ ಜತೆ ಶಾನೆ ಮುಸ್ಲಿಮರುಂಟು. ಈ ಭಾಗದ ಕೆಲವು ಮುಸ್ಲಿಂ ನಾಯಕರು ಕಾಂಗ್ರೆಸ್ಸಿನಲ್ಲಿ ಅನ್ಯಾಯವೆನಿಸಿದಾಗ ಸೇಡಿನಿಂದ ಬಿಜೆಪಿ ಸೇರುವ ಪರಿಪಾಠವಿದೆ. ಇಲ್ಲೆಲ್ಲ ಕೆಲಸ ಮಾಡುವ ತರ್ಕವೇನೆಂದರೆ, ಯಾವ ಪಕ್ಷವಾದರೇನು, ನಮಗೆ ಒಳಿತಾದರೆ ಸಾಕು ಎನ್ನುವ ಸಮೀಪದೃಷ್ಟಿ. ಆದರೆ ಈ ತಮ್ಮ ಪ್ರಿಯ ನಾಯಕರು ಅಂತಿಮವಾಗಿ ಆರೆಸ್ಸೆಸ್ಸಿನ ಹಿಂದೂರಾಷ್ಟ್ರದ ವಿಶಾಲಚಿತ್ರದಲ್ಲಿ ಒಂದು ಚುಕ್ಕಿಯಾಗಿ ಬದಲಾಗುತ್ತಾರೆ ಎಂಬ ಖಬರು ಅವರಿಗಿರುವುದಿಲ್ಲ. ತಕ್ಷಣ ಕಾಣುವುದು ಎರೆಹುಳ. ಅದರೊಳಗಿರುವ ಗಾಳವಲ್ಲ. ಎಷ್ಟೊ ಸಲ ಅವರ ನಾಯಕನೂ ಯಾರದೊ ಹತ್ಯಾರವಾಗಿರುವ ಬಲಿಪಶುವಾಗಿರುತ್ತಾನೆ.

ಸ್ವಹಿತಾಸಕ್ತಿಯುಳ್ಳ ಹಾಗೂ ದೂರದೃಷ್ಟಿಯ ರಾಜಕೀಯ ಪ್ರಜ್ಞೆಯಿರದ, ಸ್ಥಳೀಯ ರಾಜಕಾರಣದಲ್ಲಿ ಮಾತ್ರ ವ್ಯವಹರಿಸುವ ಸಾಮಾನ್ಯ ಮುಸ್ಲಿಮರ ರಾಜಕೀಯ ಆಯ್ಕೆಗಳನ್ನು ಹೇಗೊ ಅರ್ಥಮಾಡಿಕೊಳ್ಳಬಹುದು. ಆದರೆ ಶಹನÀವಾಜ್ ಹುಸೇನ್, ಮುಕ್ತಿಯಾರ್, ಎಂ.ಜೆ. ಅಕ್ಬರ್, ನಜ್ಮಾಹೆಪ್ತುಲ್ಲ ಇವರ ಮಾನಸಿಕತೆಯನ್ನು ಹೇಗೆ ಅರಿಯುವುದು? ಇವರಿಗೆ ಬಿಜೆಪಿ ಮುಖವಾಡದ ಹಿಂದಿರುವ ಆರೆಸ್ಸೆಸ್‍ನ ಮುಖ ಗೊತ್ತು; ಮುಸ್ಲಿಮರನ್ನು ಎರಡನೆಯ ದರ್ಜೆಗಿಳಿಸಬೇಕೆಂಬ ಹಿಂದುರಾಷ್ಟ್ರದ ಸಿದ್ಧಾಂತವೂ ಗೊತ್ತು. ಆದರೂ ಹೇಗೆ ಒಳಗಿದ್ದಾರೆ? ಈಶ್ವರಪ್ಪನಂಥವರು ಮಾಡುವ ವಿದ್ವೇಷದ ಹೇಳಿಕೆಗಳನ್ನು ಅವರು ಹೇಗೆ ಪರಿಭಾವಿಸುತ್ತಾರೆ ಎಂದು ಸೋಜಿಗವಾಗುತ್ತದೆ. ಸ್ವಹಿತಾಸಕ್ತಿ ಅಷ್ಟು ಅಮೂಲ್ಯವೇ? ಬೇರೆ ಪಕ್ಷದಲ್ಲೂ ಇದೇ ಅವಸ್ಥೆ ಎಂಬ ಹತಾಶ ವಾಸ್ತವಪ್ರಜ್ಞೆಯೇ? ಅಪ್ರಾಮಾಣಿಕರಾಗಿ ಬದುಕುವ ಗುಲಾಮಿಪ್ರಜ್ಞೆಯೇ, ಏನಿದ್ದೀತು?

ಈ ಸಲದ ಕರ್ನಾಟಕ ಚುನಾವಣೆಯಲ್ಲಿ ಉತ್ತರಪ್ರದೇಶ, ಗುಜರಾತ್ ಚುನಾವಣೆಗಳಿಗೆ ಹೋಲಿಸಿದರೆ, ಮುಸ್ಲಿಂದ್ವೇಷದ ಪರಿಭಾಷೆ ಹೆಚ್ಚು ಬಳಕೆಯಾಗಲಿಲ್ಲ. ಉತ್ತರದಲ್ಲಿರುವಂತೆ ದಕ್ಷಿಣದಲ್ಲಿ ಮತೀಯ ನುಡಿಗಟ್ಟಿಗೆ ಅಷ್ಟೊಂದು ಬೆಲೆಯಿಲ್ಲ ಎಂಬ ತಿಳುವಳಿಕೆಯು ಬಿಜೆಪಿಗೆ ಇರಬಹುದು. ಆದರೂ ಚುನಾವಣೆ ಎದುರಿಸದ ಸಂಘಪರಿವಾರದ ನಾಯಕರಿಗೆ ಹೋಲಿಸಿದರೆ, ಚುನಾವಣೆ ಎದುರಿಸುವ ರಾಜಕಾರಣಿಗಳು ನಂಜಿನ ಮಾತಾಡಲು ಹಿಂಜರಿಯುವರು. ಅದರಲ್ಲೂ ಯಡಿಯೂರಪ್ಪನವರು ಈಶ್ವರಪ್ಪನಂತೆ ಸಂಘದ ಶಾಖೆಯ ಮೂಲಕ ಬಂದವರಾದರೂ, ಮತೀಯ ಪರಿಭಾಷೆ ಬಳಸುವುದು ಕಡಿಮೆ. ಇದಕ್ಕೆ ಕಾರಣ, ಮುಸ್ಲಿಮರಿಲ್ಲದ ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಬಾಲ್ಯಾನುಭವವೊ, ಶಿಕಾರಿಪುರದ ರಾಜಕೀಯ ವಾಸ್ತವಿಕತೆಯೊ ಇರಬೇಕು. ಶಿಕಾರಿಪುರದಲ್ಲಿ ಅವರು ಕೋಮುಗಲಭೆ ಆಗಗೊಟ್ಟಿಲ್ಲ; ಅಲ್ಲಿನ ಮುಸ್ಲಿಮರೂ ಅವರಲ್ಲಿ ವಿಶ್ವಾಸವಿಟ್ಟಿದ್ದಾರೆ ಎಂದು ಹೇಳುವುದುಂಟು. ಹಾಗಿದ್ದರೆ, ಪಕ್ಷದೊಳಗೆ ಮಗ್ಗುಲಮುಳ್ಳಾಗಿರುವ ಯಡಿಯೂರಪ್ಪನವರಿಗೆ ತೊಡಕಾಗಬೇಕು ಎಂಬ ಉದ್ದೇಶವೇನಾದರೂ ಈಶ್ವರಪ್ಪನವರ ಹೇಳಿಕೆಯಲ್ಲಿದೆಯೊ? ಏನೇಯಿರಲಿ, ತಮ್ಮ ದೈನಿಕ ಬದುಕಿಗೆ ಸಣ್ಣಪುಟ್ಟ ರೀತಿಯಲ್ಲಿ ನೆರವಾಗುವ ಕೋಮುಗಲಭೆ ಮಾಡಗೊಡದ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಬೆಂಬಲಿಸುವ ಪ್ರವೃತ್ತಿ ಮುಸ್ಲಿಮರಲ್ಲಿದೆ.

ಇದಕ್ಕೆ ಪೂರಕವಾಗಿ ಬಿಜೆಪಿ ಮುಸ್ಲಿಮರ ಬೆಂಬಲವನ್ನೂ ಪಡೆಯಲು ಈಚಿನ ವರ್ಷಗಳಲ್ಲಿ ಯತ್ನಿಸುತ್ತಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರ ಮುಂದೆ ತಲಾಕ್ ಸಮಸ್ಯೆಯಿಟ್ಟು ಮುಸ್ಲಿಂ ಗಂಡಸರನ್ನು ಅವರ ಎದುರಾಳಿಗಳಂತೆ ಬಿಂಬಿಸಿ ಮೋದಿ, ಸಾಕಷ್ಟು ಮತಗಳನ್ನು ಪಡೆದರು ಎಂಬ ಅಭಿಪ್ರಾಯವಿದೆ. ಈಗ ಬುರ್ಖಾಧಾರಿ ಮಹಿಳೆಯೊಬ್ಬರು ಕರ್ನಾಟಕದ ಚುನಾವಣೆಯಲ್ಲಿ ಹುರಿಯಾಳು ನಿಲ್ಲಿಸಿರುವುದು ಪರೋಕ್ಷವಾಗಿ ಮುಸ್ಲಿಂ ಮಹಿಳೆಯರ ಮತ ಪಡೆದು ಬಿಜೆಪಿಗೆ ನೆರವಾಗಲೆಂದು ಎಂಬ ವ್ಯಾಖ್ಯಾನವಿದೆ. ‘ಸಬಕ್ ಸಾಥ್’ ಘೋಷಣೆ, `ಮುಸ್ಲಿಂ ರಾಷ್ಟ್ರೀಯ ಮಂಚ ಸ್ಥಾಪನೆ’ ಇವೆಲ್ಲ ವಿವಿಧ ತಂತ್ರಗಾರಿಕೆಯಿಂದ ಹುಟ್ಟಿದ ಉಪಾಯಗಳು. ತಾವು ಮುಖ್ಯಮಂತ್ರಿಯಾದರೆ ತಮ್ಮ ಸಂಪುಟದಲ್ಲಿ ಮುಸ್ಲಿಮರನ್ನು ಸೇರಿಸಿಕೊಳ್ಳುವ ವಾಗ್ದಾನವನ್ನು ಹಿಂದೆ ಯಡಿಯೂರಪ್ಪ ಮಾಡಿದ್ದರು. ಇದರ ಪರಿಣಾಮ ಮುಸ್ಲಿಮರ ಮತಗಳು ಎಷ್ಟು ವಾಲಿದವೊ ತಿಳಿಯದು. ಆದರೆ ಪರಿಣಾಮವಾಗಿ ಸಂಘಪರಿವಾರಕ್ಕೆ ಹಿತಕರ ದನಿಯಲ್ಲಿ ವಾಚಕರವಾಣಿ ಬರೆಯುತ್ತಿದ್ದ ಮಮ್ತಾಜಲಿ ಖಾನರಿಗೆ ಮಂತ್ರಿಯೋಗ ಸಿಕ್ಕಿತು. ಈಗ ಯಾಕೆ ಮುಸ್ಲಿಮರಿಗೆ ಟಿಕೇಟನ್ನು ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಯಡಿಯೂರಪ್ಪನವರು “ಅವರು ಗೆಲ್ಲುವುದಿಲ್ಲ’’ ಎಂದರು. ಇದು ನಿಜ. ಸಂಘ ಪರಿವಾರದ ಮತದಾರರಿಗೆ ಮುಸ್ಲಿಮರು ತಮ್ಮ ಪ್ರತಿನಿಧಿ ಆಗುವುದನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಬಿಜೆಪಿಯಲ್ಲಿರುವ ತಮ್ಮ ಧರ್ಮದವನೊಬ್ಬನನ್ನು ಬೆಂಬಲಿಸುವುದು ಮುಸ್ಲಿಮರಿಗೂ ಕಷ್ಟ.

‘ಸಬ್ ಕಾ ಸಾಥ್’ ಎಂಬ ಒಳಗೊಳ್ಳುವ್ರ, ‘ನಿಮ್ಮ ಓಟು ಬೇಕಿಲ್ಲ’ ಎಂಬ ದೂರೀಕರಿಸುವ ಹೇಳಿಕೆಗಳು ಪರಸ್ಪರ ವಿರುದ್ಧವಿದ್ದರೂ, ಅವುಗಳ ಹಿಂದೆ ಮತಗಳನ್ನು ಸೆಳೆಯುವ ಮತ್ತು ಹಿಂದೂ ಓಟುಗಳನ್ನು ಧ್ರುವೀಕರಿಸುವ ಸಮಾನ ಉದ್ದೇಶವಿದೆ; ಇದರ ಭಾಗವಾಗಿಯೇ ಅನಂತಕುಮಾರ್ ಹೆಗಡೆ ಮಾಡಿದ “ಮುಸ್ಲಿಮರನ್ನೂ ಇಸ್ಲಾಮನ್ನೂ ಪ್ರಪಂಚದಿಂದ ಒರೆಸಿಹಾಕುವ ತನಕ ಲೋಕಕ್ಕೆ ಶಾಂತಿಯಿಲ್ಲ” ಎಂಬ ಹೇಳಿಕೆಯನ್ನು ನೋಡಬೇಕು. ಬೆಳಗಾವಿ ಭಾಗದ ಶಾಸಕರೊಬ್ಬರು ಈ ಸಲದ ಚುನಾವಣೆ ಹಿಂದು ಮತ್ತು ಮುಸ್ಲಿಮರ ಪಾಕಿಸ್ತಾನ ಭಾರತದ, ಮಸೀದಿ ಮತ್ತು ಗುಡಿಯ ನಡುವಣ ಕದನ ಎಂದು ಹೇಳಿಕೆ ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ತೊಗಾಡಿಯಾ, ಮುತಾಲಿಕ್, ಕಲ್ಕಡ್ಕ, ಕಟಿಯಾರ್ ಮೊದಲಾದ ಚುನಾವಣೆಗೆ ನಿಲ್ಲದ ನಾಯಕರು ಕೊಡುತ್ತಲೇ ಬಂದಿದ್ದಾರೆ. ಆದರೆ ಚುನಾವಣೆಯಲ್ಲಿ ಗೆದ್ದ ಸಂಸದರು, ಶಾಸಕರು, ಮಂತ್ರಿಗಳು, ಸರ್ವಧರ್ಮಗಳನ್ನು ಸಮಾನವಾಗಿ ನೋಡಬೇಕೆಂಬ ಆಶಯವುಳ್ಳ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕಾರ ಮಾಡಿದವರು, ಈಗ ಇಂತಹ ಹೇಳಿಕೆಗಳನ್ನು ನಿರ್ಭಿಡೆಯಿಂದ ಕೊಡುತ್ತಿದ್ದಾರೆ. ಬಿಜೆಪಿಯಲ್ಲಿರುವ ಶೂದ್ರ ರಾಜಕಾರಣಿಗಳಿಗೆ ಆರೆಸ್ಸೆಸ್ಸನ್ನು ಸಂತೃಪ್ತವಾಗಿಸಲು ಹೆಚ್ಚು ಮುಸ್ಲಿಂ ವಿರೋಧಿ ಪರಿಭಾಷೆ ಬಳಸುವ ಒತ್ತಡವೂ ಇರಬಹುದು. ಎಂತಲೇ ದನದಮಾಂಸ ವಿಷಯದಲ್ಲಿ ಕೈಕಾಲು ನಾಲಗೆ ಕತ್ತರಿಸುವಂತಹ ಹೇಳಿಕೆಗಳನ್ನು ಈಶ್ವರಪ್ಪನವರು ಕೊಡುವಂತೆ ಮಾಡಲಾಗಿದೆ. ಆದರೆ ಮುಚ್ಚುಮರೆಯಿಲ್ಲದೆ ತಮ್ಮ ಮನದೊಳಗಿನ ಮಾತನ್ನು ಪ್ರಕಟಿಸಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಬೇಕು.

ಮುಸ್ಲಿಂ ದ್ವೇಷದ ನುಡಿಗಟ್ಟಿನಲ್ಲಿ ಗೋವಿಂದ ಕಾರಜೋಳ, ಚಂದ್ರಕಾಂತ ಬೆಲ್ಲದ, ಜಗದೀಶ ಶೆಟ್ಟರ್, ಶ್ರೀರಾಮುಲು ಮುಂತಾದವರು ಮಾತಾಡುವುದು ಕಡಿಮೆ. ಇದಕ್ಕೆ ಕಾರಣ ಅವರ ವ್ಯಕ್ತಿತ್ವದಲ್ಲಿರುವ ಉದಾರವಾದಿತ್ವವೊ, ಸ್ಥಳೀಯ ರಾಜಕೀಯ ಸಂಬಂಧಗಳು ಸಂಕೀರ್ಣತೆಯೊ, ಸಂಘಪರಿವಾರದ ತರಬೇತಿಯಿಲ್ಲದೆ ರಾಜಕೀಯ ಅವಕಾಶಕ್ಕಾಗಿ ಬಿಜೆಪಿಗೆ ಬಂದಿರುವುದೊ ಆಗಿದೆ. ಆದರೆ ಅನಂತಕುಮಾರ್ ಹೆಗಡೆ, ಸಂಘ ಪರಿವಾರದಲ್ಲಿರುವ ಮುಸ್ಲಿಂದ್ವೇಷದ ವಿಶಿಷ್ಟ ಪ್ರತಿನಿಧಿ. ಗೋಳ್ವಾಳ್ಕರ್ ದೇಶದ ಆಂತರಿಕ ಶತ್ರುಗಳಲ್ಲಿ ಮುಸ್ಲಿಮರನ್ನು ಮೊದಲ ಸ್ಥಾನದಲ್ಲಿರಿಸಿದ್ದರು; ಸಾವರ್ಕರ್ ಮುಸ್ಲಿಮರನ್ನು ಹೆಚ್ಚಿನ ಸೌಲಭ್ಯ ಕೇಳದೆ ಬದುಕುವ ಎರಡನೇ ದರ್ಜೆಯ ನಾಗರಿಕರಾಗಿಸಬೇಕೆಂದು ಹೇಳಿದ್ದರು; ಆದರೆ ಅನಂತ್, ಎರಡು ಹೆಜ್ಜೆ ಮುಂದೆ ಹೋಗಿ, ಸಮುದಾಯವನ್ನೇ ನಾಶಮಾಡಬೇಕು ಎಂದಿದ್ದಾರೆ. ಇದು ಒಬ್ಬನ ತಪ್ಪಿಗೆ ಇಡೀ ಕುಲವನ್ನೇ ನಾಶಮಾಡಬೇಕೆಂದು ಭೂಪ್ರದಕ್ಷಿಣೆ ಮಾಡುತ್ತ ಜನಸಂಹಾರಗೈದ ಕೊಡಲಿರಾಮನ ಪ್ರಜ್ಞೆ. ಹೆಗಡೆಯವರಾದರೂ ಪರಶುರಾಮನ ಸೃಷ್ಟಿ ಎನ್ನಲಾಗುವ ಕರಾವಳಿಯಿಂದ ಬಂದವರು. ಜನಾಂಗನಾಶದ ಪ್ರಯೋಗವನ್ನು ನಾಜಿಗಳು ಯಹೂದಿಗಳ ನಡೆಸಿದರು. ಆದರೆ ಯಹೂದಿಗಳನ್ನು ಸರ್ವನಾಶ ಮಾಡಲಾಗಲಿಲ್ಲ. ಮುಸ್ಲಿಮರನ್ನು ನಾಶಮಾಡುವ ಪ್ರಶ್ನೆಯೂ ಇಂತಹುದೇ. ಆದರೆ ಈ ದಿಸೆಯಲ್ಲಿ 2002ರಲ್ಲಿ ಗುಜರಾತಿನಲ್ಲಿ ಸಣ್ಣಪ್ರಯೋಗ ಮಾಡಲಾಯಿತು. ಇದರ ಫಲವಾಗಿ ರಾಷ್ಟ್ರನಾಯಕರಾಗಿ ಮೋದಿ ಹಾಗೂ ಅಮಿತ್‍ಶಾ ರೂಪುಗೊಂಡರು. ಅವರಿಗೆ ‘ಮುಸ್ಲಿಮರ ಓಟು ಬೇಡ’ ‘ಅವರನ್ನು ನಿರ್ಮೂಲ ಮಾಡಬೇಕು’ ಎಂಬ ಹೇಳಿಕೆಗಳು ಅಪರಾಧ ಅನಿಸಿರಲಿಕ್ಕಿಲ್ಲ.

ಕಾಂಗ್ರೆಸ್ ಮುಕ್ತ ಭಾರತ್ ಘೋಷಣೆಯು ಇದೇ ಮಾನಸಿಕತೆಯ ಇನ್ನೊಂದು ಭಾಗ. ಭಾರತದ ಸಾಮಾಜಿಕ ರಾಜಕೀಯ ವಾಸ್ತವದಲ್ಲಿ ಹಾಗೆ ಒಂದು ಜನಾಂಗವನ್ನು ತತ್ವವನ್ನು ಆಹಾರಕ್ರಮವನ್ನು ಭಾಷೆಯನ್ನು ಪಕ್ಷವನ್ನು ಸಂಸ್ಕೃತಿಯನ್ನು ನಾಶಮಾಡಲು ಸಾಧ್ಯವೇ? ತಾವು ಒಪ್ಪದ ಆಹಾರ, ಪಕ್ಷ, ಸಮುದಾಯ, ತತ್ವ ಚಿಂತಕ ಇರಬಾರದು ಎಂಬ ಆಲೋಚನಾಕ್ರಮವೇ ಡೆಮಾಕ್ರಸಿಗೆ ಸಂವಿಧಾನಕ್ಕೆ ವಿರುದ್ಧವಾದುದು. ಯಾವುದೇ ಬಹುಧರ್ಮೀಯ ಬಹುಜನಾಂಗೀಯ ಬಹುಸಂಸ್ಕೃತಿಯ ಬಹುಭಾಷಿಕ ಸಮಾಜದಲ್ಲಿ ಇದು ಹೇಯಚಿಂತನೆ. ನಿಜವಾಗಿ ಲೋಕದಿಂದ ಶಾಶ್ವತವಾಗಿ ಒರೆಸಿಹಾಕಬೇಕಿರುವ ಸಂಗತಿಗಳಿವೆ. ಅವೆಂದರೆ, ಬಡತನ ಹಸಿವು ಅನಕ್ಷರತೆ ಜನಾಂಗವಾದ, ಜಾತಿವಾದ ಹಾಗೂ ಎಲ್ಲ ಧರ್ಮಗಳಲ್ಲಿ ಕ್ಯಾನ್ಸರ್ ಗಡ್ಡೆಯಂತೆ ಬೆಳೆದಿರುವ ಮೂಲಭೂತವಾದ ಮತ್ತು ಕೋಮುವಾದ. ಎಲ್ಲ ಮತಧರ್ಮಗಳೂ ತಮ್ಮ ಮುಖಕ್ಕೆ ಕೆಸರು ಬಳಿಯುತ್ತಿರುವ ಮತೀಯ ವಿಕಾರಗಳನ್ನು ಉಜ್ಜಿ ತೆಗೆಯಬೇಕಿದೆ- ಹಿಂದೆ ವೈದ್ಯರು ಸಿಡುಬು ಕುಷ್ಠ ಕಾಲರಾ ಮುಂತಾದ ರೋಗಗಳಿಂದ ಮುಕ್ತವಾದ ವಿಶ್ವವನ್ನು ಕಲ್ಪಿಸಿಕೊಂಡು ಯುದ್ಧ ಮಾಡಿದ ಹಾಗೆ.

ಸೋಜಿಗವೆಂದರೆ, ನಿಮ್ಮ ಮತಬೇಡ, ನಿಮ್ಮನ್ನು ನಾಶಮಾಡುತ್ತೇವೆ ಎನ್ನುವ ಹೇಳಿಕೆಗಳಿಗೆ ಸಾಮಾನ್ಯ ಮುಸ್ಲಿಮರು ತಲೆಕೆಡಿಸಿಕೊಳ್ಳದೆ ನಿರ್ಲಿಪ್ತವಾಗಿರುವುದು. ‘ಆವರಣ’ ಕಾದಂಬರಿ ಬಂದಾಗಲೂ ಅವರ ಪ್ರತಿಕ್ರಿಯೆ ಹೀಗೇ ಇತ್ತು. ಅವರಿಗೆ ಈ ಬರೆಹ-ಮಾತು ತಲುಪುತ್ತಿಲ್ಲವೊ? ಇಂತಹವನ್ನು ಕೇಳಿಕೇಳಿ ಜಡ್ಡುಬಿದ್ದಿದ್ದಾರೊ? ಇವೆಲ್ಲ ಆಗುಹೋಗದ ಕೆಲಸವೆಂಬ ಆತ್ವವಿಶ್ವಾಸವೊ? ಕೊನೆಯದೇ ದಿಟವಿರಬೇಕು. ಆದರೆ ಇಂತಹ ವಿದ್ವೇಷದ ಹೇಳಿಕೆಗಳು ಪ್ರಜ್ಞಾವಂತರನ್ನು ಕಂಗೆಡಿಸಿವೆ. ಮನುಷ್ಯತ್ವದ ನೆಲೆಯಲ್ಲಿ ಸಮಾಜ ಕಟ್ಟಬಯಸುವ ನಾಗರಿಕಪ್ರಜ್ಞೆಯುಳ್ಳ ಎಲ್ಲರ ತಳಮಳಗಳೂ ಹೀಗೇ ಇರುತ್ತವೆ. ಪಾಕಿಸ್ತಾನ ಬಾಂಗ್ಲಾದೇಶಗಳಲ್ಲೂ ಹಿಂದುಗಳ ಬೆಂಬಲ ನಮಗೆ ಬೇಕಿಲ್ಲ ಎಂದು ಹೇಳುವ ರಾಜಕಾರಣಿಗಳಿರಬಹುದು; ಹಿಂದೂಗಳನ್ನು ದೇಶಬಿಟ್ಟು ಓಡಿಸಬೇಕು ಎಂಬ ಕೂಗುಮಾರಿಗಳು ಇದ್ದಾರು. ಅಮೆರಿಕ ಇಂಗ್ಲೆಂಡುಗಳಲ್ಲಿ ಟ್ರಂಪ್‍ನಂತಹ ಮತಿಗೆಟ್ಟವರು ಅಧಿಕಾರಕ್ಕೆ ಬಂದ ಬಳಿಕ, ವಲಸಿಗರನ್ನು ಹೊಡೆದೋಡಿಸಬೇಕು ಎಂಬ ಚಳುವಳಿ ಆರಂಭವಾಗಿದೆ. ಭಾರತದಿಂದ ಹೋದವರೇ ಇದರ ಬಲಿಪಶುಗಳು. ವ್ಯಂಗ್ಯವೆಂದರೆ, ಹೀಗೆ ಅಭದ್ರತೆಯಲ್ಲಿ ಅಪಮಾನದಲ್ಲಿ ಬದುಕುವ ಈ ಭಾರತೀಯ ಮೂಲದವರೇ ತಮ್ಮ ದೇಶದಲ್ಲಿರುವ ಜನಾಂಗದ್ವೇಷಿ ಸಿದ್ಧಾಂತದ ಬೆಂಬಲಿಗರು. ಆದರೆ ಎಲ್ಲ ಜೀವಂತ ಸಮಾಜಗಳಲ್ಲಿ ಮನುಷ್ಯತ್ವದ ಪಸೆ ಉಳಿದಿರುವುದು ಜನಾಂಗನಾಶದ ಧಮಕಿ ಹಾಕುವರಿಂದಲ್ಲ; ಅಂಥವರನ್ನು ಎದುರಿಸುವ ಮತ್ತು ಸೋಲಿಸುವ ಪ್ರಜ್ಞಾವಂತ ನಾಗರಿಕರಿಂದ; ನಮ್ಮಂತೆ ಅವರು ಸಹ ಎಂದು ತತ್ವದಲ್ಲಿ ಬದುಕುವ ಜನ ಸಾಮಾನ್ಯರಿಂದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...