Homeಮುಖಪುಟಅರ್ಥಶಾಸ್ತ್ರ ನೊಬೆಲ್ 2021; ಕನಿಷ್ಟ ವೇತನ, ಕಾರ್ಮಿಕ ವಲಸೆ - ಜನಜನಿತ ನಂಬಿಕೆಗಳನ್ನು ಬುಡಮೇಲು ಮಾಡಿದ...

ಅರ್ಥಶಾಸ್ತ್ರ ನೊಬೆಲ್ 2021; ಕನಿಷ್ಟ ವೇತನ, ಕಾರ್ಮಿಕ ವಲಸೆ – ಜನಜನಿತ ನಂಬಿಕೆಗಳನ್ನು ಬುಡಮೇಲು ಮಾಡಿದ ಸಂಶೋಧನೆಗೆ ಗೌರವ

- Advertisement -
- Advertisement -

1) ಕಾರ್ಮಿಕರಿಗೆ ಕನಿಷ್ಟ ವೇತನ ಕೊಟ್ಟರೆ ಉದ್ಯೋಗಾವಕಾಶವೇ ಕಡಿಮೆಯಾಗಿಬಿಡುತ್ತದೆ.

2) ನಮ್ಮ ನಗರಗಳಿಗೆ ಬೇರೆ ಊರುಗಳಿಂದ ಅಥವಾ ಬೇರೆ ದೇಶಗಳಿಂದ ಕಾರ್ಮಿಕರು ವಲಸೆ ಬಂದರೆ ಸ್ಥಳೀಯರಿಗೆ ಕೆಲಸ ಸಿಗುವುದು ಕಷ್ಟ ಆಗುವುದಲ್ಲದೆ ಸ್ಥಳೀಯರ ಸಂಪಾದನೆಗೂ ಏಟು ಬೀಳುತ್ತದೆ.

3) ಖಾಸಗಿ ಶಾಲೆ ಅಥವಾ ಖಾಸಗಿ ಕಾಲೇಜುಗಳಲ್ಲಿ ಓದಿದವರಿಗೆ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಓದಿದವರಿಗಿಂತ ಹೆಚ್ಚು ಸಂಬಳ ತರುವ ಕೆಲಸ ಸಿಗುತ್ತದೆ.

ಇವೆಲ್ಲ ಜನಸಾಮಾನ್ಯರು, ಕೈಗಾರಿಕೋದ್ಯಮಿಗಳು ಸೇರಿದಂತೆ ಇಡೀ ಸಮಾಜ ನೂರಾರು ವರ್ಷಗಳಿಂದ ನಂಬಿಕೊಂಡು ಬಂದ ಸಾಂಪ್ರದಾಯಿಕ ನಂಬಿಕೆಗಳಾಗಿದ್ದವು (Coventional Wisdom). ಕಡೆಯ ಮೂವತ್ತು ವರ್ಷಗಳ ತಮ್ಮ ಸಂಶೋಧನೆಗಳಿಂದ ಈ ಸಾಂಪ್ರದಾಯಿಕ ನಂಬಿಕೆಗಳು ವಾಸ್ತವ ಅಲ್ಲ ಎಂದು ತೋರಿಸಿದ ಮೂವರು ಅರ್ಥಶಾಸ್ತ್ರಜ್ಞರಿಗೆ 2021ರ ನೊಬೆಲ್ ಪ್ರಶಸ್ತಿ ಬಂದಿದೆ.

ಬರ್ಕಲಿಯ ಕ್ಯಾಲಿಫೋರ್ನಿಯ ಯುನಿವರ್ಸಿಟಿಯ ಪ್ರೊಫೆಸರ್ ಕೆನೆಡಿಯನ್ ಸಂಜಾತ ಡೇವಿಡ್ ಕಾರ್ಡ್‌ರವರು ಈ ನೊಬೆಲ್ ಬಹುಮಾನದಲ್ಲಿ ಅರ್ಧದಷ್ಟು (50%) ಪಡೆದಿದ್ದಾರೆ. ಉಳಿದರ್ಧವನ್ನು ಎಂಐಟಿಯ ಪ್ರೊಫೆಸರ್ ಜೋಷುವ ಡಿ ಯ್ಯಾಂಗ್ರಿಸ್ಟ್ (ಇಸ್ರೇಲಿಅಮೆರಿಕನ್) ಮತ್ತು ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ಗೈಡೋ ಡಬ್ಲ್ಯು ಇಂಬೆನ್ಸ್ (ಡಚಮೆರಿಕನ್) ಸಮನಾಗಿ ಹಂಚಿಕೊಂಡಿದ್ದಾರೆ.

ಈ ಆರ್ಥಿಕ ತಜ್ಞರು ತಮ್ಮ ಸಂಶೋಧನೆಗೆ “ನೈಜ ಪ್ರಯೋಗ” (Natural Experiment) ಎಂಬ ವಿಧಾನವನ್ನು ಅನುಸರಿಸಿದ್ದಾರೆ. ಬಿಡಿ ವ್ಯಕ್ತಿಗಳನ್ನು random ಆಗಿ ಅವರ ಸುತ್ತಲಿನ ಪರಿಸರ, ಅವರು ಕೆಲಸ ಮಾಡುವ ಸಂಸ್ಥೆ ಮತ್ತು ಇತರ ಪಾಲಿಸಿಗಳಿಗೆ ಸಂಬಂಧಿಸಿದ ವಿವಿಧ ಬದಲಾವಣೆಗಳಿಗೆ ಒಡ್ಡಿ ಅದರ ಪರಿಣಾಮವನ್ನು ಅಧ್ಯಯನ ಮಾಡುವುದು ಈ ನೈಜ ಪ್ರಯೋಗದ ರೀತಿ.

ಡೇವಿಡ್ ಕಾರ್ಡ್ ಮತ್ತು ಅಲನ್ ಕ್ರೂಗರ್ (ಖ್ಯಾತ ಆರ್ಥಿಕ ತಜ್ಞ, 1960-2019) ಇಬ್ಬರೂ ಕನಿಷ್ಟ ವೇತನ ನೀತಿಯಿಂದ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುವುದು (ಅಂದರೆ ಕಾರ್ಮಿಕರಿಗೆ ಇಂತಿಷ್ಟು ಕನಿಷ್ಟ ವೇತನ ಕೊಡಲೇಬೇಕು ಎಂದಾಗ, ಸಹಜವಾಗಿ ಕಂಪನಿಗಳು ಅದರಿಂದಾಗುವ ಆರ್ಥಿಕ ಹೊರೆ ತಗ್ಗಿಸಲು ತಮ್ಮಲ್ಲಿರುವ ಉದ್ಯೋಗಗಳ ಸಂಖ್ಯೆಯನ್ನೇ ಕಡಿತಗೊಳಿಸುತ್ತವೆ ಎಂಬ ಸಾಮಾನ್ಯ ನಂಬಿಕೆ) ಎಂಬ ಹಳೆಯ ನಂಬಿಕೆಯನ್ನು ತಮ್ಮ ಪ್ರಯೋಗದ ಮೂಲಕ ಪರೀಕ್ಷೆಗೆ ಒಡ್ಡುತ್ತಾರೆ. 1990ರಲ್ಲಿ ಅಮೆರಿಕಾದ ನ್ಯೂಜೆರ್ಸಿಯ ಫಾಸ್ಟ್‌ಫುಡ್ ಸೆಕ್ಟರ್‌ನಲ್ಲಿ ಕಾರ್ಮಿಕರ ಕನಿಷ್ಟ ವೇತನವನ್ನು $4.25ರಿಂದ $5.05ಗೆ ಹೆಚ್ಚಿಸಲಾಗುತ್ತದೆ. ಅದೇ ಸಮಯದಲ್ಲಿ ಪಕ್ಕದ ಪೆನ್ಸಿಲ್ವೆನಿಯದಲ್ಲಿ (Pennsylvania) ಕನಿಷ್ಟ ವೇತನದಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ. ಈ ಇಬ್ಬರೂ ಆರ್ಥಿಕ ತಜ್ಞರು ಎರಡೂ ರಾಜ್ಯಗಳ ಆ ಸಮಯದ ಉದ್ಯೋಗಗಳ ಸಂಖ್ಯೆಯಲ್ಲಿನ ಬದಲಾವಣೆಯನ್ನು ಹೋಲಿಸಿ ನ್ಯೂಜೆರ್ಸಿಯಲ್ಲಿ ಕನಿಷ್ಟ ವೇತನವನ್ನು ಹೆಚ್ಚಿಸಿದ್ದರೂ ಉದ್ಯೋಗಗಳ ಸಂಖ್ಯೆಯಲ್ಲಿ ಕಡಿತವಾಗಿಲ್ಲದಿದ್ದನ್ನು ಗುರುತಿಸುತ್ತಾರೆ. ಈ ಮೂಲಕ ಕನಿಷ್ಟ ವೇತನ ಪದ್ಧತಿಯು ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆ ವಾಸ್ತವ ಅಲ್ಲ ಎಂದು ಸಾಧಿಸುತ್ತಾರೆ. ಇವರ ಸಂಶೋಧನೆಯ ಆಧಾರದ ಮೇಲೆ ಹಲವು ಕಡೆ ಇದೇ ಮಾದರಿಯ ಪ್ರಯೋಗಗಳು ನಡೆದು ಈ ತಜ್ಞರು ಕಂಡುಹಿಡಿದ ಸತ್ಯ ಪದೇಪದೇ ಸಾಬೀತಾಗುತ್ತದೆ.

ಇವರ ಸಂಶೋಧನೆ ಸಾಬೀತುಪಡಿಸಿದ ವಾಸ್ತವದ ಆಧಾರದ ಮೇಲೆಯೇ ಬೈಡೆನ್ ಸರ್ಕಾರ ಅಮೆರಿಕದಲ್ಲಿ ಕನಿಷ್ಟ ವೇತನ ಹೆಚ್ಚಿಸಿ ಕಾನೂನು ಜಾರಿಗೊಳಿಸಿದ್ದು ಇಲ್ಲಿ ಪ್ರಸ್ತುತ ಎನಿಸುತ್ತದೆ. ಹಾಗೆಯೇ ಕರ್ನಾಟಕದಲ್ಲಿ 2016ರಲ್ಲಿ ಪೌರ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಗೊಳಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಯಾವುದೇ ಸರ್ಕಾರ ಖಾಸಗಿ ಕಂಪನಿಗಳು ತನ್ನ ಸಿಬ್ಬಂದಿಗಳಿಗೆ ಕನಿಷ್ಟ ವೇತನ ಕೊಡಬೇಕೆಂದು ನಿಯಮ ಮಾಡಿದಾಗ ಕೂಡ ಖಾಸಗಿ ಕಂಪನಿಗಳು ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡಿದ ಸಂದರ್ಭಗಳು ಬಹುತೇಕ ಇಲ್ಲ ಎಂಬ ಅಂಶ ಇವರ ಪ್ರಯೋಗಾತ್ಮಕ ಪರೀಕ್ಷೆಗಳಿಂದ ದೃಢಪಟ್ಟಿದೆ.

ಹಾಗೆಯೇ ವಲಸೆ ಕಾರ್ಮಿಕರ ಹೆಚ್ಚಿನ ವಲಸೆ ಸ್ಥಳೀಯರ ಉದ್ಯೋಗ ಮತ್ತು ಸಂಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಸಾರ್ವತ್ರಿಕ ನಂಬಿಕೆಯನ್ನು ಡೇವಿಡ್ ಕಾರ್ಡ್‌ರವರು ಅಮೆರಿಕದ ಮಿಯಾಮಿ ನಗರದ ವಸ್ತುಸ್ಥಿತಿಯ ಅಧ್ಯಯನ ಮಾಡಿ, ಅದು ಹುಸಿ ನಂಬಿಕೆಯೆಂದು ಸಾಬೀತುಗೊಳಿಸಿದ್ದಾರೆ. 1980ರಲ್ಲಿ ಕ್ಯೂಬಾದಿಂದ ಮಿಯಾಮಿ ನಗರಕ್ಕೆ ಹತ್ತರಹತ್ತಿರ ಒಂದೂಕಾಲು ಲಕ್ಷದಷ್ಟು ಕ್ಯೂಬನ್ನರು ವಲಸೆ ಬರುತ್ತಾರೆ. ಈ ವಲಸೆಯಿಂದ ಮಿಯಾಮಿ ನಗರದ ಕಾರ್ಮಿಕರ ಸಂಖ್ಯೆಯಲ್ಲಿ ಶೇ.7ರಷ್ಟು ಹೆಚ್ಚಳವಾಗುತ್ತದೆ. ಆದರೆ ಮಿಯಾಮಿ ಜನರ ಆತಂಕದಂತೆ ಸ್ಥಳೀಯ ನಾಗರಿಕರ ಉದ್ಯೋಗಾವಕಾಶಗಳಲ್ಲಿ ಮತ್ತು ವೇತನಗಳಲ್ಲಿ ಯಾವುದೇ ಇಳಿಮುಖವಾಗುವುದಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ವಲಸೆಯಿಂದ ಆಯಾ ನಗರದ productive ಆದ ಜನಗಳ ಸಂಖ್ಯೆ ಹೆಚ್ಚಾಗಿ ಅದರಿಂದ ಸಹಜವಾಗಿ ಅಲ್ಲಿನ ಆರ್ಥಿಕ ಚಟುವಟಿಕೆಯೂ ಹೆಚ್ಚುತ್ತದೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಮತ್ತು ವೇತನ ಹೆಚ್ಚಳ ಎರಡೂ ಆಗುತ್ತದೆಂದು ಡೇವಿಡ್ ಕಾರ್ಡ್‌ರವರು ತಮ್ಮ ಅಧ್ಯಯನದಿಂದ ನಿಸ್ಸಂಶಯವಾಗಿ ಸಾಬೀತುಪಡಿಸಿದ್ದಾರೆ.

ಪ್ರೊಫೆಸರ್ ಯ್ಯಾಂಗ್ರಿಸ್ಟ್ ಮತ್ತು ಪ್ರೊಫೆಸರ್ ಇಂಬೆನ್ಸ್‌ರವರು ಮುಖ್ಯವಾಗಿ ನಿತ್ಯದ ಬದುಕಿನ ಆಗುಹೋಗುಗಳು ಒಂದು ಆರ್ಥಿಕ ಸನ್ನಿವೇಶದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ನಿಖರವಾಗಿ ಅಳೆಯುವ ಎಕನಾಮಿಕ್ ಟೂಲ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಟೂಲ್‌ಗಳ ಸಹಾಯದಿಂದಲೇ ಹೆಚ್ಚು ವರ್ಷಗಳ ಕಾಲ ಶಾಲಾ ಕಾಲೇಜಿನಲ್ಲಿ ಕಲಿತವರು ಕಡಿಮೆ ವರ್ಷ ಕಲಿತವರಿಗಿಂತ ಹೆಚ್ಚು ವೇತನ ಪಡೆಯುತ್ತಾರೆ ಎಂದು ನಿರೂಪಿಸುತ್ತಾರೆ. ಇದಕ್ಕೆ ಸಂಬಂದಿಸಿದಂತೆ 1991ರಲ್ಲಿ ಇವರು ಕೈಗೊಂಡ ಒಂದು ಅಧ್ಯಯನದ ಪ್ರಕಾರ 11 ವರ್ಷ ಶಾಲಾ ಕಾಲೇಜಿನಲ್ಲಿ ಓದಿದವರಿಗಿಂತ 12 ವರ್ಷ ಓದಿದವರು 12% ಹೆಚ್ಚು ವೇತನವನ್ನೂ ಮತ್ತು 16 ವರ್ಷ ಓದಿದವರು 65% ಹೆಚ್ಚು ವೇತನವನ್ನೂ ಪಡೆಯುತ್ತಾರೆ. ಒಟ್ಟಾರೆಯಾಗಿ ಅಗತ್ಯವಿರುವ ಶಿಕ್ಷಣವನ್ನು ಅಗತ್ಯವಿರುವಷ್ಟು ಕಾಲ ಸರಿಯಾಗಿ ಕಲಿಯುವುದು ಹೆಚ್ಚಿನ ವೇತನ ಪಡೆಯಲು ಮತ್ತು ಅದರಿಂದ ಗುಣಮಟ್ಟದ ಜೀವನ ನಡೆಸಲು ಸಹಾಯ ಮಾಡುತ್ತದೆ ಎಂದು ಈ ಇಬ್ಬರೂ ತೋರಿಸಿಕೊಡುತ್ತಾರೆ.

ಹಾಗೆಯೇ ಅಮೆರಿಕದಲ್ಲಿ ಖಾಸಗಿ ಯೂನಿವರ್ಸಿಟಿಗಳಲ್ಲಿ ಕಲಿಯುವವರು ಸರ್ಕಾರಿ ಯೂನಿವರ್ಸಿಟಿಗಳಲ್ಲಿ ಕಲಿಯುವವರಿಗಿಂತ 14% ಹೆಚ್ಚು ವೇತನ ಪಡೆಯುತ್ತಾರೆ, ಆದರೆ, ಅವರು ಉತ್ತಮ ಆರ್ಥಿಕ ಹಿನ್ನೆಲೆಯ ಕುಟುಂಬದಿಂದ ಬಂದಿರುವುದು ಮುಖ್ಯ ಕಾರಣವೇ ಹೊರತು ಖಾಸಗಿ ಯೂನಿವರ್ಸಿಟಿಯಲ್ಲಿ ಓದಿದ್ದಲ್ಲ ಎಂದು ನಿರೂಪಿಸುತ್ತಾರೆ. ಇದರ ಮೂಲಕ ಸರ್ಕಾರಿ ಯೂನಿವರ್ಸಿಟಿಗಳಲ್ಲಿ ಓದುವುದು ಯಾವುದೇ ರೀತಿಯಲ್ಲಿ ವಿದ್ಯಾರ್ಥಿ/ನಿಯರ ಹಿನ್ನಡೆಗೆ ಕಾರಣವಾಗಿರುವುದಿಲ್ಲ ಎಂದು ತೋರಿಸುತ್ತಾರೆ.

ಒಟ್ಟಾರೆಯಾಗಿ ಕಾರ್ಮಿಕರಿಗೆ ಹೆಚ್ಚಿನ ವೇತನ ಕೊಡುವುದು ಮತ್ತು ಕಾರ್ಮಿಕರ ವಲಸೆ ಇವೆರಡೂ ಕೂಡ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವುದಲ್ಲದೆ ಉದ್ಯೋಗ ಸೃಷ್ಟಿಗೂ ನೆರವಾಗುತ್ತವೆ ಎಂಬ ಈ ತಜ್ಞರ ಸಂಶೋಧನೆ ವಿಶ್ವಾದ್ಯಂತ neo liberal ಸರ್ಕಾರಗಳು ಕಾರ್ಮಿಕರಿಗೆ ವಿರುದ್ಧವಾದ labour reforms ತರಲು ತವಕಿಸುತ್ತಿರುವ ಈ ಹೊತ್ತಿನಲ್ಲಿ ಬಹು ಮುಖ್ಯ ಸಂಶೋಧನೆಯಾಗಿದೆ.

ಈ ಸಂಶೋಧನೆಗಳ ಹಿನ್ನೆಲೆಯಲ್ಲಿ ಕೊರೊನಾ ಸಮಯದಲ್ಲಿ ನಮ್ಮ ದೇಶದ ಹಲವು ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ ಎಂಬ ಕಾರಣವೊಡ್ಡಿ ಜಾರಿಮಾಡಿದ ಕನಿಷ್ಟ ವೇತನದಲ್ಲಿ ಸಡಿಲಿಕೆ, ಕಾರ್ಮಿಕರ ಕೆಲಸದ ಅವಧಿಯ ಹೆಚ್ಚಳ ಇತ್ಯಾದಿ ಕ್ರಮಗಳು ಎಷ್ಟು ಅವೈಜ್ಞಾನಿಕವಾಗಿದ್ದವು ಎಂಬುದನ್ನು ಮನಗಾಣಬಹುದು.

ಹೀಗೆಯೇ ಡಾ.ಬಿ.ಆರ್. ಅಂಬೇಡ್ಕರ್‌ರವರು ಬ್ರಿಟಿಷ್ ಸರ್ಕಾರದಲ್ಲಿ ಕಾರ್ಮಿಕ ಮಂತ್ರಿಯಾಗಿದ್ದಾಗ ಜಾರಿಗೆ ತಂದ ಕಾರ್ಮಿಕರಿಗೆ ಕನಿಷ್ಠ ವೇತನ, ರಜೆ ಸೌಲಭ್ಯ, ಎಂಟು ಗಂಟೆ ಮಾತ್ರ ದುಡಿಮೆಯಂತಹ ಕ್ರಮಗಳು ಅವರಿಗಿದ್ದ ಆಳವಾದ ಜ್ಞಾನ ಮತ್ತು ದೂರದೃಷ್ಟಿಯನ್ನು ತೋರಿಸುತ್ತವೆ ಎಂಬುದನ್ನೂ ಈ ಸಂಶೋಧನೆಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬಹುದು.

ಕಡೆಯದಾಗಿ ಕಾರ್ಮಿಕರ ಅಂದರೆ ಬಹುತೇಕ ಒಟ್ಟು ಜನಸಮುದಾಯದ ಅಭಿವೃದ್ಧಿಗೇ ಮಾರಕವಾದಂತಿದ್ದ ಜಡ್ಡುಗಟ್ಟಿದ ನಂಬಿಕೆಗಳನ್ನು ಒಡೆದುಹಾಕಿದ ಈ ಸಂಶೋಧನೆಗಳ ಕಾರಣಕ್ಕೆ ಈ ಮೂರೂ ಆರ್ಥಿಕ ತಜ್ಞರಿಗೆ ಧನ್ಯವಾದಗಳನ್ನು ಹೇಳೋಣ. ಹಾಗೂ ಈ ಸಂಶೋಧನೆಗಳು ಸರ್ಕಾರಗಳ ಕಣ್ಣು ತೆರೆಸಿ ಕಾರ್ಮಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಲಿ ಎಂದು ಆಶಿಸೋಣ.

ಡಾ. ಬಿ.ಸಿ. ಬಸವರಾಜು

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ


ಇದನ್ನೂ ಓದಿ: 2021 ರಾಸಾಯನಶಾಸ್ತ್ರ ನೊಬೆಲ್; ಪರಿಸರ ಸ್ನೇಹಿ ರಾಸಾಯನಿಕ ವೇಗವರ್ಧಕಗಳ ಸಂಶೋಧನೆಗೆ ಸಂದ ಗೌರವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಈ ವಿಷಯದಲ್ಲಿ ನಾವು 1993 ನೇ ಇಸ್ಕಿಯಲ್ಲಿ 1309 ಸೂಚ್ಯಂಕಕ್ಕೆ ರೂಪಾಯಿ 1800 ಸಾಮನ್ಯ ಕನಿಷ್ಟ ವೇತನ ಸಿಗಬೇಕು ಎಂದು ಕೇಳಿ ಕರ್ನಾಟಕದಲ್ಲಿ ಹೋರಾಟ ಸುರು ಮಾಡಿದವು. 2009 ರಲ್ಲಿದೆ 10000 ರೂಪಾಯಿಗೆ ಹೋರಾಡಿದ ವು. ಈಗಲೂ ಕನಿಷ್ಟ ವೇತನ 21000 ರೂಪಾಯಿಗೆ ಏರಿಸಲು ಸರ್ಕಾರ ಕ್ರಮ ವಹಿಸ ಬೇಕು ಎಂದು ಒತ್ತಾಯಿಸುವ ಮೂಲಕ ನಮ್ಮ ಭೇದಕ್ಕೆ ಪ್ರಚಲಿತದಲ್ಲಿ ಇಟ್ಟು ಕೊಂಡು ಇದ್ದೇವೆ. ಕರ್ನಾಟಕದಲ್ಲಿ ಕನಿಷ್ಟ ಕೂಲಿ ಎಂಬ ನನ್ನ ಪುಸ್ತಕ ಹಗೂ ನನ್ನ Notes on Minimum Wages (Vjknair.academia.edu) ಇವುಗಳು ಓದಬಹುದಾದ ಲೇಖನಗಳು.

  2. Excellent Information Sir, ಕನ್ನಡದಲ್ಲಿ ಇಷ್ಟು ಸರಳವಾಗಿ ಮಾಹಿತಿ ನೀಡುವ ಏಕೈಕ ನ್ಯೂಸ್ ಬ್ಲಾಗ್!!!

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...