ಭಾರತ -ಪಾಕಿಸ್ತಾನ ಕ್ರಿಕೆಟ್ ಫೈನಲ್ ಪಂದ್ಯ ನಡೆಯುತ್ತಿದೆ. ಯಾವುದಾದರೂ ಒಂದು ತಂಡ ಗೆಲ್ಲಲು ಕೊನೆ ಎಸೆತಕ್ಕೆ ಎರಡು ರನ್ ಬೇಕಿದೆ… ಬ್ಯಾಟಿಂಗ್ ಮಾಡಲು ನಿಂತವನಿಗೆ “ಶತಕ” ಗಳಿಸಲು ನಾಲ್ಕು ರನ್ ಬೇಕಿದೆ. ಇನ್ನೇನು ಬೌಂಡರಿ ಹೋಯಿತು ಎನ್ನುವಷ್ಟರಲ್ಲಿ ಅಲ್ಲೊಬ್ಬ ಫೀಲ್ಡರ್ ಇರುತ್ತಾನೆ.. ಎರಡು ರನ್ ಓಡಿ ಗೆಲುವಿನ ನಗೆ ಬೀರಿದ ತಂಡದ ಖುಷಿ ಒಂದು ಕಡೆಯಾದರೆ “ಶತಕ” ಎರಡೇ ರನ್ ಗಳಿಂದ ಶತಕ ತಪ್ಪಿಸುಕೊಳ್ಳುತ್ತಾನೆಂದು ಅಭಿಮಾನಿಗಳು ಕೈಕೈ ಹಿಸುಕಿಕೊಳ್ಳುತ್ತಿರುವ ಸಂದರ್ಭದಲ್ಲಿ…. ಒಂದು ಅಚ್ಚರಿ ನಡೆದೇ ಬಿಡುತ್ತದೆ.
ಆ ಫೀಲ್ಡರ್…. ಈಗಾಗಲೇ ಎರಡು ರನ್ ಓಡಿ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿದ್ದವರಿಗೆ…. ಒಂದು ಟ್ವಿಸ್ಟ್ ಕೊಟ್ಟು ಇಡೀ ಅಭಿಮಾನಿಗಳ ಮನದಲ್ಲಿ ಮತ್ತೊಂದು ಕೋಲಾಹಲ ಎಬ್ಬಿಸಿ ಬಿಡುತ್ತಾನೆ.
ಸಲೀಸಾಗಿ ತನ್ನ ಕೈ ಸೇರುತ್ತಿದ್ದ ಬಾಲ್ ಅನ್ನು ಬೇಕೆಂತಲೇ ಬೌಂಡರಿಗೆ ಬಿಟ್ಟು ಬಿಡುತ್ತಾನೆ.
“ಶತಕ” ಭಾರಿಸಿದವನಿಗೆ ಅಚ್ಚರಿ ಮೇಲೆ ಅಚ್ಚರಿ. ಆತ “ಮ್ಯಾನ್ ಆಪ್ ದಿ ಮ್ಯಾಚ್” ಪ್ರಶಸ್ತಿ ಪಡೆದು ಅಭಿಪ್ರಾಯ ಹಂಚಿಕೊಳ್ಳುವಾಗ ಹೇಳುತ್ತಾನೆ, “ನಮ್ಮ ಮನೆಯಲ್ಲಿ ನನ್ನ ತಂದೆ ತಿನ್ನಲು ಹಣ್ಣು ಹಂಪಲು ತಂದಾಗ ನನ್ನ ಸಹೋದರ ತನ್ನ ಪಾಲನ್ನೂ ನನಗೆ ಕೊಟ್ಟು ಖುಷಿ ಗೊಳಿಸುತ್ತಿದ್ದ… ಆದರೆ ಇಂದು ನಮ್ಮಣ್ಣ ಮತ್ತು ನಾನು ಕಾರಣಾಂತರಗಳಿಂದ ದೂರವಾಗಿದ್ದೇವೆ. ಹೌದು. ಇಂದಲ್ಲಾ ನಾಳೆ ನಾವು ಒಂದಾಗುತ್ತೇವೆ. ನಮಗೆ ಶಾಂತಿ ಬೇಕಿದೆ. ನೆಮ್ಮದಿ ಬೇಕಿದೆ. ಇವತ್ತು ನನ್ನ ಸಹೋದರನನ್ನು ನೆನಪಿಸಿದ ನಿಮ್ಮ ತಂಡಕ್ಕೆ ನನ್ನ ಅನಂತ ಧನ್ಯವಾದಗಳು”
ನಂತರ.. ಬೌಂಡರಿಗೆ ಬಾಲ್ ಬಿಟ್ಟ ಆಟಗಾರ ತನ್ನ ಅಭಿಪ್ರಾಯ ಹೇಳುತ್ತಾನೆ.
“ನಾನು ಕೈಯಿಂದ ಬಾಲ್ ಬಿಟ್ಟು ಆಟದ ದೃಷ್ಟಿಯಿಂದ ತಪ್ಪು ಮಾಡಿರಬಹುದು. ಆದರೆ, ನೀವು ಆಗಲೇ ಪಂದ್ಯ ಗೆದ್ದಿದ್ದೀರಿ, ನಮಗೆ ಉಳಿದಿರುವುದು ನಿಮ್ಮ ಹೃದಯ ಗೆಲ್ಲುವುದೊಂದೇ ಮಾರ್ಗ… ಕೋಟ್ಯಾಂತರ ಮನಸ್ಸುಗಳನ್ನು ಬೆಸೆಯಬಹುದಾದ ಶಕ್ತಿ ನನ್ನ ಬಳಿ ಬರುತ್ತಿದ್ದ ಪುಟ್ಟ ಬಾಲ್ ಗೆ ಇದೆ ಎಂಬುದು ಆ ಕ್ಷಣ ಹೊಳೆಯಿತು. ಹೀಗಾಗಿ ನಾವು ಆಡುತ್ತಿರುವುದು ಆಟವೇ ಹೊರತು, ಯುದ್ದವಲ್ಲ ಎಂಬುದನ್ನು ನಾನು ತೋರಿಸಬೇಕಿತ್ತು. ನಾನು ಮಾಡಿದ್ದು ತಪ್ಪೇನಿಸಿದರೆ ನಮ್ಮ ತಂಡದವರ ನನಗೆ ಯಾವ ಶಿಕ್ಷೆ ವಿಧಿಸಿದರು ನಾನು ಅಭಿಮಾನದಿಂದ ಸ್ವೀಕರಿಸುತ್ತೇನೆ. ಮತ್ತೂ ಆ ಸಹೋದರರಿಬ್ಬರೂ ಆದಷ್ಟು ಬೇಗ ಒಂದಾಗಲಿ ಎಂದು ಹಾರೈಸುತ್ತೇನೆ”.
ಅಲ್ಲಿಗೆ ಎರಡು ತಂಡದ ಅಭಿಮಾನಿಗಳ ಮನದಲ್ಲಿ ಪುಟ್ಟದೊಂದು ಸ್ನೇಹದ ಸೇತುವೆ ತೆರೆದು ಕೊಂಡಿತು. ಅಭಿಮಾನಿಗಳ ಕಣ್ಣುಗಳು ಒದ್ದೆಯಾಗಿದ್ದವು. ಒಂದು ಕೊನೆ ಎಸೆತ ಇಡೀ ಮನಸ್ಸನ್ನು ಗೆಲ್ಲುವ, ಎರಡು ದೇಶಗಳ ಸಂಬಂಧಗಳನ್ನು ಬೆಸೆಯುವ ಶಕ್ತಿ ಹೊಂದಿದೆ ಎಂಬುದು ಎಲ್ಲರಿಗೂ ತಿಳಿಯಿತು. ಆಗ ಗೆಲುವಿನ ನಗೆ ಬೀರಿದ್ದು ಎರಡು ದೇಶದ ಅಭಿಮಾನಿಗಳು.
- ಅನಿಲ್ ಕುಮಾರ್ ಗುನ್ನಾಪೂರ
(ಅನಿಲ್ ಕುಮಾರ್ ಗುನ್ನಾಪೂರ ವಿಜಯಪುರ ಜಿಲ್ಲೆಯವರು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿತ ಇವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಉಳ್ಳವರು. “ಗುಬ್ಬಚ್ಚಿ ಗೂಡಿನಲ್ಲಿ…” ಇವರ ಪ್ರಕಟಿತ ಮೊದಲ ಕವನ ಸಂಕಲನ. ಅವರ ಕಥಾ ಸಂಕಲನ “ಕಲ್ಲು ಹೂವಿನ ನೆರಳು” ಇತ್ತೀಚೆಗೆ ಬಿಡುಗಡೆಯಾಗಿದೆ.)
ಇದನ್ನೂ ಓದಿ: ಪಂದ್ಯ ಸೋತರೂ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಕೊಹ್ಲಿ, ಧೋನಿ!