Homeಮುಖಪುಟರಾಹುಲ್ ಅಲ್ಲದಿದ್ದರೆ ಇನ್ಯಾರು??

ರಾಹುಲ್ ಅಲ್ಲದಿದ್ದರೆ ಇನ್ಯಾರು??

ಸೋಲೆಂಬುದು ಕ್ರೂರ. ಅದು ನಿಜಕ್ಕೂ ಸೋಲು ಎಷ್ಟು ಕೆಳಗಿಳಿಸಿರುತ್ತದೋ, ಅದಕ್ಕಿಂತ ಪಾತಾಳಕ್ಕೆ ನಿಮ್ಮನ್ನು ತಳ್ಳುತ್ತದೆ. ರಾಹುಲ್‍ಗಾಂಧಿಯ ವಿಚಾರದಲ್ಲಿ ಆಗುತ್ತಿರುವುದೂ ಅದೇ.

- Advertisement -
- Advertisement -

| ಡಾ.ಎಚ್.ವಿ.ವಾಸು |

ರಾಹುಲ್ ತನಗೆ ಅಧ್ಯಕ್ಷ ಪದವಿ ಬೇಡ ಎಂದರೆ, ಅದನ್ನು ಒಪ್ಪಿಕೊಳ್ಳುವವರು ಪಕ್ಷದಲ್ಲಿ ಯಾರಿದ್ದಾರೆ? ರಾಜೀವ್ ನಂತರ ಪಿ.ವಿ.ನರಸಿಂಹರಾವ್ ಮತ್ತು ಆ ನಂತರ ಶರದ್‍ಪವಾರ್ ಮತ್ತು ತೀರಾ ಇತ್ತೀಚಿನವರೆಗೂ ಪ್ರಣಬ್ ಮುಖರ್ಜಿಯಂಥವರಾದರೂ ಇದ್ದರು. ಈಗ ಅಂಥವರು ಒಬ್ಬರೂ ಪಕ್ಷದಲ್ಲಿ ಇಲ್ಲ. ದೇಶಾದ್ಯಂತ ಜನಪ್ರಿಯತೆ ಹೊಂದಿರುವವರು ಹೋಗಲಿ, ಪಕ್ಷದೊಳಗಾದರೂ ರಾಷ್ಟ್ರೀಯ ನಾಯಕತ್ವ ವಹಿಸಿಕೊಳ್ಳಬಲ್ಲವರು ಯಾರೂ ಇಲ್ಲ. ಒಂಥರಾ ಇದು ಆ ಕುಟುಂಬದ ತಲೆಗಂಟಿದ ಕರ್ಮವೂ ಹೌದು.

ಸೋಲೆಂಬುದು ಕ್ರೂರ. ಅದು ನಿಜಕ್ಕೂ ಸೋಲು ಎಷ್ಟು ಕೆಳಗಿಳಿಸಿರುತ್ತದೋ, ಅದಕ್ಕಿಂತ ಪಾತಾಳಕ್ಕೆ ನಿಮ್ಮನ್ನು ತಳ್ಳುತ್ತದೆ. ರಾಹುಲ್‍ಗಾಂಧಿಯ ವಿಚಾರದಲ್ಲಿ ಆಗುತ್ತಿರುವುದೂ ಅದೇ. ಇದೇ ಜಗತ್ತು (ಮೋದಿ ಮೀಡಿಯಾಗಳೂ ಸೇರಿ) ಕೇವಲ 7 ತಿಂಗಳ ಕೆಳಗೆ ರಾಹುಲ್‍ಗಾಂಧಿಯನ್ನು ಕೊಂಡಾಡಿದ್ದವು. ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‍ಗಢಗಳಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಮೂರೂ ಕಡೆಯೂ ಸ್ಥಳೀಯ ನಾಯಕರಿದ್ದರೂ, ರಾಹುಲ್‍ಗಾಂಧಿಯ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ಅದಾದನಂತರ ಮುಖಪುಟಗಳಲ್ಲಿ ರಾಹುಲ್‍ಗಾಂಧಿಯನ್ನು ವಿಜೃಂಭಿಸಿ ಬರೆಯಲಾಗಿತ್ತು (ಬಹುತೇಕ ಎಲ್ಲಾ ಇಂಗ್ಲಿಷ್ ವಾರಪತ್ರಿಕೆಗಳು ಮತ್ತು ಪಾಕ್ಷಿಕಗಳಲ್ಲಿ). ಆದರೆ, ಈಗ? ಆ ಮೂರೂ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸ್ಥಳೀಯ ನಾಯಕತ್ವವನ್ನೇ ಮುಂಚೂಣಿಗೆ ಬಿಟ್ಟಿದ್ದರೆ ರಾಜ್ಯಗಳಲ್ಲಿ ಇನ್ನೂ ದೊಡ್ಡ ಗೆಲುವು ಕಾಂಗ್ರೆಸ್ಸಿಗೆ ಸಿಗುತ್ತಿತ್ತು ಎಂದು ಬರೆಯಲಾಗುತ್ತಿದೆ (ಪ್ರಿಂಟ್‍ನಲ್ಲಿ ಶಿವಂ ವಿಜ್).

ಚುನಾವಣಾ ಫಲಿತಾಂಶ ಬರುವುದಕ್ಕೆ ಮುಂಚೆ, ಮತಗಟ್ಟೆ ಸಮೀಕ್ಷೆ (ಎಕ್ಸಿಟ್ ಪೋಲ್) ಹೊರಬಿದ್ದಾಗಲೇ ಯೋಗೇಂದ್ರ ಯಾದವ್ ‘ಕಾಂಗ್ರೆಸ್ ಸತ್ತು ಹೋಗಲೇಬೇಕು (Congress should die)’ ಎಂದು ಅಪ್ಪಣೆ ಕೊಡಿಸಿದ್ದರು. ಫಲಿತಾಂಶ ಬಂದ ನಂತರ ರಾಹುಲ್‍ಗಾಂಧಿ ಎಡವಿದ್ದೆಲ್ಲಿ ಎನ್ನುವುದರ ಕುರಿತು ಒಂದಾದ ನಂತರ ಒಂದು ವಿಶ್ಲೇಷಣೆಗಳು ಬರುತ್ತಲೇ ಇವೆ.

ಅದರಲ್ಲಿ ಎಲ್ಲವೂ ತಪ್ಪೇನಲ್ಲ. ಉದಾಹರಣೆಗೆ, ಚುನಾವಣೋತ್ತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ‘ರಾಹುಲ್‍ಗೆ ಪಕ್ಷದ ಪುನರ್‍ರಚನೆಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು’ ಎಂಬ ತೀರ್ಮಾನ ಆಯಿತು. ಆದರೆ, ವಿಶ್ಲೇಷಣಾಕಾರರು ಕೇಳುವ ಪ್ರಶ್ನೆ ಏನೆಂದರೆ ‘ಈ ಸ್ವಾತಂತ್ರ್ಯ ಅವರಿಗೆ ಈ ಮುಂಚೆಯೂ ಇತ್ತಲ್ಲವೇ?’ ಎಂದು. ಏಕೆಂದರೆ, ರಾಹುಲ್ ಹಿಂದೆಯೇ ನೇಮಿಸಿದ ಯುವ ಮುಂದಾಳುಗಳಾದ ಹರಿಯಾಣಾದ ಕಾಂಗ್ರೆಸ್ ಮುಖ್ಯಸ್ಥ, ಗುಜರಾತ್‍ನ ಕಾಂಗ್ರೆಸ್ ಮುಖ್ಯಸ್ಥ, ಮುಂಬೈನ ಕಾಂಗ್ರೆಸ್ ಮುಖ್ಯಸ್ಥರ ನೇತೃತ್ವದಲ್ಲಿ ಪಕ್ಷವು ತಲಾ ಸೊನ್ನೆ ಸ್ಥಾನಗಳನ್ನು ಗಳಿಸಿದೆ. ಹಾಗಾದರೆ ರಾಹುಲ್‍ರ ಪುನರ್‍ರಚನೆಯಿಂದ ಮತ್ತೇನು ನಿರೀಕ್ಷಿಸಬಹುದು?

‘ಕೆಲವು ನಾಯಕರು ತಮ್ಮ ಮಕ್ಕಳನ್ನು ಗೆಲ್ಲಿಸಿಕೊಳ್ಳುವುದರ ಕುರಿತೇ ಹೆಚ್ಚು ತಲೆ ಕೆಡಿಸಿಕೊಂಡಿದ್ದರು’ ಎಂದು ರಾಹುಲ್ ಹೇಳಿದರೆಂದು ಸುದ್ದಿಯಾಗಿದೆ. ಸ್ವತಃ ರಾಹುಲ್ ಸಹಾ ವಂಶಾಡಳಿತದ ಕುಡಿ ಮತ್ತು ಬಿಜೆಪಿಯಲ್ಲೂ ವಂಶಾಡಳಿತವಿದ್ದು, ಆ ಪಕ್ಷದಿಂದ ಸ್ಪರ್ಧಿಸಿದ ವಂಶದ ಕುಡಿಗಳೆಲ್ಲರೂ ಗೆದ್ದಿದ್ದಾರೆ! ಹಾಗಾಗಿ ಸೋಲಿನ ಅಸಲೀ ಕಾರಣವನ್ನು ಹುಡುಕುವಲ್ಲಿ ರಾಹುಲ್ ಮತ್ತು ಕಾಂಗ್ರೆಸ್ ನಿಷ್ಠುರ ಆತ್ಮಾವಲೋಕನಕ್ಕೆ ಮುಂದಾಗುತ್ತಿಲ್ಲ ಎಂಬುದು ಗೊತ್ತಾಗುತ್ತಿದೆ. ಬಹುಶಃ ಇಷ್ಟು ಕಡಿಮೆ ಸಮಯದಲ್ಲಿ ಅಷ್ಟೊಂದನ್ನು ನಿರೀಕ್ಷಿಸುವುದು ತಪ್ಪು ಆಗುತ್ತದೇನೋ?
ಕಾಂಗ್ರೆಸ್ ಪಕ್ಷದೊಳಗೆ ಇದು ವಂಶ ಪಾರಂಪರ್ಯ ಆಡಳಿತ ಎಂದು ಯಾರೂ ಪ್ರಶ್ನೆ ಎತ್ತಲಾರರು. ಏಕೆಂದರೆ ರಾಜೀವ್‍ಗಾಂಧಿ ಹತ್ಯೆಯ ನಂತರ ಕುಟುಂಬದ ಹಿರಿಯ ಸದಸ್ಯೆ ಸೋನಿಯಾಗಾಂಧಿ ರಾಜಕಾರಣಕ್ಕೆ ಬಂದಿರಲಿಲ್ಲ. ಅಮೇಥಿ, ರಾಯ್‍ಬರೇಲಿ ಎಲ್ಲಿಂದಲೂ ಸ್ಪರ್ಧೆ ಸಹಾ ಮಾಡಿರಲಿಲ್ಲ. ರಾಜೀವ್ ಹತ್ಯೆಯ ಅನುಕಂಪವೂ ಸೇರಿದಂತೆ ಕಾಂಗ್ರೆಸ್‍ಅನ್ನು ಅಧಿಕಾರಕ್ಕೆ ತಂದಾಗ, ಅಧ್ಯಕ್ಷರಾಗಿದ್ದ ಪಿ.ವಿ.ನರಸಿಂಹರಾವ್‍ರವರೇ ಪ್ರಧಾನಿಯೂ ಆದರು. ಸೋನಿಯಾ ಎಲ್ಲೂ ಮಧ್ಯಪ್ರವೇಶ ಮಾಡಲಿಲ್ಲ. ಅವರು ನಂತರದ ಚುನಾವಣೆಯಲ್ಲಿ ಸೋತಾಗ, ಅಧ್ಯಕ್ಷರು ರಾಜೀನಾಮೆ ಕೊಡಬೇಕಾಯಿತು. ಸೀತಾರಾಂ ಕೇಸರಿ ಅಧ್ಯಕ್ಷರಾದರು. ನಿಧಾನಕ್ಕೆ ಪಕ್ಷವು ದುರ್ಬಲವಾಗಿ ಅದರ ಕಥೆ ಮುಗಿಯುತ್ತದೆಂದು ಎಲ್ಲರಿಗೂ ಅನಿಸತೊಡಗಿತು. ಕಾಂಗ್ರೆಸ್ ಮುಖಂಡರು, ‘ನೀವು ನೇತೃತ್ವ ವಹಿಸಿಕೊಂಡು ಪಕ್ಷವನ್ನು ಉಳಿಸಿ’ ಎಂದು ಸೋನಿಯಾರಿಗೆ ದುಂಬಾಲು ಬಿದ್ದರು.

ಅಧ್ಯಕ್ಷೆಯಾದ ಮೇಲೆ ನಡೆದ ಮೊದಲ ಚುನಾವಣೆಯ ನಂತರದಲ್ಲಿ ಸ್ವಲ್ಪ ಆತುರಕ್ಕೆ ಬಿದ್ದ ಸೋನಿಯಾ ಅತೀ ಹೆಚ್ಚು ಸೀಟುಗಳನ್ನು ಪಡೆದ ತಮ್ಮ ಪಕ್ಷದ ನಾಯಕಿಯಾಗಿ ತನ್ನನ್ನು ಪ್ರಧಾನಿ ಮಾಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಆದರೆ, ಅಲ್ಲಿಂದಾಚೆಗೆ ಧೀಮಂತಿಕೆಯಿಂದ ನಡೆದುಕೊಂಡರು. ನಂತರದ ಚುನಾವಣೆಯಲ್ಲೂ ಎನ್‍ಡಿಎ ಅಧಿಕಾರಕ್ಕೆ ಬಂದಿತು. ವಿರೋಧ ಪಕ್ಷದ ನಾಯಕಿಯಾಗಿ ಸೋನಿಯಾ ಕೆಲಸ ಮಾಡಿದರು. ವಾಜಪೇಯಿಯವರ ‘ಇಂಡಿಯಾ ಶೈನಿಂಗ್’ ಆಳ್ವಿಕೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಅಲ್ಲಿಂದ 10 ವರ್ಷಗಳ ಕಾಲ ಯುಪಿಎಯನ್ನು ನಿಭಾಯಿಸಿದ್ದು ಸೋನಿಯಾ. ಈ ಸಾರಿ ಸೋನಿಯಾರನ್ನು ಯಾರೂ ಬೇಡ ಎನ್ನುವಂತಹ ಪರಿಸ್ಥಿತಿ ಇರಲಿಲ್ಲ. ವಿದೇಶೀ ಮಹಿಳೆಯನ್ನು ಒಪ್ಪಲಾರೆ ಎಂದು ಕಾಂಗ್ರೆಸ್‍ನಿಂದ ಹೊರಹೋಗಿ ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ’ ಸ್ಥಾಪಿಸಿಕೊಂಡಿದ್ದ ಶರದ್‍ಪವಾರ್ ಸಹಾ ಸೋನಿಯಾರಿಗೇ ಜೈ ಎಂದಿದ್ದರು. ಆದರೆ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಸೋನಿಯಾ ಮನಮೋಹನ್‍ಸಿಂಗ್‍ರನ್ನು ಪ್ರಧಾನಿಯಾಗಿಸಿದರು.

ಈಗಲೂ ರಾಹುಲ್ ತನಗೆ ಅಧ್ಯಕ್ಷ ಪದವಿ ಬೇಡ ಎಂದರೆ, ಅದನ್ನು ಒಪ್ಪಿಕೊಳ್ಳುವವರು ಪಕ್ಷದಲ್ಲಿ ಯಾರಿದ್ದಾರೆ? ರಾಜೀವ್ ನಂತರ ಪಿ.ವಿ.ನರಸಿಂಹರಾವ್ ಮತ್ತು ಆ ನಂತರ ಶರದ್‍ಪವಾರ್ ಮತ್ತು ತೀರಾ ಇತ್ತೀಚಿನವರೆಗೂ ಪ್ರಣಬ್ ಮುಖರ್ಜಿಯಂಥವರಾದರೂ ಇದ್ದರು. ಈಗ ಅಂಥವರು ಒಬ್ಬರೂ ಪಕ್ಷದಲ್ಲಿ ಇಲ್ಲ. ದೇಶಾದ್ಯಂತ ಜನಪ್ರಿಯತೆ ಹೊಂದಿರುವವರು ಹೋಗಲಿ, ಪಕ್ಷದೊಳಗಾದರೂ ರಾಷ್ಟ್ರೀಯ ನಾಯಕತ್ವ ವಹಿಸಿಕೊಳ್ಳಬಲ್ಲವರು ಯಾರೂ ಇಲ್ಲ. ಒಂಥರಾ ಇದು ಆ ಕುಟುಂಬದ ತಲೆಗಂಟಿದ ಕರ್ಮವೂ ಹೌದು. ಇದೇ ಕುಟುಂಬ, ಕಾಂಗ್ರೆಸ್ ಪಕ್ಷವನ್ನು ಒಂದಾಗಿ ಇಟ್ಟಿರುವ ಅಂಟು ಎಂದು ಹೇಳುವುದು ಸುಮ್ಮನೇ ಅಲ್ಲ.

ಹಾಗೆ ನೋಡಿದರೆ, ಕಳೆದ 3 ವರ್ಷಗಳ ರಾಹುಲ್‍ಗಾಂಧಿಯ ಬೆಳವಣಿಗೆ ಅಸಾಧಾರಣವಾದದ್ದು. ಅದಕ್ಕೆ ಮುಂಚಿನ ರಾಹುಲ್ ಬಗ್ಗೆಯೂ ಸಮೀಪವರ್ತಿಗಳ ಅನಿಸಿಕೆ ಬೇರೆಯೇ ಇತ್ತು. ಸ್ಯಾಮ್ ಪಿತ್ರೋಡಾ ಅದನ್ನು ಒಂದು ಸಂದರ್ಶನದಲ್ಲಿ ಹೇಳಿದ್ದರು. ‘ಕಾಂಗ್ರೆಸ್ ಸಾಯಬೇಕು’ ಎಂದು ಹೇಳಿದುದಕ್ಕೆ ಸ್ಪಷ್ಟೀಕರಣ ನೀಡಿ ಲೇಖನ ಬರೆದಾಗ ಯೋಗೇಂದ್ರ ಯಾದವ್ ಸಹಾ ಹೀಗೆಂದಿದ್ದರು. ‘ನಾನು ನೋಡಿರುವ ದೊಡ್ಡ ನಾಯಕರಲ್ಲೆಲ್ಲಾ ರಾಹುಲ್‍ಗಾಂಧಿ ಬಹಳ ಪ್ರಾಮಾಣಿಕ. ಮತ್ತು ಬಹಳಷ್ಟು ಜನರು ತಿಳಿದಿರುವುದಕ್ಕಿಂತ ಹೆಚ್ಚು ಬುದ್ಧಿವಂತ’. ಹೀಗಿದ್ದರೂ ರಾಹುಲ್ ಒಬ್ಬ ನಾಯಕ ಎನಿಸಿಕೊಳ್ಳಲು ಗುಜರಾತ್‍ನ ಚುನಾವಣೆ ಬರಬೇಕಾಯಿತು.

ಆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸರ್ಕಾರ ರಚಿಸಲಾಗಲಿಲ್ಲ. ಆದರೆ, ಬಿಜೆಪಿಯ ಗೆಲುವು ಗೆಲುವಲ್ಲ ಎನ್ನುವಂತೆ ಮಾಡಲು ಸಾಧ್ಯವಾಗಿತ್ತು. ರಾಹುಲ್ ತನ್ನ ಟೀಂಅನ್ನು ಕೆಲಸಕ್ಕಿಳಿಸಿದ ರೀತಿ, ಪ್ರಚಾರದಲ್ಲಿ ತೋರಿದ ಆಕ್ರಮಣಶೀಲತೆ, ಜಿಗ್ನೇಶ್, ಅಲ್ಪೇಶ್, ಹಾರ್ದಿಕ್ ಪಟೇಲರಂತಹ ವಿವಿಧ ಯುವನಾಯಕರೊಂದಿಗೆ ಸಾಧಿಸಿದ ಸಾಮರಸ್ಯ ಎಲ್ಲವೂ ವಿಶೇಷವಾಗಿತ್ತು. ಅಲ್ಲಿಂದಾಚೆಗೆ ರಾಹುಲ್ ನಾಯಕತ್ವ ಕಳೆಗಟ್ಟುತ್ತಾ ಬಂದಿತ್ತು. ಅದು ಶಿಖರ ಮುಟ್ಟಿದ್ದು ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಹೊತ್ತಿಗೆ.

ರಫೇಲ್ ಹಗರಣದ ವಿಚಾರದಲ್ಲೂ ರಾಹುಲ್ ಏಕಾಂಗಿ ವೀರನಂತೆ ಹೋರಾಡಿದರು. ಚೌಕೀದಾರ್ ಚೋರ್ ಹೈ ಎಂಬುದನ್ನು ಒಂದು ವಲಯದ ಮಟ್ಟಿಗಾದರೂ ಚಾಲ್ತಿಗೆ ತಂದರು. ಮೋದಿಯ ವಿರುದ್ಧ, ಮೋದಿ ಗುಣಗಳಿಗೆ ತದ್ವಿರುದ್ಧನಾದ ಮನುಷ್ಯನಾಗಿ ತನ್ನ ವ್ಯಕ್ತಿತ್ವವನ್ನು ಮುಂದಿಟ್ಟರು. ಮೋದಿ ವಿರೋಧಿಗಳಿಗೆಲ್ಲಾ ಅವರು ಇಷ್ಟವಾಗತೊಡಗಿದ್ದರು. ಇಷ್ಟೆಲ್ಲಾ ಇದ್ದರೂ, ಮಾಡಲಾಗದ್ದು ಹಲವಿತ್ತು. ಮೈತ್ರಿ ಕುದುರಿಸುವಲ್ಲಿ ಅವರು ಯಶಸ್ವಿಯಾಗಲಿಲ್ಲ. ಪುಲ್ವಾಮಾ ನಂತರದ ಸಂದರ್ಭವನ್ನು ಸರಿಯಾಗಿ ನಿಭಾಯಿಸಲಿಲ್ಲ. ಅಭ್ಯರ್ಥಿಗಳ ಆಯ್ಕೆ ಮತ್ತು ದೇಶಾದ್ಯಂತ ಸ್ಥಳೀಯ ನಾಯಕರುಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವರು ಸರಿಯಾಗಿ ಕ್ರಿಯಾಶೀಲರಾಗುವಂತೆ ಮಾಡಲಿಲ್ಲ. ಇದನ್ನು ಮೋದಿ ಮತ್ತು ತನ್ನ ವಿರುದ್ಧದ ಸಂಗ್ರಾಮವನ್ನಾಗಿ ಬಿಂಬಿಸಲು ತಾನೂ ಕಾರಣರಾದರು. ಇಂತಹ ಹಲವು ಸಮಸ್ಯೆಗಳಿದ್ದವು.

ಅದೇನೇ ಇದ್ದರೂ, ಸೋತಿದ್ದು ರಾಹುಲ್‍ರಲ್ಲಿದ್ದ ತಪ್ಪುಗಳ ಕಾರಣಕ್ಕಲ್ಲ. ಈ ಚುನಾವಣೆಯ ಮಟ್ಟಿಗೆ ಮೋದಿ-ಷಾರನ್ನು ಕಟ್ಟಿಹಾಕಲು ಸಾಧ್ಯವಿರಲಿಲ್ಲ. ಅದಕ್ಕೆ ಕೇವಲ ಮೋದಿ-ಷಾ ಕಾರಣರಲ್ಲ. ಅವರ ಜೊತೆಗೆ, ಮೀಡಿಯಾ, ಆರೆಸ್ಸೆಸ್ ಮತ್ತು ಕಾರ್ಪೊರೇಟ್ ಹೌಸ್‍ಗಳ ಜಂಟಿ ಕೂಟ ಅಭೇದ್ಯವಾಗಿತ್ತು.

ಆದರೆ, ಈಗ ಸೋಲು ಸೋಲೇ. ಅದನ್ನು ಇಲ್ಲವೆನ್ನಲಾಗುವುದಿಲ್ಲ. ರಾಹುಲ್ ರಾಜೀನಾಮೆಯ ಪ್ರಸ್ತಾಪ ಮಾಡಿದ್ದಾರೆ. ಯಥಾಪ್ರಕಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅದನ್ನು ತಿರಸ್ಕರಿಸಿದೆ. ಆದರೆ, ರಾಹುಲ್‍ಗಾಂಧಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ನೀವು ಮುಂದಿನ ಆಯ್ಕೆ ಮಾಡಿಕೊಳ್ಳುವ ತನಕ ಮಾತ್ರ ತಾನಿರುತ್ತೇನೆ ಎಂದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ, ತನ್ನ ಜಾಗದಲ್ಲಿ ಪ್ರಿಯಾಂಕಾ ಇರಲಿ ಎಂದು ಹೇಳಬೇಡಿ ಎಂದೂ ತಾಕೀತು ಮಾಡಿದ್ದಾರಂತೆ. ವಾಸ್ತವ ಏನು? ಕಾಂಗ್ರೆಸ್ ಸೋತಿರಬಹುದು. 543 ಲೋಕಸಭಾ ಕ್ಷೇತ್ರಗಳಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಪಡೆದುಕೊಳ್ಳಲು ಬೇಕಾದ 55 ಸ್ಥಾನಗಳನ್ನೂ ಪಡೆದುಕೊಂಡಿಲ್ಲದೇ ಇರಬಹುದು. ಆದರೆ, ಅದಕ್ಕೆ ಬಂದಿರುವ ಒಟ್ಟು ಮತಗಳ ಪ್ರಮಾಣ 19.51%. ಇದೇನೂ ಕಡಿಮೆಯಲ್ಲ.

ದೇಶದ ಪ್ರತಿಯೊಂದು ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿದೆ. ಈಗಲೂ ಐದು ದೊಡ್ಡ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಇಂತಹ ಪಕ್ಷವನ್ನು ನಿಭಾಯಿಸುವ ಮತ್ತು ಎಲ್ಲರ ವಿಶ್ವಾಸ ಗಳಿಸುವ ಛಾತಿಯನ್ನು ತೋರಿಸುವುದು ಸುಲಭವಲ್ಲ. ಹಾಗಾಗಿಯೇ ಬೇರೆ ಇನ್ಯಾರೂ ಮುಂದೆ ಬರುವ ಧೈರ್ಯ ತೋರಲಾರರು. ಹಾಗೆಯೇ ಯಾರ ಹೆಸರನ್ನೂ ಪ್ರಸ್ತಾಪಿಸುವುದನ್ನೂ ಮಾಡಲಾರರು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಇನ್ನೊಬ್ಬರ ಹೆಸರನ್ನು ಸ್ವತಃ ರಾಹುಲ್ ಪ್ರಸ್ತಾಪ ಮಾಡಿದರೆ ಅದಕ್ಕೆ ಒಪ್ಪುವುದು ಸುಲಭ. ಇದು ಗೊತ್ತಿರುವುದರಿಂದಲೇ, ಶಶಿ ತರೂರ್ ಲೋಕಸಭೆಯಲ್ಲಿ ಆ ಸ್ಥಾನ ನಿಭಾಯಿಸು ಎಂದು ಪಕ್ಷ ಹೇಳಿದರೆ ತಾನು ಮಾಡುತ್ತೇನೆ, ಆದರೆ ಅಧ್ಯಕ್ಷರಾಗಿ ರಾಹುಲ್ ಮುಂದುವರೆಯಬೇಕು ಎಂದು ಹೇಳಿದ್ದಾರೆ.

ಇವೆಲ್ಲಕ್ಕಿಂತ ಮುಖ್ಯವಾದ ಇನ್ನೊಂದು ಸಂಗತಿಯೂ ಇದೆ. ಆರೆಸ್ಸೆಸ್ ಬೆಂಬಲಿತ ಮೋದಿ ಸರ್ಕಾರದ ವಿರುದ್ಧ ಸಾರ್ವಜನಿಕ ಕಥನ ಏನನ್ನು ಹೇಗೆ ರೂಪಿಸಬೇಕು ಎಂಬುದು ಚರ್ಚಾರ್ಹವಾದ ವಿಚಾರ. ಆದರೆ, ಇದು ಎರಡು ವಿಚಾರಗಳ ಸಂಘರ್ಷ, ದ್ವೇಷ ಮತ್ತು ಪ್ರೀತಿಯ ನಡುವಿನ, ಹಿಂಸೆ ಮತ್ತು ಒಳಗೊಳ್ಳುವಿಕೆಯ ನಡುವಿನ ಸಂಘರ್ಷ ಎಂದು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಅದನ್ನು ಮುಂದಿಡುತ್ತಿರುವ ವ್ಯಕ್ತಿ ರಾಹುಲ್‍ಗಾಂಧಿ. ಇತ್ತೀಚಿನ ಎರಡು ಪತ್ರಿಕಾಗೋಷ್ಠಿಗಳಲ್ಲೂ ಅವರದನ್ನು ಮುಂದಿಟ್ಟಿದ್ದಾರೆ. ರಾಹುಲ್‍ರ ಸ್ಥಾನವನ್ನು ತುಂಬಬೇಕಿರುವ ಬೇರೊಬ್ಬ ವ್ಯಕ್ತಿ ಅದನ್ನು ಆ ರೀತಿ ಗ್ರಹಿಸಿ ದೇಶಕ್ಕೆ ಇಂದು ಅಗತ್ಯವಿರುವ ರೀತಿಯ ಪ್ರತಿಪಕ್ಷವನ್ನು ಕಟ್ಟಬಲ್ಲರೇ ಎಂಬುದು ಬಹಳ ಮಹತ್ವದ ಸಂಗತಿಯಾಗಿದೆ.

ಇವೆಲ್ಲವೂ ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಮಾತ್ರ ಮುಖ್ಯವಾದ ಪ್ರಶ್ನೆಗಳಲ್ಲ.

ಈ ಸುದ್ದಿಯನ್ನು ನೋಡಲು/ಕೇಳಲು ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...