ಬೆಂಗಳೂರಿನಲ್ಲಿ ಬೀಳುತ್ತಿರುವ ಮಳೆ-ಗಾಳಿಗೆ ಮರಗಳು ಉರುಳಿ ಬೀಳುತ್ತಿವೆ. ಅಷ್ಟೆಲ್ಲಾ ಮಳೆ ಬಿದ್ದರೂ ಧಗೆ ಆರದೇ ಜನರು ಕೂಲರ್ಗಳ ಮೊರೆ ಹೋಗುತ್ತಿದ್ದಾರೆ. ನಿನ್ನೆ ಸಂಜೆ (ಏ.27), ಬೆಂಗಳೂರಿನ ಉಷ್ಣತೆ 30 ಡಿಗ್ರಿ ಇದ್ದರೆ, ಮೈಸೂರಿನದ್ದು 29 ಡಿಗ್ರಿ ಇತ್ತು. ಆದರೆ, ಮೈಸೂರಿನ ಉಷ್ಣತೆ ತೋರಿದ ಗೂಗಲ್ (But it feels like 31 degree) 31 ಡಿಗ್ರಿ ಥರ ಭಾಸವಾಗುತ್ತದೆ ಎಂದಿತ್ತು. ಹೈದ್ರಾಬಾದ್ ಕರ್ನಾಟಕದಲ್ಲಿ 40ರ ಆಸುಪಾಸು ಇರುತ್ತದೆ. ಶಿವಮೊಗ್ಗವು ಬಳ್ಳಾರಿಯನ್ನು ಮೀರಿಸುವಷ್ಟು ಬಿಸಿಯಾಗಿ ಎಷ್ಟೋ ವರ್ಷಗಳಾಗಿವೆ.
ಇವೆಲ್ಲವೂ ಮಳೆ ಮತ್ತು ಉಷ್ಣಾಂಶದ ವಿಚಾರವಾಯಿತು.
ಬೆಂಗಳೂರಿನಲ್ಲಿ 1990ರ ಹೊತ್ತಿಗೆ ಬೋರ್ವೆಲ್ ಹಾಕಿಸಿದವರಲ್ಲಿ 100 ಅಡಿಗಳೊಳಗೇ ಎಲ್ಲರಿಗೂ ನೀರು ಸಿಗುತ್ತಿತ್ತು. ಈಗ ಕತ್ರಿಗುಪ್ಪೆಯ ಸುತ್ತ 1000 ಅಡಿಯವರೆಗೆ ಕೊರೆಸುತ್ತಿದ್ದಾರೆ. ಇನ್ನು ಒಣ ಬಯಲುಸೀಮೆಯ ಗತಿ ಏನೇನಾಗಿರಬಹುದು?
ಬೆಂಗಳೂರಿನ ದಾಹ ತೀರಿಸುವ ಮತ್ತು ಅದರೊಂದಿಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ನೀರು ಹರಿಸುವ (ಗಮನಿಸಿ ಅಕ್ಕಪಕ್ಕದ ಜಿಲ್ಲೆಗಳು ಮೊದಲ ಆದ್ಯತೆಯಲ್ಲ) ಉದ್ದೇಶದೊಂದಿಗೆ ಎತ್ತಿನಹೊಳೆ, ಲಿಂಗನಮಕ್ಕಿಯಿಂದ ನೀರು ಇತ್ಯಾದಿ ಪ್ರಸ್ತಾಪಗಳು ಸರ್ಕಾರದ ಮುಂದೆ ಬಂದವು. ಇದೀಗ ಎತ್ತಿನಹೊಳೆ ಇನ್ನೇನು ಬಂದೇ ಬಿಟ್ಟಿತು ಎನ್ನುತ್ತಿದ್ದಾರೆ. ಎಲ್ಲರಿಗೂ ಗೊತ್ತಿದೆ. ಅದು ಸಮಸ್ಯೆಯ ಸಣ್ಣ ತುಣುಕನ್ನಷ್ಟೇ ಬಗೆಹರಿಸಲು ಹೋಗಿ, ಬೇರೆ ಬೇರೆ ರೀತಿಯ ಬಿಕ್ಕಟ್ಟುಗಳಿಗೆ ದಾರಿ ಮಾಡಿಕೊಡಲಿದೆ.
ಇದನ್ನು ಅತ್ಯಂತ ದೊಡ್ಡ ಸಮಸ್ಯೆ ಎಂದು ಹೇಳಬಾರದೇಕೆ ಎಂದು ಜಲಕಾರ್ಯಕರ್ತರು ಕೇಳಬಹುದು. ಆದರೆ, ಇಂತಹ ಹಲವು ಬೃಹತ್ ಸಮಸ್ಯೆಗಳಿಗೆ ಕಾರಣವಾದ ಸರ್ಕಾರದ ನೀತಿ ಮತ್ತು ಸಮಾಜದ ರೀತಿಗಳೇ ಪ್ರಧಾನ ಕಾರಣ ಎಂದು ಹೇಳುವವರೂ ಇರುತ್ತಾರೆ. ಇಂದು ದೇಶದಲ್ಲಿ ಮನುಷ್ಯ ಸಮುದಾಯವನ್ನೇ ಸೀಳಲು ಹೊರಟಿರುವ ಬಲಪಂಥೀಯ ಪಡೆಯೇ ಪ್ರಧಾನ ಸಮಸ್ಯೆ, ಮಿಕ್ಕಿದ್ದೆಲ್ಲಾ ನಂತರ ನೋಡೋಣ ಎಂದು ಹೇಳುವವರು ಇರಬಹುದು. ಹೀಗಾಗಿ ಇದನ್ನು ಎರಡನೇ ಅತೀ ದೊಡ್ಡ ಸಮಸ್ಯೆ ಎಂದು ಹೇಳಲಾಗಿದೆ.
ಒಂದಂತೂ ಸ್ಪಷ್ಟ ಇತರ ಬೃಹತ್ ಸಮಸ್ಯೆಗಳನ್ನು ಪರಿಹರಿಸಿಕೊಂಡು ಇದಕ್ಕೆ ಬರೋಣ ಎನ್ನುವವರೆಗೆ ನೀರು ಚಿಮ್ಮುತ್ತಲೇ ಇರುವುದಿಲ್ಲ. ಮತ್ತಷ್ಟು ಪಾತಾಳಕ್ಕೆ ಇಳಿಯುವ ನೀರು ಮತ್ತು ಮೇಲೇರಲಿರುವ ಉಷ್ಣತೆ ಎಲ್ಲಾ ಪಂಥೀಯರನ್ನೂ ಸುಡದೇ ಬಿಡುವುದಿಲ್ಲ. ಇದುವರೆಗೆ ನಮ್ಮ ನಾಡು ಕಂಡರಿಯದ ರೀತಿಯ ಸಮಸ್ಯೆಗಳಿಗೆ ಅದು ದೂಡಲಿದೆ. ಮೊಟ್ಟ ಮೊದಲ ಬಾರಿಗೆ ಈ ಪರಿಯಾಗಿ ಬೆಳೆದು ನಿಂತಿರುವ ಬಲಪಂಥೀಯ ವಿಷ ದೇಶವನ್ನು ಹೇಗೆಲ್ಲಾ ಕಾಡಲಿದೆ ಎಂಬುದನ್ನು, ಅನುಭವಿಸಿಯೇ ಅರಿತುಕೊಳ್ಳಬೇಕೋ ಇದೂ ಸಹಾ ಹಾಗೆಯೇ ಇರುತ್ತದೆ.
ಒಂದೇ ವ್ಯತ್ಯಾಸವೆಂದರೆ, ಬಿಜೆಪಿಗೆ ವೋಟು ಹಾಕಿರುವವರು, ಕಾಂಗ್ರೆಸ್ಗೆ, ಕಮ್ಯುನಿಸ್ಟರಿಗೆ ಓಟು ಹಾಕಿರುವವರು, ಓಟೇ ಹಾಕದವರು ಎಲ್ಲರನ್ನೂ ಇದು ಸಮಾನವಾಗಿ ಕಾಡಲಿದೆ. ಧಾರ್ಮಿಕರು, ನಾಸ್ತಿಕರು ಎಲ್ಲರನ್ನೂ ಪ್ರಕೃತಿಯ ಈ ಪ್ರಕೋಪ ಆತಂಕಕ್ಕೆ ದೂಡಲಿದೆ. ಧರ್ಮಸ್ಥಳದ ಕಡೆಯಿಂದ ನೀರನ್ನು ಪೂರ್ವಕ್ಕೆ ಹರಿಸಿಬಿಡಬಹುದು ಎಂಬ ಆತಂಕ ಅಲ್ಲಿನ ಜನರನ್ನು ಕಾಡಿತ್ತು. ಹಾಗಾಗಿ ನೇತ್ರಾವತಿ ತಿರುವಿಗೆ ಅಥವಾ ಎತ್ತಿನಹೊಳೆಗೆ ಧರ್ಮಸ್ಥಳದ ವೀರೇಂದ್ರ ಹೆಗಡೆಯವರದ್ದೂ ವಿರೋಧವಿತ್ತು. ಹೀಗಾಗಿ ಅವರ ಮನವೊಲಿಸಲು, ಸಾಧ್ಯವಾಗದಿದ್ದರೆ ಅವರನ್ನೂ ಧಿಕ್ಕರಿಸಲು ಬಯಲುಸೀಮೆಯಲ್ಲಿ ಭಾಷಣಗಳಾಗಿವೆ.
ವಿಪರ್ಯಾಸವೆಂದರೆ, ಈ ಬೇಸಿಗೆಯಲ್ಲಿ ಬೆಂಗಳೂರಿನಿಂದ ಕ್ಯಾನ್ಗಟ್ಟಲೇ ನೀರನ್ನು ಧರ್ಮಸ್ಥಳಕ್ಕೇ ಕೊಂಡೊಯ್ದು ಕೊಟ್ಟ ಭಕ್ತರಿದ್ದಾರೆ. ಈ ನೀರು ಬೆಂಗಳೂರಿಗೆ ಎಲ್ಲಿಂದ ಬರುತ್ತದೆ? ಎಲ್ಲೆಲ್ಲಿಂದ ಬರುತ್ತದೋ ಅಲ್ಲಿನ ಜನರು, ರೈತರು, ಜಾನುವಾರುಗಳ ಪರಿಸ್ಥಿತಿ ಏನಿದೆ? ಅಂತಿಮವಾಗಿ ರಾಜ್ಯದೆಲ್ಲೆಡೆಗೂ ನೀರು ಪಶ್ಚಿಮ ಘಟ್ಟದಿಂದ ಸಿಗುತ್ತದಾ? ಎಲ್ಲಿಯೂ ಸಿಗದೇ ಇದ್ದರೆ ಏನು ಮಾಡುವುದು? ಈ ಪ್ರಶ್ನೆಗಳನ್ನು ಯಾರು ಯಾರಿಗೆ ಹಾಕಬೇಕು? ನೀರು ಸಿಗಬೇಕೆಂದರೆ ಈ ಪ್ರಶ್ನೆಗಳೂ ಮತ್ತು ಅವುಗಳಿಗೆ ಉತ್ತರಗಳು ಎರಡೂ ಬೇಕು.
ಸರ್ಕಾರದ ಮಟ್ಟದಲ್ಲಿ ದೊಡ್ಡದಾಗಿ ಏನೂ ಆಗದು ಎಂದು ಖಚಿತವಾಗಿರುವವರು ತಮ್ಮದೇ ರೀತಿಯ ಪ್ರಯತ್ನವನ್ನು ನಡೆಸಿದ್ದಾರೆ. ಹಿಂದೇ ಇಲ್ಲೇ ಬರೆದಿದ್ದಂತೆ, ಅಂತಹದೊಂದು ಪ್ರಯತ್ನವು ತುಮಕೂರು ಜಿಲ್ಲೆಯಲ್ಲಿ ನಡೆಸಲಾಯಿತು.
ಚುನಾವಣೆ ಮುಗಿದು ಫಲಿತಾಂಶ ಬರುವ ಮುಂಚೆ ಸಿರಾದ ಸಮತಾ ವಿದ್ಯಾಲಯದಲ್ಲಿ (ಅಂದರೆ ಮೇ 17, 18 & 19ರಂದು) ಜಲಕಾರ್ಯಕರ್ತರ ತರಬೇತಿಗೆ ರಾಜೇಂದ್ರ ಸಿಂಗ್ ಬಂದು ಹೋದರು. ಜೂನ್ 8ರಂದು ಪರಿಸರದ ಕುರಿತ ಕಾಳಜಿಯಿಂದ ಹಳೇಬೀಡಿನಲ್ಲೊಂದು ಸಮಾವೇಶ ಆಯೋಜನೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಈಗಾಗಲೇ ಅತ್ಯುತ್ತಮ ಕೆಲಸ ಮಾಡುತ್ತಿರುವವರು ಸೇರಿಕೊಂಡು ಅದನ್ನು ಸಂಘಟನೆ ಮಾಡುತ್ತಿದ್ದಾರೆ.
ಇಂತಹ ಎಲ್ಲಾ ಪ್ರಯತ್ನಗಳಿಗೂ ನಮಗೆ ಸಾಧ್ಯವಾದ ರೀತಿಯಲ್ಲಿ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ಪತ್ರಿಕೆ ಬಯಸುತ್ತದೆ. ಅದರ ಜೊತೆ ಜೊತೆಗೇ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನವೂ ಸಾಗಬೇಕು. ಬಯಲುಸೀಮೆಯವರು ಮತ್ತು ಘಟ್ಟದ ಆಸುಪಾಸಿನಲ್ಲಿರುವವರು ಸಮಾನ ಆಶಯ ಕಾಳಜಿಗಳಿಂದ ಚರ್ಚಿಸಿ ಒಂದೇ ನಿಲುವಿಗೆ ತಲುಪಬೇಕು. ಅದಾಗದಿದ್ದಲ್ಲಿ ಕ್ಯಾನ್ನಲ್ಲಿ ನೀರು ತೆಗೆದುಕೊಂಡು ಹೋಗಲೂ ನೀರು ಸಿಗದೇ ಹೋಗುವ ಸಾಧ್ಯತೆಯಿದೆ.
Here you have not taught about uneven and unscientific development of industrial pollution in term’s of water, smoke, notice, and waist, at the same time vehicles pollution effects on environment, it is to viewed universally.