Homeಕರ್ನಾಟಕಗುಜರಾತ್‌ ಹೈಕೋರ್ಟ್‌‌ನಲ್ಲಿ ಕನ್ನಡ ಮಾತನಾಡಿದ ಮುಖ್ಯ ನ್ಯಾಯಮೂರ್ತಿ: ಏನಿದು ಪ್ರಕರಣ? ಹೇಗೆ ನೋಡಬೇಕು?

ಗುಜರಾತ್‌ ಹೈಕೋರ್ಟ್‌‌ನಲ್ಲಿ ಕನ್ನಡ ಮಾತನಾಡಿದ ಮುಖ್ಯ ನ್ಯಾಯಮೂರ್ತಿ: ಏನಿದು ಪ್ರಕರಣ? ಹೇಗೆ ನೋಡಬೇಕು?

ಗುಜರಾತ್‌ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್‌ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ. ಈ ಕುರಿತು ನ್ಯಾಯಾಂಗ ತಜ್ಞರು ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ಗುಜರಾತ್‌ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು ಕನ್ನಡದಲ್ಲಿ ಮಾತನಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಮಾನಹಾನಿ ಆರೋಪ ಎದುರಿಸುತ್ತಿರುವ ವ್ಯಕ್ತಿಯ ವಿಚಾರಣೆಯ ವೇಳೆ ಅರವಿಂದ್‌ ಕುಮಾರ್‌‌ ಭಾಷೆಯ ಕುರಿತು ಪ್ರಸ್ತಾಪಿಸುತ್ತಾ ಕನ್ನಡದಲ್ಲಿ ಮಾತನಾಡಿದ್ದು, ವಿಡಿಯೊ ಕ್ಲಿಪ್‌ ಕೂಡ ವೈರಲ್‌ ಆಗಿದೆ.

ನ್ಯಾಯಾಲಯದ ವಿಚಾರಣೆಯ ಭಾಷೆ ಇಂಗ್ಲಿಷ್ ಆಗಿರಬೇಕು. ಪ್ರಕರಣದಲ್ಲಿ ಕಕ್ಷಿದಾರರ ಒತ್ತಾಯದ ಹೊರತಾಗಿಯೂ ಬೇರೆ ಭಾಷೆಯಲ್ಲಿ ಇರುವಂತಿಲ್ಲ ಎಂದು ವಿಚಾರಣೆ ವೇಳೆ ಅವರು ಹೇಳಿದ್ದಾರೆ ಎಂದು ‘ದಿ’ ವೈರ್‌ ವರದಿ ಮಾಡಿದೆ.

ಕಾನೂನು ಸುದ್ದಿ ವೆಬ್‌ಸೈಟ್ ‘ಲೈವ್‌ಲಾ’ ಪ್ರಕಾರ, ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ. ಶಾಸ್ತ್ರಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸ್ಥಳೀಯ ಪತ್ರಕರ್ತರೊಬ್ಬರ ಪ್ರಕರಣದ ವಿಚಾರಣೆ ನಡೆಸುವಾಗ ಈ ಘಟನೆ ನಡೆದಿದೆ.

ಗುಜರಾತಿ ಭಾಷೆಯ ಪತ್ರಿಕೆ ‘ಸಾಮ್ನಾ ಬ್ರಷ್ಟಾಚಾರ್ ಕಾ ನ್ಯೂಸ್ ಪೇಪರ್’ ವಿರುದ್ಧ ಮಾನಹಾನಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು. ಪತ್ರಕರ್ತರೊಬ್ಬರು ಕೋರ್ಟ್‌ನಲ್ಲಿ ಹಾಜರಿದ್ದರು. ಗುಜರಾತಿ ಭಾಷೆಯಲ್ಲಿ ಮಾತನಾಡಲು ಅವಕಾಶ ಕೋರಿದರು. ಗುಜರಾತಿ ಭಾಷೆಯಲ್ಲಿ ಮಾತನಾಡುವುದಕ್ಕೆ ನ್ಯಾಯಮೂರ್ತಿಯವರು ಆಕ್ಷೇಪ ವ್ಯಕ್ತಪಡಿಸಿದರು.

ಮೌಖಿಕ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಕುಮಾರ್, “ಕಕ್ಷಿದಾರನು ಗುಜರಾತ್‌ನಲ್ಲಿ ಮಾತ್ರ ಮಾತನಾಡಿದರೆ ನಾನು ಕನ್ನಡದಲ್ಲಿ ಪ್ರತಿಕ್ರಿಯಿಸುತ್ತೇನೆ” ಎಂದರು. “ನೀವು ಏನು ಮಾಡ್ತಾ ಇದ್ದೀರೋ ಅದು ನನಗೆ ಅರ್ಥವಾಗುತ್ತಿಲ್ಲ. ನೀವು ಹೇಳುವುದಾದರೆ ನನಗೆ ಅರ್ಥವಾಗುವ ಭಾಷೆಯಾದ ಕನ್ನಡದಲ್ಲಿ ಹೇಳಿ. ನಾನು ನಿಮಗೆ ಕನ್ನಡದಲ್ಲಿ ಹೇಳುತ್ತೇನೆ” ಎಂದು ಅರವಿಂದ್‌ ಕುಮಾರ್‌‌ ಪ್ರತಿಕ್ರಿಯಿಸುತ್ತಾರೆ. “ಇದು ಹೈಕೋರ್ಟ್ ಆಗಿದೆ. ಜಿಲ್ಲಾ ನ್ಯಾಯಾಲಯ ಅಲ್ಲ” ಎಂದು ಜಸ್ಟೀಸ್‌ ತಿಳಿಸುತ್ತಾರೆ.

ಸ್ಥಳೀಯ ಭಾಷೆಯು ಜಿಲ್ಲಾ ನ್ಯಾಯಾಲಯಗಳಲ್ಲಿ ಮಾತ್ರ ಅನ್ವಯಿಸುತ್ತದೆ ಎಂದು ಕಕ್ಷಿದಾರರಿಗೆ ಮನವರಿಕೆ ಮಾಡಿಕೊಡುತ್ತಾರೆ. “ಇದು ಹೈಕೋರ್ಟ್. ಜಿಲ್ಲಾ ನ್ಯಾಯಾಲಯವಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ಮಾತ್ರ ಸ್ಥಳೀಯ ಭಾಷೆಗೆ ಅವಕಾಶವಿದೆ. ಇಲ್ಲಿ ಇಂಗ್ಲಿಷ್ ಭಾಷೆಗೆ ಮಾತ್ರ ಅವಕಾಶವಿದೆ” ಎಂದು ಸ್ಪಷ್ಟಪಡಿಸುತ್ತಾರೆ.

ವಕೀಲರನ್ನು ತೊಡಗಿಸಿಕೊಳ್ಳಲು ಸಾಧ್ಯವಾಗದಿದ್ದರೆ ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಸಹಾಯಕ್ಕಾಗಿ ಪ್ರಸ್ತಾಪವನ್ನು ಮಾಡಲಾಗಿದೆಯೇ ಎಂದು ನ್ಯಾಯಾಲಯವು ಗಮನಿಸಿದೆ.

“ಒಂದಕ್ಕಿಂತ ಹೆಚ್ಚು ಕಾರಣಗಳಿಂದಾಗಿ ನಾವು ಅವರ ಅರ್ಜಿಗಳನ್ನು ಸ್ವೀಕರಿಸಲು ಒಲವು ತೋರುವುದಿಲ್ಲ. ಮೊದಲನೆಯದಾಗಿ, ಈ ನ್ಯಾಯಾಲಯಕ್ಕೆ (ಮುಖ್ಯ ನ್ಯಾಯಾಧೀಶರಿಗೆ) ಅರ್ಥವಾಗದ ಭಾಷೆಯಲ್ಲಿ ಮಾತನಾಡಲು ನಾವು ಕಕ್ಷಿದಾರರಿಗೆ ಅನುಮತಿಸುವುದಿಲ್ಲ. ಎರಡನೆಯದಾಗಿ, ಸಂವಿಧಾನದ 348 ನೇ ವಿಧಿಯು ಉಚ್ಚ ನ್ಯಾಯಾಲಯದ ಭಾಷೆ ಇಂಗ್ಲಿಷ್ ಆಗಿರಬೇಕು. ಹೀಗಾಗಿ ಮಾನಹಾನಿ ಆರೋಪ ಹೊತ್ತಿರುವ ವ್ಯಕ್ತಿಯ ವಾದವನ್ನು ಅಂಗೀಕರಿಸಲಾಗುವುದಿಲ್ಲ” ಎಂದು ಹೈಕೋರ್ಟ್‌ನ ಲಿಖಿತ ಆದೇಶ ಹೇಳಿದೆ. ಪ್ರಕರಣವನ್ನು ಮುಂದೂಡಲಾಗಿದೆ.

ಜಸ್ಟೀಸ್ ದಾಸ್‌ ಅವರ ವಿಶ್ಲೇಷಣೆ ಹೀಗಿದೆ:

ಈ ವಿದ್ಯಮಾನದ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್‌ ಎಚ್.ಎನ್‌.ನಾಗಮೋಹನ ದಾಸ್‌ ಅವರು ಹಲವು ಒಳನೋಟಗಳನ್ನು ನೀಡಿದರು. “ನಮ್ಮ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಇಂಗ್ಲಿಷ್‌ ಆಡಳಿತ ಭಾಷೆ. ಜಿಲ್ಲಾ ಮತ್ತು ತಾಲ್ಲೂಕು ಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆ ಇರಬಹುದು. ಹೀಗೆ ನಮ್ಮ ಕಾನೂನು ಹಾಗೂ ಸಂವಿಧಾನವನ್ನು ರೂಪಿಸಿಕೊಳ್ಳಲಾಗಿದೆ” ಎಂದು ತಿಳಿಸಿದರು.

“ಈ ರೀತಿಯ ಸಾಕಷ್ಟು ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದಿವೆ. ರಾಜನಾರಾಯಣ್‌ ಅವರ ಪ್ರಕರಣವನ್ನು ನೋಡಬಹುದು. ಸುಪ್ರೀಂಕೋರ್ಟ್‌‌ನಲ್ಲಿ ಒಮ್ಮೆ ಹಿಂದಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆಗ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿ, ಸುಪ್ರಿಂ ಕೋರ್ಟ್ ಆಡಳಿತ ಭಾಷೆ ಸಂವಿಧಾನದ ಪ್ರಕಾರ ಇಂಗ್ಲಿಷ್‌ ಆಗಿದೆ. ಹೀಗಾಗಿ ಆಡಳಿತ ಭಾಷೆಯಲ್ಲಿಯೇ ಅರ್ಜಿ ಕೊಟ್ಟರೆ ಸ್ವೀಕರಿಸಲಾಗುತ್ತದೆ ಎಂದು ರಾಜನಾರಾಯಣ್‌ ಅವರ ಅರ್ಜಿಯನ್ನು ರಿಜೆಕ್ಟ್‌ ಮಾಡಲಾಗುತ್ತದೆ. ಮಧುಲಿಮೆಯವರಿಗೆ ಸಂಬಂಧಿಸಿದ ಇಂಥದ್ದೇ ಒಂದು ಪ್ರಕರಣವಿದೆ. ಬಹುಶಃ ಅಲಹಾಬಾದ್‌ ಹೈಕೋರ್ಟ್ ನಡೆದದ್ದೆಂದು ನೆನಪು. ಆಗಲೂ ಕೂಡ ಕೋರ್ಟ್ ಹೀಗೆಯೇ ಹೇಳಿತು” ಎಂದು ಮೆಲುಕು ಹಾಕಿದರು.

ತಮ್ಮದೇ ಅನುಭವವನ್ನು ಹಂಚಿಕೊಂಡ ಜಸ್ಟೀಸ್ ದಾಸ್‌ ಅವರು, “ಒಬ್ಬ ಕನ್ನಡಿಗ ರಿಟ್‌ ಅರ್ಜಿಯನ್ನು ಕನ್ನಡದಲ್ಲಿ ಹಾಕಿದ್ದ. ಹೈಕೋರ್ಟ್‌ ಕಚೇರಿ ಅರ್ಜಿಯನ್ನು ನಿರಾಕರಿಸಿದರು. ಕೋರ್ಟ್‌ಗೆ ಅರ್ಜಿಯನ್ನು ಕಳುಹಿಸಿ ನಾನು ಅವರಲ್ಲಿ ಕನ್ವಿನ್ಸ್‌ ಮಾಡ್ತೀನಿ ಎಂದು ಕಕ್ಷಿದಾರ ಕೋರಿದ. ಆ ಅರ್ಜಿ ನನ್ನ ಮುಂದೆ ಬಂತು. ಇದು ನನ್ನ ರಾಜ್ಯ. ಇಲ್ಲಿನ ಹೈಕೋರ್ಟ್ ನ್ಯಾಯಮೂರ್ತಿಯವರಿಗೆ ನನ್ನ ಭಾಷೆ ಗೊತ್ತಿಲ್ಲದಿದ್ದರೆ ಅದು ನನ್ನ ತಪ್ಪಾ? ಹೀಗಾಗಿ ನನ್ನ ಭಾಷೆಯಲ್ಲಿರುವ ಅರ್ಜಿಯನ್ನು ಸ್ವೀಕಾರ ಮಾಡಬೇಕು ಎಂದು ಆತ ಒತ್ತಾಯ ಮಾಡಿದ. ಆಗ ಸಂಶೋಧನೆ ಮಾಡಿದಾಗ ಈ ಹಿಂದೆ ನೀಡಿದ್ದ ತೀರ್ಪುಗಳೆಲ್ಲ ಗಮನಕ್ಕೆ ಬಂದವು. ಆತನ ಅರ್ಜಿಯನ್ನು ವಜಾ ಮಾಡಲು ನನಗೆ ಮನಸ್ಸು ಬರಲಿಲ್ಲ. ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ಆದೇಶ ಕಳುಹಿಸಿದೆ. ಅವರು ಹಾಜರಾದರು. ನೀವು ಇದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಎಂದು ಸೂಚಿಸಿದೆ. ಮತ್ತೆ ಈ ಪ್ರಕರಣಕ್ಕೆ ಜೀವ ಬಂತು” ಎಂದು ವಿವರಿಸಿದರು.

“ಪ್ರಾದೇಶಿಕ ಭಾಷೆಗಳು ಹೈಕೋರ್ಟ್‌‌ಗೆ ಬರಬೇಕು ಅನ್ನುವ ವಿಷಯ ಬಹಳ ವರ್ಷಗಳಿಂದ ಚರ್ಚೆಯಾಗುತ್ತಿದೆ. ಒಂದು ಹೈಕೋರ್ಟ್‌ನಲ್ಲಿ ಇದ್ದ ಪ್ರಕರಣವನ್ನು ಮತ್ತೊಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸುವಾಗ ಭಾಷೆ ಬೇರೆ ಬೇರೆ ಇದ್ದರೆ ಗೊತ್ತಾಗುವುದಿಲ್ಲ ಎಂಬುದು ಪ್ರಾಯೋಗಿಕ ಸಮಸ್ಯೆ. ಕರ್ನಾಟಕ ಹೈಕೋರ್ಟ್‌ನಲ್ಲಿರುವ ಮುಖ್ಯ ನ್ಯಾಯಾಧೀಶರು ಉತ್ತರ ಪ್ರದೇಶದವರು. ಹಾಗೆಯೇ ನಮ್ಮವರು ಬೇರೆ ರಾಜ್ಯಗಳಲ್ಲಿ ಇದ್ದಾರೆ. ಈ ರೀತಿ ವರ್ಗಾವಣೆಯಾದಾಗ ಅವರವರ ಮಾತೃ ಭಾಷೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ಸಂವಿಧಾನ ರಚನಾಕಾರರು ಇಂಗ್ಲಿಷ್‌ ಭಾಷೆಯನ್ನು ನ್ಯಾಯಾಂಗದ ಆಡಳಿತ ಭಾಷೆ ಮಾಡಿದ್ದಾರೆ. ಪ್ರಾದೇಶಿಕ ಭಾಷೆ ಹೈಕೋರ್ಟ್‌ಗೆ ಬರಬೇಕಾದರೆ ಸೀಮಿತ ವ್ಯಾಪ್ತಿಗೆ ಒಂದು ಭಾಷಾಂತರ ವಿಭಾಗವನ್ನೇ ಮಾಡಬೇಕಾಗುತ್ತದೆ” ಎಂದರು.

“ನಾವು ಸಾಮಾನ್ಯವಾಗಿ ಕೆಳಗಿನ ಕೋರ್ಟ್‌ನಿಂದ ಮೇಲಿನ ಕೋರ್ಟ್‌ಗೆ ಅಪೀಲು ಹೋಗುತ್ತೇವೆ. ಕರ್ನಾಟಕದ ಹೈಕೋರ್ಟ್‌ನಲ್ಲಿ ಕನ್ನಡದವರೇ ಇದ್ದರೆ ಓದಿಕೊಳ್ಳಬಹುದು. ಕೆಳಗಿನ ನ್ಯಾಯಾಲಯದಲ್ಲಿ ‘ಸೇಲ್‌ ಅಗ್ರಿಮೆಂಟ್‌’ ಎಂಬುದನ್ನು ‘ಕರಾರು ಪತ್ರ’ ಎಂದೇ ಬರೆದಿರುತ್ತಾರೆ. ಕೆಳ ನ್ಯಾಯಾಲಯಗಳಲ್ಲಿ ‘ವಿಭಾಗಪತ್ರ’, ‘ದಾನಪತ್ರ’, ‘ವಿಲ್‌’ ಎಂಬುದನ್ನೆಲ್ಲ ಕನ್ನಡದಲ್ಲೇ ಇರಬಹುದು. ಸಾಕ್ಷಿಯೆಲ್ಲ ಕನ್ನಡದಲ್ಲೇ ದಾಖಲಾಗಿರುತ್ತದೆ. ಕೆಲವು ನ್ಯಾಯಾಧೀಶರು ಕನ್ನಡದಲ್ಲೇ ತೀರ್ಪು ನೀಡಿರುತ್ತಾರೆ. ಅವು ಹೈಕೋರ್ಟ್‌‌ಗೆ ಬಂದಾಗ ನ್ಯಾಯಮೂರ್ತಿಗಳು ಕನ್ನಡದವರೇ ಇದ್ದರೆ ತೊಂದರೆಯಾಗದು. ಆದರೆ ಹೊರಗಿನ ರಾಜ್ಯದವರು ನ್ಯಾಯಮೂರ್ತಿಯಾಗಿದ್ದರೆ ತೊಂದರೆಯಾಗುತ್ತದೆ. ಆಗ ಭಾಷಾಂತರ ಮಾಡಿ ಕೊಡಬೇಕು. ಆ ವ್ಯವಸ್ಥೆ ಇದೆ. ಬೇರೆ ರಾಜ್ಯದ ನ್ಯಾಯಮೂರ್ತಿಗಳು ಇದ್ದಾಗ ನಾವು ಭಾಷಾಂತರದ ಕಾಪಿಗಳನ್ನು ನೀಡಬೇಕು. ಆ ಭಾಷಾಂತರಕ್ಕೆ ಹೆಚ್ಚುವರಿ ಶುಲ್ಕ ನೀಡಬೇಕು. ಈ ಖರ್ಚುವೆಚ್ಚವನ್ನು ಕಕ್ಷಿದಾರನೇ ಭರಿಸಬೇಕು. ಈ ಥರದ ಸಮಸ್ಯೆ ಆಗುತ್ತದೆ” ಎಂದು ವಿಶ್ಲೇಷಿಸಿದರು.

“ಗುಜರಾತಿ ಭಾಷೆಯಲ್ಲಿ ಕಕ್ಷಿದಾರ ವಾದ ಮಂಡಿಸಿದಾಗ ಪಕ್ಕದಲ್ಲೇ ಕೂತ ಗುಜರಾತಿ ಜಡ್ಜ್‌ ಗ್ರಹಿಸಬಹುದು. ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಬಹುದು. ಸಾಧಾರಣಾ ವ್ಯಕ್ತಿಗೆ ನ್ಯಾಯ ದೊರಕಬೇಕು. ಇಂಥದ್ದನ್ನೆಲ್ಲ ತಾಂತ್ರಿಕವಾಗಿ ನೋಡಲಾಗದು. ಪ್ರಾಯೋಗಿಕವಾಗಿ ಸಮಸ್ಯೆ ಇದೆ ಎಂಬುದು ನನಗೆ ಗೊತ್ತಿದೆ” ಎಂದರು.

ಅಭಿಯಾನ ನಡೆಸುತ್ತೇವೆ: ಅರುಣ್ ಜಾವಗಲ್‌

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಜಾವಗಲ್‌ ಪ್ರತಿಕ್ರಿಯಿಸಿ, “ಮುಖ್ಯವಾಗಿ ಆಯಾ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆ ಬಳಸಲು ಹೈಕೋರ್ಟ್‌ನಲ್ಲಿ ಅವಕಾಶ ಇರಬೇಕು. ಈಗ ಹಿಂದಿ, ಇಂಗ್ಲಿಷ್‌ ಭಾಷೆಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಾದೇಶಿಕ ಭಾಷೆ ಬಳಕೆಗೂ ಅನುಮತಿ ಕೊಡಬಹುದು. ಹಿಂದಿ ರಾಜ್ಯಗಳಲ್ಲಿ ಹಿಂದಿ ಬಳಸಲು ಅವಕಾಶ ನೀಡಿದ್ದಾರೆ. ಹಿಂದಿಯೇತರ ರಾಜ್ಯಗಳಲ್ಲಿ ಈ ಅವಕಾಶ ಇಲ್ಲ. ಈ ಕುರಿತು ಹಲವು ರಾಜ್ಯಗಳು ಅರ್ಜಿ ಸಲ್ಲಿಸಿದ್ದವು. ಕರ್ನಾಟಕ ಹೈಕೋರ್ಟ್‌ನಲ್ಲಿ ಕನ್ನಡ ಮಾತನಾಡಲು ಅವಕಾಶವಿರದಿದ್ದಾಗ, ಗುಜರಾತ್‌ ಹೈಕೋರ್ಟ್‌ನಲ್ಲಿ ಕನ್ನಡ ಮಾತನಾಡಿದ್ದನ್ನು ಒಪ್ಪಲಾಗದು. ಹಾಗೆಯೇ ಗುಜರಾತಿಯವರೊಬ್ಬರು ಕರ್ನಾಟಕ ಹೈಕೋರ್ಟ್‌ನಲ್ಲಿ ಗುಜರಾತಿಯಲ್ಲಿ ಮಾತನಾಡುತ್ತೇನೆ ಎಂಬುದನ್ನು ಒಪ್ಪಲಾಗದು. ಕರ್ನಾಟಕ ಹೈಕೋರ್ಟ್‌ನಲ್ಲಿ ಕನ್ನಡ ಬಳಸಲು ಅವಕಾಶ ನೀಡಬೇಕೆಂದು ಸಮಾನ ಮನಸ್ಕರೆಲ್ಲ ಸೇರಿ ಒಂದು ಅಭಿಯಾನ ಶುರು ಮಾಡಿದ್ದೆವು. ಕೊರೊನಾ ಬಂದ ಮೇಲೆ ಅಭಿಯಾನಕ್ಕೆ ಹಿನ್ನಡೆಯಾಯಿತು. ಮತ್ತೆ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ” ಎಂದು ತಿಳಿಸಿದರು.

ನಿಯಮ ಬದಲಿಸಬೇಕಿದೆ: ವಿನಯ್‌ ಶ್ರೀನಿವಾಸ್‌

ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಕೀಲರಾದ ವಿನಯ್‌ ಶ್ರೀನಿವಾಸ್‌ ಮಾತನಾಡಿ, “ಆಯಾ ರಾಜ್ಯದ ಹೈಕೋರ್ಟ್‌ನಲ್ಲಿ ಆಯಾ ರಾಜ್ಯದ ಭಾಷೆಯಲ್ಲಿಯೇ ಮಾತನಾಡುವ ಸ್ವಾತಂತ್ರ್ಯ ಇರಬೇಕು. ಹೈಕೋರ್ಟ್‌ಗಳಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯನ್ನು ಮಾತ್ರ ಅನುಮತಿಸಲಾಗಿದೆ. ಪ್ರಾದೇಶಿಕ ಭಾಷೆಗೆ ಅವಕಾಶವಿರದಿದ್ದರೆ ಎಷ್ಟೋ ಮಂದಿ ನ್ಯಾಯ ಪಡೆಯುವುದು ಕಷ್ಟವಾಗುತ್ತದೆ. ಎಷ್ಟೋ ವಕೀಲರಿಗೆ ವಾದ ಮಾಡುವುದೂ ಕಷ್ಟವಾಗುತ್ತದೆ. ಏಕೆಂದರೆ ಎಲ್ಲರೂ ಇಂಗ್ಲಿಷ್‌ ಕಲಿತಿರುವುದಿಲ್ಲ. ಈ ನಿಯಮವನ್ನು ಬದಲಿಸಬೇಕೆಂದು ಅನೇಕರು ಒತ್ತಾಯಿಸುತ್ತಿದ್ದೇವೆ. ಆಯಾ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆಯನ್ನು ಅನುಮತಿಸಬೇಕೆಂದು ಹೋರಾಡುತ್ತಿದ್ದೇವೆ” ಎಂದು ಹೇಳಿದರು.

ಸ್ಥಳೀಯ ಭಾಷೆಯಿಂದ ನ್ಯಾಯದಾನ ಪರಿಣಾಮಕಾರಿ: ಕೆ.ಬಿ.ಕೆ.ಸ್ವಾಮಿ

ವಕೀಲರಾದ ಕೆ.ಬಿ.ಕೆ.ಸ್ವಾಮಿ ಪ್ರತಿಕ್ರಿಯಿಸಿ, “ಸಂವಿಧಾನದ 348 ವಿಧಿಯನ್ನು ಬಳಸಿ ಹೈಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆಯನ್ನು ಕಲಾಪದ ಭಾಷೆಯನ್ನಾಗಿ ಅನುಸರಿಸಲು ಅವಕಾಶವಿದೆ. ಸ್ಥಳೀಯ ಭಾಷೆಯಲ್ಲಿ ಕಲಾಪಗಳು ನೆಡೆದಾಗ ನ್ಯಾಯ ವಿತರಣಾ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುವುದು. ಜನರಿಗೆ ಅವರ ಭಾಷೆಯಲ್ಲೇ ನ್ಯಾಯ ವಿತರಣೆ ಮಾಡುವುದು ಹಿಂದೆಂದಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ” ಎಂದು ಅಭಿಪ್ರಾಯಟ್ಟರು.


ಇದನ್ನೂ ಓದಿರಿ: ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’ ಸ್ಪೋಟಕ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...