ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಪಕ್ಷಾಂತರ ಪರ್ವ ಮುಂದುವರೆಯುತ್ತಲೇ ಇದೆ. ಕಳೆದ ವಾರ ಬಿಜೆಪಿಯಿಂದ ಸಮಾಜವಾದಿ ಪಾರ್ಟಿಗೆ ಮೂವರು ರಾಜ್ಯ ಸಚಿವರು ಸೇರಿದಂತೆ ಹಲವು ಶಾಸಕರು ಸೇರ್ಪಡೆಯಾಗಿದ್ದರು. ಈಗ ಸಮಾಜವಾದಿ ಪಾರ್ಟಿಯಿಂದ ಬಿಜೆಪಿಗೆ ಇಬ್ಬರು ಸೇರ್ಪಡೆಯಾಗಿದ್ದಾರೆ.
ಯುಪಿ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೋದರ ಸಂಬಂಧಿ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪ್ರಮೋದ್ ಗುಪ್ತಾ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬುಧವಾರ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ: ಬಿಜೆಪಿಗೆ ಅರ್ಪಣಾ ಯಾದವ್: ಧನ್ಯವಾದ ಹೇಳಿದ ಅಖಿಲೇಶ್ ಯಾದವ್
ತಮ್ಮ ಸಂಬಂಧಿಕರು ಇಬ್ಬರು ಬಿಜೆಪಿ ಸೇರ್ಪಡೆಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ’ಯುಪಿ ಚುನಾವಣೆಗೆ ಕೆಲವೇ ವಾರಗಳಿರುವಾಗ ತಮ್ಮ ಪಕ್ಷದೊಳಗೆ ಇರುವ ಕುಟುಂಬದ ರಾಜಕಾರಣದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಿದ್ದಕ್ಕಾಗಿ ಬಿಜೆಪಿಗೆ ಧನ್ಯವಾದ’ ಎಂದಿದ್ದಾರೆ.
“ಬಿಜೆಪಿಯವರು ಸಂತೋಷವಾಗಿರಬೇಕು. ನಾವು ಕುಟುಂಬ ರಾಜಕಾರಣವನ್ನು ಉತ್ತೇಜಿಸುತ್ತಿದ್ದೇವೆ ಎಂದು ಅವರು ಆರೋಪಿಸುತ್ತಾರೆ. ಕನಿಷ್ಠ ಅವರು ನಮ್ಮ ಕುಟುಂಬದಲ್ಲಿನ ಪರಿವಾರವಾದವನ್ನು ಕೊನೆಗೊಳಿಸುತ್ತಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ” ಎಂದು ಅಖಿಲೇಶ್ ಯಾದವ್ ಲಕ್ನೋ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇಂದು ಬಿಜೆಪಿಗೆ ಸೇರ್ಪಡೆಯಾದ ನಂತರ, ಸಮಾಜವಾದಿ ಪಕ್ಷದ ಮಾಜಿ ಶಾಸಕ ಪ್ರಮೋದ್ ಗುಪ್ತಾ ಅವರು ಸಮಾಜವಾದಿ ಪಕ್ಷವನ್ನು ಗೂಂಡಾಗಳು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತ, ಮಾಜಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಮೌರ್ಯ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಪ್ರಿಯಾಂಕಾ ಮೌರ್ಯ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಕಾಂಗ್ರೆಸ್ನ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ ಅಭಿಯಾನದ ಪ್ರಮುಖ ನಾಯಕಿಯಾಗಿದ್ದರು.
’ಸಮಾಜ ಸೇವೆಗಾಗಿ ಉತ್ತಮ ವೇದಿಕೆಗಾಗಿ ನಾನು ಬಿಜೆಪಿ ಸೇರಿದ್ದೇನೆ. ನಾನು ನಿರಂತರವಾಗಿ ಕಾಂಗ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದೆ. ಅವರ ಘೋಷಣೆಯಾದ ‘ಲಡ್ಕಿ ಹು ಲಾಡ್ ಸಕ್ತಿ ಹು’ಗೆ ವಿರುದ್ಧವಾಗಿ, ನನಗೆ ಕಣಕ್ಕಿಳಿಯುವ ಅವಕಾಶವನ್ನು ನೀಡಲಿಲ್ಲ” ಎಂದು ಮೌರ್ಯ ಹೇಳಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.