Homeಬಹುಜನ ಭಾರತಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ - ಡಿ. ಉಮಾಪತಿ

ಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ – ಡಿ. ಉಮಾಪತಿ

ಮಿಯಾಮಿ ಪೊಲೀಸರು ಕ್ರೋಧತಪ್ತ ಪ್ರತಿಭಟನಾಕಾರರ ಮುಂದೆ ಕ್ಯಾಮೆರಾಗಳ ಸಮಕ್ಷಮದಲ್ಲಿ ತಲೆ ತಗ್ಗಿಸಿ ಮಂಡಿಯೂರಿ ಕ್ಷಮಾಪಣೆ ಕೇಳಿದರು. ಭಾರತದಲ್ಲಿ ಇಂತಹ ನೋಟವನ್ನು ಕಾಣಲು ಇನ್ನೆಷ್ಟು ಯುಗಗಳು ಸರಿಯಬೇಕೋ?

- Advertisement -
- Advertisement -

ಮನುಷ್ಯ ಮನುಷ್ಯನನ್ನು ಜಾತಿಯ ಕಾರಣಕ್ಕೆ, ಧರ್ಮದ ಕಾರಣಕ್ಕೆ, ತೊಗಲಿನ ಬಣ್ಣದ ಕಾರಣಕ್ಕೆ ದ್ವೇಷಿಸಿ ಹಿಂಸಿಸತೊಡಗಿದ್ದಾನೆ. ಮಾನವೀಯತೆಯನ್ನು ಮರೆತಿದ್ದಾನೆ. ಆಳದಲ್ಲಿ ಮಲಗಿರುವ ಪಾಶವಿಕ ಹಿಂಸಾ ಪ್ರವೃತ್ತಿ ಮೇಲೆದ್ದು ಹೆಡೆಯೆತ್ತಿ ಭುಸುಗುಡುತ್ತಿದೆ. ಸಾವಿರ ಸಾವಿರ ವರ್ಷಗಳಿಂದ ನಾಗರಿಕತೆಯ ವಿಕಾಸದ ಹಾದಿಯಲ್ಲಿ ಮಾನವೀಯ ಸಾಮಾಜಿಕ ನಡವಳಿಕೆಗಳು ಕೆಳಕ್ಕೆ ತುಳಿದಿಟ್ಟ ಈ ಪ್ರವೃತ್ತಿಗಳನ್ನು ಕೆದರಿ ಕೆಣಕಿ ಕೆರಳಿಸಿ ಭುಗಿಲೆಬ್ಬಿಸಿದವರು ಯಾರು? ಈ ಉರಿವ ಬೆಂಕಿಗೆ ಎಣ್ಣೆ ಎರಚುತ್ತ ಬಂದಿರುವವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರಗಳು ದೇಶ ವಿದೇಶಗಳಲ್ಲಿ ಒಡಮೂಡಿವೆ.

ಒಂದೊಂದು ದೇಶದಲ್ಲಿ ಒಂದೊಂದು ಹೆಸರು ಧರಿಸಿವೆ. ಹೊಸ ಭಯೋತ್ಪಾದಕರನ್ನು ಕಟೆದು ನಿಲ್ಲಿಸಿವೆ. ಈ ಭಯೋತ್ಪಾದಕರು ಮುಖ ಕೈಕಾಲು ದೇಹಧಾರಿ ಮನುಷ್ಯರಲ್ಲ. ಬದಲಾಗಿ ಅವರದೆಯಲ್ಲಿ ಭುಗಿಲೆದ್ದು ಪ್ರಚಂಡ ನಾಯಕರು ಯಾರತ್ತ ಇಷಾರೆ ಮಾಡಿದರೆ ಅವರನ್ನು ಸುಡಬಹುದಾದ ಕಡುದ್ವೇಷದ ಕಿಚ್ಚು. ಅದುವೇ ನವ ಭಯೋತ್ಪಾದಕ. ಈ ಭಯೋತ್ಪಾದಕ ಈವರೆಗೆ ಕಂಡು ಕೇಳಿರುವ ಎಲ್ಲ ಭಯೋತ್ಪಾದಕರಿಗಿಂತ ಅಧಿಕ ಘಾತಕ. ಈ ಕಿಚ್ಚಿಗೆ ವರ್ಣಭೇದ, ಧರ್ಮ, ಜಾತಿ, ಮೇಲು ಕೀಳಿನ ಮುಖವಾಡ ತೊಡಿಸಿ ಅಮಾಯಕರನ್ನು ಹರಿದು ತಿನ್ನಲು ಛೂ ಬಿಡಲಾಗಿದೆ. ಅಮೆರಿಕೆ ಎಂಬ ದೇಶದಲ್ಲಿ ಈ ದ್ವೇಷದ ಬೆಂಕಿ ಹಚ್ಚಿ ಎಣ್ಣೆ ಎರಚುತ್ತ ಬಂದಿರುವಾತನ ನಾಮಧೇಯ ಡೊನಾಲ್ಡ್ ಟ್ರಂಪ್.

ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕಾ ಹೊರಗೆ ಬರಲಿದೆ,ಟ್ರಂಪ್ ಎಚ್ಚರಿಕೆ

ಭರತವರ್ಷದಲ್ಲಿನ ನಿಜ ನಾಮಧೇಯಗಳು ಚಿರಪರಿಚಿತ. ಇವುಗಳು ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು. ನಂತರದ್ದು ಕ್ರೈಸ್ತರದು ಇದ್ದೀತು.

ಕಪ್ಪು ಜನರನ್ನು ಅವರ ತೊಗಲಿನ ಬಣ್ಣದ ಕಾರಣ ನೂರಾರು ವರ್ಷಗಳಿಂದ ಬೇಟೆಯಾಡುತ್ತ ಬಂದಿದ್ದಾರೆ ಬಿಳಿಯರು. ಸಮಾಜ 21ನೆಯ ಶತಮಾನದ ನಾಗರಿಕ ಚಹರೆ ಧರಿಸುತ್ತಿದ್ದಂತೆ ಬೇಟೆಗಾರರು ಹತ್ತು ಹಲವು ಛದ್ಮವೇಷಗಳನ್ನು ಧರಿಸಿ ಎರಗುತ್ತಿದ್ದಾರೆ. ಆಳುವವರ ಸಕ್ರಿಯ ಕುಮ್ಮಕ್ಕು ಅವರಿಗೆ ಉಂಟು.

ಹಿಟ್ಲರ್ ಸತ್ತಿದ್ದಾನೆ ಎಂದು ಯಾರು ಹೇಳುತ್ತಾರೆ? ಜರ್ಮನಿಯಲ್ಲಿ ದಫನಾದದ್ದು ಅವನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿ ಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

ಕಳೆದ ಆರು ವರ್ಷಗಳಿಂದ ದೇಶದುದ್ದಗಲಕ್ಕೆ ರಸ್ತೆ ರಸ್ತೆಗಳಲ್ಲಿ ಮುಸಲ್ಮಾನರು ದಲಿತರು ಈ ಕಿಚ್ಚಿಗೆ ಬಲಿಯಾದರು. ಕರೋನಾ ಮಹಾಮಾರಿ ಹಾಕಿರುವ ಅಲ್ಪವಿರಾಮ ತೆರವಾದ ನಂತರ ಈ ಕಿಚ್ಚು ಹೊಸ ಎಣ್ಣೆ ಎರೆಸಿಕೊಂಡು ಭುಗಿಲೇಳುವಲ್ಲಿ ಯಾವ ಅನುಮಾನವೂ ಇಲ್ಲ.

ಅಮೆರಿಕೆಯಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಮನುಷ್ಯ ಬಿಳಿಯ ಪೊಲೀಸರ ವರ್ಣವಿದ್ವೇಷಕ್ಕೆ ಬಲಿಯಾದ ಭೀಭತ್ಸ ದೃಶ್ಯಗಳು ನಾಗರಿಕ ಪ್ರಜ್ಞೆಯನ್ನು ಬೆಚ್ಚಿ ಬೀಳಿಸಿವೆ.

ಎಂಟು ನಿಮಿಷ 46 ಸೆಕೆಂಡುಗಳ ಕಾಲ ಉಸಿರಿಗಾಗಿ ಚಡಪಡಿಸಿದ ಆ ದೈತ್ಯ ಕಪ್ಪು ಮನುಷ್ಯ ದಯೆ ತೋರಿರೆಂದು ಕೋರಿದ. ನೀರಿಗಾಗಿ ಬೇಡಿದ. ಉಸಿರಾಡಲಾಗುತ್ತಿಲ್ಲ ಸ್ವಾಮೀ ಎಂದ. ಮೂಗಿನಿಂದ ರಕ್ತ ಒಸರಿತು. ದೇಹ ಪ್ರಾಣಸಂಕಟದಿಂದ ವಿಲವಿಲನೆ ಒದ್ದಾಡಿತು. ಮೂತ್ರಕೋಶದ ಮೇಲೆ ನಿಯಂತ್ರಣ ತಪ್ಪಿತು.

ಐದು ನಿಮಿಷಗಳಲ್ಲಿ ಹದಿನಾರು ಸಾರಿ ಹೇಳಿದ್ದನಾತ ಉಸಿರಾಡಲಾಗುತ್ತಿಲ್ಲಾ… ಎಂದು. ಕಡೆಗೆ ಪ್ರಜ್ಞೆ ತಪ್ಪಿತು. ವೈದ್ಯಕೀಯ ಸಿಬ್ಬಂದಿ ಬೇಡಿಕೊಂಡರು. ಆದರೂ ಬಿಳಿಯ ಪೊಲೀಸರ ಸಾವಿನ ಹಿಡಿತ ಸಡಿಲಾಗಲಿಲ್ಲ. ಆಮ್ಲಜನಕ ದೊರೆಯದೆ ಆತನ ಅಂಗಾಂಗಗಳು ಚೀರಿದ್ದವು. ಮೆದುಳು ಹೌಹಾರಿತ್ತು.

ಫ್ಲಾಯ್ಡ್ ಅಣು ಅಣುವಾಗಿ ಸಾಯುವುದನ್ನು ಬಿಳಿಯ ದ್ವೇಷ ವಿಚಿತ್ರ ವಿಲಕ್ಷಣ ತೃಪ್ತಿಯಿಂದ ನೋಡಿತು. ಕ್ಷಣದಿಂದ ಕ್ಷಣಕ್ಕೆ ಉಸಿರು ತ್ಯಜಿಸಿ ಹೋಗಿ ತಣ್ಣಗಾಗುತ್ತಿದ್ದ ಒಡಲಿನ ಒದ್ದಾಟವನ್ನು, ಚಡಪಡಿಕೆಯ ಸ್ಪರ್ಶಸುಖವನ್ನು ಸವಿಯಿತು.

ಸತ್ತ ತನ್ನ ತಾಯಿಯನ್ನು ಸೇರಿಕೊಳ್ಳುವ ಸಂಕಟದಲ್ಲಿ ಅಮ್ಮಾ ಎಂದು ಕೂಗಿ ಕರೆದ. ಆ ಕಪ್ಪು ಮನುಷ್ಯ ಸಾಧು ಸ್ವಭಾವದ ದೈತ್ಯ. ತೊಗಲಿನ ಬಣ್ಣ ಕಪ್ಪೆಂಬ ಕಾರಣಕ್ಕಾಗಿ ಕ್ರೂರ ಹತ್ಯೆಗೆ ಬಲಿಯಾದ.

ಉಸಿರಾಡಲಾಗುತ್ತಿಲ್ಲ ಎಂದು ಫ್ಲಾಯ್ಡ್ ಐದು ನಿಮಿಷಗಳಲ್ಲಿ ಹದಿನಾರು ಸಲ ಹೇಳುತ್ತಾನೆ. ಪ್ರಾಣ ಹೋಗುವ ಸಂಕಟದಲ್ಲಿ ಹೆತ್ತಮ್ಮನನ್ನು ನೆನೆದು ಕರೆಯುತ್ತಾನೆ. ‘ಆಫೀಸರ್ ಪ್ಲೀಸ್’ ಎಂದು ಬೇಡಿಕೊಳ್ಳುತ್ತಾನೆ. ಬಾಯಿಂದ ರಕ್ತ ಒಸರುತ್ತದೆ.

ಆ ಬಿಳಿಯ ಪೊಲೀಸ್ ಎಂಟು ನಿಮಿಷ 46 ಸೆಕೆಂಡುಗಳ ಕಾಲ ತನ್ನ ಮೃತ್ಯಸದೃಶ ಮೊಣಕಾಲನ್ನು ಫ್ಲಾಯ್ಡ್ ಕುತ್ತಿಗೆಯ ಮೇಲೆ ಅದುಮಿ ಹಿಡಿದಿರುತ್ತಾನೆ. ಕಡೆಯುಸಿರೆಳೆದ ಮೇಲೂ ಆ ಮೊಣಕಾಲು ಕದಲುವುದಿಲ್ಲ. ಆಂಬುಲೆನ್ಸ್ ಬಂದು ಸ್ಟ್ರೆಚರ್ ತಂದ ವೈದ್ಯಕೀಯ ಸಿಬ್ಬಂದಿ ಹೇಳಿದಾಗ ಒಲ್ಲದ ಮನಸಿನಿಂದ ಕದಲುತ್ತದೆ. ಆದರೆ ಆ ಹೊತ್ತಿಗೆ ತೀರಾ ತಡವಾಗಿರುತ್ತದೆ.

ಮೇ.25 ಸೋಮವಾರ ಸಂಜೆ. 20 ಡಾಲರಿನ ಖೋಟಾ ನೋಟನ್ನು ಸಿಗರೇಟು ಖರೀದಿಗೆ ಬಳಸಿದನೆಂಬುದು ಫ್ಲಾಯ್ಡ್ ಮೇಲಿನ ಆರೋಪ. 46 ವರ್ಷದ ಈ ವ್ಯಕ್ತಿ ಹ್ಯೂಸ್ಟನ್‍ನ ರೆಸ್ಟುರಾದಲ್ಲಿ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ. ಕರೋನಾ ಮಹಾಮಾರಿಯ ಕಾರಣ ಕೆಲಸ ಕಳೆದುಕೊಂಡ ಕೋಟ್ಯಂತರ ಜನರ ಪೈಕಿ ಫ್ಲಾಯ್ಡ್ ಕೂಡ ಒಬ್ಬನಾಗಿದ್ದ.

ಆರಡಿಗೂ ಅಧಿಕ ಎತ್ತರದ ಫ್ಲಾಯ್ಡನನ್ನು ರಸ್ತೆಯ ಪಕ್ಕ ನೆಲಕ್ಕೆ ಕೆಡವಿ ಕಾಲು ಎದೆ ಪಕ್ಕೆ ಕುತ್ತಿಗೆಯನ್ನು ನಾಲ್ವರು ಪೊಲೀಸರು ಒಟ್ಟೊಟ್ಟಿಗೆ ಅದುಮಿ ಹಿಡಿದಿರುತ್ತಾರೆ.

ಫ್ಲಾಯ್ಡ್ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಎಂಬುದು ಪೊಲೀಸರ ಹಸೀ ಸುಳ್ಳು. ಕಾರಿನೊಳಕ್ಕೆ ಅವನನ್ನು ತಳ್ಳಲು, ಎದ್ದು ಪೊಲೀಸ್ ಕಾರಿನೊಳಗೆ ಕುಳಿತುಕೋ ಎನ್ನುತ್ತಾರೆ. ಆದರೆ ತಮ್ಮ ಮೃತ್ಯುಪಾಶವನ್ನು ಸಡಿಲಿಸುವುದಿಲ್ಲ. ದಾರಿ ಹೋಕರು ಕುತ್ತಿಗೆಯ ಮೇಲಿಂದ ಎದ್ದೇಳಲು ಪೊಲೀಸರಿಗೆ ಒತ್ತಾಯಿಸುತ್ತಾರೆ. ಅವನು ಕದಲುತ್ತಿಲ್ಲ, ನಾಡಿ ಪರೀಕ್ಷಿಸಿ ಎಂದು ಆಗ್ರಹಿಸುತ್ತಾರೆ.

ಅಮೆರಿಕೆ ಭುಗಿಲೆದ್ದಿದೆ. ಕಾನೂನು ಜಾರಿಯ ವೈಖರಿಯಲ್ಲಿ ಬದಲಾವಣೆಗೆ ಆಗ್ರಹ ಸ್ಫೋಟಿಸಿದೆ. ಮಾನವಂತ ಬಿಳಿಯರೂ ಈ ಪ್ರತಿಭಟನೆಯಲ್ಲಿ ಸೇರಿದ್ದಾರೆ. ಈ ನಡುವೆ ಮಿಯಾಮಿ ಪೊಲೀಸರು ಕ್ರೋಧತಪ್ತ ಪ್ರತಿಭಟನಾಕಾರರ ಮುಂದೆ ಕ್ಯಾಮೆರಾಗಳ ಸಮಕ್ಷಮದಲ್ಲಿ ತಲೆ ತಗ್ಗಿಸಿ ಮಂಡಿಯೂರಿ ಕ್ಷಮಾಪಣೆ ಕೇಳಿದರು. ಭಾರತದಲ್ಲಿ ಇಂತಹ ನೋಟವನ್ನು ಕಾಣಲು ಇನ್ನೆಷ್ಟು ಯುಗಗಳು ಸರಿಯಬೇಕೋ?
ಜಾರ್ಜ್ ಫ್ಲಾಯ್ಡ್ ಆತ್ಮ ಈಗ ನಿರಾಳವಾಗಿ ಉಸಿರಾಡುತ್ತಿರಬಹುದು… ವರ್ಣದ್ವೇಷದ ಕಿಚ್ಚಿನಿಂದ ದೂರ ಬಹುದೂರದಲ್ಲಿ.


ಇದನ್ನು ಓದಿ: ಚೀನಾದ ಆಕ್ರಮಣ ಒಪ್ಪಿಕೊಂಡ ರಾಜನಾಥ್‌ ಸಿಂಗ್: ಜೂನ್‌ 06 ರಂದು ಮಾತುಕತೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...