Homeಬಹುಜನ ಭಾರತಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ - ಡಿ. ಉಮಾಪತಿ

ಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ – ಡಿ. ಉಮಾಪತಿ

ಮಿಯಾಮಿ ಪೊಲೀಸರು ಕ್ರೋಧತಪ್ತ ಪ್ರತಿಭಟನಾಕಾರರ ಮುಂದೆ ಕ್ಯಾಮೆರಾಗಳ ಸಮಕ್ಷಮದಲ್ಲಿ ತಲೆ ತಗ್ಗಿಸಿ ಮಂಡಿಯೂರಿ ಕ್ಷಮಾಪಣೆ ಕೇಳಿದರು. ಭಾರತದಲ್ಲಿ ಇಂತಹ ನೋಟವನ್ನು ಕಾಣಲು ಇನ್ನೆಷ್ಟು ಯುಗಗಳು ಸರಿಯಬೇಕೋ?

- Advertisement -
- Advertisement -

ಮನುಷ್ಯ ಮನುಷ್ಯನನ್ನು ಜಾತಿಯ ಕಾರಣಕ್ಕೆ, ಧರ್ಮದ ಕಾರಣಕ್ಕೆ, ತೊಗಲಿನ ಬಣ್ಣದ ಕಾರಣಕ್ಕೆ ದ್ವೇಷಿಸಿ ಹಿಂಸಿಸತೊಡಗಿದ್ದಾನೆ. ಮಾನವೀಯತೆಯನ್ನು ಮರೆತಿದ್ದಾನೆ. ಆಳದಲ್ಲಿ ಮಲಗಿರುವ ಪಾಶವಿಕ ಹಿಂಸಾ ಪ್ರವೃತ್ತಿ ಮೇಲೆದ್ದು ಹೆಡೆಯೆತ್ತಿ ಭುಸುಗುಡುತ್ತಿದೆ. ಸಾವಿರ ಸಾವಿರ ವರ್ಷಗಳಿಂದ ನಾಗರಿಕತೆಯ ವಿಕಾಸದ ಹಾದಿಯಲ್ಲಿ ಮಾನವೀಯ ಸಾಮಾಜಿಕ ನಡವಳಿಕೆಗಳು ಕೆಳಕ್ಕೆ ತುಳಿದಿಟ್ಟ ಈ ಪ್ರವೃತ್ತಿಗಳನ್ನು ಕೆದರಿ ಕೆಣಕಿ ಕೆರಳಿಸಿ ಭುಗಿಲೆಬ್ಬಿಸಿದವರು ಯಾರು? ಈ ಉರಿವ ಬೆಂಕಿಗೆ ಎಣ್ಣೆ ಎರಚುತ್ತ ಬಂದಿರುವವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರಗಳು ದೇಶ ವಿದೇಶಗಳಲ್ಲಿ ಒಡಮೂಡಿವೆ.

ಒಂದೊಂದು ದೇಶದಲ್ಲಿ ಒಂದೊಂದು ಹೆಸರು ಧರಿಸಿವೆ. ಹೊಸ ಭಯೋತ್ಪಾದಕರನ್ನು ಕಟೆದು ನಿಲ್ಲಿಸಿವೆ. ಈ ಭಯೋತ್ಪಾದಕರು ಮುಖ ಕೈಕಾಲು ದೇಹಧಾರಿ ಮನುಷ್ಯರಲ್ಲ. ಬದಲಾಗಿ ಅವರದೆಯಲ್ಲಿ ಭುಗಿಲೆದ್ದು ಪ್ರಚಂಡ ನಾಯಕರು ಯಾರತ್ತ ಇಷಾರೆ ಮಾಡಿದರೆ ಅವರನ್ನು ಸುಡಬಹುದಾದ ಕಡುದ್ವೇಷದ ಕಿಚ್ಚು. ಅದುವೇ ನವ ಭಯೋತ್ಪಾದಕ. ಈ ಭಯೋತ್ಪಾದಕ ಈವರೆಗೆ ಕಂಡು ಕೇಳಿರುವ ಎಲ್ಲ ಭಯೋತ್ಪಾದಕರಿಗಿಂತ ಅಧಿಕ ಘಾತಕ. ಈ ಕಿಚ್ಚಿಗೆ ವರ್ಣಭೇದ, ಧರ್ಮ, ಜಾತಿ, ಮೇಲು ಕೀಳಿನ ಮುಖವಾಡ ತೊಡಿಸಿ ಅಮಾಯಕರನ್ನು ಹರಿದು ತಿನ್ನಲು ಛೂ ಬಿಡಲಾಗಿದೆ. ಅಮೆರಿಕೆ ಎಂಬ ದೇಶದಲ್ಲಿ ಈ ದ್ವೇಷದ ಬೆಂಕಿ ಹಚ್ಚಿ ಎಣ್ಣೆ ಎರಚುತ್ತ ಬಂದಿರುವಾತನ ನಾಮಧೇಯ ಡೊನಾಲ್ಡ್ ಟ್ರಂಪ್.

ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕಾ ಹೊರಗೆ ಬರಲಿದೆ,ಟ್ರಂಪ್ ಎಚ್ಚರಿಕೆ

ಭರತವರ್ಷದಲ್ಲಿನ ನಿಜ ನಾಮಧೇಯಗಳು ಚಿರಪರಿಚಿತ. ಇವುಗಳು ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು. ನಂತರದ್ದು ಕ್ರೈಸ್ತರದು ಇದ್ದೀತು.

ಕಪ್ಪು ಜನರನ್ನು ಅವರ ತೊಗಲಿನ ಬಣ್ಣದ ಕಾರಣ ನೂರಾರು ವರ್ಷಗಳಿಂದ ಬೇಟೆಯಾಡುತ್ತ ಬಂದಿದ್ದಾರೆ ಬಿಳಿಯರು. ಸಮಾಜ 21ನೆಯ ಶತಮಾನದ ನಾಗರಿಕ ಚಹರೆ ಧರಿಸುತ್ತಿದ್ದಂತೆ ಬೇಟೆಗಾರರು ಹತ್ತು ಹಲವು ಛದ್ಮವೇಷಗಳನ್ನು ಧರಿಸಿ ಎರಗುತ್ತಿದ್ದಾರೆ. ಆಳುವವರ ಸಕ್ರಿಯ ಕುಮ್ಮಕ್ಕು ಅವರಿಗೆ ಉಂಟು.

ಹಿಟ್ಲರ್ ಸತ್ತಿದ್ದಾನೆ ಎಂದು ಯಾರು ಹೇಳುತ್ತಾರೆ? ಜರ್ಮನಿಯಲ್ಲಿ ದಫನಾದದ್ದು ಅವನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿ ಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

ಕಳೆದ ಆರು ವರ್ಷಗಳಿಂದ ದೇಶದುದ್ದಗಲಕ್ಕೆ ರಸ್ತೆ ರಸ್ತೆಗಳಲ್ಲಿ ಮುಸಲ್ಮಾನರು ದಲಿತರು ಈ ಕಿಚ್ಚಿಗೆ ಬಲಿಯಾದರು. ಕರೋನಾ ಮಹಾಮಾರಿ ಹಾಕಿರುವ ಅಲ್ಪವಿರಾಮ ತೆರವಾದ ನಂತರ ಈ ಕಿಚ್ಚು ಹೊಸ ಎಣ್ಣೆ ಎರೆಸಿಕೊಂಡು ಭುಗಿಲೇಳುವಲ್ಲಿ ಯಾವ ಅನುಮಾನವೂ ಇಲ್ಲ.

ಅಮೆರಿಕೆಯಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಮನುಷ್ಯ ಬಿಳಿಯ ಪೊಲೀಸರ ವರ್ಣವಿದ್ವೇಷಕ್ಕೆ ಬಲಿಯಾದ ಭೀಭತ್ಸ ದೃಶ್ಯಗಳು ನಾಗರಿಕ ಪ್ರಜ್ಞೆಯನ್ನು ಬೆಚ್ಚಿ ಬೀಳಿಸಿವೆ.

ಎಂಟು ನಿಮಿಷ 46 ಸೆಕೆಂಡುಗಳ ಕಾಲ ಉಸಿರಿಗಾಗಿ ಚಡಪಡಿಸಿದ ಆ ದೈತ್ಯ ಕಪ್ಪು ಮನುಷ್ಯ ದಯೆ ತೋರಿರೆಂದು ಕೋರಿದ. ನೀರಿಗಾಗಿ ಬೇಡಿದ. ಉಸಿರಾಡಲಾಗುತ್ತಿಲ್ಲ ಸ್ವಾಮೀ ಎಂದ. ಮೂಗಿನಿಂದ ರಕ್ತ ಒಸರಿತು. ದೇಹ ಪ್ರಾಣಸಂಕಟದಿಂದ ವಿಲವಿಲನೆ ಒದ್ದಾಡಿತು. ಮೂತ್ರಕೋಶದ ಮೇಲೆ ನಿಯಂತ್ರಣ ತಪ್ಪಿತು.

ಐದು ನಿಮಿಷಗಳಲ್ಲಿ ಹದಿನಾರು ಸಾರಿ ಹೇಳಿದ್ದನಾತ ಉಸಿರಾಡಲಾಗುತ್ತಿಲ್ಲಾ… ಎಂದು. ಕಡೆಗೆ ಪ್ರಜ್ಞೆ ತಪ್ಪಿತು. ವೈದ್ಯಕೀಯ ಸಿಬ್ಬಂದಿ ಬೇಡಿಕೊಂಡರು. ಆದರೂ ಬಿಳಿಯ ಪೊಲೀಸರ ಸಾವಿನ ಹಿಡಿತ ಸಡಿಲಾಗಲಿಲ್ಲ. ಆಮ್ಲಜನಕ ದೊರೆಯದೆ ಆತನ ಅಂಗಾಂಗಗಳು ಚೀರಿದ್ದವು. ಮೆದುಳು ಹೌಹಾರಿತ್ತು.

ಫ್ಲಾಯ್ಡ್ ಅಣು ಅಣುವಾಗಿ ಸಾಯುವುದನ್ನು ಬಿಳಿಯ ದ್ವೇಷ ವಿಚಿತ್ರ ವಿಲಕ್ಷಣ ತೃಪ್ತಿಯಿಂದ ನೋಡಿತು. ಕ್ಷಣದಿಂದ ಕ್ಷಣಕ್ಕೆ ಉಸಿರು ತ್ಯಜಿಸಿ ಹೋಗಿ ತಣ್ಣಗಾಗುತ್ತಿದ್ದ ಒಡಲಿನ ಒದ್ದಾಟವನ್ನು, ಚಡಪಡಿಕೆಯ ಸ್ಪರ್ಶಸುಖವನ್ನು ಸವಿಯಿತು.

ಸತ್ತ ತನ್ನ ತಾಯಿಯನ್ನು ಸೇರಿಕೊಳ್ಳುವ ಸಂಕಟದಲ್ಲಿ ಅಮ್ಮಾ ಎಂದು ಕೂಗಿ ಕರೆದ. ಆ ಕಪ್ಪು ಮನುಷ್ಯ ಸಾಧು ಸ್ವಭಾವದ ದೈತ್ಯ. ತೊಗಲಿನ ಬಣ್ಣ ಕಪ್ಪೆಂಬ ಕಾರಣಕ್ಕಾಗಿ ಕ್ರೂರ ಹತ್ಯೆಗೆ ಬಲಿಯಾದ.

ಉಸಿರಾಡಲಾಗುತ್ತಿಲ್ಲ ಎಂದು ಫ್ಲಾಯ್ಡ್ ಐದು ನಿಮಿಷಗಳಲ್ಲಿ ಹದಿನಾರು ಸಲ ಹೇಳುತ್ತಾನೆ. ಪ್ರಾಣ ಹೋಗುವ ಸಂಕಟದಲ್ಲಿ ಹೆತ್ತಮ್ಮನನ್ನು ನೆನೆದು ಕರೆಯುತ್ತಾನೆ. ‘ಆಫೀಸರ್ ಪ್ಲೀಸ್’ ಎಂದು ಬೇಡಿಕೊಳ್ಳುತ್ತಾನೆ. ಬಾಯಿಂದ ರಕ್ತ ಒಸರುತ್ತದೆ.

ಆ ಬಿಳಿಯ ಪೊಲೀಸ್ ಎಂಟು ನಿಮಿಷ 46 ಸೆಕೆಂಡುಗಳ ಕಾಲ ತನ್ನ ಮೃತ್ಯಸದೃಶ ಮೊಣಕಾಲನ್ನು ಫ್ಲಾಯ್ಡ್ ಕುತ್ತಿಗೆಯ ಮೇಲೆ ಅದುಮಿ ಹಿಡಿದಿರುತ್ತಾನೆ. ಕಡೆಯುಸಿರೆಳೆದ ಮೇಲೂ ಆ ಮೊಣಕಾಲು ಕದಲುವುದಿಲ್ಲ. ಆಂಬುಲೆನ್ಸ್ ಬಂದು ಸ್ಟ್ರೆಚರ್ ತಂದ ವೈದ್ಯಕೀಯ ಸಿಬ್ಬಂದಿ ಹೇಳಿದಾಗ ಒಲ್ಲದ ಮನಸಿನಿಂದ ಕದಲುತ್ತದೆ. ಆದರೆ ಆ ಹೊತ್ತಿಗೆ ತೀರಾ ತಡವಾಗಿರುತ್ತದೆ.

ಮೇ.25 ಸೋಮವಾರ ಸಂಜೆ. 20 ಡಾಲರಿನ ಖೋಟಾ ನೋಟನ್ನು ಸಿಗರೇಟು ಖರೀದಿಗೆ ಬಳಸಿದನೆಂಬುದು ಫ್ಲಾಯ್ಡ್ ಮೇಲಿನ ಆರೋಪ. 46 ವರ್ಷದ ಈ ವ್ಯಕ್ತಿ ಹ್ಯೂಸ್ಟನ್‍ನ ರೆಸ್ಟುರಾದಲ್ಲಿ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ. ಕರೋನಾ ಮಹಾಮಾರಿಯ ಕಾರಣ ಕೆಲಸ ಕಳೆದುಕೊಂಡ ಕೋಟ್ಯಂತರ ಜನರ ಪೈಕಿ ಫ್ಲಾಯ್ಡ್ ಕೂಡ ಒಬ್ಬನಾಗಿದ್ದ.

ಆರಡಿಗೂ ಅಧಿಕ ಎತ್ತರದ ಫ್ಲಾಯ್ಡನನ್ನು ರಸ್ತೆಯ ಪಕ್ಕ ನೆಲಕ್ಕೆ ಕೆಡವಿ ಕಾಲು ಎದೆ ಪಕ್ಕೆ ಕುತ್ತಿಗೆಯನ್ನು ನಾಲ್ವರು ಪೊಲೀಸರು ಒಟ್ಟೊಟ್ಟಿಗೆ ಅದುಮಿ ಹಿಡಿದಿರುತ್ತಾರೆ.

ಫ್ಲಾಯ್ಡ್ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಎಂಬುದು ಪೊಲೀಸರ ಹಸೀ ಸುಳ್ಳು. ಕಾರಿನೊಳಕ್ಕೆ ಅವನನ್ನು ತಳ್ಳಲು, ಎದ್ದು ಪೊಲೀಸ್ ಕಾರಿನೊಳಗೆ ಕುಳಿತುಕೋ ಎನ್ನುತ್ತಾರೆ. ಆದರೆ ತಮ್ಮ ಮೃತ್ಯುಪಾಶವನ್ನು ಸಡಿಲಿಸುವುದಿಲ್ಲ. ದಾರಿ ಹೋಕರು ಕುತ್ತಿಗೆಯ ಮೇಲಿಂದ ಎದ್ದೇಳಲು ಪೊಲೀಸರಿಗೆ ಒತ್ತಾಯಿಸುತ್ತಾರೆ. ಅವನು ಕದಲುತ್ತಿಲ್ಲ, ನಾಡಿ ಪರೀಕ್ಷಿಸಿ ಎಂದು ಆಗ್ರಹಿಸುತ್ತಾರೆ.

ಅಮೆರಿಕೆ ಭುಗಿಲೆದ್ದಿದೆ. ಕಾನೂನು ಜಾರಿಯ ವೈಖರಿಯಲ್ಲಿ ಬದಲಾವಣೆಗೆ ಆಗ್ರಹ ಸ್ಫೋಟಿಸಿದೆ. ಮಾನವಂತ ಬಿಳಿಯರೂ ಈ ಪ್ರತಿಭಟನೆಯಲ್ಲಿ ಸೇರಿದ್ದಾರೆ. ಈ ನಡುವೆ ಮಿಯಾಮಿ ಪೊಲೀಸರು ಕ್ರೋಧತಪ್ತ ಪ್ರತಿಭಟನಾಕಾರರ ಮುಂದೆ ಕ್ಯಾಮೆರಾಗಳ ಸಮಕ್ಷಮದಲ್ಲಿ ತಲೆ ತಗ್ಗಿಸಿ ಮಂಡಿಯೂರಿ ಕ್ಷಮಾಪಣೆ ಕೇಳಿದರು. ಭಾರತದಲ್ಲಿ ಇಂತಹ ನೋಟವನ್ನು ಕಾಣಲು ಇನ್ನೆಷ್ಟು ಯುಗಗಳು ಸರಿಯಬೇಕೋ?
ಜಾರ್ಜ್ ಫ್ಲಾಯ್ಡ್ ಆತ್ಮ ಈಗ ನಿರಾಳವಾಗಿ ಉಸಿರಾಡುತ್ತಿರಬಹುದು… ವರ್ಣದ್ವೇಷದ ಕಿಚ್ಚಿನಿಂದ ದೂರ ಬಹುದೂರದಲ್ಲಿ.


ಇದನ್ನು ಓದಿ: ಚೀನಾದ ಆಕ್ರಮಣ ಒಪ್ಪಿಕೊಂಡ ರಾಜನಾಥ್‌ ಸಿಂಗ್: ಜೂನ್‌ 06 ರಂದು ಮಾತುಕತೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....