Homeಮುಖಪುಟಭೀಮಸೇನ ನಳಮಹರಾಜ, ಅಸ್ಮಿತೆ ಚಿತ್ರಗಳ ಕುರಿತು ಅನಿಸಿಕೆಗಳು

ಭೀಮಸೇನ ನಳಮಹರಾಜ, ಅಸ್ಮಿತೆ ಚಿತ್ರಗಳ ಕುರಿತು ಅನಿಸಿಕೆಗಳು

ಯಾವುದೇ ಸಂಘರ್ಷವನ್ನು ಗಹನವಾಗಿ ಶೋಧಿಸದೆ ಹಲವು ಟ್ವಿಸ್ಟ್ ಗಳ ಮೇಲೆಯೇ ಭಾರ ಹಾಕಿರುವ ಭೀಮಸೇನ ನಳಮಹರಾಜ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಷ್ಟು ಪರ-ವಿರೋಧ ಚರ್ಚೆ ಹುಟ್ಟಿಸಿದೆ.

- Advertisement -
- Advertisement -

ಸಾಹಿತ್ಯ ಕೃತಿ ಆಗಲೀ, ಸಿನೆಮಾ ಆಗಲಿ ಅದರ ಯಶಸ್ಸು ಅಡಗಿರುವುದು, ಅದು ಪರಿಣಾಮಕಾರಿಯಾಗುವುದು ತಾನೆತ್ತಿಕೊಳ್ಳುವ ಸಂಘರ್ಷದ ಬಹುಮುಖ ಆಯಾಮಗಳನ್ನು ಚರ್ಚಿಸಿ ಮಾನವೀಯ ಮುಖವನ್ನು ಶೋಧಿಸಿ ಓದುಗರನ್ನು-ವೀಕ್ಷಕರನ್ನು ಚಿಂತನೆಗೆ ಹಚ್ಚುವುದರಲ್ಲಿರುತ್ತದೆ. ಸಿನಿಮಾದ ಉದಾಹರಣೆಯಲ್ಲಿ ಹೇಳುವುದಾದರೆ ಅದು ಕಟ್ಟಿಕೊಡುವ ಪಾತ್ರದಲ್ಲಿ ಆಗುವ ಮಾನವೀಯ ಬದಲಾವಣೆಯನ್ನು ಹಿಡಿಯುವುದರ ಮೂಲಕ ಇರಬಹುದು, ಒಂದು ಘಟನೆಗೆ ವಿವಿಧ ಪಾತ್ರಗಳು ಪ್ರತಿಕ್ರಿಯಿಸುವುದನ್ನು ಜನಪರವಾಗಿ-ವಿಚಾರಪರವಾಗಿ ಕಟ್ಟಿಕೊಡುವುದರಿಂದ ಇರಬಹುದು. ಒಟ್ಟಿನಲ್ಲಿ ಜಗತ್ತಿನ ಯಾವುದೇ ಸಾಹಿತಿ, ಕಲಾವಿದ, ನಿರ್ದೇಶಕ ಅಂತಹ ಮಾನವೀಯ ಅನ್ವೇಷಣೆಯಲ್ಲಿ ತೊಡಗಿರುತ್ತಾನೆನ್ನಬಹುದು.

ಭೀಮಸೇನ ನಳಮಹರಾಜ

ಕಾರ್ತಿಕ್ ಸರಗೂರ್ ನಿರ್ದೇಶನದ ‘ಭೀಮಸೇನ ನಳಮಹರಾಜ’ ಚಲನಚಿತ್ರ ಒಟಿಟಿ ವೇದಿಕೆಯಲ್ಲಿ ಕಳೆದ ವಾರ ಬಿಡುಗಡೆ ಕಂಡಿದೆ. ಪ್ರವಾಸಿ ತಾಣವೊಂದರ ಮಾಲೀಕ ಮತ್ತು ಅಡುಗೆ ಮಾಡುವ ಲತ್ತೇಶ (ಅರವಿಂದ ಅಯ್ಯರ್) ಆಗ ತಾನೆ ಅಲ್ಲಿಗೆ ಆಗಮಿಸಿದ ಸಾರಾಳಿಗೆ (ಪ್ರಿಯಾಂಕ ತಿಮ್ಮೇಶ್) ತನ್ನ ಬಾಳಸಂಗಾತಿ ವೇದವಲ್ಲಿಯ (ಅರೋಹಿ ನಾರಾಯಣ್) ಕಥೆ ಹೇಳುತ್ತಾ ಸಾಗುವ ಸಿನೆಮಾ ಫ್ಲ್ಯಾಶ್‍ಬ್ಯಾಕ್‍ಗೆ ಹೊರಳುತ್ತದೆ.

PC : Wikipedia, (ಕಾರ್ತಿಕ್ ಸರಗೂರ್)

ವಲ್ಲಿಯ ಅಪ್ಪ ವರದರಾಜನ ಅಯ್ಯಂಗಾರ್ (ಅಚ್ಯುತ್ ಕುಮಾರ್) ಬೇಕರಿ ನಡೆಸುವ ವ್ಯಕ್ತಿ. ವಲ್ಲಿ ಅತಿ ಹೆಚ್ಚು ತಿನ್ನುತ್ತಾಳೆ, ಬೆಣ್ಣೆ ಖಾಲಿ ಮಾಡುತ್ತಾಳೆ ಎಂಬ ಕಾರಣಕ್ಕೆ ಮಗಳಿಗೆ ಉಗ್ರ ಶಿಕ್ಷೆ ನೀಡುವುದಕ್ಕೆ ಮುಂದಾಗುವ ಹಿಟ್ಲರ್ ಆತ. ಹಿಟ್ಲರ್ ವೇಷದಲ್ಲಿಯೂ ಆತನನ್ನು ತೋರಿಸಲಾಗುತ್ತದೆ. ಒಮ್ಮೆ ದೇವಸ್ಥಾನದಲ್ಲಿ ಮಗಳು ಬೆಣ್ಣೆ ಕದ್ದು ತಿಂದಳು ಎಂಬ ಕಾರಣಕ್ಕೆ, ತನ್ನ ಹೆಂಡತಿಯನ್ನು ಮತ್ತು ಮಗಳನ್ನು ನದಿಯ ನಡುವೆ ತೆಪ್ಪದಲ್ಲಿ ಕೂರಿಸಿ ವೇಗವಾಗಿ ತಿರುಗಿಸಿ ಬೆದರಿಸುತ್ತಾನೆ. ಆಗ ತೆಪ್ಪ ಉರುಳಿ ತಾಯಿ ಮರಣ ಹೊಂದುತ್ತಾಳೆ. ಮಗಳು ಅಪ್ಪನನ್ನು ದ್ವೇಶಿಸುತ್ತಾ ಬೆಳೆಯುತ್ತಾಳೆ. ಸಿನೆಮಾದ ಅಂತ್ಯ ಭಾಗದಲ್ಲಿ ಅಪ್ಪ ತನ್ನ ತಪ್ಪಿನ ಬಗ್ಗೆ ನಿವೇದಿಸಿಕೊಳ್ಳುತ್ತಾ, ತನ್ನ ಪತ್ನಿ ಒವರ್‌ವೇಯ್ಟ್ ಇದ್ದು ಬಿಪಿ, ಸಕ್ಕರೆ ಖಾಯಿಲೆಯಿಂದ ನರಳುತ್ತಿದ್ದಳು, ಮಗಳಿಗೂ ಖಾಯಿಲೆ ಬರುವುದಾಗಿ ವೈದ್ಯರು ಹೆದರಿಸಿದ್ದರಿಂದ ಅಂತಹ ಶಿಕ್ಷೆ ನೀಡುತ್ತಿದ್ದೆ. ನಾನು ಅಂತಹ ಉಗ್ರ ಶಿಕ್ಷೆ ನೀಡಿದ್ದು ತಪ್ಪು ಎಂದು ನನ್ನ ಮಗಳಿಗೆ ನಿವೇದಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ ಎಂದು ಭಾವನಾತ್ಮಕವಾಗಿ ನಿವೇದಿಸಿಕೊಳ್ಳುತ್ತಾನೆ. ಸುತ್ತ ನೆರೆದವರು ಕನಿಕರಿಸಿಸುತ್ತಾರೆ.

ಹಿಟ್ಲರ್ ಸ್ವಭಾವದವನು ಎಂದು ಕಟ್ಟಿಕೊಟ್ಟ ಈ ಪಾತ್ರಕ್ಕೆ ಕೊಟ್ಟ ಈ ವಿಮೋಚನೆಯನ್ನು ಪ್ರೇಕ್ಷಕನಿಗೆ ಅರ್ಥ ಮಾಡಿಸಲು ನಿರ್ದೇಶಕನಿಗೆ ಸಾಧ್ಯವಾಗಿದ್ದರೆ ಒಂದು ನೆಮ್ಮದಿಯ ನಿಟ್ಟುಸಿರು ಬಿಡಬಹುದಿತ್ತೇನೋ! ಆದರೆ ಈ ಪಾತ್ರ ಹೇಗೆ ಬದಲಾಯಿತು ಎಂಬುದಕ್ಕೆ ಯಾವುದೇ ದೃಶ್ಯಗಳು ಸಿನೆಮಾದಲ್ಲಿ ಇಲ್ಲ. ಪತ್ನಿ ಮತ್ತು ಮಗಳ ತೂಕದ ಸಮಸ್ಯೆಗೆ ಸಾಯಿಸುವ ಶಿಕ್ಷೆ ಕೊಡುವ ‘ಮಾನಸಿಕ ಅಸ್ವಸ್ಥ’ ಅಪ್ಪನಿಗೆ ನಿರ್ದೇಶಕ ಕೊಡುವ ವಿಮೋಚನೆ ಹಾಸ್ಯಾಸ್ಪದವಾಗಿದೆಯಷ್ಟೇ ಅಲ್ಲ, ಅಮಾನವೀಯವಾಗಿಯೂ ಇದೆ.

ವರದರಾಜನ್‍ನ ಕಥೆ ಇಡೀ ಸಿನೆಮಾ ಅಲ್ಲ ಅಂದಾದರೆ, ಆತನ ಹಿಟ್ಲರ್ ಮತ್ತು ಸುಧಾರಿತ ಅವಸ್ಥೆಗಳ ನಡುವೆ ಬೇರೊಂದು ಕಥೆ ಇರಲೇಬೇಕು ಎಂದು ನೀವು ಊಹಿಸಿದ್ದರೆ, ಹೌದು ಇದೆ. ಆ ಕಥೆಯಲ್ಲಿಯಾದರೂ ನಿರ್ವಹಿಸಿರುವ ಸಂಘರ್ಷ ಪರಿಣಾಮಕಾರಿಯಾಗಿ ಮೂಡಿದೆಯೇ ಎಂದರೆ ನಿರಾಶೆ ಉತ್ತರವೇ ಖಾತ್ರಿ. ವಲ್ಲಿಯ ಪಾತ್ರವನ್ನು ಸಿಡುಕುವ, ದ್ವೇಶದಲ್ಲಿ ನರಳುವ, ತನ್ನ ಪ್ರಿಯತಮನನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವಂತೆ ಚಿತ್ರಿಸಿರುವ ರೀತಿಗೂ, ಅದೇ ನಾಯಕ ನಟ ಲತ್ತೀಶನ ಪಾತ್ರವನ್ನು ವಿಶಾಲ ವ್ಯಕ್ತಿತ್ವವಾಗಿ ಚಿತ್ರಿಸುವ ಬಗೆಗೂ ಇವತ್ತು ನಮ್ಮ ಕಲೆ-ಸಾಹಿತ್ಯಗಳಲ್ಲಿ ಬೀಡುಬಿಟ್ಟಿರುವ ಸಂಗತಿ ಪುರುಷಪ್ರಾಧಾನ್ಯತೆಯನ್ನು ಎತ್ತಿಹಿಡಿಯುತ್ತದೆ. ಮಗಳ ಮೇಲಿನ ದ್ವೇಶಕ್ಕಾಗಿ ರಸ್ತೆ ನಡುವೆಯೇ ವಲ್ಲಿಗೆ ಲತ್ತೀಶನಿಂದ ವರದರಾಜನ್ ತಾಲಿ ಕಟ್ಟಿಸುವಂತೆ ತೋರಿಸಿ, ಚಲನಚಿತ್ರದ ಕೊನೆಗೆ ನನ್ನ ಮಗಳ ಒಳಿತಿಗೆ ಹಾಗೆ ಮಾಡಿದೆ ಎಂದು ಹೇಳಿಸುವುದು – ಹೀಗೆ ಸೂತ್ರ ಸಂಬಂಧವಿಲ್ಲದೆ ಬರೀ ‘ಮ್ಯಾನಿಪ್ಯುಲೇಶನ್’ಗಳ ಸರಣಿಯಂತೆ ಚಿತ್ರ ಸಾಗುತ್ತದೆ. ಸಿನೆಮಾದುದ್ದಕ್ಕೂ ಲತ್ತೀಶನ ಗೆಳೆಯನಾಗಿ ಕೆಂಡ ಎಂಬ ಪಾತ್ರವನ್ನು ವಿಕ್ಷಿಪ್ತವಾಗಿ ಚಿತ್ರಿಸಿ, ಆತನೂ ಯಾವುದೋ ಒಳ್ಳೆ ಕಾರಣಕ್ಕೆ ಹಾಗೆಲ್ಲಾ ಆಡುತ್ತಿರುತ್ತಾನೆ ಎಂಬ ಕನ್ಕ್ಲೂಶನ್ ಕೂಡ ಇದೆ!

ಕೊನೆಗೆ ನೀವು ನೋಡುತ್ತಿದ್ದ ವಲ್ಲಿ ಆಕೆಯೇ ಅಲ್ಲ ಮತ್ತೊಬ್ಬಳು ಎನ್ನುವ ಇನ್ನೊಂದು ಅರ್ಥವಿಲ್ಲದ ಟ್ವಿಸ್ಟ್. ಆ ಟ್ವಿಸ್ಟ್ ಮೂಲಕ ಹಿಂದಿನ ಕೆಲವು ದೃಶ್ಯಗಳನ್ನು ನೆನಪಿಸಿಕೊಂಡರೆ ನಿಮ್ಮ ತಲೆ ಗೊಂದಲದ ಗೂಡಾಗಬಹುದು. ಒಟ್ಟಿನಲ್ಲಿ ಯಾವುದೇ ಸಂಘರ್ಷವನ್ನು ಗಹನವಾಗಿ ಶೋಧಿಸದೆ ಹಲವು ಟ್ವಿಸ್ಟ್ ಗಳ ಮೇಲೆಯೇ ಭಾರ ಹಾಕಿರುವ ಈ ಚಲನಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಷ್ಟು ಪರ-ವಿರೋಧ ಚರ್ಚೆಗಳನ್ನು ಹುಟ್ಟಿಸಿದೆ.

ಕನ್ನಡ ಭಾಷೆಯ ಸಿನೆಮಾಗಳು ಎಂಬ ಕಾರಣಕ್ಕೆ ಸ್ವಲ್ಪ ಲೀನಿಯೆನ್ಸ್ ಕೊಟ್ಟು ಹೊಗಳಬೇಕು ಎಂಬ ಹಳೆಯ ಕೂಗು ಇದರೊಟ್ಟಿಗೆ ಎದ್ದಿರುವುದು ವಿಶೇಷವೇನಲ್ಲ. ಆದರೆ ಯಾವುದೇ ಒಂದು ಕಲಾಕೃತಿ ಮೂಡಿಬಂದ ಮೇಲೆ ಅದರ ವಿವಿಧ ಮೊಗ್ಗಲುಗಳನ್ನು ಚರ್ಚಿಸದೆ ಸಂಭ್ರಮ ಪಡುವುದರಿಂದ ಹೆಚ್ಚಿನ ಉಪಯೋಗವೇನಿಲ್ಲ. ಕನ್ನಡದಲ್ಲಿ ಮೂಡುವ ಕಲೆ ಮಾನವೀಯತೆಗೆ ಸ್ಪಂದಿಸಬೇಕು ಮತ್ತು ವಿಶಾಲ ಅರ್ಥದಲ್ಲಿ ಜನರ ನಡುವೆ ಇರುವ ಸಂಕುಚಿತತೆಯನ್ನು ಪ್ರಶ್ನಿಸುವ, ಅವುಗಳ ಬಗ್ಗೆ ತಿಳುವಳಿಕೆ ನೀಡುವಂತವಾಗಬೇಕು ಎನ್ನುವ ಹಂಬಲ-ಅಪೇಕ್ಷೆ ಹೆಚ್ಚಬೇಕಿದೆ. ಅದು ಜನಪ್ರಿಯ ಶೈಲಿಯ ಸಿನೆಮಾಗಳಲ್ಲು ಸಾಧ್ಯವಿದೆ ಎಂಬುದಕ್ಕೆ ಕನ್ನಡ ಚಿತ್ರರಂಗದಲ್ಲಿ ಸ್ವಲ್ಪ ಹಿಂದಕ್ಕೆ ಸರಿದರೂ ಸಾಕು. ‘ಭೂತಯ್ಯನ ಮಗ ಅಯ್ಯು’, ‘ಕಸ್ತೂರಿ ನಿವಾಸ’, ‘ಬಂಗಾರದ ಪಂಜರ’, ‘ಭುಜಂಗಯ್ಯನ ದಶಾವತಾರಗಳು’ ಇಂತಹ ನೂರಾರು ಸಿನೆಮಾಗಳು ಸಿಕ್ಕಾವು. ಅಕ್ಕಪಕ್ಕದ ರಾಜ್ಯಗಳ ಸಿನೆಮಾಗಳಲ್ಲಿಯೂ ಹಲವು ಸಿಕ್ಕುವುದರಲ್ಲಿ ಸಂಶಯವಿಲ್ಲ.

ಅಸ್ಮಿತೆ

ಕರ್ನಾಟಕದ ಮೇಲೆ ಹಲವು ಒಕ್ಕೂಟ ಸರ್ಕಾರಗಳು ಮತ್ತು ಅತಿಯಾಗಿ ಹಿಂದುತ್ವವನ್ನು ಪ್ರತಿಪಾದಿಸುವ ಸರ್ಕಾರಗಳು ಹಿಂದಿ ಹೇರಿಕೆ ಮಾಡುವುದರ ಸಮಸ್ಯೆಯ ಚರ್ಚೆಯ ನಡುವೆ, ಕನ್ನಡದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ‘ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ಅವರು ಅಷ್ಟೇನು ಗಹನವಲ್ಲದ ಪ್ರತಿಕ್ರಿಯೆ ನೀಡಿದ್ದು ಸಾಮಾಜಿಕ ಜಾಲತಾಣಗಲಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರಿಂದ ಉತ್ತೇಜಿತರಾಗಿ, ತಾವು ಹಿಂದಿ ಹೇರಿಕೆಯನ್ನು ಕಲಾತ್ಮಕವಾಗಿ ವಿರೋಧಿಸುವುದಾಗಿ ಘೋಷಿಸಿದ್ದರಲ್ಲದೆ ಅದರ ಕುರಿತು ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸುವುದಾಗಿಯೂ ಹೇಳಿದ್ದರು. ಇದರ ಭಾಗವಾಗಿಯೆ ಕೆಲವು ದಿನಗಳ ಹಿಂದೆ ಅವರ ನಿರ್ದೇಶನದ ‘ಅಸ್ಮಿತೆ’ ಎಂಬ ಕಿರುಚಿತ್ರ ಯುಟ್ಯೂಬ್‍ನಲ್ಲಿ ಬಿಡುಗಡೆ ಆಗಿದೆ.

ತಮ್ಮ ಜನಪ್ರಿಯ ಶೈಲಿಯ ಚಲನಚಿತ್ರಗಳ ಮೂಲಕ (ಯು-ಟರ್ನ್, ಲೂಸಿಯಾ, ಲೈಫು ಇಷ್ಟೇನೆ) ಪವನ್ ಕುಮಾರ್ ಕನ್ನಡ ಸಿನೆಮಾ ಪ್ರೇಕ್ಷಕರ ನಡುವೆ ಚಿರಪರಿಚಿತ. ಪವನ್ ಪ್ರಚಲಿತ ಸಮಸ್ಯೆಯೊಂದನ್ನು ಎತ್ತಿಕೊಂಡು ಸಿನೆಮಾ ಮಾಡಿರುವುದೇ ಸ್ವಾಗತಾರ್ಹ ಮತ್ತು ಅನುಕರಣೀಯ.

ಐಡೆಂಟಿಟಿ ಎಂಬುದಕ್ಕೆ ಕನ್ನಡದಲ್ಲಿ ಸಂವಾದಿಯಾಗಿ ಬಳಸುವ ಸಂಸ್ಕೃತ ಮೂಲದ ‘ಅಸ್ಮಿತೆ’ಯ ಶೀರ್ಷಿಕೆಯಿಂದಲೇ ಈ ಕಿರುಚಿತ್ರದ ವಸ್ತು ಮತ್ತು ವಿಷಯ ಸ್ಪಷ್ಟವಾಗುತ್ತದೆ. ಸಂಭಾಷಣೆಯಿಲ್ಲದೆ ಮುಂದುವರೆಯುವ ಈ ಕಿರುಚಿತ್ರ, ತಾನು ಹೇಳಬೇಕಿರುವುದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ದಾಟಿಸುವಲ್ಲಿ ಸಫಲವಾಗಿದ್ದರೂ, ಹಿಂದಿ ಹೇರಿಕೆಯ ಹುನ್ನಾರ ನಿಜವಾಗಿಯೂ ನಿರ್ದೇಶಕರಿಗೆ ಅರ್ಥವಾಗಿದೆಯೇ ಎಂಬ ಪ್ರಶ್ನೆ ತಲೆದೋರುತ್ತದೆ.

PC : Filmfare.com, (ಪವನ್ ಕುಮಾರ್)

ಯಾವಾಗಲೂ ಲ್ಯಾಪ್‍ಟಾಪ್‍ನೊಂದಿಗೆ ಕಾರ್ಯನಿರತ ಗಂಡ, ತನ್ನ ಹೆಂಡತಿ ಮತ್ತು ಸಣ್ಣ ಮಗುವಿನ ನೋವು ನಲಿವಿಗೆ ಸ್ಪಂದಿಸದೆ ಬದುಕುತ್ತಿರುತ್ತಾನೆ. ಈ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಸಿ, ಕನ್ನಡ ಸಿನೆಮಾಗಳನ್ನು ತೋರಿಸಿ, ಚೆನ್ನಾಗಿ ಊಟ ತಿನ್ನಿಸಿ ಮಗುವನ್ನು ಸಂತಸದಿಂದ ನೋಡಿಕೊಳ್ಳುವ ತಾಯಿ ಒಂದು ದಿನ ಮನೆಯಿಂದ ಕಣ್ಮರೆಯಾಗುತ್ತಾಳೆ. (ಈ ಸಮಯದಲ್ಲಿ ಮಾಸ್ಕ್ ತೋರಿಸುವ ದೃಶ್ಯವನ್ನು, ಆಕೆ ಗಂಡ ಮತ್ತು ಮಗುವನ್ನು ತೊರೆದು ಹೋದಳು ಎಂದು ಅರ್ಥೈಸಬೇಕೋ ಅಥವಾ ಅಕಾಲಿಕ ಮೃತ್ಯುವಿಗೆ ತುತ್ತಾದಳೋ ಎಂಬುದು ವೀಕ್ಷಕನ ಗ್ರಹಿಕೆಗೆ ಬಿಟ್ಟಿದ್ದು). ಆತ ಮರುಮದುವೆಯಾಗಿ ಮನೆಗೆ ಬರುವಾಕೆ, ಕನ್ನಡ ಸೊಲ್ಲನ್ನು ತಿಳಿಯದವಳು. ಮಗುವನ್ನು ಚೆನ್ನಾಗಿ ನೋಡಿಕೊಂಡರೂ ಕನ್ನಡದ ಓದು, ಸಿನೆಮಾ ಇಲ್ಲವಾಗುತ್ತದೆ. ಇಡ್ಲಿ ವಡಾ ಜಾಗದಲ್ಲಿ ಆಲು ಪರೋಟ ಬಂದು ಕೂರುತ್ತದೆ. ಹೀಗೆ ಮುಂದುವರೆಯುವ ಸಿನೆಮಾ ‘ಕನ್ನಡದಲ್ಲಿ ಸೇವೆಯನ್ನು ಒದಗಿಸಿ’ ಎಂಬ ಸಾಲು ತೆರೆಯ ಮೇಲೆ ಮೂಡುವುದರೊಂದಿಗೆ ಅಂತ್ಯವಾಗುತ್ತದೆ.

ನಿರ್ದೇಶಕರಿಗೆ ಕನ್ನಡ ಪರಿಸರದ ಬಗ್ಗೆ ಒಂದು ಮಟ್ಟದ ಕಾಳಜಿ ಇದ್ದರೂ, ಅವರು ಉಪಯೋಗಿಸಿರುವ ಸಂಕೇತಗಳು ಹಿಂದಿ ಹೇರಿಕೆ ಎಂಬ ವ್ಯವಸ್ಥೆಯ ಸಮಸ್ಯೆಯನ್ನು ಹಿಡಿಯಲು ಅಥವಾ ಬಿಂಬಿಸಲು ಶಕ್ತವಾಗಿಲ್ಲ. ಆಲೂ ಪರೋಟ ಹಿಂದಿ ಹೇರಿಕೆಯನ್ನು ಪ್ರತಿನಿಧಿಸುತ್ತದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ ಅದು ವೈಯಕ್ತಿಕ ಆಯ್ಕೆಯ ಪ್ರಶ್ನೆಯಾಗಿ ಉಳಿಯುತ್ತದೆಯೇ ಹೊರತು, ಹಿಂದಿ-ಹಿಂದುತ್ವ ಪ್ರಭುತ್ವಗಳ ಮತ್ತು ಕಾರ್ಪೋರೆಟ್ ಹೊಂದಾಣಿಕೆ ಹೇಗೆ ಬಹುಸಂಸ್ಕೃತಿಗಳನ್ನು, ಬಹುಭಾಷೆಗಳನ್ನು ನೆಲಸಮ ಮಾಡಲು ಮುಂದಾಗುತ್ತದೆ ಎಂಬ ಬಿಕ್ಕಟ್ಟಿನ ಪ್ರಶ್ನೆಯನ್ನು ಅದು ಶೋಧನೆಗೆ ತೊಡಗಿಸಿಕೊಳ್ಳುವುದಿಲ್ಲ. ಜನರ ವೈಯಕ್ತಿಕ ಆಯ್ಕೆಯ ಆಯಾಮ ಒಂದಿದ್ದರೂ, ಇಲ್ಲಿ ಬದಲಾಗಬೇಕಿರುವ ವ್ಯವಸ್ಥೆಯ ಶೋಷಣೆಯ ಎದುರು ಅದು ಬಹಳ ಸಣ್ಣ ಸಮಸ್ಯೆ. ಆಂತಹ ಅಧಿಕಾರದ ಅಸಮಾನತೆಯನ್ನು ಚರ್ಚೆ ಮಾಡುವುದಕ್ಕೆ ಕಲಾವಿದರು ಮುಂದಾಗಬೇಕಿದೆ.

ಕಿರುಚಿತ್ರದ ಫಾರ್ಮಟ್ ಕೂಡ ವಿಶಾಲ ಚರ್ಚೆಗೆ ಅವಕಾಶ ನೀಡದೆ ಇರಬಹುದು. ಆದರೂ ಹಿಂದಿ ಹೇರಿಕೆಯ ಗಂಭೀರ ಬಿಕ್ಕಟ್ಟಿನ ಆಯಾಮಗಳನ್ನು ಪವನ ಕುಮಾರ್ ತಮ್ಮ ಮುಂದಿನ ಸಿನೆಮಾಗಳಲ್ಲಿ ಒಳಗೊಂಡು ಹೆಚ್ಚಿನ ಜನರಿಗೆ ಅದು ತಲುಪುವಂತಾಗಲಿ ಎಂಬ ಆಶಯ ನಮ್ಮದಾಗಿದೆ.


ಇದನ್ನೂ ಓದಿ: ಆಶಾನಿ ಸಂಕೇತ ಸಿನಿಮಾ ಮತ್ತು ಜಮೀನ್ದಾರಿ ಪದ್ದತಿ ನೆನಪಿಸುವ ಕೃಷಿ ಕಾಯ್ದೆಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...